ಹೊಸ ತಲೆಮಾರಿನ ಜನರು ಅನುಭವಿಸುತ್ತಿರುವ ಪ್ರಮುಖ ಕಾಯಿಲೆಗಳಲ್ಲಿ ಪಾರ್ಶ್ವವಾಯು ಮೂರನೇ ಸ್ಥಾನದಲ್ಲಿದೆ. ಹೃದಯ ಸಮಸ್ಯೆ ಮತ್ತು ಕ್ಯಾನ್ಸರ್ ನ ನಂತರದ ಸ್ಥಾನದಲ್ಲಿರುವ ಪಾರ್ಶ್ವವಾಯು ಕಾಯಿಲೆ ಮಾರಣಾಂತಿಕವೇನಲ್ಲ. ಆದರೆ ಮನುಷ್ಯನನ್ನು ಬದುಕಿರುವಾಗಲೇ ನಿಷ್ಕ್ರಿಯನನ್ನಾಗಿ ಮಾಡುವ ತಾಕತ್ತು ಇದಕ್ಕಿದೆ. ಆದರೆ ತಜ್ಞರನ್ನು ಕೇಳಿದರೆ ಪಾರ್ಶ್ವವಾಯು ಸಂಭವಿಸಿದ ನಾಲ್ಕರಿಂದ ಐದು ಗಂಟೆಯೊಳಗೆ ಚಿಕಿತ್ಸೆ ನೀಡಿದರೆ ಪಾರ್ಶ್ವವಾಯುವನ್ನು ಸಂಪೂರ್ಣವಾಗಿ ಗುಣಪಡಿಸಬಹುದು ಎನ್ನುತ್ತಾರೆ. ತಕ್ಷಣದ ಚಿಕಿತ್ಸೆಯೇ ಪಾರ್ಶ್ವವಾಯುವಿಗೆ ಮೊದಲ ಪರಿಹಾರ. ಗ್ರಾಮೀಣ ಪ್ರದೇಶಗಳಲ್ಲಿ ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ. ಅಧಿಕ ರಕ್ತದೊತ್ತಡದಿಂದ ಉಂಟಾಗುವ ಈ ಕಾಯಿಲೆ ದೇಹದ ನಿರ್ದಿಷ್ಟ ನರಸಮೂಹಗಳನ್ನು ನಿಷ್ಕ್ರಿಯಗೊಳಿಸುತ್ತದೆ. ಇದರಿಂದ ದೇಹದ ಆ ಭಾಗ ನಿಷ್ಕ್ರಿಯಗೊಳ್ಳುತ್ತದೆ. ತಕ್ಷಣವೇ ಸೂಕ್ತ ಚಿಕಿತ್ಸೆ ಸಿಕ್ಕರೆ ನರಗಳನ್ನು ಮತ್ತೆ ಕ್ರಿಯಾಶೀಲವಾಗುವಂತೆ ಮಾಡಬಹುದು. ರಕ್ತಸಂಚಾರ ಸರಾಗವಾಗುವಂತೆ ಮಾಡಬಹುದು. ಇಲ್ಲವಾದಲ್ಲಿ ಇದು ದೀರ್ಘಕಾಲೀನ ಸಮಸ್ಯೆಯಾಗುತ್ತದೆ. ಸಂಪೂರ್ಣ ಗುಣವಾಗುವುದೂ ಅನುಮಾನ. ವ್ಯಕ್ತಿ ಪರಾವಲಂಬಿಯಾಗಬೇಕಾಗುತ್ತದೆ. ಪಾರ್ಶ್ವವಾಯು ಮೆದುಳಿನ ಒಂದು ಭಾಗಕ್ಕೂ ಬಾಧಿಸಬಹುದು. ಯಾವುದೇ ವ್ಯಕ್ತಿ ಪಾರ್ಶ್ವವಾಯು ಪೀಡಿತನಾದರೆ ವೈದ್ಯರು ಹೇಳುವ ಮೊದಲ ಮಾತು ಸಿಟಿ ಸ್ಕ್ಯಾನ್ ಮಾಡಿಸಿ ಎಂದು. ಅದರರ್ಥ ಕೇವಲ ದೇಹಕ್ಕೆ ಮಾತ್ರವಲ್ಲದೆ ಮೆದುಳಿಗೂ ಪಾರ್ಶ್ವವಾಯು ಪ್ರಭಾವವಾಗಿರಬಹುದು ಎಂಬ ಸಂಶಯ ವೈದ್ಯರಲ್ಲಿರುತ್ತದೆ. ಒಂದೋ ಮೆದುಳಿನಲ್ಲಿರುವ ಯಾವುದಾದರೊಂದು ನರದಲ್ಲಿ ರಕ್ತ ಹೆಪ್ಪುಗಟ್ಟಿ ಆ ನರ ನಿಷ್ಕ್ರಿಯವಾಗುವುದಲ್ಲದೆ, ಅದು ಸಂಚರಿಸಿದ ದೇಹದ ಭಾಗವನ್ನೆಲ್ಲ ತಟಸ್ಥಗೊಳಿಸುತ್ತದೆ. ಇಲ್ಲವೇ, ಅತಿರಕ್ತದೊತ್ತಡವನ್ನು ತಡೆಯಲಾರದೆ ಯಾವುದಾದರೊಂದು ನರ ಒಡೆದು ಮೆದುಳಿನಲ್ಲಿ ರಕ್ತಸ್ರಾವವಾಗತೊಡಗುತ್ತದೆ. ಇದು ವ್ಯಕ್ತಿಯನ್ನು ಕೋಮಾವಸ್ಥೆಗೆ ತೆರಳುವಂತೆ ಮಾಡುತ್ತದೆ. ಪ್ರತಿದಿನದ ಕ್ರಮಬದ್ಧ ಆಹಾರ ಶೈಲಿ, ಯೋಗ, ವ್ಯಾಯಾಮ, ಕುಡಿತದಿಂದ ದೂರವಿರುವುದು, ಮಾನಸಿಕ ಒತ್ತಡವನ್ನು ನಿವಾರಿಸಿಕೊಳ್ಳುವುದು, ಸದಾ ಚಟುವಟಿಕೆಯಿಂದಿರುವುದು ಇವೆಲ್ಲ ಪಾರ್ಶ್ವವಾಯು ಬಾರದಂತೆ ತಡೆಯುವುದಕ್ಕೆ ಸಹಕಾರಿಯಾಗಿದೆ. ನಿಯಮಿತವಾಗಿ ರಕ್ತದೊತ್ತಡ ಪರೀಕ್ಷೆ ಮಾಡಿಸುವುದು, ವೈದ್ಯರು ನೀಡಿದ ಔಷಧವನ್ನು ತೆಗೆದುಕೊಳ್ಳುವುದು, ಪಥ್ಯ ಪಾಲಿಸುವುದು ಸಹ ಮುಖ್ಯವಾದುದು. ನಿರಂತರ ವ್ಯಾಯಾಮ, ಪೌಷ್ಟಿಕ ಆಹಾರ ಸೇವನೆ, ಧನಾತ್ಮಕ ಮನಃಸ್ಥಿತಿ ಇವು ಪಾರ್ಶ್ವವಾಯು ಬಾಧಿಸಿದ ನಂತರ ವ್ಯಕ್ತಿ ಪಾಲಿಸಲೇಬೇಕಾದ ಅಂಶಗಳು. ವ್ಯಕ್ತಿಯನ್ನು ಪರಾವಲಂಬಿಯನಾ್ನಗಿಸಿ, ವ್ಯಕ್ತಿ ತನ್ನ ಕುಟುಂಬಿಕರಿಗೂ ಹೊರೆಯೆನ್ನಿಸುವಂಥ ಸನ್ನಿವೇಶ ಸೃಷ್ಟಿಯಾಗುವುದಕ್ಕಿಂತ ಪಾರ್ಶ್ವವಾಯು ಬಾರದೇ ಇರುವಂತೆ ಎಚ್ಚರಿಕೆವಹಿಸುವುದು ಒಳಿತಲ್ಲವೇ?
ಮೂಲ: ವಿಕ್ರಮ
ಕೊನೆಯ ಮಾರ್ಪಾಟು : 2/15/2020