ಬುದ್ಧನ ಬಗ್ಗೆ ಓದಿದವರಿಗೆಲ್ಲ ಸಾವಿಲ್ಲದ ಮನೆಯ ಸಾಸಿವೆಯ ಕತೆಯೂ ತಿಳಿದೇ ಇದೆ. ಸಾವು ಯಾರಿಗೂ ಹೊರತಾಗಿಲ್ಲ ಎಂಬ ಸತ್ಯವನ್ನು ಅರ್ಥಮಾಡಿಸುವ ಈ ಕತೆಯಲ್ಲಿ ಕಿಸಾಗೌತಮಿ ಸಾಸಿವೆಗಾಗಿ ಅಲೆಯದ ಮನೆಯಿಲ್ಲ! ಎಲ್ಲಿಯೂ ಸಿಗದ ಆ ಸಾಸಿವೆ ಅನಿವಾರ್ಯ ಸಾವನ್ನು ದೈವೇಚ್ಛೆ ಎಂದೇ ಸ್ವೀಕರಿಸುವ ಸಂದೇಶ ನೀಡಿದೆ. ಇವೆಲ್ಲ ಬುದ್ಧ ಹೇಳಿದ ಸಾವಿಲ್ಲದ ಮನೆಯ ಸಾಸಿವೆಯ ಕತೆಯಾಯ್ತು. ಆದರೆ ಪ್ರತಿಯೊಬ್ಬರ ಮನೆಯ ಅಡುಗೆ ಮನೆಯ ಸಾಂಬಾರು ಬಟ್ಟಲಿನಲ್ಲೂ ಚಿಕ್ಕ ಗಾತ್ರವೇ ಆದರೂ ಒಗ್ಗರಣೆಯ ಪ್ರಮುಖ ಸರಕಾಗಿ ರಾರಾಜಿಸುವ ಸಾಸಿವೆಯ ಕತೆ ಬೇರೆಯೇ ಇದೆ. ದೇಹಾರೋಗ್ಯದಲ್ಲಿ, ಸುಲಭ ಮನೆಮದ್ದಿನ ಖನಿಯಾಗಿ ಸಾಸಿವೆಯ ಪಾತ್ರ ಹಿರಿದು.
ಕಬ್ಬಿಣಾಂಶ ಹೆಚ್ಚಿರುವ ಸಾಸಿವೆ ಮ್ಯಾಗ್ನೇಶಿಯಂನ ಗಣಿಯೂ ಹೌದು. ಪ್ರತಿದಿನ ಸ್ವಲ್ಪ ಸಾಸಿವೆಯನ್ನು ಸೇವಿಸುವುದರಿಂದ ಮೈಗ್ರೇನ್ ಸಮಸ್ಯೆ ಹತೋಟಿಗೆ ಬರುತ್ತದೆ. ಅಸ್ತಮಾದಿಂದ ಬಳಲುತ್ತಿರುವವರಿಗೆ ಸಾಸಿವೆಯಲ್ಲಿರುವ ಸೆಲೆನಿಯಂ ಮತ್ತು ಮ್ಯಾಗ್ನೆಶಿಯಂ ದಿವ್ಯೌಷಧವೆನ್ನಿಸಿದೆ. ಕ್ಯಾನ್ಸರ್ ಕಣಗಳನ್ನು ನಾಶಮಾಡುವಲ್ಲಿ ಸಾಸಿವೆಯ ಪಾತ್ರ ಮಹತ್ವದ್ದು. ವಿಟಾಮಿನ್ ಬಿ ಕಾಂಪ್ಲೆಕ್ಸ್ ಸಹ ಇದರಲ್ಲಿ ಹೇರಳವಾಗಿದೆ. ತೂಕ ಕಡಿಮೆ ಮಾಡುವಲ್ಲಿಯೂ ಸಾಸಿವೆ ಉಪಕಾರಿ.
ಸಾಸಿವೆ ಸೌಂದರ್ಯ ವರ್ಧಕವೂ ಹೌದು. ವಿಟಾಮಿನ್ ಸಿ, ಎ ಮತ್ತು ಕೆ ಹೇರಳವಾಗಿರುವುದರಿಂದ ಯೌವನವನ್ನು ಕಾಪಾಡುವುದಕ್ಕೆ ನೆರವಾಗುತ್ತದೆ. ಆರ್ಥರೈಟಿಸ್, ಮೂಳೆ ನೋವು ಮುಂತಾದ ಸಮಸ್ಯೆಗಳಿಗೆ ಸಾಸಿವೆ ಸೇವನೆ ರಾಮಬಾಣ. ಕೊಬ್ಬಿನಂಶ ನಿಯಂತ್ರಿಸುವಲ್ಲೂ ಸಾಸಿವೆಯ ಪಾತ್ರವಿದೆ. ರೋಗನಿರೋಧಕ ಶಕ್ತಿ ಹೆಚ್ಚಿಸುವಲ್ಲಿಯೂ, ಚರ್ಮದ ಅಲರ್ಜಿಯನ್ನು ನಿಯಂತ್ರಿಸುವಲ್ಲಿಯೂ ಸಹಕಾರಿಯಾಗಿದೆ.
ರಕ್ತದೊತ್ತಡ ನಿಯಂತ್ರಿಸುವುದಲ್ಲದೆ ಋತುಚಕ್ರ ನಿಯಮಿತವಾಗುವಂತೆ ನೋಡಿಕೊಳ್ಳುತ್ತದೆ. ಸಾಸಿವೆ ಎಣ್ಣೆಯಿಂದ ಕೂದಲಿನ ಆರೋಗ್ಯ ವೃದ್ಧಿಸುತ್ತದೆ. ಜ್ವರವಿದ್ದಾಗಲೂ ಸಾಸಿವೆ ಸೇವನೆ ಉತ್ತಮ. ಬಹುಶಃ ಈ ಎಲ್ಲವನ್ನೂ ಮನಗಂಡೇ ಇರಬೇಕು ನಮ್ಮ ಹಿರಿಯರು ಒಗ್ಗರಣೆಯಿಲ್ಲದ ಊಟಕ್ಕೆ ರುಚಿಯಿಲ್ಲ ಎಂದರು. ಯಾವುದೇ ಪದಾರ್ಥಕ್ಕಿರಲಿ ಒಗ್ಗರಣೆ ಇದ್ದರೆ ಅದಕ್ಕೊಂದು ಕಳೆ. ಒಗ್ಗರಣೆ ಎಂದಮೇಲೆ ಸಾಸಿವೆ ಸಾಮಾನ್ಯ. ಒಗ್ಗರಣೆಯ ನೆಪದಲ್ಲಾದರೂ ಔಷಧಗಳ ಆಗರ ಸಾಸಿವೆ ದೇಹ ಸೇರಲಿ ಎಂಬ ಉದ್ದೇಶ ಈ ನಡೆಯಲ್ಲಿದ್ದಿರಬೇಕು.
ಎಳ್ಳಷ್ಟು ಪುಟ್ಟ ಸಾಸಿವೆಯಲ್ಲಿ ಎಷ್ಟೆಲ್ಲ ಉಪಯೋಗವಿದೆಯಲ್ಲ. ಗಾತ್ರ ನೋಡಿ ಯಾವ ವಸ್ತುವಿನ ಸಾಮರ್ಥ್ಯವನ್ನೂ ಅಳೆಯಬಾರದು ಎಂಬುದಕ್ಕೆ ಸಾಸಿವೆ ಉದಾಹರಣೆಯಲ್ಲವೇ?
ಮೂಲ: ವಿಕ್ರಮ
ಕೊನೆಯ ಮಾರ್ಪಾಟು : 4/23/2020