ಯಾಂತ್ರಿಕ ಪದ್ಧತಿಗಳು ಕೈಯಿಂದ ಅಥವಾ ಯಾಂತ್ರದ ಶಕ್ತಿಯನ್ನು ಬಳಸಿ ಕಳೆಗಳನ್ನು ಕಿತ್ತುಹಾಕುವುದು. ಈ ಪದ್ಧತಿಯೂ ಸಹ ರಾಸಾಯನಿಕ ಪದ್ಧತಿಗೆ ಬದಲಿ ಆಗುತ್ತದೆ. ಅಲ್ಲದೆ ಪರಿಸರ ಮಾಲಿನ್ಯವಿರುವುದಿಲ್ಲ. ಈ ಪದ್ಧತಿಯಲ್ಲಿ ಕೆಳಕಂಡ ಕ್ರಮಗಳನ್ನು ಅನುಸರಿಸಿ ಕಳೆಗಳನ್ನು ಹತೋಟಿ ಮಾಡಬಹುದು. ಹತೋಟಿ ಕ್ರಮಗಳು ಆಳವಾಗಿ ಮಣ್ಣಿನಲ್ಲಿ ಸೇರಿರುವ ಬಹು ವಾರ್ಷಿಕ ಕಳೆಗಳನ್ನು ಹಾರೆ, ಗುದ್ದಲಿಗಳಿಂದ ಅಗೆಯುವುದು ಮತ್ತು ಆಳವಾಗಿ ಉಳುಮೆ ಮಾಡುವುದು. ಬೇಸಿಗೆಯಲ್ಲಿ ಬಿಸಿಲಿಗೆ ಬಿಟ್ಟು ಅವುಗಳ ಗೆಡ್ಡೆಗಳನ್ನು ಒಣಗಿಸುವುದು ಕೈಯಿಂದ ಕಳೆಗಳನ್ನು ಕಿತ್ತು ಹಾಕುವುದು. ಉಳುಮೆ ಮಾಡುವುದು. ಎಡೆ ಕುಂಟೆಗಳನ್ನು ಹೊಡೆಯುವುದು. ಹುಲ್ಲು, ಮಣ್ಣು. ಎಲೆ ಅಥವಾ ಕಪ್ಪು ಪಾಲಿಥೀನ್ ಶೀಟುಗಳಿಂದ ಕಳೆಗಳನ್ನು ಅಥವಾ ಭೂಮಿಯ ಮೇಲ್ಮೆಯನ್ನು ಮುಚ್ಚುವುದು/ಹೊದಿಸುವುದು. ನೀರನ್ನು ಕಳೆಗಳ ಮೇಲೆ/ಭೂಮಿಯ ಮೇಲೆ ನಿಲ್ಲಿಸುವುದು. ನೀರನ್ನು ಬಸಿಯುವುದು. ಮಣ್ಣು ಕಾವು ಬರುವಂತೆ ಮಾಡುವುದು. ಕಳೆಗಳನ್ನು ಕೊಯ್ದು ಹಾಕುವುದು. ಉತ್ತಮ ಬೇಸಾಯ ಮತ್ತು ಯಾಂತ್ರಿಕ ಪದ್ಧತಿಗಳು ಸಾಮಾನ್ಯವಾಗಿ ರಾಸಾಯನಿಕ ಪದ್ಧತಿಗೆ ಪರ್ಯಾಯ ಅಥವಾ ಬದಲಿ ಆಗುತ್ತವೆ. ಆ ಕಾರಣ ರಾಸಾಯನಿಕ ಪದ್ಧತಿಗಳನ್ನು ಅಳವಡಿಸಬೇಕಾಗಿಲ್ಲ. ಅಲ್ಲದೆ ಈ ಬೇಸಾಯ ಮತ್ತು ಯಾಂತ್ರಿಕ ಪದ್ಧತಿಗಳನ್ನು ಅನುಸರಿಸಿ ಕಳೆಗಳನ್ನು ಹತೋಟಿಮಾಡುವುದರಿಂದ ಪರಿಸರ ಮಾಲಿನ್ಯವೂ ಆಗುವುದಿಲ್ಲ. ಜೈವಿಕ ಪದ್ಧತಿ ರಾಸಾಯನಿಕ ಬಳಕೆಯಿಂದ ಆಗುತ್ತಿರುವ ಪರಿಸರ ಮಾಲಿನ್ಯವನ್ನು ತಡೆಗಟ್ಟಲು ಇತ್ತೀಚಿನ ದಿನಗಳಲ್ಲಿ ಬದಲಿ ಪದ್ಧತಿಗಳ ಬಳಕೆಗೆ ಹೆಚ್ಚು ಪ್ರಾಶಸ್ತ್ಯ ನೀಡಲಾಗುತ್ತದೆ. ಕಳೆ ನಿಯಂತ್ರಣದಲ್ಲಿ ಜೈವಿಕ ಪದ್ಧತಿ ಇನ್ನೂ ಅಷ್ಟು ಹೆಚ್ಚಿನ ಬಳಕೆಯಲ್ಲಿಲ್ಲ. ಆದರೆ ಇತ್ತೀಚೆಗೆ ನೀರಿನಲ್ಲಿ ಬೆಳೆಯುವ ವಾಟರ್-ಹಯಸಿಂತ್ ಮತ್ತು ವಾಟರ್-ಫರ್ನ್ ಕಳೆಗಳನ್ನು ಮತ್ತು ಪಾರ್ಥೇನಿಯಂ ಕಳೆಗಳನ್ನು ನಿರ್ಮೂಲನೆ ಮಾಡಲು ಕೆಲವು ಕೀಟಗಳನ್ನು ಆಮದು ಮಾಡಿಕೊಂಡು ಪ್ರಯೋಗ ಮಾಡಲಾಗಿದೆ,. ಮೂಲ :ದೂರ ಶಿಕ್ಷಣ ಘಟಕ ವಿಸ್ತರಣಾ ನಿರ್ದೇಶನಾಲಯ, ಹೆಬ್ಬಾಳ ಕೃಷಿ ವಿಶ್ವವಿದ್ಯಾನಿಲಯ, ಜಿ.ಕೆ.ವಿ.ಕೆ. ಬೆಂಗಳೂರು