ನಡುಮಲೆ ಎಂದೊಡನೆ ಆ ಕ್ಷೇತ್ರ ಯಾತ್ರೆ ಕೈಗೊಂಡಿದ್ದ ಭಕ್ತರ ಮನಃ ಪಟಲದಲ್ಲಿ ಮೂಡುವ ಎರಡು ಪ್ರಧಾನ ದೃಶ್ಯಗಳೆಂದರೆ ಶಿವಶರಣ ಮಹದೇಶ್ವರನ ಗದ್ದಿಗೆ ಮಾತು ಸಾಲೂರು ಮಠ (ಇಂದಿನ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿಗೆ ಸೇರಿದ ಸಾಲೂರಿನಿಂದ ಬಂದ ಸ್ವಾಮಿಗಳು ಸ್ಥಾಪಿಸಿದ ಮಠ) ಮೊದಲನೆಯರ ಮೇಲೆ ಇರುವ ಮಾದೇಶ್ವರನೆಂಬ ಹೆಸರಿನ ಕೃಷ್ಣ ಶಿಲೆಯು, ಅದರಡಿಯ ಯೋಗ ಮಂದಿರದಲ್ಲಿ ಶಾಶ್ವತ ಶಿವಯೋಗದಲ್ಲಿ ನೆಲೆಸಿದ ಆ ಘನ ಮಹಿಮನ ಚೈತನ್ಯಾಂಶವನ್ನೊಳಗೊಂಡು ಸುಮಾರು ಆರು ಶತಮಾನಗಳಿಂದ ಕೋಟ್ಯಾಂತರ ಭಕ್ತರಿಂದ ಪೂಜಿಸಿಕೊಲ್ಲುತ್ತಾ ಬಂದಿದೆ, ಎರಡನೆಯದು, ಮಹದೇಶ್ವರರು ನಡುಮಲೆಗೆ ಬರುವುದಕ್ಕೆ ಅನೇಕ ವರ್ಷಗಳ ಹಿಂದೆ ಆ ಕ್ಷೇತ್ರಕ್ಕಾಗಮಿಸಿದ ಸಾಲೂರು ಸ್ವಾಮಿಗಳು ತಪವೆಸಗುತ್ತಿದ್ದ ಮತ್ತು ಮುಂದೆ ಅಲ್ಲಿಗೆ ಬಂದ ಮಾದೇಶ್ವರನು ತಾತ್ಕಾಲಿಕ ಯೋಗಮಂದಿರವನ್ನಾಗಿ ಮಾಡಿಕೊಂಡಿದ್ದ ಗುಹೆ. ಆತನು ನಿರ್ಮಿಸಿದ ಗುರುಮಠ ಮತ್ತು ಅವರಿಬ್ಬರ ಸ್ಮಾರಕವಾಗಿ ಉಳಿದು ಬಂದಿರುವ ಪ್ರೇಕ್ಷಣೀಯ ವಸ್ತುಗಳು ಇತ್ಯಾದಿಗಳಿಂದ ಕೂಡಿ ಭಕ್ತರ ಯಾತ್ರಾಸ್ಥಳವಾಗಿದೆ.
ಇವೆರಡಕ್ಕೂ ಇರುವ ನಿಕಟ ಸಂಬಂಧವಾಗಿ ಮಾದೇಶ್ವರನಿಗೆ ಪೂಜೆ ಕೈಂಕರ್ಯಗಳನ್ನೆಸಗಿದವರೆಲ್ಲರೂ ಈ ಗುರು ಮಠವನ್ನು ಸಂದರ್ಶಿಸಿ ಇಲ್ಲಿಯೂ ಪೂಜೆ ಮಾಡಿಸಿ ಶ್ರೀ ಮಠದ ಗುರುಗಳ ದರ್ಶನಾಶೀರ್ವಾದಗಳನ್ನು ಪಡೆದು ಬರುವುದು ಅಂದಿನಿಂದ ಇಂದಿನವರೆಗೂ ನಡೆದು ಬಂಡ ಪದ್ಧತಿಯಾಗಿದೆ. ಹೀಗೆ ಬರುವವರಲ್ಲಿ ಜನ ಸಾಮಾನ್ಯರಿಂದ ಹಿಡಿದು ರಾಜರುಗಳವರೆಗೆ ಎಲ್ಲ ದರ್ಜೆಯವರೂ ಇದ್ದಾರೆ. ಮಾದೇಶ್ವರನ ನೈಷ್ಠಿಕ ಭಕ್ತರೂ, ಆಲಯದ ಅಭಿವೃದ್ದಿಗಾಗಿ ಬಹುಮುಖವಾಗಿ ಸೇವೆ ಸಲ್ಲಿಸಿದವರೂ ಆದ ಮೈಸೂರು ಅರಸರು ಮೂರು ನಾಲ್ಕು ತಲೆಮಾರುಗಳಿಂದ ಈ ಗುರುಮಠವನ್ನು ಸಂದರ್ಶಿಸುತ್ತಿದ್ದುದನ್ನು ತಿಳಿಸುವ ದಾಖಲೆಗಳು ಹಲವಾರು.
ಗದ್ದಿಗೆ ಗುರುಮಠಗಳೆರಡರ ನಿಕಟ ಸಂಬಂಧವನ್ನು ಸೂಚಿಸುವ ಇತರ ಕಾರಣಗಳಲ್ಲಿ ಮುಖ್ಯವಾದವುಗಳು ಇವು:
೧೯೫೦ ರಲ್ಲಿ ಮೈಸೂರು ಸರ್ಕಾರವು ಶ್ರೀ ಮಾದೇಶ್ವರ ಆಲಯವನ್ನು ತನ್ನ ವಶಕ್ಕೆ ತೆಗೆದುಕೊಳ್ಳುವವರೆವಿಗೂ ಸಾಲೂರು ಮಠದ ಶ್ರೀಗಳೇ ಅದರ ಸರ್ವಾಧಿಕಾರಿಗಳಾಗಿದ್ದರು. ಸಾಲೂರು ಮಠದ ಗುರು ಪರಂಪರೆಯಲ್ಲಿ ಆರನೆಯವರೆಂದು ಪರಿಗಣಿಸಲ್ಪಟ್ಟಿರುವ ಶ್ರೀ ಕೆಂಪನಂಜಸ್ವಾಮಿಗಳು ಶಾನಸೋಕ್ತ ವ್ಯಕ್ತಿಗಳು. ಕ್ರಿ.ಷ.೧೫೪೫ನೆಯ ಕುಂತೂರು ಶಾಸನ ೯ ರಲ್ಲಿ ಇವರ ಹೆಸರು ಬರುತ್ತದೆ. ಇವರು ಖುದ್ದಾಗಿ ನಿಂತು ಮಾದೇಶ್ವರ ಆಲಯದ ಪ್ರಾಕಾರದ ಗೋಡೆಗಳಿಗೆ ಸೇರಿದಂತಿರುವ ಮಂಟಪಗಳನ್ನು ಕಟ್ಟಿಸಿದರು. ದೇವಸ್ಥಾನದ ಹೆಬ್ಬಾಗಿಲಿನ ಪಕ್ಕದ ವಾಹನದ ಬಾಗಿಲನ್ನು ಮಾಡಿಸಿದವರು ಇವರೇ. ಅಲ್ಲಿಯ ಕಂಬದ ಮೇಲಿರುವ ೧೫.೦೮.೧೯೨೭ರ ಶಿಲಾ ಬರಹವು ಇದನ್ನು ಸಮರ್ಥಿಸುತ್ತದೆ.
ಈ ಗುರು ಪರಂಪರೆಯಲ್ಲಿ ಹದಿನೈದನೆಯವರಾದ ಶ್ರೀ ಮುದ್ದುವೀರ ಸ್ವಾಮಿಗಳು ೧೯೫೦ ರಲ್ಲಿ ಅದುವರೆಗೆ ತಮ್ಮ ಹಕ್ಕು ಬಾದ್ಯತೆಯಾಗಿದ್ದ ದೇವಸ್ಥಾನದ ಆಡಳಿತವನ್ನು ಸಂಪೂರ್ಣವಾಗಿ ಸರ್ಕಾರಕ್ಕೆ ಬಿಟ್ಟುಕೊಟ್ಟರೆಂಬುದಕ್ಕೆ ದಾಖಲೆ ಇದೆ.
ಇಂದೂ ಈ ಮಠದವರಿಗೆ ದೇವಸ್ಥಾನದಿಂದ ದಕ್ಷಿಣೆ ರೂಪವಾದ ಗೌರವ ಧನ ಬರುತ್ತಿದೆ. ೧೮೪೨ ರ ಈಸ್ಟ್ ಇಂಡಿಯಾ ಕಂಪನಿಯ ತಹನಾಮೆಯಲ್ಲಿ ಈ ಆಲಯಕ್ಕೆ ಧರ್ಮದರ್ಶಿಯ ನೇಮಕವಾದರೂ ಈ ಮಥಾದಿಪತಿಗಳೇ ತಮ್ಮ ಮಠವು, ಮಾದೇಶ್ವರನ ಗದ್ದುಗೆಯೂ ಒಂದೇ ಎಂಬ ಭಾವನೆಯಿಂದ ಮಾದೇಶ್ವರನ ಪೂಜೋತ್ಸವಗಳಲ್ಲಿ ಪ್ರಧಾನ ಪಾತ್ರ ವಹಿಸುತ್ತಿದ್ದುದಲ್ಲದೆ ತನುಮನ ಧನಗಳಿಂದ ಆ ಗದ್ದುಗೆ ಸೇವೆ ಸಲ್ಲಿಸುತ್ತಿದ್ದರು.
ಮಾದೇಶ್ವರನ ತ್ರಿಕಾಲ ಪೂಜೆಗಳು ಮಠದ ಶ್ರೀಗಳ ಅಥವಾ ಅವರ ಪ್ರತಿನಿಧಿಗಳ ಸಮಕ್ಷಮದಲ್ಲಿ ನಡೆಯುವುದು ಅನೂಚಾನವಾಗಿ ಬಂಡ ಪದ್ದತಿಯಾಗಿದೆ. ವಿಶೇಷ ಪೂಜೋತ್ಸವ ಸಂಧರ್ಭಗಳಲ್ಲಿ ಮಾದೇಶ್ವರ ಆಳಯದವರು ಶ್ವೇತ ಛತ್ರಿ ಮೊದಲಾದ ಬಿರುದುಗಳೊಡನೆ ವಾದ್ಯ ಸಮೇತ ಬಂದು ಮಠದ ಶ್ರೀಗಳವರನ್ನು ಬಿಜಯಂಗೈಸಿಕೊಂಡು ಹೋಗುತ್ತಾರೆ. ಇವರ ಸಮ್ಮುಖದಲ್ಲಿ ಪೂಜೆ ನಡೆದು ಮಾದೇಶ್ವರ ಲಿಂಗಕ್ಕೆ ಪ್ರಸಾದ ನೈವೇದ್ಯ ಮಾಡುವ ಸಮಯದಲ್ಲಿ ಅಲ್ಲಿಯೇ ಶ್ರೀ ಸಾಲೂರು ಮಠದ ಶ್ರೀಗಳೂ ಪ್ರಸಾದವನ್ನು ಸ್ವೀಕರಿಸುತ್ತಾರೆ. ಆಲಯದ ಪೂಜಾಕಾರ್ಯಗಳಲ್ಲಿ ಇವರಿಗೆ ಆಗ್ರಾ ತಾಂಬೂಲ ಸಲ್ಲುತ್ತ ಬಂದಿದೆ. ಮಹದೇಶ್ವರರು ಇಲ್ಲಿಗೆ ಬರುವ ಪೂರ್ವದಲ್ಲಿಯೇ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದ ತಾಲೋಕಿನ ಸಾಲೂರು ಎಂಬ ಗ್ರಾಮದಿಂದ ಬಂದು ಈ ದತ್ತ ಅರಣ್ಯದಲ್ಲಿ ಸಂಚರಿಸಿ ಮಠವನ್ನು ಹೇಗೆ ತಾನೇ ಸ್ಥಾಪಿಸಿದರು ಎನ್ನುವುದನ್ನು ಕಲ್ಪಿಸಿಕೊಂಡರೆ ತುಂಬಾ ಆಶ್ಚರ್ಯವಾಗುತ್ತದೆ.
ಮೂಲ:ರಜತ ದರ್ಪಣ
ಕೊನೆಯ ಮಾರ್ಪಾಟು : 6/28/2020