ಕೆಲ ವಿಷಯುಕ್ತ ಪದಾರ್ಥಗಳನ್ನು ಯಕೃತ್ತು ಹೊರದೂಡಲು ವಿಫಲವಾದಾಗ, ಅದು ರಕ್ತದಲ್ಲಿ ಸಂಗ್ರಹವಾಗಿ, ಮಿದುಳನ್ನು ತಲುಪಿ, ಅದನ್ನು ನಿಷ್ಕ್ರಿಯಗೊಳಿಸುತ್ತದೆ. ಇದನ್ನೇ ಹೆಪೆಟಿಕ್ ಎನ್ಸೆಫಾಲೋಪತಿ ಎಂದು ಕರೆಯಲಾಗುತ್ತದೆ.
ಪೌಷ್ಟಿಕ ಪದಾರ್ಥಗಳು ರಕ್ತದಲ್ಲಿ ಹೀರಿಕೊಳ್ಳುವುದಕ್ಕೂ ಮುನ್ನ, ಕರುಳಿನ ಮೂಲಕ ಹಾದು ಹೋಗುತ್ತವೆ. ಆಗ ಯಕೃತ್ತು ಆ ಪದಾರ್ಥಗಳಲ್ಲಿ ವಿಷಯುಕ್ತ ಅಂಶಗಳನ್ನು ಹೀರಿಕೊಂಡು ಶುದ್ಧಗೊಳಿಸುತ್ತದೆ. ಬಹುತೇಕ ಈ ವಿಷಯುಕ್ತ ಅಂಶಗಳನ್ನು ಜೀರ್ಣ ಕ್ರಿಯೆಯಲ್ಲಿ ಪ್ರೋಟೀನಿನ ಅಂಶಗಳನ್ನಾಗಿ ಒಡೆಯಲಾಗುತ್ತದೆ. ಹೆಪೆಟಿಕ್ ಎನ್ಸೆಫಲೋಫತಿಯ ಸಂದರ್ಭದಲ್ಲಿ, ವಿಷಯುಕ್ತ ವಸ್ತುಗಳನ್ನು ಯಕೃತ್ತಿಗೆ ಒಡೆಯಲು ಸಾಧ್ಯವಾಗದು. ಪರಿಣಾಮವಾಗಿ ವಿಷಯುಕ್ತ ವಸ್ತುಗಳು ರಕ್ತದ ಮೂಲಕ ಮಿದುಳನ್ನು ತಲುಪುತ್ತವೆ. ಯಾವ ಪದಾರ್ಥಗಳು ಮಿದುಳಿಗೆ ವಿಷಕಾರಿ ಎಂಬುದು ನಿಖರವಾಗಿ ತಿಳಿದಿಲ್ಲವಾದರೂ, ಅಮೋನಿಯಾದಂಥ ಸಂಯುಕ್ತ ಪದಾರ್ಥದಳು ಪ್ರಮುಖ ಪಾತ್ರ ವಹಿಸುತ್ತವೆ ಎಂಬುದು ನಿಶ್ಚಿತ. ಬಹುಕಾಲದಿಂದ ಯಕೃತ್ತಿನ ತೊಂದರೆಯಿರುವವರಲ್ಲಿ, ತೀವ್ರ ಸ್ವರೂಪದ ಸೋಂಕು ತಗುಲಿರುವವರಲ್ಲಿ ಹಾಗೂ ಮದ್ಯಪಾನ ಮಾಡುವವರಲ್ಲಿ ಹೆಪಟಿಕ್ ಎನ್ಸೆಫಾಲೋಪತಿ ಸಾಮಾನ್ಯ. ಅತಿಯಾದ ಪ್ರೋಟೀನುಗಳನ್ನು, ವಿಶೇಷವಾಗಿ ರಕ್ತದಲ್ಲಿ ಪ್ರೋಟೀನುಗಳ ಪ್ರಮಾಣ ಹೆಚ್ಚಿಸುವ ಆಹಾರಗಳನ್ನು, ಸೇವಿಸುವುದರಿಂದ, ಈ ಸಮಸ್ಯೆ ಹೆಚ್ಚಾಗುತ್ತದೆ. ಕರಳಿನಲ್ಲಿಯ ರಕ್ತಸ್ರಾವ, ಅನ್ನನಾಳದಲ್ಲಿ ತಿರುಚಿಕೊಂಡ ರಕ್ತನಾಳಗಳು, ರಕ್ತದಲ್ಲಿ ಪ್ರೋಟೀನುಗಳ ಅಂಶವನ್ನು ಹೆಚ್ಚಿಸುತ್ತವೆ. ಇವು, ನೇರವಾಗಿ ಮಿದುಳಿಗೆ ಪರಿಣಾಮ ಬೀರಬಲ್ಲದು. ನಿರ್ಜಲೀಕರಣ (ಡೀಹೈಡ್ರೇಷನ್), ಅಂದರೆ, ಎಲೆಕ್ಟ್ರೋಲೈಟ್ ಸಮತೋಲ ತಪ್ಪುವುದು, ಕೆಲ ಔಷಧಗಳು –ವಿಶೇಷವಾಗಿ ಕೆಲ ಮತ್ತುಕಾರಕಗಳು, ನೋವು ನಿವಾರಕಗಳು ಮತ್ತು ಮೂತ್ರಶಂಕೆ ಹೆಚ್ಚಿಸುವವು, ಈ ಸಮಸ್ಯೆಯನ್ನು ಉಲ್ಬಣಗೊಳಿಸಬಲ್ಲವು. ಇಂಥ ಸಮಯದಲ್ಲಿ ಕೊಂಚ ಕಡಿಮೆ ಪ್ರೋಟೀನುಗಳನ್ನು ಸೇವಿಸಿದರೆ, ರೋಗಲಕ್ಷಣಗಳು ಮಾಯವಾಗುವವು.
ಪ್ರಮುಖ ರೋಗ ಲಕ್ಷಣ ಎಂದರೆ, ಮಿದುಳಿನ ಕಾರ್ಯಕ್ಷಮತೆ ಕಡಿಮೆಯಾಗುವುದು. ಪರಿಣಾಮವಾಗಿ, ಚುರುಕುತನ ಕಡಿಮೆಯಾಗುವುದು ಮತ್ತು ಗೊಂದಲ. ತಾರ್ಕಿಕ ಆಲೋಚನೆ, ವ್ಯಕ್ತಿತ್ವ ಹಾಗೂ ವರ್ತನೆಯಲ್ಲಿ ಕೊಂಚ ಬದಲಾವಣೆಗಳನ್ನು ಆರಂಭಿಕ ಹಂತದಲ್ಲಿ ಗುರುತಿಸಬಹುದು. ರೋಗಿಯ ಮನೋವೃತ್ತಿ ಇದ್ದಕ್ಕಿದ್ದಂತೆ ಬದಲಾಗುವುದು ಹಾಗೂ ತೀರ್ಮಾನ ತೆಗೆದುಕೊಳ್ಳುವ ಗುಣದಲ್ಲಿ ವ್ಯತ್ಯಯ, ನಿದ್ರಾ ಸ್ವರೂಪದಲ್ಲಿ ಬದಲಾವಣೆ ಕಾಣಿಸಿಕೊಳ್ಳಬಹುದು. ಈ ರೋಗದ ಯಾವುದೇ ಹಂತದಲ್ಲಿ ಉಸಿರಾಟದಲ್ಲಿ ಗಬ್ಬು ಸಿಹಿ ವಾಸನೆ ಬರುತ್ತದೆ. ಈ ಸಮಸ್ಯೆ ಉಲ್ಬಣಿಸಿದಂತೆಲ್ಲಾ, ಕೈ ಚಾಚಿ ಅಗಲಿಸಿದಾಗ, ಸಮತೋಲದಿಂದ ಹಿಡಿದುಕೊಳ್ಳಲು ಸಾಧ್ಯವಾಗುವುದಿಲ್ಲ. ರೋಗಿಯು ಸದಾ ನಿದ್ರಾವಸ್ಥೆಯಲ್ಲಿದ್ದು, ಗೊಂದಲಗೊಳ್ಳುತ್ತಾನೆ. ಆತನ ಮಾತು ಹಾಗೂ ಚಲನೆಯಲ್ಲಿ ಹಿಡಿತ ಇರದೆ, ಕೊಂಚ ಮಂದವಾಗಿರುತ್ತವೆ. ಯಾವುದರ ಕುರಿತು ಗಮನ ಹರಿಸಲಾಗದು. ತೀರಾ ಅಪರೂಪವಾಗಿ, ಉದ್ವೇಗ ಹಾಗೂ ಉದ್ವಿಗ್ನತೆಗೆ ಒಳಗಾಗಬಹುದು. ಇವೆಲ್ಲರದ ಪರಿಣಾಮವಾಗಿ, ರೋಗಿಯು ನಿಧಾನಕ್ಕೆ ಪ್ರಜ್ಞಾಹೀನ ಸ್ಥಿತಿಗೆ ಹೋಗಿ, ಕೋಮಾ ಹಂತ ತಲುಪಬಹುದು. ಎಲೆಕ್ಟ್ರೋಎಲೆನ್ಲೆಫಾಲೋಗ್ರಾಮ್ (ಇಇಜಿ) (ಮಿದುಳು, ಬೆನ್ನುಹುರಿ ಹಾಗೂ ನರ ರೋಗ ಪತ್ತೆಗೆ ಬಳಸುವ ಪರೀಕ್ಷೆ) ಆರಂಭಿಕ ಹಂತದಲ್ಲಿಯೇ ಈ ಸಮಸ್ಯೆಯನ್ನು ಪತ್ತೆ ಹಚ್ಚಲು ಸಹಕಾರಿ. ಅತ್ಯಲ್ಪ ಪ್ರಮಾಣದ ರೋಗವಿದ್ದರೂ, ಈ ಪರೀಕ್ಷೆಯಲ್ಲಿ ಮಿದುಳಿನ ಅಲೆಗಳು ಅಸಹಜವಾಗಿ ನಿಧಾನವಾಗಿರುವುದನ್ನು ಪತ್ತೆ ಹಚ್ಚಬಹುದು. ರಕ್ತ ಪರೀಕ್ಷೆಯಲ್ಲಿ ಅಮೋನಿಯಾವು ಅಸಹಜ ಪ್ರಮಾಣದಲ್ಲಿ ಹೆಚ್ಚಾಗಿರುತ್ತದೆ. ಆದರೆ, ಇಇಜಿ ಮೂಲಕವೇ ರೋಗವನ್ನು ಪತ್ತೆ ಹಚ್ಚುವುದು ಹೆಚ್ಚು ವಿಶ್ವಾಸಾರ್ಹ.
ವೈದ್ಯರು ಮುಖ್ಯವಾಗಿ ಎನ್ಸೆಫಾಲೋಪತಿಗೆ ಕಾರಣವಾದ ಸೋಂಕು ಹಾಗೂ ಔಷಧಗಳನ್ನು ಪತ್ತ ಹಚ್ಚಿ, ಅವುಗಳ ನಿವಾರಣೆಗೆ ಯತ್ನಿಸುತ್ತಾರೆ. ರೋಗಿಯ ಆಹಾರವನ್ನು ನಿಯಂತ್ರಿಸುವ ಮೂಲಕ ಕರಳಿನಲ್ಲಿಯ ವಿಷಯುಕ್ತ ಪದಾರ್ಥಗಳನ್ನು ತೆಗೆದು ಹಾಕಲು ಯತ್ನಿಸುತ್ತಾರೆ. ಆಹಾರದಲ್ಲಿನ ಪ್ರೋಟೀನ್ ಅಂಶಗಳನ್ನು ಸಂಪೂರ್ಣವಾಗಿ ನಿಲ್ಲಿಸಲಾಗುತ್ತದೆ ಇಲ್ಲವೇ ತಗ್ಗಿಸಲಾಗುತ್ತದೆ. ದೇಹಕ್ಕೆ ಅಗತ್ಯವಿರುವ ಕಾರ್ಬೋಹೈಡ್ರೇಟುಗಳನ್ನು ಬಾಯಿ ಮೂಲಕ ಇಲ್ಲವೇ ನರಗಳ (ಇಂಟ್ರಾವೀನಸ್) ಮುಖಾಂತರ ನೀಡಲಾಗುತ್ತದೆ. ಕ್ರಮೇಣವಾಗಿ, ವೈದ್ಯರು, ಸಸ್ಯಜನ್ಯ ಪ್ರೋಟೀನನ್ನು ನೀಡುತ್ತಾರೆ. ಪ್ರಾಣಿಜನ್ಯ ಪ್ರೋಟೀನಿಗಿಂತ, ಸಸ್ಯ ಜನ್ಯ ಪ್ರೋಟೀನು ಅನುಕೂಲಕರ. ನಾರಿನಂಶ ಹೆಚ್ಚಿರುವ ಆಹಾರವು, ಕರುಳಿನಲ್ಲಿ ಆಹಾರದ ಚಲನೆಯನ್ನು ವೇಗವಾಗಿಸುತ್ತದೆ. ಇದರಿಂದಾಗ, ಅಸಿಡಿಟಿಯ ಪ್ರಮಾಣ ಬದಲಾಗಿ, ಅಮೋನಿಯಾ ಹೀರಿಕೆ ಪ್ರಮಾಣವನ್ನು ಕಡಿಮೆಗೊಳಿಸುತ್ತದೆ. ಬಾಯಿಯ ಮೂಲಕ ಕೃತಕ ಶರ್ಕರಗಳನ್ನು (ಲ್ಯಕ್ಟುಲೋಸ್) ತೆಗೆದುಕೊಳ್ಳುವುದರಿಂದ ಇದೇ ಬಗೆಯ ಅತ್ಯುತ್ತಮ ಪರಿಣಾಮ ಒದಗಿಸಬಲ್ಲದು. ಆಗೀಗ ಎನಿಮಾ ಕೊಟ್ಟು, ಕರಳನ್ನು ಶುದ್ದಿಗೊಳಿಸಬಹುದು. ಲ್ಯಕ್ಟಲೋಸ್ ಶರ್ಕರನ್ನು ಸಹಿಸಿಕೊಳ್ಳಲು ಕಷ್ಟವೆನಿಸುವ ರೋಗಿಗಳಿಗೆ ಜೀವ ನಿರೋಧಕಗಳನ್ನು ಬಾಯಿ ಮೂಲಕ ನೀಡಲಾಗುತ್ತದೆ.
ಚಿಕಿತ್ಸೆಯ ಮೂಲಕ ಹೆಪಟಿಕ್ ಎನ್ಸೆಫಾಲೋಪತಿಯನ್ನು ನಿವಾರಿಸಬಹುದು. ಕೆಲ ಸಂದರ್ಭಗಳಲ್ಲಿ ಸಂಪೂರ್ಣ ಗುಣಮುಖರಾಗುವುದೂ ಸಾಧ್ಯ. ಆದರೆ, ಯಕೃತ್ತಿನ ಸಮಸ್ಯೆಯನ್ನು ಬಹುಕಾಲದಿಂದ ಎದುರಿಸುವವರಿಗೆ, ಈ ರೋಗ ಮರುಕಳಿಸುವ ಸಾಧ್ಯತೆ ಜಾಸ್ತಿ. ಈ ಕಾರಣದಿಂದ ಕೋಮಾ ಸ್ಥಿತಿಯನ್ನು ತಲುಪುವವರಲ್ಲಿ ಶೇ. 80ರಷ್ಟು ರೋಗಿಗಳಿಗೆ ಯಕೃತ್ತಿನಲ್ಲಿ ಸಮಸ್ಯೆ ಉಲ್ಬಣಗೊಂಡಿರುತ್ತದೆ. ಇಂಥ ಸಂದರ್ಭದಲ್ಲಿ ತೀವ್ರ ನಿಗಾ ವಹಿಸಿದರೂ, ಕಾಯಿಲೆ ಮರಣಾಂತಿಕ.
ಮೂಲ : ಎಂ ಇ ಆರ್ ಸಿ ಕೆ
ಕೊನೆಯ ಮಾರ್ಪಾಟು : 4/22/2020
ಪ್ರಸವಾನಂತರದ ಖಿನ್ನತೆ ಎಂದರೆ ಹೆರಿಗೆಯಾದ ಕೆಲವು ವಾರಗಳ ನಂ...
ವಿಶ್ವ ಆರೋಗ್ಯ ಸಂಸ್ಥೆಯು ಹದಿಹರೆಯವನ್ನು ವಯೋಮಾನಕ್ಕೆ ಅನುಗ...
ಹಸು ಮತ್ತು ಎಮ್ಮೆಗಳಿಗೆ ಜಂತುನಾಶಕ ಕ್ರಮಗಳ ತಪಶೀಲು ಪರಾವಲಂ...
ಹೆರಿಗೆ ನೋವೆಂದರೆ ಅದೊಂದು ಅತೀವ ವೇದನೆ. ಈ ನೋವಿನ ಬಳಿಕ ಮಗ...