ಈ ತಲೆಮಾರಿನ ಪ್ರಮುಖ ಆರೋಗ್ಯ ಸಮಸ್ಯೆಗಳಲ್ಲಿ ಬೊಜ್ಜು ಅಗ್ರಪಂಕ್ತಿಯಲ್ಲಿ ನಿಲ್ಲುತ್ತದೆ. ಬೆಳಗ್ಗಿನ ವಾಕಿಂಗ್, ಸಂಜೆಯ ಪ್ರಾಣಾಯಾಮ, ಊಟ ಮಾಡುವಾಗ ಮರೆಯದೇ ನೆನಪಾಗುವ ಡಯೆಟ್, ಹೊರಗಿನ ತಿಂಡಿ ತಿನ್ನುವಾಗ ಕಾಡುವ ಭಯ… ಒಟ್ಟಿನಲ್ಲಿ ಸ್ವತಂತ್ರವಾಗಿ ಹಾರಾಡಿಕೊಂಡು. ಓಡಾಡಿಕೊಂಡು, ತೆಳ್ಳನೆಯ ದೇಹದವರಂತೆ ಕುಣಿದಾಡಿಕೊಂಡಿರುವ ಸ್ವಾತಂತ್ರ್ಯವಿಲ್ಲದೆ ಬೊಜ್ಜು ದೇಹದವರೆಲ್ಲ ಸಾಕಷ್ಟು ದುಃಖಪಡುತ್ತಲೇ ಇರುತ್ತಾರೆ. ಬೊಜ್ಜಿಗೆ ಪ್ರಮುಖ ಕಾರಣ ಕೊಲೆಸ್ಟ್ರಾಲ್, ದೇಹದಲ್ಲಿ ಅಗತ್ಯಕ್ಕಿಂತ ಹೆಚ್ಚು ಕೊಬ್ಬಿನಂಶ ಶೇಖರಣೆಗೊಂಡರೆ ಅದು ಬೊಜ್ಜು ಎನ್ನಿಸಿಕೊಳ್ಳುತ್ತದೆ. ದೇಹದ ತೂಕವನ್ನು ಅಸಹನೀಯ ಎಂಬಷ್ಟು ಹೆಚ್ಚಿಸುವ ಇದು ಮುಂದೊಮ್ಮೆ ಹೃದಯ ಸಮಸ್ಯೆಗೂ ಕಾರಣವಾಗಿ ಸಾವಿನ ಭಯವನ್ನೂ ಮೂಡಿಸುತ್ತದೆ. ಕೆಲವರಲ್ಲಿ ಕೊಲೆಸ್ಟ್ರಾಲ್ ಸಮಸ್ಯೆ ಆನುವಂಶಿಕವಾಗಿ ಬಂದರೆ ಮತ್ತಷ್ಟು ಜನರಿಗೆ ಆಹಾರದ ಸಮಸ್ಯೆಯಿಂದ ಬರುತ್ತದೆ. ಆನುವಂಶಿಕವಾಗಿ ಬರುವ ಬೊಜ್ಜನ್ನು ಪಥ್ಯ, ವ್ಯಾಯಾಮಗಳಿಂದ ನಿಯಂತ್ರಣದಲ್ಲಿಡಬಹುದು. ಅದು ಹೆಚ್ಚದಂತೆ ಎಚ್ಚರಿಕೆ ವಹಿಸಬಹುದು. ಆದರೆ ಆಹಾರ ಕ್ರಮದಿಂದಾಗಿ ಉಂಟಾದ ಬೊಜ್ಜಿನ ಸಮಸ್ಯೆಯನ್ನು ಪರಿಹರಿಸುವುದಕ್ಕೆ ನಮಗೆ ಸಾಧ್ಯವಿದೆ.
ಹೀಗೆ ಕೊಬ್ಬು ಹೆಚ್ಚಿದಷ್ಟು ದೇಹಕ್ಕೆ ಎಷ್ಟು ಸಮಸ್ಯೆಯೋ ಅದು ಕಡಿಮೆಯಾದರೂ ಸಮಸ್ಯೆ ತಪ್ಪಿದ್ದಲ್ಲ. ಕೊಬ್ಬಿನಾಂಶ ಹೆಚ್ಚಿಸುವ ಕೆಲವೊಂದು ಪದಾರ್ಥಗಳನ್ನು ಸೇವಿಸಲೇಬೇಕಾದ ಅಗತ್ಯವಿದೆ. ಅವು ದೇಹದ ಆರೋಗ್ಯದಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಎನ್ನುತ್ತಾರೆ ತಜ್ಞ ವೈದ್ಯರು. ಕ್ಯಾಲರಿ ಹೆಚ್ಚಿರುವ ಪದಾರ್ಥಗಳ ಸೇವನೆ ದೇಹಕ್ಕೆ ಶಕ್ತಿ ನೀಡುತ್ತದೆ.
* ಅರ್ಧ ಚಮಚದಷ್ಟಾದರೂ ಶುದ್ಧ ತುಪ್ಪವನ್ನು ಪ್ರತಿದಿನ ಸೇವಿಸುವುದು ಉತ್ತಮ. ಅದರಿಂದ ತೂಕ ಹೆಚ್ಚುತ್ತದೆ ಎಂಬ ಮಾತಿನಲ್ಲಿ ಅರ್ಥವಿಲ್ಲ. ದೇಹಕ್ಕೆ ಅಗತ್ಯವಿರುವಷ್ಟು ಸೇವನೆಯಿಂದ ಯಾವುದೇ ಸಮಸ್ಯೆಯುಂಟಾಗುವುದಿಲ್ಲ.
* ಮೊಸರಿನಲ್ಲೂ ಕೊಬ್ಬಿನಂಶವಿರುತ್ತದೆ. ಆದರೆ ಪ್ರತಿ ದಿನವೂ ಸ್ವಲ್ಪ ಮೊಸರು ಸೇವಿಸುವುದರಿಂದ ದೇಹದ ಶಕ್ತಿ ವೃದ್ಧಿಸುತ್ತದೆ.
* ಬಾದಾಮಿ ಬೀಜ ಸೇವನೆಯಿಂದ ದೇಹದ ತೂಕ ಹೆಚ್ಚುತ್ತದೆ ಎಂಬ ಮಾತು ಸತ್ಯವಾದರೂ ಅದು ದೇಹಕ್ಕೆ ಬಲವನ್ನು ನೀಡುತ್ತದೆ ಎಂಬ ಮಾತೂ ಸತ್ಯ.
* ಆಲಿವ್ ಎಣ್ಣೆಯನ್ನು ಆಹಾರ ಪದಾರ್ಥಗಳಲ್ಲಿ ಉಪಯೋಗಿಸುವುದೂ ಒಳ್ಳೆಯದು.
* ಅಗಸೆ ಬೀಜ ಸಹ ಬೊಜ್ಜುಂಟು ಮಾಡುತ್ತದೆ ಎಂಬ ಮಾತಿದೆ. ಆದರೆ ಅದರಲ್ಲಿ ಹೆಚ್ಚು ಕ್ಯಾಲರಿ ಇರುವುದರಿಂದ ದೇಹದ ಆರೋಗ್ಯಕ್ಕೆ ಅದರ ಅಗತ್ಯವಿದೆ.
ಯಾವುದೇ ಆಹಾರ ಪದಾರ್ಥವನ್ನೇ ಆದರೂ ಅಗತ್ಯಕ್ಕಿಂತ ಹೆಚ್ಚು ಸೇವಿಸುವುದು ಒಳ್ಳೆಯದಲ್ಲ. ಹಾಗೆಯೇ ಈ ಎಲ್ಲ ಪದಾರ್ಥಗಳ ಹಿತ ಮಿತವಾದ ಸೇವನೆಯಿಂದ ದೇಹದ ಆರೋಗ್ಯ ವೃದ್ಧಿಸುತ್ತದೆಯೇ ಹೊರತು ಇದರಿಂದ ದೇಹದ ತೂಕ ಹೆಚ್ಚುತ್ತದೆ ಎಂಬ ಮಾತಿನಲ್ಲಿ ಅರ್ಥವಿಲ್ಲ. ದೇಹಕ್ಕೆ ಅಗತ್ಯ ಪೌಷ್ಟಿಕ ಆಹಾರ ಮತ್ತು ತಿಂದ ಆಹಾರವನ್ನು ಜೀರ್ಣಗೊಳಿಸುವಷ್ಟು ವ್ಯಾಯಾಮದಿಂದಾಗಿ ಸ್ವಾಸ್ಥ್ಯ ಕಾಯ್ದುಕೊಳ್ಳಬಹುದು.
- ಶಶಿ
ಕೊನೆಯ ಮಾರ್ಪಾಟು : 2/15/2020