ಮನುಷ್ಯನ ಸಮಸ್ತ ಆರೋಗ್ಯವೂ ನಿಂತಿರುವುದು ಆತನ ಉಸಿರಾಟದ ಗತಿಯ ಮೇಲೆಯೇ. ಉಸಿರಾಟ ದೀರ್ಘವಾದಷ್ಟೂ ಆಯುಷ್ಯವೂ ದೀರ್ಘವಾಗಿರುತ್ತದೆಯಂತೆ. ಉಚ್ವಾಸ ಮತ್ತು ನಿಶ್ವಾಸ ಪ್ರಕ್ರಿಯೆ ನಿಧಾನವಾಗಿ ನಡೆದಷ್ಟೂ ದೇಹದ ಆರೋಗ್ಯವೂ ಚೆನ್ನಾಗಿರುತ್ತದೆ. ಅದಕ್ಕೆಂದೇ ಪ್ರಾಣಾಯಾಮದಲ್ಲಿ ಸಾಧನೆ ಮಾಡಿದ ಯೋಗಿಗಳು ದೀರ್ಘಾಯುಷ್ಯಿಗಳಾಗಿಯೂ, ಆರೋಗ್ಯವಂತರಾಗಿಯೂ ಇರುತ್ತಾರೆ. ಉಸಿರಿನ ಕ್ರಮಬದ್ಧತೆ ಯಿಂದಲೇ ಹಲವು ಕಾಯಿಲೆಗಳನ್ನು ವಾಸಿ ಮಾಡಬಹುದು ಎಂಬುದು ತಜ್ಞರ ಅಭಿಪ್ರಾಯವೂ ಹೌದು. ಕೆಲವರಿಗೆ ತಲೆನೋವು ಸಹ ಉಸಿರಾಟದ ಸಮಸ್ಯೆಯಿಂದ ಬರಬಹುದು. ನಮ್ಮ ಮೂಗಿನಲ್ಲಿ ಎರಳು ಹೊಳ್ಳೆಗಳಿರುತ್ತವೆ. ಅವುಗಳಲ್ಲಿ ನಾವು ಎಲ್ಲ ಸಮಯದಲ್ಲೂ ಎರಡೂ ಹೊಳ್ಳೆಗಳನ್ನೂ ಬಳಸುವುದಿಲ್ಲ. ಬೆಳಗಿನ ಸಮಯದಲ್ಲಿ ಬಲ ಹೊಳ್ಳೆಯಿಂದ ಉಸಿರಾಡಿದರೆ ರಾತ್ರಿಯ ಸಮಯದಲ್ಲಿ ಎಡ ಹೊಳ್ಳೆಯಿಂದ ಉಸಿರಾಡುತ್ತೇವೆ. ತಲೆನೋವು ಬಂದಾಗ ಬಲ ಹೊಳ್ಳೆಯನ್ನು ಮುಚ್ಚು, ಎಡಹೊಳ್ಳೆಯಿಂದ 5 ನಿಮಿಷ ಉಸಿರಾಡಿದರೆ ತಲೆನೋವು ಹತೋಟಿಗೆ ಬರುತ್ತದೆ. ನಿಮಗೆ ತೀರಾ ಸುಸ್ತಾಗಿದೆ ಅನ್ನಿಸಿದರೆ ಎಡ ಹೊಳ್ಳೆಯನ್ನು ಮುಚ್ಚಿ ಮತ್ತು ಬಲಹೊಳ್ಳೆಯಿಂದ ಉಸಿರಾಡಿ. ಸ್ವಲ್ಪಸಮಯದ ನಂತರ ನಿಮಗೆ ಸುಸ್ತು ಕಡಿಮೆಯಾಗಿ ಹೊಸ ಉತ್ಸಾಹ ಬರುತ್ತದೆ. ಬಲ ಹೊಳ್ಳೆಯಲ್ಲಿ ಉಸಿರಾಡುವುದರಿಂದ ದೇಹ ಬೇಗನೆ ಬಿಸಿಯಾಗುತ್ತದೆ. ಎಡ ಹೊಳ್ಳೆ ತಂಪು ಮಾಡುತ್ತದೆ. ಮಹಿಳೆಯರು ಹೆಚ್ಚಾಗಿ ಎಡ ಹೊಳ್ಳೆಯಿಂದಲೇ ಉಸಿರಾಡುತ್ತಾರೆ. ಆದ್ದರಿಂದಲೇ ಮಹಿಳೆಯರ ದೇಹದ ಉಷ್ಣತೆ ಕಡಿಮೆ ಇರುತ್ತದೆ. ಹಾಗೆಯೇ ಪುರುಷರು ಬಲ ಹೊಳ್ಳೆಯಿಂದ ಉಸಿರಾಡುವುದರಿಂದ ಪುರುಷರ ದೇಹದ ಉಷ್ಣತೆ ಹೆಚ್ಚಿರುತ್ತದೆ. ಪ್ರತಿದಿನ ಎದ್ದಕೂಡಲೆ ಎಡ ಹೊಳ್ಳೆಯಿಂದ ಉಸಿರಾಡಬೇಡಿ. ಏಕೆಂದರೆ ಬಳಲಿಕೆಯನ್ನು ಅದು ಹೆಚ್ಚಿಸುತ್ತದೆ. ಬಲಹೊಳ್ಳೆಯಿಂದ ಉಸಿರಾಡುವುದರಿಂದ ನೀವು ಹೆಚ್ಚು ಉಲ್ಲಾಸದಿಂದ, ಚಟುವಟಿಕೆಯಿಂದ ಇರಬಹುದು. ಇದು ಒಂದರ್ಥದಲ್ಲಿ ನೈಸರ್ಗಿಕ ಚಿಕಿತ್ಸೆಯೇ ಆಗಿದೆ. ಇಂದು ಹಲವರು ಪ್ರತಿದಿನ ಬೆಳಗ್ಗೆ ಎದ್ದೊಡನೆ ಮತ್ತು ಸಂಜೆಯ ಸಮಯದಲ್ಲಿ ಪ್ರಾಣಾಯಾಮ ಮಾಡುವುದನ್ನು ನೋಡುತ್ತೇವೆ. ಇದರಿಂದ ದೇಹದ ಆರೋಗ್ಯ ವೃದ್ಧಿಸುವುದಲ್ಲದೆ ಹೆಚ್ಚು ಚಟುವಟಿಕೆಯಿಂದಿರಲು ಸಹಕಾರಿಯಾಗುತ್ತದೆ. ಕೇವಲ ತಲೆನೋವು, ಸುಸ್ತು ಮಾತ್ರವಲ್ಲದೆ, ಬೆನ್ನುನೋವು, ಅಸ್ತಮಾ ಮುಂತಾಗಿ ಹಲವು ಸಮಸ್ಯೆಗಳಿಗೆ ಉಸಿರಾಟದ ಕ್ರಮಬದ್ಧತೆಯಿಂದಾಗಿ ಪರಿಹಾರ ಸಿಕ್ಕುತ್ತದೆ. ನಿಯಮಿತವಾಗಿ ಪ್ರಾಣಾಯಾಮ ಮಾಡುವುದರಿಂದ ಹಲವು ಕಾಯಿಲೆಗಳು ಪರಿಹಾರವಾಗುತ್ತವೆ.
ಮೂಲ: ವಿಕ್ರಮ
ಕೊನೆಯ ಮಾರ್ಪಾಟು : 3/3/2020