<div id="MiddleColumn_internal"> <p style="text-align: justify; ">ರಕ್ತ ಹಾಗೂ ಸ್ತನ ಕ್ಯಾನ್ಸರ್, ಮೂಲೆ ಸವಕಲು ಕಾಯಿಲೆ, ನಿಲ್ಲದ ರಕ್ತ ಸ್ರಾವ, ಮಧುಮೇಹ, ಪಾರ್ಶ್ವವಾಯು, ಅಲ್ಜೇಮರ್, ದೃಷ್ಟಿ ಹಾಗೂ ಬುದ್ದಿಮಾಂದ್ಯತೆ, ಗುಣವಾಗದ ರಕ್ತಹೀನತೆ, ಹಲವಾರು ಅನುವಂಶಿಕ ಕಾಯಿಲೆ ಸೇರಿದಂತೆ ೧೦೦ಕ್ಕಿನ್ತ ಅಧಿಕ ಕಾಯಿಲೆಗೆ ಕಾಂಡ ಜೀವ ಕಣದಿಂದ ಯಶಸ್ವಿ ಚಿಕಿತ್ಸೆ ಇದೆ.</p> <p style="text-align: justify; ">ನೀವು ಗರ್ಭಿಣಿಯೇ?</p> <p style="text-align: justify; ">ಹಾಗಾದರೆ, ನಿಮ್ಮ ಜನಿಸಲಿರುವ ಮಗು, ಈಗಾಗಲೇ ಇರುವ ಮಕ್ಕಳು, ನಿಮ್ಮನ್ನು ಹಾಗೂ ಶಿಶುವಿನ ಅಜ್ಜ, ಅಜ್ಜಿ, ಹತ್ತಿರದ ಸಂಬಂಧಿಯನ್ನು ಹಲವಾರು ವಾಸಿಯಾಗದ, ಮಾರಣಾಂತಿಕ ಕಾಯಿಲೆಯಿಂದ ಬದುಕಿಸಬೇಕೆ?</p> <p style="text-align: justify; ">ಹೃದಯಾಘಾತದ ನೆಂಟರಿಗೆ ಜೀವದಾನ ಆಶಿಸುವಿರಾ?</p> <p style="text-align: justify; ">ಮಂದಮತಿ, ಅಪಸ್ಮಾರ, ಎದ್ದಾಡಲು ಅಸಾಧ್ಯವಾದ ನರಬೇನೆ ಗುಣವಾಗಬೇಕೆ?</p> <p style="text-align: justify; ">ಹಲವಾರು ತಿಂಗಳಿಂದ ವಾಸಿಯಾಗದ ಗಾಯ ಕೆಲವೇ ದಿನದಲ್ಲಿ ವಾಸಿಯಾಗಬೇಕೆ?</p> <p style="text-align: justify; ">ಹೀಗಿದ್ದರೆ ಜನಿಸಲಿರುವ ನಿಮ್ಮ ಶಿಶುವಿನ ಹೊಕ್ಕಳು ಬಳ್ಳಿಯನ್ನು ಶೇಖರಿಸಿರಿ. ಇದರಿಂದ ಮೇಲಿನ ಎಲ್ಲ ತೊಂದರೆಯನ್ನು ವಾಸಿಮಾಡಲು ಸಾಧ್ಯ.</p> <p style="text-align: justify; ">ಹೆರಿಗೆಯಲ್ಲಿ ಹೊಕ್ಕಳು ಬಳ್ಳಿಯನ್ನು ತಾಯಿಯಿಂದ ಬೇರ್ಪಡಿಸಿದ ನಂತರ ಕೆಲಸಕ್ಕೆ ಬಾರದು ಎಂದು ಕಸದ ಬುಟ್ಟಿ ಸೇರುತ್ತದೆ. ಆದರೆ ಈ ಕಸದಿಂದ ಹಲವಾರು ಕಾಯಿಲೆಗಳನ್ನು ಗುಣಪಡಿಸಬಹುದು. ಒಂದು ಸಮೀಕ್ಷೆ ಪ್ರಕಾರ ವಿಶ್ವದಲ್ಲಿ ೧೧೯೮೮ ರಿಂದ ಇಲ್ಲಿಯವರೆಗೆ ಹೊಕ್ಕಳು ಬಳ್ಳಿ ಬಳಸಿ ೮೦೦೦ ಜೀವ ಬದುಕಿಸಲಾಗಿದೆ. ಈಗ ಪ್ರತಿ ವರ್ಷ ೨೦೦೦ ಸಾಯುವ ಜೀವಕ್ಕೆ ಮರುಜನ್ಮ ಸಾಧ್ಯವಾಗುತ್ತಿದೆ.</p> <p style="text-align: justify; ">ಹೇಗೆ ಸಾಧ್ಯ?</p> <p style="text-align: justify; ">ಹೆರಿಗೆಯಲ್ಲಿ ಶಿಶು ಹೊಕ್ಕಳಕ್ಕೆ ಅಂಟಿಕೊಂಡ ೨.೫ ಅಂಗುಲದ ಹೊಕ್ಕಳು ಬಳ್ಳಿಯನ್ನು ಹೊರತುಪಡಿಸಿ ಗರ್ಭವೇಶ್ಠನ (ಪ್ಲೆಸೆಂಟಾ) ಹಾಗೂ ಅದಕ್ಕೆ ಅಂಟಿಕೊಂಡ ಸುಮಾರು ೧೨ ಅಂಗುಲದ ಹೊಕ್ಕಳು ಬಳ್ಳಿಯನ್ನು ನಿರುಪಯುಕ್ತವೆಂದು ಬಿಸಾಡುತ್ತಾರೆ. ಆದರೆ ಹೀಗೆ ಬಿಸಾಡುವ ವಸ್ತುವಿನಲ್ಲಿ ಅಮೂಲ್ಯವಾದ ಕಾಂಡ ಜೀವ ಕಣ (ಸ್ಟೆಮ್ ಸೆಲ್) ಎಂಬ ಜೀವಕೋಶವಿರುತ್ತದೆ. ಹೊಕ್ಕಳು ಬಳ್ಳಿಯಲ್ಲಿ ಹೇರಳವಾಗಿರುವ ಈ ಜೀವಕಣಗಳನ್ನು ಪ್ರಯೋಗಾಲಯದಲ್ಲಿ ಪ್ರತ್ಯೇಕಿಸಿ ರೋಗಿಗೆ ನೀಡಿದರೆ ಹಲವಾರು ರೋಗಗಳಿಗೆ ಸಂಜೀವಿನಿಯಾಗುತ್ತದೆ.</p> <p style="text-align: justify; ">ಯಾವ ಕಾಯಿಲೆಗೆ?</p> <p style="text-align: justify; ">ರಕ್ತ ಹಾಗೂ ಸ್ತನ ಕ್ಯಾನ್ಸರ್, ಮೂಳೆಸವಕಲು ಕಾಯಿಲೆ, ನಿಲ್ಲದ ರಕ್ತ ಸ್ರಾವ, ಮಧುಮೇಹ, ಪಾರ್ಶ್ವವಾಯು, ಅಲ್ಜೇಮರ್, ದೃಷ್ಟಿ ಹಾಗೂ ಬುದ್ದಿಮಾಂದ್ಯತೆ, ಗುಣವಾಗದ ರಕ್ತಹೀನತೆ, ಹಲವಾರು ಅನುವಂಷಿಕ ಕಾಯಿಲೆ ಸೇರಿದಂತೆ ೧೦೦ ಕ್ಕಿಂತ ಅಧಿಕ ಕಾಯಿಲೆಗೆ ಕಾಂಡ ಜೀವ ಕಣದಿಂದ ಯಶಸ್ವಿ ಚಿಕಿತ್ಸೆ ಇದೆ.</p> <p style="text-align: justify; ">ಇದಲ್ಲದೆ ಕಾಂಡ ಜೀವ ಕಣಗಳನ್ನು ಯಾವುದೇ ಅಂಗಾಂಗದ ಜೀವಕೋಶವಾಗಿ (ಉದಾ: ನರ,ಮೂಳೆ,ಹೃದಯ, ಸ್ನಾಯು, ಯಕೃತ್,ಮೂತ್ರಪಿಂಡ ) ವೃದ್ದಿಪಡಿಸಲು ಸಾಧ್ಯ. ಹೀಗೆ ವೃದ್ದಿಪಡಿಸಿದ ಜೀವಕೋಶವನ್ನು ಬಳಸಿ ಬಳಹೀನಗೊಂಡ ಅಂಗಾಂಗವನ್ನು ಮರು ರಚಿಸಬಹುದು. ಉದಾ: ಹೃದಯಾಘಾತದಿಂದ ಹಾನಿಗೊಳಗಾದ ಹೃದಯದ ಭಾಗ, ಹಾನಿಗೊಂಡ ದೃಷ್ಟಿಪತಲ (ಕಣ್ಣು), ಅಪಘಾತದಿಂದ ಪೆಟ್ಟಾದ ಬೆನ್ನುಹುರಿಯನ್ನು ನಾಟಿ ಮಾಡಲು ಸಾಧ್ಯ. ಬೆಂಗಳೂರಿನ ಕೆಲವು ಆಸ್ಪತ್ರೆಗಳಲ್ಲಿ ಇಂತಹ ಕೆಲವು ಕಾಯಿಲೆಗೆ ಚಿಕಿತ್ಸೆ ನೀಡಲಾಗಿದೆ.</p> <p style="text-align: justify; ">ಎಂಥ ಶಿಶುವಿನಿಂದ ಸಂಗ್ರಹ?</p> <ul style="text-align: justify; "> <li>ಯಾವುದೇ ನವ ಶಿಶುವಿನಿಂದ. ಇದು ತನ್ನ ಹಾಗೂ ಕುಟುಂಬದ ಭವಿಷ್ಯದಲ್ಲಿನ ಆರೋಗ್ಯ ರಕ್ಷಣೆಗಾಗಿ.</li> <li>ಹಿರಿಯ ಮಗು ವಾಸಿಯಾಗದ ಕಾಯಿಲೆಯಿಂದ ಬಳಲುತ್ತಿದ್ದರೆ, ಈ ಮಗವಿನ ತಾಯಿ ಮತ್ತೆ ಗರ್ಭಿಣಿಯಾಗಿದ್ದರೆ, ಜನಿಸಲಿರುವ ಶಿಶುವಿನಿಂದ ಸಂಗ್ರಹಿಸಬಹುದು. ಇದು ಹಿರಿಯ ಮಗುವಿನ ಚಿಕಿತ್ಸೆಗಾಗಿ.</li> <li>ಮೊದಲ ಮಗು ಕಾರಣವಿಲ್ಲದೆ ಅಥವಾ ನಿಗೂಢ ಕಾಯಿಲೆಯಿಂದ ಮರಣ ಹೊಂದಿದ್ದರೆ, ಎರಡನೇ ಮಗು ಇಂತಹ ಅಪಾಯದಿಂದ ತನ್ನನ್ನು ರಕ್ಷಿಸಲು ತನ್ನ ಹೊಕ್ಕಳು ಬಳ್ಳಿ ಶೇಖರಿಸಬಹುದು.</li> <li>ಕುಟುಂಬದಲ್ಲಿ ಅನುವಂಶಿಕ ಅಥವಾ ಚಿಕಿತ್ಸೆ ಇಲ್ಲದ ಕಾಯಿಲೆ ಬರುವ ಸಂಭವವಿದ್ದರೆ (ಉದಾ:ಸಗೊತ್ರ ವಿವಾಹದ ಶಿಶು) ಅಥವಾ ಅಂಥ ಕಾಯಿಲೆಯಿಂದ ಬಳಲುತ್ತಿದ್ದರೆ ಇಂತಹ ಕುಟುಂಬದಲ್ಲಿ ಜನಿಸುವ ಯಾವುದೇ ಶಿಶುವಿನಿಂದ ಶೇಖರಿಸಬಹುದು.</li> </ul> <p style="text-align: justify; ">ಶೇಖರಣೆಗಾಗಿ ಏನು ಮಾಡಬೇಕು?</p> <p style="text-align: justify; ">ಸಂಗ್ರಹಣೆ ಮಾಡಬೇಕೆಂಬ ನಿಮ್ಮ ನಿರ್ಧಾರವನ್ನು ಹತ್ತಿರದ ಹಕ್ಕಳು ಬಳ್ಳಿ ಸಂಗ್ರಹಣಾ ಕೇಂದ್ರಕ್ಕೆ (ಕಾರ್ಡ್ ಬ್ಲಡ್ ಬ್ಯಾಂಕ್) ಹೇರಿಗೆಯಾಗುವ ಒಂದೆರಡು ತಿಂಗಳು ಮುಂಚೆ ತಿಳಿಸಿರಿ. ಬೆಂಗಳೂರಿನಲ್ಲಿ ಇಂತಹ ೩ ಹಾಗೂ ದೇಶದಲ್ಲಿ ಸುಮಾರು ೧೦ ಕೇಂದ್ರಗಳಿದ್ದು, ದೂರವಾಣಿ ಅಥವಾ ಇ-ಮೇಲ್ ಮುಖಾಂತರ ಕೋರಿಕೆ ಸಲ್ಲಿಸಬಹುದು. ಈ ಕೇಂದ್ರದ ಪ್ರತಿನಿಧಿ ನಿಮ್ಮನ್ನು ಭೇಟಿಯಾಗಿ ಶೇಖರಣೆ ಮಹತ್ವದ ಬಗ್ಗೆ ಮಾಹಿತಿ ನೀಡಿ, ಅರ್ಜಿ ನಮೂನೆ ನೀಡುತ್ತಾರೆ. ಅರ್ಜಿಯಲ್ಲಿ ಹೆಸರು ವಿಳಾಸ, ಹೆರಿಗೆಗಾಗಿ ಬಯಸುವ ಆಸ್ಪತ್ರೆ, ಹೆರಿಗೆಯ ನಿರೀಕ್ಷಿತ ದಿನಾಂಕ ನೀಡಬೇಕು. ನೀವು ಅನುಮತಿಸಿದರೆ ಸಂಗ್ರಹಣೆಗಾಗಿ "ಕಿಟ್" ನೀಡುತ್ತಾರೆ. ಇದರಲ್ಲಿ ಹೊಕ್ಕಳು ಬಳ್ಳಿ ರಕ್ತ ಸಂಗ್ರಹಿಸಲು ಔಷಧಿಯುಕ್ತ ಪ್ಲಾಸ್ಟಿಕ್ ಚೀಲ, ಹೊಕ್ಕಳು ಬಳ್ಳಿ ಸಂಗ್ರಹಿಸಲು ಸೀಸೆ, ತಾಯಿ ರಕ್ತ ಸಂಗ್ರಹಿಸಲು ೨ ಪ್ರನಾಳಿಕೆ ಇರುತ್ತವೆ. ಈ ಕಿಟ್ಟನ್ನು ಹೆರಿಗೆಯಾಗುವ ಸಮಯಕ್ಕೆ ಆಸ್ಪತ್ರೆಗೆ ಗರ್ಭಿಣಿ ಕೊಂಡೊಯ್ಯಬೇಕು.</p> <p style="text-align: justify; ">ಹೆರಿಗೆ ನೋವು ಆರಂಭವಾದ ತಕ್ಷಣವೇ ಮತ್ತೊಮ್ಮೆ ನೀವು ಆಸ್ಪತ್ರೆಗೆ ಹೋಗುತ್ತಿರುವ ಬಗ್ಗೆ ಸಂಗ್ರಹಣಾ ಕೇಂದ್ರಕ್ಕೆ ತಿಳಿಸಿರಿ. ಇದರ ಆಧಾರದ ಮೇಲೆ ಸಂಗ್ರಹಣಾ ಕೇಂದ್ರದ ಅಧಿಕಾರಿ, ಹೆರಿಗೆ ಮಾಡುವ ವೈದ್ಯರಿಗೆ ಹೊಕ್ಕಳು ಬಳ್ಳಿ ಸಂಗ್ರಹಿಸಿಡಲು ವಿನಂತಿಸುತ್ತಾರೆ ಅಥವಾ ಸಂಗ್ರಹಣಾ ಕೇಂದ್ರದ ಸಿಬ್ಬಂದಿ ಆಸ್ಪತ್ರೆಗೆ ಬಂದು ಮಾದರಿ ಸಂಗ್ರಹಿಸುತ್ತಾರೆ.</p> <p style="text-align: justify; ">ಎಷ್ಟು, ಯಾವಾಗ ಸಂಗ್ರಹ? ಬಳಕೆ ಹೇಗೆ?</p> <p style="text-align: justify; ">ಹೊಕ್ಕಳು ಬಳ್ಳಿಯಿಂದ ೧೦೦ಮಿಲಿ.ಲೀ. ರಕ್ತ, ೭ ಅಂಗುಲದ ಹೊಕ್ಕಳು ಬಳ್ಳಿಯನ್ನು ಹೆರಿಗೆಯಾದ ತಕ್ಷಣ ಕೇವಲ ೧೦ ನಿಮಿಷದೊಳಗೆ ಮಾದರಿ ಸಂಗ್ರಹಿಸುತ್ತಾರೆ. ಇದರ ಜೊತೆ ತಾಯಿ ರಕ್ತ ಮಾದರಿ ಸಂಗ್ರಹಿಸಿ ಇವೆಲ್ಲವುಗಳನ್ನು ಸಂಗ್ರಹಣಾ ಕೇಂದ್ರಕ್ಕೆ ಅದೇ ದಿನ ರವಾನಿಸಲಾಗುವುದು.</p> <p style="text-align: justify; ">ಮಾದರಿ ಸಂಗ್ರಹಿಸಿದ ೪೮ ಗಂಟೆಯಲ್ಲಿ, ಮಾದರಿಗಳನ್ನು ಎಚ್,ಐ,ವಿ., ಕಾಮಾಲೆ, ಗುಹ್ಯ ಖಾಯಿಲೆ, ಮಲೇರಿಯಾ ಸೇರಿದಂತೆ ೮ ಕಾಯಿಲೆಗಳಿಗಾಗಿ ಪರೀಕ್ಷಿಸಿ.</p> <p style="text-align: justify; ">ಪರಿಶುದ್ದವೆಂದಾದರೆ ಹೊಕ್ಕಳು ಬಳ್ಳಿಯಿಂದ ಕಾಂಡ ಜೀವ ಕಣ ಪ್ರತ್ಯೇಕಿಸಲಾಗುವುದು.ಇವುಗಳನ್ನು ದ್ರವರೂಪದ ನೈಟ್ರೋಜನ್ನಲ್ಲಿ-೧೯೬ ಸೆಂಟಿ ಗ್ರೇಡ್ ತಾಪಮಾನದ ಶೈತ್ಯಾಗಾರದಲ್ಲಿ ಸಂಗ್ರಹಿಸಲಾಗುವುದು. ಹೀಗೆ ೨೧ ವರ್ಷ ಅಥವಾ ಹೆಚ್ಚಿಗೆ ಕೆಡದಂತೆ ಶೇಖರಿಸಬಹುದು. ರೋಗಿಗೆ ಅವಶ್ಯವನಿಸಿದಾಗ ಸಂಗ್ರಹಣಾ ಕೇಂದ್ರದಿಂದ ಈ ಜೀವ ಕಣ ಪಡೆಯಬಹುದು.</p> <p style="text-align: justify; ">ಸುರಕ್ಷತೆ: ಸಂಗ್ರಹಣೆಗೆ ಯಾವುದೇ ಪೂರ್ಣ ಸಿದ್ದತೆ, ಔಷಧಿಯ ಅವಶ್ಯವಿಲ್ಲ. ಇದರಿಂದ ತಾಯಿ, ಶಿಶುವಿಗೆ ನೋವು, ರಕ್ತ ಸ್ರಾವವಿಲ್ಲ.</p> <p style="text-align: justify; "><b>ಮೂಲ</b>:ಕುಟುಂಬ ವಾರ್ತೆ</p> <p style="text-align: justify; "> </p> </div>