অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಯೋಜನೆಗಳು

ಕ್ರಿಯಾ ಯೋಜನೆ

ಕ್ರಿಯಾ ಯೋಜನೆ ಎಂದರೇನು?

  • ಯೋಜನೆಯಡಿಯಲ್ಲಿ ಬರುವಂತಹ ಪ್ರದೇಶದಲ್ಲಿ ರೈತ ಜಮೀನುವಾರು ಹಾಗೂ ಸಾರ್ವಜನಿಕ ಭೂಮಿಯಲ್ಲಿ ಮಾಡಬೇಕಾದ ಕೆಲಸಗಳ ಮೇಲೆ ಪೂರ್ವಕವಾಗಿ ತಯಾರಿಸುವಂತಹ ಕಾಮಗಾರಿಗಳ ವಿವರವಾದ ಪಟ್ಟಿ.
  • ಪ್ರದೇಶದ ಸ್ಥೂಲ ಅಗತ್ಯತೆಗಳನ್ನು ಗುರ್ತಿಸಿ ಅಂದಾಜಿನ ಒಂದು ಯೋಜನೆ ತಯಾರಿ ಮತ್ತು ಇದರಲ್ಲಿ ಘಟಕವಾರು ವಾರ್ಷಿಕ ಅನುದಾನವನ್ನು ಮಾತ್ರ ನಿಗದಿಪಡಿಸಲಾಗುತ್ತದೆ.
ಕ್ರಿಯಾ ಯೋಜನೆಯ ಪೂರ್ವ ತಯಾರಿ

ಸ್ಥಳ ಆಯ್ಕೆ ಚಟುವಟಿಕೆಗಳ ಆಯ್ಕೆ, ಫಲಾನುಭವಿಗಳ ಆಯ್ಕೆ, ರೈತರ ಅಗತ್ಯತೆ, ಸಾರ್ವಜನಿಕ ಭೂಮಿ, ವೈಯಕ್ತಿಕ ಭೂಮಿ, ಮುಂತಾದ ವಿವರಣೆಗಳನ್ನು ಒಳಗೊಂಡಿರುತ್ತದೆ.

ಯಾವ ಕೆಲಸ, ಎಷ್ಟು ಹಣ ಬೇಕು ಎಂದು ಈಕ್ರಿಯಾ ಯೋಜನೆಯಲ್ಲಿ ಅಂದಾಜು ಮಾಡುವುದು

ಕ್ರಿಯಾ ಯೋಜನೆ ಹೇಗೆ ತಯಾರಿಸುವುದು?

ಜಮೀನಿನ ವಿವರ ಹಾಗೂ ನಕ್ಷೆಗಳನ್ನು ರಿಜಿಷ್ಟರ್‍ಲ್ಲಿ ದಾಖಲು ಮಾಡಿಡಬೇಕು ಕಾಮಗಾರಿಗಳ ವಿವರವನ್ನು ಬರೆದು ವೈಯಕ್ತಿಕ ಜಮೀನಿನಲ್ಲಿ ಕೆÉೂಗೊಳ್ಳುವ ಕಾಮಗಾರಿಗೆ ಪರಿಶಿಷ್ಟ ಜಾತಿ/ವರ್ಗ, ಸಣ್ಣ ರೈತರು, ಅತೀ ಸಣ್ಣ ರೈತರಿಂದ ಶೇಕಡ 5 ರಷ್ಟು ವಂತಿಗೆ ಪಡೆಯುವುದು. ಇತರೆ ರೈತರಿಂದ ಶೇಕಡ 10 ರಷ್ಟು ವಂತಿಗೆ ಪಡೆಯುವುದು. ಸಮುದಾಯ ಕಾಮಗಾರಿಗಳಿಗೆ ಯಾವುದೇ ವಂತಿಗೆ ಇಲ್ಲ.

ಪ್ರತಿ ಜಮೀನಿನಲ್ಲಿ ಏನು ಮಾಡಬಹುದು ಎನ್ನುವುದರ ಕುರಿತು ಚರ್ಚೆ ಆಗಬೇಕು ಉದಾ: ಹಾಲಿ ಇರುವ ಬದುಗಳು, ಗಲ್ಲಿ, ಇತರೆ ರಚನೆಗಳು, ಮಣ್ಣಿನ ವಿಧ, ಇಳಿಜಾರು, ಸವಕಳಿ, ನೀರಿನ ಮೂಲಗಳು, ಇಂಗುವಿಕೆ ಪ್ರಮಾಣ, ಹಾಲಿ ಇರುವ ಗಿಡ ಮರಗಳು, ಬೆಳೆ ಪದ್ದತಿ, ಕೀಟ ನಿರ್ವಹಣೆ, ಲಭ್ಯ ವಿರುವ ಗೊಬ್ಬರ, ಮೋಲ ಮೇವಿನ ಲಭ್ಯತೆ ಇತ್ಯಾದಿ ಕುರಿತು ಮಾಹಿತಿಯನ್ನು ಸಂಗ್ರಹಿಸಿದ ನಂತರ ಕ್ರಿಯಾ ಯೋಜನೆಯಲ್ಲಿ ಪರಿಸರಕ್ಕೆ ಹಾಗೂ ಸಮಾಜಕ್ಕೆ ಹಾನಿ ಆಹದ ಕಾರ್ಯಕ್ರಮಗಳನ್ನು ತೆಗದುಕೊಳ್ಳಬೇಕು.

ಚಟುವಟಿಕೆಯಿಂದ ಯಾವುದೇ ರೀತಿಯ ಒಳ್ಳೆಯ ಅಥವಾ ದುಷ್ಪರಿಣಾಮ ಉಂಟಾಗಿದೆಯೇ ಎಂಬುದನ್ನು ಪರಿಶೀಲಿಸುವುದು.

  • ಸಾಮಾಜಿಕ ಪರಿಣಾಮ ಅಂದಾಜು ಮಾಡಿ ಕಾರ್ಯಕ್ರಮಗಳನ್ನು ತೆಗೆದುಕೊಳ್ಳಬೇಕು.
  • ಅಂದಾಜು ವೆಚ್ಚ ಮಂಜೂರಾತಿಯನ್ನು ಇಲಾಖೆ ಅಧಿಕಾರಿಗಳು ನೀಡಿದ ನಂತರ ವಂತಿಗೆ ರೈತರು ಕಟ್ಟಿದ ನಂತರ ಕಾಮಗಾರಿ ಅನುಷ್ಠಾನಗೊಳಿಸುವುದು.
  • ಡ್ರೈನೇಜ್ ಲೈನ್ ಕಾಮಗಾರಿಗಳನ್ನು ಇಲಾಖೆಯ ಅಧಿಕಾರಿಗಳು ಅನುಷ್ಠಾನ ಮಾಡುತ್ತಾರೆ. ಉಳಿದ ಕಾಮಗಾರಿಗಳು ಆಯಾ ಫಲಾನುಭವಿಗಳಾಗಲಿ ಸ್ವಸಹಾಯ ಮತ್ತು ಬಳಕೆದಾರರ ಗುಂಪುಗಳಾಗಲಿ ಅಥವಾ ಇಲಾಖೆ ಅಧಿಕಾರಿಗಳಿಂದಾಗಲಿ ಮಾಡುತ್ತಾರೆ. ಕಾಮಗಾರಿ ಆದ ನಂತರ ಅಳತೆ ಪುಸ್ತಕದಲ್ಲಿ ಕೃಷಿ ಸಹಾಯಕರು/ಸಹಾಯಕ ಕೃಷಿ ಅಧಿಕಾರಿಗಳು ಅಳತೆಗಳನ್ನು ದಾಖಲಿಸುತ್ತಾರೆ. ಮೇಲಾಧಿಕಾರಿಗಳು ಚೆಕ್ ಅಳತೆ ಆದ ನಂತರ ಜಲಾನಯನ ಸಮಿತಿಯ ವಾರದ ಸಭೆಯಲ್ಲಿ ಚರ್ಚಿಸಿ ಅಧ್ಯಕ್ಷರು, ಖಜಾಂಚಿ ಮತ್ತು ಕೃಷಿ ಅಧಿಕಾರಿಗಳು ಜಂಟಿಯಾಗಿ ಚೆಕ್ ಸಹಿ ಮಾಡಿ ಪಾವತಿಸುತ್ತಾರೆ.

ನೈಸರ್ಗಿಕ ಸಂಪನ್ಮೊಲಗಳಾದ ಭೂಮಿ, ಗಾಳಿ, ನೀರುಸಸ್ಯ ಸಂಪತ್ತು, ಜೀವ ವೈವಿಧ್ಯತೆ ವನ್ಯಮೃಗ ವೈವಿಧ್ಯೆತೆ ಅಳವಡಿಕೆ.

ದುಷ್ಪರಿಣಾಮವು ಮರು ಸ್ಥಿತಿಗೊಳಿಸಲು ಹಾಗೂ ಅದನ್ನು ಸರಿಪಡಿಸುವದು ಸಾದ್ಯವಿರುವ ನಿರ್ವಹಣ ಕ್ರಮಗಳನ್ನು ತೆಗೆದುಕೊಳ್ಳುವುದು. ದುಷ್ಪರಿಣಾಮಗಳನ್ನು ಸಂಪೂರ್ಣವಾಗಿ ಬದಲಾಯಿಸಲು ಪ್ರಯತ್ನಿಸುವುದು.

ಯೋಜನೆ ಹಿಂತೆಗೆಯುವಿಕೆ ಮತ್ತು ಆಸ್ತಿಗಳ ನಿರ್ವಹಣೆ

ಯೋಜನೆಯಿಂದ ಸೃಷ್ಟಿಸಲ್ಪಟ್ಟ ಜಲಾನಯನ ಆಸ್ತಿಗಳ ಅನುಸರಣಾ ಹಾಗೂ ನಿರ್ವಹಣಾ ವಿಧಾನಗಳು ಕಾರ್ಯಕಾರಿ ಸಮಿತಿಯು ನಂತರವೂ ಅಸ್ತಿತ್ವದಲ್ಲಿದ್ದು ಸೃಷ್ಟಿಸಲ್ಪಟ್ಟ ಆಸ್ತಿಗಳ ಅನುಸರಣೆ ಮತ್ತು ನಿರ್ವಹಣೆಯನ್ನು ನಿರಂತರವಾಗಿ ಇತರ ಸ್ಥಳೀಯ ಸಂಘ-ಸಂಸ್ಥೆಗಳ ನೆರವಿನೊಂದಿಗೆ ನಡೆಸುವುದು.

ಭೂ ಆಧಾರಿತ ಚಟುವಟಿಕೆಗಳು

  • ವೈಯುಕ್ತಿಕ ಕಾಮಗಾರಿಗಳು
  • ಸಮುದಾಯ ಕಾಮಗಾರಿಗಳು

ವೈಯಕ್ತಿಕ ಕಾಮಗಾರಿಗಳ ನಿರ್ವಹಣೆ :

  • ರೈತರು ತಮ್ಮ ಜಮೀನಿನಲ್ಲಿ ನಿರ್ಮಿಸಿಕೊಂಡತಹ ಆಸ್ತಿಗಳು ಉದಾ: ಬದುಗಳು, ಕೃಷಿಹೊಂಡ, ಬೋರ್ವೆಲ್ ರೀಚಾರ್ಜ, ನೀರುಗಾಲುವೆ, ತೋಟಗಾರಿಕೆ ಇತರೆ.
  • ಕಾರ್ಯಕಾರಿ ಸಮಿತಿಯು ಆಸ್ತಿಗಳನ್ನು ಗುರ್ತಿಸಿ ಅವುಗಳ ನಿರ್ವಹಣೆಯನ್ನು ಸಂಬಂಧಪಟ್ಟ ರೈತರು ಮಾಡಿಕೊಳ್ಳುವ ವ್ಯವಸ್ಥೆ ಮಾಡಬೇಕು.
  • ಸಣ್ಣ/ಅತಿ ಸಣ್ಣ/ಪ.ಜಾ/ಪ.ಪಂಗಡದ ರೈತರಿಗೆ ಕಡಿಮೆ ದರದಲ್ಲಿ ಸಂಘದಿಂದ ಬಡ್ಡಿ ನೀಡಿ ಸಹಕಾರ.
  • ಮಳೆಗಾಲಕ್ಕೆ ಮುಂಚೆ ಮತ್ತು ಮಳೆಗಾಲದ ನಂತರ ಸಮಿತಿ ಸದಸ್ಯರು ಜಮೀನುಗಳಿಗೆ ಬೇಟಿ ನೀಡಿ ಹಾನಿಗೊಳಗಾದ ಆಸ್ತಿಗಳನ್ನು ಗುರ್ತಿಸಿ, ಪಟ್ಟಿಮಾಡಿ ಮತ್ತು ಕ್ರಿಯಾ ಯೋಜನೆ ತಯಾರಿಸಿ ಅದರ ರಿಪೇರಿಗೆ ಕ್ರಮ ಕೈಗೊಳ್ಳಲು ಫಲಾನುಭವಿಗಳಿಗೆ ಒತ್ತಡ ಹೇರುವುದು.

ಸಮುದಾಯ ಕಾಮಗಾರಿಗಳ ನಿರ್ವಹಣೆ-ನೇರ ಬಳಕೆದಾರರ ಆಸ್ತಿ ನಿರ್ವಹಣೆ:

  • ನೇರ ಬಳಕೆದಾರರ ಆಸ್ತಿಗಳಾದ (ಕೆಲವೇ ಕುಟುಂಬಗಳಿಗೆ ಉಪಯೋಗವಾಗುವಂತಹ) ಕೃಷಿ ಹೊಂಡ, ಚೆಕ್ ಡ್ಯಾಂ, ನಾಲಾ ಬದು, ಮಿನಿ ಪರ್ಕಲೇಷನ್ ಟ್ಯಾಂಕ್ ಮುಂತಾದವುಗಳನ್ನು ಗುರ್ತಿಸಿ ಅವುಗಳ ಬಳಕೆದಾರರ ಗುಂಪುಗಳನ್ನು ರಚಿಸಬೇಕು.
  • ಸಮಿತಿಯು ನಿರ್ವಹಣೆಯ ಬಗ್ಗೆ ಗುಂಪುಗಳ ಜೊತೆ ಒಡಂಬಡಿಕೆ ಮಾಡಿಕೊಳ್ಳಬೇಕು.
  • ಈ ಗುಂಪುಗಳು ರಿಪೇರಿ ಸಂದರ್ಭದಲ್ಲಿ ಹಣಕೊಡುವುದು/ಶ್ರಮದಾನ ಮಾಡುವುದು.
  • ನಾಲಾ ಬದು, ಚೆಕ್ ಡ್ಯಾಂ ಗಳಲ್ಲಿ ಸಂಗ್ರಹಣೆಯಾದ ನೀರನ್ನು ಮೀನು ಸಾಕಾಣಿಕೆಗೆ ಬಳಸಬೇಕು.
  • ಧನ ಸಹಾಯ ಬೇಕಿದ್ದಲ್ಲಿ ಸಂಘದಿಂದ ಸಾಲ/ಗ್ರಾಮ ಪಂಚಾಯಿತಿಯಿಂದ ಅನುದಾನ ಪಡೆಯಲು ಸಮಿತಿಯು ನೆರವಾಗಬೇಕು.

ಸಮುದಾಯದ ಆಸ್ತಿ ನಿರ್ವಹಣೆ:

  • ಸಮುದಾಯ ಅರಣ್ಯ, ನೆಡುತೋಪು, ಕೆರೆ ಅಂಗಳ, ಸಮುದಾಯದ ಜಮೀನುಗಳಲ್ಲಿ ನಿರ್ಮಾಣ ಮಾಡಿದ ನಾಲಾ ಬದು/ಚೆಕ್ ಡ್ಯಾಂ ಇತ್ಯಾದಿಗಳುಸಮುದಾಯಸ ಆಸ್ತಿಗಳು.
  • ಗ್ರಾಮ ಮಟ್ಟದಲ್ಲಿ ಇರುವ ಸ್ವಸಹಾಯ ಸಂಘ/ಕ್ಷೇತ್ರ ಗುಂಪು/ಗ್ರಾಮ ಅರಣ್ಯ ಒಳಗೊಂಡ ಸಮಿತಿ ರಚಿಸಿ ಆಸ್ತಿ ನಿರ್ವಹಣೆ ಮಾಡಲು ವ್ಯವಸ್ಥೆ ಮಾಡಿ ಮೇಲು ಉಸ್ತುವಾರಿಯನ್ನು ಸಮಿತಿ ವಹಿಸಿಕೊಳ್ಳಬೇಕು.
  • ಯೋಜನಾ ಮುಕ್ತಾಯದಿಂದ ಮೂರು ವರ್ಷಗಳವರೆಗೆ ಕಾವಲುಗಾರರ ನೇಮಕ.
  • ಬೆಂಕಿ ಹತೋಟಿ ಗುಂಪು ರಚಿಸಿ ಬೆಂಕಿ ಬೀಳುವುದನ್ನು ತಪ್ಪಿಸುವುದು.
  • ಜಾನುವಾರುಗಳು ಮೇಯುವುದನ್ನು ನಿಯಂತ್ರಿಸುವುದು, ಹಸಿ ಮರ ಕಡಿಯುವುದನ್ನು ನಿಲ್ಲಿಸುವುದು ಮತ್ತು ಉಲ್ಲಂಘಿಸಿದವರಿಗೆ ದಂಡ ವಿಧಿಸುವುದು.
  • ಕಾಯ್ದಿಟ್ಟ ಅರಣ್ಯದಲ್ಲಿ ನೆಡುತೋಪುಗಳನ್ನು ಅರಣ್ಯ ಇಲಾಖೆಗೆ ವರ್ಗಾವಣೆ ಮಾಡಿ ಅರಣ್ಯ ಸಮಿತಿಗಳ ಮೂಲಕ ನಿರ್ವಹಣೆ ಮಾಡುವುದು.
  • ಸರ್ಕಾರದ ನಿಯಮದಂತೆ ಬರುವ ಅರಣ್ಯ ಉತ್ಪನ್ನಗಳಾದ ಎಲೆ, ಮೇವು, ಹಣ್ಣು ಮುಂತಾದವುಗಳನ್ನು ಹಂಚಿಕೆ ಮಾಡುವ ವಿಧಾನಗಳನ್ನು ತೀರ್ಮಾನಿಸುವುದು.
  • ತಾಂತ್ರಿಕ ಜ್ಞಾನ ಪಡೆಯಲು, ಇಲಾಖೆಗಳ ಯೋಜನೆಗಳನ್ನು ಅನುಷ್ಠಾನ ಮಾಡಿಸಿಕೊಳ್ಳಲು ವಿವಿಧ ಇಲಾಖೆಗಳೊಂದಿಗೆ ನಿಕಟ ಸಂಪರ್ಕವಿಟ್ಟುಕೊಳ್ಳುವುದು.
  • ಅಂತರ್ಜಲ ದುರ್ಬಳಕೆಯನ್ನು ನಿಯಂತ್ರಿಸಲು ಕ್ರಮ. ಕಡಿಮೆ ನೀರುಣ್ಣುವ ಬೆಳೆಗಳನ್ನು ಬೆಳೆಯಲು ಸಮುದಾಯಕ್ಕೆ ಒತ್ತಡ ಹೇರುವುದು.

ಆಸ್ತಿಗಳ ನಿರ್ವಹಣೆಗೆ ಕೈಗೊಳ್ಳಬೇಕಾದ ವಿಧಾನಗಳು:

  • ಗ್ರಾಮಸಭೆಗಳ ಮೂಲಕ ತಿಳುವಳಿಕೆ ಶಿಬಿರ, ಹಸ್ತ ಪತ್ರಿಕೆ/ಪೋಸ್ಟರ್‍ಗಳ ವಿತರಣೆ.
  • ವಿವಿಧ ಇಲಾಖೆಗಳ ಜೊತೆ ಸಂಪರ್ಕ ಜಾಲ ಕಲ್ಪಿಸುವುದು.
  • ಕೈಗೊಂಡ ಕಾಮಗಾರಿ/ಆಸ್ತಿಗಳ ನಿರ್ವಹಣೆ/ಜವಬ್ಧಾರಿಗಳ ಬಗ್ಗೆ ತಿಳುವಳಿಕೆ ನೀಡುವುದು.
  • ಕಾವಲುಗಾರರ ನೇಮಕ.
  • ಸಾಮೂಹಿಕ ಅರಣ್ಯ ನೆಡುತೋಪುಗಳಲ್ಲಿ ನೀರಿನ ಪೂರೈಕೆ.
  • ತಾಂತ್ರಿಕ ಸಭೆಗಳನ್ನು ಏರ್ಪಡಿಸುವುದು.
  • ಮಾರಾಟ ಸಂಪರ್ಕಜಾಲವನ್ನು ಕಲ್ಪಿಸುವುದು.

ಯೋಜನೆಗಳಲ್ಲಿ ಪಾರದರ್ಶಕತೆ

ಪಾರದರ್ಶಕತೆಯೇ ಯೋಜನೆಗಳ ಯಶಸ್ಸಿನ ಮೆಟ್ಟಿಲು.
  • ಗೋಡೆಗಳ ಮೇಲೆ ಯೋಜನಾ ಮಾಹಿತಿ.
  • ಆಗಾಗ್ಗೆ ಸಭೆಯನ್ನು ಗ್ರಾಮದಲ್ಲಿ ಮಾಡಿ ಆಗಿರುವ ಪ್ರಗತಿ ಬಗ್ಗೆ ಮತ್ತು ಮುಂದೆ ಮಾಡುವ ಕಾರ್ಯಕ್ರಮಗಳನ್ನು ಚರ್ಚಿಸುವುದು.
  • ಕ್ರಿಯಾ ಯೋಜನೆಯಲ್ಲಿರುವ ಕಾಮಗಾರಿಗಳ ಅಂದಾಜು ಪತ್ರಿಕೆ ಮಂಜೂರಾತಿ ಪಡೆದು ಫಲಾನುಭವಿಗಳಿಂದಲೇ ಅನುಷ್ಠಾನಗೊಳಿಸಿ ಅಳತೆ ಪುಸ್ತಕದಲ್ಲಿ ದಾಖಲಿಸಿ ಹಾಗೂ ಅಳತೆ ತಪಾಸಣೆಯನ್ನು ಜಲಾನಯನ ತಂಡದಿಂದ ಮಾಡಿಸಿದ ನಂತರ ಕಾರ್ಯಕಾರಿ ಸಮಿತಿಯ ಸಭೆಯಲ್ಲಿ ಮಾಹಿತಿ ದಾಖಲಿಸುವುದು.
  • ಪಾವತಿಯನ್ನು ಸಂಘದ ಕಾರ್ಯಕಾರಿ ಸಮಿತಿ ಅಧ್ಯಕ್ಷರ, ಕಾರ್ಯದರ್ಶಿಗಳ ಮತ್ತು ಖಜಾಂಚಿಯ ಜಂಟಿ ಸಹಿಯೊಂದಿಗೆ ಕ್ರಾಸ್ ಮಾಡಿದ / ಪೇ ಟು ಆರ್ಡರ್ ಚೆಕ್ ಮುಖಾಂತರ ಫಲಾನುಭವಿ ಹೆಸರಿಗೆ ನೀಡುವುದು.
  • ಕಾಮಗಾರಿಗಳು ಆಗುವ ಮುಂಚೆ, ನಡೆಯುವಾಗ ಮತ್ತು ಮುಕ್ತಾಯದ ನಂತರ ಛಾಯಾ ಚಿತ್ರಗಳನ್ನು ತೆಗೆಸುವುದು.
  • ಗ್ರಾಮ ಸಭೆಯನ್ನು ನಿಗದಿತ ಸಮಯದಲ್ಲಿ ಮಾಡಿ ಎಲ್ಲಾ ಕಾರ್ಯಕ್ರಮದ ಪ್ರಗತಿಗಳನ್ನು, ಲೆಕ್ಕ ಪತ್ರಗಳನ್ನು, ಮುಂದಿನ ಕಾರ್ಯಕ್ರಮಗಳ ಬಗ್ಗೆ ಚರ್ಚಿಸಿ ತೀರ್ಮಾನ ಕೈಗೊಳ್ಳುವುದು.
  • ಲೆಕ್ಕಪತ್ರಗಳನ್ನು ನಿಗದಿತ ಸಮಯದೊಳಗೆ ಆಡಿಟ್ ಮಾಡಿಸಿ ಸಕಾಲದಲ್ಲಿ ಲೆಕ್ಕ ಪತ್ರ ಮತ್ತು ದಾಖಲೆಗಳನ್ನು ನಿಗದಿಪಡಿಸಿದ ಅಧಿಕಾರಿಗೆ ಸಲ್ಲಿಸುವುದು.

ಖರ್ಚಿನ ಬಗ್ಗೆ, ಪ್ರಗತಿ ಬಗ್ಗೆ ಮತ್ತು ಮುಂದಿನ ಯೋಜನೆ ಬಗ್ಗೆ ಫಲಾನುಭವಿಗಳೊಂದಿಗೆ ಸಮಿತಿ ಸದಸ್ಯರು ವಿವರ ಮಂಡಿಸುತ್ತಿರುವುದು.

ಹಣ ಸಂದಾಯ ಮತ್ತು ಲೆಕ್ಕ ಪತ್ರ ನಿರ್ವಹಣೆ

ವೈಯಕ್ತಿಕ ಕಾಮಗಾರಿಗಳಿಗೆ ಕೆಲಸ ಆದ ನಂತರ ಅದರ ಗುಣಮಟ್ಟ ಪರಿಶೀಲಿಸಿದ ಮೇಲೆ ಕಾರ್ಯಕಾರಿ ಸಮಿತಿಯ ಒಪ್ಪಿಗೆ ಮೇರೆಗೆ ಫಲಾನುಭವಿಗೆ ಚೆಕ್ ಮುಖಾಂತರ ಪಾವತಿ ಮಾಡಲಾಗುತ್ತದೆ.
  • ಸಮುದಾಯ ಕಾಮಗಾರಿಗಳಾದ ಜಲವಾಹಿನಿಯಲ್ಲಿ ತೆಗೆದುಕೊಳ್ಳುವ ನೀರು ಸಂಗ್ರಹಣಾ ವಿನ್ಯಾಸಗಳಿಗೆ – ಚೆಕ್ ಡ್ಯಾಂ, ನಾಲಾ ಬದು, ಎಂ.ಪಿ.ಟಿ, ರಾಕ್ ಫಿಲ್ ಡ್ಯಾಂ, ಆರ್ ಆರ್ ಎಸ್ ಕಾಮಗಾರಿಕೆಗಳನ್ನು ಇಲಾಖಾ ತಾಂತ್ರಿಕ ಅಧಿಕಾರಿಗಳಿಂದ ಅನುಷ್ಠಾನ ಮಾಡಲಾಗುತ್ತದೆ ಹಾಗೂ ಇದರ ಪಾವತಿಯನ್ನು ಕಾರ್ಯಕಾರಿ ಸಮಿತಿ ಒಪ್ಪಗೆ ಮೇರೆಗೆ ಇಲಾಖಾ ನಿಯಮದಂತೆ ಪಾವತಿ ಮಾಡುವುದು.
  • ಅಂದಾಜು ಪತ್ರಿಕೆ ತಯಾರಿಕೆ ಹಾಗೂ ಮಂಜೂರಾತಿ ಇಲಾಖಾ ಅಧಿಕಾರಿಗಳು ನಿರ್ವಹಿಸುತ್ತಾರೆ.

ಅ) ಹಣ ಸಂದಾಯಗಳಿಗೆ ಸಮಿತಿಯು ಸಂದಾಯಗಳನ್ನು ಮಾಡುವ ಮೊದಲು ಈ ಕೆಳಗಿನ ನಿಯಮಗಳನ್ನು ಪಾಲಿಸತಕ್ಕದ್ದು.

ಆ) ಜಿಲ್ಲಾ ಜಲಾನಯನ ಕಛೇರಿಯ ತಾಂತ್ರಿಕ ಸಿಬ್ಬಂದಿ “ತಪಾಸಣಾ ಅಳತೆ” ಕೈಗೊಂಡು ಅದನ್ನು ಅಳತೆ ಪುಸ್ತಕದಲ್ಲಿ ದಾಖಲಿಸಿ ನಂತರ ಕಾರ್ಯವನ್ನು ಪ್ರಮಾಣೀಕರಿಸಿರಬೇಕು.

ಇ) ಖಾಸಗಿ ಭೂಮಿಯ ಸಂದರ್ಭದಲ್ಲಿ ಸಂಬಂಧಪಟ್ಟ ಫಲಾನುಭವಿ ಅಥವಾ ಸಾರ್ವಜನಿಕ ಭೂಮಿಯ ಸಂದರ್ಭದಲ್ಲಿ ಫಲಾನುಭವಿಗಳಲ್ಲಿ ಒಬ್ಬರು ಆಯಾ ಕ್ಷೇತ್ರ ಗುಂಪು / ಸ್ವ ಸಹಾಯ ಗುಂಪು ಸದಸ್ಯರ ಜೊತೆಗೂಡಿ ಕಾರ್ಯವನ್ನು ಸಂಪೂರ್ಣವಾಗಿ ತೃಪ್ತಿಕರವಾಗಿ ಪೂರೈಸಲಾಗಿದೆಯೆ ಎಂದು ತಪಾಸಣೆ ಮಾಡಬೇಕು.

  • ಹಣ ಸಂದಾಯಕ್ಕೆ ಸೂಕ್ತ ರಸೀದಿಯನ್ನು ಮತ್ತು ಹಣ ಸ್ವೀಕರಿಸಿದವರಿಂದ ಸಹಿಯನ್ನು ಪಡೆಯತಕ್ಕದ್ದು.
  • ಸಂಬಂಧಪಟ್ಟ ಖರೀದಿ ನಿಯಮಗಳನ್ನು ಅನುಸರಿಸತಕ್ಕದ್ದು ಹಾಗೂ ಗುತ್ತಿಗೆಯ ಷರತ್ತುಗಳನ್ನು ಅನುಸರಿಸಬೇಕು.
  • ನಗದು ವಂತಿಗೆಗೆ ಆಗಿಂದಾಗಲೆ ನಗದು ರಸೀದಿ ಕೊಡಬೇಕು.
  • ಸಂಗ್ರಹಿಸಲಾದ ವಂತಿಗೆಯನ್ನು ಅನುಷ್ಠಾನ8 ಖಾತೆಯಲ್ಲಿ ಜಮಾ ಮಾಡಬೇಕು.
  • ಜಿಲ್ಲಾ ಜಲಾನಯನ ಅಭಿವೃದ್ಧಿ ಅಧಿಕಾರಿ ಅಲ್ಲಲ್ಲಿ ಜಲಾನಯನ ಅಭಿವೃದ್ಧಿ ಅಧಿಕಾರಿ ಅಲ್ಲಲ್ಲಿ ತಪಾಸಣೆ ಮಾಡಬೇಕು.
  • ಖರ್ಚುಗಳು ಕ್ರಿಯಾ ಯೋಜನೆ ಪ್ರಕಾರ ಇದೆಯೇ.
  • ಅಂದಾಜು ವೆಚ್ಚಕ್ಕಿಂತ ವಾಸ್ತವ್ಯ ವೆಚ್ಚ ಹೆಚ್ಚಾಗಿರಬಾರದು. ಫಲಾನುಭವಿಗಳ ವಂತಿಗೆಯನ್ನು ಹೇಗೆ ಲೆಕ್ಕವಿಡಬೇಕು:
  • ಪ್ರತಿಯೊಂದು ಕಾರ್ಯ ಚಟುವಟಿಕೆಗಳು ಫಲಾನುಭವಿಗಳ ವಂತಿಗೆಯ ಪಾಲು ಒಳಗೊಂಡಿರುತ್ತದೆ.

ಲೆಕ್ಕ ಪರಿಶೋಧನೆ ಮೂರು ಹಂತದಲ್ಲಿ

ಯೋಜನೆಗೆ ಸಿ.ಎ.ಜಿ. ಶಾಸನ ಬದ್ದ ಲೆಕ್ಕ ಪರಿಶೋಧಕರಾಗಿದದು ಸಮಿತಿಗೆ ನೀಡಿದ ಹಣದ ವಾರ್ಷಿಕ ಲೆಕ್ಕ ಪರಿಶೋಧನೆಯನ್ನು ಸಾಮಾನ್ಯವಾಗಿ ಜಿ.ಜ.ಅ.ಅ. ಮಟ್ಟದಲ್ಲೆ ನಡೆಸಲಾಗುವುದು. ಸಿ.ಎ.ಜಿ ಸಿಬ್ಬಂದಿಗಳಿಗೆ ಸಮಿತಿ ತನ್ನ ಎಲ್ಲಾ ಲೆಕ್ಕ ಮತ್ತು ದಾಖಲೆ, ಓಚರ್‍ಗಳು, ಭೌತಿಕ ಆಸ್ತಿ ತಪಾಸಣೆ ಇತ್ಯಾದಿಗಳಿಗೆ ಅನುಕೂಲ ಮಾಡಿಕೊಡಬೇಕು.

ಯೋಜನೆಯಿಂದ ಕಾಲಕಾಲಕ್ಕೆ ಆಂತರಿಕ ಲೆಕ್ಕ ಪರಿಶೋಧನೆಯನ್ನು ನಡೆಸಲಾಗುತ್ತದೆ.

ವಾರ್ಷಿಕ ಲೆಕ್ಕ ಪರಿಶೋಧನೆಯನ್ನು ಅಡಿಟರ್‍ರವರಿಂದ ಮಾಡಿಸಬೇಕು.

ಲೆಕ್ಕ ಪರಿಶೋಧನಾ ವರದಿ ಪಡೆದ ನಂತರ ಅದನ್ನು ಸದಸ್ಯರ ಮಾಹಿತಿಗಾಗಿ ಜಲಾನಯನ ಸಮಿತಿಯಿಂದ ಸಂಘದ ಸರ್ವ ಸದಸ್ಯರ ಸಾಮಾನ್ಯ ಸಭೆ ಕರೆದು ಮಂಡಿಸಬೇಕು.

ಕಾಮಗಾರಿ ಗುಣ ನಿಯಂತ್ರಣ

ಕಾಮಗಾರಿಗಳ ಗುಣಮಟ್ಟಕ್ಕೆ ವಿಶೇಷ ಒತ್ತು ನೀಡಲಾಗಿ ವಿವಿಧ ಸಾಮಾಗ್ರಿಗಳನ್ನು ಪರೀಕ್ಷೆ ಮಾಡಲು ಕೆಲವಾರು ಉಪಕರಣಗಳನ್ನು ಉಪಯೋಗಿಸಲಾಗುವುದು. ಇದರಲ್ಲಿ ಮುಖ್ಯವಾಗಿ ಮರಳು, ಜಲ್ಲಿ, ಸಿಮೆಂಟ್, ಗರಸು, ಇತ್ಯಾದಿಗಳ ಗುಣ ಮಟ್ಟ ಪರಿಶೀಲಿಸಿ ಇವುಗಳ ಸಕ್ರಮ ಉಪಯೋಗದಿಂದ ಕಾಮಗಾರಿಗಳ ದೀರ್ಘಕಾಲದ ಬಾಳಿಕೆ ಬಗ್ಗೆ ಖಾತ್ರಿ ಪಡಿಸಿಕೊಳ್ಳಲಾಗುವುದು.

  • ಇದಕ್ಕೆಂದೇ ವಿಶೇಷವಾಗಿ ಜಿಲ್ಲಾ ಗುಣ ನಿಯಂತ್ರಣ ತಜ್ಞರನ್ನೂ ಸಹ ನೇಮಿಸಿಕೊಂಡು ಗುಣ ಮಟ್ಟ ಪರಿಶೀಲನೆ ಮಾಡಲಾಗುತ್ತಿದೆ.
  • ತಾಂತ್ರಿಕ ಸಿಬ್ಬಂದಿಗೆ/ಅಧಿಕಾರಿಗಳಿಗೆ/ನೇಮಿಸಿಕೊಳ್ಳುವ ಗುಣ ನಿಯಂತ್ರಣ ತಜ್ಞರುಗಳಿಗೆ ವಿಶೇಷ ಗುಣ ನಿಯಂತ್ರಣ ತರಬೇತಿಯನ್ನು ನೀಡಲಾಗುತ್ತದೆ.
  • ಗುಣಮಟ್ಟ ಜೆಲ್ಲಿ ಆಯ್ಕೆ
  • ಗುಣಮಟ್ಟದ ಮರಳು ಆಯ್ಕೆ
  • ಕಪ್ಪೆ ಚಿಪ್ಪುಗಳಿಂದ ಮರಳು ಮುಕ್ತವಾಗಿರುಬೇಕು
  • ಮರಳಿನಲ್ಲಿ ಮಣ್ಣಿನ ಪ್ರಮಾಣ ಮತ್ತು ಉಬ್ಬುವಿಕೆಯನ್ನು
  • ನಿಗದಿತ ಗಾತ್ರದ ಮರಳಿನ ಕಣಗಳ ಪ್ರಮಾಣಗಳನ್ನು ಕಂಡುಕೊಳ್ಳಲು ಜರಡಿಗಳು
  • ಮಣ್ಣಿನಲ್ಲಿ ತೇವಾಂಶ ಕಂಡುಹಿಡಿಯುವ ಉಪಕರಣ
  • ಧಮ್ಮಸ್ಸು ಮಾಡುವ ಕಾಂಪ್ಯಾಕ್ಟರ್

ಓ.ಕೆ. ಕಾರ್ಡ್ ಪದ್ಧತಿ

ಕಾರ್ಯದ ಗುಣಮಟ್ಟವನ್ನು ದೃಢಪಡಿಸಿಕೊಳ್ಳಲು ಓ.ಕೆ. ಕಾರ್ಡ್ ವ್ಯವಸ್ಥೆಯನ್ನು ಪರಿಚಯಿಸಲಾಗಿದೆ. ಕಾರ್ಯದ ಪ್ರಾರಂಭದಿಂದ ಮುಕ್ತಾಯದವರೆಗೆ ಸುಜಲ ಜಲಾನಯನ ಸಂಘದ ಕಾರ್ಯಕಾರಿ ಸಮಿತಿ ಸದಸ್ಯರು ಮತ್ತು ಪರಿಶೀಲನಾಧಿಕಾರಿಗಳು ಓ.ಕೆ ಕಾರ್ಡ್ ಅನುಸಾರ ಪ್ರತಿಯೊಂದು ಕಾರ್ಯದ ಗುಣಮಟ್ಟವನ್ನು ಪರಿವೀಕ್ಷಿಸಬೇಕು. ಮತ್ತು ಅದನ್ನು ಕಾರ್ಡಿನ ಮೇಲೆ ದಾಖಲಿಸಬೇಕು. ಪರಿಸರಾತ್ಮಕ ಹಾನಿಯನ್ನು ಕನಿಷ್ಠಗೊಳಿಸಲು ಗುಣ ಆಶ್ವಾಸನೆ ಮತ್ತು ನಿಯಂತ್ರಣಾ ಕಾರ್ಯಾಚರಣೆಗಳ ಅಂಗವಾಗಿ ಅಗತ್ಯ ಪರಿಸರ ನಿರ್ವಹಣಾ ಕ್ರಮಗಳನ್ನು ಸಹ ಓ.ಕೆ. ಕಾರ್ಡ್ ಖಚಿತಪಡಿಸುತ್ತದೆ.

ಓ.ಕೆ.ಕಾರ್ಡಿನ ಒಂದು ಪ್ರತಿಯನ್ನು ಕಾರ್ಯಸ್ಥಳದಲ್ಲಿ ಇಟ್ಟಿರಬೇಕು ಹಾಗೂ ಜಲಾನಯನ ಸಂಘದ ಕಛೇರಿಯಲ್ಲಿ ಇನ್ನೊಂದು ಪ್ರತಿ ಇಟ್ಟಿರಬೇಕು. ಪರಿಶೀಲನಾಧಿಕರಿಗಳಿಂದ ಅವರ ಟಿಪ್ಪಣಿಗಳನ್ನು ಓ.ಕೆ ಕಾರ್ಡನಲ್ಲಿ ಪಡೆಯುವುದು. ಒಂದು ವೇಳೆ ಓ.ಕೆ ಕಾರ್ಡನಲ್ಲಿ ಟಿಪ್ಪಣಿ ಬರೆಯಲು ಸ್ಥಳ ಅವಕಾಶ ಕಡಿಮೆ ಇದ್ದಲ್ಲಿ ಪ್ರತ್ಯೇಕ ರಿಜಿಸ್ಟರ್‍ನಲ್ಲಿ ಕಾಮಗಾರಿವಾರು ಪರಿಶೀಲನಾ ಅಧಿಕಾರಿಗಳಿಂದ ಟಿಪ್ಪಣಿ ದಾಖಲಿಸುವುದು.

ತಡೆ, ಅಣೆ, ಬದು

ಒಣಕಲ್ಲಿನ ತಡೆ ಅಣೆ:

  • ಕೊರಕಲುಗಳು ಸೇರುವ ಕಡೆ ಮತ್ತು ತೀವ್ರತರವಾದ ಕಮರಿಯ ಇರುವಲ್ಲಿ ನಿರ್ಮಾಣ.
  • ಹೂಳು ನಿಯಂತ್ರಣೆ ಮತ್ತು ಸಸ್ಯ ಬೆಳವಣಿಗೆಗೆ ಉತ್ತೇಜನ.
  • ಕಮರಿಯ ಆಳ ಕನಿಷ್ಠ 1.5 ಮೀ ಮತ್ತು ಗರಿಷ್ಠ 3 ಮೀ ಇರಬೇಕು.
  • ಕ್ರಸ್ಟ್, ಏಪ್ರಾನ್ ಹೆಡರ್ಸಾಲು, ಸ್ಟಿಲ್ಲಿಂಗ್ ಬೇಸಿನ್ ಮತ್ತು ಮಗ್ಗಲುಗೋಡೆಗಳು ತಡೆಯ ಭಾಗಗಳು.
  • ತಡೆಯ ಎತ್ತರ ಕಮರಿಯಾಳಕ್ಕೆ ಅನುಗುಣವಾಗಿ 1ಮೀ, 1.25ಮೀ ಮತ್ತು 1.5ಮೀ.

ತಡೆ ಅಣೆ:

  • ಇದು ಆಳವಾದ ಹಳ್ಳಗಳಿಗೆ ಅಡ್ಡವಾಗಿ ಕಟ್ಟಿದ ಕಲ್ಲುಸಿಮೆಂಟ್ ಗಾರೆಯ ರಚನೆ ಆಗಿರುತ್ತದೆ.
  • ರಚನಾ ಸ್ಥಳದಿಂದ ಮೇಲ್ಬದಿಗೆ (U/S) ಹಳ್ಳವು ಕನಿಷ್ಠ 50 ಮೀ. ರವರೆಗೆ ನೇರವಾಗಿದ್ದು ಕಡಿದಾದ ಪ್ರಪಾತಗಳು ಇರಬಾರದು.
  • ಅಲ್ಲದೇ ರಚನಾ ಸ್ಥಳದ ಕೆಳಬದಿಗೆ 20 ಮೀ. ಅಂತರದ ವರೆಗೆ ತೀವ್ರ ತಿರುವುಗಳು ಇರಬಾರದು.
  • ಹಳ್ಳದ ಎರಡೂ ದಂಡೆಗಳು ಸ್ಫುಟವಾಗಿರಬೇಕು.
  • ಕಟ್ಟುವ ಸ್ಥಳದಲ್ಲಿ ಹಳ್ಳವು ಕನಿಷ್ಠ 2 ಮೀ. ಆಳವಿರಬೇಕು.
  • ಜಲಾನಯನ ಕ್ಷೇತ್ರವು 25 ರಿಂದ 250 ಹೆಕ್ಟೇರು ಇರಬೇಕು.
  • ಭೂಮಿಯಲ್ಲಿಯ ಅಂತರ್ಜಲ ಹೆಚ್ಚಿಸುತ್ತದೆ ಹಾಗೂ ಹಳ್ಳ ಹೆಚ್ಚು ಆಳ ಮತ್ತು ಅಗಲ ಆಗುವುದನ್ನು ತಡೆಯುತ್ತದೆ.

ಕಿಂಡಿ ತಡೆ ಅಣೆ:

ಹಳ್ಳದ ತಳದ ಮಟ್ಟಕ್ಕೆ ಸಮಾನಾಂತರದಲ್ಲಿ ಕ್ರೆಸ್ಟ್ ಇರುವ ತಡೆಅಣೆ. ಮಳೆಗಾಲದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಹರಿಯುವ ನೀರಿಗೆ ಹಳ್ಳದಲ್ಲಿ ದ್ವಾರವನ್ನು ತೆರೆದಿಟ್ಟು ನಂತರ ಹಳ್ಳದಲ್ಲಿ ಹರಿಯುವ ನೀರನ್ನು ಶೇಖರಿಸಲು ದ್ವಾರಗಳನ್ನು ಮುಚ್ಚಲಾಗುವುದು. ಸೈಜ್ ಕಲ್ಲು ಮತ್ತು ಸಿಮೆಂಟ್ ಗಾರೆಯಿಂದ ಕಟ್ಟಿದೆ, ಕಂಬಗಳ ನಡುವೆ ಮಂದ ಹಲಗೆಗಳನ್ನು ಜೋಡಿಸಿ, ನೀರನ್ನು ಅಣೆಯ ಹೊಂಭಾಗದಲ್ಲಿ ಶೇಖರಿಸಲಾಗುವುದು.

  • ಮಲೆನಾಡು ಹಾಗೂ ಹೆಚ್ಚು ಮಳೆ ಬೀಳುವ ಪ್ರದೇಶದಲ್ಲಿ ವಿನ್ಯಾಸ ಕೈಗೊಂಡು ನೀರಾವರಿಗೆ ಬಳಕೆ ಮಾಡಲಾಗುತ್ತದೆ.
  • ಘಟ್ಟ ಪ್ರದೇಶಗಳಲ್ಲಿ ಜಿನುಗು ನೀರನ್ನು ಶೇಖರಿಸಿ ಬೆಳೆ ಬೆಳೆಯುವ ಸಲುವಾಗಿ ನಿರ್ಮಾಣ.
  • ನೀರು ನಿಲ್ಲಿಸುವ ಎತ್ತರ ಕನಿಷ್ಠ 1 ಮೀ.
  • ಹಳ್ಳದ ಆಳ ಕನಿಷ್ಠ 1.5 ಮೀ.
  • ಕನಿಷ್ಠ 10 ಜನ ಫಲಾನುಭವಿಗಳಿಗೆ ನೀರಿನ ಉಪಯೋಗ.
  • ಕಲ್ಲು, ಜಲ್ಲಿ, ಮರಳು ಮತ್ತು ಸಿಮೆಂಟ್ ಉಪಯೋಗಿಸಿ ನಿರ್ಮಾಣ.

ಸಣ್ಣ ಜಿನುಗು ಕೆರೆ:

  • 5-20 ಹೆಕ್ಟೇರ್ ನೀರು ಬಸಿಯುವ ಕ್ಷೇತ್ರವುಳ್ಳ ಉಪಚರಿಸಿದ ಕೊರಕಲು/ಕಮರಿ/ಹಳ್ಳದಲ್ಲಿ ನಿರ್ಮಾಣ
  • ಅಂತರ್ಜಲ ಮರುಪೂರೈಕೆ.
  • ಜನ-ಜಾನುವಾರು ಮತ್ತು ಪಶು-ಪಕ್ಷಿಗಳ ಅಗತ್ಯತೆಗೆ ನೀರು.
  • ಹಳ್ಳದ ತಳದಲ್ಲಿ ತೆಗೆದ ಮಣ್ಣಿನಿಂದ ಬದು ನಿರ್ಮಾಣ.
  • ಹೆಚ್ಚಾದ ನೀರು ಹೊರಹೋಗಲು ಒಂದು ದಂಡೆಯಲ್ಲಿ ಕೋಡಿ.

ನಾಲಾ ಬದು:

  • 40-250 ಹೆಕ್ಟೇರ್‍ವರೆಗೆ ನೀರು ಬಸಿಯುವ ನಾಲಾ/ಹಳ್ಳಿಗಳಲ್ಲಿ ಹೆಚ್ಚು ಮಳೆ ಬೀಳುವ ಪ್ರದೇಶಗಳಲ್ಲಿ ನಿರ್ಮಾಣ. 80-500 ಹೆಕ್ಟೇರ್‍ವರೆಗೆ ನೀರು ಬಸಿಯುವ ನಾಲಾ/ಹಳ್ಳಿಗಳಲ್ಲಿ ಕಡಿಮೆ ಮಳೆ ಬೀಳುವ ಪ್ರದೇಶಗಳಲ್ಲಿ ನಿರ್ಮಾಣ.
  • ನಿರ್ಮಾಣಕ್ಕೆ ಮೊದಲು/ನಿರ್ಮಾಣದ ಅವಧಿಯಲ್ಲಿ ನಾಲಾಬದುವಿನ ಜಲಾನಯನ ಪ್ರದೇಶವನ್ನು ಉಪಚರಿಸಿ ಹೂಳು ನಿಯಂತ್ರಿಸಿರಬೇಕು.
  • ಅಂತರ್ಜಲ ಮರು ಪೂರೈಕೆ, ದನ-ಕರು, ಪ್ರಾಣಿ-ಪಕ್ಷಿ, ಜನಜಾನುವಾರುಗಳ ಅಗತ್ಯತೆಗೆ ನೀರು.
  • ಹಳ್ಳದ ಆಳ ಕನಿಷ್ಠ 2.7 ಮೀಟರ್.
  • ನೀರು ನಿಲ್ಲುವ ಎತ್ತರ ಕನಿಷ್ಠ 1.5 ಮೀ. ಗರಿಷ್ಠ 3ಮೀ.
  • ಕಲ್ಲು, ಜಲ್ಲಿ, ಮರಳು ಮತ್ತು ಸಿಮೆಂಟ್ ಉಪಯೋಗಿಸಿ ನಿರ್ಮಾಣ.
  • ಹೆಚ್ಚಾದ ನೀರು ಹೊರಹೋಗಲು ಒಂದು ದಂಡೆಯಲ್ಲಿ ಕೋಡಿ.

ಗ್ಯಾಬಿಯನ್ ತಡೆ

  • ಕೊರಕಲು ಆಳ ಮತ್ತು ಅಗಲವಾಗುವುದನ್ನು ನಿಯಂತ್ರಿಸುವುದು.
  • ಹೂಳನ್ನು ತಡೆಯುವುದು.
  • ಸಸ್ಯ ಬೆಳವಣಿಗೆಯನ್ನು ಉತ್ತೇಜಿಸುವುದು.
  • ಜಲಾನಯನ ಪ್ರದೇಶ 15 ಹೆ.
  • ನೀರಿನ ಪ್ರವಾಹದಲ್ಲಿ ಕಲ್ಲಿನ ತಡೆ ಕೊಚ್ಚಿಹೋಗುವ ಸಂದರ್ಭದಲ್ಲಿ

ನೀರು

ಎರಡು ತಡೆಗಳ ಮದ್ಯದ ಅಂತರವು ತಡೆಯ ಎತ್ತರದ ಎರಡು ಪಟ್ಟು ಎತ್ತರಾಂತರ

ಚೌಕಾಕಾರದ ಜಿ.ಐ ತಂತಿ ಚಾಳಿಗೆಯನ ಅಗತ್ಯಕ್ಕೆ ತಕ್ಕಂತೆ ಕತ್ತರಿಸಿಕೊಂಡು ಗುಂಡು ಕಲ್ಲುಗಳನ್ನು ತುಂಬಿ ನಿರ್ಮಾಣ

ಕಾಫಿ ತೋಟದಲ್ಲಿ ತೊಟ್ಟಿಲು ಗುಂಡಿ

  • ಗುಡ್ಡದ ಮೇಲ್ಭಾಗದಲ್ಲಿ ಟ್ರಂಚ್‍ಗಳನ್ನು ತೆಗೆಯುವುದರಿಂದ ಮಳೆ ನೀರು ಅಲ್ಲಿಯೇ ಇಂಗಲು ಸಹಾಯಕವಾಗುತ್ತದೆ.
  • ಇದರಿಂದಾಗಿ ಕೆಳಭಾಗದ ಜಲ ಸಂಗ್ರಹಣಾ ವಿನ್ಯಾಸಗಳಲ್ಲಿ ನೀರಿನ ಪ್ರಮಾಣ ಹೆಚ್ಚಾಗುತ್ತದೆ.
  • ಗುಡ್ಡದಿಂದ ಹರಿಯುವ ನೀರಿನ ವೇಗವು ಗಣನೀಯವಾಗಿ ಕಡಿಮೆಯಾಗುತ್ತದೆ.
  • ಮಣ್ಣಿನ ಕೊಚ್ಚಣೆ ಪ್ರಮಾಣ ಕಡಿಮೆಯಾಗುತ್ತದೆ.
  • ಕಾಫಿ ತೋಟದಲ್ಲಿ ಬೀಳುವ ಎಲೆಗಳು ಈ ತೊಟ್ಟಿಲು ಗುಂಡಿಗಳಲ್ಲಿ ಬಿದ್ದು ಅಲ್ಲಿಯೇ ಕಳಿತು ಲಾಫಿ ಗಿಡಗಳಿಗೆ ಗೊಬ್ಬರವಾಗಿ ಬಳಕೆಯಾಗುತ್ತದೆ.
  • ಲಾಫಿ ಬೆಳೆಗೆ ಹೆಚ್ಚಿನ ಕಾಲ ತೇವಾಂಶ ಲಭ್ಯವಾಗುತ್ತದೆ.
  • ಸ್ಥಳದಲ್ಲಿಯೇ ನೀರು, ಮಣ್ಣು ಮತ್ತು ಹಸಿರೆಲೆ ಗೊಬ್ಬರ ಸಂರಕ್ಷಣೆಯಾಗುತ್ತದೆ.

ಟ್ರೆಂಚ್ ಅಳತೆ

ಉದ್ದ – 1.8 ಮೀ.

ಅಗಲ - ಮೇಲಿನ ಅಗಲ-0.6 ಮೀ. ತಳದ ಅಗಲ-0.3 ಮೀ

ಆಳ – 0.45 ಮೀ.

 

ಉದಾಹರಣೆ

ಒಂದು ಎಕರೆ ಪ್ರದೇಶದಲ್ಲಿ ತೆಗೆಯಬೇಕಾದತೊಟ್ಟಿಲು ಗುಂಡಿ ಸಾಲಿನ ಒಟ್ಟು ಉದ್ದ =  43560

ಗುಂಡಿಗಳ ಸಾಲಿನ ಮಧ್ಯಂತರ(ಐ/2)

= 43560

6

=7260

ಪರ್ಯಾಯ ಕಂದಕ(ಬಿಟ್ಟು ಬಿಟ್ಟು ತೆಗೆಯುವ ಸಾಲುಗಳಾದುದರಿಂದ)     =  7260

6

=3630

3630, ಗಳನ್ನು ಮೀಟರ್ ಅಳತೆಗೆ ಪರಿವರ್ತಿಸಿದಾಗ ತೊಟ್ಟಿಲು ಗುಂಡಿಗಳ ಆಕಾರ/ಗಾತ್ರ  = 3630

3.3

=1100 ಮೀಟರ್

ಕಂದಕದ ಗಾತ್ರ = 1/2(ಮೇಲಿನ ಅಗಲ+ತಳದ ಅಗಲ)xಆಳ

0.6 ಮೀ ಅಗಲ = 1/2x(0.6+0.3)x0.45

1/2x 0.9x 0.45 =0.2025 ಚ ಮೀ

ಗುಂಡಿ ಸಾಲುಗಳ ಉದ್ದ ಘಿ ಗಾತ್ರ/ಛೇದ

ಒಂದು ಎಕರೆಯಲ್ಲಿ ತೆಗೆಯುವ ತೊಟ್ಟಿಲು ಗುಂಡಿಗಳ ಒಟ್ಟು ಮಣ್ಣಿನ ಪ್ರಮಾಣ=1100x 0.2025

=222.75 ಘನ ಮೀಟರ್

ಒಂದು ಹೆಕ್ಟೇರ್ ಪ್ರದೇಶದಲ್ಲಿ ತೊಟ್ಟಿಲು ಗುಂಡಿಗಳನ್ನು ತೋಡಲು ಒಟ್ಟು ಮಣ್ಣಿನ ಪ್ರಮಾಣ-222.75 ಘನ ಮೀಟರ್ ಗಳುx2.5=556.675 ಘನ ಮೀ.

ಝಿಂಗ್ ಟೆರೇಸಿಂಗ್ ಮತ್ತು ಜಲಮರುಪೂರಣ

ಝಿಂಗ್ ಟೆರೇಸಿಂಗ್ :

ಕಡಿಮೆ ಮಳೆ ಬೀಳುವ ಪ್ರದೇಶದಲ್ಲಿ ಎರಡು ಸಮಪಾತಳಿ ಬದುಗಳ ನಡುವೆ ಇರುವ ಭೂಪ್ರದೇಶವನ್ನು 3 ಅಥವಾ 4 ಸಮಭಾಗಗಳಾಗಿ ವಿಂಗಡಿಸಿ - ಸಮಪಾತಳಿ ಬದುವಿನ ಮೇಲ್ಭಾಗದ 1/3 ಅಥವಾ ¼ ರಷ್ಟು ಭೂಪ್ರದೇಶವನ್ನು ಕಡಿದು ಮಟ್ಟ ಮಾಡಿ ಒಂದೇ ಕಡೆ ಮಳೆ ನೀರು ಸಂಗ್ರಹವಾಗುವುದು ತಪ್ಪಿಸಲು ಝಿಂಗ್ ಟೆರೇಸಿಂಗ್ ಕೈಗೊಳ್ಳಲಾಗುತ್ತದೆ.

ತೆರೆದ ಬಾವಿ ಜಲಮರುಪೂರಣ :

ಬತ್ತಿಹೋದ ಅಥವಾ ಅಯಶಸ್ವಿ ತೆರೆದಬಾವಿಗಳನ್ನು ಮಳೆ ನೀರನ್ನು ತುಂಬಿಸುವುದರ ಮೂಲಕ ಜಲ ಮರುಪೂರಣಗೊಳಿಸುವುದು. ಮಳೆ ನೀರನ್ನು`000 ಬಾವಿಗೆ ಬಿಡುವ ಮೊದಲು ಹೂಳು ಬೋನಿನಿಂದ ಹಾಯ್ದು ಬರುವಂತೆ ನೋಡಿಕೊಳ್ಳುವುದು.

ಜಲ ಮರುಪೂರಣ ಗುಂಡಿ :

  • ನೀರು ಹಿಂಗುವ ಸಾಮಾರ್ಥಕಡಿಮೆ ಇರುವ ಗಟ್ಟಿ ಮೇಲ್ಪದರ ಇರುವ ಕೊರಕಲುಗಳಲ್ಲಿ ಅಂತರ್ಜಲ ಮರುಪೂರ್ಣ ಮಾಡುವ ಸಲುವಾಗಿ ನಿರ್ಮಾಣ.
  • ಉಪಚರಿಸಿದ ಜಲವಾಹಿನಿಗಳಲ್ಲಿ ನಿರ್ಮಾಣ.
  • ಹೂಳನ್ನು ಆಗಾಗ್ಗೆ ತೆಗೆದು ಪಕ್ಕದ ಜಮೀನುಗಳಲ್ಲಿ ಹಾಕುವುದು.
  • ಅಂತರ್ಜಲ ಮರುಪೂರ್ಣ ಮತ್ತು ಸಸ್ಯ ಬೆಳವಣಿಗೆಗೆ ಉತ್ತೇಜನ.

ಅಂತರ ಬದು ನಿರ್ವಹಣೆ :

ತಟ್ಟೆಯಾಕಾರದ ಗುಣೆಗಳು :

ಮಳೆ ನೀರು ಇಂಗುವ ಸಾಮಾಥ್ರ್ಯ ಕಡಿಮೆಯಿರುವ ಮಧ್ಯಮದಿಂದ ಆಳವಾದ ಕಪ್ಪು ಮಣ್ಣಿನ ಭೂಮಿಯಲ್ಲಿ ಇಳಕಲಿಗೆ ಅಡ್ಡಲಾಗಿ ಅಥವಾ ಸಮಪಾತಳಿ ಗುಂಟ ಚಿಕ್ಕ ತಟ್ಟೆಯಾಕಾರದ ಗುಣಿಗಳನ್ನು ನಿಗದಿತ ಅಂತರದಲ್ಲಿ ನಿರ್ಮಿಸಬೇಕು.

ಚೌಕ ಮಡಿಗಳು :

ಮಳೆ ನೀರು ಇಂಗುವ ಸಾಮಾಥ್ರ್ಯಕಡಿಮೆಯಿರುವ ಮಧ್ಯಮದಿಂದ ಆಳವಾದ ಕಪ್ಪು ಮಣ್ಣಿನ ಭೂಮಿಯಲ್ಲಿ ಚೌಕಮಡಿಗಳನ್ನು ಜುಲೈ ತಿಂಗಳ ಎರಡನೆ ಪಕ್ಷದಲ್ಲಿ ನಿರ್ಮಿಸಬೇಕು.

ಸಸ್ಯ ಬದು / ಸಮಪಾತಳಿ ಸಸ್ಯ ತಡೆ :

ಮಳೆ ನೀರಿನ ವೇಗವನ್ನು ಕಡಿಮೆ ಮಾಡಿ ಮಣ್ಣು ಕೊಚ್ಚಣೆಯನ್ನು ತಡೆಯಲು ಸ್ಥಳೀಯವಾಗಿ ಬೆಳೆಯಬಹುದಾದ ಸಸ್ಯಗಳನ್ನು ಬೆಳೆಸಿ ನಿರ್ಮಿಸಿದ ತಡೆ.

ಲಂಬ ಹೊದಿಕೆ :

ಮಳೆ ನೀರುಇಂಗುವ ಸಾಮಥ್ರ್ಯ ಕಡಿಮೆ ಇರುವ (0.8 ಮೀ. ಮೀ/ಗಂಟೆ) ಆಳವಾದ ಕಪ್ಪು ಮಣ್ಣಿನ ಭೂಮಿಯಕೆಳಪದರುಗಳು ಮಂದಗತಿಯಲ್ಲಿ ತೇವವಾಗುವುದು. ಭೂಮಿಯಲ್ಲಿನ ಮಣ್ಣಿನ ಪದರಗಳು ತೇವಾಂಶ ಪಡೆಯಲು ಅನುವಾಗಲು ಲಂಬ ಹೊಂದಿಕೆಗಳು ಅವಶ್ಯ.

ಜಲವಾಹಿನಿಯ ಉಪಚಾರ ಕ್ರಮಗಳು

ಕಂಠಿ ತಡೆ : 3 ಹೆ. ವರೆಗಿನ

ಜಲಾನಯನ ಪ್ರದೇಶದ ಕೊರಕಲಿನ ಒಂದು ಬದಿರಯ ಮಹಾಪೂರ ಮಟ್ಟದಿಂದ ಮತ್ತೊಂದು ಬದಿಯ ಮಹಾಪೂರ ಮಟ್ಟದವರೆಗೆ ನೀರಿಗೆ ಲಂಬವಾಗಿ 0.3ಮೀ ಅಂತರದಲ್ಲಿ 0.3ಮೀ. *0.3ಮೀ ಆಳದ ಮೂರು ಕಂದಕ ತೆಗೆಯಬೇಕು. ಅಗೆದ ಮಣ್ಣನ್ನು ಕಂದಕದಲ್ಲಿ ತುಂಬಿ, 0.15ಮೀ. ಅಂತರದಲ್ಲಿ ಚೆನ್ನಾಗಿ ಬೆಳೆದ ಕಟಿಂಗ್ / ಕಡ್ಡಿ ನೆಡಬೇಕು. ಅಲ್ಲದೆ ಕಂದಕಗಳ ಮಧ್ಯೆ ಹುಲ್ಲು ಬೀಜ ಹಾಕುವುದು.

ಗುಂಡು ಕಲ್ಲು ತಡೆ :

8. ಹೆ. ವರೆಗಿನ ಜಲಾನಯನ ಪ್ರದೇಶದಲ್ಲಿನ ಕೊರಕಲಿನ ಆಳವು 1 ರಿಂದ 1.5 ಮೀ. ಇರುವ ಕಡೆ ಪ್ರತಿ 1 ಮೀ. ಎತ್ತರಾಂತರದಲ್ಲಿ ನಿರ್ಮಿಸುವುದು. ಮಣ್ಣು ಕೊಚ್ಚಿ ಹೋಗುವುದನ್ನು ತಡೆದು ನಾಲಾ ಸುಧಾರಣೆ ಮಾಡಲು ಮಾತ್ರ ಈ ರಚನೆಯನ್ನು ನಿರ್ಮಿಸಲಾಗುವುದು.

ರಬಲ್ ಕಲ್ಲು ತಡೆ :

8 ರಿಂದ 15 ಹೆ. ವರೆಗಿನ ಜಲಾನಯನ ಪ್ರದೇಶದಲ್ಲಿನ ಕೊರಕಲಿನ ಆಳವು 1 ರಿಂದ 3ಮೀ. ಇರುವ ಕಡೆ 2 ಮೀ. ಎತ್ತರಾಂತರದಲ್ಲಿ ನಿರ್ಮಿಸಲಾಗುವುದು. ಮೇಲ್ಬದಿ ಮತ್ತು ಕೆಳಬದಿಗೆ ಒಂದು ಸಾಲು ಕತ್ತಾಳೆ ಸಸಿಗಳನ್ನು 0.3ಮೀ ಅಂತರದಲ್ಲಿ ನಿರ್ಮಿಸಬೇಕು.

ಜಲ ಇಂಗು ಗುಂಡಿ :

  • ಮಣ್ಣಿನಲ್ಲಿ ನೀರು ಇಂಗುವ ಸಾಮಥ್ರ್ಯ ಕಡಿಮೆ ಇರುವ ಭೂಮಿಗಳಲ್ಲಿ, ಈ ವಿನ್ಯಾಸವನ್ನು ನಿರ್ಮಾಣ ಮಾಡುವ ಜಾಗದ ಮೇಲ್ಭಾಗದಲ್ಲಿ ಈಗಾಗಲೇ ಉಪಚರಿಸಲ್ಪಟ್ಟಿದ್ದರೆ, ಕೊರಕಲು /
  • ಹಳ್ಳಗಳಲ್ಲಿ ಜಲಮರುಪೂರಣ ಗುಂಡಿಗಳನ್ನು ನಿರ್ಮಿಸುಬಹುದು. ಹತ್ತಿರದಲ್ಲಿ ತೆರೆದ ಬಾವಿ / ಕೊಳವೆ ಬಾವಿಗಳು ಇರಬೇಕು.

ಸಂಕನ್ ಹೊಂಡ

  • 8-15 ಹೇಕ್ಟರ್ ವರೆಗೆ ನೀರು ಬಸೆಯುವ ಕ್ಷೇತ್ರವುಳ್ಳ ದೊಡ್ಡ ಕೊರಕಲುಗಳಲ್ಲಿ ನಿರ್ಮಾಣ.
  • ಕೊರಕಲಿನ ತಳದಲ್ಲಿ ನೀರು ನಿಲ್ಲಲು ಹೊಂಡ ತೆಗೆದು, ತೆಗೆದ ಮಣ್ಣಿನಿಂದ ಜಲವಿಮುಖ ಭಾಗದಲ್ಲಿ ಬದು ನಿರ್ಮಾಣ ಮಾಡಿ ಬೋಲ್ಡರ್ ನಿಂದ ಬಲಪಡಿಸಲಾಗುವುದು.
  • ಅಂತರ್ಜಲ ಮರುಪೂರಣ ಮತ್ತು ಸಸ್ಯ ಬೆಳವಣಿಗೆಗೆ ಉತ್ತೇಜನ.
  • ಹೂಳನ್ನು ಅಗಾಗ್ಗೆ ತೆಗೆದು ಪಕ್ಕದ ಜಮೀನುಗಳಲ್ಲಿ ಹಾಕುವುದು.
ಮೂಲ: ದೂರ ಶಿಕ್ಷಣ ಘಟಕ ವಿಸ್ತರಣಾ ನಿರ್ದೇಶನಾಲಯ, ಹೆಬ್ಬಾಳ ಕೃಷಿ ವಿಶ್ವವಿದ್ಯಾನಿಲಯ, ಜಿ.ಕೆ.ವಿ.ಕೆ. ಬೆಂಗಳೂರು ಮತ್ತು ಸಮಗ್ರ ಜಲಾನಯನ ನಿರ್ವಹಣೆ ಯೋಜನೆ

ಕೊನೆಯ ಮಾರ್ಪಾಟು : 7/2/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate