ಗೋಧಿ ಅತ್ಯಂತ ಆರೋಗ್ಯಕರವಾದ ಧಾನ್ಯ. ಉತ್ತರ ಭಾರತೀಯರಿಗೆ ಹೋಲಿಸಿದರೆ ದಕ್ಷಿಣ ಭಾರತೀಯರಲ್ಲಿ ಗೋಧಿ ಸೇವನೆಯ ಪ್ರಮಾಣ ಕಡಿಮೆಯೇ. ಅಕ್ಕಿ ಬಳಕೆ ಹೆಚ್ಚಿರುವ ಕಾರಣಕ್ಕಾಗಿ ನಮ್ಮಲ್ಲಿ ಗೋಧಿ ಉಪಯೋಗ ಅಷ್ಟಕ್ಕಷ್ಟೇ. ಆದರೆ ಇತ್ತೀಚೆಗೆ ಗೋಧಿಯ ಉಪಯೋಗ ಅರಿತು ಹಲವರು ಪ್ರತಿದಿನವೂ ಗೋಧಿಯಿಂದ ತಯಾರಿಸಿದ ತಿನಿಸುಗಳನ್ನು ಸೇವಿಸಲು ತೊಡಗಿದ್ದಾರೆ. ಅದರಲ್ಲೂ ಮಧುಮೇಹ ಮತ್ತು ಬೊಜ್ಜು ನಗರ ಪ್ರದೇಶದ ಬಹುತೇಕ ಜನರ ಸಮಸ್ಯೆಯಾಗಿರುವುದರಿಂದ ಗೋಧಿ ಒಂದರ್ಥದಲ್ಲಿ ಅವರಿಗೆಲ್ಲ ಸಂಜೀವಿನಿಯಂತೆ ಕಂಡಿದೆ ಎಂದರೂ ತಪ್ಪಾಗಲಿಕ್ಕಿಲ್ಲ.
ಗೋಧೀ ಹಿಟ್ಟಿನಿಂದ ತಯಾರಿಸಿದ ಚಪಾತಿ ಅಥವಾ ರೊಟ್ಟಿಯನ್ನು ಸೇವಿಸುವುದರಿಂದ ದೇಹದಲ್ಲಿನ ಕೊಬ್ಬಿನಂಶ ಕಡಿಮೆಯಾಗಿ ಬೊಜ್ಜು ನಿವಾರಣೆಯಾಗುತ್ತದೆ. ಅಲ್ಲದೆ ಮಧುಮೇಹದ ಸಮಸ್ಯೆ ಇರುವವರೂ ಅನ್ನಕ್ಕೆ ಬದಲಾಗಿ ಚಪಾತಿ ಸೇವಿಸುವುದರಿಂದ ಕಾಯಿಲೆ ಹತೋಟಿಗೆ ಬರುತ್ತದೆ.
ಮಹಿಳೆಯರಿಗೆ ಗೋಧಿಯಿಂದ ಉಪಯೋಗ ಹೆಚ್ಚು. ಏಕೆಂದರೆ ಗೋಧಿ ಪದಾರ್ಥ ಸೇವಸುವುದರಿಂದ ಸ್ತನ ಕ್ಯಾನ್ಸರ್ಅನ್ನು ಸಹ ತಡೆಯಬಹುದು ಎಂದು ಇತ್ತೀಚಿನ ಸಂಶೋಧನೆಗಳು ಹೇಳಿವೆ. ಇದು ದೇಹದಲ್ಲಿರುವ ಅನಗತ್ಯ ಕೊಬ್ಬಿನಂಶಗಳನ್ನು ಕರಗಿಸುವುದಲ್ಲದೆ, ದೇಹ ಹೆಚ್ಚು ಕ್ರಿಯಾಶೀಲವಾಗಿರುವಂತೆ ನೋಡಿಕೊಳ್ಳುತ್ತದೆ.
ಮಕ್ಕಳಿಗೆ ಗೋಧಿ ಪದಾರ್ಥಗಳನ್ನು ಹೆಚ್ಚು ನೀಡುವುದರಿಂದ ಅಸ್ತಮಾ ಸಮಸ್ಯೆಯಿದ್ದರೆ ನಿವಾರಣೆಯಾಗುತ್ತದೆ ಎಂಬುದನ್ನು ಇತ್ತೀಚಿಗೆ ಅಮೆರಿಕದಲ್ಲಿ ನಡೆದ ಸಂಶೋಧನೆಯೊಂದು ಬಯಲುಮಾಡಿದೆ.
ಅತಿಯಾದ ರಕ್ತದೊತ್ತಡವನ್ನು ಕಡಿಮೆ ಮಾಡುವುದಲ್ಲದೆ, ಮಹಿಳೆಯರಲ್ಲಿ ಋತುಚಕ್ರಕ್ಕೆ ಸಂಬಂಧಿಸಿದಂತೆ ಯಾವುದಾದರೂ ಸಮಸ್ಯೆಗಳಿದ್ದರೆ ಗೋಧಿ ಆಹಾರ ಸೇವನೆಯಿಂದ ವಾಸಿಯಾಗುತ್ತದೆ.
ಹೃದಯಾಘಾತವನ್ನೂ ನಿಯಂತ್ರಿಸುವ ಶಕ್ತಿ ಗೋಧಿಯಿಂದ ತಯಾರಿಸಿದ ಪದಾರ್ಥಗಳಿಗಿದೆ. ಆದ್ದರಿಂದಲೇ ಮಧುಮೇಹ, ರಕ್ತದೊತ್ತಡ, ಬೊಜ್ಜು, ಹೃದ್ರೋಗ ಯಾವುದೇ ಸಮಸ್ಯೆ ಇದ್ದರೂ ಪಥ್ಯದ ವಿಚಾರ ಬಂದಾಗ ತಜ್ಞರು ಹೇಳುವುದು ಗೋಧಿ ಸೇವನೆಯ ಬಗ್ಗೆಯೇ.
ದೇಹಕ್ಕೆ ಶಕ್ತಿ ನೀಡುವ ಜೊತೆಗೆ ಅನಗತ್ಯ ಕೊಬ್ಬಿನಂಶವನ್ನು ಹೊರಹಾಕಿ, ದೇಹ ಚಟುವಟಿಕೆಯಿಂದ ಇರುವಂತೆ ಮಾಡುವುದಲ್ಲದೆ, ದೇಹದ ಸೌಂದರ್ಯವನ್ನೂ ಹೆಚ್ಚಿಸುವ ಗುಣ ಗೋಧಿಗಿದೆ. ಪ್ರತಿ ದಿನ ಮಧ್ಯಾಹ್ನ ಮತ್ತು ರಾತ್ರಿ ಅನ್ನ ಸೇವನೆಗೂ ಮೊದಲು ಒಂದೋ, ಎರಡೋ ಚಪಾತಿ ಸೇವಿಸಿ ನಂತರ ಸ್ವಲ್ಪವೇ ಅನ್ನ ತಿನ್ನುವುದರಿಂದ ದೇಹ ಸದೃಢವಾಗುವುದಲ್ಲದೆ ರೋಗಮುಕ್ತವಾಗುತ್ತದೆ.
ಮೂಲ: ವಿಕ್ರಮ
ಕೊನೆಯ ಮಾರ್ಪಾಟು : 3/4/2020