ಆಹಹಾ ......... ಹಲ್ಲುಗಳು!
ದೊಡ್ಡದಾದ ಕೋಟೆ, ಅದರ ಹೆಬ್ಬಾಗಿಲಲ್ಲಿ ಶಿಸ್ತಾಗಿ ನಿಂತು ಸದಾ ಕಾವಲು ಕಾಯುವ ಬಿಳಿ ಬಣ್ಣದ ಪುಟ್ಟ ಸಿಪಾಯಿಗಳು! ರಕ್ಷಣಾ ಕಾರ್ಯದ ಉಸ್ತುವಾರಿ ಹೊತ್ತಿರುವ ಸಿಪಾಯಿಗಳ ಆರೋಗ್ಯ ಚೆನ್ನಾಗಿಲ್ಲದಿದ್ದರೆ?? ಇಡೀ ಕೋಟೆ ಕುಸಿಯುತ್ತದೆ.
ಸಿಪಾಯಿಗಳು..... ಯಾರಿವರು?? ಹಲ್ಲುಗಳು.
ಮುತ್ತಿನಂಥಾ ಹಲ್ಲುಗಳು ಸೌಂದರ್ಯವನ್ನು ಹೆಚ್ಚಿಸುವುದಷ್ಟೇ ಅಲ್ಲ, ಆತ್ಮವಿಶ್ವಾಸ ನೀಡಿ ಇಡೀ ವ್ಯಕ್ತಿತ್ವಕ್ಕೆ ಮೆರಗನ್ನು ನೀಡುತ್ತವೆ. ಇದಲ್ಲದೆ ಅಗಿಯುವಿಕೆ, ಸ್ಪಷ್ಟವಾದ ಮಾತು, ದವಡೆ ಹಾಗೂ ಮುಖದ ಬೆಳವಣಿಗೆಗೆ ಹಲ್ಲುಗಳು ಅತ್ಯಗತ್ಯ.
ಹೀಗಿದ್ದೂ ಹಲ್ಲುಗಳ ಆರೋಗ್ಯದ ವಿಷಯಕ್ಕೆ ಬಂದಾಗ ದಂತವೈದ್ಯರ ನೆನಪಾಗುವುದು ತೀವ್ರ ಹಲ್ಲುನೋವು ಕಾಣಿಸಿಕೊಂಡಾಗಲೇ! ಇದು ಸರಿಯಲ್ಲ. ಜತನವಾಗಿ ನೋಡಿಕೊಂಡರೆ ಜೀವಮಾನವಿಡೀ ಕಾರ್ಯನಿರ್ವಹಿಸುವ ಹಲ್ಲುಗಳ ಬಗ್ಗೆ ಗಮನಹರಿಸಲೇಬೇಕು.
ಹಲ್ಲಿನ ರಚನೆಯನ್ನು ಗಮನಿಸಿದಾಗ ಅದರಲ್ಲಿ ವಿವಿಧ ಭಾಗಗಳಿವೆ, ಪದರಗಳಿವೆ. ªಸಡಿನ ಹೊರಗೆ ಕಾಣುವ ಭಾಗವನ್ನು `ಮುಕುಟ' ಎನ್ನಲಾಗುತ್ತದೆ, ಒಳಗಿರುವ ಭಾಗವೇ ಹಲ್ಲಿನ ಬೇರು. ಮುಕುಟ ಹಾಗೂ ಬೇರಿನಲ್ಲಿ ಕಂಡುಬರುವ ಪದರಗಳೆಂದರೆ ಎನಾಮೆಲ್ (ಗಟ್ಟಿ, ಬಿಳಿ ಕವಚ), ಡೆಂಟೀನ್ (ಒಳಗಿನ ತಿಳಿಹಳದಿ ಬಣ್ಣದ ವಸ್ತು) ಸಿಮೆಂಟಮ್ (ಬೇರಿನ ಸುತ್ತ ಇರುವ ಎಲುಬಿನಂಥದ್ದು) ಹಾಗೂ ಹಲ್ಲಿನ ತಿರುಳು (ಪಲ್ಸ್) .ತಿರುಳಿನಲ್ಲಿ ರಕ್ತಕೋಶಗಳು ಮತ್ತು ನರಗಳಿರುತ್ತವೆ.
ಹಲ್ಲುಗಳನ್ನು ಅವುಗಳ ಸ್ಥಾನ ಮತ್ತು ನಿರ್ವಹಿಸುವ ಕಾರ್ಯದ ಮೇಲೆ ಬಾಚಿ, ಕೋರೆ, ಮುಂದವಡೆ ಮತ್ತು ದವಡೆ ಹಲ್ಲುಗಳು ಎಂದು ಗುರುತಿಸಲಾಗುತ್ತದೆ ಹಾಗೆಯೇ ಕಾಣಿಸಿಕೊಳ್ಳುವ ಅವಧಿಯ ಮೇಲೆ ಹಾಲು ಹಲ್ಲು ಮತ್ತು ಶಾಶ್ವತ ಹಲ್ಲು ಎಂದು ವಿಂಗಡಿಸಲಾಗಿದೆ. ಹಲ್ಲುಗಳು ಯಾವುದಾಗಿದ್ದರೂ ಅವುಗಳಲ್ಲಿ ಕಂಡುಬರುವ ಅತ್ಯಂತ ಸಾಮಾನ್ಯ ಸಮಸ್ಯೆಗಳು, ಅವುಗಳಿಗೆ ಕಾರಣ ಮತ್ತು ಪರಿಹಾರ ಹೀಗಿದೆ.
ಹಿರಿಯ-ಕಿರಿಯ, ಬಡವ-ಬಲ್ಲಿದ, ಸ್ತ್ರೀ-ಪುರುಷರೆನ್ನದೆ ಎಲ್ಲರಲ್ಲೂ ಕಾಣುವ, ಎಲ್ಲರನ್ನೂ ಕಾಡುವ ದಂತಕ್ಷಯ / ಹುಳುಕು ಹಲ್ಲುಗಳು ಅನೇಕ ಅಂಶಗಳ ಒಟ್ಟು ಪರಿಣಾಮ. ನಾವು ತಿನ್ನುವ ಆಹಾರ, ಹಲ್ಲಿನ ರಚನೆ, ಬಾಯಿಯಲ್ಲಿರುವ ಸೂಕ್ಷ್ಮಾಣುಜೀವಿಗಳು ಇವೆಲ್ಲಾ ದಂತಕ್ಷಯಕ್ಕೆ ಎಡೆಮಾಡಿಕೊಡುತ್ತವೆ.
ಆರಂಭದಲ್ಲಿ ಹಲ್ಲಿನ ಮೇಲ್ಪದರದಲ್ಲಿ ಕಪ್ಪು ಚುಕ್ಕಿಯಂತೆ ಕಾಣಿಸುತ್ತದೆ. ನಂತರ ಒಳಪದರಗಳಿಗೆ ಹಬ್ಬುತ್ತಾ ತಿರುಳನ್ನು ತಲುಪಿದಾಗ ಅಸಾಧ್ಯ ನೋವು - ಊತ ಕಾಣಿಸಿಕೊಳ್ಳುತ್ತದೆ. ಅಲ್ಲಿಯವರೆಗೆ ನಿರ್ಲಕ್ಷಿಸಿ ಈ ಹಂತದಲ್ಲಿ ದಂತವೈದ್ಯರ ಬಳಿ ಓಡುವವರೇ ಹೆಚ್ಚು!
ಆದ ಹುಳುಕನ್ನು ಗುಣಪಡಿಸಲು ಸಾಧ್ಯವಿಲ್ಲ. ಆದರೆ ಹುಳುಕನ್ನು ತೆಗೆದು ಬೇರೆ ವಸ್ತು ಆ ಜಾಗದಲ್ಲಿ ತುಂಬಿ, ಮುಂದಾಗುವ ಹಾನಿ ತಪ್ಪಿಸಬಹುದು. ಹುಳುಕು, ಆರಂಭಿಕ ಹಂತದಲ್ಲಿದ್ದಾಗ ಚಿಕಿತ್ಸೆ ಸುಲಭ. ಹಿಂದೆ ಬೆಳ್ಳಿ-ಚಿನ್ನ ತುಂಬಲಾಗುತ್ತಿತ್ತು. ಈಗಲೂ ಹಿಂದಿನ ಹಲ್ಲುಗಳಿಗೆ ಹೆಚ್ಚು ಹೊರೆ ತಡೆಯಬಲ್ಲದು ಎಂಬ ಕಾರಣಕ್ಕಾಗಿ ಬೆಳ್ಳಿ ಬಳಸಲಾಗುತ್ತದೆ. ಹಲ್ಲಿನ ಬಣ್ಣವನ್ನೇ ಹೋಲುವ ಕಾಂಪೆÇೀಸಿಟ್ / ಗ್ಲಾಸ್ ಐನೊಮರ್ ಫಿಲ್ಲಿಂಗ್ಗಳು ಜನಪ್ರಿಯ.
ಒಮ್ಮೆ ಹುಳುಕು ಹಲ್ಲಿನ ತಿರುಳನ್ನು ತಲುಪಿದರೆ ಎರಡೇ ಮಾರ್ಗ. ಹಲ್ಲಿನ ರಚನೆ ಸೂಕ್ತವಾಗಿದ್ದು, ಸುತ್ತಲಿನ ಮೂಳೆಯ ಬಲ ಚೆನ್ನಾಗಿದ್ದರೆ ರೂಟ್ಕೆನಾಲ್/ಬೇರುನಾಳ ಚಿಕಿತ್ಸೆ. ಇಲ್ಲದಿದ್ದರೆ ಹಲ್ಲನ್ನು ತೆಗೆಯುವುದು. ಬೇರುನಾಳ ಚಿಕಿತ್ಸೆಯಲ್ಲಿ ನಾಲ್ಕು ಹಂತಗಳು. ಹಲ್ಲಿನ ಮುಕುಟದಿಂದ ಬೇರಿಗೆ ರಂಧ್ರ ಮಾಡುವುದು, ಒಳಗಿನ ಸೋಂಕು ತೆಗೆದು ಸ್ವಚ್ಛ ಮಾಡುವುದು, ಬೇರಿನ ಒಳಭಾಗ ಸರಿಯಾಗಿ ತಯಾರಿಸುವುದು ಮತ್ತು ತಿರುಳಿನ ಬದಲು ಬೇರೆ ವಸ್ತು ತುಂಬುವುದು. ಸೋಂಕುಗ್ರಸ್ತ ತಿರುಳನ್ನು ಸಂಪೂರ್ಣವಾಗಿ ತೆಗೆಯುವುದು ಈ ಚಿಕಿತ್ಸೆಯ ಮುಖ್ಯ ಉದ್ದೇಶ.
ಹುಳುಕು ಹಲ್ಲುಗಳು ಮಕ್ಕಳಲ್ಲೂ ಕಾಣಿಸುತ್ತವೆ. ರಾತ್ರಿ, ಬಾಟಲಿಯಲ್ಲಿ ಸಿಹಿಹಾಲು ಕುಡಿಸುವುದು, ಹೆಚ್ಚಾದ ಸಿಹಿತಿಂಡಿ ಸೇವನೆ, ಸ್ವಚ್ಛತೆ ಬಗ್ಗೆ ನಿರ್ಲಕ್ಷ್ಯ ಇವು ಮುಖ್ಯ ಕಾರಣಗಳು. ಹೇಗಿದ್ದರೂ ಬಿದ್ದು ಹೋಗುವ ಹಾಲುಹಲ್ಲುಗಳು ಎಂದು ಇದನ್ನು ನಿರ್ಲಕ್ಷಿಸಬಾರದು. ಹಾಲು ಹಲ್ಲುಗಳು, ಶಾಶ್ವತ ಹಲ್ಲುಗಳಿಗೆ ಜಾಗ ಉಳಿಸುವ ಸಾಧನಗಳಾಗಿ ಕೆಲಸ ಮಾಡುತ್ತವೆ, ಭದ್ರ ಅಡಿಪಾಯ ಒದಗಿಸುತ್ತವೆ. ಆದ್ದರಿಂದ ಹಾಲು ಹಲ್ಲುಗಳ ಸಂರಕ್ಷಣೆ ಅವಶ್ಯಕ.
ನಾವು ತಿನ್ನುವ ಆಹಾರದಲ್ಲಿನ ಸಕ್ಕರೆಯ ಅಂಶವು ಹಲ್ಲುಗಳ ನಡುವೆ ಶೇಖರವಾಗುತ್ತದೆ. ಸರಿಯಾಗಿ ಸ್ವಚ್ಛಗೊಳಿಸದೇ ಇದ್ದಾಗ ಹಾಗೇ ಉಳಿದು ಅದರ ಮೇಲೆ ಬಾಯಿಯಲ್ಲಿರುವ ಸೂಕ್ಷ್ಮಾಣುಜೀವಿಗಳು ಮತ್ತು ಆಮ್ಲಗಳು ದಾಳಿ ಮಾಡುತ್ತವೆ. ಆಹಾರ ಕೊಳೆಯುವಿಕೆ ಆರಂಭವಾಗುತ್ತದೆ. ಹಾಗೆಯೇ ಕಸವೆಲ್ಲಾ ಸೇರಿ ಸೇರಿ ಹಲ್ಲುಗಳ ಮೇಲೆ ಗಟ್ಟಿಯಾದ ಪದರವೊಂದು ರೂಪುಗೊಳ್ಳುತ್ತದೆ (ಟಾರ್ಟರ್/ಕರೆ ಕಟ್ಟುವುದು). ಇದು ವಸಡಿನ ಮೇಲೆ ದುಷ್ಪರಿಣಾಮ ಬೀರುತ್ತದೆ. ಆರಂಭದಲ್ಲಿ ನೋವಿರದಿದ್ದರೂ ವಸಡಿನ ಅಂಚು ಕೆಂಪಗಾಗಿ ರಕ್ತ ಬರುತ್ತದೆ. ಹಾಗೇ ಮುಂದುವರಿದು ವಸಡಿನ ಪೂರ್ತಿ ಹಬ್ಬಿ ಊತ, ಉರಿ, ಕೀವು ಕಾಣಿಸಿಕೊಳ್ಳುತ್ತದೆ. ಇನ್ನೂ ನಿರ್ಲಕ್ಷಿಸಿದಲ್ಲಿ ಮೂಳೆಗೂ ಸೋಂಕು ಹರಡಬಹುದು. ಈ ಹಂತದಲ್ಲಿ ಬಾಯಿಯಿಂದ ದುರ್ವಾಸನೆ, ಹಲ್ಲುಗಳ ಅಲುಗಾಡುವಿಕೆ ಸಾಮಾನ್ಯ. ಬೇರು ಸಡಿಲವಾಗಿ ಹಲ್ಲು ಉದುರಿ ಬೀಳುತ್ತದೆ.
ಹೀಗಾಗದಂತೆ ಎಚ್ಚರವಹಿಸಲು ಪ್ರತಿ ಆರು ತಿಂಗಳಿಗೊಮ್ಮೆ ದಂತವೈದ್ಯರ ಬಳಿ ಸ್ಕೇಲಿಂಗ್ (ಕ್ಲೀನಿಂಗ್) ಮಾಡಿಸಬೇಕು. ವಸಡಿನ ಉರಿಯೂತ ಹೆಚ್ಚಿದ್ದಲ್ಲಿ ಬೇರುಗಳ ತನಕ ಮಾಡಲಾಗುವ ವಿಶೇಷ ಸ್ಕೇಲಿಂಗ್ (ಡೀಪ್ ಸ್ಕೇಲಿಂಗ್ - ರೂಟ್ ಪ್ಲೇನಿಂಗ್) ಬೇಕಾಗುತ್ತದೆ. ಸೋಂಕು ತೀವ್ರವಾದ ಸಂದರ್ಭದಲ್ಲಿ ವಸಡನ್ನು ಕತ್ತರಿಸಿ ಸ್ವಚ್ಚಗೊಳಿಸಿ, Àಪುನಃ ಹೊಲಿಯುವ ಶಸ್ತ್ರಚಿಕಿತ್ಸೆ, ಭಾಗಶಃ ಮೂಳೆ ಮರುಜೋಡಣೆ ಬೇಕಾಗಬಹುದು.
ತಣ್ಣನೆಯ ನೀರು ಕುಡಿಯುವಾಗ, ಸಿಹಿ ಸವಿಯುವಾಗ ಉಂಟಾಗುವ ಜುಂ ಎಂಬ ಸಂವೇದನೆ ಅಸಹನೀಯ. ಹಲ್ಲಿನ ಹೊರಕವಚ ಎನಾಮೆಲ್ ಸವೆದುÉ ಒಳಗಿನ ಪದರ ಡೆಂಟೀನ್ ನೇರವಾಗಿ ಬಾಯಿಯ ವಾತಾವರಣಕ್ಕೆ ತೆರೆದುಕೊಳ್ಳುತ್ತವೆ. ಹಲ್ಲುಗಳು ಜುಂ ಎನ್ನುತ್ತವೆ. ಇದು ತನ್ನ ಆರೋಗ್ಯ ಕಾಪಾಡಲು ಹಲ್ಲು ಬಳಸುವ ಸಂರಕ್ಷಣಾ ಸಂe್ಞÉ !
ಈ ಸಂವೇದನೆ ಕಡಿಮೆ ಮಾಡಲು ವಿಶೇಷ ಪೇಸ್ಟ್ /ಮೌತ್ವಾಶ್ಗಳು ಲಭ್ಯವಿದೆ. ಸಂವೇದನೆ ತೀವ್ರವಾಗಿದ್ದರೆ ಹಲ್ಲುಗಳ ಮೇಲೆ ಸೀಲೆಂಟ್ ಬಳಸುವುದು, ಮುರಿದ ಹಲ್ಲುಗಳಿಗೆ ಕ್ಯಾಪ್ ಹಾಕುವುದು ಮತ್ತು ಲೇಸರ್ ಚಿಕಿತ್ಸೆ ಅನುಸರಿಸುವ ಕ್ರಮಗಳು.
ಓರೆಕೋರೆಯಾಗಿ ಬಂದ ಹಲ್ಲುಗಳು ಸೌಂದರ್ಯಕ್ಕಷ್ಟೇ ಮಾರಕವಲ್ಲ, ಸ್ವಚ್ಚಗೊಳಿಸಲೂ ಕಠಿಣ. ಇದಕ್ಕೆ ಮುಖ್ಯ ಕಾರಣಗಳೆಂದರೆ ಅನುವಂಶೀಯತೆ, ದವಡೆ ಮತ್ತು ಹಲ್ಲುಗಳ ಗಾತ್ರದಲ್ಲಿ ವ್ಯತ್ಯಾಸ, ಬಾಲ್ಯದಲ್ಲಿ ರೂಢಿಸಿಕೊಂಡ ನಿರ್ದಿಷ್ಟ ಚಟಗಳು ಮತ್ತು ಹಾಲು ಹಲ್ಲುಗಳು ತೀರಾ ಬೇಗ ಅಥವಾ ತಡವಾಗಿ ಬರುವುದು.
ಹಲ್ಲುಗಳು ಸೊಟ್ಟಗಾಗಿ ಬರುವುದನ್ನು ಗಮನಿಸಿದ ಕೂಡಲೇ ವೈದ್ಯರ ಸಲಹೆ ಪಡೆಯಬೇಕು. ವಕ್ರದಂತ ಚಿಕಿತ್ಸೆ ಇದಕ್ಕೆ ಪರಿಹಾರ. ಇದರಲ್ಲಿ ಎರಡು ವಿಧ. ಸಣ್ಣ-ಪುಟ್ಟ ತೊಂದರೆಗಳಿಗೆ `ತೆಗೆದುಹಾಕಿ ಮಾಡಬಹುದಾದ ವಿಧಾನ' (ರಿಮೂವಬಲ್ ಅಪ್ಲೈಯನ್ಸ್) ಸಹಕಾರಿ. ಹಲ್ಲುಗಳ ಚಲನೆಯನ್ನು ಸಮಯಾಸಮಯಕ್ಕೆ ಗಮನಿಸಿ ತಂತಿಗಳ ಒತ್ತಡ ಹೆಚ್ಚು-ಕಡಿಮೆ ಮಾಡಬೇಕಾಗುವುದರಿಂದ ಚಿಕಿತ್ಸೆ ಸಂಪೂರ್ಣವಾಗಲು ದೀರ್ಘಕಾಲ ಬೇಕು.
ನಿರ್ಲಕ್ಷಿಸಲಾದ ದಂತಕ್ಷಯ,ವಸಡಿನ ಉರಿಯೂತ, ಮೂಳೆಸೋಂಕು, ಪೆಟ್ಟು ಅಪಘಾತಗಳಲ್ಲಿ ಹಲ್ಲನ್ನು ತೆಗೆಯಬೇಕಾದ ಅಥವಾ ತಾನೇ ಬೀಳುವ ಸಂದರ್ಭ ಇರುತ್ತದೆ. ಕೃತಕ ದಂತಗಳು ಇಂಥ ಪರಿಸ್ಥಿತಿಯಲ್ಲಿ ಉಪಯುಕ್ತ.
ಇದನ್ನು ಅಳವಡಿಸುವುದರಲ್ಲೂ ಎರಡು ಬಗೆ. “ತೆಗೆದು ಹಾಕಿ ಮಾಡಬಹುದಾದ ಕೃತಕ ದಂತ” (ರಿಮೂವಬಲ್ ಪಾರ್ಶಿಯಲ್ ಡೆಂಚರ್) ಮತ್ತು “ಸ್ಥಿರವಾದ ದಂತಗಳು” (ಫಿಕ್ಸೆಡ್ ಡೆಂಚರ್). ಖಾಲಿ ಇರುವ ಹಲ್ಲಿನ ಜಾಗದ ಅಕ್ಕಪಕ್ಕದ ಹಲ್ಲುಗಳನ್ನು ಆಧಾರವಾಗಿಟ್ಟುಕೊಂಡು ಮಾಡಲಾಗುವ ಬ್ರಿಡ್ಜ್ಗಳು ಯಶಸ್ವಿ ಮತ್ತು ಜನಪ್ರಿಯ ಚಿಕಿತ್ಸಾ ವಿಧಾನ. ಇತ್ತೀಚೆಗೆ ಸಣ್ಣ ಮೊಳೆಯಂಥ ಸಾಧನವನ್ನು ದವಡೆ ಮೂಳೆಯೊಳಗೆ ಕೂರಿಸಿ, ಮೇಲಿನಿಂದ ಹಲ್ಲು ಕೂರಿಸುವ ಇಂಪ್ಲಾಂಟ್ಸ್ಗಳು ದುಬಾರಿಯಾದರೂ ಉತ್ತಮ ಫಲಿತಾಂಶ ನೀಡುತ್ತಿವೆ.
`ಎಷ್ಟೇ ಬ್ರಶ್ ಮಾಡಿದ್ರೂ ಬಿಳಿಯಾಗಲ್ಲ, ಹಳದೀ ಬಣ್ಣ' ಅಥವಾ `ಶೇಪೇ ಸರಿ ಇಲ್ಲ' ಎಂದು ತಮ್ಮ ಹಲ್ಲುಗಳ ಬಗ್ಗೆ ಗೊಣಗುವವರೆಷ್ಟೋ ಜನ. ಹಲ್ಲಿನ ಬಣ್ಣ, ಕೆಲವು ಮಾತ್ರೆಗಳಿಂದ, ರಾಸಾಯನಿಕಗಳಿಂದ ಬದಲಾಗುವ ಸಾಧ್ಯತೆ ಇದೆ. ಹಲ್ಲಿನ ಆಕಾರ ಅನುವಂಶೀಯವಾಗಿ ಬಂದಿರಬಹುದು ಅಥವಾ ಅಪಘಾತಕ್ಕೆ ಒಳಗಾಗಿ ಬದಲಾಗಿರಬಹುದು.
ಇದಕ್ಕೂ ಪರಿಹಾರವಿದೆ. ಹಲ್ಲಿನ ಹೊರಪದರಕ್ಕೆ ಮಾತ್ರ ಬೇರೆ ವಸ್ತು ಹಾಕಿ ಹಲ್ಲಿನ ಬಣ್ಣ - ಆಕಾರ ಬದಲಾಯಿಸಬಹುದು. ಇದನ್ನು `ವೆನಿಯರಿಂಗ್' ಎನ್ನಲಾಗುತ್ತದೆ. ಸಿನಿಮಾ ತಾರೆಯರ ನಗುವಿನ ಗುಟ್ಟು ಇದೇ. ಹಾಗೆಯೇ `ಬ್ಲೀಚಿಂಗ್' ಚಿಕಿತ್ಸೆಯ ಮೂಲಕವೂ ಹಲ್ಲುಗಳ ಬಣ್ಣವನ್ನು ತಿಳಿಗೊಳಿಸಬಹುದು. ಇನ್ನೂ ಚೆಂದ ಕಾಣಬೇಕೆಂದಿದ್ದಲ್ಲಿ, ಫಳ ಫಳ ನಗು ಬಯಸಿದಲ್ಲಿ, ಹೊಳೆಯುವ ಹರಳನ್ನು ಹಲ್ಲಿನ ಮೇಲೆ ಕೂರಿಸುವ `ಟೂತ್ ಜ್ಯುವೆಲ್ಲರಿ' ಮಾಡಿಸಿಕೊÀಳ್ಬಹುದು! ದಂತಾರೋಗ್ಯ ಕಾಪಾಡಿಕೊಳ್ಳಲು ಸುಲಭ ಸಲಹೆಗಳು:
ಫಳ ಫಳ ಮಿನುಗುವ, ನೇರವಾದ ಹಲ್ಲುಗಳ ಸಾಲು ಎಲ್ಲರ ಕನಸು. ಚೆಂದದ ಹಲ್ಲುಗಳಿಂದ ಕೂಡಿದ ಅಂದದ ನಗು, ವ್ಯಕ್ತಿಯೊಬ್ಬ ಧರಿಸಬಹುದಾದ ಅಮೂಲ್ಯ ಆಭರಣ. ಬಾಯಿ ಮತ್ತು ಹಲ್ಲಿನ ಆರೋಗ್ಯ ಉತ್ತಮವಾಗಿದ್ದಾಗ ಮಾತ್ರ ನಗುವೂ ಸುಂದರ. ದಂತಾರೋಗ್ಯ ಕಾಪಾಡಲು ಉತ್ತಮ ಆಹಾರ ಸೇವನೆ, ದಿನಕ್ಕೆರಡು ಬಾರಿ ಸರಿಯಾಗಿ ಬ್ರಶಿಂಗ್ ಮತ್ತು ನಿಯಮಿತವಾಗಿ ದಂತವೈದ್ಯರ ಭೇಟಿ ಕಡ್ಡಾಯ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ. ಆದರೆ ನಮಗೇ ಅರಿವಿಲ್ಲದೇ, ದಂತಾರೋಗ್ಯಕ್ಕೆ ಸಂಬಂಧವೇ ಇಲ್ಲ ಎಂದುಕೊಂಡು ನಿತ್ಯ ಸೇವಿಸುವ ಆಹಾರ ಮತ್ತು ರೂಢಿಸಿಕೊಂಡ ಅಭ್ಯಾಸಗಳು ಹಲ್ಲು-ವಸಡಿಗೆ ಹಾನಿಕಾರಕ ಎಂಬುದು ತಿಳಿಯದ ವಿಷಯ.
ಬ್ಲೀಚಿಂಗ್ ಚಿಕಿತ್ಸೆಯಿಂದ ಈ ಕಲೆಗಳನ್ನು ತೆಗೆಯಬಹುದಾದರೂ ಅತಿಯಾದ ಕಾಫಿ ಸೇವನೆ ಬಿಡುವುದೇ ಒಳ್ಳೆಯದು.
ಚಳಿ, ಮಳೆ, ಬಿಸಿಲು ಯಾವ ಕಾಲದಲ್ಲೂ ಕುರುಕುರು ತಿನ್ನಬಹುದಾದ ಖಾರ-ಖಾರ ಆಲೂಚಿಪ್ಸ್ ರುಚಿಯೇನೋ ಹೌದು. ಚಿಪ್ಸ್ ತಿಂದಾಗ ಅದರ ಸಣ್ಣ ಸಣ್ಣ ಚೂರುಗಳು ಹಲ್ಲುಗಳ ಸಂದಿಯಲ್ಲಿ ಉಳಿಯುವುದು ಸಾಮಾನ್ಯ. ಬಾಯಿಯಲ್ಲಿರುವ ಸೂP್ಷÁ್ಮಣುಜೀವಿಗಳಿಗೆ ಈ ಪಿಷ್ಟಯುಕ್ತ ಆಹಾರ ಅಂದರೆ ಪ್ರೀತಿ. ಅದನ್ನು ತಿಂದು ಹಲ್ಲು ನಾಶಪಡಿಸುವ ಆಸಿಡ್ ಉತ್ಪಾದಿಸುತ್ತವೆ. ಒಂದು ಬಾರಿ ಚಿಪ್ಸ್ ತಿಂದ ನಂತರ ಸುಮಾರು ಇಪ್ಪತ್ತು ನಿಮಿಷಗಳಷ್ಟು ಕಾಲ ಹಲ್ಲುಗಳ ಮೇಲೆ ಆಸಿಡ್ ದಾಳಿ, ಪರಿಣಾಮ ದಂತಕ್ಷಯ! ಆದ್ದರಿಂದ ಆಲೂ ಚಿಪ್ಸ್ ತಿನ್ನುವುದನ್ನು ಕಡಿಮೆ ಮಾಡಿ ಮತ್ತು ತಿಂದ ನಂತರ ಶುದ್ಧ ನೀರಿನಿಂದ ಚೆನ್ನಾಗಿ ಬಾಯಿ ಮುಕ್ಕಳಿಸಿ.
ವಿಟಮಿನ್ಗಳಿಂದ ಕೂಡಿದ ಆಂಟಿ ಆಕ್ಸಿಡೆಂಟ್ ಹೊಂದಿರುವ ಹಣ್ಣಿನ ರಸ ದಾಹ ತೀರಿಸುವುದಷ್ಟೇ ಅಲ್ಲ, ಸ್ವಾದಿಷ್ಟವೂ. ಆದರೆ ಅದರಲ್ಲಿರುವ ಸಕ್ಕರೆ ಅಂಶ ಹೆಚ್ಚಿದಷ್ಟೂ ಹಲ್ಲುಗಳಿಗೆ ತೊಂದರೆ, ದಂತಕ್ಷಯಕ್ಕೆ ರಾಜಮಾರ್ಗ.
ತಾಜಾ ಹಣ್ಣು ಹಾಗೇ ತಿನ್ನುವುದು ಒಳ್ಳೆಯದು. ಹಣ್ಣಿನ ರಸ ಕುಡಿಯುವುದಾದಲ್ಲಿ ಸಕ್ಕರೆ ಸೇರಿಸದೇ ಅಥವಾ ಸಕ್ಕರೆ ಪ್ರಮಾಣ ಹೆಚ್ಚಿದ್ದರೆ ನೀರು ಸೇರಿಸಿ ಕುಡಿಯಬಹುದು.
ಬರೀ ನೀರಿನಿಂದ ಮಾಡಿದ ಐಸ್ ಕ್ಯೂಬ್ಗಳನ್ನು `ಕುಟುಂ' ಎಂದು ಕಡಿಯುತ್ತಾ ತಿನ್ನುವುದು ಬಹಳಷ್ಟು ಜನರ ಇಷ್ಟದ ಕೆಲಸ. ಸಕ್ಕರೆ ಇಲ್ಲ, ತಣ್ಣಗಾಗುತ್ತೆ, ತಿಂದರೆ ತಪ್ಪೇನು ಎಂಬ ವಾದ ಅವರದ್ದು. ಆದರೆ ಶೈತ್ಯೀಕರಿಸಿದ ಕ್ಯೂಬ್ ಗಟ್ಟಿ ಇದ್ದು, ತಿನ್ನುವಾಗ ಒತ್ತಡ ಹೆಚ್ಚಾಗಿ ಹಲ್ಲಿನಲ್ಲಿ ಬಿರುಕು ಮೂಡಬಹುದು ಅಥವಾ ಮುರಿಯಲೂ ಸಾಧ್ಯ. ಅತೀ ತಂಪು ವಸಡಿಗೆ ಕಿರಿಕಿರಿ ಉಂಟು ಮಾಡಿ ಆಗಾಗ್ಗೆ ಹಲ್ಲು ನೋವು ಕಾಣಿಸಬಹುದು.
ಹಾಗಾಗಿ ಐಸ್ಕ್ಯೂಬ್ಗಳನ್ನು ನೇರವಾಗಿ ಹಲ್ಲುಗಳ ಮಧ್ಯೆ ಕಚ್ಚಬಾರದು. ಬದಲಾಗಿ ಬಾಯಿಯಲ್ಲಿಟ್ಟು ಹಾಗೇ ಕರಗಲು ಬಿಡಬೇಕು.
ಬಣ್ಣ ಬಣ್ಣದ, ವಿವಿಧ ವಿನ್ಯಾಸದ ಬಾಟಲಿಗಳಲ್ಲಿ ಬರುವ ಈ ಲಘು ಪಾನೀಯಗಳಲ್ಲಿ ಹೆಚ್ಚಿನ ಸಕ್ಕರೆ ಅಂಶ ಮಾತ್ರವಲ್ಲ ಪಾಸ್ಫಾರಿಕ್ ಮತ್ತು ಸಿಟ್ರಿಕ್ ಆಮ್ಲ ಇರುತ್ತದೆ. ಇವುಗಳ ನಿರಂತರವಾದ ಸೇವನೆಯಿಂದ ಹಲ್ಲಿನ ಪದರಗಳು ಕರಗುತ್ತವೆ.ಮೇಲ್ಪದರ ಸವೆದಂತೆ ನರತುದಿಗಳು ಹೊರಗಿನ ವಾತಾವರಣಕ್ಕೆ ತೆರೆದುಕೊಂಡು `ಜುಂ' ಎನ್ನುವ ಸಂವೇದನೆ ಕಾಡುತ್ತದೆ.
ಇದರ ಬದಲು ಎಳೆನೀರು, ಮಜ್ಜಿಗೆ, ರಾಗಿ ಪಾನಕ ಬಾಯಿಗೂ -ಜೇಬಿಗೂ ಹಿತ.
ಒಳ್ಳೆ ಊಟಕ್ಕೆ ವೈನ್ ಉತ್ತಮ ಜತೆ, ಆದರೆ ದಂತಾರೋಗ್ಯಕ್ಕೆ ಒಳ್ಳೆಯದಲ್ಲ. ವೈಟ್ ವೈನ್ನಲ್ಲಿ ಇರುವ ಶಕ್ತಿಶಾಲಿ ಆಸಿಡ್ ಹಲ್ಲುಗಳನ್ನು ಕೊರೆಯುತ್ತವೆ. ರೆಡ್ ವೈನ್ನಲ್ಲಿನ ಆಸಿಡ್ ಹಲ್ಲಿನ ಹೊರಪದರ ಎನಾಮೆಲ್ ಕೊರೆಯುತ್ತಾ ಅಸಮ ಮೇಲ್ಮೈ ಮಾಡುತ್ತದೆ. ಇದರಿಂದಾಗಿ ಕಲೆ ಕೂರುವ ಸಾಧ್ಯತೆ ಹೆಚ್ಚು. ಇದಲ್ಲದೆ ವರ್ಣಕಾರಕಗಳಾದ ಕ್ರೋಮೋಜೆನ್-ಟಾನಿನ್, ಹಲ್ಲಿಗೆ ಅಂಟಿ ಕೂರುತ್ತದೆ. ಒಟ್ಟಿನಲ್ಲಿ ವೈನ್ ಗ್ಲಾಸ್ ಖಾಲಿ ಆದರೂ ಅದರ ಬಣ್ಣ ಹಲ್ಲುಗಳಲ್ಲಿ!
ವೈನ್ ಸೇವಿಸುವಾಗ ಚೀಸ್ ತಿನ್ನುವುದರಿಂದ ಆಮ್ಲೀಯ ಗುಣ ಕಡಿಮೆ ಆಗುತ್ತದೆ. ವೈನ್ ನಂತರ ಬಾಯಿ ಮುಕ್ಕಳಿಸುವುದು ಕಡ್ಡಾಯ.
ಆಫೀಸಿನಲ್ಲಿರುವಾಗ, ಓದುತ್ತಿರುವಾಗ ನಮಗೇ ಗೊತ್ತಿಲ್ಲದೇ ಕೈಯ್ಯಲ್ಲಿ ಹಿಡಿದ ಪೆನ್-ಪೆನ್ಸಿಲ್ ತುದಿ ಕಚ್ಚುವುದು ಅತೀ ಸಾಮಾನ್ಯ. ಹೀಗೆ ಮಾಡಿದಾಗ ಹಲ್ಲಿನ ಮೇಲೆ ಅನಗತ್ಯ ಒತ್ತಡ ಬೀಳುತ್ತದೆ. ಇದರಿಂದ ಹಲ್ಲಿನ ಬಿರುಕು/ಮುರಿತ ಕಾಣಬಹುದು.
ಹಲ್ಲು ಇರುವುದು ತಿನ್ನಲು, ಪೆನ್ಸಿಲ್ ಇರುವುದು ಬರೆಯಲು ಎಂಬ ನಿಯಮ ಪಾಲಿಸುವುದು ಒಳ್ಳೆಯದು
ಮನಸ್ಸಿಗೆ ಕಿರಿ-ಕಿರಿ, ಹೆದರಿಕೆ, ಗಾಬರಿ, ಒತ್ತಡ ಉಂಟಾದಾಗ ಉಗುರು ಕಚ್ಚುವ ಅಭ್ಯಾಸ ಮಕ್ಕಳಲ್ಲಷ್ಟೇ ಅಲ್ಲ, ವಯಸ್ಕರಲ್ಲೂ ಕಂಡುಬರುತ್ತದೆ. ಉಗುರಿನಲ್ಲಿರುವ ಸೂP್ಷÁ್ಮಣುಜೀವಿಗಳು ಬಾಯಿಗೆ ನೇರ ಪ್ರವೇಶ ಪಡೆದು, ಜಠರ ತಲುಪಿ ಸೋಂಕು ಉಂಟಾಗಬಹುದು. ಸತತ ಘರ್ಷಣೆಯಿಂದ ಹಲ್ಲುಗಳ ಎನಾಮೆಲ್ ಕ್ರಮೇಣ ಸವೆಯಲು, ಬಿರುಕು ಬಿಡಲು ಸಾಧ್ಯ.
ಹಾಗಾಗಿ ಉಗುರು ಕತ್ತರಿಸಲು ನೇಲ್ಕಟ್ಟರ್ ಬಳಸಬೇಕು, ಹಲ್ಲಲ್ಲ.
ಸೀಲ್ ಆದ ಕವರ್, ಬಟ್ಟೆಗಳ ಮೇಲಿನ ಟ್ಯಾಗ್, ಕೆಚಪ್ ಬಾಟಲ್, ಪಿಸ್ತಾದ ಹೊರಕವಚ ಇವನ್ನೆಲ್ಲಾ ತೆಗೆಯಲು ತಕ್ಷಣವೇ ಬಳಕೆಯಾಗುವುದು ಹಲ್ಲುಗಳು! ತೆಗೆಯುವ ಭರದಲ್ಲಿ ಹಲ್ಲುಗಳ ಮೇಲೆ ಅನಗತ್ಯ ಬಲ ಪ್ರಯೋಗವಾಗಿ ಅದು ನೋವು, ಬಿರುಕು, ಮುರಿತದ ರೂಪದಲ್ಲಿ ಕಾಣಿಸಿಕೊಳ್ಳುತ್ತದೆ. ಇದನ್ನು ತಡೆಯಲು ಕತ್ತರಿಯಂಥಾ ಸೂಕ್ತ ಉಪಕರಣ ಬಳಸಿ.
ಮಕ್ಕಳಲ್ಲಿ ಹಾಗೂ ಹದಿಹರೆಯದವರಲ್ಲಿ ಕೆಟ್ಟ ಪರಿಣಾಮ ಬೀರುವ ಅಭ್ಯಾಸಗಳಿವು. ಬೆರಳು ಚೀಪುವಿಕೆಯಿಂದ ಮೇಲಿನ ಮುಂದಿನ ಹಲ್ಲುಗಳು ಮುಂದಾಗಿ ಬಂದು ಕೆಳದವಡೆಯ ಮುಂದಿನ ಹಲ್ಲುಗಳು ಹಿಂದೆ ಹೋಗುತ್ತವೆ. ಈ ಎರಡೂ ಅಭ್ಯಾಸಗಳಿಂದ ಅಸಮರ್ಪಕ ಹಲ್ಲುಗಳ ಜೋಡಣೆ ಮತ್ತು ದವಡೆಗಳ ಬೆಳವಣಿಗೆಯಲ್ಲಿ ವ್ಯತ್ಯಾಸ ಕಾಣಿಸಬಹುದು.
ಈ ಅಭ್ಯಾಸಗಳಿಗೆ ಕಾರಣ ಕಂಡುಹಿಡಿದು ನಿಲ್ಲಿಸಬೇಕು.
ತಿಂದ ಆಹಾರ ಹಲ್ಲುಗಳ ನಡುವಿನ ಸಂದಿಯಲ್ಲಿ ಸಿಕ್ಕಿದಾಗ ಅದನ್ನು ತೆಗೆಯಲು ಹಲ್ಲುಕಡ್ಡಿ ಉಪಯುಕ್ತ ನಿಜವೇ. ಆದರೆ ಹೆಚ್ಚಿನ ಸಂದರ್ಭಗಳಲ್ಲಿ ಜೋರಾಗಿ ಚುಚ್ಚಿ ವಸಡಿಗೆ ನೋವಾಗುತ್ತದೆ. ಪದೇ ಪದೇ ಹಲ್ಲು ಕಡ್ಡಿ ಹಾಕುವುದರಿಂದ ಹಲ್ಲಿನ ನಡುವಿನ ಸಂದಿ ದೊಡ್ಡದಾಗುವ, ಹಲ್ಲಿನ ಬೇರಿಗೂ ಪೆಟ್ಟಾಗುವ ಸಾಧ್ಯತೆ ಇದೆ.
ಹಲ್ಲು ಕಡ್ಡಿ ಬದಲು ಫ್ಲಾಸ್ ಬಳಕೆ ಒಳ್ಳೆಯದು.
ಹೆಚ್ಚು ಕಾಲ ಗಸ ಗಸ ತಿಕ್ಕಿದಷ್ಟೂ ಹಲ್ಲು ಫಳಗುಟ್ಟುತ್ತದೆ ಎಂಬ ನಂಬಿಕೆ ಜನರಲ್ಲಿದೆ. ಬಿರುಸಾದ ಎಳೆಯುಳ್ಳ ಬ್ರಶ್ನಿಂದ ಹೆಚ್ಚು ಕಾಲ ಬ್ರಶ್ ಮಾಡಿದಂತೆ ಹಲ್ಲಿನ ಮೇಲ್ಪದರ ಸವೆಯುತ್ತಾ ಬರುತ್ತದೆ. ವಸಡಿನ ಹಿಂಸರಿಯುವಿಕೆ ಮತ್ತು ಸಂವೇದನಾಶೀಲ ಹಲ್ಲುಗಳು ಇದರ ಪರಿಣಾಮ.
ಹಲ್ಲು ಸ್ವಚ್ಛವಾಗಲು ದಿನಕ್ಕೆರಡು ಬಾರಿ ಮೂರರಿಂದ ನಾಲ್ಕು ನಿಮಿಷ ಮೃದು ಎಳೆಯ ಬ್ರಶ್ಗಳಿಂದ ವೃತ್ತಾಕಾರವಾಗಿ ಬ್ರಶ್ ಮಾಡಿದರೆ ಸಾಕು.
ಹೀಗೆ ನಮ್ಮ ಆಹಾರ-ಅಭ್ಯಾಸಗಳಿಗೂ ಮತ್ತು ದಂತಾರೋಗ್ಯಕ್ಕೂ ನಿಕಟವಾದ ಸಂಬಂಧ ಇರುವುದರಿಂದ ಅದರ ಬಗ್ಗೆ ಕಾಳಜಿ ಅಗತ್ಯ.
ಡಾ|| ಕೆ.ಎಸ್. ಚೈತ್ರಾ
(ಪ್ರಜಾವಾಣಿ, ಕರ್ಮವೀರ ಪ್ರಕಟಿತ)
ಕೊನೆಯ ಮಾರ್ಪಾಟು : 10/15/2019