অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ನಿದ್ದೆ

ನಿದ್ದೆ

ಜೀವನದಲ್ಲಿ ನಿರಾಯಾಸವಾಗಿ ಮಾಡುವ ಕ್ರಿಯೆಗಳಲ್ಲಿ ನಿದ್ದೆಯೂ ಒಂದು. ನಿದ್ದೆಯೂ ಒಂದು ಕೆಲಸವೆ? ನಿದ್ದೆ ‘ಮಾಡುವುದು’ ಹೇಗೆ ಎಂಬ ಪ್ರಶ್ನೆ ಅರ್ಥಹೀನವಲ್ಲವೆ? ನಿದ್ದೆ ತಾನಾಗಿ ಬಂದು, ತಾನಾಗಿ ಆಗುವುದಲ್ಲವೆ? ಪ್ರಜ್ಞಾಪೂರ್ವಕವಾಗಿ ನಿದ್ದೆ ಮಾಡಲು ಸಾಧ್ಯವೆ? ಎಂದೆಲ್ಲ ಪ್ರಶ್ನೆಗಳೇಳುವುದು ಸಹಜ.

ನಿದ್ದೆಯೇನೋ ತನಗೆ ತಾನೇ ಆಗಬೇಕಾದ ಪ್ರಕೃತಿದತ್ತ ವರವೇ. ಆದೆ ಆರೋಗ್ಯದ ಎಲ್ಲಾ ಅಂಶಗಳಂತೆಯೇ, ಮಾನವನ ಅಜ್ಞಾನ, ಅಸಡ್ಡೆಗಳಿಂದ, ನಿದ್ದೆಯೂ ನಜ್ಜುಗುಜ್ಜಾಗಿ ಶಾಪವಾಗಹತ್ತಿದೆ. ಅನಿಯಮಿತ ಆಹಾರ ಸೇವನೆಯಿಂದ ಅಜೀರ್ಣದಿಂದ ಹಿಡಿದು ಸಕ್ಕರೆ ಖಾಯಿಲೆಗಳು ಹೆಚ್ಚುತ್ತವೆ. ನಿದ್ರಾ ಖಾಯಿಲೆಗಳ ಪರಿಣಾಮ ರಕ್ತೊತ್ತಡ, ಹಾರ್ಟ್ ಅಟ್ಯಾಕ್, ಪಾರ್ಶ್ವವಾಯು ಅಲ್ಲದೇ ಅಂತಿಮವಾಗಿ ಚಿರನಿದ್ರೆ ಅರ್ಥಾತ್ ಮರಣ! ಆದ್ದರಿಂದ ನಿದ್ದೆ ಮಾಡುವುದು ಹೇಗೆ ಎಂದು ಅರಿತು, ಕಲಿತು, ಪಾಲಿಸಬೇಕಾದ ಅವಶ್ಯಕತೆ ಇದೆ. ನಿದ್ದೆ ಮಾಡಲು ಗಮನಿಸಬೇಕಾದ ಮೂಲಭೂತ ಅಂಶಗಳು ಹೀಗಿವೆ:

ಶಿಸ್ತು: ಹ್ಞಾಂ! ಇದೇನು! ನಿದ್ದೆ ಮಾಡಲು ಶಿಸ್ತೇ? ಶಿಸ್ತಾಗಿ ನಿದ್ದೆ ಮಾಡಲು ಸಾಧ್ಯವೇ? ಖಂಡಿತಾ ಹೌದು. ಸುಖವಾದ ನಿದ್ದೆಗೆ ಶಿಸ್ತಿರಬೇಕು. ಸಮಯದ ಶಿಸ್ತು, ಜಾಗದ ಶಿಸ್ತು, ನಿತ್ಯ ನಿಗದಿತ ಸಮಯಕ್ಕೆ ಮಲಗಿ, ನಿಗದಿತ ಸಮಯಕ್ಕೆ ಎಚ್ಚರಗೊಳ್ಳಬೇಕು. ಒಂದೇ ಜಾಗದಲ್ಲಿ ಮಲಗಬೇಕು. ಮನಸ್ಸು ಬಂದಾಗ ಮಲಗುವುದು, ಸೋಮಾರಿತನದಿಂದ, ಚಳಿಗಾಲವೆಂದು ತಡವಾಗಿ ಏಳುವುದು, ಟಿ.ವಿ. ನೋಡುತ್ತಾ ಸೋಫಾ ಮೇಲೇ ಮಲಗಿಬಿಡುವುದು… ಮುಂತಾದ ಅಭ್ಯಾಸಗಳು ಹಾನಿಕಾರಿ. ಹೀಗೆ ಮಲಗಿದಾಗ ಮೊದ ಮೊದಲಿಗೆ ಸುಖವೆನಿಸಿದರೂ ಕ್ರಮೇಣ ದೇಹದ ನಿದ್ರಾ ಅಭ್ಯಾಸ ಅಸ್ತವ್ಯಸ್ತವಾಗಿ ಸಮಸ್ಯೆಯಾಗಿ ಬಿಡುತ್ತದೆ.

ಚಿಂತೆ: ‘ಚಿಂತೆಯಿಲ್ಲದ ಮುಕ್ಕನಿಗೆ ಸಂತೆಯಲ್ಲೂ ನಿದ್ದೆ ಬಂತು’ ಎಂಬ ಗಾದೆ ಅಕ್ಷರಶಃ ಸತ್ಯ. ಬೀದಿ ಬದಿಯಲ್ಲೋ, ಗಿಜಿಗಿಜಿಯಾಗಿರುವ ಸಂತೆಯಲ್ಲೋ ನಿಶ್ಚಿಂತೆಯಿಂದ ಮಲಗಿ ನಿದ್ರಿಸುವವರನ್ನು ನೋಡಿದರೆ ಅನೇಕರಿಗೆ ಅಸೂಯೆಯಾಗುತ್ತದೆ. ಚಿಂತೆ ನಿದ್ರೆಯ ಶತ್ರು. ನಮ್ಮ ಆಸೆ, ದುರಾಸೆ, ಮೋಹಗಳ ಕಾರಣದಿಂದ ಹತ್ತಾರು ವ್ಯವಹಾರಗಳನ್ನು ತಲೆಗೆ ಹಚ್ಚಿಕೊಂಡು ಮಲಗಿದಾಗ, ಆ ಚಿಂೆಗಳಿರುವಲ್ಲಿ ನಿದ್ದೆ ಸುಳಿಯದು. ಅನೇಕರು ನಿದ್ದೆ ಬಾರದಿರಬಹುದೆಂಬ ಚಿಂತೆಯಲ್ಲೇ ಇನ್ನಷ್ಟು ನಿದ್ರಾಹೀನರಾಗಿ ಬಿಡುತ್ತಾರೆ.ಹಾಗಾದರೆ ಹತ್ತಾರು ಜವಾಬ್ದಾರಿಗಳಿರುವ ಸಮಾಜದ ಗಣ್ಯವ್ಯಕ್ತಿಗಳು ಹೇಗೆ ನಿದ್ದೆ ಪಡೆಯುತ್ತಾರೆ? ಪ್ರಾಯಶಃ ಅವರಲ್ಲಿ ಅನೇಕರು ಚಿಂತೆಗಳನ್ನು ಹತ್ತಿಕ್ಕಲಾರದೇ ನಿದ್ರಾಹೀನರಾಗಿರಬಹುದು ಅಥವಾ ಚಿಂತೆಗಳನ್ನು ಪಕ್ಕಕ್ಕಿಟ್ಟು ನಿಶ್ಚಿಂತರಾಗಿ ನಿದ್ರಿಸುವುದನ್ನು ಅಭ್ಯಾಸ ಮಾಡಿರಬಹುದು.

ಮಲಗುವ ಮುನ್ನ ಎಲ್ಲ ಚಿಂತೆಗಳನ್ನು ಒಂದು ಪುಸ್ತಕದಲ್ಲಿ ಬರೆದಿಟ್ಟು ಅವುಗಳ ಬಗ್ಗೆ ಮರುದಿನ ಗಮನಿಸಲಾಗುವುದು ಎಂದು ನಿರ್ಧರಿಸಿ ನಿಶ್ಚಿಂತೆಯಿಂದ ಮಲಗುವುದು ಒಂದು ಉಪಾಯ. ಮಲಗುವ ಒಂದು ಘಂಟೆ ಮುಂಚೆಯೇ ಎಲ್ಲಾ ವ್ಯವಹಾರಗಳನ್ನು ನಿಲ್ಲಿಸಿ ಮನಸ್ಸು ಶಾಂತವಾಗಲು ಸಾಕಷ್ಟು ಸಮಯ ಕೊಟ್ಟು ನಂತರ ನಿದ್ರಿಸುವುದು ಇನ್ನೊಂದು ಉಪಾಯ.

ಹಾಸಿಗೆ: ಮಲಗುವ ಹಾಸಿಗೆಯನ್ನು ನಿದ್ದೆಗೆ ಮಾತ್ರ ಉಪಯೋಗಿಸಬೇಕು. ಹಾಸಿಗೆಯ ಮೇಲೇ ಊಟ, ಟಿ.ವಿ. ವೀಕ್ಷಣೆ, ಪತ್ರಿಕೆ ಓದುವುದು, ಮೊಬೈಲಿನಲ್ಲಿ ಮಾತುಕತೆ, ಮೊಬೈಲ್ ಗೇಮ್ಸ್ ಆಡುತ್ತಾ ಮಲಗುವುದು ಇತ್ಯಾದಿ ಹತ್ತಾರು ಚಟುವಟಿಕೆಗಳನ್ನು ಹಾಸಿಗೆಯ ಮೇಲೇ ಮಾಡುವುದು ಸುಖ ನಿದ್ದೆಗೆ ಮಾರಕ. ಮಲಗಿದ 20 ನಿಮಿಷಗಳೊಳಗೆ ನಿದ್ದೆ ಬಾರದಿದ್ದರೆ ಎದ್ದು ಬಿಡಬೇಕು. ಹಾಸಿಗೆಯಲ್ಲೇ ಮಲಗಿ ನಿದ್ದೆ ಹತ್ತದೇ, ಹೊರಳಾಡುತ್ತಾ, ನಿದ್ದೆಗೆ ಕಾಯುತ್ತಾ, ಶಪಿಸುತ್ತಾ ಇರಬಾರದು. ಮತ್ತೆ ನಿದ್ದೆ ಹತ್ತುವವರೆಗೂ ಬೇರೆ ಜಾಗದಲ್ಲಿ, ಬೇರೆ ವಿಷಯದಲ್ಲಿ ತೊಡಗಿಸಿಕೊಂಡಿದ್ದು ಜೊಂಪು ಹತ್ತಿದಾಗ ಮಾತ್ರ ಹಾಸಿಗೆ ಸೇರಬೇಕು.

ವ್ಯಾಯಾಮ: ನಿದ್ದೆ ಮಾಡಲೂ ವ್ಯಾಯಾಮ ಮಾಡಬೇಕೇ! ಶರೀರ ಶ್ರಮವಿಲ್ಲದ ಇಂದಿನ ಜೀವನಶೈಲಿಯಲ್ಲಿ ಹಿತವಾದ ನಿದ್ದೆಗೆ ನಿರಂತರ ನಿಯಮಿತ ವ್ಯಾಯಾಮದ ಮೂಲಕ ದಣಿವು ಅಗತ್ಯ. ಆದರೆ ಸಂಜೆಯ ನಂತರ ದಣಿವಾಗುವಷ್ಟು ವ್ಯಾಯಾಮ, ಶರೀರ ಮನಸ್ಸನ್ನು ಶಾಂತಗೊಳಿಸುವುದರ ಬದಲಾಗಿ ಉತ್ತೇಜಿಸಿ ನಿದ್ದೆ ದೂರವಾಗುವ ಅಪಾಯವೂ ಇದೆ.

ಆಹಾರ: ಮಲಗುವ ಹೊತ್ತಿನಲ್ಲಿ ಹೊಟ್ಟೆ ಬಿರಿಯೆ ಉಂಡು ಮಲಗುವುದರಿಂದ ನಿದ್ರಾಹಾನಿಯಾಗುತ್ತದೆ. ಹಸಿವು ನೀಗುವಷ್ಟು ಲಘು ಆಹಾರ ಸೂಕ್ತ.

ಮಲಗುವ ಕೋಣೆ: ನಿಶ್ಶಬ್ದವಾಗಿರಬೇಕು. ಕತ್ತಲಿರಬೇಕು, ಹಿತವಾಗಿ ಬೆಚ್ಚಗಿರಬೇಕು. ಬೀದಿಯಲ್ಲಿನ ಆರ್ಕೆಸ್ಟ್ರಾ, ವಾಹನಗಳ ಸದ್ದು, ಪಕ್ಕದ ಮನೆಯ ಟಿ.ವಿ. ಧಾರಾವಾಹಿಗಳ ಸದ್ದು, ಕಿಟಕಿಯ ಮೂಲಕ ಬೀದಿದೀಪಗಳ ಪ್ರಖರ ಬೆಳಕಿನ ಮಧ್ಯೆ ಮಲಗಲು ಪ್ರಯತ್ನಿಸುವವರ ಕಷ್ಟ ಅವರಿಗೇ ಗೊತ್ತು. ಹಗಲು ನಿದ್ರೆ: ಹಗಲು ನಿದ್ರೆ, ರಾತ್ರಿ ನಿದ್ದೆಯನ್ನು ನಾಶ ಮಾಡುತ್ತದೆ. ಅದರಲ್ಲೂ ರಾತ್ರಿ ನಿದ್ದೆ ಬಾರದವರು, ಹಗಲಲ್ಲಾದರೂ ವಿಶ್ರಮಿಸೋಣವೆಂದು ಪ್ರಯತ್ನ ಮಾಡಿ, ಆ ರಾತ್ರಿ ನಿದ್ದೆಯನ್ನೂ ಕೆಡಿಸಿಕೊಳ್ಳುತ್ತಾರೆ.

ಮಲಗುವ ಕೋಣೆಯ ಗಡಿಯಾರ: ದಿನವೆಲ್ಲ ಕೇಳದ ಗಡಿಯಾರದ ಶಬ್ದ ರಾತ್ರಿ ನಿದ್ದೆ ಬಾರದಿದ್ದಾಗ ಕರ್ಣ ಕಠೋರವಾಗಿ ಕೇಳುತ್ತದೆ. ಕ್ಷಣ, ಗಂಟೆಗಳನ್ನು ಎಣಿಸುತ್ತಾ ಬಾರದ ನಿ್ರೆಗಾಗಿ ಕಾಯುತ್ತಾ ಹಾಸಿಗೆಯಲ್ಲಿ ಹೊರಳಾಡುವುದೊಂದು ಘೋರ ಶಾಪ. ಡಿಜಿಟಲ್, ಮೊಬೈಲ್ ಗಡಿಯಾರಗಳಲ್ಲಿ ಈ ಸಮಸ್ಯೆ ಇಲ್ಲ.
ಕಾಫಿ, ಟೀ ಮತ್ತು ಸಿಗರೇಟ್: ಮೆದುಳನ್ನು ಉತ್ತೇಜಿಸುವ ರಸಾಯನಿಕಗಳು ಈ ಪದಾರ್ಥಗಳಲ್ಲಿರುತ್ತವೆ. ಉತ್ತೇಜಿತ ಮಿದುಳು ನಿದ್ದೆ ಮಾಡದು. ರಾತ್ರಿ ಮಲಗುವಾಗ ದೊಡ್ಡ ಲೋಟ ಬಿಸಿ ಕಾಫಿ ಕುಡಿದು ಮಲಗುವ ಭೂಪರೂ ಅನೇಕರಿದ್ದಾರೆ. ಆದರೂ ನಿದ್ರಾ ಸಮಸ್ಯೆ ಇರುವವರಿಗೆ ಇವು ವರ್ಜ್ಯ.

ಸಂಗಾತಿ: ರಾತ್ರಿ ಪಕ್ಕದಲ್ಲಿ ಮಲಗಿ, ಇಡೀ ದಿನದ ಗೋಳನ್ನೆಲ್ಲಾ ತೆೆದು, ಕಾಲ್ಕೆರೆದು ಜಗಳವಾಡುವ ಸಂಗಾತಿ ಇದ್ದರೆ, ಭಯಂಕರವಾಗಿ ಗೊರಕೆ ಹೊಡೆಯುವ ಸಂಗಾತಿ ಇದ್ದರೆ ನಿಶ್ಶಬ್ದವಾಗಿ ನಿದ್ರಿಸುವುದು ಹೇಗೆ? ಈ ಸಮಸ್ಯೆಗೆ ಮನೋವೈದ್ಯರಿಗೂ ಪರಿಹಾರ ಸಿಕ್ಕಿಲ್ಲ.
ಮನವೆಂಬ ನಾವೆಗೆ ‘ಸುಖ ನಿ್ದೆ’ ಎಂಬ ಕೀಲೆಣ್ಣ್ಣೆ ಬೇಕೇ ಬೇಕು.

ಮೂಲ: ವಿಕ್ರಮ

ನಸ್ಸಿಗೆ ಧ್ಯಾನದಿಂದ, ಬುದ್ಧಿಗೆ ಜ್ಞಾನದಿಂದ, ಶರೀರಕ್ಕೆ ನಿದ್ದೆಯಿಂದ ವಿಶ್ರಾಂತಿ. ‘‘ಚಿಂತೆ ಇಲ್ಲದವನಿಗೆ ಸಂತೆಯಲ್ಲಿ ನಿದ್ದೆ’’ ಎನ್ನುವ ಗಾದೇ ಮಾತೆ ಇದೆ. ಆದರೆ ಚಿಂತೆ ಮಾಡದೇ ಸಂತೆಯಲ್ಲಿ ನಿದ್ದೆ ಮಾಡುವ ಬದಲು ಚಿಂತೆನೆ ಮಾಡಿ ನಿಶ್ಚಿಂತೆಯಿಂದ ರಾತ್ರಿ ಮಾತ್ರ ನಿದ್ದೆ ಮಾಡಬೇಕು. ಆದರೆ ಬಹಳ ಜನ ನಿದ್ದೆ ಇಲ್ಲದೆ ಒದ್ದಾಡಿ ಮಾತ್ರೆಗೆ ಶರಣು ಹೋಗುತ್ತಾರೆ. ಕೆಲವರು ಹಗಲು ಹೆಚ್ಚು ನಿದ್ದೆ ಮಾಡಿ ದೇಹಕ್ಕೆ ತೀವ್ರ ದೌರ್ಬಲ್ಯ ತಂದುಕೊಳ್ಳುತ್ತಾರೆ. ರೋಗಿಗಳು ಹಾಗೂ ಐವತ್ತು ವರ್ಷ ಮೇಲ್ಪಟ್ಟವರು ಮಾತ್ರ ಹಗಲು ಸ್ವಲ್ಪ ವಿಶ್ರಾಂತಿ ಹಾಗೂ ನಿದ್ದೆ ಮಾಡಬಹುದಾಗಿದೆ. ಹೆಚ್ಚು ನಿದ್ದೆಯಿಂದ ಜಡತ್ವ ಹಾಗೂ ಜೀವನದಲ್ಲಿ ಉದಾಸೀನತೆ ಹೆಚ್ಚಾಗುತ್ತೆ. ಅವಶ್ಯಕತೆಗಿಂತ ಕಡಿಮೆ ನಿದ್ದೆಯಿಂದ ಹೃದಯ ದೌರ್ಬಲ್ಯ, ರೋಗ ನಿರೋಧಕ ಶಕ್ತಿ ಕುಂದುವಿಕೆ, ಮರೆವು, ದೇಹದ ಶಿಥಿಲತೆ, ಸೆಳೆತ, ಚರ್ಮ ಖಾಯಿಲೆ, ಮೂಲವ್ಯಾಧಿಮುಂತಾದ ದೌರ್ಬಲ್ಯಗಳು ಕಾಣಿಸಿಕೊಳ್ಳುತ್ತವೆ. ಇದರ ಪರಿಹಾರಕ್ಕೆ ಮನೆ ಮದ್ದು

  • ದಿನಾಲು ತಲೆ ಸ್ನಾನ ಮಾಡಬೇಕು.
  • ವಾರಕೊಮ್ಮೆ ಎಣ್ಣೆ ಸ್ನಾನ ಅವಶ್ಯ.
  • ತಲೆಗೆ ಬದಾಮಿ ಎಣ್ಣೆ ಹಚ್ಚುವುದು.
  • ಮಾತ್ರೆಯ ಬದಲಾಗಿ ರಾತ್ರಿ ಗಸಗಸ ಪಾಯಸ ಅಥವಾ ಗಸಗಸೆ ಹಾಲು ಸೇವಿಸಿದರೆ ಒಳ್ಳೆ ನಿದ್ದೆ ಮಾಡಬಹದು.
  • ರಾತ್ರಿ ಮಲಗುವಾಗ 1 ಲೋಟ ದೇಶಿ ಆಕಳ ಬಿಸಿ ಹಾಲಿಗೆ ಬೆಲ್ಲ ಹಾಕಿ ಸೇವಿಸುವುದು.
  • ದಕ್ಷಿಣಕ್ಕೆ ತಲೆ ಮಾಡಿ ಸಣ್ಣ ದಿಂಬು ಇಟ್ಟುಕೊಂಡು ಮಲಗುವ ಮೊದಲು (ರಾಮಸ್ಕಂದಂ…) ಮಂತ್ರವನ್ನು ಹೇಳಿ ಮಲಗುವುದು.
  • ರಾತ್ರಿ ಹೆಚ್ಚು ಹುಳಿ ಮಸಾಲೆ, ಹೆಚ್ಚು ಜಡ ಆಹಾರದ ಬದಲಾಗಿ ಸಾತ್ವಿಕ ಆಹಾರ ಹಿತಮಿತ ಬಳಸಿದರೆ ನಿದ್ದೆಗೆ ಒಳ್ಳೆಯದು.
  • ನಿದ್ದೆ ಬಾರದಿದ್ದರೆ ರಾತ್ರಿ ಪಾದವನ್ನು ಬಿಸಿ ನೀರಿನಲ್ಲಿ ಅದ್ದಿ ಕಾಲಿನಿಂದ ಕಾಲನ್ನು ಉಚ್ಚಿಕೊಂಡು ಮಲಗಿದರೆ ಒಳ್ಳೆ ನಿದ್ರೆ ಬರುತ್ತದೆ.
  • ಹೊಕ್ಕಳಕ್ಕೆ ಅಂಗಾಲಿಗೆ ದೇಶಿ ಆಕಳ ತುಪ್ಪ ಹಚ್ಚಬೇಕು.
  • ನಿತ್ಯ ನಿಯಮಿತ ವ್ಯಾಯಾಮ, ಸೂರ್ಯ ನಮಸ್ಕಾರ ಕಡ್ಡಾಯ ಮಾಡಬೇಕು.
  • ದಿನಕ್ಕೆ 1 ಸಾರಿ ಅಮೃತ ಬಳ್ಳಿ ಕಷಾಯ ಸೇವಿಸುವುದು.

ಮೂಲ: ವಿಕ್ರಮ

ಕೊನೆಯ ಮಾರ್ಪಾಟು : 5/29/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate