ವೀಕ್ನೆಸ್, ಥೈರೈಯ್ಡ , ಹಿಮೋಗ್ಲೋಬಿನ್ ಮಟ್ಟ, ಮಧುಮೇಹ ಮುಂತಾದ ಹಲವು ಸಮಸ್ಯೆಗಳನ್ನು ಪತ್ತೆ ಹಚ್ಚಲು ರಕ್ತಪರೀಕ್ಷೆಯ ಸಲಹೆ ನೀಡುವುದನ್ನು ನೋಡಿದ್ದೇವೆ. ಆದರೆ ಹೊಸ ಸಂಶೋಧನೆಯೊಂದು ರಕ್ತಪರೀಕ್ಷೆಯಿಂದ ಆತ್ಮಹತ್ಯೆಯ ಮುನ್ಸೂಚನೆಯನ್ನೂ ಪಡೆಯಬಹುದು ಎಂಬುದನ್ನು ಪತ್ತೆಮಾಡಿದೆ.
ಆತ್ಮಹತ್ಯೆ ಮಾಡಿಕೊಳ್ಳುವ ಮನಸ್ಥಿತಿಯಲ್ಲಿರುವ ವ್ಯಕ್ತಿಯ ವಂಶವಾಹಿ (ಜೀನ್) ಯಲ್ಲಿ ಉಳಿದವರಿಗೆ ಹೋಲಿಸಿದರೆ ಬದಲಾವಣೆಗಳಾಗಿರುತ್ತವೆ. ಅಷ್ಟೇ ಅಲ್ಲ, ಅಂಥವರ ಮೆದುಳಿನ ಕ್ರಿಯೆಯಲ್ಲೂ ವ್ಯತ್ಯಾಸ ಉಂಟಾಗಿರುತ್ತದೆಯಂತೆ. ಎಸ್ಕೆಎ2 ಎಂಬ ವಂಶವಾಹಿಯಲ್ಲಾಗುವ ಬದಲಾವಣೆಯನ್ನು ರಕ್ತಪರೀಕ್ಷೆಯಿಂದ ಪತ್ತೆಮಾಡಬಹುದಂತೆ. ಇದು ವ್ಯಕ್ತಿಯು ಮಾನಸಿಕವಾಗಿ ತೀರಾ ಒತ್ತಡದಲ್ಲಿದ್ದಾನೆ, ಮತ್ತು ಖಿನ್ನತೆ ಅನುಭವಿಸುತ್ತಿದ್ದಾನೆ ಎಂಬುದನ್ನು ತೋರಿಸಿಕೊಡುತ್ತದೆಯಂತೆ. ಅಷ್ಟೇ ಅಲ್ಲ ಈ ವಂಶವಾಹಿಯಲ್ಲಾದ ಬದಲಾವಣೆಯಿಂದಾಗಿ ಮೆದುಳು ಮಾಡಬೇಕಾದ ಕ್ರಿಯೆಯಲ್ಲಿ ವ್ಯತ್ಯಯ ಉಂಟಾಗುತ್ತದೆ.
ಎಸ್ಎಇ2 ವಂಶವಾಹಿಯು ಮೆದುಳಿನಲ್ಲಿ ಧನಾತ್ಮಕ ಯೋಚನೆಗಳು ಬೆಳೆಯುವುದಕ್ಕೆ ಸಹಕಾರಿಯಾಗಿದೆ. ಈ ವಂಶವಾಯಿಯು ಆರೋಗ್ಯಕರ ರಕ್ತಕಣಗಳು ಹುಟ್ಟಿಕೊಳ್ಳುವುದಕ್ಕೂ ಸಹಕಾರಿ. ಈ ವಂಶವಾಹಿಯ ಪ್ರಮಾಣ ಕಡಿಮೆಯಾಗುವುದರಿಂದ ಮೆದುಳು ಹೆಚ್ಚು ಋಣಾತ್ಮಕ ಯೋಚನೆಗಳತ್ತಲೇ ಗಮನ ಹರಿಸತೊಡಗುತ್ತದೆ. ಈ ವಂಶವಾಹಿಯ ಪ್ರಮಾಣ ಕಡಿಮೆಯಾಗುವುದನ್ನು ರಕ್ತಪರೀಕ್ಷೆಯ ಮೂಲಕ ತಿಳಿದುಕೊಳ್ಳಬಹುದಾಗಿದೆ.
ಈ ವಂಶವಾಹಿಯಲ್ಲಿನ ಏರುಪೇರು ಮನಸ್ಸಿನ ಸ್ಥಿತಿಗತಿಯ ಮೇಲೆ ಅವಲಂಬಿತವಾಗಿದೆಯಂತೆ. ಈ ವಂಶವಾಹಿಯು ಕಡಿಮೆಯಾಗುವುದಕ್ಕೂ ಕಾರಣ ಋಣಾತ್ಮಕ ಯೋಚನೆಗಳೇ ಆಗಿವೆ. ಎಸ್ಕೆಇ2 ವಂಶವಾಹಿಯಲ್ಲಿ ಕೊರತೆ ಇರುವ ವ್ಯಕ್ತಿಯನ್ನು ಆದಷ್ಟು ಧನಾತ್ಮಕವಾಗಿ ಯೋಚಿಸುವುದಕ್ಕೆ ಹಚ್ಚಬೇಕು. ಅಲ್ಲದೆ ಆತನು ಎಂದಿಗೂ ಖಿನ್ನತೆಗೊಳಗಾಗದಂತೆ, ಆತನ ಮನಸ್ಸು ಎಂದಿಗೂ ಉಲ್ಲಸಿತವಾಗಿರುವಂತೆ ನೋಡಿಕೊಳ್ಳಬೇಕು. ಆತ್ಮಹತ್ಯೆಯಿಂದ ಆತನನ್ನು ರಕ್ಷಿಸಲು, ಆತನ ಮನಸ್ಸನ್ನು ಬದಲಿಸಲು ಆಪ್ತಸಲಹಾಕಾರರ ಮೊರೆಹೋಗಬಹುದು.
ತೀರಾ ಖಿನ್ನರಾಗಿರುವ ಅಥವಾ ಸದಾ ಒತ್ತಡದಲ್ಲಿರುವವರ ಬಗ್ಗೆ ಆತ್ಮಹತ್ಯೆ ಮಾಡಿಕೊಳ್ಳಬಹುದೆಂಬ ಭಯವಿದ್ದವರು ಅದನ್ನು ಖಚಿತಪಡಿಸಿಕೊಳ್ಳುವುದಕ್ಕೆ ಒಮ್ಮೆ ಅಂಥವರ ರಕ್ತಪರೀಕ್ಷೆ ಮಾಡಿಸುವುದು ಒಳ್ಳೆಯದು. ಇದರಿಂದ ಆತ್ಮಹತ್ಯೆಯನ್ನು ತಡೆಯುವುದಕ್ಕೆ ಸಾಧ್ಯ ಎನ್ನುತ್ತದೆ ಹೊಸ ಸಂಶೋಧನೆ.
ಮೂಲ: ವಿಕ್ರಮ
ಕೊನೆಯ ಮಾರ್ಪಾಟು : 6/4/2020