ನಿಶ್ಶಕ್ತಿ, ನಿರ್ಜಲೀಕರಣ ಮುಂತಾದ ಸಮಸ್ಯೆಗಳು ಆರಂಭವಾದೊಡನೆ ವೈದ್ಯರು ನೀಡುವ ಮೊದಲ ಸಲಹೆ ಎಂದರೆ ಹಣ್ಣಿನ ರಸ ಸೇವಿಸಿ… ಹಣ್ಣಿನ ರಸ ಸೇವಿಸಿ ಎಂದೊಡನೆ ನಾವು ಮಾರುಕಟ್ಟೆಗೆ ಹೋಗಿ ಜ್ಯೂಸ್ ಕೊಂಡು ಕುಡಿಯುತ್ತೇವೆ. ಅಷ್ಟೇ ಅಲ್ಲ, ಸುಲಭವಾಗಿ ಜ್ಯೂಸ್ ತಯಾರಿಸುವುದಕ್ಕಾಗಿ ಮಾರುಕಟ್ಟೆಯಲ್ಲಿರುವ ಉತ್ಪನ್ನಗಳನ್ನೂ ಕೊಂಡು ಬರುತ್ತೇವೆ. ಆದರೆ ಇವೆಲ್ಲ ಆರೋಗ್ಯಕ್ಕೆ ನಿಜಕ್ಕೂ ಒಳ್ಳೆಯದೇ? ಇಲ್ಲ ಎನ್ನುತ್ತಾರೆ ತಜ್ಞ ವೈದ್ಯರು. ಅಷ್ಟೇ ಅಲ್ಲ, ಕೋಕಾ ಕೋಲಾ, ಪೆಪ್ಸಿಯಂಥ ತಂಪು ಪಾನೀಯದಷ್ಟೇ ಜ್ಯೂಸ್ ಕೂಡ ಆರೋಗ್ಯಕ್ಕೆ ಹಾನಿಕರ. ಇದರಲ್ಲಿ ಸಕ್ಕರೆ ಪ್ರಮಾಣ ಹೆಚ್ಚಾಗಿರುವುದರಿಂದ ದೇಹದ ಶಕ್ತಿ ಕುಂಠಿತವಾಗುವುದಲ್ಲದೆ, ಇದರಿಂದ ಅಡ್ಡ ಪರಿಣಾಮಗಳು ಹೆಚ್ಚು. ವಿಪರೀತ ಸಕ್ಕರೆಯಿರುವ ಆರು ಕಿತ್ತಳೆ ಹಣ್ಣಿನ ಜ್ಯೂಸ್ ಕುಡಿಯುವುದಕ್ಕಿಂತ ಒಂದೋ, ಎರಡೋ ತಾಜಾ ಹಣ್ಣನ್ನು ತಿಂದರೂ ಸಾಕು. ಅದು ದೇಹಕಕ್ಕೆ ಸಾಕಷ್ಟು ಶಕ್ತಿ ನೀಡುತ್ತದೆ. ಅಥವಾ ಸಕ್ಕರೆ ಮುಂತಾದ ಯಾವುದೇ ರಾಸಾಯನಿಕ ಉಪಯೋಗಿಸದೆ ಮಾಡುವ ತಾಜಾ ಹಣ್ಣಿನ ರಸದಲ್ಲಿ ಕ್ಯಾಲರಿ ಜಾಸ್ತಿ ಇರುತ್ತದೆ. ಇದು ದೇಹಕ್ಕೆ ಅಗತ್ಯ ಪೋಷಕಾಂಶಗಳನ್ನೂ, ಶಕ್ತಿಯನ್ನೂ ನೀಡುತ್ತದೆ. ವೈದ್ಯರು ಹಣ್ಣಿನ ರಸ ಸೇವಿಸಿ ಎಂದೊಡನೆ ನಾವು ಅದಕ್ಕೆ ಸಕ್ಕರೆ ಮಿಶ್ರ ಮಾಡಿಯೇ ಬಳಸುವ ಅಗತ್ಯವಿಲ್ಲ. ಕೇವಲ ಹಣ್ಣನ್ನಷ್ಟೇ ಮಿಕ್ಸಿಯಲ್ಲಿ ರುಬ್ಬಿ ಅದಕ್ಕೆ ಸ್ವಲ್ಪ ನೀರು ಸೇರಿಸಿ ಸೇವಿಸಿದರೂ ಸಾಕು. ನಾಲಿಗೆಗೆ ಅದು ರುಚಿಸದಿರಬಹುದು. ಆದರೆ ಆರೋಗ್ಯಕ್ಕೆ ಅದೇ ಒಳ್ಳೆಯದು. ಅಷ್ಟೇ ಅಲ್ಲ, ಹಣ್ಣುಗಳನ್ನು ಕಚ್ಚಿ ತಿನ್ನುವುದು ಹಲ್ಲಿನ ಆರೋಗ್ಯಕ್ಕೂ ಒಳ್ಳೆಯದು. ಬಾಯಿಯ ಸ್ವಚ್ಛತೆಯನ್ನೂ ಅದು ಕಾಪಾಡುತ್ತದೆ. ನಾಲಿಗೆ ಶುದ್ಧವಾಗುತ್ತದೆ. ಆದರೆ ಸಿದ್ಧಪಡಿಸಿದ ಜ್ಯೂಸ್ ಸೇವಿಸುವುದರಿಂದ ಇಂಥ ಯಾವುದೇ ಪ್ರಯೋಜನವಾಗುವುದಿಲ್ಲ. ಸಕ್ಕರೆ ಕಾಯಿಲೆ ಇರುವವರಂತೂ ಸಕ್ಕರೆ ಉಪಯೋಗಿಸಿ ಮಾಡಿದ ಜ್ಯೂಸ್ಗಳನ್ನು ಸೇವಿಸಲೇಬಾರದು. ಮಾರುಕಟ್ಟೆಯಲ್ಲಿ ಲಭ್ಯವಿರುವ ಎಷ್ಟೋ ಜ್ಯೂಸ್ಗಳಿಗೆ ಆಯಾ ಹಣ್ಣನ್ನು ಬಳಸಿರುವುದೇ ಇಲ್ಲ. ಕೇವಲ ಹಣ್ಣಿನ ಪರಿಮಳ ಮತ್ತು ಸ್ವಾದ ಬರುವಂಥ ರಾಸಾಯನಿಕಗಳನ್ನು ಬಳಸಲಾಗುತ್ತದೆ. ಇದು ಆರೋಗ್ಯಕ್ಕೆ ಖಂಡಿತವಾಗಿಯೂ ಒಳ್ಳೆಯದಲ್ಲ. ಆದ್ದರಿಂದ ತಜ್ಞ ವೈದ್ಯರ ಸಲಹೆಯಂತೆ ತಾಜಾ ಹಣ್ಣುಗಳನ್ನು ಮಾತ್ರ ಸೇವಿಸಿ. ಹಣ್ಣಿನ ರಸ ಸೇವಿಸುವುದಾದರೂ ಸಕ್ಕರೆ ಮುಂತಾದ ರಾಸಾಯನಿಕವನ್ನು ಖಂಡಿತವಾಗಿಯೂ ಬಳಸದಿರಿ.
ಕೊನೆಯ ಮಾರ್ಪಾಟು : 5/29/2020