ಸಂಗೀತಕ್ಕೆ ನಮ್ಮಲ್ಲಿ ಬಹಳ ಮಹತ್ವವಿದೆ. ಒಂದೊಂದು ರಾಗಕ್ಕೂ ಒಂದೊಂದು ಪ್ರಾಮುಖ್ಯವಿದೆ. ಇಂಥ ಸಮಯದಲ್ಲಿ ಇಂಥದೇ ರಾಗ ಹಾಡಬೇಕೆಂದು ನಮ್ಮ ಹಿರಿಯರು ಹೇಳಿದ್ದರಲ್ಲಿ ಸಾಕಷ್ಟು ಅರ್ಥವಿದೆ. ಮಳೆಗಾಲಕ್ಕೆ, ಬೇಸಿಗೆಗೆ, ಚಳಿಗೆ ಹೀಗೆ ಬೇರೆ ಬೇರೆ ಕಾಲಕ್ಕೆ ಬೇರೆ ಬೇರೆ ರಾಗಗಳೆಂದು ವರ್ಗೀಕರಿಸಿರುವುದರ ಹಿಂದೆ ಆರೋಗ್ಯದ ಗುಟ್ಟಿದೆ ಎಂದರೆ ಅಚ್ಚರಿಯಾಗಬಹುದು. ಆದರೆ ಭಾರತೀಯರ ಮೇಧಾಶಕ್ತಿ ಎಂಥದು ಎಂಬುದು ಪ್ರತಿಯೊಂದು ವಿಷಯಗಳ ಬಗ್ಗೆ ಆಳವಾಗಿ ಅಧ್ಯಯನ ಮಾಡಿದಾಗ ಮಾತ್ರವೇ ತಿಳಿಯುತ್ತದೆ.
ಹಲವು ರೋಗಗಳಿಗೆ ಸಂಗೀತದಿಂದಲೇ ಚಿಕಿತ್ಸೆ ನೀಡುವ ಪದ್ಧತಿಯೂ ಈಗ ಚಾಲ್ತಿಯಲ್ಲಿದೆ. ಮ್ಯೂಸಿಕ್ ಥೆರಪಿ ಇಂದು ಭಾರತದಲ್ಲಿ ಮಾತ್ರವಲ್ಲದೆ ಬೇರೆ ದೇಶಗಳಲ್ಲೂ ಪ್ರಚಲಿತದಲ್ಲಿದೆ. ಈ ಎಲ್ಲಾ ಕಾರಣದಿಂದಲೇ ಭಾರತದಲ್ಲಿ ಸಂಗೀತವನ್ನು ಶಾಸ್ತ್ರೀಯವಾಗಿ ಅಭ್ಯಸಿಸುವುದಕ್ಕೆ ಅನುವುಮಾಡಿಕೊಡಲಾಗಿದೆ. ಇತ್ತೀಚಿನ ಸಂಶೋಧನೆಯೊಂದರ ಪ್ರಕಾರ ಸಂಗೀತ ಮೆದುಳನ್ನು ಉಲ್ಲಸಿತಗೊಳಿಸುವುದಲ್ಲದೆ, ಚಿಕ್ಕ ವಯಸ್ಸಿನಿಂದಲೇ ಮಗುವಿಗೆ ಸಿಗುವ ಸಂಗೀತ ತರಬೇತಿ ಮಗು ಬೆಳೆಯುವಾಗ ಅದರ ಬುದ್ಧಿಯನ್ನು ತಿದ್ದಿ ತೀಡುವ ಸಾಮರ್ಥ್ಯ ಹೊಂದಿದೆಯಂತೆ. ಅಲ್ಲದೆ ನಿಯಮಿತವಾಗಿ ಸಂಗೀತಾಧ್ಯಯನ ಮಾಡುವುದರಿಂದ ವ್ಯಕ್ತಿ ದೈಹಿಕ ಮತ್ತು ಮಾನಸಿಕವಾಗಿ ಸಾಮಾನ್ಯನಿಗಿಂತ ಸದೃಢನಾಗಿರುತ್ತಾನೆ ಎನ್ನುತ್ತದೆ ಈ ಸಂಶೋಧನೆ. ಹೃದಯ ಸಂಬಂಧಿಕಾಯಿಲೆಗಳನ್ನು ನಿವಾರಿಸುವ ಶಕ್ತಿ ಸಂಗೀತಕ್ಕಿದೆ. ನಿಯಮಿತವಾದ ಸಂಗೀತಾಭ್ಯಾಸ ವ್ಯಕ್ತಿಯ ಮೆದುಳಿಗೆ ಒಂದು ಸುಂದರ ಸ್ವರೂಪ ನೀಡಬಲ್ಲದಂತೆ. ಆತನ ಯೋಚನೆಗಳೂ ಉಳಿದವರಿಗಿಂತ ಭಿನ್ನವಾಗಿರುತ್ತವಲ್ಲದೆ, ಅವನು ಯಾವಾಗಲೂ ಕ್ರಿಯಾಶೀಲನಾಗಿರುವಂತೆ ಕಾಯ್ದುಕೊಳ್ಳುತ್ತದೆ. ಸಂಗೀತಾಧ್ಯಯನ ನೆನಪಿನ ಶಕ್ತಿಯನ್ನೂ ಹೆಚ್ಚಿಸುತ್ತದೆ. ಏಕಾಗ್ರತೆ ವೃದ್ಧಿಸುತ್ತದೆ. ಮೆದುಳು ಹೆಚ್ಚು ಹೆಚ್ಚು ಧನಾತ್ಮಕವಾಗಿ ಚಿಂತಿಸುವಂತೆ ಮಾಡುತ್ತದೆ. ಚಿಕ್ಕ ಮಕ್ಕಳಲ್ಲಿ ಕಲಿಕೆಯ ದೌರ್ಬಲ್ಯವಿದ್ದರೆ ಅವರನ್ನು ಸಂಗೀತದೆಡೆ ಆಕರ್ಷಿತರಾಗುವಂತೆ ಮಾಡಬೇಕು. ಆಗ ಅವರ ಮೆದುಳು ಹೆಚ್ಚು ಕ್ರಿಯಾಶೀಲವಾಗುತ್ತದೆ ಎಂಬುದನ್ನೂ ಸಂಶೋಧನೆ ಹೇಳಿದೆ. ಕೆಲ ನಿರ್ದಿಷ್ಟ ರಾಗಗಳು ಮೆದುಳಿನಲ್ಲಿರುವ ನಿರ್ದಿಷ್ಟ ನರಗಳ ಮೇಲೆ ಪರಿಣಾಮ ಬೀರುತ್ತವೆ. ಇದರಿಂದ ಮೆದುಳು ಹೆಚ್ಚು ಚುರುಕಾಗುತ್ತದೆ. ಮಾತ್ರವಲ್ಲ ದೇಹವನ್ನು ನಿಯಂತ್ರಿಸುವ ಮೆದುಳಿನ ಆ ಎಲ್ಲ ನರಗಳೂ ಕ್ರಿಯಾಶೀಲವಾಗುವುದರಿಂದ ಸಹಜವಾಗಿಯೇ ದೇಹವೂ ಚಟುವಟಿಕೆಯಿಂದಿರುತ್ತದೆ. ಈ ಎಲ್ಲಾ ಕಾರಣಗಳಿಂದ ಸಂಗೀತ ಕೇವಲ ಮನರಂಜನೆಯ ಸಾಧನವಷ್ಟೇ ಆಗಿಲ್ಲ. ಅದೊಂದು ಪರಿಣಾಮಕಾರಿ ಚಿಕಿತ್ಸೆ ಎಂಬುದೂ ಸಾಬೀತಾಗಿದೆ.
ಮೂಲ: ವಿಕ್ರಮ
ಕೊನೆಯ ಮಾರ್ಪಾಟು : 3/5/2020