ದಾಳಿಂಬೆ ಹಣ್ಣು ಅದರ ರುಚಿಗಿಂತ ಹೆಚ್ಚಾಗಿ ಇಷ್ಟವಾಗುವುದು ಅದರ ರಚನೆಯಿಂದಾಗಿ! ಪುಟ್ಟ ಹಣ್ಣೊಳಗೆ ಒಪ್ಪವಾಗಿ ಜೋಡಿಸಿಟ್ಟ ಒಂದೇ ಗಾತ್ರದ ಬೀಜಗಳು, ಅವುಗಳ ಆಕರ್ಷಕ ಬಣ್ಣ ದೈವೀ ಸೃಷ್ಟಿಯ ಅಚ್ಚರಿ ಎನ್ನಿಸುತ್ತವೆ. ರುಚಿಯೂ ಅಷ್ಟೆ. ಅದಕ್ಕೆ ಸರಿಸಾಟಿಯಿಲ್ಲ. ಇತ್ತೀಚೆಗಂತೂ ದಾಳಿಂಬೆ ಹಣ್ಣಿನ ರಸ ಹಲವು ಕಾಯಿಲೆಗಳನ್ನು ವಾಸಿಮಾಡುತ್ತದೆಂಬ ಕಾರಣಕ್ಕಾಗಿ ವೈದ್ಯರು ಸಹ ದಾಳಿಂಬೆ ರಸವನ್ನೇ ತಿನ್ನುವಂತೆ ಸಲಹೆ ನೀಡುತ್ತಾರೆ.
ಆರೋಗ್ಯ ದೃಷ್ಟಿಯಿಂದ ನೋಡಿದರೆ ದಾಳಿಂಬೆ ಎಲ್ಲ ಹಣ್ಣಿಗಳಿಗಿಂತ ಶ್ರೇಷ್ಠವಾದುದು, ಇದು ಜೀವಸತ್ವಗಳ ಆಗರ ಎಂದು ಇತ್ತೀಚಿನ ಸಂಶೋಧನೆಯೊಂದು ಹೇಳಿದೆ. ಮಧುಮೇಹ, ಜನನಾಂಗ ಕ್ಯಾನ್ಸರ್, ಕರುಳು ಕ್ಯಾನ್ಸರ್ ಸೇರಿದಂತೆ ಹಲವು ರೋಗಗಳನ್ನು ಹತೋಟಿಗೆ ತರುವಲ್ಲಿ ಇದರ ಪಾತ್ರ ಹಿರಿದು. ಫೋಲಿಕ್ ಆಮ್ಲ, ಜೀವಸತ್ವಗಳಾದ ಎ, ಸಿ ಮತ್ತು ಇ ಹೇರಳವಾಗಿರುವುದರಿಂದ ಆರೋಗ್ಯವನ್ನು ಕಾಪಾಡುವಲ್ಲಿ ಸಹಕಾರಿಯಾಗಿದೆ.
ಕ್ಯಾಲ್ಷಿಯಂ, ಪಾಸ್ಪರಸ್, ಪೊಟಾಶಿಯಂ, ಕಬ್ಬಿಣ ಮುಂತಾದ ಖನಿಜಾಂಶಗಳು ಸಹ ದಾಳಿಂಬೆಯಲ್ಲಿ ಹೇರಳವಾಗಿವೆ. ದಾಳಿಂಬೆ ರಸವನ್ನು ಕುಡಿಯುವುದರಿಂದ ರಕ್ತನಾಳಗಳು ಹಿಗ್ಗಿ, ರಕ್ತ ಸಂಚಾರ ಸರಾಗವಾಗುವಂತೆ ನೋಡಿಕೊಳ್ಳುತ್ತವೆ. ಇದು ರಕ್ತನಾಳಗಳಲ್ಲಿ ರಕ್ತ ಹೆಪ್ಪುಗಟ್ಟಿ ಪಾರ್ಶ್ವಾಘಾತ ಆಗದಂತೆಯೂ ನೋಡಿಕೊಳ್ಳುತ್ತದೆ. ರಕ್ತದಲ್ಲಿರುವ ಸಕ್ಕರೆ ಅಂಶವನ್ನು ಹತೋಟಿಗೆ ತರುವಲ್ಲಿಯೂ ಇದರ ಪಾತ್ರ ಹಿರಿದು.
ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಜೊತೆಗೆ ಜೀರ್ಣಕ್ರಿಯೆಗೂ ಸಹಕಾರಿ ಆಗಿದೆ. ದಾಳಿಂಬೆ ಹಣ್ಣು ಅಥವಾ ರಸವನ್ನು ಪ್ರತಿದಿನ ಸೇವಿಸುವುದರಿಂದ ಚರ್ಮ ಕಾಂತಿಯುತ ವಾಗುತ್ತದೆ. ದೇಹದಲ್ಲಿ ನೀರಿನಂಶವನ್ನು ಹೆಚ್ಚಿಸಿ ನಿರ್ಜಲೀಕರಣವಾಗದಂತೆ ನೋಡಿಕೊಳ್ಳುತ್ತದೆ. ಚರ್ಮದ ಕ್ಯಾನ್ಸರ್ ಅನ್ನು ಸಹ ನಿವಾರಿಸುವ ಶಕ್ತಿ ಇದಕ್ಕಿದೆ. ಕೂದಲುದುರುವುದನ್ನು ಕಡಿಮೆ ಮಾಡಿ ಕೂದಲು ಸೊಂಪಾಗಿ ಬೆಳೆಯುವಂತೆ ಮಾಡುತ್ತದೆ.
ಕೊಲೆಸ್ಟ್ರಾಲ್ಅನ್ನು ಹತೋಟಿಗೆ ತಂದು ಹೃದಯಾಘಾತವಾಗದಂತೆ ನೋಡಿಕೊಳ್ಳುತ್ತದೆ. ದಾಳಿಂಬೆ ಸಿಪ್ಪೆಯನ್ನು ನೀರಿನಲ್ಲಿ ತೇಯ್ದು ಚಿಕ್ಕ ಮಕ್ಕಳಿಗೆ ನೀಡಿದರೆ ಬೇಧಿ ನಿಯಂತ್ರಣಕ್ಕೆ ಬರುತ್ತದೆ. ರಕ್ತದೊತ್ತಡವನ್ನು ನಿಯಂತ್ರಿಸುವಲ್ಲಿ ಇದರ ಪಾತ್ರ ಹಿರಿದು. ಆದರೆ ಕೆಮ್ಮು ಮುಂತಾದ ಸಮಸ್ಯೆಗಳಿಂದ ಬಳಲುವವರು ಇದರ ರಸವನ್ನು ಸೇವಿಸುವುದು ಒಳ್ಳೆಯದಲ್ಲ.
ಹಲವು ಉಪಯೋಗಗಳನ್ನು ಹೊಂದಿರುವ ದಾಳಿಂಬೆ ಹಣ್ಣು ಗಳೇ ಶ್ರೇಷ್ಠವೆನ್ನಿಸಿಕೊಂಡಿದ್ದು ಈ ಎಲ್ಲಾ ಕಾರಣಗಳಿಂದ. ದುಬಾರಿ ಹಣ್ಣು ಎಂಬುದು ನಿಜವಾದರೂ ಇದನ್ನು ಮನೆಯ ತೋಟದಲ್ಲೇ ಬೆಳೆಯಬಹುದು. ಉತ್ತಮ ಆರೋಗ್ಯ ಕಾಯ್ದುಕೊಳ್ಳುವುದಕ್ಕೆ ಅಷ್ಟೂ ಮಾಡದಿದ್ದರೆ ಹೇಗೆ?
–ಶಶಿ
ಮೂಲ: ವಿಕ್ರಮ
ಕೊನೆಯ ಮಾರ್ಪಾಟು : 6/21/2020