ಸಾಂಬಾರ ಪದಾರ್ಥಗಳಲ್ಲಿ ಬಹುಮುಖ್ಯ ಸ್ಥಾನ ಪಡೆದ ಅರಿಶಿಣ ಕೇವಲ ಅಡುಗೆಗಷ್ಟೇ ಅಲ್ಲದೆ, ಮನೆಮದ್ದಾಗಿಯೂ ಪ್ರಸಿದ್ಧಿ. ಅರಿಶಿಣ ಸಂಧಿವಾತಕ್ಕೆ ದಿವ್ಯೌಷಧ ಎಂಬುದು ಇತ್ತೀಚಿನ ಸಂಶೋಧನೆಯಿಂದ ದೃಢವಾಗಿದೆ. ನಮ್ಮಲ್ಲಿ ಬಹುತೇಕ ಮಂದಿಗೆ ಆಗಿಂದಾಗ್ಗೆ ಸಂಧಿನೋವು ಮತ್ತು ಬೆನ್ನು ನೋವು ಕಾಣಿಸಿಕೊಳ್ಳಬಹುದು. ಕೆಲವು ಸಲ ನೋವು ತನ್ನಿಂತಾನೆ ಹೆಚ್ಚುತ್ತದಲ್ಲದೆ, ಉಪಶಮನವಾಗದೆಯೂ ಇರಬಹುದು. ಈ ದೀರ್ಘಕಾಲೀನ ನೋವು ಸ್ಥೂಲಕಾಯ, ಹೃದಯದ ಕಾಯಿಲೆ ಮತ್ತು ಕ್ಯಾನ್ಸರ್ಗೆ ಕೂಡ ಕಾರಣವಾಗಬಲ್ಲದು.
ಸಂಧಿವಾತ ಮತ್ತು ಬೆನ್ನು ನೋವು ಉಂಟಾಗಲು ಕಾರಣ ಏನೆಂದರೆ ಸಂಧಿಗಳ ಮೂಳೆಗಳ ಪರಸ್ಪರ ಉಜ್ಜುವಿಕೆಯಿಂದ ಉಂಟಾಗುವ ಸವೆತ.
ಅರಿಶಿಣ ಸಂಧೀವಾತಕ್ಕೆ ರಾಮಬಾಣವಾಗಿದೆ. ಇದು ನೋವು ನಿವಾರಕ ಸಾಧನವೂ ಹೌದು. ಉರಿಯೂತದಿಂದ ಉಂಟಾಗುವ ಹಾನಿಯನ್ನ್ನೂ ಸರಿಪಡಿಸುತ್ತದೆ. ಅರಿಶಿಣದಲ್ಲಿರುವ ನೋವು ನಿವಾರಕ ಅಂಶಗಳು ಸಂಧಿವಾತದ ಮೇಲೆ ಬಹುವಾಗಿ ಪರಿಣಾಮ ಬೀರುತ್ತವೆ. ಪ್ರತಿದಿನದ ಆಹಾರದಲ್ಲಿ ಅರಿಶಿಣ ಬಳಸುವುದು, ಆಗಾಗ ಅರಿಶಿಣದ ಕಷಾಯ ಮಾಡಿ ಕುಡಿಯುವುದು ಇತ್ಯಾದಿ ಮಾಡುವುದರಿಂದ ಸಂಧಿವಾತದ ಸಮಸ್ಯೆಯೇ ಬಾರದಂತೆ ಎಚ್ಚರಿಕೆ ವಹಿಸಬಹುದು ಎಂಬುದು ತಜ್ಞರ ಅಭಿಪ್ರಾಯ.
ಈಗಾಗಲೇ ಸುಮಾರು 20ಕ್ಕೂ ಹೆಚ್ಚು ದೇಶಗಳು ಅರಿಶಿಣದಲ್ಲಿರುವ ಔಷಧೀಯ ಗುಣಗಳನ್ನು ಕಂಡುಕೊಂಡಿವೆ. ಅರಿಶಿಣದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿರುವ ಕಾರಣ, ಆಹಾರದಲ್ಲಿ ಅದನ್ನು ಉಪಯೋಗಿಸುವುದರಿಂದ ದೇಹದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಅಲ್ಲದೆ, ಅಲರ್ಜಿಯಂಥ ಚರ್ಮದ ಸೋಂಕು ರೋಗಗಳನ್ನೂ ಅರಿಶಿಣ ನಿವಾರಿಸುತ್ತದೆ. ಚರ್ಮದ ಮೇಲಾಗುವ ಕಪ್ಪು ಕಲೆ ಅರಿಶಿಣ ಲೇಪನದಿಂದ ಗುಣಮುಖವಾಗುತ್ತದೆ. ಒಂದು ಲೋಟ ನೀರಿಗೆ ಒಂದು ಚಿಟಕಿ ಅರಿಶಿಣ ಹಾಕಿ ಕುಡಿಯುತ್ತಿದ್ದರೆ ದೇಹದಲ್ಲಿರುವ ಕೊಬ್ಬಿನಂಶ ಕಡಿಮೆಯಾಗುತ್ತದೆ. ಕ್ಯಾನ್ಸರ್ ನಿವಾರಿಸುವ ಶಕ್ತಿಯೂ ಅರಿಶಿಣಕ್ಕಿದೆ. ಆರೋಗ್ಯಕರ ರಕ್ತಕಣಗಳನ್ನು ಹೆಚ್ಚಿಸಲು ಸಹಕಾರಿಯಾಗಿದೆ. ಸ್ಮರಣಶಕ್ತಿಯನ್ನು ಹೆಚ್ಚಿಸುವ ಸಾಮರ್ಥ್ಯ ಇದಕ್ಕಿರುವುದರಿಂದ ಅಲ್ಜಮೈರ್ನಂಥ ಮೆದುಳಿಗೆ ಸಂಬಂಧಿಸಿದ ಕಾಯಿಲೆಗಳು ಬರದಂತೆ ತಡೆಯುತ್ತದೆ.
ಮೂಲ: ವಿಕ್ರಮ
ಕೊನೆಯ ಮಾರ್ಪಾಟು : 3/20/2020