ಕೂದಲು ಸೀಳುವ ಸಮಸ್ಯೆಯನ್ನು ಅನೇಕರಲ್ಲಿ ನೋಡಬಹುದು. ಕೂದಲು ಸ್ವಲ್ಪ ಉದ್ದವಾಗುತ್ತಿದ್ದಂತೆಯೇ ಅದರ ತುದಿ ಸೀಳು ಬಿಟ್ಟು ಕವಲಾಗುತ್ತದೆ. ಹೀಗೆ ಕವಲೊಡೆದ ನಂತರ ಕೂದಲು ಹೆಚ್ಚು ಉದ್ದವಾಗುವುದಿಲ್ಲ. ತುದಿಯಲ್ಲಿ ಕೂದಲು ಬಿಳಿಯಾಗಿ ನೋಡುವುದಕ್ಕೂ ಅಸಹ್ಯವಾಗಿ ಕಾಣುತ್ತದೆ. ಇದಕ್ಕೆ ಮುಖ್ಯಕಾರಣ ಕೂದಲಿನ ಪೋಷಣೆಯನ್ನು ನಿರ್ಲಕ್ಷ್ಯಿಸುತ್ತಿರುವುದು. ಹಾಗೆಯೇ ದೇಹಕ್ಕೆ ಪೌಷ್ಟಿಕಾಂಶಯುಕ್ತ ಆಹಾರ ಸಿಗದಿರುವುದೂ ಇದಕ್ಕೆ ಕಾರಣವಾಗಿದೆ. ಕೂದಲಿಗೆ ಬಗೆ ಬಗೆಯ ತೈಲ ಲೇಪಿಸಿ, ಉತ್ತಮ ಶಾಂಪೂ ಉಪಯೋಗಿಸಿದರೂ ಒಮ್ಮೊಮ್ಮೆ ಕೂದಲುದುರುವ ಸಮಸ್ಯೆಯನ್ನು ನಿಯಂತ್ರಿಸುವುದಕ್ಕಾಗುವುದಿಲ್ಲ. ಏಕೆಂದರೆ ಮನುಷ್ಯನ ಮಾನಸಿಕ ಮತ್ತು ದೈಹಿಕ ಸ್ಥಿತಿಗತಿಯೂ ಕೂದಲಿನ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.
ಕೂದಲಿಗೆ ಸರಿಯಾದ ಪೋಷಣೆ ಸಿಗದಿದ್ದರೆ ಅದು ಸದೃಢವಾಗಿ ಬೆಳೆಯದೆ ಕೊನೆಯಲ್ಲಿ ಕವಲೊಡೆಯುತ್ತದೆ. ಹೆಚ್ಚು ಹೆಚ್ಚು ಹಸಿರು ತರಕಾರಿಗಳ ಸೇವನೆ ಮತ್ತು ಆಯಾ ಕಾಲಕ್ಕೆ ಸಿಗುವ ಹಣ್ಣುಗಳ ಸೇವನೆಯಿಂದ ಕೂದಲಿಗೆ ಅಗತ್ಯ ಪೋಷಕಾಂಶಗಳು ದೊರೆಯುತ್ತವೆ. ಹೊರಗಿನಿಂದ ಕೂದಲಿಗೆ ಎಷ್ಟೇ ಆರೈಕೆ ಮಾಡಿದರೂ ಹೆಚ್ಚು ಪ್ರಯೋಜನವಿಲ್ಲ. ಬದಲಾಗಿ ಜೀವನ ಶೈಲಿಯಲ್ಲಿ ಮತ್ತು ಆಹಾರ ಸೇವನಾ ಕ್ರಮದಲ್ಲಿ ಬದಲಾವಣೆಯಾದರೆ ಕೂದಲಿನ ಆರೋಗ್ಯ ಸುಧಾರಿಸುವುದಕ್ಕೆ ಸಾಧ್ಯವಿದೆ.
ವಾರಕ್ಕೊಮ್ಮೆ ಕೂದಲಿಗೆ ಎಣ್ಣೆ ಹಾಕುವಾಗ ಮರೆಯದೇ ಕೂದಲಿನ ತುದಿಗೆ ಕೊಬ್ಬರಿ ಎಣ್ಣೆಯನ್ನು ಲೇಪಿಸಿ. ಇದರಿಂದ ಕೂದಲು ಕವಲೊಡೆಯುವುದು ತಪ್ಪುತ್ತದೆ. ಆದರೆ ಈಗಾಗಲೇ ಕವಲೊಡೆದ ಕೂದಲಾಗಿದ್ದರೆ ಅದನ್ನು ಕತ್ತರಿಸದೆ ಬೇರೆ ಪರಿಹಾರವಿಲ್ಲ.
ಕತ್ತರಿಸದಿದ್ದರೆ ಅದು ಕೂದಲನ್ನು ಉದ್ದವಾಗುವುದಕ್ಕೆ ಬಿಡುವುದಿಲ್ಲ. ಮನಸ್ಸನ್ನು ಶಾಂತವಾಗಿಟ್ಟುಕೊಳ್ಳುವುದು, ಪ್ರಾಣಾಯಾಮ, ಧ್ಯಾನ ಇತ್ಯಾದಿ ಕ್ರಿಯೆಯಲ್ಲಿ ಸಮಯ ಕಳೆಯುವುದು, ಬೇಕರಿ ತಿನಿಸುಗಳನ್ನು ತಿನ್ನದಿರುವುದು, ವಾರಕ್ಕೊಮ್ಮೆ ಅಥವಾ 15 ದಿನಕ್ಕೊಮ್ಮೆ ಕೂದಲಿಗೆ ಹರಳೆಣ್ಣೆ ಲೇಪಿಸಿಕೊಳ್ಳುವುದು, ಕೂದಲಿನ ಸ್ವಚ್ಛತೆಗೆ ಹೆಚ್ಚು ಒತ್ತುಕೊಡುವುದು, ಮೊಳಕೆ ಬರಿಸಿದ ಕಾಳುಗಳನ್ನು ತಿನ್ನುವುದು… ಇವೆಲ್ಲ ಕೂದಲು ಕವಲೊಡೆಯುವುದನ್ನು ತಪ್ಪಿಸುತ್ತವೆ. ನೀಲ ಜಡೆಯ ಆಸೆಯನ್ನು ಕವಲೊಡೆಯುವ ಕೂದಲು ನಿರಾಸೆಗೊಳಿಸುತ್ತಿದ್ದರೆ ಈಗಲೇ ಈ ಎಲ್ಲ ಕ್ರಮಗಳನ್ನು ಅನುಸರಿಸಲು ಆರಂಭಿಸಿ.
ಮೂಲ: ವಿಕ್ರಮ
ಕೊನೆಯ ಮಾರ್ಪಾಟು : 3/28/2020