ಬ್ಯಾಂಕ್ ಮತ್ತು ಇತರ ಸಂಸ್ಥೆಗಳೊಂದಿಗೆ ಹಣಕಾಸು ಸಂಪರ್ಕ ಕಲ್ಪಿಸುವುದು:
• ಅಭ್ಯರ್ಥಿಗಳು ಸ್ವ-ಉದ್ಯೋಗ ಚಟುವಟಿಕೆ ನಿರ್ಧಾರ ಕೈಗೊಳ್ಳಲು ಪ್ರೇರಣೆ, ಸಮಾಲೋಚನೆ ನಡೆಸುವುದು. ಸಮಾಲೋಚನೆ ಸಭೆಗಳಿಗೆ ಸಂಬಂಧಪಟ್ಟ ಬ್ಯಾಂಕ್ ಅಧಿಕಾರಿಗಳನ್ನು ಆಹ್ವಾನಿಸುವುದು.
• ನಂತರ ಯೋಜನಾ ವರದಿ ತಯಾರಿಸಿ ಬ್ಯಾಂಕುಗಳಿಗೆ ಅರ್ಜಿಗಳನ್ನು ತಾಲ್ಲೂಕು ಪಂಚಾಯತಿ ಮೂಲಕ ಸಲ್ಲಿಸಲು ಸಹಕರಿಸಬೇಕು.
• ಜಂಟಿ ಹೊಣೆಗಾರಿಕೆಯ ಅಭ್ಯರ್ಥಿಗಳು/ವೈಯಕ್ತಿಕ ಅಭ್ಯರ್ಥಿಗಳಿಗೆ ಬ್ಯಾಂಕುಗಳು ಸಾಲವನ್ನು ನೀಡುತ್ತವೆ. ಐದು ಜನರನ್ನೊಳಗೊಂಡ ಒಂದು ಜಂಟಿ ಹೊಣೆಗಾರಿಕೆ ಗುಂಪಿಗೆ ರೂ.50,000/- ಅಥವಾ ಜಂಟಿ ಹೊಣೆಗಾರಿಕೆ ಗುಂಪಿನ ಒಬ್ಬ ಸದಸ್ಯರಿಗೆ ರೂ.10,000/- ರೂಪಾಯಿಗಳನ್ನು ಸಹಾಯಧನ ನೀಡಲಾಗುವುದು. ಸಹಾಯಧನದ ಮೊತ್ತವನ್ನು ಹಣಕಾಸು ಸಂಸ್ಥೆಗೆ ನೀಡಲು ಜಿಲ್ಲಾ/ತಾಲ್ಲೂಕು ಪಂಚಾಯತಿಗಳಿಗೆ ಅಗತ್ಯ ದಾಖಲಾತಿಗಳನ್ನು ಒದಗಿಸಲು ಸಹಕರಿಸುವುದು. ಈ ಸಹಾಯಧನವು ಬ್ಯಾಕ್ ಎಂಡ್ ಸಬ್ಸಿಡಿಯಾಗಿರುತ್ತದೆ. ಸಾಲ ಮರುಪಾವತಿಯಾದ ನಂತರ ಸಹಾಯಧನವನ್ನು ಬ್ಯಾಂಕುಗಳು ಆಯಾ ಫಲಾನುಭವಿಯ ಖಾತೆಗೆ ಜಮೆ ಮಾಡುವುದು. ಕನಿಷ್ಠ ಎರಡು ವರ್ಷಗಳ ವರೆಗೆ ಸಹಾಯಧನವನ್ನು ವೈಯಕ್ತಿಕ ಖಾತೆಗಳಿಗೆ ಜಮೆ ಮಾಡಲು ಅವಕಾಶವಿರುವುದಿಲ್ಲ.
• ಜಂಟಿ ಹೊಣೆಗಾರಿಕೆ ಗುಂಪುಗಳಲ್ಲಿನ ಅಭ್ಯರ್ಥಿಗಳು ವೃತ್ತಿ ತರಬೇತಿಗಳನ್ನು ಪಡೆದ ನಂತರ, ಚಟುವಟಿಕೆ ಆರಂಭಕ್ಕೆ ಬ್ಯಾಂಕುಗಳ ಮೂಲಕ ಸಾಲದ ಒಟ್ಟು ಮೊತ್ತ ಬಿಡುಗಡೆಯಾಗುವಲ್ಲಿ/ ಸೌಲಭ್ಯ ಪಡೆಯುವಲ್ಲಿ ಸಹಕರಿಸುವುದು.
ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳ ಪಾತ್ರ ಮತ್ತು ಜವಾಬ್ದಾರಿಗಳು
ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳು, ನಬಾರ್ಡ್ನ ಜಿಲ್ಲಾ ಅಭಿವೃದ್ಧಿ ವ್ಯವಸ್ಥಾಪಕರು, ಜಿಲ್ಲಾ ಲೀಡ್ ಬ್ಯಾಂಕ್ ವ್ಯವಸ್ಥಾಪಕರು, ಎಲ್ಲಾ ವಾಣಿಜ್ಯ ಮತ್ತು ಗ್ರಾಮೀಣ ಪ್ರಾದೇಶಿಕ ಹಾಗೂ ಸಹಕಾರಿ ಬ್ಯಾಂಕುಗಳ ಜಿಲ್ಲಾ ನಿಯಂತ್ರಕರು ಮತ್ತು ಪ್ರತಿನಿಧಿಗಳನ್ನೊಳಗೊಂಡ ಸಭೆಯನ್ನು ಆಯೋಜಿಸುವುದು.
ಸಭೆಯಲ್ಲಿ ಯೋಜನಾ ಮಾಹಿತಿಯನ್ನು ನೀಡುವುದಲ್ಲದೇ ಯುವಜನರು ಬಯಸುವ ಹಣಕಾಸು ನೆರವು ನೀಡುವಂತೆ ಕ್ರಮಕೈಗೊಳ್ಳುವುದು.
ಈ ಸಭೆಗೆ ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಯೋಜನಾ ಬೆಂಬಲ ಸಂಸ್ಥೆಯು ಪಾಲ್ಗೊಳ್ಳತಕ್ಕದ್ದು.
ಜಿಲ್ಲಾ ಲೀಡ್ ಬ್ಯಾಂಕ್ ವ್ಯವಸ್ಥಾಪಕರು ಹಾಗೂ ಜಿಲ್ಲಾ ಪಂಚಾಯತ್ನ ಮುಖ್ಯಕಾರ್ಯ ನಿರ್ವಾಹಣಾಧಿಕಾರಿಗಳು ಸಭೆಯಲ್ಲಿ ತೆಗೆದು ಕೊಂಡ ನಿರ್ಣಯಗಳನ್ನು ಜಾರಿಗೊಳಿಸಲು ಪೂರಕವಾಗಿ ಸುತ್ತೋಲೆಗಳನ್ನು ಎಲ್ಲಾ ಬ್ಯಾಂಕುಗಳ ಶಾಖೆಗಳಿಗೆ ಹೊರಡಿಸುವುದು.
ಯೋಜನಾ ಬೆಂಬಲ ಸಂಸ್ಥೆಗಳಿಗೆ ಅನುದಾನ ಬಿಡುಗಡೆ:
ಯೋಜನಾ ಬೆಂಬಲ ಸಂಸ್ಥೆಗಳಿಗೆ ರೂ.2,000/- ಅನುದಾನವನ್ನು ಕಂತುಗಳಲ್ಲಿ ಬಿಡುಗಡೆ ಮಾಡಲಾಗುತ್ತದೆ.
ಕರಾರು ಒಪ್ಪಂದ ಸಹಿಯ ನಂತರ ಸ್ವ-ಉದ್ಯೋಗ ಕೈಗೊಳ್ಳುವ ಅಭ್ಯರ್ಥಿಗಳ ತ್ರೈಮಾಸಿಕ ಗುರಿ ಆಧಾರದ ಮೇಲೆ ಮುಂಗಡ ಹಣವನ್ನು ಪ್ರತಿ ಅಭ್ಯರ್ಥಿಗೆ ರೂ.500/- ರಂತೆ ಬ್ಯಾಂಕ್ ಗ್ಯಾರೆಂಟಿ ಆಧಾರದ ಮೇಲೆ ಬಿಡುಗಡೆ ಮಾಡಲಾಗುವುದು. ಅಭ್ಯರ್ಥಿಗೆ ಸ್ವ-ಉದ್ಯೋಗ ಕೈಗೊಳ್ಳಲು ಪ್ರೇರಣೆ, ಸಮಾಲೋಚನೆ ಮತ್ತು ಚಟುವಟಿಕೆಯ ನಿರ್ಧಾರ ಕೈಗೊಳ್ಳಲು ಸಹಕರಿಸುವುದು. ನಂತರ ಯೋಜನಾ ವರದಿ ತಯಾರಿಸಿ ಬ್ಯಾಂಕುಗಳಿಗೆ ಅರ್ಜಿಗಳನ್ನು ತಾಲ್ಲೂಕು ಪಂಚಾಯತಿ ಮೂಲಕ ಸಲ್ಲಿಸಲು ಸಹಕರಿಸಬೇಕು.
ಅಭ್ಯರ್ಥಿಗಳಿಗೆ ಸಾಲ ಮಂಜೂರಾಗದಿದ್ದಲ್ಲಿ ಬೆಂಬಲ ಸಂಸ್ಥೆಗಳಿಗೆ ಯಾವುದೇ ಅನುದಾನವನ್ನು ನೀಡಲಾಗುವುದಿಲ್ಲ.
ಸ್ವ-ಉದ್ಯೋಗ ಕೈಗೊಳ್ಳುವ ಸಾಲ ಮಂಜೂರಾದ ಅಭ್ಯರ್ಥಿಗಳಿಗೆ ರೂಡ್ಸೆಟಿ / ಆರ್ಸೆಟಿ / ಸಿಡಾಕ್ / ಜನ ಶಿಕ್ಷಣ ಸಂಸ್ಥೆ / ಸಮುದಾಯ ಪಾಲಿಟೆಕ್ನಿಕ್ / ಕೃಷಿ ವಿಜ್ಞಾನ ಕೇಂದ್ರದ ತರಬೇತಿ ಸಂಸ್ಥೆಗಳಲ್ಲಿ 3/6 ದಿನಗಳ ತರಬೇತಿಗಳನ್ನು ಪರಿಪೂರ್ಣಗೊಳಿಸಿದ ನಂತರ ಪ್ರತಿ ಅಭ್ಯರ್ಥಿಗೆ ಪ್ರತಿ ದಿನಕ್ಕೆ ರೂ.250/-ರಂತೆ ಮೂರು ದಿನಗಳ ತರಬೇತಿಗೆ ಪ್ರತಿ ಅಭ್ಯರ್ಥಿಗೆ ರೂ.750/- ಹಾಗೂ 6 ದಿನಗಳ ತರಬೇತಿಗೆ ಪ್ರತಿ ಅಭ್ಯರ್ಥಿಗೆ ರೂ.1,500/-ನ್ನು ಸಂಬಂಧಪಟ್ಟ ತರಬೇತಿ ಸಂಸ್ಥೆಗಳಿಗೆ ಬಿಡುಗಡೆ ಮಾಡಲಾಗುವುದು. ಉದಾ: ರೂಡ್ಸೆಟಿ ಸಂಸ್ಥೆಯಲ್ಲಿ ಎಲ್ಲಾ ತಾಲ್ಲೂಕುಗಳಿಂದ ಗೃಹೊಪಯೋಗಿ ವಿದ್ಯುತ್ ಉಪಕರಣಗಳ ದುರಸ್ಥಿ ಚಟುವಟಿಕೆ ಬಗ್ಗೆ ತರಬೇತಿ ಪಡೆದಿದ್ದಲ್ಲಿ ಅದರ ಒಟ್ಟು ವೆಚ್ಚವನ್ನು ಜಿಲ್ಲಾ ಪಂಚಾಯತ್ನಿಂದ ನೇರವಾಗಿ ರೂಡ್ಸೆಟಿ ಸಂಸ್ಥೆಗೆ ಬಿಡುಗಡೆ ಮಾಡುವುದು. ಇದೇ ರೀತಿ ತರಬೇತಿ ನೀಡಿದ ಸಂಸ್ಥೆಗಳಿಗೆ ಅಭ್ಯರ್ಥಿಗಳ ಸಂಖ್ಯೆಗಳಿಗೆ ಅನುಗುಣವಾಗಿ ಜಿಲ್ಲಾ ಪಂಚಾಯತ್ ನೇರವಾಗಿ ಹಣ ಬಿಡುಗಡೆ ಮಾಡಲಾಗುವುದು.
ಯೋಜನಾ ಬೆಂಬಲ ಸಂಸ್ಥೆ ತರಬೇತಿಗೆ ಅವಶ್ಯವಿರುವ ಮೂಲಭೂತ ಸೌಕರ್ಯ ಮತ್ತು ತರಬೇತುದಾರರನ್ನು ಹೊಂದಿದ್ದಲ್ಲಿ ಜಿಲ್ಲಾ ಮಟ್ಟದ ಸಮಿತಿಯ ಅನುಮೋದನೆ ಪಡೆದು ತರಬೇತಿ ನೀಡಬಹುದು. ಅಂತಹ ಸಮಯದಲ್ಲಿ ತರಬೇತಿಯ ವೆಚ್ಚವನ್ನು ಆಯಾ ಯೋಜನಾ ಬೆಂಬಲ ಸಂಸ್ಥೆಗಳಿಗೆ ಬಿಡುಗಡೆ ಮಾಡಲಾಗುವುದು.
ಅಭ್ಯರ್ಥಿಗಳ ಚಟುವಟಿಕೆಗಳ ಆಧಾರದ ಮೇಲೆ ಜಂಟಿ ಹೊಣೆಗಾರಿಕೆ ಗುಂಪುಗಳಿಗೆ/ವೈಯಕ್ತಿಕ ಅಭ್ಯರ್ಥಿಗಳಿಗೆ ಬ್ಯಾಂಕುಗಳಿಂದ ಸಾಲ ಬಿಡುಗಡೆಯಾಗಿ ಉದ್ಯಮದ ಸ್ಥಾಪನೆಯಾದ ನಂತರ ಪ್ರತಿ ಅಭ್ಯರ್ಥಿಗೆ ರೂ.1,000/- ದಂತೆ ಅನುದಾನ ಬಿಡುಗಡೆ ಮಾಡಲಾಗುವುದು.
ಅಭ್ಯರ್ಥಿಗಳು ಉದ್ಯಮವನ್ನು ಕೈಗೊಳ್ಳುತ್ತಿರುವ ಬಗ್ಗೆ ಅನುಸರಣೆÂ: ಉತ್ಪನ್ನಗಳ ಮಾರಾಟ ಹಾಗೂ ಸಾಲ ಮರುಪಾವತಿ ಬಗ್ಗೆ ನಿಯಮಿತವಾಗಿ 3 ವರ್ಷದ ವರೆಗೆ ಅನುಸರಣಿ ಮಾಡುವ ಆಧಾರದ ಮೇಲೆ ಪ್ರತಿ ಅಭ್ಯರ್ಥಿಗೆ ರೂ.500/- ಗಳಂತೆ (ಮೂರು ಕಂತುಗಳಲ್ಲಿ ಪ್ರಥಮ ವರ್ಷ ರೂ.200/-, ದ್ವಿತೀಯ ವರ್ಷ ರೂ.150/- ಮತ್ತು ತೃತೀಯ ವರ್ಷ ರೂ.150/- ಗಳಂತೆ) ಬಿಡುಗಡೆ ಮಾಡಲಾಗುವುದು.
ಉದ್ದಿಮೆಗಳ ಸ್ಥಾಪನೆ:
• ಆಯಾ ಜಿಲ್ಲೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಯೋಜನಾ ಬೆಂಬಲ ಸಂಸ್ಥೆಯು ಯುವಜನರಿಗೆ ಉದ್ಯಮ ಆರಂಭಿಸಲು ಅಗತ್ಯವಿರುವ ಎಲ್ಲಾ ರೀತಿಯ ಪ್ರಕ್ರಿಯೆಗಳಿಗೆ ಸೂಕ್ತ ಮಾರ್ಗದರ್ಶನದೊಂದಿಗೆ ಪೋಷಕರಿಗೆ / ಅಭ್ಯರ್ಥಿಗಳಿಗೆ ಸಮಾಲೋಚನೆ ನೀಡುವುದು.
• ಉದ್ದಿಮೆ ಆರಂಭಕ್ಕೆ ಬೇಕಾದ ಹಣಕಾಸು ಕೊಡಿಸಲು ನೆರವಾಗುವುದಲ್ಲದೇ ಈ ಎಲ್ಲಾ ಬೆಳವಣಿಗೆ ಕುರಿತು ನಡೆಯುವ ಪ್ರಕ್ರಿಯಗಳ ವರದಿಯನ್ನು ಸಂಬಂಧಿಸಿದ ಅಧಿಕಾರಿಗೆ / ಪ್ರಾಧಿಕಾರಗಳಿಗೆ ನಿಗಧಿಪಡಿಸಿದ ನಮೂನೆಯಲ್ಲಿ ತಿಂಗಳಿಗೊಮ್ಮೆ ನೀಡುವುದು.
ಮೂಲ: ಅರ್.ಜಿ.ಸಿ.ವೈ
ಕೊನೆಯ ಮಾರ್ಪಾಟು : 10/17/2019