অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಆನಾರೋಗ್ಯದ ಮೂಲವೇ ಆಹಾರ

ಆನಾರೋಗ್ಯದ ಮೂಲವೇ ಆಹಾರ

ಏಪ್ರಿಲ್ 7ರಂದು ವಿಶ್ವ ಆರೋಗ್ಯ ದಿನ. ಆದರೆ ಆರೋಗ್ಯ ದಿನವು ಒಂದು ಆಚರಿಸಿ ಮುಗಿಯುವಂಥದ್ದಲ್ಲ. ಪ್ರತಿ ದಿನವೂ ನಾವು ಆರೋಗ್ಯದ ಬಗ್ಗೆ ಕಾಳಜಿ ವಹಿಸಲೇ ಬೇಕು. ಈ ಬಾರಿಯ ಡಬ್ಲ್ಯೂಎಚ್‌ಒವು (ವಿಶ್ವ ಆರೋಗ್ಯ ಸಂಸ್ಥೆ) 'ಆಹಾರ ಸುರಕ್ಷತೆ: ತೋಟದಿಂದ ಪ್ಲೇಟ್‌ವರೆಗೆ, ಆಹಾರವನ್ನು ಸುರಕ್ಷಿತಗೊಳಿಸಿ' ಎಂದು ಘೋಷಿಸಿದೆ. ಇದು ಅತ್ಯಂತ ಸೂಕ್ತ ಹಾಗೂ ಪ್ರಸ್ತುತವಾಗಿದೆ.

ಹೆಚ್ಚುತ್ತಿರುವ ಜಾಗತೀಕರಣ, ಏರುತ್ತಿರುವ ಆಹಾರ ರಫ್ತು ಹಾಗೂ ಆಹಾರ ಸರಪಳಿಯಲ್ಲಿ ಹೆಚ್ಚುತ್ತಿರುವ ಸಂಕೀರ್ಣತೆಯಂತಹ ಅಂಶಗಳಿಂದಾಗಿ ಆಹಾರ ಸುರಕ್ಷತೆ ಪ್ರಮುಖ ಸವಾಲಾಗಿದೆ. ಅದರಲ್ಲಿಯೂ ವಿಶೇಷವಾಗಿ ಭಾರತದಂತಹ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಲ್ಲಿ ಈ ಸಮಸ್ಯೆ ಗಂಭೀರವಾಗಿ ತಲೆದೋರುತ್ತಿದೆ. ಪ್ರತಿ ವರ್ಷ, ಜಗತ್ತಿನಾದ್ಯಂತ ಅಸುರಕ್ಷಿತ ಆಹಾರ ಸೇವನೆಯಿಂದಾಗಿ ಎರಡು ದಶಲಕ್ಷ ಜನರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ.

ಉತ್ತಮ ಆಹಾರ, ಆರೋಗ್ಯವನ್ನು ಪೋಷಿಸಿದರೆ, ಅಸುರಕ್ಷಿತ ಆಹಾರ ದುಷ್ಪರಿಣಾಮವನ್ನು ಉಂಟು ಮಾಡುತ್ತದೆ.

ಹಾನಿಕಾರಕ ಬ್ಯಾಕ್ಟೀರಿಯ, ರೋಗಾಣುಗಳು, ಪರಾವಲಂಬಿಗಳು, ವಿಷಾಣುಗಳು ಹಾಗೂ ರಾಸಾಯನಿಕಗಳಿರುವಂತಹ ಆಹಾರ ಮಾನವರಲ್ಲಿ ಅತಿಸಾರ ಹಾಗೂ ಪಾರ್ಶ್ವವಾಯುವಿನಿಂದ ಹಿಡಿದು ಕ್ಯಾನ್ಸರ್, ಹೃದ್ರೋಗ ಹಾಗೂ ಸಂಧಿವಾತದಂತಹ 200ಕ್ಕೂ ಹೆಚ್ಚಿನ ಸಂಖ್ಯೆಯ ಕಾಯಿಲೆಗಳನ್ನು ಉಂಟು ಮಾಡಬಲ್ಲದು. ಗಂಭೀರ ಅನಾರೋಗ್ಯ ಪರಿಸ್ಥಿತಿಗಳಲ್ಲದೆ ಹೆಚ್ಚು ಲೋಹಾಂಶವಿರುವಂತಹ ಅಥವಾ ಸ್ವಾಭಾವಿಕವಾಗಿ ಉಂಟಾಗುವಂತಹ ವಿಷಾಣುಗಳಿಂದ ಉಂಟಾಗುವ ದೀರ್ಘಾವಧಿ ಆಹಾರ ಪ್ರಾಶನ, ನರಗಳಿಗೆ ಸಂಬಂಧಿಸಿದಂತಹ ಸಮಸ್ಯೆಗಳು ಅಥವಾ ಕ್ಯಾನ್ಸರ್‌ನಂತಹ ಅನಾರೋಗ್ಯವನ್ನು ಉಂಟು ಮಾಡಬಲ್ಲದು.

ವಿಷಾಹಾರ ಸೇವನೆಯಿಂದಾಗಿ ಸಂಭವಿಸುವಂತಹ ಕಾಯಿಲೆಗಳು ವಿಷಕಾರಿ ಅಥವಾ ಸೋಂಕು ಉಂಟು ಮಾಡುತ್ತವೆ. ಹೊಟ್ಟೆ ನೋವು, ವಾಂತಿ ಹಾಗೂ ಅತಿಸಾರ ಇದರ ಸಾಮಾನ್ಯ ಕುರುಹುಗಳು. ಕಲ್ಮಶ ಆಹಾರ ಸೇವಿಸಿದ 6-72 ಗಂಟೆಗಳೊಳಗೆ ಸಮಸ್ಯೆಗಳು ಕಂಡು ಬರುತ್ತದೆ. ಬಹುಪಾಲು ಜನರು ತಮ್ಮ ಜೀವನದ ಯಾವುದಾದರೂ ಒಂದು ಹಂತದಲ್ಲಿ ವಿಷಾಹಾರ ಸೇವನೆಯಿಂದಾಗಿ ಸಂಭವಿಸುವಂತಹ ಕಾಯಿಲೆಯನ್ನು ಎದುರಿಸುವ ಸಾಧ್ಯತೆಗಳಿದ್ದರೂ ಮಕ್ಕಳು, ಗರ್ಭಿಣಿಯರು ಹಾಗೂ ಹಿರಿಯರಲ್ಲಿ ಇದು ಅಪಾಯವನ್ನು ಉಂಟು ಮಾಡಬಹುದು. ಏಕೆಂದರೆ ಇವರ ರೋಗನಿರೋಧಕ ಶಕ್ತಿ ಕಡಿಮೆಯಿರುತ್ತದೆ.

ಭಾರತದ ಗ್ರಾಮಗಳು ಹಾಗೂ ನಗರ ಪ್ರದೇಶಗಳಲ್ಲಿರುವ ಕೊಳಗೇರಿಗಳಲ್ಲಿ ಈಗಲೂ ಸರಿಯಾದ ಚರಂಡಿ ವ್ಯವಸ್ಥೆಯಿಲ್ಲ. ಇದರಿಂದಾಗಿ ಈಗಲೂ 60 ಕೋಟಿ ಜನರು ತೆರೆದ ಸ್ಥಳಗಳಲ್ಲಿ ಮಲ ವಿಸರ್ಜನೆ ಮಾಡುವ ಅಭ್ಯಾಸವನ್ನು ಮುಂದುವರಿಸಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ, ಆಹಾರಕ್ಕೆ ಸಂಬಂಧಿಸಿದ ಕಾಯಿಲೆಗಳು ಹರಡುವುದು ಸುಲಭ. ಇಂತಹ ಕಾಯಿಲೆಗಳ ಪೈಕಿ ತೀವ್ರ ಜಠರ ರೋಗ ಅತ್ಯಂತ ಸಾಮಾನ್ಯವಾಗಿದ್ದು, ಇದು ವಾಂತಿ ಹಾಗೂ ಭೇದಿಗೆ ಕಾರಣವಾಗುತ್ತದೆ ಹಾಗೂ ಈ ಮೂಲಕ ನಿರ್ಜಲೀಕರಣ ಉಂಟಾಗಿ, ಗಂಭೀರ ಅನಾರೋಗ್ಯಕ್ಕೆ ದಾರಿಯಾಗುತ್ತದೆ. ಇತರೆ ಸಮಸ್ಯೆಗಳ ಪೈಕಿ ಕ್ಯಾಂಪಿಲೊಬ್ಯಾಕ್ಟೀರಿಯೋಸಿಸ್, ಇ.ಕೊಲಿ, ಹೆಪಟೈಟಿಸ್ ಎ, ನೊರೊವೈರಸ್ ಸೋಂಕು, ಸಾಲ್ಮೊನೆಲ್ಲೊಸಿಸ್ ಹಾಗೂ ಶಿಗೆಲ್ಲೋಸಿಸ್ ಸಮಸ್ಯೆಗಳು ಸೇರಿವೆ. ಮಲಿನ ನೀರು ಸೇವನೆ ಕಾಲೆರಾ ಹಾಗೂ ಟೈಫಾಯ್ಡ್‌ಗಳನ್ನು ಉಂಟು ಮಾಡಬಲ್ಲದು. ಉತ್ತರ ಭಾರತದಲ್ಲಿ, ಅಸುರಕ್ಷಿತ ಆಹಾರ ಸೇವನೆಯಿಂದಾಗಿ, ವೈರಲ್ ಹೆಪಟೈಟಿಸ್ ಎ ಹಾಗೂ ಇ ಕಾಯಿಲೆ ಸಾಮಾನ್ಯವಾಗಿದೆ.

ಮುನ್ನೆಚ್ಚರಿಕೆ

 


ಸೂಕ್ತ ಆಹಾರ ತಯಾರಿಕೆ ಹಾಗೂ ಸೇವನೆ ಪಾಲನೆಯ ಮೂಲಕ ಬಹುಪಾಲು ಆಹಾರ ಸಂಬಂಧಿತ ಕಾಯಿಲೆಗಳನ್ನು ತಡೆಗಟ್ಟಬಹುದು. ಈ ಪ್ರಕಾರ ಸ್ವಚ್ಛತೆ ಹಾಗೂ ಆರೋಗ್ಯ/ನೈರ್ಮಲ್ಯಗಳು ನಾವು ತೆಗೆದುಕೊಳ್ಳಬಹುದಾದಂತಹ ಅತ್ಯಂತ ಮುಖ್ಯವಾದ ಅಂಶ. ಆಹಾರ ಸೇವಿಸುವುದಕ್ಕೂ ಮುನ್ನ ಹಾಗೂ ಶೌಚಕ್ಕೆ ಹೋಗಿ ಬಂದ ನಂತರ ಕೈಗಳನ್ನು ಚೆನ್ನಾಗಿ ತೊಳೆದುಕೊಳ್ಳುವುದು ಬಹುಪಾಲು ಅಪಾಯವನ್ನು ಕಡಿಮೆಗೊಳಿಸುತ್ತದೆ. ಅಡುಗೆ ಮನೆಯನ್ನು ಕೀಟಗಳು ಹಾಗೂ ಸಾಕುಪ್ರಾಣಗಳಿಂದ ದೂರವಿರಿಸುವುದು ಮುಖ್ಯ. ಏಕೆಂದರೆ ಇವುಗಳು ರೋಗಾಣುಗಳನ್ನು ಹರಡುತ್ತವೆ. ಆದಾಗ್ಯೂ, ಆಹಾರವನ್ನು ಮೂರು ದಿನಗಳಿಗಿಂತ ಹೆಚ್ಚು ದಿನಗಳವರೆಗೆ ರೆಫ್ರಿಜರೇಟರ್‌ನಲ್ಲಿ ಶೇಖರಿಸಿಟ್ಟು ಸೇವಿಸುವುದನ್ನು ತಪ್ಪಿಸಬೇಕು. ಜತೆಗೆ, ಈ ರೀತಿ ಶೇಖರಿಸಿಟ್ಟ ಆಹಾರವನ್ನು ಗರಿಷ್ಠ ಒಂದು ಬಾರಿ ಮಾತ್ರ ಬಿಸಿ ಮಾಡಿ ತಿನ್ನಬಹುದು.

ಅಡುಗೆ ಮಾಡುವಾಗ, ಶೇಖರಣೆ ಹಾಗೂ ಆರೋಗ್ಯಕರ ಅಭ್ಯಾಸಗಳನ್ನು ಸರಿಯಾಗಿ ಪಾಲಿಸುವುದರ ಮೂಲಕ ಆಹಾರ ಸಂಬಂಧಿತ ಕಾಯಿಲೆಗಳಿಂದ ದೂರವಿರಬಹುದು.

ಮೂಲ: ಡಾ. ಧೀರಜ್ ಕಾರಂತ್

ಕೊನೆಯ ಮಾರ್ಪಾಟು : 2/15/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate