25 ವರ್ಷದ ಸುನಿತಾಗೆ ಅಂದು ರಾತ್ರಿಯೆಲ್ಲ ನಿದ್ದೆಯಿಲ್ಲ. ತಿಂದಿದ್ದೆಲ್ಲ ವಾಂತಿಯಗಿಬಿಡುತ್ತೇನೋ ಎಂಬ ಭಾವ. ಹೊಟ್ಟೆಯಲ್ಲೆಲ್ಲ ವಿಚಿತ್ರ ಯಾತನೆ. ತಾನು ರಾತ್ರಿ ಏನು ಊಟ ಮಾಡಿದೆ ಎಂದೆಲ್ಲ ಯೋಚಿಸಿದರೂ ಆಕೆಗೆ ಆರೋಗ್ಯ ಕೆಡುವಂಥದ್ದನ್ನಂತೂ ಏನೂ ತಿಂದಿಲ್ಲ ಎಂಬ ನಂಬಿಕೆ. ಇದ್ದಕ್ಕಿದ್ದಂತೆ ಶುರುವಾಯ್ತು ವಾಂತಿ. ರಾತ್ರಿ ತಿಂದಿದ್ಯಾವುದೂ ಜೀರ್ಣವಾಗಿರಲಿಲ್ಲ. ಜೊತೆಗೆ ಬೇಧಿಬೇರೆ. ಬೆಳಗ್ಗೆ ಏಳುವಷ್ಟರಲ್ಲಿ ಸುನಿತಾ ಹೈರಾಣಾಗಿಬಿಟ್ಟಿದ್ದಳು.
ಏಳುವುದಕ್ಕೂ ಸಾಧ್ಯವಾಗದಂತೆ ದೇಹ ನಿಶ್ಶಕ್ತವಾಗಿತ್ತು. ಯಾವ ಕೆಲಸಕ್ಕೂ ಲಹರಿಯಿಲ್ಲ. ಆಫೀಸಿಗೂ ರಜೆ ಹಾಕಿ ಮಲಗಿಬಿಟ್ಟಿದ್ದಳು. ಏನು ತಿಂದರೂ ವಾಂತಿ! ತಿಂಡಿಯನ್ನು ನೆನಪಿಸಿಕೊಂಡರೂ ವಾಂತಿಯಾಗುವ ಭಯ! ವೈದ್ಯರ ಬಳಿ ಹೋದರೆ ಎರಡು-ಮೂರು ದಿನದಿಂದೀಚೆ ಹೊರಗಡೆ ಏನಾದರೂ ತಿಂದಿದ್ದೀರಾ ಎಂಬ ಪ್ರಶ್ನೆ. ಯೋಚಿಸಿದ ಸುನಿತಾಗೆ ಮೊನ್ನೆ ಸಂಜೆ ತೀರಾ ಹಸಿವಾಗಿ, ಸಹೋದ್ಯೋಗಿಗಳೊಂದಿಗೆ ಗೋಬಿ ಮಂಚೂರಿ ತಿಂದಿದ್ದು ನೆನಪಾಯ್ತು. ಹೌದು ಡಾಕ್ಟರ್, ಗೋಬಿ ಮಂಚೂರಿ ತಿಂದಿದ್ದೆ ಎಂದಳು ಅಳುಕಿನಲ್ಲೇ. ಫುಡ್ ಪಾಯ್ಸನ್ ಎಂದು ಒಂದೇ ನಿಮಿಷದಲ್ಲಿ ನಿರ್ಧರಿಸಿದ ವೈದ್ಯರು ಒಂದಷ್ಟು ಮಾತ್ರೆ ಬರೆದುಕೊಟ್ಟರು. ಆದರೆ ಅದೊಂದು ಕ್ಷಣ ಹಸಿವು ತಾಳಲಾರದೆ ತಿಂದ ಒಂದೇ ಒಂದು ಪ್ಲೇಟ್ ಗೋಬಿಗೆ ತೆತ್ತ ಬೆಲೆ ಮೂರು ದಿನದ ವಿಶ್ರಾಂತಿ, ಅತಿಯಾದ ನಿಶ್ಶಕ್ತಿ, 3 ಕೆ.ಜಿ.ತೂಕ! ಜೊತೆಗೆ 300 ರೂ. ವೈದ್ಯರ ಫೀಸು!
ಇತ್ತೀಚೆಗೆ ವೈದ್ಯರ ಬಳಿ ಬರುವ ಬಹುತೇಕ ಜನರ ಸಮಸ್ಯೆ ಇದೇ. ಹೊರಗಡೆಯ ತಿಂಡಿಯನ್ನು ಆದಷ್ಟು ಕಡಿಮೆ ಮಾಡಿ. ಏಕೆಂದರೆ ಕಲುಷಿತ ನೀರು ಮತ್ತು ಶುಚಿತ್ವದ ಕೊರತೆಯಿಂದಾಗಿ ಅವು ರೋಗ ಹರಡುವುದು ಖಂಡಿತ ಎಂದು ವೈದ್ಯರು ಹೇಳಿದರೂ ಆ ಮಾತನ್ನು ಕೇಳುವವರಾದರೂ ಎಷ್ಟು ಮಂದಿ? ಫುಡ್ ಪಾಯ್ಸನ್ ಎಂಬುದು ದೃಢವಾಗುತ್ತಿದ್ದಂತೆಯೇ ಕೆಲವೊಂದು ಮುನ್ನೆಚ್ಚರಿಕೆಯನ್ನು ತೆಗೆದುಕೊಳ್ಳಲೇಬೇಕು. ಅಜೀರ್ಣದಿಂದ ಆರಂಭವಾಗುವ ಈ ಸಮಸ್ಯೆ ಮೇಲ್ನೋಟಕ್ಕೆ ತೀರಾ ಚಿಕ್ಕದಾಗಿ ಕಂಡರೂ ಪರಿಣಾಮ ಮಾತ್ರ ಅಪಾಯಕಾರಿ. ಇದ್ದಕ್ಕಿದ್ದಂತೆ ದೇಹದ ತೂಕವನ್ನು ಗಣನೀಯ ಪ್ರಮಾಣದಲ್ಲಿ ತಗ್ಗಿಸಿಬಿಡುವ ಸಾಮರ್ಥ್ಯ ಇದಕ್ಕಿದೆ. ಅಲ್ಲದೆ, ನಿಮಗೆ ಆಹಾರ ಯಾವುದೂ ಸೇರದಿರುವುದರಿಂದ ಈ ಸಮಸ್ಯೆ ಮತ್ತಷ್ಟು ಉಲ್ಬಣಿಸುತ್ತದೆ. ಇಂಥ ಸಮಯದಲ್ಲಿ ದೇಹಕ್ಕೆ ಹೆಚ್ಚಿನ ನೀರಿನ ಅಗತ್ಯವಿದೆ. ಘನ ಆಹಾರ ಸೇರದಿದ್ದರೆ ದ್ರವಾಹಾರವನ್ನೇ ಸೇವಿಸಿ. ಆ ಸಮಯದಲ್ಲಿ ಸಿಗುವ ಹಣ್ಣಿನ ರಸ, ಗಂಜಿ, ಹಾಲು ಇಂಥವನ್ನು ಸೇವಿಸಿ. ಇವು ನಿಶ್ಶಕ್ತಿಯನ್ನು ಹೋಗಲಾಡಿಸುತ್ತವೆ.
ನೀರನ್ನು ಆದಷ್ಟು ಹೆಚ್ಚು ಸೇವಿಸುವುದನ್ನು ಯಾವುದೇ ಕಾರಣಕ್ಕೂ ಮರೆಯಬೇಡಿ. ಏಕೆಂದರೆ ನಿರ್ಜಲೀಕರಣದ ಸಮಸ್ಯೆ ಕಾಡುವ ಸಂಭವವಿರುತ್ತದೆ. ಇದು ದೇಹವನ್ನು ಮತ್ತಷ್ಟು ಸಮಸ್ಯೆಗೆ ದೂಡುತ್ತದೆ.
ಮೂಲ: ವಿಕ್ರಮ
ಕೊನೆಯ ಮಾರ್ಪಾಟು : 2/15/2020