অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಬುನಾದಿಯಿಂದೇಳದ ಆಯುರ್ವೇದ

ಬುನಾದಿಯಿಂದೇಳದ ಆಯುರ್ವೇದ

ಏಳೆಂಟು ಸಾವಿರ ವರ್ಷಗಳ ಹಿಂದೆ ಇಲ್ಲಿ ಬಗೆಬಗೆಯ ವಿಮಾನಗಳಿದ್ದವಂತೆ; ಕಾಂಡಕೋಶಗಳಿಂದ ಮಗುವನ್ನು ಸೃಷ್ಟಿಸಲಾಗುತ್ತಿತ್ತಂತೆ; ಗಡಿಗೆಯೊಳಗಿನ ತುಪ್ಪದಲ್ಲೂ ಭ್ರೂಣವರ್ಧನೆ ಮಾಡಲಾಗುತ್ತಿತ್ತಂತೆ; ಆನೆಯ ರುಂಡವನ್ನು ಮನುಷ್ಯನ ಮುಂಡಕ್ಕೆ ಜೋಡಿಸಲಾಗುತ್ತಂತೆ!

ಆಧುನಿಕ ವೈದ್ಯವಿಜ್ಞಾನವು ಮನುಷ್ಯರ ಮೂತ್ರಪಿಂಡ, ಯಕೃತ್ತು, ಹೃದಯ ಇತ್ಯಾದಿಗಳನ್ನು ಕಸಿ ಮಾಡುವ ತಂತ್ರವನ್ನು ಸಾಧಿಸಿರುವುದು ತೀರಾ ಇತ್ತೀಚೆಗಷ್ಟೆ. ತಲೆಯನ್ನೂ, ಮೆದುಳನ್ನೂ ಕಸಿ ಮಾಡುವುದಕ್ಕೆ, ಪ್ರಾಣಿಗಳ ಅಂಗಗಳನ್ನು ಮನುಷ್ಯರಿಗೆ ಜೋಡಿಸುವುದಕ್ಕೆ ಇನ್ನೂ ಸಾಧ್ಯವಾಗಿಲ್ಲ; ಸದ್ಯಕ್ಕೆ ಅದರ ಸಾಧ್ಯತೆಗಳೂ ಇಲ್ಲ. ಆದ್ದರಿಂದ, ಆನೆಯ ತಲೆಯನ್ನು ದೇಹಕ್ಕೆ ಜೋಡಿಸುವ ಆ ಅದ್ಭುತ ತಂತ್ರವು ಲಭ್ಯವಾದರೆ ಇಡೀ ಮನುಕುಲಕ್ಕೆ ಮಹದುಪಕಾರವಾದೀತು.

ಏಳು ಸಾವಿರ ವರ್ಷಗಳ ಹಿಂದೆ ಇಲ್ಲಾಗಲೀ, ಎಲ್ಲಾಗಲೀ ವಿಮಾನ-ರುಂಡಕಸಿಗಳಿದ್ದುದಕ್ಕೆ ಕುರುಹುಗಳಿವೆಯೇ? ಅವಿದ್ದುದು ನಿಜವಾದರೆ ಯಾವಾಗ, ಏಕೆ ಮರೆಯಾದವು? ಭಾರತೀಯ ವೈದ್ಯ ಪದ್ಧತಿಗಳ ಉತ್ಥಾನಕ್ಕೆ ಇತ್ತೀಚಿನ  ಸರಕಾರಗಳು ಸಾವಿರಾರು ಕೋಟಿ ವ್ಯಯಿಸುತ್ತಿವೆ, ಆದರೆ ಸಾಮಾನ್ಯ ರೋಗಗಳ ಚಿಕಿತ್ಸೆಯಲ್ಲೂ ಅವೇಕೆ ಯಶಸ್ವಿಯಾಗುತ್ತಿಲ್ಲ?

ಇದುವರೆಗೆ ಲಭ್ಯವಾಗಿರುವ ಆಧಾರಗಳಂತೆ, ಆಫ್ರಿಕಾ ಮೂಲದ ಮಾನವರು (ದ್ರಾವಿಡರು) ಸುಮಾರು 60-70 ಸಾವಿರ ವರ್ಷಗಳ ಹಿಂದೆ ಭರತಖಂಡಕ್ಕೆ ಬಂದು, ನಾಲ್ಕೈದು ಸಾವಿರ ವರ್ಷಗಳ ಹಿಂದೆ ಸಿಂಧೂ ಕಣಿವೆಯ ನಾಗರಿಕತೆಯನ್ನು ಕಟ್ಟಲಾಯಿತು. ಅದಕ್ಕೂ ಮೊದಲು ಈಜಿಪ್ಟ್ ಹಾಗೂ ಮೆಸೊಪೊಟೇಮಿಯಾಗಳಲ್ಲಿ ಅದೇ ಆಫ್ರಿಕಾ ಮೂಲದವರ ನಾಗರಿಕತೆಗಳು ಎದ್ದು ನಿಂತಿದ್ದವು. ಈ ಮೂರರ ನಡುವೆಯೂ ಸಂಪರ್ಕ-ಸಂಬಂಧ-ವಿನಿಮಯಗಳಿದ್ದವು. ಆದರೆ ಅತ್ಯುನ್ನತ ವೈದ್ಯಕೀಯ ಪರಿಣತಿಯ ಕುರುಹುಗಳು ಅಲ್ಲಿನ ಅವಶೇಷಗಳಲ್ಲೆಲ್ಲೂ ಸಿಕ್ಕಿಲ್ಲ. ಓದಲು ಸಾಧ್ಯವಾಗಿರುವ ಅಲ್ಲಿನ ಲಿಪಿಗಳಲ್ಲೂ ಅಂತಹ ಮಾಹಿತಿಯಿಲ್ಲ.

ಆದರೆ ಕಾಯಿಲೆಗಳು ಅಲ್ಲೂ ಇದ್ದವು,ಕಸುಬು-ಕಲಹಗಳಿಂದ ಗಾಯ-ಊತ-ಮೂಳೆಮುರಿತಗಳೂ ಇದ್ದವು. ಇವುಗಳಿಗೆಲ್ಲ ತಮ್ಮಿಂದಾದ ಚಿಕಿತ್ಸೆ ನೀಡುತ್ತಾ ವೈದ್ಯರೆನಿಸಿಕೊಂಡವರೂ ಇದ್ದರು. ಆ ಕಾಲದಲ್ಲಿ ದೇಹದ ಒಳ-ಹೊರಗಿನ ಅಸಮತೋಲನದಿಂದ ರೋಗಗಳುಂಟಾಗುತ್ತವೆಂದು ಭಾವಿಸಿ ಬಗೆಬಗೆಯ ಸಸ್ಯಜನ್ಯ-ಪ್ರಾಣಿಜನ್ಯ ವಸ್ತುಗಳನ್ನು ಔಷಧಗಳಾಗಿ ಬಳಸಲಾಗುತ್ತಿತ್ತು, ಆಹಾರ ಹಾಗೂ ಜೀವನ ಕ್ರಮಗಳಿಗೂ ಒತ್ತು ನೀಡಲಾಗುತ್ತಿತ್ತು. ಗಾಯಗಳನ್ನು ಹೊಲಿಯುವುದು, ಮೈಯೊಳಗೆ ಹೊಕ್ಕ ಬಾಣ-ಈಟಿಗಳನ್ನು ಹೊರ ತೆಗೆಯುವುದು, ಮೂಳೆಮುರಿತಕ್ಕೆ ಪಟ್ಟಿ ಕಟ್ಟುವುದು ಮುಂತಾದವು ಸಾಮಾನ್ಯವಾಗಿದ್ದರೆ, ಮೂಲವ್ಯಾಧಿ, ಗುದವೇದನೆಗಳಿಗೆ ಚಿಕಿತ್ಸೆ, ಕೀವು ತೆಗೆಯುವುದು, ಮೂತ್ರದ್ವಾರಕ್ಕೆ ಅಡ್ಡಿಯಾದ ಕಲ್ಲನ್ನು ಹೊರತೆಗೆಯುವುದು, ಗರ್ಭದಲ್ಲೇ ಮೃತಪಟ್ಟ ಶಿಶುವನ್ನು ಹೊರತೆಗೆಯುವುದು ಇತ್ಯಾದಿ ಕ್ಲಿಷ್ಟಕರವಾದ, ತುರ್ತಿನ ಶಸ್ತ್ರಕ್ರಿಯೆಗಳನ್ನು ಪ್ರಯತ್ನಿಸುತ್ತಿದ್ದ ಪರಿಣತರೂ ಕೆಲವರಿದ್ದರು. ಇಂತಹ ಅತಿಪರಿಣತರು ದೂರ-ದೂರದ ಊರುಗಳಿಗೂ, ಇತರ ದೇಶ-ಪ್ರದೇಶಗಳಿಗೂ ತೆರಳಿ ಚಿಕಿತ್ಸೆ ನೀಡುತ್ತಿದ್ದರು, ಅತಿ ಗೌರವಿಸಲ್ಪಡುತ್ತಿದ್ದರು.

ಇದಕ್ಕಿಂತ ಮಿಗಿಲಾದ ಚಿಕಿತ್ಸೆಗಳಾವುವೂ ಆಗ ಲಭ್ಯವಿರಲಿಲ್ಲ. ದೇಹರಚನೆ ಹಾಗೂ ದೇಹದ ಕೆಲಸಕಾರ್ಯಗಳ ಬಗೆಗೂ ಆಗ ಹೆಚ್ಚಿನ ಅರಿವಿರಲಿಲ್ಲ. ಶವಗಳನ್ನು ಕೊಳೆಯಿಸಿ, ಎಲುಬು-ಸ್ನಾಯು ರಜ್ಜು-ನರಗಳಂತಹ ಹೊರಭಾಗಗಳನ್ನು ಪರೀಕ್ಷಿಸಲಾಗುತ್ತಿತ್ತೇ ಹೊರತು ಒಳಗಿನ ಅಂಗಗಳನ್ನು ಕೂಲಂಕಷವಾಗಿ ನೋಡುವುದಕ್ಕೆಂದು ಶವಗಳ ಅಂಗವಿಚ್ಛೇದನ ಮಾಡುತ್ತಿರಲಿಲ್ಲ. ಬದಲಿಗೆ, ಬಲಿಕೊಟ್ಟ ಪ್ರಾಣಿಗಳ ಅಂಗಗಳನ್ನು ನೋಡಿ, ಮಾನವ ಶರೀರವನ್ನು ಅವಕ್ಕೆ ಹೋಲಿಸಲಾಗುತ್ತಿತ್ತು. ಹಾಗಾಗಿ, ಹೃದಯ, ಮಿದುಳು, ಮೂತ್ರಪಿಂಡ ಇತ್ಯಾದಿಗಳ ಬಗ್ಗೆ ಆಗ ಹೆಚ್ಚಿನ ಅರಿವಿರಲಿಲ್ಲ. ಆದರೂ, ಎಲ್ಲಾ ಮನುಷ್ಯರೂ ರಸ, ರಕ್ತ, ಮಾಂಸ, ಮೇದ, ಅಸ್ಥಿ, ಮಜ್ಜೆ ಹಾಗೂ ಶುಕ್ರಗಳಿಂದಲೇ ಮಾಡಲ್ಪಟ್ಟಿದ್ದಾರೆ ಎಂಬ ಸರ್ವಸಮಭಾವವು ಅಂದಿನ ವೈದ್ಯರಲ್ಲಿತ್ತು; ಪ್ರಾಣಿಗಳೂ ಮನುಷ್ಯರಂತೆಯೇ ದೇಹರಚನೆಯುಳ್ಳ ಸಹಜೀವಿಗಳೆಂಬ ಜ್ಞಾನವೂ ಇತ್ತು.

ಹಿಂದಿನ ಶಕೆಯ (ಕ್ರಿ.ಪೂ) ಮೊದಲ ಶತಮಾನದೊಳಗೆ ರಚಿಸಲ್ಪಟ್ಟ ಚರಕ-ಸುಶ್ರುತ ಸಂಹಿತೆಗಳಲ್ಲಿ ಆ ಕಾಲದ ವೈದ್ಯಕೀಯ ಜ್ಞಾನವೆಲ್ಲವೂ ಸವಿವರವಾಗಿ ದಾಖಲಿಸಲಾಗಿವೆ, ಅನ್ಯ ನಾಗರಿಕತೆಗಳಲ್ಲಿ ಬೆಳೆದಿದ್ದ ವೈದ್ಯಕೀಯ ಪದ್ಧತಿಗಳೂ ಉಲ್ಲೇಖಿತವಾಗಿವೆ. ರೋಗಗಳಿವೆ, ಅವುಗಳಿಗೆ ಗುರುತಿಸಬಲ್ಲ ಕಾರಣಗಳೂ ಇವೆ, ಮತ್ತು ಅವನ್ನು ಗುಣಪಡಿಸುವ ವಿಧಾನಗಳೂ ಇವೆ ಎನ್ನುವುದು ನಿರ್ವಿವಾದಿತ ಸಿದ್ಧಾಂತಗಳೆಂದು ಈ ಸಂಹಿತೆಗಳಲ್ಲಿ ಮನ್ನಣೆಯನ್ನು ನೀಡಲಾಗಿದೆ. ರೋಗದ ಚಿಕಿತ್ಸೆಯಲ್ಲಿ ರೋಗಿ, ವೈದ್ಯ, ದಾದಿ ಮತ್ತು ಔಷಧಗಳಲ್ಲದೆ ಬೇರಾವುದಕ್ಕೂ ಪಾತ್ರವಿಲ್ಲ ಎಂದೂ ಅವುಗಳಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ. ಹೀಗೆ ವೈದ್ಯಪದ್ಧತಿಗೊಂದು ವೈಚಾರಿಕ ಬುನಾದಿಯನ್ನು ಅವು ಒದಗಿಸಿದ್ದವು ಎನ್ನಲಡ್ಡಿಯಿಲ್ಲ. ಆದರೆ, ಹೆಚ್ಚಿನ ತಂತ್ರಜ್ಞಾನಗಳ ಸುಳಿವೇನೂ ಅಲ್ಲಿಲ್ಲ.

ಆದರೆ ಭಾರತೀಯ ವೈದ್ಯಪದ್ಧತಿಗೆ ಈ ಬುನಾದಿಯಿಂದ ಮೇಲೇಳಲು ಸಾಧ್ಯವಾಗಲಿಲ್ಲ. ಋಗ್ವೇದಾನಂತರದಲ್ಲಿ ವೈದ್ಯರ ವೈಚಾರಿಕತೆಯ ಮೇಲೆ ದಾಳಿಗಳಾಗತೊಡಗಿದವು. ಅವುಗಳನ್ನೆದುರಿಸಲು ವೈದ್ಯರು ಕೆಲ ಹೊಂದಾಣಿಕೆಗಳನ್ನು ಮಾಡತೊಡಗಿದರು (ಚರಕ ಸಂಹಿತೆಯಲ್ಲೇ ಇವಕ್ಕೆ ಸಾಕ್ಷ್ಯಗಳಿವೆ). ಅಂತೂ, ಬುದ್ಧನ ಕಾಲದಲ್ಲಿ (ಹಿಂದಿನ ಶಕೆಯ ಆರನೇ ಶತಮಾನ) ಉಚ್ಛ್ರಾಯದಲ್ಲಿದ್ದ ಭಾರತೀಯ ವೈದ್ಯಪದ್ಧತಿಯು ಈ ಶಕೆಯ (ಕ್ರಿ.ಶ) ಮೊದಲ ಶತಮಾನದ ಬಳಿಕ ಅವನತಿಯ ಹಾದಿ ಹಿಡಿಯಿತು.

ಸಿಂಧೂ ನಾಗರಿಕತೆಯಲ್ಲೂ, ವೇದಕಾಲದ ನಾಗರಿಕತೆಯ (ಹಿಂದಿನ ಶಕೆಯ 16ನೇ ಶತಮಾನ) ಆರಂಭದಲ್ಲೂ ವೈದ್ಯರ ಮೇಲಿನ ಪ್ರೀತಿ-ಗೌರವಗಳು ಉತ್ಕಟವಾಗಿಯೇ ಇದ್ದವು. ಋಗ್ವೇದದಲ್ಲಿ ರುದ್ರ, ಅಶ್ವಿನಿ, ಸೋಮ, ವರುಣ, ಆಪಃ, ಮರುತ್ತುಗಳು ಮುಂತಾದವರ ವೈದ್ಯಕೀಯ ಸಾಮರ್ಥ್ಯಗಳನ್ನು ಹಾಡಿಹೊಗಳಿ ಅತಿ ಹೆಚ್ಚಿನ ಗೌರವವನ್ನು ವ್ಯಕ್ತಪಡಿಸಲಾಗಿತ್ತು. ಆದರೆ ಋಗ್ವೇದಾನಂತರದಲ್ಲಿ ವೈದ್ಯರನ್ನು ಕೀಳುದರ್ಜೆಗಿಳಿಸಿ ದೂರವಿಡಲಾಯಿತು.

ಅಶ್ವಿನಿ ದೇವತೆಗಳು ಯಜ್ಞದ ಹವಿಸ್ಸನ್ನು ಸ್ವೀಕರಿಸಬೇಕೆಂದು ಋಗ್ವೇದವು ಗೌರವಪೂರ್ವಕವಾಗಿ ಆಹ್ವಾನಿಸಿದ್ದರೆ, ಯಜುರ್ವೇದವು ಅವರನ್ನು ಅಶುದ್ಧರೆಂದು ಹೀಗಳೆದು, ಶುದ್ಧೀಕರಣಗೊಂಡ ಬಳಿಕವಷ್ಟೇ ಹವಿಸ್ಸನ್ನು ದಯಪಾಲಿಸಿತು. ಸಾಮಾನ್ಯ ಮನುಷ್ಯರ ನಡುವೆ ಸಂಚರಿಸುವ ವೈದ್ಯರು ಅಶುದ್ಧರೆಂದೂ, ಅದೇ ಕಾರಣಕ್ಕೆ ಬ್ರಾಹ್ಮಣರು ವೈದ್ಯವೃತ್ತಿಗಿಳಿಯಬಾರದೆಂದೂತೈತ್ತರೀಯ ಸಂಹಿತೆಯಲ್ಲಿ ವಿಧಿಸಲಾಯಿತು(ತೈ ಸಂ vi.4.9). ತದನಂತರದ ಹಲವು ಧರ್ಮಶಾಸ್ತ್ರಗಳಲ್ಲೂ, ಮನುಸ್ಮೃತಿಯಲ್ಲೂ ವೈದ್ಯರಹೊರಗಿಡುವಿಕೆಯು ಇನ್ನಷ್ಟು ಹೆಚ್ಚಿತು.

ಶ್ರೇಣೀಕೃತ ವ್ಯವಸ್ಥೆಯ ಸೋಂಕಿಲ್ಲದ ಋಗ್ವೇದವು ವೈದ್ಯರನ್ನು ಹೊಗಳಿತಾದರೆ, ಶ್ರೇಣೀಕೃತ ವ್ಯವಸ್ಥೆಯನ್ನೂ, ಯಜ್ಞ-ಯಾಗಾದಿಗಳ ಪಾರಮ್ಯವನ್ನೂ ಸಾರತೊಡಗಿದ ಧರ್ಮಶಾಸ್ತ್ರಗಳು ವೈದ್ಯರನ್ನು ಅಗ್ರ ವೈರಿಗಳಂತೆ ಬಿಂಬಿಸಿದವು. ಇವು ಸಾಮಾನ್ಯ ಮನುಷ್ಯರನ್ನು ಬೇರೆಯಾಗಿಸಿದ್ದಲ್ಲದೆ, ಮನುಷ್ಯರೆಲ್ಲರೂ ಒಂದೇ ಎನ್ನುತ್ತಿದ್ದ ವೈದ್ಯರನ್ನೂ ಹೊರಗಿಟ್ಟವು, ಸ್ವಚ್ಛತೆಗೆ ಅತಿ ಹೆಚ್ಚಿನ ಆದ್ಯತೆಯಿತ್ತಿದ್ದ ವೈದ್ಯರನ್ನೇ ಅಶುದ್ಧರಾಗಿಸಿದವು. ವೈದ್ಯರು ರೋಗಗಳ ಕಾರಣ ಹಾಗೂ ಚಿಕಿತ್ಸೆಗಳಲ್ಲಿ ಅಗೋಚರ ಶಕ್ತಿಗಳ ಪಾತ್ರವನ್ನು ಅಲ್ಲಗಳೆಯುತ್ತಿದ್ದುದು, ದೇವರು, ಕರ್ಮ ಇತ್ಯಾದಿಗಳನ್ನು ಕಡೆಗಣಿಸಿ, ರೋಗನಿವಾರಣೆಯಲ್ಲಿ ಪುರೋಹಿತವರ್ಗಕ್ಕೆ ಪಾತ್ರವನ್ನು ನಿರಾಕರಿಸುತ್ತಿದ್ದುದು, ಹಾಗೂ ಎಲ್ಲಾ ಪಶು-ಪಕ್ಷಿಗಳ ಮಾಂಸವನ್ನು ಆರೋಗ್ಯವರ್ಧಕವೆಂದು ಉತ್ತೇಜಿಸುತ್ತಿದ್ದುದು ಧರ್ಮಶಾಸ್ತ್ರಕಾರರ ಪಾಲಿಗೆ ಅಪಾಯಕಾರಿಯೆನಿಸಿದವು.

ಆಯುರ್ವೇದವು ಸ್ಥಗಿತವಾಯಿತು. ವೈದ್ಯವೃತ್ತಿಯು ಕೆಲವರಲ್ಲಷ್ಟೇ ಉಳಿಯಿತು; ಬಡಗಿ, ಚಮ್ಮಾರ, ಕಮ್ಮಾರ, ಕ್ಷೌರಿಕ ಮುಂತಾದವರು ಶಸ್ತ್ರಚಿಕಿತ್ಸಕರಾದರು. ಮೈಸೂರು ಯುದ್ಧದಲ್ಲಿ ಟಿಪ್ಪುವಿನ ಸೈನಿಕರು ಮರಾಠಿ ಸೈನಿಕನ ಮೂಗನ್ನು ಕತ್ತರಿಸಿದಾಗ, ಪೂನಾದ ಇಟ್ಟಿಗೆ ತಯಾರಕನು ಅದನ್ನು ಸರಿಪಡಿಸಬೇಕಾಯಿತು. ಅದರ ಸಚಿತ್ರ ವರದಿಗಳು 1793ರ ಮದ್ರಾಸ್ ಗಜೆಟ್ ನಲ್ಲೂ, 1794ರ ಜಂಟಲ್ ಮನ್ಸ್ ಮ್ಯಾಗಜಿನ್ ನಲ್ಲೂ ಪ್ರಕಟವಾದವು; ಅವೇ ಚಿತ್ರಗಳನ್ನು ಸುಶ್ರುತನ ಹೆಸರಲ್ಲಿ ತೋರಿಸಲಾಗುತ್ತಿದೆ!

ಆದರೆ ವೈದ್ಯವಿಜ್ಞಾನದ ಬೆಳವಣಿಗೆಯನ್ನು ಯಾರಿಗೂ ತಡೆಯಲಾಗಲಿಲ್ಲ; ಒಂದೆಡೆ ಅಡ್ಡಿಯಾದಾಗ ಅದು ಇನ್ನೊಂದೆಡೆ ಬೆಳೆಯಿತು. ಇಲ್ಲಿನ ವೈದ್ಯಪದ್ಧತಿಯು ಧರ್ಮಶಾಸ್ತ್ರಗಳಿಂದ ನಲುಗಿ ಮೊದಲ ಶತಮಾನಕ್ಕೇ ಜಡ್ಡುಗಟ್ಟಿದರೆ, ಗ್ರೀಕ್ ವೈದ್ಯಪದ್ಧತಿಯೂ 2-3ನೇ ಶತಮಾನದ ವೇಳೆಗೆ ಯುದ್ಧಗಳಿಂದಾಗಿ ದಣಿದು ಬಿತ್ತು. ಯೂರೋಪಿನಲ್ಲೂ ಧರ್ಮಾಧಿಕಾರಿಗಳ ಒತ್ತಡಕ್ಕೆ ಸಿಲುಕಿದ ವೈದ್ಯವಿಜ್ಞಾನವು 4-16ನೇ ಶತಮಾನದವರೆಗೂ ನರಳಿತು. ಆ ಬಳಿಕ, ಯೂರೋಪಿನ ನವೋದಯದಲ್ಲಿ, ವೈದ್ಯವಿಜ್ಞಾನವು ಹೊಸ ಶಕ್ತಿಯೊಂದಿಗೆ ಮುನ್ನಡೆದು ವೇಗವಾಗಿ ಬೆಳೆಯಿತು. ಚರಕಸಂಹಿತೆಯು ಹೃದಯವನ್ನು ದಶ ಮಹಾಧಮನಿಗಳ ಮೂಲವೆಂದು (ಸೂತ್ರಸ್ಥಾನ 30:3-4) ಹೇಳಿ ಸುಮ್ಮನಾಗಬೇಕಾಯಿತು; ಅದು ರಕ್ತವನ್ನೆತ್ತುವ ರೇಚಕವೆಂದು ತೋರಿಸುವುದಕ್ಕೆ 1628ರಲ್ಲಿ ಇಂಗ್ಲೆಂಡಿನ ವಿಲಿಯಂ ಹಾರ್ವೇ ಬೇಕಾಯಿತು. ಆಧುನಿಕ ವೈದ್ಯವಿಜ್ಞಾನವು 18ನೇ ಶತಮಾನದಲ್ಲಿ ಇಲ್ಲಿಗೆ ಬಂದಾಗ ಧರ್ಮಶಾಸ್ತ್ರಕಾರರು ಸುಮ್ಮನಿರಬೇಕಾಯಿತು.

ಆದರೂ ಮತಧರ್ಮಗಳ ಹೆಸರಲ್ಲಿ ವಿಜ್ಞಾನ ಹಾಗೂ ವೈಚಾರಿಕತೆಗಳಿಗೆ ಅಡ್ಡಿ-ಆತಂಕಗಳನ್ನುಂಟು ಮಾಡುವುದು ಇನ್ನೂ ನಿಂತಿಲ್ಲ. ಚಿಕಿತ್ಸೆ ಹಾಗೂ ಆಹಾರಕ್ರಮಗಳಲ್ಲಿ ಮೂಗು ತೂರಿಸುವುದು, ರೋಗನಿವಾರಣೆಗೆ ಧ್ಯಾನ-ಪ್ರಾರ್ಥನೆಗಳನ್ನೇ ನೆಚ್ಚಿಕೊಳ್ಳುವಂತೆ ಪ್ರೇರೇಪಿಸುವುದು ಈಗಲೂ ಮುಂದುವರಿದಿವೆ. ಅವೇನಿದ್ದರೂ ಕೊನೆಗೆ ವೈಚಾರಿಕ ಚಿಂತನೆಯೇ ಗೆಲ್ಲುತ್ತದೆನ್ನುವುದಕ್ಕೆ ವೈದ್ಯವಿಜ್ಞಾನದ ಬೆಳವಣಿಗೆಯೇ ಅತ್ಯುತ್ತಮ ನಿದರ್ಶನವಾಗಿದೆ.

ಕೋಡುಗೆದಾರರು: ಶ್ರೀನಿವಾಸ ಕಕ್ಕಿಲಾಯ

ಕೊನೆಯ ಮಾರ್ಪಾಟು : 6/26/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate