অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಸಂರಕ್ಷಕವಾಗಿ ಪಂಚಾಯತುಗಳು

ಸಂರಕ್ಷಕವಾಗಿ ಪಂಚಾಯತುಗಳು

ಆಂಧ್ರ ಪ್ರದೇಶದ ರಂಗಾರೆಡ್ಡಿ ಜಿಲ್ಲೆಯ, ಶಾಬಾದ್ ಮಂಡಲದ ಸರಪಂಚರಾಗಿ ಚಿನ್ನಸೋಲಿಪೇಟ್ ಗ್ರಾಮದ ನರಸಿಂಗರಾವ್ ಅಧಿಕಾರ ವಹಿಸಿಕೊಂಡಾಗ, ಶಾಲೆಗಳನ್ನು ಮದುವೆ ಸಮಾರಂಭಗಳಿಗೆ, ಶಿಕ್ಷಣವನ್ನು ಬಿಟ್ಟು ಉಳಿವೆಲ್ಲಕ್ಕೆ ಬಳಸುತ್ತಿದ್ದುದನ್ನು ಅವರು ಮೊದಲಿಗೆ ಗಮನಿಸಿದರು. ಶಾಲೆಗಳನ್ನು ಸ್ವಚ್ಛಗೊಳಿಸಿ, ಅವುಗಳಿಗೆ ಕುಡಿಯುವ ನೀರು ಮತ್ತು ನೈರ್ಮಲ್ಯದ ಸವಲತ್ತುಗಳನ್ನು ಒದಗಿಸಿ ಶಾಲೆಗಳು ಶಿಕ್ಷಣ ಮತ್ತು ಮಕ್ಕಳ ಪಠ್ಯೇತರ ಚಟುವಟಿಕೆಗಳಿಗೆ ಮಾತ್ರ ಉಪಯೋಗವಾಗುವುದನ್ನು ಖಾತ್ರಿಪಡಿಸಿಕೊಂಡರು. ಇದಾದ ನಂತರ ತಿಂಗಳಿಗೊಮ್ಮೆ ಸಭೆ ಸೇರುವ ಶೈಕ್ಷಣಿಕ ಸಮಿತಿಯನ್ನು ಗ್ರಾಮದ ಯುವಕರು ಮತ್ತು ಗ್ರಾಮದ ಪಂಚಾಯಿತಿ ಸದಸ್ಯರುಗಳನ್ನೊಳಗೊಂಡಂತೆ ರಚಿಸಿ ತಮ್ಮ ತಮ್ಮ ಕ್ಷೇತ್ರಗಳಲ್ಲಿನ ಮಕ್ಕಳ ಶಿಕ್ಷಣವನ್ನು ಮೇಲ್ವಿಚಾರಣೆ ಮಾಡುವ ಜವಾಬ್ದಾರಿ ನೀಡಲಾಯಿತು.

ಪಂಚಾಯಿತಿ ರಾಜ್ ಸಚಿವಾಲಯ ಮತ್ತು NCPCR ಗಳಿಂದ ಸಂಘಟಿಸಲಾದ ಪಂಚಾಯತಿರಾಜ್ ಸಂಸ್ಥೆಗಳು ಮತ್ತು ಮಕ್ಕಳ ಹಕ್ಕುಗಳ ಸಮ್ಮೇಳನದಲ್ಲಿ ಕೆಲವೊಂದು ಪಂಚಾಯತುಗಳ ಅತ್ಯುತಮ ಆಚರಣೆಗಳನ್ನು ವಿನಿಯಮ ಮಾಡಿಕೊಳ್ಳಲಾಯಿತು. ಮಕ್ಕಳು ಎದುರಿಸುತ್ತಿರುವ ಪ್ರಬಲ ಸವಾಲುಗಳ ಸಂದರ್ಭದಲ್ಲಿ ಮಕ್ಕಳ ಹಕ್ಕುಗಳನ್ನು ಸಂರಕ್ಷಿಸುವ ಮತ್ತು ಮೇಲ್ವಿಚಾರಣೆ ಮಾಡುವ ಪಂಚಾಯತಿಗಳ ಪಾತ್ರದ ಮಹತ್ವವನ್ನು ಪ್ರಮುಖವಾಗಿ ಉಲ್ಲೇಖಿಸಲಾಯಿತು. 
ಆರೋಗ್ಯ ಮತ್ತು ಶಿಕ್ಷಣದ ಸವಲತ್ತುಗಳ ತೀವ್ರ ಕೊರತೆ ಎದುರಿಸುತ್ತಿರುವ ಭಾರತದಂತಹ ದೇಶದ ಗ್ರಾಮೀಣ ಪ್ರದೇಶಗಳಲ್ಲಿರುವ 30 ಕೋಟಿಗೂ ಹೆಚ್ಚಿನ ಮಕ್ಕಳು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ, ಪಂಚಾಯತಿರಾಜ್ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿಯಾದ ರಾಜವಂತ್ ಸಂಧು ತಮ್ಮ ತೀವ್ರ ಕಳವಳವನ್ನು ವ್ಯಕ್ತಪಡಿಸಿದರು. ಅಲ್ಲದೆ ನಿತ್ಯ ಎರಡು ಹೊತ್ತು ಊಟಕ್ಕೂ ಕೊರತೆಯಿರುವ ಬಹುಪಾಲು ಜನಕ್ಕೆ ಉತ್ತಮ ಗುಣಮಟ್ಟದ ಶಿಕ್ಷಣದ ಲಭ್ಯತೆಯಿಲ್ಲ ಎಂಬ ಅಂಶವನ್ನೂ ಉಲ್ಲೇಖಿಸಿದರು.


ಇತ್ತೀಚಿನ ನ್ಯಾಷನಲ್ ಫ್ಯಾಮಿಲಿ ಹೆಲ್ತ್ ಸಮೀಕ್ಷೆಯ ವರದಿಯಂತೆ ಭಾರತದ ಮಕ್ಕಳಲ್ಲಿ ಪ್ರತಿಶತ 47 ರಷ್ಟು ಅಪೌಷ್ಟಿಕತೆಯಿಂದ ಕೂಡಿದ್ದಾರೆ ಎಂಬ ಅಂಶವನ್ನೂ ಅವರು ಒತ್ತಿ ಹೇಳಿದರು.


ಮಕ್ಕಳ ಹಕ್ಕುಗಳನ್ನು ಸಂರಕ್ಷಿಸುವ ಕಾರ್ಯವನ್ನು ಪಂಚಾಯತರಾಜ್ ಸಂಸ್ಥೆಗಳು ಆರಂಭಿಸಿದ ಪ್ರದೇಶಗಳಲ್ಲೆಲ್ಲಾ, ಶಿಕ್ಷಣ, ಆರೋಗ್ಯ ಮತ್ತು ಮಕ್ಕಳ ಸಾಗಣೆ ಕ್ಷೇತ್ರಗಳಲ್ಲಿನ ಅಭಿವೃದ್ಧಿ ಸೂಚ್ಯಂಕಗಳು ಗಮನಾರ್ಹವಾಗಿ ಉತ್ತಮಗೊಂಡಿರುವುದನ್ನು ಸಮ್ಮೇಳನದಲ್ಲಿ ಎತ್ತಿ ಹೇಳಲಾಯಿತು, ಈ ವಾಸ್ತವಾಂಶವನ್ನು ಗುರುತಿಸುತ್ತಾ ಮಕ್ಕಳ ಹಕ್ಕುಗಳಿಗಾಗಿ ವ್ಯವಸ್ಥಿತವಾದ ಕ್ರಮ ಕೈಗೊಳ್ಳಲಾಗುವಂತೆ ಪಂಚಾಯತುಗಳನ್ನು ಸಬಲಗೊಳಿಸುವ ಕಾರ್ಯವನ್ನು ಸರ್ಕಾರ ಈಗ ಮಾಡಬೇಕಾದ ಅಗತ್ಯವಿದೆ ಎಂದು ಪಂಚಾಯತಿರಾಜ್ ಇಲಾಖೆಯ ಕೇಂದ್ರ ಸಚಿವ ಮಣಿಶಂಕರ ಅಯ್ಯರ್ ಹೇಳಿದರು. ’ಪಂಚಾಯಿತಿರಾಜ್ ಸಂಸ್ಥೆಗಳು ಮತ್ತು ಚುನಾಯಿತ ಸಂಸ್ಥೆಗಳಲ್ಲಿ ಮಕ್ಕಳ ಹಕ್ಕುಗಳ ಸಾಂಸ್ಥೀಕರಣಗೊಳಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಪಂಚಾಯತುಗಳಿಗೆ ಕಾರ್ಯಸೂಚಿಗಳು, ಕಾರ್ಯಕರ್ತರು ಹಾಗೂ ಆರ್ಥಿಕ ನೆರವನ್ನು ನೀಡಬೇಕು’ ಎಂದೂ ಹೇಳಿದರು.


ಸ್ಥಳೀಯ ಆಡಳಿತದಲ್ಲಿ ಮಕ್ಕಳ ಹಕ್ಕುಗಳನ್ನು ಸಾಂಸ್ಥೀಕರಣಗೊಳಿಸಲು NCPCR ಮಾಡಿದ ಕಾರ್ಯವನ್ನು ಮಾನ್ಯಪ್ರಧಾನ ಮಂತ್ರಿ ಶ್ರೀ.ಮನಮೋಹನಸಿಂಗ್ ಶ್ಲಾಘಿಸಿದರು. ಆಯೋಗದ ಕಾರ್ಯಚಟುವಟಿಕೆಗಳನ್ನು ಚರ್ಚಿಸಲು ಇತ್ತಿಚೆಗೆ ಆಯೋಜಿಸಲಾದ ಸಭೆಯಲ್ಲಿ ಪ್ರಧಾನಮಂತ್ರಿಯವರು ಕಾರ್ಯ ಚಟುವಟಿಕೆಗಳಿಗೆ ತಮ್ಮ ಬೆಂಬಲ ಘೋಷಿಸಿದರು.


ಮಕ್ಕಳ ಹಕ್ಕುಗಳ ಸಂರಕ್ಷಕನಾಗಿ ಪಂಚಾಯತ್ ಯಾವ ಪರಿಮಾಣದ ಪ್ರಭಾವ ಬೀರಲು ಸಾಧ್ಯ ಎಂಬುದನ್ನು ಪ್ರದರ್ಶಿಸಿದ ಶಾಬಾದ್ ಮಂಡಲ ಗ್ರಾಮ ಪಂಚಾಯತಿಯು, ಒಂದು ಆರೋಗ್ಯ ಸಮಿತಿಯನ್ನೂ ರಚಿಸಿ, ಅಂಗನವಾಡಿಗಳ ಮೇಲ್ವಿಚಾರಣೆ, ಮಕ್ಕಳ ಪೌಷ್ಟಿಕಾಂಶದ ಸ್ಥಿತಿ, ಎ.ಎನ್.ಎಂ ಗಳ ಕಾರ್ಯ, ವಿಟಾಮಿನ್ ಪೂರಕಗಳು ಹಾಗೂ ರೋಗನಿರೋಧಕಗಳನ್ನು ನೀಡುವಿಕೆ ಮತ್ತು ಸಂಬಂಧಿಸಿದ ಇತರ ಕಾರ್ಯಕ್ರಮಗಳ ಆಡಳಿತವನ್ನು ಅದಕ್ಕೆ ನೀಡಿತು. ಮಕ್ಕಳ ಹಕ್ಕುಗಳು ಪಂಚಾಯಿತಿಯ ಪ್ರಮುಖ ಚಟುವಟಿಕೆಯಾದ ಮೇಲೆ ಶಾಬಾದ್ ಮಂಡಲದಲ್ಲಿ ಉದಾಹರಣೆಗೆ ಒಂದಾದರೂ ಬಾಲದುಡಿಮೆಯ ಪ್ರಕರಣ ಇಲ್ಲ ಎಂದು ರಾವ್ ಹೆಮ್ಮೆಯಿಂದ ಹೇಳುತ್ತಾರೆ.


ಮೇಘಾಲಯದಲ್ಲಿ ಗ್ರಾಮಗಳಿಗಾಗಲೀ, ಪೋಲೀಸರಿಗಾಗಲೀ ಗಮನಕ್ಕೆ ಬಾರದೆ 132 ಮಕ್ಕಳು ಕಾಣೆಯಾಗಿರುವ ಪ್ರಕರಣಗಳನ್ನು ಪಂಚಾಯತಿರಾಜ್ ಸಂಸ್ಥೆಗಳು ವರದಿಮಾಡಿವೆ. ಈಗ ಈ ಪ್ರಕರಣಗಳ ತನಿಖೆಯನ್ನು ಸಂಯುಕ್ತ ರಾಷ್ಟ್ರಗಳ ಮಾದಕ ದ್ರವ್ಯ ಮತ್ತು ಅಪರಾಧ ವಿಭಾಗದ ಆಂಟಿ ಹ್ಯೂಮನ್ ಟ್ರಾಫಿಕಿಂಗ್ ಶಾಖೆಯು ಕೈಗೆತ್ತಿಕೊಂಡಿದೆ.


NCPCR ನಿಂದ ಉಲ್ಲೇಖಿತರಾಗಿ ಮಕ್ಕಳ ಹಕ್ಕುಗಳಿಗಾಗಿ ಕಾರ್ಯನಿರ್ವಹಿಸುತ್ತಿರುವ ಶ್ರೀ ರಾವ್ ಅವರು ಈಗ ದೇಶದ 600 ಗ್ರಾಮ ಪಂಚಾಯತಿಗಳನ್ನು ಪ್ರತಿನಿಧಿಸುವ ಸದಸ್ಯರಾಗಿದ್ದಾರೆ. ಈ 600 ಗ್ರಾಮ ಪಮಚಾಯಿತಿಗಳು ಮಕ್ಕಳ ಹಕ್ಕುಗಳ ಬಗ್ಗೆ ಕಾಳಜಿ ಹೊಂದಿದ್ದು, ತಮ್ಮ ಆಸಕ್ತಿಯೆಡೆಗೆ ಕೆಲಸ ಮಾಡಲು ಮತ್ತು ಮಕ್ಕಳ ಹಕ್ಕುಗಳ ವಿಷಯವಾಗಿ ಕೆಲಸ ನಿರ್ವಹಿಸುತ್ತಿರುವ ಸರ್ಕಾರಿ ಸಂಸ್ಥೆಗಳ ಮೇಲ್ವಿಚಾರಣೆ ನಡೆಸಲು ವ್ಯವಸ್ಥೆಗಳನ್ನು ರೂಪಿಸಿದ್ದು, ಇವು ದೇಶದ ಚುನಾಯಿತ ಪ್ರತಿನಿಧಿಗಳನ್ನು ತರಬೇತುಗೊಳಿಸುವ ಸಂಪನ್ಮೂಲ ಕೇಂದ್ರಗಳಾಗಬಲ್ಲವು ಎಂದು NCPCR ನ ಅಧ್ಯಕ್ಷರು ಹೇಳಿದ್ದಾರೆ.


ಉದಾಹರಣೆಗೆ, ಪಂಚಾಯತಿರಾಜ್ ಸಂಸ್ಥೆಗಳು ಮಕ್ಕಳ ಹಕ್ಕುಗಳ ವಿಷಯಾಂಶಗಳನ್ನು ಅಂತರ್ಗತ ಮಾಡಿಕೊಳ್ಳಲು ಸಹಾಯ ಮಾಡಲು, ಬೆಂಗಳೂರಿನ ಚೈಲ್ಡ್ ರೈಟ್ಸ್ ಟ್ರಸ್ಟ್, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತಿರಾಜ್ ಇಲಾಖೆಯ ಬೆಂಬಲದೊಂದಿಗೆ ವಿಶೇಷ ಗ್ರಾಮಸಭೆಗಳನ್ನು ನಡೆಸುತ್ತಿದೆ. “ಕರ್ನಾಟಕದ ಪಂಚಾಯತಿರಾಜ್ ಅಧಿನಿಯಮವು ಮಕ್ಕಳ ಕಲ್ಯಾಣ ಹಾಗೂ ಅಪೌಷ್ಟಿಕತೆ ಕುರಿತಾದ ವಿಷಯಾಂಶಗಳು ಸೇರಿದಂತೆ ಆರೋಗ್ಯಪೂರ್ಣ ಗ್ರಾಮ ಪಂಚಾಯತಿಗೆ ಪಂಚಾಯತಿರಾಜ್ ಸಂಸ್ಥೆಗಳನ್ನೇ ಸ್ಪಷ್ಟವಾಗಿ ಹೊಣೆಗಾರರನ್ನಾಗಿ ಮಾಡಿದೆ. ಸ್ಥಳೀಯ ಆಡಳಿತ ಸಂಸ್ಥೆಗಳೇ ಮಕ್ಕಳ ಕಲ್ಯಾಣಕ್ಕೆ ನೇರಹೊಣೆ ಎಂಬ ಸ್ಪಷ್ಟ ನಿಲುವು ಇದಾಗಿದೆ” ಎಂದು ಚೈಲ್ಡ್ ರೈಟ್ಸ್ ಟ್ರಸ್ಟ್ ನ ಶ್ರೀ ವಾಸು ದೇವಶರ್ಮಾ ಸುಡಿಯುತ್ತಾರೆ. “ಸ್ಪಷ್ಟವಾಗಿ ನಿರೂಪಿತವಾದ ಶಾಸನ ಬದ್ಧ ಪಾತ್ರಗಳನ್ನು ಹೊಂದಿದ ಗ್ರಾಮ ಸಮಿತಿಗಳನ್ನು ಗ್ರಾಮ ಪಂಚಾಯಿತಿಗಳು ಈಗಾಗಲೇ ರಚಿಸಿರುವುದು ಇಂಥಹ ಸಮಿತಿಗಳ ಮೂಲಕ ಮಕ್ಕಳ ಹಕ್ಕುಗಳನ್ನು ಪರಿಚಯಿಸುವ ನಮ್ಮ ಕಾರ್ಯ ಸುಲಭವಾಗಿದೆ” ಎಂದು ಪುಣೆಯ   SEDT ಸಂಸ್ಥೆಯ ಸೂರ್ಯಕಾಂತ ಕುಲಕರ್ಣಿ ಅಭಿಪ್ರಾಯಪಡುತ್ತಾರೆ.


ಮಕ್ಕಳ ಜನನ ನೋಂದಣಿ, ವಿವಾಹವಾಗುವಾಗ ವಯಸ್ಸು, ಶಾಲೆಗೆ ಹೋಗುವ ಮತ್ತು ಶಾಲೆ ಬಿಟ್ಟ ಮಕ್ಕಳ ವಿವರ, ರೋಗನಿರೋಧಕ ನೀಡಿದ ಮತ್ತು ಆರೋಗ್ಯ ವರದಿ ಕಾರ್ಡುಗಳು ಮುಂತಾದ ಮಕ್ಕಳ ಕುರಿತಾದ ಸ್ಥಳೀಯ ಅಂಕಿಅಂಶಗಳನ್ನು ಸಂಗ್ರಹಿಸಿ ವಿಶ್ಲೇಷಿಸುವುದರ ಮಹತ್ವದ ಬಗ್ಗೆ ಜಾಗೃತಿ ನಿರ್ಮಾಣ ಮಾಡುವ ಕಾರ್ಯದಿಂದ ಚುನಾಯಿತ ಪ್ರತಿನಿಧಿಗಳ ಮಕ್ಕಳ ಹಕ್ಕುಗಳ ಕುರಿತಾದ ತರಬೇತಿಗಳು ಬಹುತೇಕವಾಗಿ ಪ್ರಾರಂಭವಾಗುತ್ತವೆ. ಶಾಲೆಗಳಿಗೆ ಮಕ್ಕಳ ಹಾಜರಾತಿ, ಶಾಲೆಗಳ ಭೌತಿಕ ಸೌಲಭ್ಯಗಳ ವಿಸ್ತರಣೆಗೆ ಹೆಚ್ಚುತ್ತಿರುವ ಒತ್ತಾಯ, NREGA ತರಹದ ಕಾರ್ಯಯೋಜನೆಗಳು ಮಕ್ಕಳನ್ನು ನೇಮಿಸಿಕೊಳ್ಳುತ್ತಿಲ್ಲವೆಂದು ಖಚಿತ ಪಡಿಸಿಕೊಳ್ಳುವಿಕೆ, ಮಧ್ಯಾನ್ಹದ ಬಿಸಿಯೂಟ ಕಾರ್ಯಕ್ರಮದ ಮೂಲಕ ಶಾಲೆ ಮತ್ತು ಅಂಗನವಾಡಿ ಕೇಂದ್ರಗಳ ಮಕ್ಕಳ ಆಹಾರ ಪೋಷಕಾಂಶಗಳು ಪೂರೈಕೆಯಾಗುತ್ತಿರುವುದನ್ನು ಖಾತ್ರಿಪಡಿಸಿಕೊಳ್ಳುವಿಕೆ ಮುಂತಾದವುಗಳ ಮೇಲ್ವಿಚಾರಣೆ ಮಾಡುವ ಮಹತ್ವದ ಪಾತ್ರವನ್ನು ಗ್ರಾಮ ಪಂಚಾಯಿತಿಗಳು ನಿರ್ವಹಿಸಬಲ್ಲವು.


“ನಾನು ಸರಪಂಚನಾಗಿ ಅಧಿಕಾರ ವಹಿಸಿಕೊಂಡಾಗ ಮಕ್ಕಳ ಸಂರಕ್ಷಣೆಯ ಶಪಥ ಸ್ವೀಕರಿಸಿದೆ. ಮಕ್ಕಳ ಕಲ್ಯಾಣದ ಆಧಾರದ ಮೇಲೆ ಗ್ರಾಮದ ಭವಿಷ್ಯ ನಿರ್ಧಾರವಾಗುತ್ತದೆ” ಎಂದು ಮಧ್ಯಪ್ರದೇಶದ ತಿಕಮ್ ಗಡ್ ತಾಲ್ಲೂಕಿನ ಹೀರಾನಗರ್ ಗ್ರಾಮದ ಸರಪಂಚರಾದ ಮಿಂತ್ ರಾಮ್ ಯಾದವ್ ಸಮ್ಮೇಳನದಲ್ಲಿ ಹೇಳಿದರು. ಗ್ರಾಮೀಣ ಭಾರತದ 30 ಕೋಟಿ ಮಕ್ಕಳಿಗೆ ಅವರುಗಳ ಗ್ರಾಮ ಪಂಚಾಯತಿಗಳ ರಕ್ಷಾಕವಚವು ಉತ್ತಮ ಜೀವನ ನೀಡುವ ಆಶಾಕಿರಣವಾಗಿದೆ.

ಮೂಲ: ಪೋರ್ಟಲ್ ತಂಡ

ಕೊನೆಯ ಮಾರ್ಪಾಟು : 2/15/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate