ಬಾಯಿಹುಣ್ಣಿಗೆ ಮುಖ್ಯಕಾರಣ ಹಾರ್ಮೋನ್ ಅಸಮತೋಲನ, ಒತ್ತಡ ಮತ್ತು ಕರುಳಿನ ತೊಂದರೆಗಳು. ಒಂದು ಪುಟ್ಟ ಹುಣ್ಣೇ ಆದರೂ ನೀಡುವ ಉಪಟಳಕ್ಕೆ ಮಾತ್ರ ಲೆಕ್ಕವಿಲ್ಲ. ಆಹಾರ ಸೇವಿಸುವುದಕ್ಕೆ ಸಾಧ್ಯವಾಗದೆ, ಖಾರ ತಿಂದರೆ ಜೀವ ಹಿಂಡಿದಂತಾಗುವ, ಮಾತನಾಡುವುದಕ್ಕೂ ಕಷ್ಟವಾಗುವ ಈ ಪರಿಸ್ಥಿತಿ ಹಲವರನ್ನು ಕಾಡಿರಬಹುದು. ಹೆಚ್ಚಾಗಿ ತಾರುಣ್ಯದಲ್ಲಿ ಕಂಡು ಬರುವ ಈ ಸಮಸ್ಯೆ ಕಿರಿಕಿರಿ ಉಂಟುಮಾಡುತ್ತದೆ. ಕೆಲವರಲ್ಲಂತೂ ಪದೇ ಪದೇ ಈ ಸಮಸ್ಯೆ ಕಾಡತೊಡಗುತ್ತದೆ. ಇಂಥ ಸಂದರ್ಭದಲ್ಲಿ ಸಮಸ್ಯೆಯ ಕಾರಣವನ್ನು ಅರಿತು ಸರಿಯಾದ ಚಿಕಿತ್ಸೆ ಪಡೆಯಬೇಕು ಎನ್ನುತ್ತಾರೆ ವೈದ್ಯರು. ಗಂಭೀರ ಸಮಸ್ಯೆಯೇನಲ್ಲದಿದ್ದರೂ ಒಂದು ರೀತಿಯ ಅಸಹನೆಯನ್ನು ಸೃಷ್ಟಿಸುವಲ್ಲಿ ಇದು ನಿಸ್ಸೀಮ. ಆದ್ದರಿಂದ ಬಾಯಿಹುಣ್ಣಿನ ಸಮಸ್ಯೆಗೆ ಕೆಲವು ಸುಲಭೋಪಾಯಗಳನ್ನು ನಾವೇ ಕಂಡುಕೊಳ್ಳಬಹುದು. ಬಿ ಕಾಂಪ್ಲೆಕ್ಸ್ ಕೊರತೆಯೂ ಇದಕ್ಕೆ ಕಾರಣವಾಗಿರುವುದರಿಂದ ಬಿ ಕಾಂಪ್ಲೆಕ್ಸ್ ಮಾತ್ರೆಯನ್ನು ತೆಗೆದುಕೊಳ್ಳಲು ವೈದ್ಯರು ಸಲಹೆ ನೀಡುತ್ತಾರೆ. ವಿಟಾಮಿನ್ ಸಿ ಕೊರತೆಯಿಂದಲೂ ಈ ಸಮಸ್ಯೆ ಕಾಡಬಹುದಾದ್ದರಿಂದ ಕಿತ್ತಳೆ ಮುಂತಾಗಿ ಸಿ ಜೀವಸತ್ವ ಹೆಚ್ಚಿರುವ ಪದಾರ್ಥಗಳನ್ನು ಸೇವಿಸಬೇಕು. ತಿಂಗಳಿಗೊಮ್ಮೆ ಹಲ್ಲುಜ್ಜುವ ಬ್ರೆಶ್ ಅನ್ನು ಬದಲಿಸಿ. ಬಾಯಿ ಹುಣ್ಣಿಗೆ ಅದೂ ಕಾರಣವಾಗಿರಬಹುದು. ಹೆಚ್ಚು ನೀರು ಸೇವಿಸಿ. ಚ್ಯುವಿಂಗ್ಗಮ್ನಂಥ ಪದಾರ್ಥಗಳನ್ನು ತ್ಯಜಿಸಿ. ಹೆಚ್ಚು ಹೆಚ್ಚು ಖಾರ ಮತ್ತು ಮಸಾಲೆ ಪದಾರ್ಥಗಳ ಸೇವನೆಯನ್ನು ಕಡಿಮೆ ಮಾಡಿ. ಹಸಿ ಈರುಳ್ಳಿಯಲ್ಲಿರುವ ಸಲ್ಫರ್ ಅಂಶ ಈ ಸಮಸ್ಯೆಯನ್ನು ಬಗೆಹರಿಸಲು ಸಹಕಾರಿ. ಆದ್ದರಿಂದ ಹೆಚ್ಚು ಹೆಚ್ಚು ಹಸಿ ಈರುಳ್ಳಿ ಸೇವಿಸಿ. ಬಾಯಿಹುಣ್ಣಿನ ಸಮಸ್ಯೆ ಕಾಣಿಸಿಕೊಂಡಾಗ ಕಾಫಿ ಮತ್ತು ಚಹ ಸೇವನೆಯನ್ನು ಆದಷ್ಟು ಕಡಿಮೆಮಾಡಿ. ಬಾಯಿಹುಣ್ಣು ಕಂಡುಬಂದಾಗ ಹೆಚ್ಚು ಹೆಚ್ಚು ದ್ರವ ಪದಾರ್ಥ ಗಳನ್ನೇ ಸೇವಿಸಿ. ಗಟ್ಟಿ ಪದಾರ್ಥಗಳು ಸಮಸ್ಯೆಯನ್ನು ಉಲ್ಬಣಿಸುವಂತೆ ಮಾಡುತ್ತವೆ. ಮಜ್ಜಿಗೆ ಸೇವಿಸುವುದು ಒಳ್ಳೆಯದು. ಬಾಯಿಯ ಸ್ವಚ್ಛತೆಯನ್ನು ಕಾಪಾಡಿಕೊಳ್ಳುವುದೂ ಮುಖ್ಯ. ದಿನಕ್ಕೆ ಮೂರ್ನಾಲ್ಕು ಬಾರಿ ಉಗುರು ಬೆಚ್ಚಗಿನ ನೀರಲ್ಲಿ ಬಾಯಿ ಮುಕ್ಕಳಿಸುತ್ತಿರಿ. ತೆಂಗಿನೆಣ್ಣೆಯನ್ನು ಗಾಯಕ್ಕೆ ಲೇಪಿಸಿಕೊಳ್ಳುತ್ತಿದ್ದರೆ ಸಮಸ್ಯೆ ಬೇಗ ಪರಿಹಾರವಾಗುತ್ತದೆ. ದೇಹದ ಆರೋಗ್ಯ ಶೈಲಿ ಕ್ರಮಬದ್ಧವಾಗಿದ್ದರೆ ಬಾಯಿಹುಣ್ಣು ಕಾಣಿಸಿಕೊಳ್ಳುವುದಿಲ್ಲ. -ಶಶಿ ಮೂಲ: ವಿಕ್ರಮ