ಮಾನವನಿಗೆ ಅತಿ ಹೆಚ್ಚು ಪ್ರಿಯವಾದುದೆಂದರೆ ಆತನ ಶರೀರ. ಈ ಶರೀರವನ್ನು ಬಿಟ್ಟು ಒಂದು ಕ್ಷಣವು ಅವನಿರುವುದಾದರೆ ಅದು ನಿರ್ಜೀವಿಯಾಗಿ ಮಾತ್ರ. ಶರೀರವೇ ಶ್ರೇಷ್ಠ, ಶರೀರವಿಲ್ಲದ ಮನುಷ್ಯನನ್ನು ಕಲ್ಪಿಸಲು ಅಸಾಧ್ಯ ಈ ಶರೀರದೊಳಗೆ ಅತ್ಮ, ಮನಸ್ಸು, ಬುದ್ಧಿ, ಭಾವನೆಗಳು ಸೇರಿಕೊಂಡಿವೆ. ಇವುಗಳು ಶರೀರದ ಮೂಲಕ ತಮ್ಮ ಚಟುವಟಿಕೆಯನ್ನು ನಿರ್ವಹಿಸುವುದರಿಂದಲೇ ಮಹಾಕವಿ ಕಾಳಿದಾಸನು ಶರೀರ ಮಾಧಂಖಲು ಧರ್ಮಂ ಸಾಧನಂ
ಎಂಬ ಉಕ್ತಿಯನ್ನು ಜಗತ್ತಿಗೆ ನೀಡಿದ್ದು ಅದು ಬಹಳ ಮಹತ್ವದ್ದಾಗಿದೆ.
ದೈಹಿಕ ಶಿಕ್ಷಣವನ್ನು ಶಿಕ್ಷಣದ ಒಂದು ಮೃದುವಾದ ಅಂಗ ಅಥವಾ ಶಿಕ್ಷಣದ ಒಂದು ಜೀವಾಳ ಎಂದೆಲ್ಲಾ ಹೇಳಲಾಗುತ್ತದೆ. ದೈಹಿಕ ಎಂಬ ಪದವು ದೇಹಕ್ಕೆ ಸಂಬಂಧಿಸುವುದಾಗಿದೆ. ಶಿಕ್ಷಣಕ್ಕೆ ಶರೀರ ಒಂದು ಪ್ರಮುಖ ಸಾಧನ. ಈ ಸಾಧನಕ್ಕೂ ಸಹ ಶಿಕ್ಷಣ ಬೇಕು.
ಶರೀರ ಶಿಕ್ಷಣವು ಶಾರೀರಿಕ ಚಟುವಟಿಕೆಗಳ ಮೂಲಕ ಶಿಕ್ಷಣದ ಪ್ರಗತಿಗೆ ಪೂರಕ ಹಾಗೂ ಮೂಲಭೂತವಾಗಿ ಸ್ಪಂಧಿಸುವ ಪ್ರಕ್ರಿಯೆಯಲ್ಲಿ ತೊಡಗಿಕೊಂಡಿದೆ.
ಜೀವನ ಪ್ರಗತಿಗೆ ಬೌದ್ಧಿಕ ಶಿಕ್ಷಣ ಹೇಗೆ ಅವಶ್ಯಕವೋ ಹಾಗೆಯೇ ಶರೀರದ ಆರೋಗ್ಯಕ್ಕೆ ದೈಹಿಕ ಶಿಕ್ಷಣ ಅವಶ್ಯವಾಗಿರುತ್ತದೆ. ದೈಹಿಕ ಶಿಕ್ಷಣದ ಬಗ್ಗೆ ಅನೇಕ ಪ್ರಸಿದ್ದ ಶಿಕ್ಷಣ ತಜ್ಞರುಗಳು ತಮ್ಮದೇ ಆದ ವ್ಯಾಖ್ಯಾನಗಳನ್ನು ನೀಡಿದ್ದಾರೆ.
ಸಿ.ಎ. ಬ್ಯೂಕರ್ ಎಂಬ ಶಿಕ್ಷಣ ತಜ್ಞರು, “ದೈಹಿಕ ಶಿಕ್ಷಣವು ಒಟ್ಟು ಶಿಕ್ಷಣ ಕ್ರಿಯೆಯ ಒಂದು ಮಹತ್ವದ ಭಾಗ ಯೋಗ್ಯವಾದ ಶಾರೀರಿಕ ಚಟುವಟಿಕೆಗಳ ಮೂಲಕ, ಶಾರೀರಿಕವಾಗಿ, ಮಾನಸಿಕವಾಗಿ, ಭಾವನಾತ್ಮಕವಾಗಿ ಮತ್ತು ಸಾಮಾಜಿಕವಾಗಿ ಯೋಗ್ಯರಾದ ನಾಗರೀಕನನ್ನು ನಿರ್ಮಾಣ ಮಾಡುವುದೆ ದೈಹಿಕ ಶಿಕ್ಷಣವಾಗಿದೆ ಎಂದಿದ್ದಾರೆ.
ಎ.ಎ.ಹೆಚ್.ಪಿ.ಇ.ಆರ್.ಡಿ.(American Association Helth, Physical Education, Recreation and Dance)ರವರು “ವ್ಯಕ್ತಿಯ ಬೆಳವಣಿಗೆ, ಅಭಿವೃದ್ಧಿ, ಮತ್ತು ನಡೆತೆಗಳ ಮೌಲ್ಯಗಳಿಗನುಗುಣವಾಗಿ ಆಯ್ದು ಶಾರೀರಿಕ ಚಟುವಟಿಕೆಗಳ ಮೂಲಕ ಕೊಡುವಂತಹ ಶಿಕ್ಷಣಕ್ಕೆ ದೈಹಿಕ ಶಿಕ್ಷಣ ಎಂದು ಕರೆಯುತ್ತಾರೆ”.
ಜೆ.ಪಿ.ಥಾಮಸ್ ಎಂಬ ಶಿಕ್ಷಣ ತಜ್ಞರು “ಶರೀರದ ಮೂಲಕ ಶರೀರಕ್ಕೆ ಕೊಡುವ ಶಿಕ್ಷಣವೇ ದೈಹಿಕ ಶಿಕ್ಷಣ “, ಇದು ದೇಹಕ್ಕೆ ಸಂಬಂಧಿಸಿರುವುದಕ್ಕಿಂತ ಹೆಚ್ಚಾಗಿ ಶೀಕ್ಷಣಕ್ಕೆ ಸಂಬಂಧಿಸಿದೆ ಎಂದಿದ್ದಾರೆ.
ಮೇಲಿನ ಎಲ್ಲಾ ಅಂಶಗಳನ್ನು ಕ್ರೂಡೀಕರಿಸಿದಾಗ ದೈಹಿಕ ಶಿಕ್ಷಣ ಶರೀರದಲ್ಲಿ ರುವ ಮನಸ್ಸು ಬುದ್ಧಿ, ಭಾವನೆಗಳನ್ನು ಶಾರೀರಿಕ ಚಟುವಟಿಕೆಗಳ ಮೂಲಕ ನೈತಿಕವಾಗಿಯೂ ಅಭಿವೃದ್ಧಿ ಹೊಂದುವಂತೆ ಮಾಡಲು ಪ್ರಯತ್ನಿಸುತ್ತದೆ.
ಕೊನೆಯ ಮಾರ್ಪಾಟು : 7/20/2020