ಹೃದಯಾಘಾತ ಎಂದೊಡನೆ ನೆನಪಾಗುವ ಮೊದಲ ಕಾರಣ ಒತ್ತಡ. ಹೌದು, ಬಹುಮುಖ್ಯ ಕಾರಣ ಒತ್ತಡವೇ. ಆದರೆ ಹೃದಯಾಘಾತಕ್ಕೆ ಇನ್ನೊಂದು ಮುಖ್ಯ ಕಾರಣವಿದೆ. ಅದು ಸೋಮಾರಿತನ! ಯಾವ ತಲೆಬಿಸಿಯಿಲ್ಲದೆ, ಕೆಲಸವನ್ನೂ ಮಾಡದೆ, ಹೆಚ್ಚು ಹೊತ್ತು ಸೋಮಾರಿಯಾಗಿ ಕೂತೇ ಇರುವವರಲ್ಲಿ ಹೃದಯಾಘಾತದ ಸಾಧ್ಯತೆ ಹೆಚ್ಚು ಎಂಬುದನ್ನು ಇತ್ತೀಚಿನ ಸಂಶೋಧನೆಯೊಂದು ಸಾಬೀತುಪಡಿಸಿದೆ. ಸೇವಿಸಿದ ಆಹಾರ ಜೀರ್ಣವಾಗುವಷ್ಟೂ ಕೆಲಸ ಮಾಡದೆ ಸೋಮಾರಿ ಯಾಗಿಯೇ ಇದ್ದರೆ ದೇಹದ ಆರೋಗ್ಯ ಕೈಕೊಡುವುದು ಖಂಡಿತ. ಬೊಜ್ಜು ಬೆಳೆಯುವುದರಿಂದ ಅದು ಹೃದಯದ ಆರೋಗ್ಯಕ್ಕೆ ಬಹಳ ಹಾನಿಮಾಡುತ್ತದೆ. ಕೆಲಸದ ಒತ್ತಡ ಎಷ್ಟೇ ಇದ್ದರೂ ದೇಹಕ್ಕೆ ಒಂದಷ್ಟು ವ್ಯಾಯಾಮ ಅತ್ಯಗತ್ಯ. ವ್ಯಾಯಾಮ ಮಾಡುವುದಕ್ಕೆ ಸಮಯವಿಲ್ಲದಿದ್ದರೆ ಕನಿಷ್ಠಪಕ್ಷ ಆಗಾಗ ಎದ್ದು ನಡೆದಾಡುತ್ತಿರಿ. ಕುಳಿತಲ್ಲೇ ಬಹಳ ಹೊತ್ತು ಕುಳಿತಿರುವುದು ಹೃದಯದ ಆರೋಗ್ಯಕ್ಕೆ ಅಪಾಯ ತಂದೊಡ್ಡುತ್ತದೆ ಎಂದು ತಜ್ಞ ವೈದ್ಯರು ಸಲಹೆ ನೀಡುತ್ತಾರೆ.
ಹೃದಯಾಘಾತದಿಂದ ಅಸುನೀಗಿದ ಹಲವು ವ್ಯಕ್ತಿಗಳನ್ನು ಪರೀಕ್ಷಿಸಿದಾಗ ಅವರಲ್ಲಿ ಹೆಚ್ಚಿನ ಜನ ವ್ಯಾಯಾಮ ಮಾಡದಿರುವುದೇ ಕಾರಣ ಎಂಬುದು ಸಾಬೀತಾಯಿತು. ಇತ್ತೀಚೆಗಂತೂ ಎಲ್ಲರೂ ಕಚೇರಿಯಲ್ಲಿ ಕುಳಿತು ಕೆಲಸ ಮಾಡುವವರೇ ಹೆಚ್ಚು. ಕೆಲಸದ ಒತ್ತಡ, ಆದಷ್ಟು ಬೇಗ ಮುಗಿದರೆ ಸಾಕು ಎಂಬ ತಲೆಬಿಸಿಯಲ್ಲಿ ಕುಳಿತಲ್ಲೇ ಕುಳಿತು ಗಂಟೆಗಟ್ಟಲೆ ಕೆಲಸ ಮಾಡುವುದರಿಂದ ದೇಹಕ್ಕೆ ಯಾವುದೇ ವ್ಯಾಯಾಮ ಸಿಗುವುದಿಲ್ಲ. ಕೇವಲ ಮೆದುಳು ಮಾತ್ರವೇ ಶ್ರಮಿಸುತ್ತದೆ, ದೇಹ ಮಾತ್ರ ಸೋಮಾರಿಯಾಗಿಯೇ ಇರುತ್ತದೆ. ಹೀಗೆ ಮೆದುಳು ಮತ್ತು ದೇಹದ ಕೆಲಸಗಳಲ್ಲಿ ಸಮತೋಲನ ಇಲ್ಲದಿದ್ದಾಗ ಸಹಜವಾಗಿಯೇ ಒತ್ತಡ ಹೆಚ್ಚುತ್ತದೆ. ಕಚೇರಿಯಲ್ಲಿ ಬಿಡುವಿದ್ದಾಗ ನಡೆದಾಡುತ್ತಿರಿ. ಅದರಿಂದ ದೇಹದ ಅವಯವಗಳು ಚುರುಕಾಗುತ್ತವೆ. ಊಟ ಅಥವಾ ಏನಾದರೂ ಆಹಾರ ಸೇವಿಸಿದೊಡನೆ ಮಲಗಬೇಡಿ. ಸ್ವಲ್ಪ ಹೊತ್ತು ಓಡಾಡುತ್ತಿರಿ. ಬಹಳ ಹೊತ್ತು ಕೂತಿರುವುದರಿಂದ ಬೆನ್ನು ನೋವು, ಕತ್ತು ನೋವೂ ಆರಂಭವಾಗಬಹುದು. ಕಂಪ್ಯೂಟರ್ ಮುಂದೆ ಕುಳಿತಿರುವುದರಿಂದ ಕಣ್ಣಿಗೂ ಸಮಸ್ಯೆ. ಒಟ್ಟಿನಲ್ಲಿ ದೇಹದ ಆರೋಗ್ಯ ಸಮತೋಲನದಲ್ಲಿರಬೇಕಾದರೆ, ಸ್ವಾಸ್ಥ್ಯಪೂರ್ಣವಾಗಿರಬೇಕಾದರೆ ದೇಹಕ್ಕೆ ಶ್ರಮ ಅಗತ್ಯ.
ಮೂಲ: ವಿಕ್ರಮ
ಕೊನೆಯ ಮಾರ್ಪಾಟು : 1/28/2020