ಮನಸ್ಸಿಗೆ ಧ್ಯಾನದಿಂದ, ಬುದ್ಧಿಗೆ ಜ್ಞಾನದಿಂದ, ಶರೀರಕ್ಕೆ ನಿದ್ದೆಯಿಂದ ವಿಶ್ರಾಂತಿ. ‘‘ಚಿಂತೆ ಇಲ್ಲದವನಿಗೆ ಸಂತೆಯಲ್ಲಿ ನಿದ್ದೆ’’ ಎನ್ನುವ ಗಾದೇ ಮಾತೆ ಇದೆ. ಆದರೆ ಚಿಂತೆ ಮಾಡದೇ ಸಂತೆಯಲ್ಲಿ ನಿದ್ದೆ ಮಾಡುವ ಬದಲು ಚಿಂತೆನೆ ಮಾಡಿ ನಿಶ್ಚಿಂತೆಯಿಂದ ರಾತ್ರಿ ಮಾತ್ರ ನಿದ್ದೆ ಮಾಡಬೇಕು. ಆದರೆ ಬಹಳ ಜನ ನಿದ್ದೆ ಇಲ್ಲದೆ ಒದ್ದಾಡಿ ಮಾತ್ರೆಗೆ ಶರಣು ಹೋಗುತ್ತಾರೆ. ಕೆಲವರು ಹಗಲು ಹೆಚ್ಚು ನಿದ್ದೆ ಮಾಡಿ ದೇಹಕ್ಕೆ ತೀವ್ರ ದೌರ್ಬಲ್ಯ ತಂದುಕೊಳ್ಳುತ್ತಾರೆ. ರೋಗಿಗಳು ಹಾಗೂ ಐವತ್ತು ವರ್ಷ ಮೇಲ್ಪಟ್ಟವರು ಮಾತ್ರ ಹಗಲು ಸ್ವಲ್ಪ ವಿಶ್ರಾಂತಿ ಹಾಗೂ ನಿದ್ದೆ ಮಾಡಬಹುದಾಗಿದೆ. ಹೆಚ್ಚು ನಿದ್ದೆಯಿಂದ ಜಡತ್ವ ಹಾಗೂ ಜೀವನದಲ್ಲಿ ಉದಾಸೀನತೆ ಹೆಚ್ಚಾಗುತ್ತೆ. ಅವಶ್ಯಕತೆಗಿಂತ ಕಡಿಮೆ ನಿದ್ದೆಯಿಂದ ಹೃದಯ ದೌರ್ಬಲ್ಯ, ರೋಗ ನಿರೋಧಕ ಶಕ್ತಿ ಕುಂದುವಿಕೆ, ಮರೆವು, ದೇಹದ ಶಿಥಿಲತೆ, ಸೆಳೆತ, ಚರ್ಮ ಖಾಯಿಲೆ, ಮೂಲವ್ಯಾಧಿಮುಂತಾದ ದೌರ್ಬಲ್ಯಗಳು ಕಾಣಿಸಿಕೊಳ್ಳುತ್ತವೆ. ಇದರ ಪರಿಹಾರಕ್ಕೆ ಮನೆ ಮದ್ದು ದಿನಾಲು ತಲೆ ಸ್ನಾನ ಮಾಡಬೇಕು. ವಾರಕೊಮ್ಮೆ ಎಣ್ಣೆ ಸ್ನಾನ ಅವಶ್ಯ. ತಲೆಗೆ ಬದಾಮಿ ಎಣ್ಣೆ ಹಚ್ಚುವುದು. ಮಾತ್ರೆಯ ಬದಲಾಗಿ ರಾತ್ರಿ ಗಸಗಸ ಪಾಯಸ ಅಥವಾ ಗಸಗಸೆ ಹಾಲು ಸೇವಿಸಿದರೆ ಒಳ್ಳೆ ನಿದ್ದೆ ಮಾಡಬಹದು. ರಾತ್ರಿ ಮಲಗುವಾಗ 1 ಲೋಟ ದೇಶಿ ಆಕಳ ಬಿಸಿ ಹಾಲಿಗೆ ಬೆಲ್ಲ ಹಾಕಿ ಸೇವಿಸುವುದು. ದಕ್ಷಿಣಕ್ಕೆ ತಲೆ ಮಾಡಿ ಸಣ್ಣ ದಿಂಬು ಇಟ್ಟುಕೊಂಡು ಮಲಗುವ ಮೊದಲು (ರಾಮಸ್ಕಂದಂ…) ಮಂತ್ರವನ್ನು ಹೇಳಿ ಮಲಗುವುದು. ರಾತ್ರಿ ಹೆಚ್ಚು ಹುಳಿ ಮಸಾಲೆ, ಹೆಚ್ಚು ಜಡ ಆಹಾರದ ಬದಲಾಗಿ ಸಾತ್ವಿಕ ಆಹಾರ ಹಿತಮಿತ ಬಳಸಿದರೆ ನಿದ್ದೆಗೆ ಒಳ್ಳೆಯದು. ನಿದ್ದೆ ಬಾರದಿದ್ದರೆ ರಾತ್ರಿ ಪಾದವನ್ನು ಬಿಸಿ ನೀರಿನಲ್ಲಿ ಅದ್ದಿ ಕಾಲಿನಿಂದ ಕಾಲನ್ನು ಉಚ್ಚಿಕೊಂಡು ಮಲಗಿದರೆ ಒಳ್ಳೆ ನಿದ್ರೆ ಬರುತ್ತದೆ. ಹೊಕ್ಕಳಕ್ಕೆ ಅಂಗಾಲಿಗೆ ದೇಶಿ ಆಕಳ ತುಪ್ಪ ಹಚ್ಚಬೇಕು. ನಿತ್ಯ ನಿಯಮಿತ ವ್ಯಾಯಾಮ, ಸೂರ್ಯ ನಮಸ್ಕಾರ ಕಡ್ಡಾಯ ಮಾಡಬೇಕು. ದಿನಕ್ಕೆ 1 ಸಾರಿ ಅಮೃತ ಬಳ್ಳಿ ಕಷಾಯ ಸೇವಿಸುವುದು. ಮೂಲ: ವಿಕ್ರಮ