ವಾರ್ಷಿಕ ಆದಾಯವು ಗ್ರಾಮೀಣ ಪ್ರದೇಶದಲ್ಲಿ 12,000 ಹಾಗೂ ನಗರ ಪ್ರದೇಶದಲ್ಲಿ 17,000 ಕ್ಕಿಂತಲೂ ಕಡಿಮೆ ಇರುವ ಕುಟುಂಬದಲ್ಲಿ, ಶೇ.40 ಹಾಗೂ ಶೇ.75 ಕ್ಕಿಂತ ಕಡಿಮೆ ವಿಕಲತೆ ಹೊಂದಿರುವ ವಿಕಲಚೇತನರಿಗೆ ಮಾಹೆಯಾನ ರೂ.400 ಹಾಗೂ ಶೇ.75 ಕ್ಕಿಂತ ಹೆಚ್ಚಿನ ವಿಕಲತೆ ಹೊಂದಿರುವವರಿಗೆ ಮಾಹೆಯಾನ ರೂ 1000/-ಗಳ ನಿರ್ವಹಣಾ ಭತ್ಯೆಯನ್ನು ನೀಡಲಾಗುತ್ತಿದೆ. ಈ ಯೋಜನೆಯನ್ನು ಕಂದಾಯ ಇಲಾಖೆಯಮುಖಾಂತರ ಅನುಷ್ಠಾನಗೊಳಿಸುತ್ತಿದ್ದು, ಆಯಾ ತಾಲ್ಲೂಕಿನ ತಹಸೀಲ್ದಾರರು ಇದನ್ನು ಮಂಜೂರು ಮಾಡುವ ಅಧಿಕಾರವನ್ನು ಹೊಂದಿರುತ್ತಾರೆ.
ವಿಕಲಚೇತನ ವ್ಯಕ್ತಿಗಳಿಗಾಗಿ ಇರುವ ಸರ್ಕಾರಿ ಸೌಲಭ್ಯಗಳನ್ನು ಪಡೆಯಲು ಅನುಕೂಲವಾಗುವಂತೆ ಸರ್ಕಾರವು ಅವರಿಗೆ ಗುರುತಿನ ಚೇಟಿಯನ್ನು ಉಚಿತವಾಗಿ ವಿತರಿಸುತ್ತಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಹಾಗೂ ಅದನ್ನು ಪಡೆಯಲು ಆಯಾ ಜಿಲ್ಲೆಯ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳನ್ನು ಸಂಪರ್ಕಿಸಬಹುದು
ಬುದ್ಧಿಮಾಂದ್ಯ ಮಕ್ಕಳ ಪೋಷಕರಿಗೆ ಈ ಯೋಜನೆಯಡಿಯಲ್ಲಿ ಎಲ್.ಐ.ಸಿ ಮೂಲಕ ಜೀವ ವಿಮೆ ಮಾಡಲಾಗುತ್ತಿದೆ. ಬುದ್ಧಿಮಾಂದ್ಯ ವ್ಯಕ್ತಿಗಳ ತಂದೆ/ತಾಯಿ/ಪೋಷಕರು ಮರಣ ಹೊಂದಿದ ನಂತರ ಬುದ್ಧಿಮಾಂದ್ಯ ಮಕ್ಕಳ ಜೀವನ ನಿರ್ವಹಣೆಗಾಗಿ ರೂ.20000/-ಗಳ ಪರಿಹಾರ ಧನವನ್ನು ನಿಧನ ಹೊಂದಿದ ಕುಟುಂಬದ ನಾಮ ನಿರ್ದೇಶಿತಸದಸ್ಯರಿಗೆ ಭಾರತೀಯ ಜೀವ ವಿಮಾ ನಿಗಮದವರ ಮುಖಾಂತರ ನೀಡಲಾಗುತ್ತಿದೆ.
ವಿಕಲಚೇತನರ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿ ವಿದ್ಯಾವಂತರಾದಲ್ಲಿ ಉದ್ಯೋಗವಕಾಶಗಳು ದೊರೆಯುತ್ತವೆ ಎಂಬ ಕಾರಣದಿಂದ ಹಾಗೂ ಮಹಿಳೆಯರು ಉದ್ಯೋಗಗಳನ್ನುಮಾಡಲು ಉತ್ತೇಜನ ನೀಡುವ ಉದ್ದೇಶದಿಂದ ರಾಜ್ಯ ಸರ್ಕಾರವು ಆದೇಶ ದಿನಾಂಕ:29.07.2006ರಲ್ಲಿ ಮಹಿಳೆಯರ ಮತ್ತು ವಿದ್ಯಾರ್ಥಿನಿಯರ ವಸತಿ ನಿಲಯಗಳನ್ನು ಪ್ರಾರಂಭಿಸಲು ಮಂಜೂರಾತಿ ನೀಡಿದೆ, ಈ ವಸತಿ ನಿಲಯಗಳನ್ನು ಸ್ವಯಂ ಸೇವಾ ಸಂಸ್ಥೆಗಳ ಮೂಲಕ ನಡೆಸಲು ಉದ್ದೇಶಿಸಲಾಗಿದೆ. ಸ್ವಯಂ ಸೇವಾ ಸಂಸ್ಥೆಗಳಿಗೆ ವಾರ್ಷಿಕವಾಗಿ ಬೆಂಗಳೂರು ನಗರವನ್ನು ಹೊರತುಪಡಿಸಿ ಬೇರೆ ಜಿಲ್ಲೆಗಳಿಗೆ ರೂ847000/-ಗಳ ಅನುದಾನವನ್ನು ನೀಡಲಾಗುವುದು.ಪ್ರತಿ ವಸತಿ ನಿಲಯದಲ್ಲಿ ಗರಿಷ್ಠ 50 ಜನ ಮಹಿಳೆಯರಿಗೆ :ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಬೇಕಾಗಿರುತ್ತದೆ.(ವಸತಿ ನಿಲಯದ ಪಟ್ಟಿಯನ್ನುಲಗತ್ತಿಸಿದೆ).
ಕೊನೆಯ ಮಾರ್ಪಾಟು : 1/28/2020