ಔಷಧೀಯ ವಿಜ್ಞಾನದಲ್ಲಿ ಮಾನವ ಉನ್ನತ ಸಾಧನೆಯನ್ನು ಮಾಡಿದ್ದರೂ ಎಲ್ಲಾ ಚಿಕಿತ್ಸೆಗಳನ್ನು ಎಲ್ಲ ವರ್ಗದ ಜನರು ತೆಗೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಈ ಚಿಕಿತ್ಸೆಗಳಿಗೆ ಖರ್ಚಾಗುವ ಭಾರೀ ವೆಚ್ಚವೇ ಇದಕ್ಕೆ ಕಾರಣವಾಗಿರಬಹುದು.
ಇತ್ತೀಚೆಗೆ ಜನ ಸಾಮಾನ್ಯರಲ್ಲಿ ಔಷಧಿರಹಿತ ಚಿಕಿತ್ಸಾಪದ್ಧತಿಗಳ ಬಗೆಗೆ ಅರಿವು ಮೂಡುತ್ತಿದೆ. ಪ್ರತಿಯೊಂದು ಸಣ್ಣ ಕಾಯಿಲೆಗೂ ಔಷಧಿ, ಮಾತ್ರೆ ಸೇವಿಸಿ ಆದರಿಂದಾಗುವ ಅಡ್ಡಪರಿಣಾಮಗಳನ್ನು ಅನುಭವಿಸಿ ಸಾಕಾಗಿ ಮಾತ್ರೆ ಔಷಧಿಗಳಿಲ್ಲದ ಹಾಗೂ ಯಾವುದೇ ಅಡ್ಡ ಪರಿಣಾಮವನ್ನು ಬೀರದ ಸರಳ ಚಿಕಿತ್ಸೆಗಳತ್ತ ನೋಟ ಹರಿಸುತ್ತಿದ್ದಾರೆ. ಕಾಯಿಲೆ ಬಂದ ಮೇಲೆ ಅದರ ಬಗ್ಗೆ ಕೊರಗುವುದಕ್ಕಿಂತ ಅದು ಬರುವುದರೊಳಗೇ ತಡೆಗಟ್ಟುವ ಮಾರ್ಗೋಪಾಯಗಳನ್ನು ಹುಡುಕುತ್ತಿದ್ದಾರೆ.
ಇಂತಹ ಯಾವುದೇ ಅಡ್ಡ ಪರಿಣಾಮಗಳಿಲ್ಲದ ಸರಳ ಹಾಗೂ ಪ್ರಭಾವಿ ಚಿಕಿತ್ಸೆಯೇ ಆಕ್ಯುಪ್ರೆಷರ್. ಇದರ ಮೂಲ ಭಾರತವೇ ಆಗಿದ್ದರೂ ಈ ಚಿಕಿತ್ಸೆಯನ್ನು ಯಾರೂ ಸರಿಯಾಗಿ ಅಭ್ಯಾಸಮಾಡದೇ ಹೊರದೇಶಗಳು ದೋಚಿಕೊಂಡು ಹೋಗಿ ತಮ್ಮಲ್ಲೆ ಹುಟ್ಟಿದ ಹೊಸ ಚಿಕಿತ್ಸೆಯಾಗಿ ಉಪಯೋಗಿಸುತ್ತಿದ್ದಾರೆ.
ಇತ್ತೀಚಿಗೆ ಜನರಿಗೆ ಈ ಚಿಕಿತ್ಸಾ ಪದ್ದತಿಯ ಗುಣವಿಶೇಷÀಗಳ ಬಗ್ಗೆ ಅರಿವು ಮೂಡಿ ನಮ್ಮ ದೇಶದಲ್ಲಿಯೂ ಎಲ್ಲಾ ನಗರಗಳಲ್ಲಿ ‘ಆಕ್ಯುಪ್ರೆಷನ್ ಸೆಂಟರ್ಗಳ ತಲೆಯೆತ್ತುತ್ತಿವೆ.
ಇದು ಒಂದು ಸರಳವೂ ಸುಲಭವೂ ಆದ ಚಿಕಿತ್ಸಾ ವಿಧಾನವಾಗಿದ್ದು ರೋಗಗಳನ್ನು ಯಾವುದೇ ಅಡ್ಡ ಪರಿಣಾಮಗಳಿಲ್ಲದೇ ಗುಣ ಪಡಿಸುವುದರೊಂದಿಗೆ ಎಲ್ಲಾ ವರ್ಗದ ಜನರಿಗೂ ಕೈಗೆಟಕುವ ಸಂಜೀವಿನಿಯಾಗಿ ಮಾದರಿ ಚಿಕಿತ್ಸಾ ಪದ್ಧತಿಯಾಗಿದೆ.
ಈ ಚಿಕಿತ್ಸಾ ಕ್ರಮದಲ್ಲಿ ದೇಹದ ವಿವಿಧ ರೇಖೆಗಳ ಆಯ್ದ ಬಿಂದುಗಳ ಮೇಲೆ ಒತ್ತಡವನ್ನ ಕೊಟ್ಟು ಕಾಯಿಲೆಗಳನ್ನು ವಾಸಿಮಾಡಲಾಗುತ್ತದೆ. ಮಾನವ ದೇಹವು ಒಂದು ವಿದ್ಯುತ್ ಚಾಲಿತ ಯಂತ್ರದಂತೆ ಕೆಲಸ ಮಾಡುತ್ತದೆ. ಮಿದುಳಿನಲ್ಲಿ ಈ ವಿದ್ಯುತ್ ಶಕ್ತಿಯು ಇಡೀ ಶರೀರದಲ್ಲಿ ರೇಖೆಗಳೋಪಾದಿಯಲ್ಲಿ ಹರಿಯುತ್ತಿರುತ್ತದೆ ಎಂದು ನಂಬಲಾಗಿದೆ.
ಹೀಗೆ ಸರಾಗವಾಗಿ ಹರಿಯುವ ರೇಖೆಗಳಲ್ಲಿ ಕೆಲವೊಮ್ಮೆ ಅಡಚಣೆಯುಂಟಾಗಿ ಕೆಲವೊಂದು ಕಾಯಿಲೆಗಳು ಬರುವ ಸಂಭವವಿದೆ. ಈ ರೇಖೆಗಳ ಮೇಲೆ ಆಯ್ದ ಬಿಂದುಗಳ ಮೇಲೆ ಒತ್ತಡ ಕೊಡುವುದರಿಂದ ವಿವಿಧ ಅಂಗಗಳ ಕ್ರಿಯೆಯನ್ನು ನಿಯಂತ್ರಿಸಬಹುದು, ಅಂಗಗಳನ್ನು ಪ್ರಚೋದಿಸಬಹುದು.
ಇಂತಹ ಒತ್ತಡವನ್ನು ಪ್ರಯೋಗಿಸಲು ಕೈಯ ಬೆರಳುಗಳು ಅಥವಾ ಮೊಂಡು ತುದಿಯಿರುವ ಕಡ್ಡಿ ಮುಂತಾದವುಗಳನ್ನು ಬಳಸಬಹುದು.
ಈ ಒತ್ತು ಬಿಂದುಗಳು ಹಸ್ತ ಮತ್ತು ಪಾದಗಳಲ್ಲಿ ಹೆಚ್ಚಾಗಿವೆ. ಹಾಗಾಗಿ ಅವುಗಳ ಮೇಲೆ ಒತ್ತಡ ಪ್ರಯೋಗ ಮಾಡುವುದು ಸುಲಭ ಮತ್ತು ಪ್ರತಿದಿನ ಇದರ ಅಭ್ಯಾಸ ಮಾಡುವುದರಿಂದ ಶರೀರದ ಎಲ್ಲ ಭಾಗಗಳನ್ನು ಹಾಗೂ ಅಂಗಗಳನ್ನು ಸುಸ್ಥಿತಿಯಲ್ಲಿಡಬಹುದು. ಈ ಒತ್ತು ತಾಣಗಳನ್ನು ಪ್ರಚೋದಿಸಿದಾಗ ಚೇತನವು ಚುರುಕುಗೊಂಡು ತನ್ನ ಮಾರ್ಗದಲ್ಲಿ ಬರುವ ಎಲ್ಲ ಅಂಗಗಳ ಮೇಲೆ ಜೀವ ರಾಸಾಯಾನ ಪಟುತ್ವವನ್ನು ಉದ್ದೀಪನಗೊಳಿಸುತ್ತದೆ.
ಈ ಆಕ್ಯುಪ್ರೆಷರ್ ಬಿಂದುಗಳನ್ನು ಹೇಗೆ ಬಳಸಬೇಕು?
ಒತ್ತುವ ಕ್ರಮ:-
ಯಾವುದೇ ಒಂದು ಅಂಗದಲ್ಲಿ ಅಲ್ಲಿ ವಿದ್ಯುತ್ ಪ್ರವಾಹ ಹರಿಯುವಿಕೆಯಲ್ಲಿ ಅಡಚಣೆಯುಂಟಾದರೂ ಅದು ಹಸ್ತ ಪಾದದಲ್ಲಿನ ಬಿಂದುವಿನ ಮೇಲೆ ನೋವಿನ ರೀತಿಯಲ್ಲಿ ಕಾಣಿಸಿಕೊಳ್ಳುತ್ತದೆ. ಆಯಾ ಬಿಂದುಗಳನ್ನು ಒತ್ತುವುದರಿಂದ ಅದರಲ್ಲಿ ಪ್ರತಿಬಿಂಬಿತವಾದ ರೋಗಗಳನ್ನು ವಾಸಿಮಾಡಬಹುದಾಗಿದೆ.
ಉದಾಃ- ಹೆಬ್ಬೆರಳು ಹಾಗೂ ತೋರುಬೆರಳಿನ ಮಧ್ಯದ ಬಿಂದುವಿನಲ್ಲಿ ತಲೆನೋವಿರುವಾಗ ತುಂಬಾ ನೋವಿರುತ್ತದೆ.
ಒತ್ತು ಬಿಂದುಗಳನ್ನು ಅತ್ಯಂತ ಸೂಕ್ಷ್ಮವಾಗಿ ಗುರುತಿಸಿ ಅಲ್ಲದೇ ಒತ್ತಡವನ್ನು ಕೊಡಬೇಕೆಂಬ ಕಾಯಿದೆಯೇನು ಇಲ್ಲ. ನೋವಿರುವ ಒಂದಂಗುಲ ಜಾಗದಲ್ಲಿ ಬೆರಳಿಂದ ಒತ್ತಿಹಿಡಿದು ತೀಡಿದರೂ ಆಯಿತು ಅಥವಾ ಮೊಂಡಾಗಿರುವ ಉಪಕರಣಗಳ ಸಹಾಯದಿಂದ ಒತ್ತೊತ್ತಿ ಬಿಟ್ಟರೂ ಆಯಿತು. ಒಂದು ಬಿಂದುವಿಗೆ ಕನಿಷ್ಟ 1-2 ನಿಮಿಷ ಒತ್ತಡವನ್ನು ನೀಡಬೇಕು.
ಪ್ರತಿಯೊಂದು ರೋಗಕ್ಕೂ ಆದರದ್ದೇ ಆದಂತಹ ಒತ್ತು ಬಿಂದುಗಳಿವೆ. ಆಯಾ ಬಿಂದುಗಳಲ್ಲಿ ಒತ್ತಡಕೊಟ್ಟಾಗ ಮಾತ್ರ ರೋಗವನ್ನು ವಾಸಿಮಾಡಲು ಸಾಧ್ಯ. ನಮ್ಮ ದೈನಂದಿನ ಚಟುವಟಿಕೆಗಳಲ್ಲಿಯೂ ಎಲ್ಲಾದರೂ ನೋವಾದಾಗ ಶರೀರದ ವಿವಿಧ ಭಾಗಗಳನ್ನು ಒತ್ತಿಕೊಳ್ಳುವ ಅಭ್ಯಾಸ ಸಾಮಾನ್ಯವಾಗಿ ಎಲ್ಲರಲ್ಲಿಯೂ ಕಾಣಬಹುದು. ಯೋಗಾಭ್ಯಾಸ ಮಾಡುವಾಗಲೂ ಪ್ರತಿಯೊಂದು ಆಸನದಲ್ಲಿಯೂ ಆಯಾ ನಿರ್ದಿಷ್ಟ ಬಿಂದುಗಳಿಗೆ ಒತ್ತಡ ಸಿಕ್ಕಿ ದೇಹದಲ್ಲಿರುವ ದೋಷಗಳನ್ನು ಕಡಿಮೆ ಮಾಡುತ್ತದೆ.
ಸಾಮಾನ್ಯವಾಗಿ ಸಣ್ಣ ತಲೆನೋವಿನಿಂದ ಹಿಡಿದು ದೊಡ್ಡ ರೋಗಗಳವರೆಗೂ ಎಲ್ಲಾ ರೋಗಗಳಿಗೂ ಈ ವಿಧಾನದಲ್ಲಿ ಚಿಕಿತ್ಸೆ ಲಭ್ಯವಿದೆ. ಆದರೆ ಫಲಿತಾಂಶ ಸ್ವಲ್ಪ ನಿಧಾನವಾಗಬಹುದು.
ಮೂಲ: ಡಾ|| ವೆಂಕಟ್ರಮಣ ಹೆಗಡೆ
ಕೊನೆಯ ಮಾರ್ಪಾಟು : 2/15/2020