অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ನುಡಿಯರಿಮೆಯ ಇಣುಕುನೋಟ

ನುಡಿಯರಿಮೆಯ ಇಣುಕುನೋಟ

  1. ನುಡಿಮಾರಲು ಎಣ್ಣುಕಗಳ ಬಳಕೆ
  2. ದ್ರಾವಿಡ ನುಡಿಗಳು ಅಯ್ದಲ್ಲ, ಇಪ್ಪತ್ತಾರು
  3. ಬಗೆತದ ಮೇಲೆ ನುಡಿಯ ಹತೋಟಿ
  4. ಕನ್ನಡ ನುಡಿಯ ಸೊಗಡು
  5. ಸೊಲ್ಲರಿಮೆಯಲ್ಲಿ ತರ‍್ಕಕ್ಕೆ ನೆಲೆಯಿಲ್ಲ
  6. ಪದಗಳ ಹುರುಳು ಮತ್ತು ತಿಳಿವು
  7. ಪದಗಳ ಹಿನ್ನಡವಳಿಯನ್ನು ಅರಿಯುವ ಬಗೆ
  8. ಎಣಿಕೆಯಲ್ಲೂ ಹಲವು ಬಗೆಗಳಿವೆ
  9. ಪದ ಮತ್ತು ಅದರ ಹುರುಳು
  10. ಉಲಿ ಮಾರ‍್ಪಾಡಿನ ಗೆರೆಗಳು
  11. ಮಂಗಗಳು ಯಾಕೆ ಮಾತನಾಡಲಾರವು
  12. ಕಿವುಡರ ಸನ್ನೆನುಡಿಯೂ ಒಂದು ನುಡಿಯೇ
  13. ಅರಿಮೆಯ ಬರಹಗಳ ತೊಡಕುಗಳು
  14. ಕನ್ನಡ ನುಡಿ ಎಶ್ಟು ಹಳೆಯದು
  15. ಸಾಹಿತಿಗೆ ವ್ಯಾಕರಣದ ತಿಳಿವು ಬೇಕೇ
  16. ಬರಹದಲ್ಲಿ ಯಾವುದು ಸರಿ, ಯಾವುದು ತಪ್ಪು
  17. ಕಲಿಕೆ ಮತ್ತು ಅರಕೆ
  18. ನುಡಿಗಳ ನಡುವಿನ ನಂಟಸ್ತಿಕೆ
  19. ಮಕ್ಕಳಿಗೆ ಬರೆಯಲು ಕಲಿಸುವ ಬಗೆ
  20. ಮಕ್ಕಳಿಗೆ ವ್ಯಾಕರಣ ಕಲಿಸಬೇಕೇ
  21. ಬರಹಕ್ಕೆ ಮೇಲ್ಮೆ ಬಂದುದು ಹೇಗೆ
  22. ಹೆಚ್ಚು ಬರಿಗೆಗಳಿರುವುದು ಸಿರಿತನವಲ್ಲ
  23. ಯಾವುದು ಕನ್ನಡ ವ್ಯಾಕರಣ
  24. ಅರಿಮೆಯ ಪದಗಳಿಗೆ ಕನ್ನಡವೇ ಮೇಲು
  25. ಓದುವ ಹಾಗೆಯೇ ಬರೆಯುವುದು
  26. ನುಡಿಯ ಕಲಿಕೆ ಮತ್ತು ಕಲಿಕೆನುಡಿ
  27. ಬರಹವನ್ನು ಮಾರ‍್ಪಡಿಸಿ ಗೆದ್ದವರು
  28. ನುಡಿಯರಿಮೆಯ ಇಣುಕುನೋಟ
  29. ನಿಮ್ಮ ಮಗುವಿಗೆ ಇಂಗ್ಲಿಶ್ ನುಡಿ ಮಾತ್ರ ಸಾಕೇ
  30. ಯಾವುದು ಕನ್ನಡದ ಸೊಗಡು
  31. ಇಂಗ್ಲಿಶ್ ಕಲಿಕೆಗೆ ಕನ್ನಡದ ನೆರವು ಬೇಕು
  32. ಪದಗಳನ್ನು ಓದುವ ಹಾಗೆಯೇ ಬರೆಯಬೇಕು
  33. ಮನೆಯ ಹೊರಗಡೆ ಅಡಿಗೆಮನೆ ಪಾಕಶಾಲೆಯಾಗಬೇಕೇ
  34. ಬರಹ ಕನ್ನಡ ಮತ್ತು ಆಡುಗನ್ನಡ
  35. ಅತ್ತೆ-ಅಳಿಯಂದಿರ ನುಡಿ

ನುಡಿಮಾರಲು ಎಣ್ಣುಕಗಳ ಬಳಕೆ

ಒಂದು ನುಡಿಯಲ್ಲಿರುವ ಬರಹವನ್ನು ಇನ್ನೊಂದು ನುಡಿಗೆ ಮಾರ್ಪಡಿಸುವುದನ್ನು ನುಡಿಮಾರಿಕೆ (ಅನುವಾದ) ಎಂದು ಕರೆಯಬಹುದು. ಈ ಕೆಲಸವನ್ನು ನಡೆಸಲು ಸಾಮಾನ್ಯವಾಗಿ ತುಂಬಾ ಸಮಯ ತಗಲುತ್ತದೆ; ಗಂಟೆಗೆ ಅಯ್ದಾರು ಪುಟಗಳನ್ನಶ್ಟೇ ನುಡಿಮಾರಲು ಬರುತ್ತದೆ. ಕೆಲವು ಬಗೆಯ ಬರಹಗಳನ್ನು ತುಸು ಬೇಗನೆ ನುಡಿಮಾರಬಹುದು, ಆದರೆ ಬೇರೆ ಕೆಲವು ಬಗೆಯ ಬರಹಗಳನ್ನು ನುಡಿಮಾರಲು ಇನ್ನಶ್ಟು ಹೊತ್ತು ತಗಲಬಹುದು. ಇವತ್ತು ನುಡಿಮಾರಬೇಕಾಗಿರುವ ಬರಹಗಳ ಎಣಿಕೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಹೋಗುತ್ತಿದೆ. ಇಂಗ್ಲಿಶ್ನಂತಹ ನುಡಿಗಳಿಂದ ಸಾವಿರಾರು ಬರಹಗಳನ್ನು ನುಡಿಮಾರುತ್ತಲೇ ಇರಬೇಕಾಗುತ್ತದೆ. ಕೊನೆಯಿಲ್ಲದ ಈ ಕೆಲಸಕ್ಕೆ ಎಶ್ಟು ಮಂದಿ ನುಡಿಮಾರುಗರಿದ್ದರೂ ಸಾಕಾಗುವುದಿಲ್ಲ.

ಹಾಗಾಗಿ, ಎಣ್ಣುಕ(ಕಂಪ್ಯೂಟರ್)ಗಳನ್ನು ಬಳಸಿ ಈ ಕೆಲಸವನ್ನು ಹೆಚ್ಚು ಬೇಗನೆ ಮತ್ತು ಕಡಿಮೆ ವೆಚ್ಚದಲ್ಲಿ ನಡೆಸಬಹುದಲ್ಲವೇ ಎಂಬುದಾಗಿ ಹಲವರಲ್ಲಿ ಆಸಕ್ತಿ ಮೂಡಿದ್ದು, ಕಳೆದ ಅಯ್ವತ್ತು ವರ್ಶಗಳಿಂದ ಈ ವಿಶಯದಲ್ಲಿ ಅರಕೆಗಳು ನಡೆಯುತ್ತಿವೆ. ಗಂಟೆಗೆ ನೂರಿನ್ನೂರು ಪುಟಗಳಶ್ಟು ಬರಹಗಳನ್ನು ಇವತ್ತಿನ ಎಣ್ಣುಕಗಳು ನುಡಿಮಾರಿಕೊಡಬಲ್ಲುವು. ಆದರೆ, ಅವು ನುಡಿಮಾರಿದ ಈ ಬರಹಗಳಲ್ಲಿ ಹಲವು ತಪ್ಪುಗಳೂ ಉಳಿದಿರುತ್ತವೆ, ಮತ್ತು ಈ ತಪ್ಪುಗಳನ್ನೆಲ್ಲ ಕಯ್ಯಿಂದಲೇ ತಿದ್ದಿ ಸರಿಪಡಿಸಬೇಕಾಗುತ್ತದೆ. ಯಾಕೆಂದರೆ, ನುಡಿಮಾರುವ ಸಮಯದಲ್ಲಿ ನಾವು ನಡೆಸಬೇಕಾಗಿರುವ ಹಲವು ಕೆಲಸಗಳಲ್ಲಿ ಕೆಲವನ್ನು ನಡೆಸಲು ಎಣ್ಣುಕಗಳಿಗೆ ಸಾದ್ಯವೇ ಆಗುವುದಿಲ್ಲ, ಮತ್ತು ಅಂತಹ ವಿಶಯಗಳಲ್ಲಿ ಅವು ಹಲವು ತಪ್ಪುಗಳನ್ನು ಮಾಡುತ್ತವೆ. ಕೆಲವು ಬಗೆಯ ಬರಹಗಳ ಮಟ್ಟಿಗಂತೂ ಈ ರೀತಿ ಎಣ್ಣುಕಗಳು ಕೊಡುವ ನುಡಿಮಾರಿಕೆಯನ್ನು ತಿದ್ದಲು ಹೋಗುವುದಕ್ಕಿಂತಲೂ ಎಣ್ಣುಕಗಳ ನೆರವಿಲ್ಲದೆ ನೇರವಾಗಿ ನುಡಿಮಾರುವುದೇ ಸುಳುವಾದ ಕೆಲಸವೆಂದು ಅನಿಸಬಲ್ಲುದು.

ಎಣ್ಣುಕಗಳು ಬರಹಗಳನ್ನು ನುಡಿಮಾರಬೇಕಿದ್ದಲ್ಲಿ ಅವಕ್ಕೆ ಹಲವು ಬಗೆಯ ಅರಿವುಗಳು ಬೇಕಾಗುತ್ತವೆ. ಬರಹದಲ್ಲಿ ಬಳಕೆಯಾಗುವ ಪದಗಳಿಗೆ ಎಂತಹ ಹುರುಳುಗಳೆಲ್ಲ ಇವೆ ಎಂಬುದನ್ನು ಅವು ಅರಿತಿರಬೇಕು, ಮತ್ತು ಇದಕ್ಕಾಗಿ ಅವುಗಳಲ್ಲಿ ಪದನೆರಕೆಗಳಿರಬೇಕು. ಪದಗಳು ಸೊಲ್ಲುಗಳಲ್ಲಿ ಹೇಗೆ ಬಳಕೆಯಾಗುತ್ತವೆ, ಮತ್ತು ಅವುಗಳ ಹಲವು ಹುರುಳುಗಳಲ್ಲಿ ಒಂದು ಹುರುಳು ಹೇಗೆ ಆಯ್ಕೆಗೊಳ್ಳುತ್ತದೆ ಎಂಬುದನ್ನು ಅವು ಅರಿತಿರಬೇಕು, ಮತ್ತು ಇದನ್ನು ಅವಕ್ಕೆ ತಿಳಿಸಬಲ್ಲ ಸೊಲ್ಲರಿಮೆಯ (ವ್ಯಾಕರಣದ) ಕಟ್ಟಲೆಗಳು ಅವುಗಳಲ್ಲಿ ಇರಬೇಕು. ಬರಹಗಳಲ್ಲಿ ಬರುವ ಪದಗಳ ಹುರುಳು ಅವನ್ನು ಬಳಸಿರುವ ಕುಳ್ಳಿಹ(ಸಂದರ್ಬ)ದ ಮೇಲೂ ಅವಲಂಬಿಸಿರುತ್ತದೆ. ಮಾನವನ ಮಿದುಳು ಈ ವ್ಯತ್ಯಾಸವನ್ನು ಸುಳುವಾಗಿ ಅರಿತುಕೊಂಡು, ಕುಳ್ಳಿಹಕ್ಕೆ ಹೊಂದಿಕೆಯಾಗುವಂತಹ ಹುರುಳನ್ನು ಆಯ್ದುಕೊಳ್ಳಬಲ್ಲುದು. ಆದರೆ, ಈ ಕೆಲಸವನ್ನು ನಡೆಸಲು ಬೇಕಾಗುವ ಅರಿವನ್ನು ಎಣ್ಣುಕಗಳಿಗೆ ಕೊಡಿಸುವುದು ಹೇಗೆ ಎಂಬುದಿನ್ನೂ ತಿಳಿವಿಗರಿಗೆ ಗೊತ್ತಾಗಿಲ್ಲ. ಹಾಗಾಗಿ, ಈ ವಿಶಯದಲ್ಲಿ ಎಣ್ಣುಕಗಳು ತುಂಬಾ ತಪ್ಪು ಮಾಡುತ್ತಿವೆ.

ಇವತ್ತು ನುಡಿಮಾರುವ ಕೆಲಸಕ್ಕಾಗಿ ಎಣ್ಣುಕಗಳಲ್ಲಿ ಮುಕ್ಯವಾಗಿ ಎರಡು ಬಗೆಯ ಹಮ್ಮುಗೆಗಳನ್ನು ಬಳಸಲಾಗುತ್ತದೆ. ಇವನ್ನು ಮಾರೆಡೆ ಹಮ್ಮುಗೆ ಮತ್ತು ಎಡೆನುಡಿ ಹಮ್ಮುಗೆ ಎಂಬುದಾಗಿ ಕರೆಯಬಹುದು. ಇವುಗಳಲ್ಲಿ ಮೊದಲನೆಯದನ್ನು ಬಳಸುವವರು ತಿಳಿವನ್ನು ನೇರವಾಗಿ ಮೂಲನುಡಿಯಿಂದ ಈಡುನುಡಿಗೆ ಮಾರೆಡೆಗೊಳಿಸು(ವರ್ಗಾಯಿಸು)ತ್ತಾರೆ, ಮತ್ತು ಎರಡನೆಯದನ್ನು ಬಳಸುವವರು ತಿಳಿವನ್ನು ಮೊದಲಿಗೆ ಒಂದು ಕಲ್ಪಿತವಾಗಿರುವ ಎಡೆನುಡಿಗೆ ಮಾರೆಡೆಗೊಳಿಸಿ, ಅಲ್ಲಿಂದ ಈಡುನುಡಿಗೆ ಮಾರೆಡೆಗೊಳಿಸುತ್ತಾರೆ.

ಮಾರೆಡೆ ಹಮ್ಮುಗೆಯಲ್ಲಿ ಮೂರು ಹಂತಗಳಿರುತ್ತವೆ: ಮೊದಲನೆಯ ಹಂತದಲ್ಲಿ ಮೂಲ ಬರಹದ ಹುರುಳೇನು ಎಂಬುದನ್ನು ಕಂಡುಹಿಡಿದು, ಅದನ್ನು ಮೂಲನುಡಿಯದೇ ಆದ ಒಂದು ಕಲ್ಪಿತ ರೂಪಕ್ಕೆ ಬದಲಾಯಿಸಲಾಗುತ್ತದೆ; ಎರಡನೆಯ ಹಂತದಲ್ಲಿ ಅದನ್ನು ಅಂತಹದೇ ಆದ ಒಂದು ಈಡುನುಡಿಯ ಕಲ್ಪಿತ ರೂಪಕ್ಕೆ ಮಾರೆಡೆಗೊಳಿಸಲಾಗುತ್ತದೆ; ಮತ್ತು ಮೂರನೆಯ ಹಂತದಲ್ಲಿ ಈಡುನುಡಿಯ ಈ ಕಲ್ಪಿತ ರೂಪವನ್ನು ಅದರ ಬರಹರೂಪಕ್ಕೆ ಮಾರ್ಪಡಿಸಲಾಗುತ್ತದೆ.

ಮಾರೆಡೆ ಹಮ್ಮುಗೆಗಿಂತ ಎಡೆನುಡಿ ಹಮ್ಮುಗೆ ಸೊಲ್ಲುಗಳಿಗೆ ಕಲ್ಪಿತ ರೂಪವನ್ನು ಕೊಡುವಲ್ಲಿ ಮಾತ್ರ ಬೇರಾಗಿರುತ್ತದೆ. ಮೂಲನುಡಿಯ ಬರಹವನ್ನು ಅದರದೇ ಆದ ಕಲ್ಪಿತ ರೂಪಕ್ಕೆ ಮಾರ್ಪಡಿಸುವ ಬದಲು, ಈ ಹಮ್ಮುಗೆಯಲ್ಲಿ ಅದನ್ನು ಒಂದು ಎಡೆನುಡಿಗೆ (ಕಲ್ಪಿತವಾಗಿರುವ ನುಡಿಗೆ) ಮಾರ್ಪಡಿಸಲಾಗುತ್ತದೆ. ಹೀಗೆ ಮಾಡುವುದರಿಂದ ಸಿಗುವ ಪ್ರಯೋಜನವೇನೆಂದರೆ, ಆಮೇಲೆ ಈ ಎಡೆನುಡಿಯಿಂದ ಬೇರೆ ಯಾವ ನುಡಿಗೆ ಬೇಕಿದ್ದರೂ ಬರಹವನ್ನು ನುಡಿಮಾರಬಹುದು. ಎತ್ತುಗೆಗಾಗಿ, ಕನ್ನಡದ ಒಂದು ಬರಹವನ್ನು ಎಡೆನುಡಿಯ ಬರಹವಾಗಿ ಮಾರ್ಪಡಿಸಿದಲ್ಲಿ, ಆಮೇಲೆ ಅದನ್ನು ನೇರವಾಗಿ ತಮಿಳು, ತೆಲುಗು, ಮಲಯಾಳ, ಹಿಂದಿ ಮೊದಲಾದ ಬೇರೆ ಹಲವು ನುಡಿಗಳಲ್ಲಿ ಯಾವುದರ ಬರಹವಾಗಿ ಬೇಕಿದ್ದರೂ ಮಾರ್ಪಡಿಸಿಕೊಳ್ಳಬಹುದು.

ಇದಕ್ಕೆ ಬದಲು, ಮಾರೆಡೆ ಹಮ್ಮುಗೆಯಲ್ಲಿ ಒಂದೊಂದು ನುಡಿಜೋಡಿಗೂ ನುಡಿಮಾರಲು ಬೇಕಾಗುವ ಕೆಲಸಗಳನ್ನೆಲ್ಲ ಬೇರೆ ಬೇರಾಗಿ ಮಾಡಿಕೊಳ್ಳಬೇಕಾಗುತ್ತದೆ. ಜಗತ್ತಿನ ಎಲ್ಲಾ ನುಡಿಗಳಿಗೂ ಸಮಾನವಾಗಬಹುದಾದಂತಹ, ಎಂದರೆ ಯಾವುದೇ ಒಂದು ನುಡಿಯ ಪರಿಚೆಯನ್ನೂ ಬಳಸದಿರುವಂತಹ ಎಡೆನುಡಿಯೊಂದನ್ನು ಉಂಟುಮಾಡಬಲ್ಲೆವು ಎಂಬ ಹುಚ್ಚು ಉತ್ಸಾಹ ಈ ಎಡೆನುಡಿ ಹಮ್ಮುಗೆಯನ್ನು ಹಮ್ಮಿಕೊಳ್ಳಲು ಹೊರಟಿದ್ದ ತಿಳಿವಿಗರಲ್ಲಿತ್ತು. ಆದರೆ ಸಮಯ ಕಳೆದಂತೆಲ್ಲ, ಇದು ತಲಪಲಾಗದ ಗುರಿ ಎಂಬುದು ಸ್ಪಶ್ಟವಾಗುತ್ತಿದೆ.

ಮೇಲಿನ ಎರಡು ಬಗೆಯ ಹಮ್ಮುಗೆಗಳಿಂತ ತೀರ ಬೇರಾಗಿರುವ ಇನ್ನೊಂದು ಬಗೆಯ ಹಮ್ಮುಗೆಯನ್ನೂ ಕೆಲವರು ತಿಳಿವಿಗರು ಬಳಕೆಗೆ ತಂದಿದ್ದಾರೆ. ಇದರಲ್ಲಿ ಈಗಾಗಲೇ ಉಂಟುಮಾಡಿರುವ ನುಡಿಮಾರಿಕೆಗಳನ್ನು ಬಳಸಿಕೊಳ್ಳುವಂತಹ ಅಳವನ್ನು ಎಣ್ಣುಕಗಳಿಗೆ ಕೊಡಿಸಲಾಗುತ್ತದೆ. ಈ ಅಳವಿನ ನೆರವಿನಿಂದ, ಎಣ್ಣುಕಗಳು ಎರಡು ನುಡಿಗಳ ನಡುವೆ ಈಗಾಗಲೇ ನಡೆಸಿರುವ ನುಡಿಮಾರಿಕೆಗಳಲ್ಲಿ ಒಂದು ನುಡಿಯ ಪದ, ಪದರೂಪ, ಸೊಲ್ಲಿನ ಇಟ್ಟಳ ಮೊದಲಾದವುಗಳಿಗೆ ಬದಲಾಗಿ ಇನ್ನೊಂದು ನುಡಿಯಲ್ಲಿ ಯಾವ ಪದ, ಪದರೂಪ, ಸೊಲ್ಲಿನ ಇಟ್ಟಳ ಮೊದಲಾದವುಗಳನ್ನು ಹೆಚ್ಚಿನೆಡೆಗಳಲ್ಲೂ ಬಳಸಲಾಗಿದೆ ಎಂಬುದನ್ನು ಕಂಡುಕೊಳ್ಳುತ್ತವೆ, ಮತ್ತು ಈ ವಿಶಯವನ್ನು ನೆನಪಿನಲ್ಲಿರಿಸಿಕೊಂಡು, ಅಂತಹವೇ ಆದ ಪದ, ಪದರೂಪ, ಸೊಲ್ಲಿನ ಇಟ್ಟಳ ಮೊದಲಾದುವನ್ನು ಬೇಕಾದಾಗ ಬಳಸುವ ಅಳವನ್ನು ತಾವೇ ಉಂಟುಮಾಡಿಕೊಳ್ಳುತ್ತವೆ.

ಎತ್ತುಗೆಗಾಗಿ, ಇಂಗ್ಲಿಶ್ ಮತ್ತು ಫ಼್ರೆಂಚ್ ನುಡಿಗಳ ನಡುವೆ ಹಲವಾರು ಬರಹಗಳನ್ನು ಈಗಾಗಲೇ ನುಡಿಮಾರಲಾಗಿದೆ. ಈ ಬರಹಗಳಲ್ಲಿ ಯಾವ ಇಂಗ್ಲಿಶ್ ಪದಗಳಿಗೆ ಬದಲಾಗಿ ಯಾವ ಫ಼್ರೆಂಚ್ ಪದಗಳು ಅತಿ ಹೆಚ್ಚು ಕಡೆಗಳಲ್ಲಿ ಬಳಕೆಯಾಗುತ್ತವೆ ಎಂಬುದನ್ನು ಎಣ್ಣುಕಗಳು ಗಮನಿಸಿಕೊಳ್ಳುತ್ತವೆ. ಹೊಸದಾಗಿ ಬರಹವೊಂದನ್ನು ಇಂಗ್ಲಿಶ್ನಿಂದ ಫ಼್ರೆಂಚ್ ನುಡಿಗೆ ಇಲ್ಲವೇ ಫ಼್ರೆಂಚ್ನಿಂದ ಇಂಗ್ಲಿಶ್ ನುಡಿಗೆ ನುಡಿಮಾರಬೇಕಾದಾಗ, ಈ ಎಣ್ಣುಕಗಳು ಒಂದೊಂದು ಪದಕ್ಕೂ ಸಮನಾಗಿರುವ ಪದಗಳಲ್ಲಿ ಆ ರೀತಿ ತುಂಬಾ ಹೆಚ್ಚು ಬಾರಿ ಬಳಕೆಯಾಗಿರುವ ಪದವನ್ನೇ ಆರಿಸಿಕೊಳ್ಳುತ್ತವೆ, ಮತ್ತು ಇದರಿಂದಾಗಿ, ಅವು ನಡೆಸುವ ನುಡಿಮಾರಿಕೆ ಓದುಗರಿಗೆ ಹೆಚ್ಚು ಮೆಚ್ಚುಗೆಯಾಗುವ ಹಾಗಾಗುತ್ತದೆ.

ಎಣ್ಣುಕಗಳು ನುಡಿಮಾರಿರುವ ಬರಹಗಳನ್ನು ಅರಿವಿಗರು ತಿದ್ದುತ್ತಿರುವಂತೆ, ಅವು ತಮ್ಮ ನುಡಿಮಾರಿಕೆಯ ಅಳವನ್ನು ಹೆಚ್ಚಿಸಿಕೊಳ್ಳುವಂತಹ ಹಮ್ಮುಗೆಯನ್ನೂ ಉಂಟುಮಾಡಲಾಗಿದೆ. ಇದರಿಂದಾಗಿ, ಹೆಚ್ಚು ಹೆಚ್ಚು ಬರಹಗಳನ್ನು ಎಣ್ಣುಕಗಳ ನೆರವಿನಿಂದ ನುಡಿಮಾರಿದಂತೆ, ಮತ್ತು ಅಂತಹ ಹೆಚ್ಚು ಹೆಚ್ಚು ಬರಹಗಳನ್ನು ಸರಿಪಡಿಸಿದಂತೆ, ಹೆಚ್ಚು ಹೆಚ್ಚು ಚನ್ನಾಗಿರುವ ನುಡಿಮಾರಿಕೆಯನ್ನು ಅವು ನಡೆಸುವಂತಾಗುತ್ತದೆ. ಗೂಗಲ್ನಂತಹ ಸರ್ವರ್ಗಳಲ್ಲಿ ಇಂತಹ ನುಡಿಮಾರಿಕೆಗಳನ್ನು ಅಳವಡಿಸಲಾಗಿದೆ. ಕನ್ನಡಕ್ಕೆ ಹೆಚ್ಚು ಚನ್ನಾಗಿರುವ ಎಣ್ಣುಕದ ನುಡಿಮಾರಿಕೆ ದೊರಕಲು ಇವನ್ನು ನಾವು ಹೆಚ್ಚು ಹೆಚ್ಚು ಬಳಸುತ್ತಿರಬೇಕು.

(ಈ ಬರಹ ವಿಜಯ ಕರ‍್ನಾಟಕ ಸುದ್ದಿಹಾಳೆಯ ’ಎಲ್ಲರ ಕನ್ನಡ’ ಅಂಕಣದಲ್ಲಿ ಮೊದಲು ಮೂಡಿಬಂದಿತ್ತು)

ಮೂಲ : ಹೊನಲು

ದ್ರಾವಿಡ ನುಡಿಗಳು ಅಯ್ದಲ್ಲ, ಇಪ್ಪತ್ತಾರು

ಕನ್ನಡ, ತಮಿಳು, ಮಲಯಾಳ, ತೆಲುಗು ಮತ್ತು ತುಳು ಎಂಬುದಾಗಿ ಒಟ್ಟು ದ್ರಾವಿಡ ನುಡಿಗಳ ಎಣಿಕೆ ಅಯ್ದು ಮಾತ್ರ (ಪಂಚದ್ರಾವಿಡ) ಎಂಬ ಅನಿಸಿಕೆ ಇವತ್ತಿಗೂ ಹಲವು ಜನರಲ್ಲಿದೆ. ಕೆಲವರು ಈ ಪಟ್ಟಿಯಲ್ಲಿ ತುಳುವಿನ ಬದಲು ಮರಾಟಿಯನ್ನು ಸೇರಿಸುತ್ತಾರೆ; ಆದರೆ, ಮರಾಟಿ ದ್ರಾವಿಡ ನುಡಿಯಲ್ಲ, ಇಂಡೋ-ಆರ‍್ಯನ್ ನುಡಿ.

ಕರ‍್ನಾಟಕದಲ್ಲೇನೇ ಕೊಡಗು ಎಂಬ ಇನ್ನೊಂದು ದ್ರಾವಿಡ ನುಡಿ ಇರುವುದನ್ನು ಈ ದ್ರಾವಿಡ ನುಡಿಗಳ ಪಟ್ಟಿಯನ್ನು ಕೊಡುವವರು ಮರೆತಂತಿದೆ. ದಕ್ಶಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಕೊರಗ ಎಂಬ ಮತ್ತೊಂದು ದ್ರಾವಿಡ ನುಡಿಯೂ ಬಳಕೆಯಲ್ಲಿದೆ. ಇದಲ್ಲದೆ, ನೀಲಗಿರಿಯ ಗುಡ್ಡಕಾಡುಗಳಲ್ಲಿ ತೊದ, ಕೋತ, ಕುರುಂಬ, ಮತ್ತು ಇರುಳ ಎಂಬ ಬೇರೆಯೂ ನಾಲ್ಕು ದ್ರಾವಿಡ ನುಡಿಗಳು ಬಳಕೆಯಲ್ಲಿವೆ.

ಮೇಲಿನ ಈ ಹನ್ನೊಂದು ನುಡಿಗಳಲ್ಲಿ ತೆಲುಗು ನುಡಿಯೊಂದನ್ನು ಬಿಟ್ಟು ಉಳಿದ ಹತ್ತು ನುಡಿಗಳನ್ನು ತೆಂಕುದ್ರಾವಿಡ ಎಂಬ ನುಡಿಗುಂಪಿನಲ್ಲಿ ಸೇರಿಸಿ ಹೇಳಲಾಗುತ್ತದೆ, ಮತ್ತು ತೆಲುಗು ನುಡಿಯನ್ನು ಬೇರೆ ಏಳು ನುಡಿಗಳೊಂದಿಗೆ ಸೇರಿಸಿ ತೆಂಕು-ನಡುದ್ರಾವಿಡವೆಂಬ ಬೇರೊಂದು ನುಡಿಗುಂಪನ್ನು ಮಾಡಲಾಗುತ್ತದೆ. ಈ ತೆಂಕು-ನಡುದ್ರಾವಿಡ ಗುಂಪಿನಲ್ಲಿ ತೆಲುಗು ನುಡಿಯಲ್ಲದೆ ಸುಮಾರು 24 ಲಕ್ಶ ಜನರ ಮಾತಾಗಿರುವ ಗೋಂಡಿ ಮತ್ತು ಆರೂವರೆ ಲಕ್ಶ ಜನರ ಮಾತಾಗಿರುವ ಕೂಯಿ ನುಡಿಗಳು ಬರುತ್ತವೆ. ಉಳಿದಂತೆ, ಕುವಿ, ಕೊಂಡ, ಪೆಂಗೊ, ಮತ್ತು ಮಂಡ ಎಂಬ ನುಡಿಗಳೂ ಈ ಗುಂಪಿನಲ್ಲಿ ಸೇರುತ್ತವೆ.

ಕೋಲಾಮಿ, ನಾಯ್ಕಿ, ಪಾರ‍್ಜಿ, ಒಲ್ಲಾರಿ, ಮತ್ತು ಗದಬ ಎಂಬ ಅಯ್ದು ನುಡಿಗಳನ್ನು ನಡುದ್ರಾವಿಡವೆಂಬ ಬೇರೆಯೇ ಒಂದು ನುಡಿಗುಂಪಿನಲ್ಲಿ ಸೇರಿಸಲಾಗುತ್ತದೆ. ಈ ನುಡಿಗಳನ್ನಾಡುವವರು ಮುಕ್ಯವಾಗಿ ಆಂದ್ರಪ್ರದೇಶ, ಮದ್ಯಪ್ರದೇಶ ಮತ್ತು ಒರಿಸ್ಸಾಗಳಲ್ಲಿ ನೆಲೆಸಿದ್ದಾರೆ. ಇದಲ್ಲದೆ, ಕುಡುಕ್, ಮಾಲ್ಟೋ, ಮತ್ತು ಬ್ರಾಹುಯೀ ಎಂಬ ಬೇರೆ ಮೂರು ನುಡಿಗಳನ್ನು ಬಡಗುದ್ರಾವಿಡವೆಂಬ ಇನ್ನೊಂದು ನುಡಿಗುಂಪಿನಲ್ಲಿ ಸೇರಿಸಲಾಗುತ್ತದೆ. ಈ ಮೂರು ನುಡಿಗಳಲ್ಲಿ ಕುಡುಕ್ ನುಡಿಯನ್ನು ಸುಮಾರು 20 ಲಕ್ಶ ಮಂದಿ ಆಡುತ್ತಿದ್ದು, ಇವರು ಮುಕ್ಯವಾಗಿ ಒರಿಸ್ಸಾದಲ್ಲಿ ನೆಲೆಸಿದ್ದಾರೆ; ನೇಪಾಳದ ದನಗರ‍್ ಜನಾಂಗದವರೂ ಇದೇ ನುಡಿಯನ್ನಾಡುತ್ತಾರೆ. ಮಾಲ್ಟೋ ನುಡಿಯನ್ನಾಡುವ ಒಂದು ಲಕ್ಶ ಮಂದಿ ಬಿಹಾರದ ರಾಜಮಹಲ್ ಗುಡ್ಡಗಳಲ್ಲಿ ನೆಲೆಸಿದ್ದಾರೆ, ಮತ್ತು ಬ್ರಾಹುಯೀ ನುಡಿಯನ್ನಾಡುವ 20 ಲಕ್ಶ ಮಂದಿ ಮುಕ್ಯವಾಗಿ ಪಾಕಿಸ್ತಾನದ ಬಲೂಚಿಸ್ತಾನದಲ್ಲಿ ನೆಲೆಸಿದ್ದಾರೆ; ಅಪ್ಗಾನಿಸ್ತಾನ ಮತ್ತು ಇರಾನ್ನಲ್ಲೂ ಬ್ರಾಹುಯೀ ನುಡಿಯನ್ನಾಡುವವರು ಹಲವರಿದ್ದಾರೆ.

ಈ ರೀತಿ, ನಾಲ್ಕು ಮುಕ್ಯ ಗುಂಪುಗಳಲ್ಲಿ ಸೇರುವ ದ್ರಾವಿಡ ನುಡಿಗಳ ಒಟ್ಟು ಎಣಿಕೆ ಇಪ್ಪತ್ತಾರು ಎಂದು ಹೇಳಬಹುದು. ಆದರೆ, ಹಲವೆಡೆಗಳಲ್ಲಿ ಯಾವುದನ್ನು ಒಂದು ನುಡಿ ಎಂದು ಕರೆಯಬೇಕು, ಮತ್ತು ಯಾವುದನ್ನು ಬರಿಯ ಒಳನುಡಿ ಎಂದು ತಿಳಿಯಬೇಕು ಎಂಬುದನ್ನು ಕಚಿತವಾಗಿ ತೀರ‍್ಮಾನಿಸಲು ಬರುವುದಿಲ್ಲ. ಎತ್ತುಗೆಗಾಗಿ, ನೀಲಗಿರಿಯಲ್ಲಿ ಬಳಕೆಯಲ್ಲಿರುವ ಬಡಗ ಜನರ ಮಾತನ್ನು ಕೆಲವರು ಕನ್ನಡದ ಒಳನುಡಿಯೆಂದು ಕರೆಯುತ್ತಾರೆ, ಮತ್ತು ಬೇರೆ ಕೆಲವರು ಅದೊಂದು ಬೇರೆಯೇ ನುಡಿಯೆಂದೂ ಹೇಳುತ್ತಾರೆ. ಹಾಗಾಗಿ, ಒಟ್ಟು ದ್ರಾವಿಡ ನುಡಿಗಳು ಎಶ್ಟಿವೆ ಎಂಬುದನ್ನು ಕಚಿತವಾಗಿ ಹೇಳಲು ಬರುವುದಿಲ್ಲ; ಹಾಗಿದ್ದರೂ, ಅದು ಅಯ್ದಕ್ಕಿಂತ ಹೆಚ್ಚು ಎಂಬುದರಲ್ಲಿ ಯಾವ ಸಂಶಯವೂ ಇಲ್ಲ.

ಹಿಂದಿನ ಒಂದು ಕಾಲದಲ್ಲಿ ದ್ರಾವಿಡರು ಬಾರತದಲ್ಲಿ ಎಲ್ಲೆಡೆಗಳಲ್ಲೂ ನೆಲೆಸಿದ್ದಿರಬೇಕು, ಮತ್ತು ಇಂಡೋ-ಆರ‍್ಯನ್ ನುಡಿಗಳನ್ನಾಡುವ ಜನರು ಬಡಗು ನಾಡುಗಳಿಂದ ಬಾರತಕ್ಕೆ ವಲಸೆ ಬಂದ ಮೇಲೆ, ಹಲವಾರು ಮಂದಿ ದ್ರಾವಿಡ ನುಡಿಗಳನ್ನಾಡುವ ಜನರು ತಮ್ಮ ನುಡಿಗಳನ್ನು ಕಳೆದುಕೊಂಡು ಮರಾಟಿ, ಗುಜರಾತಿ, ಒಡಿಯಾ, ಹಿಂದಿ ಮೊದಲಾದ ಇಂಡೋ-ಆರ‍್ಯನ್ ನುಡಿಗಳನ್ನಾಡುವಂತಾಗಿರಬೇಕೆಂದು ಹಲವು ಮಂದಿ ಅರಿವಿಗರು ತೀರ‍್ಮಾನಕ್ಕೆ ಬಂದಿದ್ದಾರೆ. ಬಾರತದಲ್ಲಿ ಬಳಕೆಯಲ್ಲಿರುವ ಈ ಇಂಡೋ-ಆರ‍್ಯನ್ ನುಡಿಗಳು ಹಲವು ವಿಶಯಗಳಲ್ಲಿ ದ್ರಾವಿಡ ನುಡಿಗಳನ್ನು ಹೋಲುತ್ತಿರುವುದಕ್ಕೆ ಅವುಗಳ ಆಡುಗರು ಮೊದಲಿಗೆ ದ್ರಾವಿಡ ನುಡಿಗಳನ್ನಾಡುತ್ತಿದ್ದುದೇ ಕಾರಣವಿರಬೇಕೆಂದೂ ತಿಳಿಯಲಾಗುತ್ತಿದೆ.

ಬಾರತದಲ್ಲಿ ಬಳಕೆಯಲ್ಲಿರುವ ಹಿಂದಿ, ಮರಾಟಿ, ಗುಜರಾತಿ ಮೊದಲಾದ ಇಂಡೋ-ಆರ‍್ಯನ್ ನುಡಿಗಳನ್ನು ಯುರೋಪಿನ ಇಂಗ್ಲಿಶ್, ಜರ‍್ಮನ್, ಸ್ಪೇನಿಶ್, ಇಟೇಲಿಯನ್ ಮೊದಲಾದ ನುಡಿಗಳೊಂದಿಗೆ ಸಂಬಂದಿಸಲು ಸಾದ್ಯವಾಗಿದೆ; ಆದರೆ, ದ್ರಾವಿಡ ನುಡಿಗಳನ್ನು ಆ ರೀತಿ ಬೇರೆ ಯಾವ ನುಡಿಗಳೊಂದಿಗೂ ಎಲ್ಲರಿಗೂ ಒಪ್ಪಿಗೆಯಾಗುವಂತೆ ಇದುವರೆಗೆ ಸಂಬಂದಿಸಲು ಸಾದ್ಯವಾಗಿಲ್ಲ. ಹಾಗಾಗಿ, ಇಂಡೋ-ಆರ‍್ಯನ್ ನುಡಿಗಳು ಬಾರತಕ್ಕೆ ಹೊರಗಿನಿಂದ ಬಂದುವೆಂದು ಹೇಳಲು ಸಾದ್ಯವಾಗುವಂತೆ ದ್ರಾವಿಡ ನುಡಿಗಳು ಹೊರಗಿನಿಂದ ಬಂದುವೆಂದು ಹೇಳಲು ಸಾದ್ಯವಾಗುವುದಿಲ್ಲ.

ನುಡಿಗಳ ಎಣಿಕೆಯ ಕುರಿತು ಮಾತನಾಡುವಾಗ ಇನ್ನೊಂದು ಸಂಶಯವೂ ಹಲವರನ್ನು ಕಾಡುತ್ತದೆ; ಕನ್ನಡ, ತಮಿಳು, ತೆಲುಗು ಮತ್ತು ಮಲಯಾಳ ಎಂಬ ನಾಲ್ಕು ನುಡಿಗಳಿಗೆ ಅವುಗಳದೇ ಆದ ಲಿಪಿಯಿದೆ; ಆದರೆ, ಉಳಿದವುಗಳಲ್ಲಿ ಯಾವುದಕ್ಕೂ ಅದರದೇ ಆದ ಲಿಪಿಯಿಲ್ಲ (ಇತ್ತೀಚೆಗೆ ಅವುಗಳಲ್ಲಿ ಕೆಲವಕ್ಕೆ ಲಿಪಿಗಳನ್ನು ಅಳವಡಿಸಲಾಗಿದೆ). ಲಿಪಿಯಿಲ್ಲದ ನುಡಿಗಳನ್ನು ಲಿಪಿಯಿರುವವುಗಳೊಂದಿಗೆ ಸರಿದೂಗಿಸಬಹುದೇ ಎಂಬುದೇ ಈ ಸಂಶಯ. ಅಯ್ದನೆಯ ದ್ರಾವಿಡ ನುಡಿಯಾಗಿ ಕೆಲವರು ತುಳುವಿನ ಬದಲು ಮರಾಟಿಯನ್ನು ಹೆಸರಿಸುತ್ತಿರುವುದಕ್ಕೆ ಇದೇ ಕಾರಣವಿರಬಹುದು.

ಆದರೆ, ನುಡಿಗಳ ಎಣಿಕೆಗೂ ಅವಕ್ಕೆ ಲಿಪಿಯಿದೆಯೇ, ಎಂದರೆ ಅವನ್ನು ಬರಹಕ್ಕೆ ಇಳಿಸಲಾಗಿದೆಯೇ ಎಂಬುದಕ್ಕೂ ನಡುವೆ ಯಾವ ಸಂಬಂದವೂ ಇಲ್ಲ. ಮುಕ್ಯವಾಗಿ, ಎರಡು ನುಡಿಗಳ ನಡುವೆ ವ್ಯತ್ಯಾಸ ಎಶ್ಟಿದೆ ಎಂಬುದರ ಮೇಲೆ ಅವೆರಡು ಒಂದೇ ನುಡಿಯ ಒಳನುಡಿಗಳೇ ಇಲ್ಲವೇ ಬೇರೆ ಬೇರೆ ನುಡಿಗಳೇ ಎಂಬುದನ್ನು ತೀರ‍್ಮಾನಿಸಲಾಗುತ್ತದೆ. ಇದಲ್ಲದೆ, ಇಂಡೋ-ಆರ‍್ಯನ್, ದ್ರಾವಿಡ ಎಂಬಂತಹ ನುಡಿಗಳ ಗುಂಪಿಸುವಿಕೆಗೂ ಅವು ಬಳಸುವ ಲಿಪಿಗಳಿಗೂ ನಡುವೆ ಯಾವ ಸಂಬಂದವೂ ಇಲ್ಲ. ನಿಜಕ್ಕೂ ಬಾರತದ ನುಡಿಗಳು ಬಳಸುವ ಲಿಪಿಗಳಲ್ಲಿ ಹೆಚ್ಚಿನವೂ ಬ್ರಾಹ್ಮೀ ಲಿಪಿ ಎಂಬ ಒಂದೇ ಮೂಲದಿಂದ ಬಂದಿವೆ.

ಹಲವು ನುಡಿಗಳು ಒಂದೇ ಲಿಪಿಯನ್ನು ಬಳಸುತ್ತಿರಬಲ್ಲುವು, ಮತ್ತು ಒಂದೇ ನುಡಿ ಹಲವು ಲಿಪಿಗಳನ್ನು ಬಳಸುತ್ತಿರಬಲ್ಲುದು: ಮರಾಟಿ, ಹಿಂದಿ, ಮತ್ತು ನೇಪಾಲಿ ನುಡಿಗಳು ಬಳಸುವ ಲಿಪಿಗಳ ನಡುವೆ ಹೆಚ್ಚಿನ ವ್ಯತ್ಯಾಸವೇನಿಲ್ಲ, ಮತ್ತು ತೆಲುಗು ಹಾಗೂ ಕನ್ನಡ ಲಿಪಿಗಳು ಹದಿನೆಂಟನೇ ಶತಮಾನದ ವರೆಗೆ ಒಂದೇ ಲಿಪಿಯಾಗಿದ್ದುವು. ಕೊಂಕಣಿ ನುಡಿ ರೋಮನ್, ನಾಗರಿ, ಮತ್ತು ಕನ್ನಡ ಲಿಪಿಗಳನ್ನು ಬಳಸುತ್ತಿದೆ, ಮತ್ತು ಸಿಂದಿ ನುಡಿ ನಾಗರಿ ಮತ್ತು ಪರ‍್ಸೋ-ಅರೇಬಿಕ್ ಲಿಪಿಗಳನ್ನು ಬಳಸುತ್ತಿದೆ. ಇದಲ್ಲದೆ, ಮಣಿಪುರಿ, ಮಲಯಾಳ ಮೊದಲಾದ ಬೇರೆ ಕೆಲವು ನುಡಿಗಳು ತಮ್ಮಲ್ಲಿ ಬಳಕೆಯಲ್ಲಿದ್ದ ಲಿಪಿಯನ್ನು ಬಿಟ್ಟುಕೊಟ್ಟು ಬೇರೆ ಲಿಪಿಯನ್ನು ಬಳಸತೊಡಗಿವೆ. ಹಾಗಾಗಿ, ನುಡಿಗಳು ಲಿಪಿಯನ್ನು ಬಳಸುವುದು ಒಂದು ಮಟ್ಟಿಗೆ ಜನರು ಉಡುಪನ್ನು ಬಳಸುವ ಹಾಗೆ ಎನ್ನಬಹುದು.

ಆದರೆ, ದ್ರಾವಿಡ ಮತ್ತು ಇಂಡೋ-ಆರ‍್ಯನ್ ಎಂಬ ನುಡಿಗಳ ವಿಂಗಡನೆಗೆ ಅವುಗಳ ನಡುವಿನ ವ್ಯತ್ಯಾಸವೇ ಮುಕ್ಯ ಆದಾರವಾಗಿದೆ: ಎರಡು ನುಡಿಗಳು ಒಂದೇ ನುಡಿಕುಟುಂಬಕ್ಕೆ ಸೇರಿವೆಯೆಂದು ಹೇಳಬೇಕಿದ್ದಲ್ಲಿ, ಅವೆರಡರ ನಡುವೆ ಕಾಣಿಸುವ ವ್ಯತ್ಯಾಸಗಳಲ್ಲಿ ಹೆಚ್ಚಿನವೂ ಅವುಗಳ ಹಿನ್ನಡವಳಿಯಲ್ಲಿ ನಡೆದ ಮಾರ‍್ಪಾಡುಗಳಿಂದಾಗಿ ಮೂಡಿಬಂದಿವೆಯೆಂಬುದನ್ನು ತೋರಿಸಿಕೊಡಲು ಸಾದ್ಯವಾಗಬೇಕು. ಮೇಲೆ ಪಟ್ಟಿಮಾಡಿದ ಇಪ್ಪತ್ತಾರು ದ್ರಾವಿಡ ನುಡಿಗಳ ನಡುವೆ ಕಾಣಿಸುವ ವ್ಯತ್ಯಾಸಗಳಲ್ಲಿ ಹೆಚ್ಚಿನವನ್ನೂ ಈ ರೀತಿ ಅವುಗಳ ಹಿನ್ನಡವಳಿಯಲ್ಲಿ ನಡೆದಿವೆಯೆಂದು ಹೇಳಹುದಾದ ಮಾರ‍್ಪಾಡುಗಳ ಮೂಲಕ ವಿವರಿಸಲು ಸಾದ್ಯವಾಗಿದೆ. ಹಾಗಾಗಿ, ಅವನ್ನೆಲ್ಲ ಒಟ್ಟಿಗೆ ಒಂದೇ ನುಡಿಕುಟುಂಬದಲ್ಲಿ ಗುಂಪಿಸಲಾಗಿದೆ.

(ಈ ಬರಹ ವಿಜಯ ಕರ‍್ನಾಟಕ ಸುದ್ದಿಹಾಳೆಯ ’ಎಲ್ಲರ ಕನ್ನಡ’ ಅಂಕಣದಲ್ಲಿ ಮೊದಲು ಮೂಡಿಬಂದಿತ್ತು)

ಮೂಲ : ಹೊನಲು

ಬಗೆತದ ಮೇಲೆ ನುಡಿಯ ಹತೋಟಿ

ನಾವು ಯಾವ ರೀತಿಯಲ್ಲಿ ಬಗೆಯಬಲ್ಲೆವು (ಆಲೋಚಿಸಬಲ್ಲೆವು) ಎಂಬುದರ ಮೇಲೆ ನಮ್ಮ ತಾಯ್ನುಡಿಯ ಹತೋಟಿಯಿದೆಯೇ, ಇದ್ದರೆ ಅದು ಎಶ್ಟರ ಮಟ್ಟಿಗೆ ಇದೆ ಎಂಬುದರ ಕುರಿತಾಗಿ ಹಲವು ಮಂದಿ ತಿಳಿವಿಗರು ಅರಕೆಗಳನ್ನು ನಡೆಸುತ್ತಿದ್ದಾರೆ. ಪ್ರಯತ್ನಪಟ್ಟರೆ ನಾವು ಯಾವ ರೀತಿಯಲ್ಲಿ ಬೇಕಿದ್ದರೂ ಬಗೆಯಬಲ್ಲೆವು; ಆದರೆ, ಸಾಮಾನ್ಯವಾಗಿ ನಮ್ಮ ಬಗೆತದಲ್ಲಿ ಎಂತಹ ವಿಶಯಗಳ ಮೇಲೆ ಒತ್ತು ಬೀಳುತ್ತದೆ, ಮತ್ತು ಎಂತಹ ವಿಶಯಗಳನ್ನು ನಾವು ಕಡೆಗಣಿಸುತ್ತೇವೆ ಎಂಬುದು ನಮ್ಮ ತಾಯ್ನುಡಿಯನ್ನು ಅವಲಂಬಿಸಿರುತ್ತದೆ ಎಂಬ ತೀರ್‍ಮಾನಕ್ಕೆ ಹೆಚ್ಚಿನವರೂ ಬಂದಿರುವ ಹಾಗೆ ಕಾಣಿಸುತ್ತದೆ.

ಎತ್ತುಗೆಗಾಗಿ, ಕನ್ನಡದಲ್ಲಿ ಮನುಶ್ಯರನ್ನು ಹೆಸರಿಸುವ ಪದಗಳ ಬಳಕೆಯಲ್ಲಿ ಮಾತ್ರ ಹೆಣ್ಣು-ಗಂಡು ವ್ಯತ್ಯಾಸವನ್ನು ಕಾಣುತ್ತೇವೆ; ಮರ, ಮೇಜು, ಪೆನ್ನು, ಗಾಡಿ, ತಿಳಿವು ಮೊದಲಾದ ಉಳಿದ ಪದಗಳ ಬಳಕೆಯಲ್ಲಿ ಇಂತಹ ವ್ಯತ್ಯಾಸವಿಲ್ಲ. ಆದರೆ, ಸಂಸ್ಕ್ರುತ, ಹಿಂದಿ ಮೊದಲಾದ ನುಡಿಗಳಲ್ಲಿ, ಮತ್ತು ಅವುಗಳೊಂದಿಗೆ ನಂಟಿರುವ ಜರ್‍ಮನ್, ಸ್ಪಾನಿಶ್ ಮೊದಲಾದ ಬೇರೆ ಹಲವು ನುಡಿಗಳಲ್ಲಿ ಎಲ್ಲಾ ಬಗೆಯ ಪದಗಳಲ್ಲೂ ಪುಲ್ಲಿಂಗ-ಸ್ತ್ರೀಲಿಂಗ ವ್ಯತ್ಯಾಸವನ್ನು ಕಾಣಲಾಗುತ್ತದೆ. ಈ ವ್ಯತ್ಯಾಸ ಇವನ್ನು ತಾಯ್ನುಡಿಯಾಗಿ ಪಡೆದಿರುವ ಜನರ ಬಗೆತದ ಮೇಲೂ ಪರಿಣಾಮಗಳನ್ನು ಬೀರುವ ಹಾಗೆ ಕಾಣಿಸುತ್ತದೆ.

ಸೇತುವೆಯನ್ನು ಹೆಸರಿಸುವ ಪದ ಜರ್‍ಮನ್ ನುಡಿಯಲ್ಲಿ ಸ್ತ್ರೀಲಿಂಗದಲ್ಲಿದೆ, ಮತ್ತು ಪ್ರೆಂಚ್ ನುಡಿಯಲ್ಲಿ ಪುಲ್ಲಿಂಗದಲ್ಲಿದೆ; ಜರ್‍ಮನರು ಒಂದು ಹೊಸ ಸೇತುವೆಯನ್ನು ಬಣ್ಣಿಸುವಾಗ ಅದರ ಅಂದ, ಮಾಟ, ಹಗುರತನ ಮೊದಲಾದ ಪರಿಚೆಗಳ ಮೇಲೆ ಒತ್ತು ಕೊಡುತ್ತಾರೆ; ಅದನ್ನೇ ಪ್ರೆಂಚರು ಬಣ್ಣಿಸುವಾಗ ಅದು ಎಶ್ಟು ದೊಡ್ಡದು, ಎಶ್ಟೊಂದು ಗಟ್ಟಿಯಾಗಿದೆ, ಹೇಗೆ ಒಂದು ದಯ್ತ್ಯ ರಕ್ಕಸನ ಹಾಗೆ ಕಾಣಿಸುತ್ತದೆ ಎಂಬುದಾಗಿ ಅದರ ಬೇರೆಯೇ ಪರಿಚೆಗಳ ಮೇಲೆ ಒತ್ತು ಕೊಡುತ್ತಾರೆ. ಸೇತುವೆ ಎಂಬ ಪದಕ್ಕೆ ಲಿಂಗವನ್ನು ಕೊಡುವಲ್ಲಿ ಅವರ ನುಡಿಗಳ ನಡುವಿರುವ ವ್ಯತ್ಯಾಸವೇ ಈ ರೀತಿ ಅದನ್ನು ಅವರು ಬೇರೆ ಬೇರೆ ಬಗೆಗಳಲ್ಲಿ ಬಣ್ಣಿಸುವ ಹಾಗೆ ಮಾಡಿದೆ.

ನುಡಿಗಳ ನಡುವೆ ಕಾಣಿಸುವ ಇಂತಹ ಬೇರೆಯೂ ಹಲವು ವ್ಯತ್ಯಾಸಗಳು ಅವುಗಳನ್ನಾಡುವ ಜನರ ಬಗೆತದ ಮೇಲೆ ಪರಿಣಾಮಗಳನ್ನು ಬೀರಬಲ್ಲುವು ಎಂಬುದನ್ನು ಅರಕೆಗಳು ತೋರಿಸಿಕೊಟ್ಟಿವೆ. ಎತ್ತುಗೆಗಾಗಿ, ಒಂದು ವಸ್ತು ಎಲ್ಲಿದೆ ಎಂಬುದನ್ನು ಅದಕ್ಕೂ ನಮಗೂ (ಇಲ್ಲವೇ ಇನ್ನೊಂದು ವಸ್ತುವಿಗೂ) ನಡುವಿರುವ ಸಂಬಂದ ಎಂತಹದು ಎಂಬುದರ ಮೇಲೆ ತಿಳಿಸಬಲ್ಲೆವು: ‘ಮಾವಿನ ಮರ ಮನೆಯ ಎದುರಿಗಿದೆ’ ಎಂದು ಹೇಳುವಲ್ಲಿ, ಇಲ್ಲವೇ ‘ನಮ್ಮ ಮನೆ ಅವರ ಮನೆಯ ಎಡಕ್ಕಿದೆ’ ಎಂದು ಹೇಳುವಲ್ಲಿ ನಾವು ಈ ರೀತಿ ಮನೆಗೂ ಮರಕ್ಕೂ ನಡುವಿರುವ ಸಂಬಂದವನ್ನು ಬಳಸುತ್ತೇವೆ; ಇದಕ್ಕೆ ಬದಲು, ಮೂಡ, ತೆಂಕ, ಪಡು, ಬಡಗ ಎಂಬ ನೆಲದರಿಮೆಯ ಪದಗಳನ್ನು ಬಳಸಿಯೂ ಈ ವಿಶಯವನ್ನು ತಿಳಿಸಬಲ್ಲೆವು: ‘ಮಾವಿನ ಮರ ಮನೆಯ ತೆಂಕಕ್ಕಿದೆ’ ಎಂದು ಹೇಳುವಲ್ಲಿ, ಇಲ್ಲವೇ ‘ನಮ್ಮ ಮನೆ ಅವರ ಮನೆಯ ಪಡುವಕ್ಕಿದೆ’ ಎಂದು ಹೇಳುವಲ್ಲಿ ಇಂತಹ ನೆಲದರಿಮೆಯ ಪದಗಳನ್ನು ಬಳಸಲಾಗುತ್ತದೆ.

ಜಗತ್ತಿನಲ್ಲಿರುವ ಹೆಚ್ಚಿನ ನುಡಿಗಳಲ್ಲೂ ವಸ್ತುಗಳ ಜಾಗವನ್ನು ತಿಳಿಸಬೇಕಾದಾಗ ಅವುಗಳ ನಡುವಿರುವ ಸಂಬಂದವನ್ನು ಇಲ್ಲವೇ ಆಡುಗನಿಗೂ ಅವಕ್ಕೂ ನಡುವಿರುವ ಸಂಬಂದವನ್ನು ತಿಳಿಸುವ ಎಡಕ್ಕೆ, ಬಲಕ್ಕೆ, ಹಿಂದೆ, ಮುಂದೆ ಎಂಬಂತಹ ಪದಗಳನ್ನು ಬಳಸುವುದೇ ಹೆಚ್ಚು. ಆದರೆ, ನೆಲದರಿಮೆಯ ಮೂಡ, ತೆಂಕ, ಪಡು ಎಂಬಂತಹ ಪದಗಳನ್ನೇ ಜಾಗವನ್ನು ತಿಳಿಸಬೇಕಾಗುವ ಹೆಚ್ಚಿನ ಕಡೆಗಳಲ್ಲೂ ಬಳಸುವ ನುಡಿಗಳೂ ಹಲವಿವೆ. ಆಸ್ಟ್ರೇಲಿಯಾದ ಗೂಗು ಯಿಮ್ದಿರ್‍ನಂತಹ ಕೆಲವು ಬುಡಕಟ್ಟಿನ ನುಡಿಗಳು, ತೆಂಕು ಮೆಹಿಕೋದ ತ್ಸೆಲ್ತಲ್, ಮತ್ತು ಬೇರೆಯೂ ಹಲವು ನುಡಿಗಳು ಇಂತಹವು.

ಈ ನುಡಿಗಳಲ್ಲಿ ಚಿಕ್ಕ ಚಿಕ್ಕ ವಸ್ತುಗಳ ಜಾಗವನ್ನು ತಿಳಿಸುವಾಗಲೂ ಮೂಡ, ತೆಂಕ, ಪಡು ಎಂಬಂತಹ ಪದಗಳನ್ನು ಬಳಸಲಾಗುತ್ತದೆ; ಒಂದು ಚಿತ್ರದಲ್ಲಿ ಕಾಣಿಸುವ ಇಬ್ಬರು ವ್ಯಕ್ತಿಗಳ ಜಾಗವನ್ನು ಬಣ್ಣಿಸುವಲ್ಲೂ ಒಬ್ಬನು ಇನ್ನೊಬ್ಬನ ಮೂಡಕ್ಕಿದ್ದಾನೆ ಎನ್ನಲಾಗುತ್ತದೆ; ಚಿತ್ರವನ್ನು ತುಸು ತಿರುಗಿಸಿ ಹಿಡಿದರೆ, ಅವರ ಜಾಗ ಬದಲಾಗುತ್ತದೆ, ಮತ್ತು ಅದಕ್ಕೆ ಸರಿಯಾಗಿ ಮಾತನ್ನೂ ಬದಲಿಸಬೇಕಾಗುತ್ತದೆ (ಮೂಡಕ್ಕಿದ್ದಾನೆ ಎನ್ನುವ ಬದಲು ಪಡುವಕ್ಕಿದ್ದಾನೆ ಇಲ್ಲವೇ ತೆಂಕಕ್ಕಿದ್ದಾನೆ ಎನ್ನಬೇಕಾದೀತು). ಆದರೆ, ಈ ರೀತಿ ಎಲ್ಲೆಡೆಗಳಲ್ಲೂ ನೆಲದರಿಮೆಯ ಪದಗಳನ್ನು ಬಳಸಬೇಕಿದ್ದಲ್ಲಿ, ಈ ನುಡಿಗಳನ್ನಾಡುವವರಿಗೆ ಯಾವಾಗಲೂ ತಮ್ಮ ಮೂಡ ಯಾವುದು, ಪಡು ಯಾವುದು ಎಂಬುದು ಕಚಿತವಾಗಿ ಗೊತ್ತಿರಬೇಕು. ಆಸ್ಟೇಲಿಯಾದ ಮರಳುಗಾಡುಗಳಲ್ಲಿ ನೆಲೆಸಿರುವ ಬುಡಕಟ್ಟಿನ ಜನರಿಗೆ, ಇಲ್ಲವೇ ತೆಂಕು ಅಮೆರಿಕಾದ ದಟ್ಟವಾದ ಕಾಡುಗಳಲ್ಲಿ ನೆಲೆಸಿರುವ ಜನರಿಗೆ ಈ ರೀತಿ ಯಾವಾಗಲೂ ದಿಕ್ಕುಗಳ ಅರಿವಿರುವುದು ತುಂಬಾ ಉಪಯುಕ್ತವಾಗಿದೆ.

ನುಡಿಗಳ ನಡುವೆ ಎಣಿಕೆಪದಗಳ ಬಳಕೆಯಲ್ಲಿ ಕಾಣಿಸುವ ವ್ಯತ್ಯಾಸಗಳೂ ಆ ನುಡಿಗಳನ್ನಾಡುವ ಜನರ ಬಗೆತದ ಮೇಲೆ ಪರಿಣಾಮಗಳನ್ನು ಬೀರುವ ಹಾಗೆ ಕಾಣಿಸುತ್ತದೆ. ಪಿರಹ ಎಂಬ ನುಡಿಯೊಂದನ್ನು ಆಡುವ ಜನಾಂಗ ಅಮೆಜೋನ್ ಕಾಡುಗಳಲ್ಲಿ ನೆಲೆಸಿದೆ; ಈ ನುಡಿಯಲ್ಲಿ ಮೂರು ಎಣಿಕೆಪದಗಳು ಮಾತ್ರ ಬಳಕೆಯಲ್ಲಿವೆ: ಒಂದೆರಡು ವಸ್ತುಗಳ ಎಣಿಕೆಯನ್ನು ತಿಳಿಸುವ ಪದವೊಂದು; ತುಸು ಹೆಚ್ಚು ಎಣಿಕೆಯಲ್ಲಿರುವ ವಸ್ತುಗಳನ್ನು ಬಣ್ಣಿಸುವ ಪದ ಇನ್ನೊಂದು; ಮತ್ತು ತುಂಬಾ ಹೆಚ್ಚು ಎಣಿಕೆಯ ವಸ್ತುಗಳನ್ನು ಬಣ್ಣಿಸುವ ಪದ ಮತ್ತೊಂದು. ಇಂತಹ ಮೂರು ಪದಗಳು ಮಾತ್ರ ಈ ನುಡಿಯಲ್ಲಿ ಇರುವ ಕಾರಣ, ಅದರ ಆಡುಗರು ಯಾವುದೇ ಒಂದು ಗುಂಪಿನಲ್ಲಿರುವ ವಸ್ತುಗಳ ಎಣಿಕೆಯನ್ನು ಕಚಿತವಾಗಿ ತಿಳಿಸಲಾರರು.

ಹಾಗಾಗಿ, ಈ ನುಡಿಯನ್ನಾಡುವ ಜನರಿಗೆ ಒಂದು ಗುಂಪಿನಲ್ಲಿರುವ ವಸ್ತುಗಳ ಎಣಿಕೆ ಇನ್ನೊಂದು ಗುಂಪಿನಲ್ಲಿರುವ ವಸ್ತುಗಳ ಎಣಿಕೆಗಿಂತ ಹೆಚ್ಚಿದೆಯೇ ಇಲ್ಲವೇ ಕಡಿಮೆಯಿದೆಯೇ ಎಂಬುದನ್ನು ಆ ಎರಡು ಗುಂಪುಗಳನ್ನು ಬೇರೆ ಬೇರಾಗಿ ನೋಡಿ ಕಚಿತವಾಗಿ ಹೇಳಲು ಬರುವುದಿಲ್ಲ. ಅವುಗಳಲ್ಲಿ ಒಂದು ಗುಂಪಿನಲ್ಲಿರುವ ಒಂದೊಂದು ವಸ್ತುವನ್ನೂ ಇನ್ನೊಂದು ಗುಂಪಿನ ವಸ್ತುಗಳ ಎದುರಿಗಿರಿಸಿ ಅದನ್ನು ತಿಳಿಯಬೇಕಾಗುತ್ತದೆ. ಇದೇ ರೀತಿಯಲ್ಲಿ, ಒಂದು ಗುಂಪಿನಲ್ಲಿ ಹತ್ತು ಚೆಂಡುಗಳನ್ನಿರಿಸಿ, ಅಶ್ಟೇ ಹಣ್ಣುಗಳಿರುವ ಇನ್ನೊಂದು ಗುಂಪನ್ನು ಉಂಟುಮಾಡಲು ಹೇಳಿದರೆ, ಮೊದಲನೇ ಗುಂಪಿನಲ್ಲಿರುವ ಒಂದೊಂದು ಚೆಂಡನ್ನೂ ಎತ್ತಿಹಿಡಿದು, ಅವುಗಳೆದುರು ಒಂದೊಂದು ಹಣ್ಣನ್ನು ಇರಿಸಿ ಎರಡನೆಯ ಗುಂಪನ್ನು ಅವರು ಉಂಟುಮಾಡಬೇಕಾಗುತ್ತದೆ. ಹಾಗೆ ಮಾಡದೆ ನೇರವಾಗಿ ಹತ್ತು ಹಣ್ಣುಗಳ ಒಂದು ಗುಂಪನ್ನು ಮಾಡಲು ಅವರಿಗೆ ಬರುವುದಿಲ್ಲ.
ಒಂದು ನುಡಿಯಲ್ಲಿ ಹೊತ್ತಿನ ವ್ಯತ್ಯಾಸಗಳನ್ನು ತಿಳಿಸಲು ಎಂತಹ ಪದಗಳನ್ನು ಬಳಸಲಾಗುತ್ತದೆ ಎಂಬುದೂ ಅದರ ಆಡುಗರ ಬಗೆತದ ಮೇಲೆ ಪರಿಣಾಮ ಬೀರುವ ಹಾಗೆ ಕಾಣಿಸುತ್ತದೆ. ಇಂಗ್ಲಿಶ್ನಲ್ಲಿ ಹೊತ್ತನ್ನು ತಿಳಿಸಲು ಹೆಚ್ಚಿನೆಡೆಗಳಲ್ಲೂ ಹಿಂದೆ ಮತ್ತು ಮುಂದೆ ಎಂಬ ಪದಗಳನ್ನು ಬಳಸಲಾಗುತ್ತದೆ (ಕನ್ನಡದಲ್ಲೂ ಹೀಗೆಯೇ); ‘ಅವನು ಹಿಂದೆ ಏನು ಮಾಡುತ್ತಿದ್ದ? ಮುಂದೆ ಏನು ಮಾಡಲಿದ್ದಾನೆ?’ ಎಂಬಂತಹ ಮಾತುಗಳಲ್ಲಿ ಈ ಬಳಕೆಯನ್ನು ಕಾಣಬಹುದು; ಇದಕ್ಕೆ ಬದಲು, ಚಯ್ನೀಸ್ನಲ್ಲಿ ಹೆಚ್ಚಾಗಿ ಮೇಲೆ ಮತ್ತು ಕೆಳಗೆ ಎಂಬ ಪದಗಳನ್ನು ಬಳಸಲಾಗುತ್ತದೆ.

ಹೊತ್ತಿನ ಕುರಿತಾಗಿರುವ ಕೇಳ್ವಿಗಳಿಗೆ ಒಂದರ ಬಲಕ್ಕೆ ಒಂದರಂತಿರುವ ಚಿತ್ರಗಳನ್ನು ನೋಡಿದ ಬಳಿಕ ಇಂಗ್ಲಿಶ್ ನುಡಿಗರು ಹೆಚ್ಚು ಬೇಗನೆ ಉತ್ತರಿಸಬಲ್ಲರು, ಮತ್ತು ಒಂದರ ಕೆಳಗೆ ಒಂದರಂತಿರುವ ಚಿತ್ರಗಳನ್ನು ನೋಡಿದ ಬಳಿಕ ಚಯ್ನೀಸ್ ನುಡಿಗರು ಹೆಚ್ಚು ಬೇಗನೆ ಉತ್ತರಿಸಬಲ್ಲರು; ಈ ವ್ಯತ್ಯಾಸಕ್ಕೆ ಮೇಲೆ ತಿಳಿಸಿದ ಹೊತ್ತಿನ ಪದಗಳ ನಡುವಿನ ವ್ಯತ್ಯಾಸವೇ ಕಾರಣವಿರಬೇಕು.

(ಈ ಬರಹ ವಿಜಯ ಕರ‍್ನಾಟಕ ಸುದ್ದಿಹಾಳೆಯ ’ಎಲ್ಲರ ಕನ್ನಡ’ ಅಂಕಣದಲ್ಲಿ ಮೊದಲು ಮೂಡಿಬಂದಿತ್ತು)

ಮೂಲ : ಹೊನಲು

ಕನ್ನಡ ನುಡಿಯ ಸೊಗಡು

ಎಲ್ಲಾ ನುಡಿಗಳಿಗೂ ಅವುಗಳದೇ ಆದ ಒಂದು ಸೊಗಡುಎಂಬುದಿರುತ್ತದೆ. ಇದನ್ನು ಬರಹಗಳು ಹೆಚ್ಚು ಕೆಡದಂತೆ ಉಳಿಸಿಕೊಳ್ಳಬೇಕು. ಇಲ್ಲವಾದರೆ ಅವು ತಮ್ಮ ಜೀವಂತಿಕೆಯನ್ನು ಕಳೆದುಕೊಳ್ಳುತ್ತವೆ, ಮತ್ತು ಸಾಮಾನ್ಯ ಜನರಿಂದ ದೂರವಾಗುತ್ತವೆ. ಅಂತಹ ಬರಹಗಳನ್ನು ಕಲಿಯುವ ಮತ್ತು ಬಳಸುವ ಕೆಲಸವೂ ಆ ನುಡಿಯನ್ನಾಡುವ ಜನರಿಗೆ ತುಂಬಾ ತೊಡಕಿನದಾಗುತ್ತದೆ. ನುಡಿಗಳಿಗಿರುವ ಈ ಸೊಗಡು ಅವುಗಳ ಪದಗಳಲ್ಲಿ ಬರುವ ಉಲಿಗಳಲ್ಲಿ, ಉಲಿಗಳ ಓರಣಗಳಲ್ಲಿ, ಪದಗಳಿಗೆ ಒಟ್ಟು(ಪ್ರತ್ಯಯ)ಗಳನ್ನು ಇಲ್ಲವೇ ಬೇರೆ ಪದಗಳನ್ನು ಸೇರಿಸಿದಾಗ ಅವುಗಳ ಉಲಿಗಳಲ್ಲಿ ನಡೆಯುವ ಮಾರ್ಪಾಡುಗಳಲ್ಲಿ, ಪದಗಳನ್ನು ಸೇರಿಸಿ ಬೇರೆ ಪದಗಳನ್ನು ಉಂಟುಮಾಡುವ ಬಗೆಗಳಲ್ಲಿ, ಮತ್ತು ಪದಗಳಿಂದ ಪದಕಂತೆಗಳನ್ನು ಮತ್ತು ಸೊಲ್ಲುಗಳನ್ನು ಉಂಟುಮಾಡುವ ಬಗೆಗಳಲ್ಲಿ ಕಾಣಿಸಿಕೊಳ್ಳುತ್ತದೆ.

ಕನ್ನಡಕ್ಕೂ ಇಂತಹ ತನ್ನದೇ ಆದ ಒಂದು ಸೊಗಡಿದೆ, ಮತ್ತು ಅದು ಸಂಸ್ಕ್ರುತ, ಹಿಂದಿ, ಇಂಗ್ಲಿಶ್ ಮೊದಲಾದ ಬೇರೆ ನುಡಿಗಳಿಗಿರುವ ಸೊಗಡಿಗಿಂತ ತೀರ ಬೇರಾಗಿದೆ; ಕನ್ನಡದ ಉಲಿಗಳು, ಅವುಗಳ ಓರಣಗಳು, ಅವುಗಳ ಸೇರಿಕೆಯ ಮಾರ್ಪಾಡುಗಳು, ಕನ್ನಡದಲ್ಲಿ ಪದ, ಪದಕಂತೆ ಮತ್ತು ಸೊಲ್ಲುಗಳನ್ನು ಉಂಟುಮಾಡುವ ಬಗೆಗಳು ಮೊದಲಾದುವನ್ನು ಸಂಸ್ಕ್ರುತದಂತಹ ಬೇರೆ ನುಡಿಗಳಲ್ಲಿ ಕಾಣಿಸುವ ಬಗೆಗಳೊಂದಿಗೆ ಹೋಲಿಸಿ ನೋಡಿದಾಗ, ನಿಜಕ್ಕೂ ಕನ್ನಡದ ಸೊಗಡು ಎಂತಹದು ಎಂಬುದು ಗೊತ್ತಾಗುತ್ತದೆ.

  • ಸಂಸ್ಕ್ರುತ ಪದಗಳಲ್ಲಿ ಬಳಕೆಯಾಗುವ ಖಛಠಥಫ ಮತ್ತು ಘಝಢಧಭಗಳೆಂಬ ಒತ್ತುಸಿರಿನ ಬರಿಗೆಗಳು (ಮಹಾಪ್ರಾಣಾಕ್ಶರಗಳು) ಕನ್ನಡ ಪದಗಳಲ್ಲಿಲ್ಲ; ಆದರೆ, ಸಂಸ್ಕ್ರುತ ಪದಗಳಲ್ಲಿ ಕಾಣಿಸದಿರುವ ಗಿಡ್ಡ ಎಕಾರ ಮತ್ತು ಒಕಾರಗಳು ಕನ್ನಡ ಪದಗಳಲ್ಲಿವೆ. ಸಂಸ್ಕ್ರುತದಲ್ಲಿರುವ ಋಕಾರ ಮತ್ತು ಷಕಾರಗಳು ಕನ್ನಡದಲ್ಲಿಲ್ಲ; ಆದರೆ, ಸಂಸ್ಕ್ರುತದಲ್ಲಿಲ್ಲದ ಎಯ್, ಒಯ್, ಉಯ್, ಆಯ್, ಒವ್, ಇವ್ ಮೊದಲಾದ ಹಲವು ಸ್ವರ ಮತ್ತು ಯಕಾರ ಇಲ್ಲವೇ ವಕಾರಗಳ ಜೋಡಿಗಳು ಕನ್ನಡದಲ್ಲಿವೆ.
  • ಈ ಎರಡು ನುಡಿಗಳಿಗೂ ಸಮಾನವಾಗಿರುವ ಅಕ್ಶರಗಳು ಹಲವಿವೆಯಾದರೂ ಅವು ಒಂದೇ ರೀತಿಯಾಗಿ ಬಳಕೆಯಾಗುವುದಿಲ್ಲ. ಸಂಸ್ಕ್ರುತದಲ್ಲಿ ಒತ್ತಕ್ಶರಗಳಿಂದ ಮೊದಲಾಗುವ ಪದಗಳು ಸಾಕಶ್ಟಿವೆ (ಕ್ರಾಂತಿ, ಕ್ಷಮೆ, ಜ್ಞಾನ, ಜ್ಯೋತಿ, ದ್ವೇಷ, ಮ್ಲೇಚ್ಛ). ಆದರೆ ಕನ್ನಡದವೇ ಆದ ಪದಗಳಲ್ಲಿ ಆ ರೀತಿ ಒತ್ತಕ್ಶರಗಳು ಪದಗಳ ಮೊದಲಿಗೆ ಬರುವುದಿಲ್ಲ. ಪದಗಳ ನಡುವೆ ಬರಬಲ್ಲ ಒತ್ತಕ್ಶರಗಳಲ್ಲೂ ಸಂಸ್ಕ್ರುತ ಮತ್ತು ಕನ್ನಡ ನುಡಿಗಳ ನಡುವೆ ವ್ಯತ್ಯಾಸವಿದೆ. ಸಂಸ್ಕ್ರುತದ ಭಕ್ತ, ಅಜ್ಞಾನ, ವತ್ಸ, ಮತ್ಸ್ಯ ಮೊದಲಾದ ಪದಗಳಲ್ಲಿ ನಡುವೆ ಬಂದಿರುವ ಕ್ತ್, ಜ್ಞ್, ತ್ಸ್, ತ್ಸ್ಯ್ ಮೊದಲಾದ ಹಲವು ಬಗೆಯ ಒತ್ತಕ್ಶರಗಳು ಕನ್ನಡ ಪದಗಳಲ್ಲಿ ಕಾಣಿಸುವುದಿಲ್ಲ.
  • ಎರಡು ಇಲ್ಲವೇ ಹೆಚ್ಚು ಪದಗಳನ್ನು ಒಟ್ಟುಸೇರಿಸಿ ಹೊಸ ಪದಗಳನ್ನು ತಯಾರಿಸುವ ಹೊಲಬುಗಳು ಈ ಎರಡು ನುಡಿಗಳಲ್ಲಿ ಬೇರೆ ಬೇರಾಗಿವೆ. ಸಂಸ್ಕ್ರುತದಲ್ಲಿ ಸಾಮಾನ್ಯವಾಗಿ ಹೆಸರುಪದಗಳನ್ನು ಮಾತ್ರ ಇಂತಹ ರಚನೆಗಳಲ್ಲಿ ಬಳಸಲಾಗುತ್ತದೆ; ಆದರೆ, ಕನ್ನಡದಲ್ಲಿ ಹೆಸರುಪದ (ತಲೆಗೂದಲು, ಬಯಲಾಟ), ಎಸಕಪದ (ಚುಚ್ಚುಮದ್ದು, ಕಡೆಗೋಲು) ಮತ್ತು ಪರಿಚೆಪದಗಳೆಂಬ (ದೊಡ್ಡಮ್ಮ, ಬಿಸಿನೀರು) ಮೂರು ಬಗೆಯ ಪದಗಳನ್ನೂ ಇಂತಹ ರಚನೆಗಳಲ್ಲಿ ಬಳಸಲು ಬರುತ್ತದೆ.
  • ಕನ್ನಡದಲ್ಲಿ ಸಾಮಾನ್ಯವಾಗಿ ಎರಡಕ್ಕಿಂತ ಹೆಚ್ಚು ಪದಗಳನ್ನು ಈ ರೀತಿ ಜೋಡಿಸುವುದು ಅಪರೂಪ; ಆದರೆ, ಸಂಸ್ಕ್ರುತದಲ್ಲಿ ಮೂರು-ನಾಲ್ಕು ಪದಗಳನ್ನು ಸೇರಿಸಿ ರಚಿಸಿರುವ ಜೋಡುಪದಗಳೂ ಬೇಕಾದಶ್ಟಿವೆ (ಪೂರ್ವಜನ್ಮಕೃತಂ, ಮತ್ತಮಾತಂಗಗಾಮಿ, ಸಕಲನೀತಿಶಾಸ್ತ್ರತತ್ವಜ್ಞಃ).
  • ಒಟ್ಟು(ಪ್ರತ್ಯಯ)ಗಳನ್ನು ಸೇರಿಸಿ ಹೊಸ ಪದಗಳನ್ನು ತಯಾರಿಸುವ ವಿಶಯದಲ್ಲೂ ಕನ್ನಡ ಸಂಸ್ಕ್ರುತಕ್ಕಿಂತ ಬೇರಾಗಿದೆ. ಕನ್ನಡದಲ್ಲಿ ಒಂದಕ್ಕಿಂತ ಹೆಚ್ಚು ಒಟ್ಟುಗಳನ್ನು ಸೇರಿಸಿ ರಚಿಸಿರುವ ಪದಗಳು ತುಂಬಾ ಕಡಿಮೆ; ಆದರೆ, ಸಂಸ್ಕ್ರುತದ ಹೆಚ್ಚಿನ ಪದಗಳಲ್ಲೂ ಎರಡು ಇಲ್ಲವೇ ಹೆಚ್ಚು ಒಟ್ಟುಗಳು ಸೇರಿರುವುದನ್ನು ಕಾಣಬಹುದು (ಅ-ಜ್ಞಾನ್-ಇ, ಕರ್-ತೃ-ತ್ವ). ಕನ್ನಡದಲ್ಲಿ ಒಟ್ಟುಗಳನ್ನು ಪದಗಳ ಕೊನೆಯಲ್ಲಿ ಮಾತ್ರ ಬಳಸಲು ಬರುತ್ತದೆ; ಆದರೆ, ಸಂಸ್ಕ್ರುತದಲ್ಲಿ ಅವನ್ನು ಪದಗಳ ಮೊದಲಿಗೂ ಬಳಸಬಹುದು (ಸತ್ಯ-ಅಸತ್ಯ, ಸ್ವಾಗತ-ಸುಸ್ವಾಗತ, ಜೀವಿ-ನಿರ್ಜೀವಿ, ರಕ್ಷಣೆ-ಸಂರಕ್ಷಣೆ).
  • ಪದಕ್ಕೆ ಪದ ಸೇರಿದಾಗ, ಇಲ್ಲವೇ ಪದಕ್ಕೆ ಒಟ್ಟು ಸೇರಿದಾಗ, ಅವುಗಳಲ್ಲಿ ನಡೆಯುವ ಸೇರಿಕೆಯ ಬದಲಾವಣೆಗಳು ಕನ್ನಡ ಮತ್ತು ಸಂಸ್ಕ್ರುತ ನುಡಿಗಳಲ್ಲಿ ಬೇರೆ ಬೇರಾಗಿವೆ: ಇಕಾರದ ಅನಂತರ ಅಕಾರ ಬಂದಾಗ, ಕನ್ನಡದಲ್ಲಿ ಇಕಾರ ಬಿದ್ದುಹೋಗಿ ಅಕಾರ ಉಳಿಯುತ್ತದೆ (ಅಲ್ಲಿ+ಅಲ್ಲಿ=ಅಲ್ಲಲ್ಲಿ); ಆದರೆ, ಸಂಸ್ಕ್ರುತದಲ್ಲಿ ಇಕಾರ ಯಕಾರವಾಗುತ್ತದೆ (ಅತಿ+ಅಲ್ಪ=ಅತ್ಯಲ್ಪ). ಅಕಾರದ ಅನಂತರ ಇಕಾರ ಬಂದರೂ ಕನ್ನಡದಲ್ಲಿ ಇಂತಹದೇ ಮೊದಲನೆಯ ಸ್ವರ ಬಿದ್ದುಹೋಗಿ ಎರಡನೆಯದು ಉಳಿಯುತ್ತದೆ (ಅಲ್ಲಿಂದ+ಇಳಿದು=ಅಲ್ಲಿಂದಿಳಿದು); ಆದರೆ, ಸಂಸ್ಕ್ರುತದಲ್ಲಿ ಅವೆರಡೂ ಬಿದ್ದುಹೋಗಿ ಹೊಸದೊಂದು ಸ್ವರ (ಏಕಾರ) ಬಂದುಸೇರುತ್ತದೆ (ರಾಜ+ಇಂದ್ರ=ರಾಜೇಂದ್ರ).
  • ಒಟ್ಟುಗಳನ್ನು ಸೇರಿಸಿ ಹೊಸಪದಗಳನ್ನು ರಚಿಸುವಲ್ಲಿ ಕನ್ನಡ ಮತ್ತು ಸಂಸ್ಕ್ರುತಗಳ ನಡುವೆ ಹಲವು ಮುಕ್ಯವಾದ ವ್ಯತ್ಯಾಸಗಳಿವೆ: ಸಂಸ್ಕ್ರುತ ಪದಗಳಿಗೆ ಯ ಇಲ್ಲವೇ ಇಕ ಒಟ್ಟನ್ನು ಸೇರಿಸಿದಾಗ, ಹಲವು ತೊಡಕಾದ ಸೇರಿಕೆಯ ನಿಯಮಗಳು ಬಳಕೆಯಾಗುತ್ತವೆ. ಪದಗಳ ಮೊದಲಿಗೆ ಬರುವ ಗಿಡ್ಡ ಅಕಾರ ಉದ್ದ ಆ ಎಂದಾಗುವುದು (ಚಪಲ-ಚಾಪಲ್ಯ, ಪ್ರಮಾಣ-ಪ್ರಾಮಾಣಿಕ), ಇ, ಈ ಮತ್ತು ಏ ಸ್ವರಗಳು ಐ ಎಂದಾಗುವುದು (ನಿಸರ್ಗ-ನೈಸರ್ಗಿಕ, ದೀನ-ದೈನ್ಯ, ಚೇತನ-ಚೈತನ್ಯ), ಉ, ಊ ಮತ್ತು ಓ ಸ್ವರಗಳು ಔ ಎಂದಾಗುವುದು (ಸುಖ-ಸೌಖ್ಯ, ಪೂರ್ವಾಹ್ನ-ಪೌರ್ವಾಹ್ನಿಕ, ಲೋಕ-ಲೌಕಿಕ) ಮೊದಲಾದವು ಇಂತಹ ಕೆಲವು ಸಂಸ್ಕ್ರುತದ ನಿಯಮಗಳು.

ಆದರೆ, ಕನ್ನಡದಲ್ಲಿ ಒಟ್ಟುಗಳನ್ನು ಸೇರಿಸಿ ಪದಗಳನ್ನು ರಚಿಸುವಲ್ಲಿ ಇವಕ್ಕಿಂತ ತೀರ ಬೇರಾಗಿರುವ ಸೇರಿಕೆಯ ನಿಯಮಗಳು ಬಳಕೆಯಾಗುತ್ತವೆ. ಇವು (ಕನ್ನಡಿಗರ ಮಟ್ಟಿಗೆ) ಸಂಸ್ಕ್ರುತದ ಸೇರಿಕೆಯ ನಿಯಮಗಳಶ್ಟು ತೊಡಕಿನವಾಗಿಲ್ಲ. ಕನ್ನಡ ಪದಗಳಿಗೆ ಇಕೆ ಒಟ್ಟನ್ನು ಸೇರಿಸಿದಾಗ ಪದಗಳ ಕೊನೆಯ ಉಕಾರ ಬಿದ್ದುಹೋಗುತ್ತದೆ (ಬಳಲು-ಬಳಲಿಕೆ, ಹೊಗಳು-ಹೊಗಳಿಕೆ, ಅಂಜು-ಅಂಜಿಕೆ) ಮತ್ತು ಪದಗಳ ಕೊನೆಯ ಇಕಾರ ಹಾಗೆಯೇ ಉಳಿದು ಇಕೆ ಒಟ್ಟಿನ ಮೊದಲ ಸ್ವರ ಬಿದ್ದುಹೋಗುತ್ತದೆ (ಇರಿ-ಇರಿಕೆ, ತಿರಿ-ತಿರಿಕೆ, ಇಳಿ-ಇಳಿಕೆ).

ಕನ್ನಡದ ಸೊಗಡು ಸಂಸ್ಕ್ರುತದ ಸೊಗಡಿಗಿಂತ ತೀರ ಬೇರಾದುದು ಎಂಬುದನ್ನು ಅವು ಬಳಸುವ ಪದಗಳ ಸ್ವರೂಪದಲ್ಲಿ ಕಾಣಿಸುವಂತಹ ಈ ವ್ಯತ್ಯಾಸಗಳು ತುಂಬಾ ಸ್ಪಶ್ಟವಾಗಿ ತೋರಿಸಿಕೊಡುತ್ತವೆ. ಕನ್ನಡ ಬರಹದಲ್ಲಿ ಹೆಚ್ಚು ಹೆಚ್ಚು ಸಂಸ್ಕ್ರುತ ಪದಗಳನ್ನು ಅವುಗಳಲ್ಲಿ ಸ್ವಲ್ಪವೂ ಬದಲಾವಣೆಯನ್ನು ಮಾಡದೆ ಬಳಸಿದಲ್ಲಿ ಅಂತಹ ಬರಹ ತನ್ನದೇ ಆದ ಸೊಗಡನ್ನು ಪೂರ್ತಿ ಕಳೆದುಕೊಳ್ಳುತ್ತದೆ. ಈ ರೀತಿ ತನ್ನ ಹುಟ್ಟುಸೊಗಡನ್ನು ಕಳೆದುಕೊಳ್ಳುವ ಬರಹ ತನ್ನತನವನ್ನೂ ಕಳೆದುಕೊಳ್ಳುತ್ತದೆ, ಮತ್ತು ಅದರ ಜೀವಂತಿಕೆ ನಶ್ಟವಾಗಿ ಅದರಲ್ಲಿ ಕ್ರುತಕತೆ ತುಂಬಿಕೊಳ್ಳುತ್ತದೆ. ಇದಲ್ಲದೆ, ಅಂತಹ ಬರಹಕ್ಕೂ ಹೆಚ್ಚಿನ ಕನ್ನಡಿಗರ ಮಾತಿಗೂ ನಡುವೆ ದೊಡ್ಡ ಕಂದಕವೇರ್ಪಟ್ಟು, ಅದು ಅವರೆಲ್ಲರಿಂದಲೂ ದೂರವಾಗುತ್ತದೆ. ಯಾಕೆಂದರೆ, ಬರಹ ಆ ರೀತಿ ಬದಲಾದಾಗಲೂ ಜನರ ಆಡುನುಡಿ ಅದಕ್ಕನುಗುಣವಾಗಿ ಬದಲಾಗುವುದಿಲ್ಲ. ಅದು ತನ್ನ ಪದಸ್ವರೂಪವನ್ನು ಮತ್ತು ಜೀವಂತಿಕೆಯನ್ನು ಉಳಿಸಿಕೊಂಡಿರುತ್ತದೆ.

ಇದಕ್ಕೆ ಕಾರಣವೇನೆಂದರೆ, ಆಡುನುಡಿಯನ್ನು ಮಕ್ಕಳು ತಮ್ಮ ಬೆಳವಣಿಗೆಯ ಅಂಗವಾಗಿ ಪಡೆಯುತ್ತಾರೆ; ಅದನ್ನು ಮಕ್ಕಳಿಗೆ ಯಾರೂ ಕಲಿಸಿಕೊಡಬೇಕಾಗಿಲ್ಲ. ಹಾಗಾಗಿ, ಒಂದು ತಲೆಮಾರಿನಿಂದ ಇನ್ನೊಂದು ತಲೆಮಾರಿಗೆ ಮಾರೆಡೆಗೊಳ್ಳುವಾಗ, ಅದು ತಿರುತಿರುಗಿ ಹೊಸತನವನ್ನು ಮತ್ತು ಜೀವಂತಿಕೆಯನ್ನು ಪಡೆಯುತ್ತಿರುತ್ತದೆ. ಆದರೆ, ಬರಹವನ್ನು ಮಕ್ಕಳು ಶಾಲೆಯಲ್ಲಿ ದೊಡ್ಡವರ ನೆರವಿನಿಂದ ಕಲಿಯಬೇಕಾಗುತ್ತದೆ; ಅದನ್ನು ಅವರು ತಮ್ಮ ಬೆಳವಣಿಗೆಯ ಅಂಗವಾಗಿ ಪಡೆಯುವುದಿಲ್ಲ.

ಹಾಗಾಗಿ, ಬರಹಗಾರರು ಕಾಲದಿಂದ ಕಾಲಕ್ಕೆ ಅದನ್ನು ಹೊಸದಾಗಿಸಿಕೊಳ್ಳದಿದ್ದರೆ, ಮತ್ತು ಆಡುನುಡಿಗೆ ಹತ್ತಿರವಾಗುವಂತೆ ಮಾರ್ಪಡಿಸಿಕೊಳ್ಳದಿದ್ದರೆ, ಅದು ಕ್ರುತಕವಾಗುತ್ತಾ ಹೋಗಿ ತನ್ನ ಹುಟ್ಟುಸೊಗಡನ್ನು ಮತ್ತು ಜೀವಂತಿಕೆಯನ್ನು ಕಳೆದುಕೊಳ್ಳುತ್ತದೆ. ಕನ್ನಡದಲ್ಲಿ ಕತೆ-ಕಾದಂಬರಿಗಳನ್ನು ಬರೆಯುವವರು ತಮ್ಮ ಬರಹ ಈ ರೀತಿ ಕ್ರುತಕವಾಗದಂತೆ ನೋಡಿಕೊಳ್ಳುತ್ತಾರೆ; ಆದರೆ, ಬೇರೆ ಬಗೆಯ ಬರಹಗಳನ್ನು ಬರೆಯುವವರು ಇದನ್ನು ಮಾಡಲು ಹೋಗದುದರಿಂದಾಗಿ ಇವತ್ತು ಅಂತಹ ಬರಹಗಳು ತುಂಬಾ ಕ್ರುತಕವಾಗಿದ್ದು ಸಾಮಾನ್ಯ ಜನರಿಗೆ ತಿಳಿಯದ ಹಾಗಾಗಿವೆ.

(ಈ ಬರಹ ವಿಜಯ ಕರ‍್ನಾಟಕ ಸುದ್ದಿಹಾಳೆಯ ’ಎಲ್ಲರ ಕನ್ನಡ’ ಅಂಕಣದಲ್ಲಿ ಮೊದಲು ಮೂಡಿಬಂದಿತ್ತು)

ಮೂಲ : ಹೊನಲು

ಸೊಲ್ಲರಿಮೆಯಲ್ಲಿ ತರ‍್ಕಕ್ಕೆ ನೆಲೆಯಿಲ್ಲ

ಕೆಲಸ ಮಾಡಿದ ಹೊರತು ಹಣ ಸಿಗುವುದಿಲ್ಲ’ ಎಂಬ ಸೊಲ್ಲು ಸರಿಯೋ, ಇಲ್ಲವೇ ‘ಕೆಲಸ ಮಾಡದ ಹೊರತು ಹಣ ಸಿಗುವುದಿಲ್ಲ’ ಎಂಬ ಸೊಲ್ಲು ಸರಿಯೋ? ಕೆಲವರು ಮೊದಲನೆಯ ಸೊಲ್ಲು ಸರಿಯೆಂದು ಹೇಳುತ್ತಾರೆ, ಮತ್ತು ಬೇರೆ ಕೆಲವರು ಎರಡನೆಯ ಸೊಲ್ಲು ಸರಿಯೆಂದು ಹೇಳುತ್ತಾರೆ. ಇಲ್ಲಿ ‘ಹಣ ಕೊಡುವುದು’ ಎಂಬ ಒಂದು ಎಸಕಕ್ಕೆ (ಕ್ರಿಯೆಗೆ) ‘ಕೆಲಸ ಮಾಡುವುದು’ ಎಂಬ ಇನ್ನೊಂದು ಎಸಕವನ್ನು ಬೇಡಿಕೆಯಾಗಿ ಮಾಡಲಾಗಿದೆ. ಇದನ್ನೇ ‘ಕೆಲಸ ಮಾಡದಿದ್ದರೆ ಹಣ ಸಿಗುವುದಿಲ್ಲ’ ಎಂಬುದಾಗಿ ಇನ್ನೊಂದು ಬಗೆಯಲ್ಲೂ ಹೇಳಲು ಬರುತ್ತದೆ.

ಈ ಎರಡನೇ ಬಗೆಯ ಸೊಲ್ಲಿನಲ್ಲಿ ಅಲ್ಲಗಳೆಯುವ ಹುರುಳಿರುವ ‘ಮಾಡದೆ (ಇದ್ದರೆ)’ ಎಂಬ ಪದವನ್ನೇ ಬಳಸಬೇಕಾಗುತ್ತದೆ; ಆದರೆ, ಅದರೊಂದಿಗೆ ‘ಹೊರತು’ ಎಂಬುದನ್ನು ಬಳಸಿರುವ ಮೊದಲನೇ ಬಗೆಯ ಸೊಲ್ಲಿನಲ್ಲಿ ಅಲ್ಲಗಳೆಯುವ ಹುರುಳಿರುವ ‘ಮಾಡದ’ ಎಂಬುದನ್ನು ಬಳಸಬೇಕೇ, ಇಲ್ಲವೇ ‘ಮಾಡಿದ’ ಎಂಬುದನ್ನು ಬಳಸಬೇಕೇ ಎಂಬುದೇ ಇಲ್ಲಿ ನಮ್ಮ ಮುಂದಿರುವ ಕೇಳ್ವಿ.

‘ಹೊರತು’ ಎಂಬ ಪದಕ್ಕೆ ಅಲ್ಲಗಳೆಯುವ ಹುರುಳಿದೆ; ಹಾಗಾಗಿ, ಅದರೊಂದಿಗೆ ‘ಮಾಡದ’ ಎಂಬ ಇನ್ನೊಂದು ಅಲ್ಲಗಳೆಯುವ ಹುರುಳಿರುವ ಪದವನ್ನು ಬಳಸಿದಲ್ಲಿ, ಒಂದು ಅಲ್ಲಗಳೆತ ಇನ್ನೊಂದು ಅಲ್ಲಗಳೆತವನ್ನು ಹೊಡೆದು ಹಾಕುವುದರಿಂದ, ಒಟ್ಟಾರೆಯಾಗಿ ಅಲ್ಲಗಳೆಯುವ ಹುರುಳು ಇಲ್ಲವಾಗುತ್ತದೆ, ಮತ್ತು ಈ ಕಾರಣಕ್ಕಾಗಿ ‘ಮಾಡದ ಹೊರತು’ ಎಂಬುದರ ಬಳಕೆ ಸರಿಯಲ್ಲ ಎಂಬುದಾಗಿ ಮೊದಲನೆಯ ಸೊಲ್ಲೇ ಸರಿ ಎಂದು ಹೇಳುವವರು ಅದಕ್ಕೆ ಉನ್ನೋಜೆಯ (ತರ‍್ಕದ) ಬೆಂಬಲವನ್ನು ಕೊಡಬಹುದು.

ಆದರೆ, ಇಲ್ಲಿ ತೊಡಕೇನೆಂದರೆ, ಸೊಲ್ಲರಿಮೆಯ ಕಟ್ಟಲೆಗಳು ಉನ್ನೋಜೆಯ ಕಟ್ಟಲೆಗಳಿಗೆ ಬೆಲೆ ಕೊಡಲೇ ಬೇಕೆಂದೇನೂ ಇಲ್ಲ. ಒಂದು ನುಡಿಯಲ್ಲಿ ಎಂತಹ ಸೊಲ್ಲು ಸರಿ ಎಂಬುದು ಎಂತಹದು ಬಳಕೆಯಲ್ಲಿದೆ ಎಂಬುದರ ಮೇಲೆ ಮಾತ್ರ ಅವಲಂಬಿಸಿರುತ್ತದೆ. ಕಿಟ್ಟೆಲ್ ಡಿಕ್ಶನರಿಯಲ್ಲಿ ಈ ಎರಡು ಬಗೆಯ ಸೊಲ್ಲುಗಳನ್ನೂ ಕೊಡಲಾಗಿದೆ; ಎಂದರೆ, ಈ ಎರಡು ಬಗೆಯ ಸೊಲ್ಲುಗಳೂ ಕನ್ನಡದಲ್ಲಿ ಬಳಕೆಯಲ್ಲಿವೆ. ಹಾಗಾಗಿ, ಎರಡೂ ಸರಿಯೆಂದೇ ಹೇಳಬೇಕಾಗುತ್ತದೆ.

ಉನ್ನೋಜೆಯ ಕಟ್ಟಲೆಗಳಿಗೂ ಸೊಲ್ಲರಿಮೆಯ ಕಟ್ಟಲೆಗಳಿಗೂ ನಡುವೆ ಹೊಂದಾಣಿಕೆಯಿಲ್ಲದಿರುವುದನ್ನು ಹಲವಾರು ಕಡೆಗಳಲ್ಲಿ ಕಾಣಬಹುದು. ‘ನಾನು ಅವನಿಗೆ ಹೊಡೆದಿದ್ದೇನೆ’ ಎಂಬುದೂ ‘ನಾನು ಅವನಿಗೆ ಹೊಡೆಯಲಿಲ್ಲವೆಂದಿಲ್ಲ’ ಎಂಬುದೂ ಉನ್ನೋಜೆಯ ಮಟ್ಟಿಗೆ ಒಂದೇ; ಆದರೆ, ಮಾತಿನಲ್ಲಿ ಅವು ಒಂದೇ ಅಲ್ಲ; ಯಾಕೆಂದರೆ, ಆ ಎರಡು ಸೊಲ್ಲುಗಳ ಹುರುಳಿನಲ್ಲಿ ವ್ಯತ್ಯಾಸವಿದೆ: ಅವುಗಳಲ್ಲಿ ಎರಡನೆಯ ಸೊಲ್ಲಿಗೆ ಮೊದಲನೆಯದು ತಿಳಿಸದಂತಹ ಕೆಲವು ಹೆಚ್ಚಿನ ಹುರುಳುಗಳಿವೆ; ‘ಹೊಡೆದಿದ್ದೇನೆ; ಆದರೆ, ಅದು ಅವನ ಒಳ್ಳೆಯದಕ್ಕೆ’ ಎಂಬುದು ಇಂತಹ ಒಂದು ಹೆಚ್ಚಿನ ಹುರುಳು.

ಅಲ್ಲಗಳೆತವನ್ನು ಒತ್ತಿಹೇಳುವುದಕ್ಕಾಗಿಯೂ ಎರಡು ಅಲ್ಲಗಳೆತಗಳನ್ನು ಒಟ್ಟಿಗೆ ಬಳಸಲಾಗುತ್ತದೆ; ‘ಬೇಡ ಬೇಡ’ ಇಲ್ಲವೇ ‘ಬೇಡವೇ ಬೇಡ’ ಎನ್ನುವುದಕ್ಕೆ ‘ಬೇಕು’ ಎಂಬ ಹುರುಳಿಲ್ಲ; ‘ಬೇಡ’ ಎಂಬುದನ್ನೇ ಒತ್ತಿಹೇಳುವ ಹುರುಳಿದೆ. ‘ಮಾಡದ ಹೊರತು’ ಎಂಬುದರ ಬಳಕೆಯಲ್ಲಿಯೂ ಇಂತಹದೇ ಎರಡು ಅಲ್ಲಗಳೆತಗಳ ಕೂಡಿಕೆ ನಡೆದಿರಬಹುದಲ್ಲವೇ?

ಹಿಂದೆ, ಈಗ, ಮತ್ತು ಮುಂದೆ ಎಂಬುದಾಗಿ ಮೂರು ಹೊತ್ತುಗಳನ್ನು ತಿಳಿಸುವ ಎಸಕ(ಕ್ರಿಯಾ)ರೂಪಗಳು ನುಡಿಗಳಲ್ಲಿರಬೇಕು ಎಂಬುದಾಗಿ ಹಿಂದಿನ ಸೊಲ್ಲರಿಗರು ಒಂದು ಉನ್ನೋಜೆಯ ಕಟ್ಟಲೆಯನ್ನು ತಮ್ಮ ಮುಂದಿರಿಸಿಕೊಂಡಿರುವ ಹಾಗೆ ಕಾಣಿಸುತ್ತದೆ; ಆದರೆ, ಕನ್ನಡದಲ್ಲಿ ‘ಇರು’ ಎಂಬ ಒಂದು ಎಸಕಪದಕ್ಕೆ ಮಾತ್ರ ‘ಇದ್ದ’, ‘ಇದ್ದಾನೆ’, ಮತ್ತು ‘ಇರುತ್ತಾನೆ’ ಎಂಬುದಾಗಿ ಮೂರು ಬಗೆಯ ಹೊತ್ತುಗಳನ್ನು ತಿಳಿಸುವ ರೂಪಗಳಿವೆ.

ಉಳಿದ ಎಸಕಪದಗಳಿಗೆಲ್ಲ ಹಿಂದಿನ ಮತ್ತು ಮುಂದಿನ ಎಸಕಗಳನ್ನು ತಿಳಿಸಬಲ್ಲ ‘ಬಂದ’ ಮತ್ತು ‘ಬರುತ್ತಾನೆ’ ಇಲ್ಲವೇ ‘ಹೋದ’ ಮತ್ತು ‘ಹೋಗುತ್ತಾನೆ’ ಎಂಬಂತಹ ಎರಡೆರಡು ಹೊತ್ತಿನ ರೂಪಗಳು ಮಾತ್ರ ಇವೆ. ಇವುಗಳಲ್ಲಿ ಎರಡನೆಯ ರೂಪಕ್ಕೆ ಈಗಿನ ಎಸಕವನ್ನು ಮಾತ್ರವಲ್ಲದೆ ಮುಂದಿನ ಎಸಕವನ್ನು ತಿಳಿಸುವ ಹುರುಳೂ ಇದೆ; ‘ನನಗೆ ಆ ರೀತಿ ಅನಿಸುತ್ತದೆ’ ಎಂಬ ಸೊಲ್ಲಿನಲ್ಲಿ ಅದು ನನ್ನಲ್ಲಿ ಈಗ ಇರುವ ಅನಿಸಿಕೆಯನ್ನು ತಿಳಿಸುತ್ತದೆ, ಮತ್ತು ‘ಅವನು ನಾಳೆ ಬರುತ್ತಾನೆ’ ಎಂಬ ಸೊಲ್ಲಿನಲ್ಲಿ ಅದು ಮುಂದೆ ನಡೆಯಲಿರುವ ಎಸಕವನ್ನು ತಿಳಿಸುತ್ತದೆ.

ನುಡಿಯಲ್ಲಿಲ್ಲದಿರುವ ಮೂರು ಹೊತ್ತುಗಳನ್ನು ಕನ್ನಡದ ಎಸಕಪದಗಳಲ್ಲಿ ಕಾಣಿಸುವುದಕ್ಕಾಗಿ ಸೊಲ್ಲರಿಗರು ‘ಬರುತ್ತಾನೆ’ ಎಂಬುದು ಈಗ ನಡೆಯುವ ಎಸಕವನ್ನು ತಿಳಿಸುತ್ತದೆ, ಮತ್ತು ‘ಬರುವನು’ ಎಂಬುದು ಮುಂದೆ ನಡೆಯಲಿರುವ ಎಸಕವನ್ನು ತಿಳಿಸುತ್ತದೆ ಎಂಬಂತಹ ಕಲ್ಪನೆಗೆ ಮೊರೆಹೋಗಿದ್ದಾರೆ. ಆದರೆ, ಉನ್ನೋಜೆಯ ಕಟ್ಟಲೆಯನ್ನು ನುಡಿಯ ಮೇಲೆ ಹೊರಿಸಲು ಹೊರಟಿರುವ ಈ ಪ್ರಯತ್ನ ನಿಜಕ್ಕೂ ತಪ್ಪಾಗಿದೆ. ಯಾಕೆಂದರೆ, ‘ಬರುತ್ತಾನೆ’ ಎಂಬುದು ಮುಂದೆ ನಡೆಯಲಿರುವ ಎಸಕವನ್ನು ತಿಳಿಸಬಲ್ಲುದು, ಮತ್ತು ‘ಬರುವನು’ ಎಂಬುದನ್ನು ಕನ್ನಡ ಬರಹಗಳಲ್ಲಿ ತುಂಬಾ ಅಪರೂಪವಾಗಿ ಬಳಸಲಾಗುತ್ತಿದ್ದು, ಅದರ ಹುರುಳಿಗೂ ‘ಬರುತ್ತಾನೆ’ ಎಂಬುದರ ಹುರುಳಿಗೂ ನಡುವಿರುವ ವ್ಯತ್ಯಾಸ ಹೊತ್ತಿನ ವ್ಯತ್ಯಾಸವೇ ಅಲ್ಲ. ಕೆಲವೆಡೆಗಳಲ್ಲಿ ಬರುವನು ಎಂಬುದಕ್ಕೆ ಬಳಕೆಯ ಹುರುಳಿದೆ.

‘ಅಕ್ಕ’ ಎಂಬ ಪದವನ್ನು ಬರಹದಲ್ಲಿ ಬಳಸುವಾಗ ‘ಅಕ್ಕಳನ್ನು’, ‘ಅಕ್ಕಳಿಗೆ’ ಎಂಬಂತಹ ರೂಪಗಳನ್ನು ಬಳಸಬೇಕೇ ಇಲ್ಲವೇ ‘ಅಕ್ಕನನ್ನು’, ‘ಅಕ್ಕನಿಗೆ’ ಎಂಬಂತಹ ರೂಪಗಳನ್ನು ಬಳಸಬೇಕೇ ಎಂಬ ವಿಶಯದಲ್ಲಿಯೂ ಹಲವರಿಗೆ ಗೊಂದಲವಿರುವ ಹಾಗೆ ಕಾಣಿಸುತ್ತದೆ; ‘ಅಕ್ಕ’ ಎಂಬ ಪದ ಒಬ್ಬ ಹೆಂಗುಸನ್ನು ಗುರುತಿಸುವ ಕಾರಣ, ಅದರ ಬಳಿಕ ನಕಾರದ ಬದಲು ಳಕಾರವನ್ನು ಬಳಸಬೇಕೆಂಬ ಅನಿಸಿಕೆಯೇ ಈ ಗೊಂದಲಕ್ಕೆ ಕಾರಣ. ಅಕಾರದಲ್ಲಿ ಕೊನೆಗೊಳ್ಳುವ ‘ಕಿರಣ’, ‘ರಮ್ಯ’ ಮೊದಲಾದ ಹೆಣ್ಣುಗುರ‍್ತಿನ ಇಂತಹ ಬೇರೆ ಪದಗಳನ್ನು ಬಳಸುವಲ್ಲೂ ಇಂತಹದೇ ಗೊಂದಲ ಕಾಣಿಸುತ್ತದೆ. ಆದರೆ, ‘ಅಮ್ಮ’ ಎಂಬ ಇನ್ನೊಂದು ಪದವನ್ನು ಬಳಸುವಲ್ಲಿ ಗೊಂದಲವಿರುವ ಹಾಗೆ ಕಾಣಿಸುವುದಿಲ್ಲ; ಯಾಕೆಂದರೆ, ಯಾರೂ ‘ಅಮ್ಮಳನ್ನು’ ಇಲ್ಲವೇ ‘ಅಮ್ಮಳಿಗೆ’ ಎಂಬಂತಹ ರೂಪಗಳನ್ನು ಬಳಸಿದ ಹಾಗೆ ಕಾಣಿಸುವುದಿಲ್ಲ.

ಅಕಾರದಲ್ಲಿ ಕೊನೆಗೊಳ್ಳುವ ಕೊಟ್ಟಹೆಸರುಗಳ ಬಳಕೆಯಲ್ಲಿ ಇಂತಹ ಗೊಂದಲ ಕಾಣಿಸಿಕೊಳ್ಳಲು ಬೇರೊಂದು ಕಾರಣವೂ ಇದೆ: ಇಂತಹ ಕೆಲವು ಹೆಸರುಗಳು ಹುಡುಗಿಯರನ್ನು ಮಾತ್ರವಲ್ಲದೆ ಹುಡುಗರನ್ನು ಗುರುತಿಸುವಲ್ಲೂ ಬಳಕೆಯಾಗುತ್ತಿದ್ದು, ‘ಕಿರಣನನ್ನು’ ಎಂಬುದು ಹುಡುಗರನ್ನು ಗುರುತಿಸಬಲ್ಲುದಾಗಿದ್ದು, ಹುಡುಗಿಯರನ್ನು ಗುರುತಿಸುವಲ್ಲಿ ಅದಕ್ಕಿಂತ ಬೇರಾಗಿರುವ ‘ಕಿರಣಳನ್ನು’ ಎಂಬುದನ್ನು ಬಳಸುವುದೇ ಸರಿಯೆಂದು ಕೆಲವರಿಗೆ ಅನಿಸಬಹುದು.

‘ಅವನನ್ನು’ ಮತ್ತು ‘ಅವಳನ್ನು’ ಎಂಬ ಪದಗಳ ನಡುವಿರುವ ವ್ಯತ್ಯಾಸವೇ ಇಂತಹ ಪದಗಳ ನಡುವೆಯೂ ಇರಬೇಕೆಂಬ ಅನಿಸಿಕೆಯೂ ಈ ರೀತಿ ‘ಅಕ್ಕಳನ್ನು’, ‘ರಮ್ಯಳನ್ನು’ ಎಂಬಂತಹ ರೂಪಗಳನ್ನು ಬಳಸುವುದಕ್ಕೆ ಕಾರಣವಿರಬಹುದು. ಆದರೆ, ಕನ್ನಡದಲ್ಲಿ ‘ಅನ್ನು’ ಎಂಬ ಪತ್ತುಗೆ (ವಿಬಕ್ತಿ) ಒಟ್ಟಿನ ಬಳಕೆಯ ಹಿಂದಿರುವ ಕಟ್ಟಲೆ ಬೇರೆಯೇ ಇದೆ: ಅಕಾರದಲ್ಲಿ ಕೊನೆಗೊಳ್ಳುವ ಪದಗಳು ಗಂಡುಗುರ‍್ತ(ಪುಲ್ಲಿಂಗ)ದವಾಗಲಿ, ಹೆಣ್ಣುಗುರ‍್ತ(ಸ್ತ್ರೀಲಿಂಗ)ದವಾಗಲಿ ಅವುಗಳ ಬಳಿಕ ‘ಅನ್ನು’ ಒಟ್ಟು ಸೇರುವ ಮೊದಲು ನಕಾರವೇ ಬರುತ್ತದಲ್ಲದೆ ಳಕಾರ ಬರುವುದಿಲ್ಲ.

ಹಲವೆಣಿಕೆಯ (ಬಹುವಚನದ) ‘ರು’ ಒಟ್ಟು ಮನುಶ್ಯರನ್ನು ಗುರುತಿಸುವ ಹುಡುಗ, ಹುಡುಗಿ, ಕುರುಡ, ಕುರುಡಿ, ಮುದುಕ ಮೊದಲಾದ ಪದಗಳೊಂದಿಗೆ ಬರುತ್ತದೆ, ಮತ್ತು ‘ಗಳು’ ಒಟ್ಟು ಮನುಶ್ಯರಿಗಿಂತ ಬೇರಾಗಿರುವ ಮರ, ಕಲ್ಲು, ಮನೆ, ಎಮ್ಮೆ, ಹಕ್ಕಿ ಮೊದಲಾದವುಗಳೊಂದಿಗೆ ಬರುತ್ತದೆ; ಆದರೆ, ಇಂತಹದೊಂದು ಕಟ್ಟಲೆಗೂ ಹೊರಪಡಿಕೆಗಳಿವೆ: ಇಕಾರ ಇಲ್ಲವೇ ಉಕಾರದಲ್ಲಿ ಕೊನೆಗೊಳ್ಳುವ ಗಂಡುಗುರ‍್ತದ ಪದಗಳ ಬಳಿಕ, ಮತ್ತು ಉಕಾರದಲ್ಲಿ ಕೊನೆಗೊಳ್ಳುವ ಹೆಣ್ಣುಗುರ‍್ತದ ಪದಗಳ ಬಳಿಕ ‘ಗಳು’ ಎಂಬುದೇ ಬರುತ್ತದೆ (ಕಿಡಿಗೇಡಿಗಳು, ಎದುರಾಳಿಗಳು, ಗುರುಗಳು, ಮುಂದಾಳುಗಳು; ಹೆಣ್ಣಾಳುಗಳು, ಹೆಣ್ಣುಗಳು). ಇಲ್ಲಿಯೂ ಕೂಡ, ಉನ್ನೋಜೆಯ ಕಟ್ಟಲೆಗಳಿಗೆ ಎಡೆಯಿಲ್ಲ.

(ಈ ಬರಹ ವಿಜಯ ಕರ‍್ನಾಟಕ ಸುದ್ದಿಹಾಳೆಯ ’ಎಲ್ಲರ ಕನ್ನಡ’ ಅಂಕಣದಲ್ಲಿ ಮೊದಲು ಮೂಡಿಬಂದಿತ್ತು)

ಮೂಲ : ಹೊನಲು

ಪದಗಳ ಹುರುಳು ಮತ್ತು ತಿಳಿವು

ಒಂದು ಪದವನ್ನು ಕೇಳಿದಾಗ ಅದರ ಅರ‍್ತವೇನೆಂದು ನಮಗೆ ಗೊತ್ತಾಗುತ್ತದೆ; ಆದರೆ, ನಿಜಕ್ಕೂ ಈ ‘ಅರ‍್ತ’ ಎಂದರೇನು? ಪದನೆರಕೆ(ಪದಕೋಶ)ಗಳಲ್ಲಿ ಪದಗಳ ಅರ‍್ತವೇನೆಂದು ಕೊಡಲಾಗುತ್ತದೆ; ಆದರೆ ಅವು ಇದಕ್ಕಾಗಿ ಒಂದು ಪದದ ಬದಲು ಅದೇ ಅರ‍್ತದ ಇಲ್ಲವೇ ಅದಕ್ಕೆ ಹತ್ತಿರದ ಅರ‍್ತದ ಬೇರೊಂದು ಪದವನ್ನು ಕೊಡುತ್ತವೆ. ‘ಎಲ್ಲೆ’ ಎಂಬ ಪದಕ್ಕೆ ಕನ್ನಡದ ಒಂದು ಪದಕೋಶ ‘ಗಡಿ’ ಎಂಬ ಇನ್ನೊಂದು ಪದವನ್ನು ಅದರ ಅರ‍್ತವೆಂದು ಕೊಡಬಹುದು.

ಆದರೆ ‘ಗಡಿ’ ಎಂಬುದೂ ಕನ್ನಡದಲ್ಲಿ ಬಳಕೆಯಾಗುವ ಒಂದು ಪದವಾದ ಕಾರಣ, ಅದಕ್ಕೂ ಅದರದೇ ಆದ ಅರ‍್ತ ಇದೆ. ಹಾಗಾಗಿ, ನಿಜಕ್ಕೂ ಅದು ‘ಎಲ್ಲೆ’ ಪದದ ಅರ‍್ತ ಏನು ಎಂಬುದನ್ನು ನಮಗೆ ತಿಳಿಸುವುದಿಲ್ಲ. ಆ ಎರಡು ಪದಗಳ ಅರ‍್ತ ಒಂದೇ ಎಂದಶ್ಟೇ ಅದು ತಿಳಿಸುತ್ತದೆ. ಹಾಗಾಗಿ, ‘ಎಲ್ಲೆ’ ಎಂಬುದಕ್ಕೆ ‘ಗಡಿ’ ಎಂಬ ಅರ‍್ತವನ್ನು ಕೊಡುವ ಪದನೆರಕೆ ‘ಗಡಿ’ ಎಂಬುದಕ್ಕೆ ‘ಎಲ್ಲೆ’ ಎಂಬ ಅರ‍್ತವನ್ನೂ ಕೊಟ್ಟಿರಬಹುದು!

ಕನ್ನಡ ಪದಕ್ಕೆ ಇಂಗ್ಲಿಶ್ ಪದ ಇಲ್ಲವೇ ಪದಕಂತೆಯ ಮೂಲಕವಾಗಲಿ ಇಲ್ಲವೇ ಬೇರೊಂದು ನುಡಿಯ ಪದದ ಮೂಲಕವಾಗಲಿ ಅರ‍್ತ ಹೇಳುವ ಪದನೆರಕೆಗಳೂ ಇವೆ. ಆದರೆ, ಇಂತಹ ಪದನೆರಕೆಗಳೂ ಎರಡು ಪದಗಳ ಅರ‍್ತ ಹೆಚ್ಚುಕಡಿಮೆ ಒಂದೇ ಎಂಬುದಾಗಿ ತಿಳಿಸುತ್ತವಲ್ಲದೆ ನಿಜಕ್ಕೂ ಆ ಅರ‍್ತ ಎಂತಹದು ಎಂಬುದನ್ನು ತಿಳಿಸುವುದಿಲ್ಲ. ನಾನು ಹೇಳಿದ್ದು ಅರ‍್ತವಾಯಿತೋ? ಎಂದು ಯಾರಾದರೂ ಕೇಳಿದರೆ ನಾವು ಅರ‍್ತವಾಯಿತು ಎಂದು ಹೇಳಬಹುದು. ಆದರೆ ಏನು ಅರ‍್ತವಾಯಿತು? ಎಂದು ಕೇಳಿದರೆ ಅಂತಹದೇ ಇನ್ನೊಂದು ಮಾತನ್ನು ಹೇಳಬಲ್ಲೆವಲ್ಲದೆ ಬೇರೇನೂ ಮಾಡಲಾರೆವು.

ಒಂದು ಮಾತನ್ನು ಕೇಳಿದ ಮೇಲೆ ನಾವು ಏನು ಮಾಡುತ್ತೇವೆ ಎಂಬುದರಿಂದ ನಮಗೆ ಆ ಮಾತು ಅರ‍್ತವಾಗಿದೆಯೋ ಇಲ್ಲವೋ ಎಂಬುದು ತಿಳಿದೀತು. ‘ಕುಳಿತುಕೊಳ್ಳಿ’ ಎಂದು ಹೇಳಿದಾಗ ಎದುರಿಗಿದ್ದವನು ಕುಳಿತುಕೊಂಡನಾದರೆ ಅವನಿಗೆ ಆ ಮಾತು ಅರ‍್ತವಾಗಿದೆಯೆಂದು ಹೇಳಬಹುದು. ಆದರೆ, ಆತ ಕುಳಿತುಕೊಳ್ಳದಿದ್ದರೂ ಆ ಮಾತು ಅವನಿಗೆ ಅರ‍್ತವಾಗಿಲ್ಲವೆಂದು ಹೇಳಲು ಬರುವುದಿಲ್ಲ. ಇದಲ್ಲದೆ ಹಾಗೆ ಮಾಡಬೇಕೆಂಬುದು ಆ ಮಾತಿನ ಅರ‍್ತವಲ್ಲದೆ ಹಾಗೆ ಮಾಡುವುದು ಅದರ ‘ಅರ‍್ತ’ವಲ್ಲ.

ಮೇಲಿನಿಂದ ಮೇಲೆ ನೋಡುವಾಗ ತೀರ ಸುಲಬವೆಂದು ಕಾಣಿಸಿದರೂ ವಿವರಿಸಹೊರಟಾಗ ತೀರ ತೊಡಕಿನದಾಗುವ ಈ ‘ಅರ‍್ತ’ ಎಂಬುದರ ಕುರಿತು ಹಲವಾರು ಮಂದಿ ತತ್ವಜ್ನಾನಿಗಳು ತಲೆಕೆಡಿಸಿಕೊಂಡಿದ್ದಾರೆ. ಇಲ್ಲಿ ನಮಗೆದುರಾಗುವ ಈ ತೊಡಕಿಗೆ ಮುಕ್ಯ ಕಾರಣವೇನೆಂದರೆ, ನಾವು ಬಳಸುವ ‘ಅರ‍್ತ’ ಇಲ್ಲವೇ ‘meaning’ ಎಂಬ ಪದ ಎರಡು ತೀರ ಬೇರಾಗಿರುವ ಪರಿಕಲ್ಪನೆಗಳನ್ನು ಸೂಚಿಸುತ್ತದೆ. ಒಂದು ಮಾತನ್ನು ಕೇಳಿದಾಗ ನಮಗೆ ಅದು ಅರ‍್ತವಾಗುತ್ತದೆ, ಮತ್ತು ಇದು ನಮ್ಮ ಅರಿವಿಗೆ ಎಟಕದ ರೂಪದಲ್ಲಿರುವ ಅರ‍್ತ.

ಈ ರೀತಿ ನಾವು ಮಾಡಿಕೊಂಡಿರುವ ಅರ‍್ತವನ್ನು ಇನ್ನೊಬ್ಬರಿಗೆ ತಿಳಿಸಬೇಕೆಂದಿದ್ದಲ್ಲಿ ಅದನ್ನು ಬೇರೊಂದು ರೀತಿಯ ಮಾತಿನ ಮೂಲಕವಾಗಲಿ ಇಲ್ಲವೇ ಸನ್ನೆ, ಚಿತ್ರ ಮೊದಲಾದವುಗಳ ಮೂಲಕವಾಗಲೀ ಸೂಚಿಸಬೇಕಾಗುತ್ತದೆ, ಮತ್ತು ಇದು ನಮ್ಮ ಅರಿವಿಗೆ ಎಟಕುವ ರೂಪದಲ್ಲಿರುವ ಅರ‍್ತ. ಈ ರೀತಿ ‘ಅರಿವಿಗೆ ಎಟಕದಿರುವ ಅರ‍್ತ’ ಮತ್ತು ‘ಅರಿವಿಗೆ ಎಟಕುವ ಅರ‍್ತ’ ಎಂಬುದಾಗಿ ಎರಡು ರೀತಿಯ ‘ಅರ‍್ತ’ಗಳು ಪದಗಳಿಗಿವೆ.

ಪದನೆರಕೆಗಳು ಕೊಡುವುದು ಅರಿವಿಗೆ ಎಟಕುವ ಅರ‍್ತಗಳನ್ನು ಮಾತ್ರ. ಅರಿವಿಗೆ ಎಟಕದ ಅರ‍್ತಗಳು ಅವಕ್ಕೂ ಎಟಕಲಾರವು. ಈ ಎರಡು ರೀತಿಯ ‘ಅರ‍್ತ’ಗಳ ನಡುವೆ ಹಲವು ರೀತಿಯ ವ್ಯತ್ಯಾಸಗಳಿದ್ದು ಅವನ್ನು ಸರಿಯಾಗಿ ತಿಳಿದುಕೊಳ್ಳದುದರಿಂದಾಗಿ ಅರಿವಿಗರು ಹಲವು ಬಗೆಯ ಗೊಂದಲಗಳಿಗೆ ಒಳಗಾಗಿದ್ದಾರೆ. ಅರಿವಿಗೆ ಎಟಕದ ಅರ‍್ತವನ್ನು ‘ತಿಳಿವು’ ಎಂಬುದಾಗಿ, ಮತ್ತು ಅರಿವಿಗೆ ಎಟಕುವ ಅರ‍್ತವನ್ನು ‘ಹುರುಳು’ ಎಂಬುದಾಗಿ ಹೆಸರಿಸಿದಲ್ಲಿ ಈ ಗೊಂದಲ ತಾನಾಗಿಯೇ ಇಲ್ಲವಾಗುತ್ತದೆ.

ಪದಗಳ ‘ತಿಳಿವು’ ಎನ್ನುವುದು ಅವನ್ನು ತಿಳಿದಿರುವವರ ಮಿದುಳಿನಲ್ಲಿ ಕೆಲವು ವಿಶಿಶ್ಟವಾದ ನರಗಳ ವಿನ್ಯಾಸಗಳಾಗಿ ಉಂಟಾಗಿರುತ್ತವೆ. ಯಾರಾದರೊಬ್ಬ ಆಡುಗನು ಒಂದು ಪದವನ್ನು ಬಳಸಿದಾಗ ಕೇಳುಗನ ಮಿದುಳಿನಲ್ಲಿ ಆ ಪದಕ್ಕಿರುವ ನರಗಳ ವಿನ್ಯಾಸ ಜೀವಂತವಾಗುತ್ತದೆ; ಎಂದರೆ ಅದು ಮಿಂಚುತ್ತದೆ. ನರಗಳ ವಿನ್ಯಾಸವೊಂದು ಈ ರೀತಿ ಮಿಂಚಿದಾಗ ಆತನಿಗೆ ತನಗೆ ತಿಳಿದಿರುವ ಪದವೊಂದನ್ನು ಕೇಳಿದಹಾಗಾಗುತ್ತದೆ.

ಒಂದು ನುಡಿಯನ್ನು ಕಲಿಯುವುದೆಂದರೆ ಮಿದುಳಿನಲ್ಲಿ ಇಂತಹ ಹಲವಾರು ನರಗಳ ವಿನ್ಯಾಸಗಳನ್ನು ಹೊಸದಾಗಿ ಉಂಟುಮಾಡಿಕೊಳ್ಳುವುದಲ್ಲದೆ ಬೇರೇನಲ್ಲ. ಒಬ್ಬ ವ್ಯಕ್ತಿ ಕಲಿಯದಿರುವ ನುಡಿಯ ಪದಗಳನ್ನು ಕೇಳಿದಾಗ ಅವನ ಮಿದುಳಿನಲ್ಲಿರುವ ನರಗಳ ವಿನ್ಯಾಸಗಳಲ್ಲಿ ಯಾವುದೂ ಮಿಂಚುವುದಿಲ್ಲ. ಅಂತಹ ಪದಗಳಿಗೆ ಮಿಂಚಬಲ್ಲ ನರಗಳ ವಿನ್ಯಾಸಗಳು ಆತನ ಮಿದುಳಿನಲ್ಲಿ ಉಂಟಾಗಿಲ್ಲವೆಂಬುದೇ ಇದಕ್ಕೆ ಕಾರಣ.

ಒಂದು ಪದದ ಹುರುಳು ಇದಕ್ಕಿಂತ ತೀರ ಬೇರಾದುದು. ‘ಎಲ್ಲೆ’ ಎಂಬ ಪದದ ಹುರುಳನ್ನು ‘ಗಡಿ’ ಎಂಬುದಾಗಿ ಕೊಡಬಹುದು. ಇಲ್ಲಿ ಎರಡು ಪದಗಳಿವೆ; ಅವುಗಳಲ್ಲಿ ಒಂದು ಇನ್ನೊಂದರ ಹುರುಳು. ಎರಡೂ ಪದಗಳೇ. ಆದರೆ ಅವುಗಳಲ್ಲಿ ಒಂದು ಪದದ (‘ಗಡಿ’ ಎಂಬುದರ) ತಿಳಿವು ಕೇಳುಗನಲ್ಲಿದೆ ಮತ್ತು ಇನ್ನೊಂದರ (‘ಎಲ್ಲೆ’ ಎಂಬುದರ) ತಿಳಿವು ಆತನಲ್ಲಿಲ್ಲ ಎಂಬ ಕಾರಣಕ್ಕಾಗಿ ಒಂದನ್ನು ಇನ್ನೊಂದರ ಹುರುಳು ಎಂಬುದಾಗಿ ಪರಿಗಣಿಸಲಾಗಿದೆ.

ಕೇಳುಗನಲ್ಲಿ ತಿಳಿವಿಲ್ಲದಿರುವ ಪದಕ್ಕೆ ಆತನಲ್ಲಿ ತಿಳಿವಿರುವ ಪದದ ಮೂಲಕ ಪದನೆರಕೆಗಳು ತಿಳಿವನ್ನು ಕೊಡಲು ಪ್ರಯತ್ನಿಸುತ್ತವೆ. ‘ಎಲ್ಲೆ’ ಪದದ ತಿಳಿವಿಲ್ಲದವರು ಮಾತ್ರವೇ ಪದನೆರಕೆಗಳಲ್ಲಿ ಅದರ ಅರ‍್ತವನ್ನು ಹುಡುಕಲು ಹೋಗುತ್ತಾರೆ. ಹಾಗೆ ಹುಡುಕುವವರಿಗೆ ‘ಗಡಿ’ ಎಂಬುದರ ತಿಳಿವು ಇರಬಹುದು ಎಂಬುದಾಗಿ ಪದನೆರಕೆಯನ್ನು ರಚಿಸುವವರು ಕಲ್ಪಿಸಿಕೊಂಡು ಆ ಪದವನ್ನು ಅದರ ಹುರುಳಾಗಿ ಕೊಡುತ್ತಾರೆ. ಇದಕ್ಕೆ ಬದಲು, ‘ಗಡಿ’ ಪದದ ತಿಳಿವಿಲ್ಲದವರು ಆ ಪದದ ಅರ‍್ತವನ್ನು ಪದನೆರಕೆಗಳಲ್ಲಿ ಹುಡುಕುತ್ತಾರೆ ಮತ್ತು ಅವರಿಗೆ ‘ಎಲ್ಲೆ’ ಎಂಬ ಪದದ ತಿಳಿವಿರಬಹುದೆಂದು ಪದನೆರಕೆಗಳನ್ನು ರಚಿಸುವವರು ಕಲ್ಪಿಸಿಕೊಂಡು ಆ ಪದವನ್ನು ಅದರ ಹುರುಳಾಗಿ ಕೊಡುತ್ತಾರೆ. ಎರಡರ ತಿಳಿವೂ ಇಲ್ಲದವರಿಗೆ ಅಂತಹ ಪದನೆರಕೆ ಯಾವ ನೆರವನ್ನೂ ನೀಡಲಾರದು.

ತಿಳಿವು ಮತ್ತು ಹುರುಳುಗಳ ನಡುವಿರುವ ಈ ವ್ಯತ್ಯಾಸ ಹುರುಳುಗಳ ನಡುವಿನ ಸಂಬಂದವೆಂತಹದು ಎಂಬುದನ್ನು ತಿಳಿಯುವಲ್ಲಿ ಬಹಳ ಪ್ರಯೋಜನಕ್ಕೆ ಬರುತ್ತದೆ. ಎರಡು ಪದಗಳಿಗೆ (‘ಎಲ್ಲೆ’ ಮತ್ತು ‘ಗಡಿ’ ಎಂಬವುಗಳಿಗೆ) ಒಂದೇ ಅರ‍್ತವಿದೆ ಎಂದು ಹೇಳುವಾಗ ನಾವು ಅವುಗಳಲ್ಲಿ ಒಂದನ್ನು ಇನ್ನೊಂದರ ಹುರುಳಾಗಿ ಬಳಸಬಲ್ಲೆವು ಎಂದಶ್ಟೇ ಹೇಳುತ್ತೇವಲ್ಲದೆ ನಿಜಕ್ಕೂ ಆ ಎರಡು ಪದಗಳಿಗೆ ನಮ್ಮಲ್ಲಿ ಒಂದೇ ರೀತಿಯ ತಿಳಿವಿದೆ ಎಂದೇನೂ ಹೇಳುವುದಿಲ್ಲ. ಯಾಕೆಂದರೆ, ಒಂದು ಪದದ ತಿಳಿವಿಗೆ ಹಲವು ಆಯಾಮಗಳಿದ್ದು ಅವೆಲ್ಲವುಗಳಲ್ಲೂ ಅದು ಇನ್ನೊಂದು ಪದದ ಹಾಗೆಯೇ ಇರಲು ಸಾದ್ಯವೇ ಇಲ್ಲ. ಎತ್ತುಗೆಗಾಗಿ, ‘ಗಡಿ’ ಪದವನ್ನು ಹೊತ್ತಿಗೆ ಸಂಬಂದಿಸಿದಂತೆಯೂ ‘ಗಡಿ’ ಇಲ್ಲವೇ ‘ಗಡುವು’ ಎಂಬ ರೂಪದಲ್ಲಿ ಬಳಸಲು ಬರುತ್ತದೆ; ಆದರೆ, ‘ಎಲ್ಲೆ’ ಎಂಬ ಪದಕ್ಕೆ ಅಂತಹ ಹೊತ್ತಿಗೆ ಸಂಬಂದಿಸಿದ ಬಳಕೆಯಿಲ್ಲ. ಇವೆರಡರೊಳಗೆ ಇಂತಹ ಇನ್ನೂ ಹಲವು ವ್ಯತ್ಯಾಸಗಳಿವೆಯಾದ ಕಾರಣ, ಅವೆರಡರ ಅರ‍್ತ ಒಂದೇ ಎನ್ನುವುದು ಹುರುಳಿಗೆ ಸಂಬಂದಿಸಿದ ಪರಿಕಲ್ಪನೆಯಲ್ಲದೆ ತಿಳಿವಿಗೆ ಸಂಬಂದಿಸಿದ ಪರಿಕಲ್ಪನೆಯಲ್ಲ.

ಒಂದು ಪದದ ಹುರುಳನ್ನು ಪದಕಂತೆ ಇಲ್ಲವೇ ಸೊಲ್ಲಿನ ಮೂಲಕ ವಿವರಿಸುವಲ್ಲೂ ಇಂತಹದೇ ಸಮಸ್ಯೆ ನಮ್ಮೆದುರಿಗಿದೆ. ನಾವು ಕೊಡುವ ಪದಕಂತೆ ಇಲ್ಲವೇ ಸೊಲ್ಲು ಆ ಪದದ ತಿಳಿವಿನ ಕೆಲವು ಅಂಶಗಳನ್ನು ಮಾತ್ರವೇ ಸೂಚಿಸಬಲ್ಲುದಲ್ಲದೆ ಎಲ್ಲಾ ಅಂಶಗಳನ್ನೂ ಸೂಚಿಸಲಾರದು. ಕೆಲವು ಪದಗಳ ಹಿಂದಿರುವ ತಿಳಿವನ್ನು ಸರಿಯಾಗಿ ತಿಳಿಸಬೇಕಿದ್ದಲ್ಲಿ ಒಂದು ದೊಡ್ಡ ಪ್ರಬಂದವನ್ನೇ ಬರೆಯಬೇಕಾದೀತು. ಹಾಗಾಗಿ, ಇಲ್ಲೂ ನಮ್ಮೆದುರಿಗಿರುವುದು ಹುರುಳಿಗೆ ಸಂಬಂದಿಸಿದ ಪರಿಕಲ್ಪನೆಯೇ.

(ಈ ಬರಹ ವಿಜಯ ಕರ‍್ನಾಟಕ ಸುದ್ದಿಹಾಳೆಯ ’ಎಲ್ಲರ ಕನ್ನಡ’ ಅಂಕಣದಲ್ಲಿ ಮೊದಲು ಮೂಡಿಬಂದಿತ್ತು)

ಮೂಲ : ಹೊನಲು

ಪದಗಳ ಹಿನ್ನಡವಳಿಯನ್ನು ಅರಿಯುವ ಬಗೆ

ಕನ್ನಡದ ಯಾವ ಪದವನ್ನು ಬೇಕಿದ್ದರೂ ಸಂಸ್ಕ್ರುತದ ಪದಗಳಿಂದ ಬಂದುವೆಂಬುದಾಗಿ ತೋರಿಸಿಕೊಡಬಲ್ಲೆವು ಎಂಬ ನಂಬಿಕೆ ಕೆಲವರಲ್ಲಿದೆ; ಹೀಗೆ ತೋರಿಸಿಕೊಡುವುದಕ್ಕಾಗಿ ಅವರು ಪದಗಳ ಉಲಿಗಳಲ್ಲಿ ಮತ್ತು ಹುರುಳುಗಳಲ್ಲಿ ಕಾಣಿಸುವ ಹೋಲಿಕೆಗಳನ್ನು ಮಾತ್ರವಲ್ಲದೆ ಹಲವಾರು ಬಗೆಯ ಕಯ್ಚಳಕಗಳನ್ನೂ ಬಳಸುತ್ತಾರೆ.

ಈ ಕಯ್ಚಳಕಗಳ ಮೂಲಕ ಅವರು ಉಲಿ ಇಲ್ಲವೇ ಹುರುಳುಗಳಲ್ಲಿ ಹೋಲಿಕೆಗಳು ಕಾಣಿಸದಿದ್ದರೂ ಸಂಬಂದವನ್ನು ಕಾಣಬಲ್ಲರು; ಎತ್ತುಗೆಗಾಗಿ, ಕನ್ನಡದ ‘ನೆತ್ತರು’ ಪದವನ್ನು ಸಂಸ್ಕ್ರುತದ ‘ರುಧಿರ’ ಪದದಿಂದ ಪಡೆಯಬಲ್ಲರು; ಇಲ್ಲಿ ಹುರುಳಿನ ಹೋಲಿಕೆಯಿದ್ದರೂ ಉಲಿಯ ಹೋಲಿಕೆ ತುಂಬಾ ಕಡಿಮೆ; ಕನ್ನಡದ ‘ಕಟ್ಟೆ’ ಪದವನ್ನು ಸಂಸ್ಕ್ರುತದ ‘ಕಕ್ಷಾ’ (ಕಂಕುಳು) ಪದದಿಂದ ಪಡೆಯಬಲ್ಲರು; ಇಲ್ಲಿ ಹುರುಳಿನ ಹೋಲಿಕೆಯೂ ತುಂಬಾ ಕಡಿಮೆ. ಹೀಗಿದ್ದರೂ, ಕಯ್ಚಳಕಗಳ ಮೂಲಕ ಅವರು ಇವನ್ನು ಒಂದಕ್ಕೊಂದು ಜೋಡಿಸಿ ಬಿಡುತ್ತಾರೆ. ಇಂತಹ ಕಯ್ಚಳಕಗಳು ಅವರಿಗೆ ತಮ್ಮ ನಂಬಿಕೆಯನ್ನು ಉಳಿಸಿಕೊಳ್ಳುವಲ್ಲಿ ನೆರವಾಗುತ್ತವೆಯಾದರೂ, ನಿಜಕ್ಕೂ ಆ ಪದಗಳ ಹಿನ್ನಡವಳಿ (ಚರಿತ್ರೆ) ಎಂತಹದು ಎಂಬುದನ್ನು ತಿಳಿದುಕೊಳ್ಳುವಲ್ಲಿ ಅವು ಯಾವ ನೆರವನ್ನೂ ನೀಡುವುದಿಲ್ಲ.

ಕನ್ನಡದ ಪದಗಳು ಎರಡು ಬಗೆಗಳಲ್ಲಿ ಸಂಸ್ಕ್ರುತ ಪದಗಳೊಂದಿಗೆ ಸಂಬಂದಿಸಿರಬಲ್ಲುವು: ಅವೆರಡೂ ಒಂದೇ ನುಡಿಕುಟುಂಬದ ನುಡಿಗಳೆಂಬುದೊಂದು ಬಗೆ, ಮತ್ತು ಅವುಗಳಲ್ಲಿ ಒಂದು ಇನ್ನೊಂದರಿಂದ ಪದಗಳನ್ನು ಎರವಲು ಪಡೆದಿದೆಯೆಂಬುದಿನ್ನೊಂದು ಬಗೆ. ಹಾಗಾಗಿ, ಯಾವ ಬಗೆಯ ಸಂಬಂದವನ್ನು ಅವುಗಳ ಪದಗಳ ನಡುವೆ ಕಾಣಲಾಗುತ್ತದೆ ಎಂಬುದನ್ನು ಮೊದಲು ತಿಳಿಸಬೇಕಾಗುತ್ತದೆ.

ನುಡಿಗಳಲ್ಲಿ ಕಾಲದಿಂದ ಕಾಲಕ್ಕೆ ಹಲವು ಬಗೆಯ ಮಾರ್‍ಪಾಡುಗಳು ನಡೆಯುತ್ತಲೇ ಇರುತ್ತವೆ; ಇವು ಉಲಿಗಳನ್ನು ಮಾರ್‍ಪಡಿಸಬಹುದು, ಪದಗಳನ್ನು ಇಲ್ಲವೇ ಅವುಗಳ ಹುರುಳುಗಳನ್ನು ಮಾರ್‍ಪಡಿಸಬಹುದು, ಮತ್ತು ಅವುಗಳ ಬಳಕೆಯ ಹಿಂದಿರುವ ಕಟ್ಟಲೆಗಳನ್ನು ಮಾರ್‍ಪಡಿಸಬಹುದು. ಇಂತಹ ಹಲವು ಬಗೆಯ ಮಾರ್‍ಪಾಡುಗಳು ನಡೆದುದರಿಂದಾಗಿ ಹಳೆಗನ್ನಡವಿದ್ದುದು ನಡುಗನ್ನಡವಾಗಿ ಇವತ್ತು ಹೊಸಗನ್ನಡವಾಗಿದೆ, ಮತ್ತು ಹೊಸಗನ್ನಡವೂ ಹಲವು ಬಗೆಯ ಆಡುನುಡಿಗಳಾಗಿ ಒಡೆದುಕೊಂಡಿದೆ.

ಕಾಲದಿಂದ ಕಾಲಕ್ಕೆ ನಡೆಯುವ ಇಂತಹ ಮಾರ್‍ಪಾಡುಗಳಲ್ಲಿ ನುಡಿಯ ಉಲಿಗಳಲ್ಲಿ ನಡೆಯುವ ಮಾರ್‍ಪಾಡುಗಳೇ ತುಂಬಾ ಮುಕ್ಯವಾದವುಗಳು; ಯಾಕೆಂದರೆ, ಅವುಗಳಿಂದಾಗಿ ಪದಗಳ ಮತ್ತು ಒಟ್ಟು(ಪ್ರತ್ಯಯ)ಗಳ ರೂಪದಲ್ಲಿ ಮಾತ್ರವಲ್ಲದೆ, ಅವುಗಳ ಬಳಕೆಯ ಹಿಂದಿರುವ ಕಟ್ಟಲೆಗಳಲ್ಲೂ ಮಾರ್‍ಪಾಡುಗಳು ನಡೆಯುತ್ತವೆ. ಕನ್ನಡದ ಹಿನ್ನಡವಳಿಯಲ್ಲಿ ಇಂತಹ ಹಲವು ಬಗೆಯ ಉಲಿಗಳ ಮಾರ್‍ಪಾಡುಗಳು ನಡೆದಿವೆ.

ಹಳೆಗನ್ನಡದ ಪಕಾರ ಹಕಾರವಾಗಿರುವುದು (ಪಾಲು>ಹಾಲು, ಪಳೆ>ಹಳೆ, ಪೋಗು>ಹೋಗು); ರ-ಱ, ಳ-ೞಗಳ ನಡುವಿನ ವ್ಯತ್ಯಾಸ ಇಲ್ಲವಾಗಿರುವುದು, ಉದ್ದ ತೆರೆಯುಲಿ (ಸ್ವರ) ಮತ್ತು ತಡೆಯುಲಿ(ಸ್ಪರ‍್ಶ)ಗಳ ನಡುವಿನ ಮೂಗುಲಿ (ಅನುನಾಸಿಕ) ಬಿದ್ದುಹೋಗಿರುವುದು (ನೂಂಕು>ನೂಕು, ದಾಂಟು>ದಾಟು) ಮೊದಲಾದುವು ಇಂತಹ ಉಲಿಗಳ ಮಾರ್‍ಪಾಡುಗಳು.

ಇವು ಉಲಿಗಳ ಮಾರ್‍ಪಾಡುಗಳಲ್ಲದೆ ಪದಗಳ ಮಾರ್‍ಪಾಡುಗಳಲ್ಲ ಎಂಬುದನ್ನು ಗಮನಿಸುವುದು ಅವಶ್ಯ; ಪಕಾರ ಹಕಾರವಾಗುವಂತಹ ಒಂದು ಮಾರ್‍ಪಾಡು ನಡೆದಾಗ, ಪಕಾರವಿದ್ದ ಎಲ್ಲಾ (ಸಾವಿರಕ್ಕಿಂತಲೂ ಹೆಚ್ಚು) ಪದಗಳೂ ಅದಕ್ಕೆ ಒಳಗಾಗಿರುತ್ತವೆ. ಇಂತಹ ಮಾರ್‍ಪಾಡುಗಳು ಒಂದು ಉಲಿಯನ್ನು ಎಲ್ಲೆಡೆಗಳಲ್ಲೂ ತಾಗಬಹುದು, ಇಲ್ಲವೇ ಕೆಲವೆಡೆಗಳಲ್ಲಿ ಮಾತ್ರ ತಾಗಬಹುದು; ಪಕಾರ ಹಕಾರವಾಗುವ ಮಾರ್‍ಪಾಡು ಪಕಾರವನ್ನು ಎಲ್ಲೆಡೆಗಳಲ್ಲೂ ತಾಗಿದೆ; ಆದರೆ, ಎಕಾರ ಇಕಾರವಾಗುವ ಇನ್ನೊಂದು ಮಾರ್‍ಪಾಡು ಎಕಾರದ ಬಳಿಕ ಒತ್ತೆ ಮುಚ್ಚುಲಿ (ವ್ಯಂಜನ) ಮತ್ತು ಇಕಾರ ಇಲ್ಲವೇ ಉಕಾರ ಬಂದಿರುವಲ್ಲಿ ಮಾತ್ರ ನಡೆದಿದೆ, ಬೇರೆಡೆಗಳಲ್ಲಿ ಎಕಾರ ಮಾರ್‍ಪಡದೆ ಉಳಿದಿದೆ (ಬಿಳಿ, ಬಿಸಿ, ನಿಡು ಎಂಬಂತಹ ಪದಗಳಲ್ಲಿ ಈ ಮಾರ್‍ಪಾಡು ನಡೆದಿದೆ. ಆದರೆ ಬೆಳ್ಳಗೆ, ಬೆಚ್ಚಗೆ, ನೆಟ್ಟಗೆ ಎಂಬಂತಹ ಪದಗಳಲ್ಲಿ ನಡೆದಿಲ್ಲ). ಇದಲ್ಲದೆ, ಇಂತಹ ಮಾರ್‍ಪಾಡುಗಳಿಗೆಲ್ಲ ಒಂದು ಗಡುವಿರುತ್ತದೆ; ಈ ಗಡುವು ಮುಗಿದ ಮೇಲೆ ಹಿಂದಿನ ಬರಹಗಳಿಂದ (ಪಾಲು, ಪುಟ್ಟ, ಪೆಟ್ಟು) ಇಲ್ಲವೇ ಬೇರೆ ನುಡಿಗಳಿಂದ (ಪಾಪ, ಪುಣ್ಯ, ಪೂಜೆ) ಪದಗಳು ಎರವಲಾಗಿ ಬಂದು ಈ ಮಾರ್‍ಪಾಡಿಗೆ ಹೊರಪಡಿಕೆಗಳಾಗಿ ಕಾಣಿಸಬಲ್ಲುವು.

ಎರಡು ನುಡಿಗಳು ಒಂದೇ ನುಡಿಕುಟುಂಬಕ್ಕೆ ಸೇರಿವೆಯೆಂದು ತೀರ‍್ಮಾನಿಸುವಲ್ಲೆಲ್ಲ ಇಂತಹ ಉಲಿಗಳ ಮಾರ್‍ಪಾಡುಗಳನ್ನೇ ಮುಕ್ಯವಾದ ನೆಲೆಯಾಗಿ ಬಳಸಿಕೊಳ್ಳಲಾಗುತ್ತದೆ. ಯಾಕೆಂದರೆ, ನುಡಿಗಳಲ್ಲಿ ನಡೆಯುವ ಹಲವು ಬಗೆಯ ಮಾರ್‍ಪಾಡುಗಳಲ್ಲಿ ಉಲಿಗಳ ಮಾರ್‍ಪಾಡುಗಳ ಮೇಲೆ ಮಾತ್ರ ಪದಗಳ ಹುರುಳುಗಳು ಯಾವ ಪ್ರಬಾವವನ್ನೂ ಬೀರುವುದಿಲ್ಲ; ನೇರವಾಗಿ ಪದಗಳಲ್ಲಿ ಇಲ್ಲವೇ ಅವುಗಳ ಬಳಕೆಯ ಹಿಂದಿರುವ ಕಟ್ಟಲೆಗಳಲ್ಲಿ ನಡೆಯುವ ಮಾರ್‍ಪಾಡುಗಳ ಮೇಲೆ ಅವು ಹಲವು ಬಗೆಗಳಲ್ಲಿ ಪ್ರಬಾವವನ್ನು ಬೀರುತ್ತವೆ, ಮತ್ತು ಈ ರೀತಿ ಹುರುಳುಗಳಿಂದ ಪ್ರಬಾವಿತವಾಗಿರುವ ಮಾರ್‍ಪಾಡುಗಳನ್ನು ಕಚಿತವಾದ ಕಟ್ಟಲೆಗಳಲ್ಲಿ ಸೆರೆಹಿಡಿಯಲು ಬರುವುದಿಲ್ಲ; ಯಾಕೆಂದರೆ, ಹುರುಳುಗಳಿಂದ ಪ್ರಬಾವಿತವಾದ ಮಾರ್‍ಪಾಡುಗಳಿಗೆ ಹಲವಾರು ಬಗೆಯ ಹೊರಪಡಿಕೆಗಳಿರುತ್ತವೆ.

ಹಾಗಾಗಿ, ಕನ್ನಡ ಮತ್ತು ಸಂಸ್ಕ್ರುತ ನುಡಿಗಳು ಒಂದೇ ನುಡಿಕುಟುಂಬಕ್ಕೆ ಸೇರಿವೆಯೆಂಬ ತೀರ್‍ಮಾನಕ್ಕೆ ಬರಬೇಕಿದ್ದಲ್ಲಿ ಕನ್ನಡದ ಹಿನ್ನಡವಳಿಯಲ್ಲಿ ನಡೆದ ಉಲಿಗಳ ಮಾರ್‍ಪಾಡುಗಳನ್ನೇ ಮುಕ್ಯ ನೆಲೆಯಾಗಿ ಬಳಸಿಕೊಳ್ಳಬೇಕಾಗುತ್ತದೆ. ಎಂದರೆ, ಕನ್ನಡ ಮತ್ತು ಸಂಸ್ಕ್ರುತ ಪದಗಳ ನಡುವೆ ಕಾಣಿಸುವ ವ್ಯತ್ಯಾಸಗಳು ಕನ್ನಡದ ಹಿನ್ನಡವಳಿಯಲ್ಲಿ ನಡೆದಿದ್ದ ಹಲವು ಬಗೆಯ ಉಲಿಗಳ ಮಾರ್‍ಪಾಡುಗಳಿಂದಾಗಿ ಮೂಡಿಬಂದಿವೆ ಎಂಬುದಾಗಿ ತೋರಿಸಿಕೊಡಲು ಸಾದ್ಯವಾದಾಗ ಮಾತ್ರ ಕನ್ನಡ ಸಂಸ್ಕ್ರುತದಿಂದ ಬೆಳೆದುಬಂದಿದೆ ಎಂಬುದನ್ನು ಒಪ್ಪಿಕೊಳ್ಳಲು ಬರುತ್ತದೆ. ಆದರೆ, ಇದುವರೆಗೆ ಯಾರಿಗೂ ಆ ರೀತಿ ತೋರಿಸಿಕೊಡಲು ಸಾದ್ಯವಾಗಿಲ್ಲ.

ಹಾಗಾಗಿ, ಸದ್ಯಕ್ಕಂತೂ ಕನ್ನಡ ಮತ್ತು ಸಂಸ್ಕ್ರುತ ನುಡಿಗಳು ಒಂದೇ ನುಡಿಕುಟುಂಬಕ್ಕೆ ಸೇರಿಲ್ಲವೆಂಬುದನ್ನು ಒಪ್ಪಿಕೊಳ್ಳಬೇಕಾಗುತ್ತದೆ, ಮತ್ತು ಕನ್ನಡದಲ್ಲಿ ಮೂಲದ್ರಾವಿಡ ನುಡಿಯಿಂದ ಬಂದ ಕನ್ನಡದವೇ ಆದ ಪದಗಳು, ಮತ್ತು ಸಂಸ್ಕ್ರುತವೇ ಮೊದಲಾದ ಬೇರೆ ನುಡಿಗಳಿಂದ ಎರವಲಾಗಿ ಬಂದ ಪದಗಳು ಎಂಬುದಾಗಿ ಎರಡು ಬಗೆಯ ಪದಗಳು ಇವೆಯೆಂಬುದನ್ನೂ ಒಪ್ಪಿಕೊಳ್ಳಬೇಕಾಗುತ್ತದೆ.

ಕನ್ನಡದ ಪದಗಳಿಗೂ ಸಂಸ್ಕ್ರುತದ ಪದಗಳಿಗೂ ನಡುವೆ ಅವುಗಳ ಉಲಿಗಳಲ್ಲಿ ಮತ್ತು ಹುರುಳುಗಳಲ್ಲಿ ಹೋಲಿಕೆಯಿದೆಯಾದರೆ, ಅದಕ್ಕೆ ಹಲವು ಕಾರಣಗಳಿರಬಲ್ಲುವು. ಎತ್ತುಗೆಗಾಗಿ, ಈ ಎಲ್ಲಾ ಪದಗಳನ್ನೂ ಉಂಟುಮಾಡಿದವರು ಮಾನವರೇ ಎಂಬುದೊಂದು ಕಾರಣ; ಹೋಲಿಕೆ ಬರಿಯ ಆಕಸ್ಮಿಕವಾಗಿರಬಹುದೆಂಬುದಿನ್ನೊಂದು ಕಾರಣ. ಹಾಗಾಗಿ, ಒಂದು ನುಡಿ ಇನ್ನೊಂದರಿಂದ ಎರವಲು ಪಡೆದಿದೆಯೆಂಬುದು ಪದಗಳ ನಡುವಿರುವ ಹೋಲಿಕೆಗಳಿಗಿರುವ ಹಲವು ಕಾರಣಗಳಲ್ಲಿ ಒಂದು ಮಾತ್ರ. ಇದಲ್ಲದೆ, ಇಲ್ಲಿಯೂ ಒಂದು ಪದವನ್ನು ಯಾವ ನುಡಿ ಯಾವ ನುಡಿಯಿಂದ ಎರವಲಾಗಿ ಪಡೆದಿದೆ ಎಂಬುದನ್ನು ತೀರ್‍ಮಾನಿಸುವಲ್ಲಿ ಅರಕೆಗೆ ನೆಲೆಯಿದೆ.

ಸಾಮಾನ್ಯವಾಗಿ, ಒಂದು ಪದದ ಹರಹು ಎಂತಹದು ಎಂಬುದರ ಮೇಲೆ ಅದರ ಹಿನ್ನಡವಳಿಯೆಂತಹದು ಎಂಬುದನ್ನು ತೀರ್‍ಮಾನಿಸಲಾಗುತ್ತದೆ; ಎತ್ತುಗೆಗಾಗಿ, ಕನ್ನಡದ ಒಂದು ಪದಕ್ಕೆ ಸಮಾನವಾದ ಪದಗಳು ತಮಿಳು, ತೆಲುಗು, ಗೋಂಡಿ, ಕುಡುಕ್ ಮೊದಲಾದ ಬೇರೆ ಹಲವು ದ್ರಾವಿಡ ನುಡಿಗಳಲ್ಲೂ ಕಾಣಿಸಿಕೊಳ್ಳುತ್ತಿವೆಯಾದರೆ, ಮತ್ತು ಸಂಸ್ಕ್ರುತವನ್ನು ಹೊರತುಪಡಿಸಿ ಉಳಿದ ಲ್ಯಾಟಿನ್, ಗ್ರೀಕ್, ಪರ್‍ಶಿಯನ್ ಮೊದಲಾದ ಇಂಡೋ-ಯುರೋಪಿಯನ್ ನುಡಿಗಳಲ್ಲಿ ಕಾಣಿಸುವುದಿಲ್ಲವಾದರೆ, ಅದು ಕನ್ನಡದ್ದೇ ಆದ ಪದ, ಮತ್ತು ಸಂಸ್ಕ್ರುತಕ್ಕೇನೇ ಅದು ದ್ರಾವಿಡ ನುಡಿಗಳಿಂದ ಎರವಲಾಗಿ ಬಂದಿದೆ ಎಂದು ಹೇಳಬೇಕಾಗುತ್ತದೆ.

ಇಂತಹ ಅರಕೆಗಳನ್ನು ನಡೆಸದೆ ಬರಿಯ ಹೋಲಿಕೆಯ ಮೇಲೆ ಎಲ್ಲವೂ ಸಂಸ್ಕ್ರುತದಿಂದ ಬಂದಿವೆಯೆಂದು ಹೇಳುವುದನ್ನು ಒಂದು ಅರಿಮೆಯ ಹೇಳಿಕೆಯೆಂದು ತಿಳಿಯಲು ಬರುವುದಿಲ್ಲ.

(ಈ ಬರಹ ವಿಜಯ ಕರ‍್ನಾಟಕ ಸುದ್ದಿಹಾಳೆಯ ’ಎಲ್ಲರ ಕನ್ನಡ’ ಅಂಕಣದಲ್ಲಿ ಮೊದಲು ಮೂಡಿಬಂದಿತ್ತು)

ಮೂಲ : ಹೊನಲು

ಎಣಿಕೆಯಲ್ಲೂ ಹಲವು ಬಗೆಗಳಿವೆ

ಕನ್ನಡದಲ್ಲಿ ಎಣಿಸುವುದಕ್ಕೂ ಬೇರೆ ನುಡಿಗಳಲ್ಲಿ ಎಣಿಸುವುದಕ್ಕೂ ನಡುವೆ ಹಲವು ಬಗೆಯ ವ್ಯತ್ಯಾಸಗಳಿವೆ; ಕನ್ನಡದಲ್ಲಿ ಎಣಿಕೆಪದಗಳನ್ನು ಉಂಟುಮಾಡಲು ಮುಕ್ಯವಾಗಿ ಎರಡು ಬಗೆಯ ಹೊಲಬುಗಳನ್ನು ಬಳಸಲಾಗುತ್ತದೆ: ಒಂದು ಎಣಿಕೆಪದವನ್ನು ನೇರವಾಗಿ ಇನ್ನೊಂದು ಎಣಿಕೆಪದದೊಂದಿಗೆ ಸೇರಿಸಿ ಹೇಳುವುದು ಒಂದು ಹೊಲಬು; ಇದನ್ನು ಇಪ್ಪತ್ತು (ಎರಡು+ಹತ್ತು), ಇನ್ನೂರು (ಎರಡು+ನೂರು) ಎಂಬಂತಹ ಎಣಿಕೆಪದಗಳಲ್ಲಿ ಕಾಣಬಹುದು. ಒಂದು ಎಣಿಕೆಪದದ ಪತ್ತುಗೆ(ಸಂಬಂದ)ರೂಪವನ್ನು ಇನ್ನೊಂದು ಎಣಿಕೆಪದಕ್ಕೆ ಸೇರಿಸಿ ಹೇಳುವುದು ಇನ್ನೊಂದು ಹೊಲಬು; ಇದನ್ನು ಇಪ್ಪತ್ತಾರು (ಇಪ್ಪತ್ತರ+ಆರು), ನೂರ ಹತ್ತು (ನೂರರ+ಹತ್ತು) ಎಂಬಂತಹ ಎಣಿಕೆಪದಗಳಲ್ಲಿ ಕಾಣಬಹುದು.

ಇವುಗಳಲ್ಲಿ ಮೊದಲನೆಯದನ್ನು ಪೆಚ್ಚಿಸುವ (ಗುಣಿಸುವ) ಹುರುಳಿನಲ್ಲೂ, ಎರಡನೆಯದನ್ನು ಕೂಡಿಸುವ ಹುರುಳಿನಲ್ಲೂ ಬಳಸಲಾಗುತ್ತದೆ. ಆದರೆ, ಈ ಕಟ್ಟಲೆಗೆ ಒಂದು ಹೊರಪಡಿಕೆಯೂ ಇದೆ: ಒಂಬತ್ತು (ಒಂದು+ಹತ್ತು) ಎಂಬುದರಲ್ಲಿ ಮೊದಲನೆಯ ಹೊಲಬು ಬಳಕೆಯಾಗಿದೆಯಾದರೂ ಅದಕ್ಕೆ ‘ಹತ್ತರಿಂದ ಒಂದು ಕಡಿಮೆ’ ಎಂಬ ಕಳೆತದ ಹುರುಳಿದೆ.

ಒಂದರಿಂದ ಎಂಟರ ವರೆಗಿನ ಎಣಿಕೆಪದಗಳು, ಮತ್ತು ಹತ್ತು, ನೂರು ಎಂಬ ಪದಗಳು ಒತ್ತೆ ಪದಗಳು; ಹನ್ನೊಂದರಿಂದ ಹತ್ತೊಂಬತ್ತರ ವರೆಗಿನ ಪದಗಳಲ್ಲಿ ಹತ್ತು ಪದದ ಪತ್ತುಗೆರೂಪಕ್ಕೆ ಒಂದರಿಂದ ಒಂಬತ್ತರವರೆಗಿನ ಪದಗಳನ್ನು ಸೇರಿಸಲಾಗಿದೆ. ಅದಕ್ಕೆ ಮೇಲೆ, ಇಪ್ಪತ್ತು ಎಂಬುದರಲ್ಲಿ ಎರಡು (ಇಪ್) ಪದಕ್ಕೆ ಹತ್ತು (ಪತ್ತು) ಪದವನ್ನು ನೇರವಾಗಿ ಸೇರಿಸಲಾಗಿದೆ. ಇದೇ ರೀತಿಯಲ್ಲಿ, ಮುಂದೆಯೂ ಇಪ್ಪತ್ತರಿಂದ ಇಪ್ಪತ್ತೊಂಬತ್ತರ ವರೆಗಿನ ಪದಗಳಲ್ಲಿ ಇಪ್ಪತ್ತು ಪದದ ಪತ್ತುಗೆರೂಪಕ್ಕೆ ಒಂದರಿಂದ ಒಂಬತ್ತರ ವರೆಗಿನ ಪದಗಳನ್ನು ಸೇರಿಸಲಾಗಿದೆ (ಇಪ್ಪತ್ತೊಂದು, ಇಪ್ಪತ್ತೆರಡು), ಮತ್ತು ಮೂವತ್ತು ಪದದಲ್ಲಿ ಮೂರು ಪದಕ್ಕೆ ಹತ್ತು (ವತ್ತು) ಪದವನ್ನು ನೇರವಾಗಿ ಸೇರಿಸಲಾಗಿದೆ.

ಮುಂದೆ ತೊಂಬತ್ತೊಂಬತ್ತರ ವರೆಗೂ ಇದೇ ರೀತಿಯಲ್ಲಿ ಈ ಎರಡು ಹೊಲಬುಗಳ ಬಳಕೆಯಾಗಿದೆ: ಮೊದಲ ಒಂಬತ್ತು ಎಣಿಕೆಪದಗಳನ್ನು ಪತ್ತುಗೆರೂಪದ ಮೂಲಕ ಉಂಟುಮಾಡಲಾಗಿದೆ, ಮತ್ತು ಹತ್ತನೆಯ ಪದವನ್ನು ನಾಲ್ಕು, ಅಯ್ದು, ಆರು ಮೊದಲಾದ ಪದಗಳಿಗೆ ನೇರವಾಗಿ ಹತ್ತು ಪದವನ್ನು ಸೇರಿಸಿ ಉಂಟುಮಾಡಲಾಗಿದೆ. ನೂರು ಎಂಬುದನ್ನು ತಿಳಿಸಲು ಮಾತ್ರ ಒತ್ತೆ ಪದದ ಬಳಕೆಯಾಗಿದೆ.

ನೂರರ ಬಳಿಕವೂ ಇವೇ ಎರಡು ಹೊಲಬುಗಳನ್ನು ಬಳಸಲಾಗಿದೆ: ನೂರ ಒಂದು, ನೂರ ಎರಡು, … ನೂರ ಹತ್ತು, … ನೂರ ಮೂವತ್ತೆಂಟು … ಎಂಬುದಾಗಿ ಒಟ್ಟು ನೂರು ಎಣಿಕೆಗಳನ್ನು ನೂರು ಎಂಬ ಪದದ ಪತ್ತುಗೆ ರೂಪಕ್ಕೆ ಒಂದರಿಂದ ತೊಂಬತ್ತೊಂಬತ್ತರ ವರೆಗಿನ ಪದಗಳನ್ನು ಸೇರಿಸಿ ಹೇಳಲಾಗಿದೆ, ಮತ್ತು ಮುಂದಿನ ಎಣಿಕೆಪದಗಳನ್ನು ಎರಡು, ಮೂರು ಮೊದಲಾದ ಒಂಬತ್ತು ಪದಗಳಿಗೆ ನೇರವಾಗಿ ನೂರು ಪದವನ್ನು ಸೇರಿಸಿ ಇನ್ನೂರು, ಮುನ್ನೂರು ಮೊದಲಾದ ಪದಗಳನ್ನು ಉಂಟುಮಾಡಲಾಗಿದೆ. ಇದುಕನ್ನಡತಮಿಳುತೆಲುಗು ಮೊದಲಾದ ದ್ರಾವಿಡ ನುಡಿಗಳಲ್ಲಿ ಬಳಕೆಯಾಗುವ ಎಣಿಕೆಯ ಹೊಲಬಾಗಿದೆ.

ಈ ಎಣಿಕೆಪದಗಳಲ್ಲಿ ಬರುವ ಪದಗಳ ಓರಣ ಅಂಕೆಗಳಲ್ಲಿ ಕಾಣಿಸುವ ಓರಣವನ್ನೇ ಹೋಲುತ್ತದೆ; ಎತ್ತುಗೆಗಾಗಿ, ‘ಮೂವತ್ತೆಂಟು’ ಎಂಬುದರಲ್ಲಿ ‘3(ಹತ್ತು)8’ ಎಂಬ ಓರಣವಿದೆ, ಮತ್ತು ಅದನ್ನು 38 ಎಂಬುದಾಗಿ ಅಂಕೆಯಲ್ಲಿ ಬರೆಯುವಾಗಲೂ 3 ಮೊದಲು ಬರುತ್ತದೆ, ಮತ್ತು 8 ಬಳಿಕ ಬರುತ್ತದೆ. ಇದೇ ರೀತಿಯಲ್ಲಿ, ‘ಎರಡು ಸಾವಿರದ ಮುನ್ನೂರ ನಲುವತ್ತಾರು’ ಎಂಬುದರಲ್ಲಿ ಕಾಣಿಸುವ ‘2(ಸಾವಿರ)3(ನೂರು)4(ಹತ್ತು)6’ ಎಂಬ ಓರಣವೇ 2346 ಎಂಬ ಅಂಕೆಯಲ್ಲೂ ಕಾಣಿಸುತ್ತದೆ.

ಆದರೆ, ಸಂಸ್ಕ್ರುತದಲ್ಲಿ ಮತ್ತು ಅದರಿಂದ ಬೆಳೆದು ಬಂದಿರುವ ಹಿಂದಿಮರಾಟಿ ಮೊದಲಾದ ಇಂಡೋ-ಆರ‍್ಯನ್ ನುಡಿಗಳಲ್ಲಿ ಎಣಿಕೆಯ ಪದಗಳನ್ನು ಬೇರೆಯೇ ಬಗೆಯಲ್ಲಿ ಕಟ್ಟಲಾಗಿದ್ದು, ಅವಕ್ಕೂ ಅಂಕೆಗಳಿಗೂ ನಡುವೆ ಇಂತಹ ಹೊಂದಾಣಿಕೆ ಕಾಣಿಸುವುದಿಲ್ಲ. ಎತ್ತುಗೆಗಾಗಿ, ಹಿಂದಿಯಲ್ಲಿ ‘ಅಡ್ತೀಸ್’ ಎಂಬ ಎಣಿಕೆಪದದಲ್ಲಿ ‘8-3(ಹತ್ತು)’ ಎಂಬ ಓರಣವಿದೆ; ಈ ಓರಣ 38 ಎಂಬ ಅಂಕೆಯಲ್ಲಿರುವ ಓರಣಕ್ಕಿಂತ ಬೇರಾಗಿದೆ; ಸಂಸ್ಕ್ರುತದಲ್ಲೂ ಎಪ್ಪತ್ತಯ್ದು ಎಂಬ ಹುರುಳನ್ನು ಕೊಡುವ ‘ಪಂಚಸಪ್ತತಿ’ ಎಂಬ ಎಣಿಕೆಪದದಲ್ಲಿ 5-7(ಹತ್ತು) ಎಂಬ ಓರಣವಿದ್ದು, ಅದು 75 ಎಂಬ ಅಂಕೆಯಲ್ಲಿರುವ ಓರಣಕ್ಕಿಂತ ಬೇರಾಗಿದೆ.

ಕನ್ನಡ ಮತ್ತು ಸಂಸ್ಕ್ರುತಗಳೆರಡರಲ್ಲೂ ಹತ್ತರ ಹೊಲಬು ಬಳಕೆಯಲ್ಲಿದೆ. ಆದರೆ, ಬೇರೆ ಕೆಲವು ನುಡಿಗಳಲ್ಲಿ ಬೇರೆಯೇ ಬಗೆಯ ಹೊಲಬುಗಳು ಬಳಕೆಯಾಗುತ್ತವೆ. ಅಸ್ಸಾಮಿನಲ್ಲಿ ವಾಸಿಸುವ ಕಸಾರಿ ಜನಾಂಗದವರ ಬೋಡೊ (ಇಲ್ಲವೇ ಬೋರೊ) ಎಂಬ ನುಡಿಯಲ್ಲಿ ಎಣಿಕೆಯನ್ನು ನಾಲ್ಕರ ಗುಂಪುಗಳಲ್ಲಿ ಮಾಡಲಾಗುತ್ತದೆ. ಈ ನುಡಿಯಲ್ಲಿ ಒಂದರಿಂದ ನಾಲ್ಕರ ವರೆಗೆ ಎಣಿಸಿ, ಮುಂದಕ್ಕೆ ಒಂದ್ನಾಲ್ಕು ಒಂದು (ಎಂದರೆ ಐದು), ಒಂದ್ನಾಲ್ಕು ಎರಡು (ಎಂದರೆ ಆರು), ಒಂದ್ನಾಲ್ಕು ಮೂರು (ಎಂದರೆ ಏಳು), ಎರಡ್ನಾಲ್ಕು (ಎಂದರೆ ಎಂಟು) ಎಂಬುದಾಗಿ ಎಣಿಕೆ ಸಾಗುತ್ತದೆ. ಹನ್ನೊಂದು ಎನ್ನಲು ಈ ನುಡಿಯಲ್ಲಿ ಎರಡ್ನಾಲ್ಕು ಮೂರು ಎನ್ನಬೇಕು, ಮತ್ತು ಹದಿನಾಲ್ಕು ಎನ್ನಲು ಮೂರ್ನಾಲ್ಕು ಎರಡು ಎನ್ನಬೇಕು.

ಬೋಡೊ ನುಡಿಯಲ್ಲಿ ಐದಕ್ಕೂ ಒಂದು ಪದ ಇದೆಯಾದ ಕಾರಣ, ಈ ನಾಲ್ಕರ ಹೊಲಬಿನಲ್ಲಿ ಇಪ್ಪತ್ತರವರೆಗೆ ಲೆಕ್ಕ ಹಾಕಲು ಬರುತ್ತದೆ; ಅದಕ್ಕಿಂತ ಹೆಚ್ಚಿನ ಎಣಿಕೆಯನ್ನು ನಡೆಸಲು, ಅದಕ್ಕೆ ಹೊಸದೊಂದು ಹೊಲಬು ಬೇಕಾಗುತ್ತದೆ. ಇದಕ್ಕಾಗಿ ನಮ್ಮಲ್ಲಿ ನೂರರ ಹೊಲಬಿರುವಂತೆ, ಬೋಡೊ ನುಡಿಯಲ್ಲಿ ಇಪ್ಪತ್ತರ ಹೊಲಬಿದೆ. ಈ ಹೊಲಬಿನಂತೆ, ಇಪ್ಪತ್ತಾರು ಎನ್ನಲು ‘ಒಂದಿಪ್ಪತ್ತು ಒಂದ್ನಾಲ್ಕು ಎರಡು’ ಎನ್ನಬೇಕು, ಮತ್ತು ಎಪ್ಪತ್ತಮೂರು ಎನ್ನಲು ‘ಮೂರಿಪ್ಪತ್ತು ಮೂರ್ನಾಲ್ಕು ಒಂದು’ (3 x 20) + (3 x 4) + 1 ಎನ್ನಬೇಕು. ಇಂತಹ ಎಣಿಕೆ ನಮ್ಮದರಿಂದ ತೊಡಕಾದುದೆಂದು ನಮಗೆ ತೋರಬಹುದು, ಆದರೆ ಬೋಡೊ ನುಡಿಯಲ್ಲಿ ಮಾತನಾಡುವವರಿಗೆ ನಮ್ಮಲ್ಲಿರುವ ಹತ್ತರ ಹೊಲಬಿಗಿಂತ ಅವರ ನಾಲ್ಕರ ಹೊಲಬೇ ಒಳ್ಳೆಯದೆಂದು ಅನಿಸದಿರದು.

ನಮ್ಮಲ್ಲಿ ಎಣಿಕೆಯ ಪದಗಳನ್ನು ಉಂಟುಮಾಡುವಲ್ಲಿ ಹತ್ತರ ಹೊಲಬು ಬಳಕೆಯಲ್ಲಿದೆಯಾದ ಕಾರಣ, ಅದೇ ಹತ್ತರ ಹೊಲಬಿನಲ್ಲಿ ಉಂಟುಮಾಡಿರುವ ಲೀಟರ್, ರುಪಾಯಿ, ಗ್ರಾಮ್ ಮೊದಲಾದ ಅಳತೆಪದಗಳ ಬಳಕೆ ಮೊದಲಿಗಿದ್ದ ರಾತಲು, ಸೇರು, ಅಡಿ ಮೊದಲಾದವುಗಳಿಗಿಂತ ಒಳ್ಳೆಯವೆಂದು ಅನಿಸುತ್ತದೆ; ಆದರೆ, ನಾಲ್ಕರ ಹೊಲಬನ್ನು ಬಳಸುವವರಿಗೆ ಅವು ಹಿಂದಿನವಕ್ಕಿಂತ ಒಳ್ಳೆಯವೆಂದೇನೂ ಅನಿಸಬೇಕಾಗಿಲ್ಲ.

ಎಣಿಕೆಪದಗಳ ಬಳಕೆಯಲ್ಲೂ ನುಡಿಗಳ ನಡುವೆ ಹಲವು ಬಗೆಯ ವ್ಯತ್ಯಾಸಗಳನ್ನು ಕಾಣಬಹುದು: ಕನ್ನಡದಲ್ಲಿ ಎಣಿಕೆಪದಗಳನ್ನು ಮರ, ಮನೆ, ಹುಡುಗ, ಚೆಂಡು ಮೊದಲಾದ ಪದಗಳಿಗೆ ನೇರವಾಗಿ ಸೇರಿಸಲು ಬರುತ್ತದೆ (ಮೂರು ಮನೆಗಳು, ಇಪ್ಪತ್ತೊಂದು ಚೆಂಡುಗಳು); ಆದರೆ, ನೀರು, ಅಕ್ಕಿ, ಎಣ್ಣೆ, ಹಾಲು ಮೊದಲಾದ ಪದಗಳಿಗೆ ಎಣಿಕೆಪದಗಳನ್ನು ಸೇರಿಸಬೇಕಿದ್ದಲ್ಲಿ, ಮೊದಲಿಗೆ ಅವಕ್ಕೆ ಅಳತೆಯನ್ನು ತಿಳಿಸುವ ಪದಗಳನ್ನು ಸೇರಿಸಬೇಕಾಗುತ್ತದೆ (ಮೂರು ಕಿಲೋ ಅಕ್ಕಿ, ಎರಡು ಲೀಟರ್ ಹಾಲು). ಇದಕ್ಕೆ ಬದಲು, ಬೋಡೊ ನುಡಿಯಲ್ಲಿ ಯಾವ ಪದಕ್ಕೂ ಎಣಿಕೆಪದಗಳನ್ನು ನೇರವಾಗಿ ಸೇರಿಸಲು ಬರುವುದಿಲ್ಲ; ಒಂದು ಪದ ತಿಳಿಸುವ ವ್ಯಕ್ತಿ ಇಲ್ಲವೇ ವಸ್ತು ಎಂತಹದು ಎಂಬುದನ್ನು ಅಡಕವಾಗಿ ತಿಳಿಸುವ ಪದವನ್ನು ಅದಕ್ಕೆ ಮೊದಲು ಸೇರಿಸಿ, ಆಮೇಲೆ ಎಣಿಕೆ ಪದಗಳನ್ನು ಸೇರಿಸಬೇಕಾಗುತ್ತದೆ.

ಇಂತಹ ಬೇರೆಯೂ ಹಲವು ವ್ಯತ್ಯಾಸಗಳು ನುಡಿಗಳಲ್ಲಿ ಬಳಕೆಯಾಗುವ ಎಣಿಕೆಯ ಹೊಲಬುಗಳ ನಡುವೆ ಕಾಣಿಸಿಕೊಳ್ಳುತ್ತವೆ. ಇವೆಲ್ಲವೂ ಎಣಿಕೆಯನ್ನು ಬಳಸುವಲ್ಲಿ ಮಾನವನು ಕಂಡುಕೊಂಡಿರುವ ಜಾಣ್ಮೆಯ ಹೊಲಬುಗಳೆಂದು ಹೇಳಬಹುದು.

(ಈ ಬರಹ ವಿಜಯ ಕರ‍್ನಾಟಕ ಸುದ್ದಿಹಾಳೆಯ ’ಎಲ್ಲರ ಕನ್ನಡ’ ಅಂಕಣದಲ್ಲಿ ಮೊದಲು ಮೂಡಿಬಂದಿತ್ತು)

ಮೂಲ : ಹೊನಲು

ಪದ ಮತ್ತು ಅದರ ಹುರುಳು

ನುಡಿಗಳಲ್ಲಿ ಬಳಕೆಯಾಗುವ ಪದಗಳನ್ನು ಉಲಿಗಳ ಸೇರಿಕೆಯಿಂದ ಉಂಟುಮಾಡಲಾಗುತ್ತದೆ; ಮ್, ಅ, ನ್ ಮತ್ತು ಎ ಎಂಬ ನಾಲ್ಕು ಉಲಿಗಳ ಸೇರಿಕೆಯಿಂದ ‘ಮನೆ’ ಎಂಬ ಪದವನ್ನು ಉಂಟುಮಾಡಲಾಗಿದೆ; ಆದರೆ, ಈ ಉಲಿಗಳಲ್ಲಿ ಯಾವುದಕ್ಕೂ ಅದರದೇ ಆದ ಹುರುಳಿಲ್ಲ; ಅವುಗಳ ಸೇರಿಕೆಯಿಂದ ಉಂಟಾದ ‘ಮನೆ’ ಎಂಬ ಪದಕ್ಕೆ ಮಾತ್ರ ಹುರುಳಿದೆ. ಯಾಕೆಂದರೆ, ‘ಮ್’ ಎಂಬುದು ಮನೆ ಎಂಬ ಪದದಲ್ಲಿ ಮಾತ್ರವಲ್ಲದೆ, ಮಂಗ, ಮಜ್ಜಿಗೆ, ಕಡಿಮೆ, ಮಿಂಚು, ಕಮಟು, ಅಮ್ಮ ಮೊದಲಾದ ಬೇರೆಯೂ ಹಲವು ಪದಗಳಲ್ಲಿ ಬರುತ್ತದೆ, ಮತ್ತು ಈ ಎಲ್ಲಾ ಪದಗಳಿಗೂ ಸಮಾನವಾಗಿರುವ ಹುರುಳೊಂದನ್ನು ಕಂಡುಹಿಡಿದು, ಅದು ‘ಮ್’ ಎಂಬ ಉಲಿಯ ಹುರುಳು ಎಂಬುದಾಗಿ ತೋರಿಸಿಕೊಡಲು ಸಾದ್ಯವೇ ಇಲ್ಲ.

ಇದಲ್ಲದೆ, ಪದಗಳ ಅಂಗಗಳಾಗಿರುವ ಉಲಿಗಳು ಮಾರ‍್ಪಟ್ಟಾಗಲೂ ಅವುಗಳ ಹುರುಳು ಮಾರ‍್ಪಡದೆ ಉಳಿಯುತ್ತದೆ; ಈ ವಿಶಯವೂ ಹುರುಳೆಂಬುದು ಪದಗಳಿಗಿದೆಯಲ್ಲದೆ ಉಲಿಗಳಿಗಿಲ್ಲ ಎಂಬುದನ್ನು ಬೆಂಬಲಿಸುತ್ತದೆ. ಹಳೆಗನ್ನಡದ ಪಾಲ್ ಎಂಬುದು ಹಾಲು ಎಂಬುದಾಗಿ, ಬೞ್ದುಂಕು ಎಂಬುದು ಬದುಕು ಎಂಬುದಾಗಿ, ಬೆರಲ್ ಎಂಬುದು ಬೆರಳ್ ಎಂಬುದಾಗಿ ಹೊಸಗನ್ನಡದಲ್ಲಿ ಮಾರ‍್ಪಟ್ಟಾಗ, ಅದರಿಂದಾಗಿ ಆ ಪದಗಳಿಗೆ ಮೊದಲಿಗಿದ್ದ ಹುರುಳುಗಳಲ್ಲಿ ಮಾರ‍್ಪಾಡುಗಳೇನೂ ಆಗಿರಲಿಲ್ಲ.

ಉಲಿಗಳಿಗೆ ಅವುಗಳದೇ ಆದ ಹುರುಳಿಲ್ಲದಿದ್ದರೂ ಪದಗಳಿಗೆ ಅವುಗಳದೇ ಆದ ಹುರುಳಿದೆಯೆಂದು ಸಾಮಾನ್ಯವಾಗಿ ಹೇಳಲಾಗುತ್ತದೆ; ಅದರೆ, ಇಲ್ಲೂ ಕೆಲವು ಸಮಸ್ಯೆಗಳಿವೆ; ಪದನೆರಕೆ(ಡಿಕ್ಶನರಿ)ಗಳಲ್ಲಿ ಹೆಚ್ಚಿನ ಪದಗಳಿಗೂ ಎರಡು ಇಲ್ಲವೇ ಹೆಚ್ಚು ಹುರುಳುಗಳನ್ನು ಕೊಡಲಾಗುತ್ತದೆಯೆಂಬುದನ್ನು ಗಮನಿಸಬಹುದು; ಆದರೆ, ಈ ಪದಗಳನ್ನು ಸೊಲ್ಲುಗಳಲ್ಲಿ ಬಳಸಿದಾಗ, ಅವುಗಳ ಈ ಹಲವು ಹುರುಳುಗಳಲ್ಲಿ ಒಂದು ಮಾತ್ರ ನಮ್ಮ ಗಮನಕ್ಕೆ ಬರುತ್ತದೆ. ಎತ್ತುಗೆಗಾಗಿ, ಕಾಯು ಎಂಬ ಪದಕ್ಕೆ ಕಾಪಾಡು ಎಂಬ ಹುರುಳೂ ಇದೆ, ಬಿಸಿಮಾಡು ಎಂಬ ಹುರುಳೂ ಇದೆ; ಆದರೆ, ‘ನಾಯಿ ಮನೆಯನ್ನು ಕಾಯುತ್ತಿದೆ’ ಎಂಬ ಸೊಲ್ಲನ್ನು ಬಳಸಿದಾಗ ಕಾಯು ಪದದ ಮೊದಲನೆಯ ಹುರುಳು ಮಾತ್ರ ನಮ್ಮ ಗಮನಕ್ಕೆ ಬರುತ್ತದಲ್ಲದೆ, ಎರಡನೆಯ ಹುರುಳು ಗಮನಕ್ಕೆ ಬರುವುದಿಲ್ಲ.

ಇದೇ ರೀತಿಯಲ್ಲಿ ‘ಹಂಡೆಯಲ್ಲಿ ನೀರು ಕಾಯುತ್ತಿದೆ’ ಎಂಬ ಬೇರೊಂದು ಸೊಲ್ಲನ್ನು ಬಳಸಿದಾಗ ಅದರ ಎರಡನೆಯ ಹುರುಳು ಮಾತ್ರ ನಮ್ಮ ಗಮನಕ್ಕೆ ಬರುತ್ತದೆ. ಎಂದರೆ, ಒಂದು ಪದ ನಮಗೆ ಎಂತಹ ಹುರುಳನ್ನು ಕೊಡುತ್ತದೆ ಎಂಬುದು ಅದನ್ನು ಎಂತಹ ಸೊಲ್ಲಿನಲ್ಲಿ ಬಳಸಲಾಗಿದೆ ಎಂಬುದರ ಮೇಲೂ ಅವಲಂಬಿಸಿರುತ್ತದೆ. ಕೆಲವೊಮ್ಮೆ ಈ ರೀತಿ ಒಂದು ಪದಕ್ಕೆ ಒಂದಕ್ಕಿಂತ ಹೆಚ್ಚು ಹುರುಳುಗಳಿರುವುದು ತೊಂದರೆಯನ್ನೂ ಕೊಡಬಲ್ಲುದು. ಎತ್ತುಗೆಗಾಗಿ, ‘ಅವನು ಕರೆಯಲು ಬಂದಿದ್ದಾನೆ’ ಎಂದಿಶ್ಟೇ ಹೇಳಿದಲ್ಲಿ ಅವನು ಎಲ್ಲಿಗಾದರೂ ಬರಬೇಕೆಂದು ಹೇಳಲು ಬಂದಿದ್ದಾನೋ ಇಲ್ಲವೇ ದನವನ್ನು ಕರೆಯಲು ಬಂದಿದ್ದಾನೋ ಎಂಬ ವಿಶಯದಲ್ಲಿ ಗೊಂದಲವುಂಟಾಗಬಲ್ಲುದು. ಆದರೆ, ಸಾಮಾನ್ಯವಾಗಿ ನಾವು ಮಾತನ್ನು ಬಳಸುವಾಗ ಆ ರೀತಿ ಗೊಂದಲವುಂಟಾಗದಂತೆ ನೋಡಿಕೊಳ್ಳುತ್ತೇವೆ.

ಮಾತಿನಲ್ಲಿ ಬಳಕೆಯಾಗುವ ಪದಗಳಲ್ಲಿ ಹಲವಕ್ಕೆ (ಹೆಸರುಪದಗಳಿಗೆ) ವ್ಯಕ್ತಿ, ವಸ್ತು ಇಲ್ಲವೇ ಸಂಗತಿಯನ್ನು ಗುರುತಿಸುವ ಕಸುವಿರುತ್ತದೆ. ‘ಸುರೇಶ ಒಂದು ಹಣ್ಣು ತಿಂದ’ ಎಂಬ ಸೊಲ್ಲಿನಲ್ಲಿ ಎರಡು ಹೆಸರುಪದಗಳು ಬಂದಿದ್ದು, ಅವುಗಳಲ್ಲಿ ‘ಹಣ್ಣು’ ಎಂಬ ಪದ ಒಂದು ವಸ್ತುವನ್ನು ಗುರುತಿಸುತ್ತದೆ ಮತ್ತು ‘ಸುರೇಶ’ ಎಂಬ ಪದ ಒಬ್ಬ ವ್ಯಕ್ತಿಯನ್ನು ಗುರುತಿಸುತ್ತದೆ. ಪದಗಳ ಮೂಲಕ ಮಾತ್ರವಲ್ಲದೆ ಪದಕಂತೆಗಳ ಮೂಲಕವೂ ವ್ಯಕ್ತಿ, ವಸ್ತು ಮೊದಲಾದುವನ್ನು ಗುರುತಿಸಲು ಬರುತ್ತದೆ. ‘ಕುರ‍್ಚಿಯಲ್ಲಿ ಕುಳಿತಿರುವ ಮುದುಕ’ ಎಂಬ ಪದಕಂತೆ ಒಬ್ಬ ವ್ಯಕ್ತಿಯನ್ನು ಗುರುತಿಸುತ್ತದೆ, ಮತ್ತು ‘ರಾಜು ಕೊಟ್ಟ ಪುಸ್ತಕ’ ಎಂಬ ಇನ್ನೊಂದು ಪದಕಂತೆ ಒಂದು ವಸ್ತುವನ್ನು ಗುರುತಿಸುತ್ತದೆ.

ಈ ರೀತಿ ವ್ಯಕ್ತಿ, ವಸ್ತು ಮೊದಲಾದುವನ್ನು ಪದಗಳ ಮೂಲಕ ಗುರುತಿಸುವುದಕ್ಕೂ ಪದಕಂತೆಗಳ ಮೂಲಕ ಗುರುತಿಸುವುದಕ್ಕೂ ನಡುವೆ ಒಂದು ಮುಕ್ಯವಾದ ವ್ಯತ್ಯಾಸವಿದೆ. ಪದಕಂತೆಗಳ ಮೂಲಕ ಗುರುತಿಸುವಾಗ ಅವುಗಳ ಹುರುಳು ಬಳಕೆಯಾಗುತ್ತದೆ, ಆದರೆ ಪದಗಳ ಮೂಲಕ ಗುರುತಿಸುವಾಗ ಆ ರೀತಿ ಅವುಗಳ ಹುರುಳು ಬಳಕೆಯಾಗುವುದಿಲ್ಲ. ಅದಕ್ಕೆ ಬದಲು, ಪದಗಳಿಗೂ ಅವು ತಿಳಿಸಬಲ್ಲ ವ್ಯಕ್ತಿ, ವಸ್ತು ಮೊದಲಾದವುಗಳಿಗೂ ನಡುವಿರುವ ಸಂಬಂದ ಬಳಕೆಯಾಗುತ್ತದೆ.

ನಿಜಕ್ಕೂ ಒಂದು ಹೆಸರುಪದದ ಹುರುಳೇನು ಎಂಬುದನ್ನು ತಿಳಿಯಬೇಕಿದ್ದಲ್ಲಿ ಮೊದಲಿಗೆ ಅದು ಎಂತಹ ವ್ಯಕ್ತಿ, ವಸ್ತು ಇಲ್ಲವೇ ಸಂಗತಿಯನ್ನು ಗುರುತಿಸುತ್ತದೆ ಎಂಬುದನ್ನು ತಿಳಿಯಬೇಕಾಗುತ್ತದೆ. ಎತ್ತುಗೆಗಾಗಿ, ‘ನಾಯಿ’ ಎಂಬ ಪದ ಎಂತಹ ಪ್ರಾಣಿಯನ್ನು ಗುರುತಿಸಲು ಬಳಕೆಯಾಗುತ್ತದೆ, ಮತ್ತು ಆ ಪ್ರಾಣಿಯ ಪರಿಚೆ(ಗುಣ)ಗಳು ಎಂತಹವು ಎಂಬುದನ್ನು ತಿಳಿದಾಗ ಮಾತ್ರ ನಮಗೆ ಆ ಪದದ ಹುರುಳೇನು ಎಂಬುದು ಗೊತ್ತಾಗುತ್ತದೆ; ಹಾಗಾಗಿ, ಆ ಪ್ರಾಣಿಯ ಪರಿಚೆಗಳನ್ನೇ ಒಟ್ಟಾಗಿ ‘ನಾಯಿ’ ಎಂಬ ಪದದ ಹುರುಳು ಎಂದು ಹೇಳಬೇಕಾಗುತ್ತದೆ.

ಒಳರಚನೆಯಿರುವ ಪದಗಳ ಹುರುಳನ್ನೂ ಇದೇ ರೀತಿಯಲ್ಲಿ ಅವು ತಿಳಿಸುವ ವಸ್ತು, ವ್ಯಕ್ತಿ ಮೊದಲಾದವುಗಳ ಪರಿಚೆಗಳು ಎಂತಹವು ಎಂಬುದರಿಂದ ತಿಳಿಯಬೇಕಾಗುತ್ತದಲ್ಲದೆ ಅವುಗಳ ಒಳರಚನೆ ಎಂತಹದು ಎಂಬುದರಿಂದ ತಿಳಿಯಲು ಬರುವುದಿಲ್ಲ. ‘ಹೊಸಮನೆ’ ಎಂಬ ಪದದಲ್ಲಿ ‘ಹೊಸ’ ಮತ್ತು ‘ಮನೆ’ ಎಂಬ ಎರಡು ಪದಗಳು ಸೇರಿಕೊಂಡಿವೆ; ಆದರೆ, ಅದು ಗುರುತಿಸುವ ಮನೆ ಹೊಸದಾಗಿರಬಲ್ಲುದು, ಇಲ್ಲವೇ ತುಂಬಾ ಹಳೆಯದಾಗಿರಬಲ್ಲುದು; ಯಾಕೆಂದರೆ, ಒಮ್ಮೆ ಒಂದು ಮನೆಯನ್ನು ಆ ಹೆಸರಿನಿಂದ ಕರೆಯತೊಡಗಿದ ಮೇಲೆ, ಅದು ತುಂಬಾ ಹಳೆಯದಾದಾಗಲೂ ಆ ಹೆಸರನ್ನು ನಾವು ಬದಲಾಯಿಸಹೋಗುವುದಿಲ್ಲ; ಎಂದರೆ, ‘ಹೊಸಮನೆ’ ಎಂಬ ಪದದ ಹುರುಳು ಅದು ಗುರುತಿಸುವ ಮನೆಯ ಪರಿಚೆಗಳು ಬದಲಾದ ಹಾಗೆಲ್ಲ ಬದಲಾಗುತ್ತಾ ಹೋಗುತ್ತದೆ. ‘ಹಳೆಮನೆ’ ಎಂಬ ಹೆಸರಿರುವ ಇನ್ನೊಂದು ಮನೆಯನ್ನು ಕೆಡವಿ ಅಲ್ಲೊಂದು ಹೊಸಮನೆಯನ್ನು ಕಟ್ಟಿದಾಗಲೂ ಅದಕ್ಕೆ ಮೊದಲು ಬಳಕೆಯಲ್ಲಿದ್ದ ‘ಹಳೆಮನೆ’ ಎಂಬ ಹೆಸರು ಹಾಗೆಯೇ ಉಳಿದಿರುತ್ತದೆ; ಆ ಪದದ ಹುರುಳು ಮಾತ್ರ ಮಾರ‍್ಪಟ್ಟಿರುತ್ತದೆ.

ಹೆಸರುಪದಗಳಿಗೆ ಅವುಗಳ ಹುರುಳಿನೊಂದಿಗಿರುವ ಸಂಬಂದಕ್ಕಿಂತಲೂ ಅವು ಸೂಚಿಸುವ ವ್ಯಕ್ತಿ, ವಸ್ತು, ಸಂಗತಿ ಮೊದಲಾದವುಗಳೊಂದಿಗಿರುವ ಸಂಬಂದವೇ ಹೆಚ್ಚು ಮುಕ್ಯವಾದುದು ಎಂಬ ವಿಶಯ ಇದರಿಂದ ಸ್ಪಶ್ಟವಾಗುತ್ತದೆ. ಕೆಲವೆಡೆಗಳಲ್ಲಿ ಪದಗಳ ಒಳರಚನೆಯನ್ನು ಬಳಸಿ ಅವುಗಳ ಹುರುಳನ್ನು ಊಹಿಸಿಕೊಳ್ಳಬಲ್ಲೆವಾದರೂ ಈ ವಿಶಯದಲ್ಲಿ ಕೊನೆಯ ತೀರ‍್ಮಾನಕ್ಕೆ ಬರಲು ಇಂತಹ ಸಂಬಂದದ ನೆರವು ಬೇಕೇ ಬೇಕು.

ಸೊಲ್ಲುಗಳಲ್ಲಿ ಬರುವ ಎಸಕ(ಕ್ರಿಯಾ)ಪದ, ಪರಿಚೆ(ಗುಣ)ಪದ ಮೊದಲಾದವುಗಳ ಹುರುಳೇನೆಂಬುದನ್ನು ತೀರ‍್ಮಾನಿಸುವುದು ಇದಕ್ಕಿಂತಲೂ ಹೆಚ್ಚು ತೊಡಕಿನ ಕೆಲಸ. ಯಾಕೆಂದರೆ, ಅದಕ್ಕಾಗಿ ಅವು ಬರುವ ಪದಕಂತೆಗಳ ಇಲ್ಲವೇ ಸೊಲ್ಲುಗಳ ಹುರುಳೇನೆಂಬುದನ್ನು ಮೊದಲು ತಿಳಿದುಕೊಳ್ಳಬೇಕಾಗುತ್ತದೆ, ಮತ್ತು ಆ ಹುರುಳಿನಲ್ಲಿ ಯಾವುದೇ ಒಂದು ಎಸಕಪದದ ಇಲ್ಲವೇ ಪರಿಚೆಪದದ ಕೊಡುಗೆ ಎಂತಹದು ಎಂಬುದನ್ನು ಕಂಡುಹಿಡಿಯಬೇಕಾಗುತ್ತದೆ. ಪದಗಳೊಂದಿಗೆ ಬರುವ ಒಟ್ಟು(ಪ್ರತ್ಯಯ)ಗಳ ಹುರುಳನ್ನೂ ಇದೇ ರೀತಿಯಲ್ಲಿ ಆ ಪದಗಳ ಬಳಕೆಯಲ್ಲಿ ಅವುಗಳ ಕೊಡುಗೆ ಎಂತಹದು ಎಂಬುದನ್ನು ಪರಿಶೀಲಿಸುವ ಮೂಲಕ ತಿಳಿಯಬೇಕಾಗುತ್ತದೆ.

(ಈ ಬರಹ ವಿಜಯ ಕರ‍್ನಾಟಕ ಸುದ್ದಿಹಾಳೆಯ ’ಎಲ್ಲರ ಕನ್ನಡ’ ಅಂಕಣದಲ್ಲಿ ಮೊದಲು ಮೂಡಿಬಂದಿತ್ತು)

ಮೂಲ : ಹೊನಲು

ಉಲಿ ಮಾರ‍್ಪಾಡಿನ ಗೆರೆಗಳು

ಕನ್ನಡ ನುಡಿ ಹಳ್ಳಿಯಿಂದ ಹಳ್ಳಿಗೆ, ಜಿಲ್ಲೆಯಿಂದ ಜಿಲ್ಲೆಗೆ ಮತ್ತು ಜಾತಿಯಿಂದ ಜಾತಿಗೆ ಬೇರೆ ಬೇರಾಗಿದೆಯೆಂಬುದು ನಮಗೆಲ್ಲ ಗೊತ್ತಿದೆ. ಮಯ್ಸೂರಿನವರ ಕನ್ನಡ ಒಂದು ತರವಾದರೆ ಮಂಗಳೂರಿನವರದು ಇನ್ನೊಂದು ತರ, ಮತ್ತು ದಾರವಾಡದವರದು ಮತ್ತೊಂದು ತರ. ಇಶ್ಟೇ ಅಲ್ಲ, ಮಯ್ಸೂರಿನಂತಹ ಒಂದೇ ಜಿಲ್ಲೆಯಲ್ಲೂ ಎಲ್ಲಾ ಕಡೆ ಒಂದೇ ರೀತಿಯ ಕನ್ನಡ ಬಳಕೆಯಲ್ಲಿಲ್ಲ. ಕೊಳ್ಳೇಗಾಲದ ಕನ್ನಡಕ್ಕೂ ನಂಜನಗೂಡಿನ ಕನ್ನಡಕ್ಕೂ ನಡುವೆ ವ್ಯತ್ಯಾಸವಿದೆ, ಮತ್ತು ಹೆಗ್ಗಡದೇವನ ಕೋಟೆಯ ಕನ್ನಡಕ್ಕೂ ಕೆ. ಆರ್. ನಗರದ ಕನ್ನಡಕ್ಕೂ ನಡುವೆ ವ್ಯತ್ಯಾಸವಿದೆ.

ಇದಲ್ಲದೆ, ಒಂದೇ ಹಳ್ಳಿಯಲ್ಲಿ ವಾಸಿಸುವ ಜನರಲ್ಲೂ ಬ್ರಾಹ್ಮಣರ ಕನ್ನಡ, ಒಕ್ಕಲಿಗರ ಕನ್ನಡ, ಆದಿಕರ‍್ನಾಟಕರ ಕನ್ನಡ ಎಂದೆಲ್ಲಾ ವ್ಯತ್ಯಾಸಗಳು ಕಾಣಿಸುತ್ತವೆ. ಆಡುಗನ್ನಡದಲ್ಲಿ ಇಂತಹ ಹಲವು ವ್ಯತ್ಯಾಸಗಳಿವೆಯೆಂಬುದನ್ನು ನಾವೆಲ್ಲ ತಿಳಿದಿರುವೆವಾದರೂ ಈ ವ್ಯತ್ಯಾಸಗಳು ನಿಜಕ್ಕೂ ಎಂತಹವು ಎಂಬುದನ್ನು ಇದುವರೆಗೆ ಯಾರೂ ಸರಿಯಾಗಿ ಮತ್ತು ವಿವರವಾಗಿ ತಿಳಿದುಕೊಳ್ಳಲು ಹೋಗಿಲ್ಲ. ಹಾಗೆ ತಿಳಿಯಲು ಹೋದಲ್ಲಿ, ಅವುಗಳ ಹಿಂದೆ ಹಲವಾರು ಕಟ್ಟುನಿಟ್ಟಾದ ಕಟ್ಟಲೆಗಳೇ ಅಡಗಿವೆ ಎಂಬುದರ ಅರಿವು ನಮಗಾಗದಿರದು.

ಎತ್ತುಗೆಗಾಗಿ, ಮಯ್ಸೂರಿನವರು ಮನೆ ಎನ್ನುವರಾದರೆ, ದಾರವಾಡದವರು ಮನಿ ಎನ್ನುತ್ತಾರೆ; ಮಯ್ಸೂರಿನ ಹಣೆ ದಾರವಾಡದಲ್ಲಿ ಹಣಿಯಾಗುತ್ತದೆ; ಕೆರೆ ಎಂಬುದು ಕೆರಿಯಾಗುತ್ತದೆ, ಗೆರೆ ಎಂಬುದು ಗೆರಿಯಾಗುತ್ತದೆ. ಎಕಾರದಲ್ಲಿ ಕೊನೆಗೊಳ್ಳುವ ಹೆಸರು(ನಾಮ)ಪದಗಳೆಲ್ಲ ದಾರವಾಡ ಕನ್ನಡದಲ್ಲಿ ಇಕಾರದಲ್ಲಿ ಕೊನೆಗೊಳ್ಳುತ್ತವೆ ಎಂಬ ಕಟ್ಟಲೆಯೊಂದು ಈ ವ್ಯತ್ಯಾಸದ ಹಿಂದೆ ಅಡಗಿದೆ. ಮಯ್ಸೂರು ಜಿಲ್ಲೆಯೊಳಗೇನೇ ಕೊಳ್ಳೇಗಾಲದಲ್ಲಿ ಬರೆ ಎಂದಿರುವುದು ನಂಜನಗೂಡಿನಲ್ಲಿ ಬರಿ ಎಂದಾಗುತ್ತದೆ, ಅಗೆ ಎಂಬುದು ಅಗಿಯಾಗುತ್ತದೆ, ಕರೆ ಎಂಬುದು ಕರಿಯಾಗುತ್ತದೆ, ಒಡೆ ಎಂಬುದು ಒಡಿಯಾಗುತ್ತದೆ. ಇದು ಅಂತಹದೇ ಇನ್ನೊಂದು ಮಾರ‍್ಪಾಡು.

ಆದರೆ ಈ ಮಾರ‍್ಪಾಡು ಎಕಾರದಲ್ಲಿ ಕೊನೆಗೊಳ್ಳುವ ಎಸಕ(ಕ್ರಿಯಾ)ಪದಗಳನ್ನು ಮಾತ್ರ ನಾಟುತ್ತದೆ. ಯಾಕೆಂದರೆ, ಮೇಲೆ ಸೂಚಿಸಿದ ಹಾಗೆ, ಎಕಾರದಲ್ಲಿ ಕೊನೆಗೊಳ್ಳುವ ಹೆಸರುಪದಗಳು ಮಯ್ಸೂರಿನಲ್ಲಿ ಎಲ್ಲ ಕಡೆಗಳಲ್ಲೂ (ನಂಜನಗೂಡಿನಲ್ಲೂ) ಬದಲಾಗದೆ ಉಳಿದಿವೆ. ಇದಲ್ಲದೆ, ದಾರವಾಡ ಕನ್ನಡದಲ್ಲಿ ಎಕಾರದಲ್ಲಿ ಕೊನೆಗೊಳ್ಳುವ ಹೆಸರುಪದಗಳ ಹಾಗೆ ಎಕಾರದಲ್ಲಿ ಕೊನೆಗೊಳ್ಳುವ ಎಸಕಪದಗಳೂ ಇಕಾರದಲ್ಲಿ ಕೊನೆಗೊಳ್ಳುವವುಗಳಾಗಿ ಮಾರ‍್ಪಟ್ಟಿವೆ. ಎಂದರೆ, ಹೆಸರುಪದಗಳ ಮಟ್ಟಿಗೆ ಕೊಳ್ಳೇಗಾಲದೊಂದಿಗೆ ಸೇರುವ ನಂಜನಗೂಡಿನ ಕನ್ನಡ ಎಸಕಪದಗಳ ಮಟ್ಟಿಗೆ ದಾರವಾಡ ಕನ್ನಡದೊಂದಿಗೆ ಸೇರುತ್ತದೆ.

ಒಂದು ಊರಿನಿಂದ ಇನ್ನೊಂದು ಊರಿಗೆ ಆಡುಗನ್ನಡದಲ್ಲಿ ತೋರಿಬರುವ ವ್ಯತ್ಯಾಸಗಳ ಹಿಂದೆ ಈ ರೀತಿ ಹಲವು ಕಟ್ಟಲೆಗಳಿವೆ ಮಾತ್ರವಲ್ಲ, ಅವುಗಳಿಗೊಂದು ನಿಶ್ಚಿತವಾದ ಹರವೂ ಇದೆ. ಎತ್ತುಗೆಗಾಗಿ, ಪದಗಳ ಮೊದಲಿಗೆ ಬರುವ ಹಕಾರ ಬಿದ್ದುಹೋಗುತ್ತದೆಯೆಂಬ ಕಟ್ಟಲೆಯನ್ನು ಗಮನಿಸಬಹುದು. ಮಯ್ಸೂರು ಜಿಲ್ಲೆಯ ಹುಣಸೂರಿನಲ್ಲಿ ಹಕ್ಕಿ ಎಂದು ಹೇಳುವುದಕ್ಕೆ ನಂಜನಗೂಡಿನಲ್ಲಿ ಅಕ್ಕಿ ಎನ್ನುತ್ತಾರೆ; ಹುಣಸೂರಿನ ಹಾಲು ನಂಜನಗೂಡಿನಲ್ಲಿ ಆಲು ಎಂದಾಗುತ್ತದೆ; ಹಂಬು ಎಂಬುದು ಅಂಬು ಎಂದಾಗುತ್ತದೆ, ಹಾವು ಎಂಬುದು ಆವು ಎಂದಾಗುತ್ತದೆ. ಪದಗಳ ಮೊದಲಿಗೆ ಬರುವ ಹಕಾರಗಳೆಲ್ಲ ನಂಜನಗೂಡಿನ ಕನ್ನಡದಲ್ಲಿ ಬಿದ್ದುಹೋಗಿವೆ ಎಂಬ ಕಟ್ಟಲೆ ಈ ವ್ಯತ್ಯಾಸದ ಹಿಂದೆ ಅಡಗಿದೆ.

ಹಕಾರ ಬಿದ್ದುಹೋಗುವ ಈ ಮಾರ‍್ಪಾಡಿಗೆ ಒಂದು ನಿಶ್ಚಿತವಾದ ಹರವೂ ಇದೆ. ಹುಣಸೂರು, ಕೆ.ಆರ್.ನಗರ ಮತ್ತು ಪಿರಿಯಾಪಟ್ಟಣಗಳಲ್ಲಿ ಪದಗಳ ಮೊದಲಿಗೆ ಬರುವ ಹಕಾರವನ್ನು ಜನರು ಸರಿಯಾಗಿಯೇ ಉಲಿಯುತ್ತಾರೆ. ಹುಣಸೂರು ಬಿಟ್ಟು ಹೆಗ್ಗಡದೇವನ ಕೋಟೆಗೆ ಹೋದೆವಾದರೆ, ಅಲ್ಲಿ ಇಂತಹ ಹಕಾರಗಳೆಲ್ಲ ಬಿದ್ದುಹೋಗಿರುವುದನ್ನು ಕಾಣಬಹುದು. ಮುಂದೆ ಗುಂಡ್ಲುಪೇಟೆ, ಚಾಮರಾಜನಗರ, ತಿ.ನರಸೀಪುರ, ನಂಜನಗೂಡು, ಕೊಳ್ಳೇಗಾಲ ಮೊದಲಾದ ಕಡೆಗಳಲ್ಲೂ ಹಕಾರ ಹೀಗೆ ಬಿದ್ದುಹೋಗಿದೆ.

ಈ ರೀತಿ ಪದಗಳ ಮೊದಲಿನ ಹಕಾರ ಎಲ್ಲೆಲ್ಲ ಬಿದ್ದುಹೋಗಿದೆ ಮತ್ತು ಎಲ್ಲೆಲ್ಲ ಬಿದ್ದುಹೋಗಿಲ್ಲ ಎಂಬುದನ್ನು ಹಳ್ಳಿಯಿಂದ ಹಳ್ಳಿಗೆ ಸುತ್ತಾಡಿ ತಿಳಿದುಕೊಂಡು ಬಂದೆವಾದರೆ, ಮಯ್ಸೂರಿನ ನಕಾಶೆಯಲ್ಲಿ ಒಂದು ‘ಹಕಾರದ ಗೆರೆ’ಯನ್ನು ಎಳೆಯಲು ಸಾದ್ಯವಾದೀತು. ಈ ಗೆರೆ ನಂಜನಗೂಡು ಮತ್ತು ಹುಣಸೂರುಗಳ ನಡುವೆ ಹೆಗ್ಗಡದೇವನ ಕೋಟೆಯ ಪಡುವ ದಿಕ್ಕಿಗಾಗಿ ಹಾಯ್ದೀತು.

ಈ ಹಕಾರದ ಗೆರೆಗೆ ಬೇರೆಯೂ ಕೆಲವು ಕಟ್ಟುಗಳಿವೆ. ಎತ್ತುಗೆಗಾಗಿ, ಮಯ್ಸೂರು ಜಿಲ್ಲೆಯ ಬ್ರಾಹ್ಮಣರ ಆಡುನುಡಿಯಲ್ಲಿ ಹಕಾರ ಎಲ್ಲಿಯೂ (ನಂಜನಗೂಡು, ಕೊಳ್ಳೇಗಾಲ, ಚಾಮರಾಜಪುರ, ತಿ.ನರಸೀಪುರ ಮೊದಲಾದ ಕಡೆಗಳಲ್ಲೂ) ಬಿದ್ದುಹೋಗಿಲ್ಲ. ಹಾಗಾಗಿ ಈ ಹಕಾರದ ಗೆರೆ ಮಯ್ಸೂರು ಜಿಲ್ಲೆಯನ್ನು ಉದ್ದಕ್ಕೆ ಮಾತ್ರವಲ್ಲದೆ ನೆಟ್ಟಗೂ ಕತ್ತರಿಸುತ್ತದೆಯೆಂದು ಹೇಳಬೇಕಾಗುತ್ತದೆ. ಆಡುನುಡಿಗಳ ನಡುವೆ ಕಾಣಿಸುವ ವ್ಯತ್ಯಾಸಗಳಿಗೆ ಇಂತಹ ಊರಿನ ಮತ್ತು ಜಾತಿಯ ಕಟ್ಟುಗಳು ಮಾತ್ರವಲ್ಲದೆ ಸಮಯದ ಕಟ್ಟೂ ಇದೆಯೆಂದು ಹೇಳಬಹುದು.

ಯಾಕೆಂದರೆ, ಎರಡು ಬೇರೆ ಬೇರೆ ಸಮಯಗಳಲ್ಲಿ ಬಳಕೆಯಲ್ಲಿದ್ದ ಆಡುನುಡಿಗಳ ನಡುವಿರುವ ವ್ಯತ್ಯಾಸಗಳ ಹಿಂದೆಯೂ ಮೇಲೆ ವಿವರಿಸಿದಂತಹ ಕಟ್ಟಲೆಗಳೇ ಕಾಣಿಸುತ್ತವೆ. ಎತ್ತುಗೆಗಾಗಿ, ಹಳೆಗನ್ನಡದ ಪಾಲ್ ಪದ ಹೊಸಗನ್ನಡದಲ್ಲಿ ಹಾಲು ಎಂಬುದಾಗಿ ಕಾಣಿಸುತ್ತದೆ; ಪಣ್ ಪದ ಹಣ್ಣು ಎಂಬುದಾಗಿ, ಪಲ್ ಪದ ಹಲ್ಲು ಎಂಬುದಾಗಿ ಮತ್ತು ಪುಲ್ ಪದ ಹುಲ್ಲು ಎಂಬುದಾಗಿ ಕಾಣಿಸುತ್ತದೆ. ಹಳೆಗನ್ನಡದ ಪದಗಳ ಮೊದಲಿಗಿದ್ದ ಪಕಾರಗಳೆಲ್ಲವೂ ಈ ರೀತಿ ಹೊಸಗನ್ನಡದಲ್ಲಿ ಹಕಾರಗಳಾಗಿ ಕಾಣಿಸಿಕೊಳ್ಳುತ್ತವೆ. ಹಳೆಗನ್ನಡ ಮತ್ತು ಹೊಸಗನ್ನಡಗಳ ನಡುವಿನ ವ್ಯತ್ಯಾಸವೊಂದನ್ನು ವಿವರಿಸುವ ಈ ಕಟ್ಟಲೆ ಮಯ್ಸೂರಿನ ಆಡುನುಡಿಗಳ ನಡುವಿನ ವ್ಯತ್ಯಾಸವೊಂದನ್ನು ವಿವರಿಸುವ ಹಕಾರದ ಕಟ್ಟಲೆಯ ಹಾಗೆಯೇ ಇದೆ.

ಆಡುನುಡಿಗಳ ನಡುವೆ ಕಾಣಿಸುವ ಇಂತಹ ವ್ಯತ್ಯಾಸಗಳು ಪದಗಳ ವ್ಯತ್ಯಾಸಗಳಲ್ಲ, ಉಲಿಗಳ ವ್ಯತ್ಯಾಸಗಳು ಎಂಬುದನ್ನು ಗಮನಿಸುವುದು ಅವಶ್ಯ. ಪದಗಳ ಮೊದಲಿನ ಪಕಾರ ಹಕಾರವಾಗುವ ಕಟ್ಟಲೆ ಹಳೆಗನ್ನಡದಲ್ಲಿ ಅಂತಹ ಪಕಾರವಿರುವ ಎಲ್ಲಾ ಎಂದರೆ ಸಾವಿರಕ್ಕೂ ಹೆಚ್ಚು ಪದಗಳನ್ನು ಮಾರ‍್ಪಡಿಸಿದೆ. ಇವತ್ತು ಈ ಕಟ್ಟಲೆಗೆ ಹೊರಪಡಿಕೆಗಳಾಗಿ ಕಾಣಿಸುವ ಪಾಲು, ಪಾರೆ, ಪೂನು ಮೊದಲಾದ ಪದಗಳು ಹಿಂದಿನ ಬರಹಗಳಿಂದ ಇಲ್ಲವೇ ಮಾರ‍್ಪಡದ ಆಡುನುಡಿಗಳಿಂದ ಎರವಲಾಗಿ ಪಡೆದ ಪದಗಳಲ್ಲದೆ ನಿಜಕ್ಕೂ ಆ ಕಟ್ಟಲೆಗೆ ಹೊರಪಡಿಕೆಗಳಲ್ಲ.

ಒಂದು ತಲೆಮಾರಿನ ಮಕ್ಕಳು ತಮ್ಮ ತಾಯ್ನುಡಿಯನ್ನು ತಮ್ಮದಾಗಿಸಿಕೊಳ್ಳುವ ಸಮಯದಲ್ಲಿ ಇಂತಹ ಮಾರ‍್ಪಾಡುಗಳು ಅವರು ಪಡೆಯುವ ಆಡುನುಡಿಯಲ್ಲಿ ನಡೆದುಹೋಗುತ್ತವೆಯೆಂದು ತೋರುತ್ತದೆ. ಈ ಮಕ್ಕಳ ನಡುವೆ ಯಾವ ರೀತಿಯ ಜಾತಿ, ಜಾಗ ಮೊದಲಾದ ಕಟ್ಟುಗಳಿದ್ದುವೋ ಅವು ಈ ಮಾರ‍್ಪಾಡುಗಳ ಹರವನ್ನು ನಿರ‍್ದರಿಸುತ್ತವೆ.

ನುಡಿಗಳಲ್ಲಿ ನಡೆಯುವ ಇಂತಹ ಕಟ್ಟುನಿಟ್ಟಾದ ಉಲಿಗಳ ಮಾರ‍್ಪಾಡುಗಳು ನುಡಿಗಳ ಹಿನ್ನಡವಳಿ(ಚರಿತ್ರೆ)ಯನ್ನು ತಿಳಿಯುವಲ್ಲಿ ಹೆಚ್ಚಿನ ನೆರವನ್ನು ನೀಡುತ್ತವೆ. ಒಂದು ಮೂಲ ನುಡಿಯಿಂದ ಹಲವಾರು ನುಡಿಗಳು ಯಾವ ರೀತಿಯಲ್ಲಿ ಕವಲೊಡೆದು ಬೇರೆ ಬೇರಾಗಿವೆ ಎಂಬುದನ್ನು ಮುಕ್ಯವಾಗಿ ಆ ನುಡಿಗಳಲ್ಲಿ ನಡೆದಿರುವ ಇಂತಹ ಕಟ್ಟುನಿಟ್ಟಾದ ಉಲಿಗಳ ಮಾರ‍್ಪಾಡುಗಳ ನೆರವಿನಿಂದ ತೀರ‍್ಮಾನಿಸಲಾಗುತ್ತದೆ.

(ಈ ಬರಹ ವಿಜಯ ಕರ‍್ನಾಟಕ ಸುದ್ದಿಹಾಳೆಯ ’ಎಲ್ಲರ ಕನ್ನಡ’ ಅಂಕಣದಲ್ಲಿ ಮೊದಲು ಮೂಡಿಬಂದಿತ್ತು)

ಮೂಲ : ಹೊನಲು

ಮಂಗಗಳು ಯಾಕೆ ಮಾತನಾಡಲಾರವು

ಮಂಗಗಳಿಗೆ ಮಾತನ್ನು ಕಲಿಸಬೇಕೆಂದು ಪ್ರಯತ್ನಿಸುವವರು ಅದಕ್ಕಾಗಿ ಉಲಿಗಳನ್ನು ಬಳಸುವುದಿಲ್ಲ. ಯಾಕೆಂದರೆ, ಮಂಗಗಳು ಎರಡು ಮೂರು ಉಲಿಗಳನ್ನಶ್ಟೇ ಉಲಿಯಬಲ್ಲುವು. ಆದರೆ, ಒಂದು ನುಡಿಯಲ್ಲಿ ಮಾತನಾಡಬೇಕೆಂದಿದ್ದಲ್ಲಿ, ಅದಕ್ಕಾಗಿ ಹಲವಾರು ಉಲಿಗಳನ್ನು ಉಲಿಯಲು ತಿಳಿದಿರಬೇಕಾಗುತ್ತದೆ. ಎತ್ತುಗೆಗಾಗಿ, ಕನ್ನಡದಲ್ಲಿ ನುಡಿಯಲು ಹೆಚ್ಚುಕಡಿಮೆ ಮೂವತ್ತೊಂದು ಉಲಿಗಳು ಬೇಕಾಗುತ್ತವೆ. ಹಾಗಾಗಿ, ಮಂಗಗಳಿಗೆ ಮಾತನ್ನು ಕಲಿಸುವವರು ಉಲಿಗಳ ಬದಲು ಸನ್ನೆಗಳನ್ನು ಬಳಸಬೇಕಾಗಿದೆ.

ನಮಗಿರುವಂತಹ ನೂರಾರು ಉಲಿಗಳನ್ನು ಉಲಿಯುವ ಅಳವು ಮಂಗಗಳಿಗಿಲ್ಲದಿರಲು ನಮ್ಮ ಬಾಯಿಯ ರಚನೆಗೂ ಮಂಗಗಳ ಬಾಯಿಯ ರಚನೆಗೂ ನಡುವಿರುವ ವ್ಯತ್ಯಾಸವೇ ಮುಕ್ಯ ಕಾರಣ. ಮಂಗಗಳ ಬಾಯಿಯ ಬುಡದಲ್ಲೇನೇ ದಪ್ಪವಾದ ಎಲುಬಿರುವ ಎಪಿಗ್ಲೋಟಿಸ್ ಎಂಬ ಅಂಗವಿದೆ. ಮೂಗಿನಿಂದ ಶ್ವಾಸಕೋಶದೊಳಕ್ಕೆ ಉಸಿರು ನೇರವಾಗಿ ಹೋಗುವಂತೆ ಇದು ನೋಡಿಕೊಳ್ಳುತ್ತದೆ; ತಿನ್ನುವ ಸಮಯದಲ್ಲಿ ಈ ಅಂಗ ಉಸಿರಿನ ನಾಳವನ್ನು ಪೂರ‍್ತಿ ಮುಚ್ಚಿಬಿಡುತ್ತದೆ, ಮತ್ತು ತಿಂದ ತಿಂಡಿ ನೇರವಾಗಿ ಹೊಟ್ಟೆಗೆ ಹೋಗುವಂತೆ ಮಾಡುತ್ತದೆ. ಆದರೆ, ನಮ್ಮ ಬಾಯಿಯಲ್ಲಿರುವ ಎಪಿಗ್ಲೋಟಿಸ್‌ಗೆ ಈ ಕಸುವಿಲ್ಲ. ಯಾಕೆಂದರೆ, ಅದರೊಳಗೆ ಮಂಗನ ಎಪಿಗ್ಲೋಟಿಸ್‌ನಲ್ಲಿರುವ ಹಾಗೆ ದಪ್ಪವಾದ ಎಲುಬಿಲ್ಲ.

ಇದಲ್ಲದೆ, ಈ ಅಂಗ ನಮ್ಮ ಗಂಟಲಿನಲ್ಲಿ ಬಹಳ ಕೆಳಗೆ ಉಲಿಪೆಟ್ಟಿಗೆಯ ಹತ್ತಿರ ಇದೆ. ಈ ಕಾರಣಕ್ಕಾಗಿ, ಕೆಲವೊಮ್ಮೆ ನಾವು ತಿಂದ ತಿಂಡಿ ನೇರವಾಗಿ ಹೊಟ್ಟೆಯೊಳಕ್ಕೆ ಹೋಗುವ ಬದಲು ಉಲಿಪೆಟ್ಟಿಗೆಯಿರುವಲ್ಲಿಗೆ ಹೋಗಿ ನಮಗೆ ಉಸಿರುಕಟ್ಟಿದ ಹಾಗಾಗುತ್ತದೆ. ಇದರಿಂದಾಗಿ ಕೆಲವು ಮಂದಿ ಸತ್ತು ಹೋಗುವುದೂ ಇದೆ. ಮಾತಿಗೆ ಬೇಕಾಗುವ ಹಲವಾರು ಉಲಿಗಳನ್ನು ಉಂಟುಮಾಡಲು ಬಾಯಿಯಲ್ಲಿ ಹೆಚ್ಚು ಜಾಗ ಬೇಕಾಗುತ್ತದೆಯೆಂಬ ಒಂದೇ ಕಾರಣಕ್ಕಾಗಿ, ಹೀಗೆ ನಮ್ಮ ಬಾಯಿಯಲ್ಲಿ ಉಸಿರುನಾಳ ಮತ್ತು ಆಹಾರನಾಳಗಳನ್ನು ಬೇರ‍್ಪಡಿಸುವ ಜಾಗ ತುಂಬಾ ಅಪಾಯಕರವಾದ ರೀತಿಯಲ್ಲಿ ರಚಿತವಾಗಿದೆ.

ಉಲಿಗಳ ಬದಲು ಕಯ್ಸನ್ನೆ, ಕಣ್ಣುಸನ್ನೆ ಮೊದಲಾದವುಗಳನ್ನು ಬಳಸಿಯೂ ‘ಮಾತ’ನಾಡಲು ಬರುತ್ತದೆ ಎಂಬುದನ್ನು ಕಿವುಡರ ಸನ್ನೆನುಡಿ ತೋರಿಸಿಕೊಟ್ಟಿದೆ; ಮಂಗಗಳು ಇಂತಹ ಸನ್ನೆಗಳನ್ನು ಬಳಸಬಲ್ಲುವಾದರೂ ಬೇರೆ ಕೆಲವು ಕಾರಣಗಳಿಗಾಗಿ ಅವಕ್ಕೆ ನಮ್ಮ ಹಾಗೆ ಮಾತನ್ನು ಇಲ್ಲವೇ ನುಡಿಯನ್ನು ಬಳಸಲು ಸಾದ್ಯವಾಗದು. ಎತ್ತುಗೆಗಾಗಿ, ಮಾತನ್ನು ಮತ್ತು ಅದಕ್ಕೆ ಬೇಕಾಗುವ ಸಾವಿರಾರು ಪದಗಳನ್ನು ಮತ್ತು ಸೊಲ್ಲರಿಮೆಯ ಕಟ್ಟಲೆಗಳನ್ನು ಇರಿಸಿಕೊಳ್ಳಲು, ಮತ್ತು ಬೇಕಾದಾಗ ಬೇಕಾದಂತೆ ಅವನ್ನು ಬಳಸಿಕೊಳ್ಳಲು ಮಿದುಳು ಸಾಕಶ್ಟು ದೊಡ್ಡದಾಗಿರಬೇಕಾಗುತ್ತದೆ; ಆದರೆ, ಮಂಗಗಳಿಗಿರುವ ಮಿದುಳು ನಮ್ಮ ಮಿದುಳಿನ ಕಾಲಂಶದಶ್ಟೂ ಇಲ್ಲ.

ಮಾನವನಿಗೂ ಇತರ ಪ್ರಾಣಿಗಳಿಗೂ ನಡುವೆ ಒಂದು ಮಾತನ್ನು ಯಾವಾಗ ಮತ್ತು ಎಲ್ಲಿ ಬಳಸಲು ಸಾದ್ಯ ಎಂಬ ವಿಶಯದಲ್ಲಿ ದೊಡ್ಡ ವ್ಯತ್ಯಾಸವಿದೆ. ಶಾಲೆಯಿಂದ ಬಂದ ಹುಡುಗ ಆವತ್ತು ಶಾಲೆಯಲ್ಲಿ ಏನೆಲ್ಲ ನಡೆಯಿತು ಎಂಬುದನ್ನು ತನ್ನ ತಾಯಿಗೆ ಹೇಳಬಲ್ಲ; ಮಾರನೆಯ ದಿವಸ ತನ್ನ ತರಗತಿಗೆ ಯಾರು ಬರಲಿದ್ದಾರೆ, ಅದಕ್ಕಾಗಿ ತಾನು ಏನು ಮಾಡಬೇಕು ಎಂಬುದನ್ನೂ ತಿಳಿಸಬಲ್ಲ; ತನ್ನ ಗೆಳೆಯ ಈಗ ತನ್ನ ಮನೆಯಲ್ಲಿ ಏನು ಮಾಡುತ್ತಿರಬಹುದು ಎಂಬುದನ್ನೂ ಕಲ್ಪಿಸಿ ಹೇಳಬಲ್ಲ. ಬೇರೆ ಪ್ರಾಣಿಗಳು ಇದೊಂದನ್ನೂ ಮಾಡಲಾರವು.

ಬೆಕ್ಕು ಹಸಿವಾದಾಗ ಮಾತ್ರ ಮಿಯಾಂ ಎನ್ನಬಹುದಲ್ಲದೆ ತನಗೆ ಬೆಳಿಗ್ಗೆ ಹಸಿವಾಗಿತ್ತು ಎಂಬುದನ್ನು ಸೂಚಿಸಲಾರದು. ಜೇನುಹುಳುಗಳು ಮಾತ್ರ ಇದಕ್ಕೆ ಸ್ವಲ್ಪಮಟ್ಟಿಗಿನ ಹೊರಪಡಿಕೆಗಳಾಗಿವೆಯೆಂದು ಹೇಳಬಹುದು; ಅವು ತುಂಬಾ ಹೂಬಿಟ್ಟಿರುವ ಮರವೊಂದನ್ನು ನೋಡಿ ಗೂಡಿಗೆ ಮರಳಿ ಬಂದ ಮೇಲೆ ಅದು ಎಲ್ಲಿದೆಯೆಂಬುದನ್ನು ಉಳಿದ ಜೇನುಹುಳುಗಳಿಗೆ ತಮ್ಮ ಕುಣಿತದ ಮೂಲಕ ತಿಳಿಸಬಲ್ಲುವು. ಆದರೆ, ಅವುಗಳ ಈ ಕಸುವಿಗೂ ಒಂದು ಮಿತಿಯಿದೆ: ಅವು ನಮ್ಮ ಹಾಗೆ ಮುಂದೆ ಏನು ನಡೆಯಬಹುದೆಂಬುದನ್ನು ಊಹಿಸಿ ತಿಳಿಸಲಾರವು.

ಮಾತನ್ನು ಬಳಸಲು ನಮಗೆ ಹೊರಗಿನ ಉತ್ತೇಜನ ಬೇಕಾಗಿಲ್ಲ. ಕೋಪ ಬರದಿದ್ದರೂ ಕೋಪದಿಂದ ಮಾತನಾಡಬಲ್ಲೆವು; ಹೋಳಿಗೆಯನ್ನು ತಿನ್ನದಿದ್ದರೂ ಅದರ ಸವಿಯನ್ನು ತಿಂದವನ ಹಾಗೆ ವರ‍್ಣಿಸಬಲ್ಲೆವು; ಸ್ವರ‍್ಗ ನರಕಗಳನ್ನು ಕಾಣದಿದ್ದರೂ ಅಲ್ಲಿ ಏನೆಲ್ಲ ನಡೆಯುತ್ತದೆ ಎಂಬುದನ್ನು ಮನಮುಟ್ಟುವಂತೆ ವಿವರಿಸಬಲ್ಲೆವು. ಮಾನವನ ಮಾತಿನ ಬಳಕೆಯಲ್ಲಿ ಮಾತ್ರವೇ ಕಾಣಿಸುವ ಈ ಕಾಲ ಮತ್ತು ಜಾಗಗಳ ಕಟ್ಟಿಲ್ಲದಿರುವಿಕೆ ಅವನ ಮಾತಿಗೆ ಒಂದು ದೊಡ್ಡ ಕಸುವನ್ನು ತಂದುಕೊಟ್ಟಿದೆ. ನಮ್ಮ ಇಡೀ ಸಂಸ್ಕ್ರುತಿಯೇ ಈ ಕಸುವನ್ನು ಅವಲಂಬಿಸಿದೆ. ಅದಿಲ್ಲದೆ ನಾವು ಯಾವ ಸಂಶೋದನೆಯನ್ನೂ ಮಾಡಲಾರೆವು; ಸಾಹಿತ್ಯ, ನಾಟಕ, ಸಿನೆಮಾ, ಮೊದಲಾದ ನಮ್ಮ ಸಂಸ್ಕ್ರುತಿಯ ಯಾವ ಅಂಶವೂ ಅದಿಲ್ಲದೆ ಬೆಳೆದಿರಲಾರದು.

ಸಾಮಾನ್ಯವಾಗಿ, ನಾವು ನಡೆಸುವ ಹಲವಾರು ಬಗೆಯ ಕೆಲಸಗಳ ಕುರಿತಾಗಿರುವ ತಿಳುವಳಿಕೆಗಳು ನಮ್ಮ ಮಿದುಳಿನಲ್ಲಿ ಅರಿವಿಗೆ ಬಾರದ ರೂಪದಲ್ಲಿರುತ್ತವೆ. ಅವು ಎಂತಹವೆಂದು ನಮಗೆ ತಿಳಿಯದಿದ್ದರೂ ನಮ್ಮ ಕೆಲಸಗಳ ಮೇಲೆ ಅವುಗಳ ಕಯ್ವಾಡವಿದ್ದೇ ಇರುತ್ತದೆ. ಇಂತಹ ತಿಳುವಳಿಕೆಗಳಲ್ಲಿ ಹಲವನ್ನು ನಾವು ನಮ್ಮ ಅರಿವಿಗೆ ಬರುವಂತೆ ಮಾಡಬಲ್ಲೆವು, ಮತ್ತು ಮಾತಿನ ಮೂಲಕ ವಿವರಿಸಬಲ್ಲೆವು; ಆದರೆ ಬೇರೆ ಪ್ರಾಣಿಗಳು ಹಾಗೆ ಮಾಡಲಾರವು ಎಂಬುದು ಅವನ್ನು ನಮ್ಮಿಂದ ಬೇರ‍್ಪಡಿಸುವ ಇನ್ನೊಂದು ದೊಡ್ಡ ಪರಿಚೆಯಾಗಿದೆ.

ಈ ಪರಿಚೆ ನಮ್ಮ ಮಾತಿಗೆ ಒಂದು ದೊಡ್ಡ ಕಸುವನ್ನೂ ತಂದುಕೊಟ್ಟಿದೆ. ಎತ್ತುಗೆಗಾಗಿ, ಮನಸ್ಸಿಗೆ ಬಂದುದನ್ನು ನಾವು ಬರಬರನೆ ಉಸಿರಬಲ್ಲೆವು; ಇಲ್ಲವೇ ಅದನ್ನು ಮೊದಲಿಗೆ ನಮ್ಮ ಅರಿವಿಗೆ ತಂದುಕೊಂಡು, ಕೇಳುಗನ ಮೇಲೆ ಅದು ಎಂತಹ ಪರಿಣಾಮವನ್ನು ಬೀರಬಹುದು ಎಂಬುದನ್ನು ಆಲೋಚಿಸಿ, ಅನಂತರ ಅದನ್ನು ಆತನಿಗೆ ತಿಳಿಸಬಲ್ಲೆವು; ಇಲ್ಲವೇ ತಿಳಿಸದೆಯೂ ಇರಬಲ್ಲೆವು.

ಇತರ ಕೆಲಸಗಳಲ್ಲೂ ನಮ್ಮ ತಿಳುವಳಿಕೆಯನ್ನು ಅರಿವಿಗೆ ಬರುವಂತೆ ಮಾಡುವ ಮೂಲಕ ಆ ಕೆಲಸ ಮಾಡುವ ಕ್ರಮವನ್ನು ನಾವು ಹಲವು ರೀತಿಯಲ್ಲಿ ಬದಲಿಸಿನೋಡಬಲ್ಲೆವು ಮತ್ತು ಅದನ್ನು ಮಾಡಲು ಹೊಸ ಹೊಸ ಹೊಲಬುಗಳನ್ನು ಕಂಡುಹಿಡಿಯಬಲ್ಲೆವು. ಎತ್ತುಗೆಗಾಗಿ, ಕಣ್ಣಿನಿಂದ ಕಾಣಲು ಕಣ್ಣಿನ ಮಸೂರವನ್ನು ಹೇಗೆ ಹಿಗ್ಗಿಸುತ್ತೇವೆ ಇಲ್ಲವೇ ಕುಗ್ಗಿಸುತ್ತೇವೆ ಎಂಬುದನ್ನು ಅರಿವಿಗೆ ಎಟಕುವ ತಿಳುವಳಿಕೆಯಾಗಿ ಬದಲಿಸಿರುವ ಕಾರಣ, ಕಣ್ಣಿನ ದೋಶವನ್ನು ನಿವಾರಿಸುವುದಕ್ಕಾಗಿ ಕನ್ನಡಕವನ್ನು ಬಳಸುವ ಹೊಲಬನ್ನು ಕಂಡುಹಿಡಿಯಲು ನಮಗೆ ಸಾದ್ಯವಾಗಿದೆ.

ನಮ್ಮ ಮಾತಿನ ಬಳಕೆಯಲ್ಲೂ ಈ ಪರಿಚೆಯ ನೆರವಿನಿಂದ ಹಲವಾರು ಬಗೆಯ ಬದಲಾವಣೆಗಳನ್ನು ನಾವು ನಮ್ಮ ಜೀವನದಲ್ಲಿ ಮಾಡಿಕೊಂಡಿದ್ದೇವೆ. ಎತ್ತುಗೆಗಾಗಿ, ಈ  ಪರಿಚೆಯಿಲ್ಲದಿದ್ದಲ್ಲಿ ಮಾತನ್ನು ನಮಗೆ ಬರಹ ರೂಪಕ್ಕಿಳಿಸಲು ಆಗುತ್ತಿರಲಿಲ್ಲ. ನಮ್ಮ ನುಡಿಯಲ್ಲಿ ಬೇರೆ ಬೇರೆ ರೀತಿಯ ಅರಿಮೆಗಳ (ಶಾಸ್ತ್ರ ಮತ್ತು ವಿಜ್ನಾನಗಳ) ಬೆಳವಣಿಗೆಗಳುಂಟಾಗುವುದಕ್ಕೂ ಈ ಪರಿಚೆಯೇ ಕಾರಣ.

(ಈ ಬರಹ ವಿಜಯ ಕರ‍್ನಾಟಕ ಸುದ್ದಿಹಾಳೆಯ ’ಎಲ್ಲರ ಕನ್ನಡ’ ಅಂಕಣದಲ್ಲಿ ಮೊದಲು ಮೂಡಿಬಂದಿತ್ತು)

ಮೂಲ : ಹೊನಲು

ಕಿವುಡರ ಸನ್ನೆನುಡಿಯೂ ಒಂದು ನುಡಿಯೇ

ನಾವು ಮಾತನಾಡುವಾಗ ಉಲಿಗಳನ್ನು ಬಳಸುತ್ತೇವೆ. ಈ ಉಲಿಗಳು ಕಿವುಡರಿಗೆ ಕೇಳಿಸುವುದಿಲ್ಲವಾದ ಕಾರಣ, ಕಿವುಡರಾಗಿರುವ ಚಿಕ್ಕ ಮಕ್ಕಳು ಉಲಿಗಳಿರುವ ಮಾತುಗಳನ್ನು ಕಲಿಯಲಾರರು. ಹಾಗಾಗಿ, ದೊಡ್ಡವರಾಗುತ್ತಿರುವಂತೆ ಅಂತಹ ಮಾತುಗಳನ್ನು ಬಳಸಲೂ ಅವರಿಗೆ ಸಾದ್ಯವಾಗುವುದಿಲ್ಲ. ಹೆಚ್ಚು ಕಿವುಡಿಲ್ಲದ ಮಕ್ಕಳಿಗೆ ಚಿಕ್ಕಂದಿನಲ್ಲೇನೇ ಕೇಳಿಸುವ ಉಪಕರಣವನ್ನು ತೊಡಿಸಿದಲ್ಲಿ ಅವರೂ ಇತರ ಮಕ್ಕಳ ಹಾಗೆ ಮಾತನಾಡಲು ಕಲಿಯಬಲ್ಲರು. ಆದರೆ ಏನೂ ಕೇಳಿಸದ ಮಕ್ಕಳಿಗೆ ಹೀಗೆ ಮಾಡಲು ಸಾದ್ಯವಾಗುವುದಿಲ್ಲ. ಹೀಗಿದ್ದರೂ, ಅಂತಹ ಮಕ್ಕಳಿಗೆ ಉಲಿಗಳ ಬದಲು ಸನ್ನೆಗಳನ್ನು ಬಳಸುವ ಮಾತನ್ನು ಕಲಿಸಿದಲ್ಲಿ ಅವರು ಅದನ್ನು ಕಲಿಯಬಲ್ಲರು. ಈ ರೀತಿ ಉಲಿಗಳ ಬದಲು ಸನ್ನೆಗಳನ್ನು ಬಳಸುವ ಕಿವುಡರ ನುಡಿಯನ್ನು ಸನ್ನೆನುಡಿಯೆಂದು ಕರೆಯಬಹುದು.

ಕಿವುಡರ ಈ ಸನ್ನೆನುಡಿ ನಾವಾಡುವ ಉಲಿನುಡಿಗಿಂತ ಒಂದು ಮುಕ್ಯವಾದ ವಿಶಯದಲ್ಲಿ ಬೇರಾಗಿದೆ. ಅದು ಕಣ್ಣಿಗೆ ಕಾಣಿಸುವ ಸನ್ನೆಗಳ ನುಡಿಯಾದ ಕಾರಣ, ಅದರಲ್ಲಿ ಒಂದೇ ಬಾರಿಗೆ ಕಯ್ಸನ್ನೆ, ಕಣ್ಣುಸನ್ನೆ, ಹುಬ್ಬುಗಳ ಕುಣಿತ, ತುಟಿಗಳ ಚಲನೆ, ನಿಲ್ಲುವ ಕ್ರಮ ಮೊದಲಾದ ಹಲವು ಬಗೆಯ ಸನ್ನೆಗಳನ್ನು ಒಟ್ಟಾಗಿ ಬಳಸಿಕೊಳ್ಳಲಾಗುತ್ತದೆ. ನಮ್ಮ ಮಾತುಗಳಲ್ಲಿ ಬಳಕೆಯಾಗುವ ಉಲಿಗಳು ಒಂದರ ಅನಂತರ ಒಂದರಂತೆ ಬರಬಲ್ಲುವಲ್ಲದೆ ಹಾಗೆ ಒಟ್ಟಾಗಿ ಬರಲಾರವು. ಈ ವಿಶಯದಲ್ಲಿ ಸನ್ನೆನುಡಿಗೆ ಉಲಿನುಡಿಗಿಂತ ಹೆಚ್ಚಿನ ಕಸುವಿದೆ. ಆದರೆ, ಇನ್ನೊಂದು ವಿಶಯದಲ್ಲಿ ಉಲಿನುಡಿಗೇನೇ ಹೆಚ್ಚಿನ ಕಸುವಿದೆ; ಸನ್ನೆನುಡಿಯಲ್ಲಿ ಒಬ್ಬರು ನುಡಿದ ಮಾತನ್ನು ಇನ್ನೊಬ್ಬರು ತಿಳಿಯಬೇಕಿದ್ದಲ್ಲಿ ಅವರಿಬ್ಬರೂ ಎದುರೆದುರಿಗೇನೇ ಇರಬೇಕಾಗುತ್ತದೆ; ಆದರೆ, ಉಲಿನುಡಿಯಲ್ಲಿ ಆ ರೀತಿ ಎದುರೆದುರಿಗಿರಬೇಕಾಗಿಲ್ಲ.

ಈ ಎರಡು ವಿಶಯಗಳನ್ನು ಹೊರತುಪಡಿಸಿ, ಬೇರೆಲ್ಲಾ ವಿಶಯಗಳಲ್ಲೂ ಕಿವುಡರ ಸನ್ನೆನುಡಿಗೆ ಕಿವಿ ಕೇಳುವವರ ಉಲಿನುಡಿಯಂತಹದೇ ಕಸುವಿದೆ. ಅದರಲ್ಲಿ ಬಳಕೆಯಾಗುವ ಸನ್ನೆಗಳಿಗೆ ಉಲಿನುಡಿಯ ಉಲಿಗಳ ಹಾಗೆ ನೇರವಾದ ಅರ‍್ತವಿರುವುದಿಲ್ಲ, ಮತ್ತು ಅಂತಹ ಅರ‍್ತವಿಲ್ಲದ ಸನ್ನೆಗಳ ಮೂಲಕ ಉಲಿನುಡಿಯ ಹಾಗೆ ಸನ್ನೆನುಡಿಯಲ್ಲೂ ಸಾವಿರಾರು ಅರ‍್ತವಿರುವ ಪದಗಳನ್ನು ರಚಿಸಿಕೊಳ್ಳಲಾಗುತ್ತದೆ. ಇದಲ್ಲದೆ, ಉಲಿನುಡಿಯ ಹಾಗೆ ಸನ್ನೆನುಡಿಯಲ್ಲೂ ಬಹಳ ಸಿಕ್ಕಲು ಸಿಕ್ಕಲಾದ ನೂರಾರು ಸೊಲ್ಲರಿಮೆಯ ಕಟ್ಟಲೆಗಳನ್ನು ಬಳಸಲಾಗುತ್ತದೆ. ಅವುಗಳ ಮೂಲಕ ಎಂತಹ ವಿಶಯವನ್ನು ಬೇಕಿದ್ದರೂ ಸನ್ನೆನುಡಿಯಲ್ಲಿ ತಿಳಿಸಿ ಹೇಳಲು ಬರುತ್ತದೆ.

ಆದರೆ ಒಂದೇ ಸಮಾಜದಲ್ಲಿ ಬಳಕೆಯಾಗುವ ಉಲಿನುಡಿಯ ಕಟ್ಟಲೆಗಳಿಗೂ ಸನ್ನೆನುಡಿಯ ಕಟ್ಟಲೆಗಳಿಗೂ ನಡುವೆ ಯಾವ ಸಂಬಂದವೂ ಇರುವುದಿಲ್ಲ. ಅವೆರಡು ಒಂದಕ್ಕಿಂತ ಒಂದು ತೀರಾ ಬೇರಾಗಿರುತ್ತವೆ. ಎತ್ತುಗೆಗಾಗಿ, ಅಮೆರಿಕಾದ ಕಿವುಡರು ಬಳಸುವ ಸನ್ನೆನುಡಿಗಿರುವ ಸೊಲ್ಲರಿಮೆಯ ಕಟ್ಟಲೆಗಳು ಅಲ್ಲಿ ಇತರರು ಬಳಸುವ ಇಂಗ್ಲಿಶ್ ನುಡಿಯ ಕಟ್ಟಲೆಗಳಿಗಿಂತ ತೀರ ಬೇರಾಗಿವೆ. ಇಂಗ್ಲಿಶ್ ನುಡಿಯಲ್ಲಿ ಬಳಕೆಯಾಗುವ ಪದಗಳಿಗೆ ಹೆಚ್ಚು ಸಿಕ್ಕಲಾದ ರೂಪಾವಳಿಗಳಿಲ್ಲ. ಆದರೆ, ಅಮೆರಿಕಾದ ಸನ್ನೆನುಡಿಯಲ್ಲಿ ಬಳಕೆಯಾಗುವ ಪದಗಳಿಗೆ ಬಹಳ ಸಿಕ್ಕಲಾದ ರೂಪಾವಳಿಗಳಿವೆ. ಅವುಗಳಲ್ಲಿ ಬರುವ ಎಸಕ(ಕ್ರಿಯಾ)ಪದಗಳ ರೂಪಗಳಿಂದ ಒಂದು ಇಡೀ ಸೊಲ್ಲಿನಲ್ಲಿ ಬರುವ ವಿಶಯಗಳೆಲ್ಲವನ್ನೂ ಸೂಚಿಸಲು ಬರುತ್ತದೆ: ಒಂದು ಕೆಲಸವನ್ನು ಮಾಡಿದವನು, ಅದರಿಂದ ತೊಂದರೆಗೊಳಗಾದವನು, ಆ ಕೆಲಸಕ್ಕೆ ಬಳಸಿದ ವಸ್ತು, ಸಮಯ, ಜಾಗ ಮೊದಲಾದ ಹಲವು ವಿಶಯಗಳನ್ನು ಅಂತಹ ಒಂದೇ ಒಂದು ಎಸಕರೂಪದೊಳಗೆ ಹಿಡಿಸಲು ಬರುತ್ತದೆ.

ಇದಲ್ಲದೆ, ಅಮೆರಿಕಾದ ಈ ಸನ್ನೆನುಡಿಯಲ್ಲಿ ಪದಗಳನ್ನು ಜೋಡಿಸಿ ಸೊಲ್ಲುಗಳನ್ನಾಗಿ ಮಾಡುವ ಬಗೆ ಇಂಗ್ಲಿಶ್ ನುಡಿ ಬಳಸುವ ಹೊಲಬಿಗಿಂತ ತೀರ ಬೇರಾಗಿದೆ: ಅದರಲ್ಲಿ ಒಂದು ವಿಶಯವನ್ನು ಮೊದಲು ತಿಳಿಸಿ, ಅದರ ಕುರಿತಾಗಿ ಹೇಳಬೇಕಾಗಿರುವುದನ್ನು ಆಮೇಲೆ ಹೇಳಲಾಗುತ್ತದೆ; ಎತ್ತುಗೆಗಾಗಿ, ಆ ನುಡಿಯ ಒಂದು ಸೊಲ್ಲು ‘ಮನೆ, ನಾನು ಹೋಗುತ್ತೇನೆ’ ಎಂದಿರಬಲ್ಲುದು, ಮತ್ತು ಇನ್ನೊಂದು ‘ಹಣ್ಣು, ನಾನು ತಿಂದಿದ್ದೇನೆ’ ಎಂದಿರಬಲ್ಲುದು. ಇವುಗಳಲ್ಲಿ ಯಾವುದರ ಕುರಿತಾಗಿ ಮಾತನಾಡಬೇಕಾಗಿದೆ ಎಂಬುದನ್ನು (‘ಮನೆ’ ಇಲ್ಲವೇ ‘ಹಣ್ಣು’ ಎಂಬುದನ್ನು) ಮೊದಲು ತಿಳಿಸಲಾಗಿದೆ, ಮತ್ತು ಆಮೇಲೆ ಅದರ ಕುರಿತಾಗಿ ಏನು ಹೇಳಬೇಕಾಗಿದೆಯೋ ಅದನ್ನು ಹೇಳಲಾಗಿದೆ.

ಅಮೆರಿಕಾದ ಈ ಸನ್ನೆನುಡಿಯಲ್ಲಿ ಪದಗಳು ಸನ್ನೆರೂಪದಲ್ಲಿದ್ದು, ಅವುಗಳಿಗೆ ಸೇರಿಸಬೇಕಾಗಿರುವ ಒಟ್ಟು(ಪ್ರತ್ಯಯ)ಗಳು ಚಲನೆಗಳ ರೂಪದಲ್ಲಿರುತ್ತವೆ. ಅದರಲ್ಲಿ ಬಳಕೆಯಾಗುವ ಕಟ್ಟಲೆಗಳು ಆ ದೇಶದ ಬುಡಕಟ್ಟಿನ ಜನಾಂಗಗಳಲ್ಲಿ ಬಳಕೆಯಲ್ಲಿರುವ ಹೋಪಿ, ನವಹೋ ಮೊದಲಾದ ಕೆಲವು ಉಲಿನುಡಿಗಳ ಕಟ್ಟಲೆಗಳನ್ನು ಹೋಲುತ್ತವೆ. ಈ ಸನ್ನೆನುಡಿಯಲ್ಲಿ ಈಗಾಗಲೇ ಕತೆ, ಕವಿತೆ, ನಾಟಕ, ಪ್ರಬಂದ ಮೊದಲಾದುವನ್ನು ರಚಿಸಲಾಗಿದೆ. ಕಣ್ಣಿಗೆ ಕಾಣಿಸುವಂತಹ ಕಯ್ಸನ್ನೆ, ಕಯ್ಯ ಚಲನೆ, ಹುಬ್ಬಿನ ಕುಣಿತ, ಮೋರೆಯಲ್ಲಿ ಕಾಣಿಸುವ ಅನಿಸಿಕೆಗಳು ಮೊದಲಾದ ಉಲಿನುಡಿಗಳಿಗಿಂತ ತೀರ ಬೇರಾಗಿರುವ ಅಂಶಗಳನ್ನು ಈ ನುಡಿಗಳು ಬಳಸುವುವಾದ ಕಾರಣ, ಸಾಹಿತ್ಯ ರಚನೆಯಲ್ಲಿ ಅವುಗಳಿಗಿರುವ ಕಸುವು ಉಲಿನುಡಿಗಳ ಕಸುವಿಗಿಂತ ತೀರ ಬೇರಾದುದಾಗಿದೆ.

ಎಲ್ಲಾ ಸಮಾಜಗಳಲ್ಲಿರುವ ಕಿವುಡರೂ ಸನ್ನೆನುಡಿಯನ್ನು ಬಳಸಲು ಕಲಿತಿರುವುದಿಲ್ಲ. ಇದಕ್ಕೆ ಕಾರಣವೇನೆಂದರೆ, ಆ ರೀತಿ ಕಲಿಯಲು ಹಲವು ಮಂದಿ ಕಿವುಡು ಮಕ್ಕಳು ಚಿಕ್ಕಂದಿನಲ್ಲಿ ಒಟ್ಟಿಗೆ ವಾಸಿಸುತ್ತಿರುವುದು ಅವಶ್ಯ. ಬೇರೆ ಬೇರಾಗಿ ಉಲಿನುಡಿಯನ್ನು ಬಳಸುವ ತಾಯಿತಂದೆಯರೊಂದಿಗೆ ಮತ್ತು ಒಡಹುಟ್ಟಿದವರೊಂದಿಗೆ ಬೆಳೆಯುವ ಕಿವುಡು ಮಗುವಿಗೆ ಸನ್ನೆನುಡಿಯನ್ನು ಕಲಿಯಲು ಸಂದರ‍್ಬವೇ ಸಿಗುವುದಿಲ್ಲ. ಕಿವುಡರಿಗೇನೇ ಬೇರೆ ಶಾಲೆಗಳನ್ನು ತೆರೆದು ಕಿವುಡು ಮಕ್ಕಳು ಚಿಕ್ಕಂದಿನಲ್ಲೇನೇ ಒಟ್ಟಿಗೆ ಬೆಳೆಯುವಂತೆ ಮಾಡಿದಲ್ಲಿ ಅವರು ತಮ್ಮೊಳಗೆ ಸನ್ನೆನುಡಿಯನ್ನು ಬಳಸಲು ಕಲಿತುಕೊಳ್ಳಬಲ್ಲರು ಮತ್ತು ಅದರ ಮೂಲಕ ಅವರ ಜೀವನ ಹೆಚ್ಚು ಅರ‍್ತವತ್ತಾಗಬಲ್ಲುದು.

ಚಿಕ್ಕಂದಿನಲ್ಲೇನೇ ಈ ರೀತಿ ಕಿವುಡು ಮಕ್ಕಳು ಒಟ್ಟಿಗೆ ಬೆಳೆಯುವಂತೆ ಮಾಡಿದಲ್ಲಿ ಅವರು ತಾವಾಗಿಯೇ ತಮಗೊಂದು ಸನ್ನೆನುಡಿಯನ್ನು ಉಂಟುಮಾಡಿಕೊಳ್ಳಬಲ್ಲರು ಎಂಬುದನ್ನು ನಿಕಾರಗುವಾದ ಕಿವುಡು ಮಕ್ಕಳು ತೋರಿಸಿಕೊಟ್ಟಿದ್ದಾರೆ. ಆ ನಾಡಿನಲ್ಲಿ ಒಂದು ಕಿವುಡು ಮಕ್ಕಳ ಶಾಲೆಯನ್ನು ೧೯೮೧ರಲ್ಲಿ ಹೊಸದಾಗಿ ತೆರೆಯಲಾಗಿತ್ತು; ಅಲ್ಲಿದ್ದ ದೊಡ್ಡ ಮಕ್ಕಳು ತಮ್ಮ ನಡುವೆ ಕೆಲವು ಸನ್ನೆಗಳನ್ನು ಬಳಸುತ್ತಿದ್ದರಾದರೂ ಅವುಗಳ ಹಿಂದೆ ನಿಶ್ಚಿತವಾದ ಕಟ್ಟಲೆಗಳಿರಲಿಲ್ಲ. ಹಾಗಾಗಿ, ಅದನ್ನೊಂದು ಸನ್ನೆನುಡಿ ಎನ್ನಲು ಬರುವಂತಿರಲಿಲ್ಲ.

ಅದರೆ, ಅವರೊಂದಿಗೆ ಬೆಳೆಯುತ್ತಿದ್ದ ಚಿಕ್ಕ ಮಕ್ಕಳು ದೊಡ್ಡವರು ಬಳಸುತ್ತಿದ್ದ ಸನ್ನೆಗಳನ್ನೇ ಬಳಸಿ ಹೊಸದಾದ ಮತ್ತು ಸಂಪೂರ‍್ಣವಾದ ಒಂದು ಸನ್ನೆನುಡಿಯನ್ನೇ ಉಂಟುಮಾಡಿಕೊಂಡಿದ್ದರು. ಈ ಚಿಕ್ಕ ಮಕ್ಕಳ ಸನ್ನೆನುಡಿಯನ್ನು ಪರಿಶೀಲಿಸಿದ ಅರಿವಿಗರು ನಿಜಕ್ಕೂ ದಂಗಾಗಿದ್ದಾರೆ. ದೊಡ್ಡ ಮಕ್ಕಳು ಬಳಸುತ್ತಿದ್ದ ಸನ್ನೆಗಳಲ್ಲಿಲ್ಲದಿದ್ದ ನೂರಾರು ಸಿಕ್ಕಲು ಸಿಕ್ಕಲಾದ ಸೊಲ್ಲರಿಮೆಯ ಕಟ್ಟಲೆಗಳನ್ನು ಈ ಚಿಕ್ಕ ಮಕ್ಕಳು ಎಲ್ಲಿಂದ ಪಡೆದರು? ಹುಟ್ಟಿನಿಂದಲೇ ಮಕ್ಕಳು ಪಡೆದುಕೊಂಡು ಬರುವಂತಹ ‘ಮಾತು ಪಡೆಯುವ ಅಳವೇ’ ಅವರಿಗೆ ಈ ಸನ್ನೆನುಡಿಯನ್ನು ಹುಟ್ಟಿಸುವಲ್ಲಿ ನೆರವಾಗಿರಬೇಕು ಎಂಬ ತೀರ‍್ಮಾನಕ್ಕೆ ಅರಿವಿಗರು ಬರಬೇಕಾಗಿದೆ.

(ಈ ಬರಹ ವಿಜಯ ಕರ‍್ನಾಟಕ ಸುದ್ದಿಹಾಳೆಯ ’ಎಲ್ಲರ ಕನ್ನಡ’ ಅಂಕಣದಲ್ಲಿ ಮೊದಲು ಮೂಡಿಬಂದಿತ್ತು)

ಮೂಲ : ಹೊನಲು

ಅರಿಮೆಯ ಬರಹಗಳ ತೊಡಕುಗಳು

ಅರಿಮೆಯ (ವಿಜ್ನಾನದ) ಬರಹಗಳನ್ನು ಓದುತ್ತಿರುವವರಿಗೆ ಅವು ತುಂಬಾ ತೊಡಕಿನವಾಗಿ ಕಾಣಿಸಲು ಹಲವು ಕಾರಣಗಳಿವೆ; ಇವುಗಳಲ್ಲಿ ಎಸಕ(ಕ್ರಿಯೆ)ಗಳನ್ನು ತಿಳಿಸಲು ಎಸಕಪದಗಳನ್ನು ಬಳಸುವ ಬದಲು ಅವುಗಳ ಹೆಸರುರೂಪಗಳನ್ನು ಇಲ್ಲವೇ ಬೇರೆ ಹೆಸರುಕಂತೆಗಳನ್ನು ಬಳಸುವುದು ಒಂದು ಮುಕ್ಯ ಕಾರಣ. ಓಡು ಎಂಬುದು ಒಂದು ಎಸಕವನ್ನು ತಿಳಿಸುತ್ತದೆ; ರಾಜು ಓಡುತ್ತಿದ್ದಾನೆ ಎಂಬ ಸೊಲ್ಲಿನಲ್ಲಿ ಇದನ್ನು ಒಂದು ಎಸಕಪದದ ಮೂಲಕ ಒಂದು ಎಸಕವಾಗಿ ತಿಳಿಸಲಾಗಿದೆ. ಸಾಮಾನ್ಯವಾಗಿ ಮಾತಿನಲ್ಲಿ ಈ ರೀತಿ ಎಸಕಗಳನ್ನು ಎಸಕಗಳಾಗಿಯೇ ತಿಳಿಸಲಾಗುತ್ತದೆ; ಆದರೆ, ಅದನ್ನೊಂದು ವಿಶಯವಾಗಿಯೂ ತಿಳಿಸಲು ಬರುತ್ತದೆ, ಮತ್ತು ಇದಕ್ಕಾಗಿ ಮೇಲಿನ ಸೊಲ್ಲನ್ನು ರಾಜುವಿನ ಓಡುವಿಕೆ ಇಲ್ಲವೇ ರಾಜುವಿನ ಓಟ ಎಂಬ ಒಂದು ಹೆಸರುಕಂತೆಯಾಗಿ ಮಾರ‍್ಪಡಿಸಲು ಬರುತ್ತದೆ.

ಇಂತಹ ಮಾರ‍್ಪಡಿಸಿದ ಬಳಕೆಗಳು ಮಾತಿನಲ್ಲಿ ಇಲ್ಲವೇ ಸಾಮಾನ್ಯ ಬರಹಗಳಲ್ಲಿ ಕಾಣಿಸಿಕೊಳ್ಳುವುದು ತುಂಬಾ ಕಡಿಮೆ; ಆದರೆ, ಅರಿಮೆಯ ಬರಹಗಳಲ್ಲಿ ಅವನ್ನು ತುಂಬಾ ಹೆಚ್ಚು ಬಳಸಲಾಗುತ್ತದೆ. ಇದಕ್ಕೆ ಕಾರಣವೇನೆಂದರೆ, ಅವನ್ನು ಬಳಸುವ ಮೂಲಕ ಹೇಳಬೇಕೆಂದಿರುವ ಸಂಗತಿಯನ್ನು ತುಂಬಾ ಅಡಕವಾಗಿ ಹೇಳಲು ಬರುತ್ತದೆ; ಎತ್ತುಗೆಗಾಗಿ, ಮಕ್ಕಳನ್ನು ತಾಯಂದಿರು ಸಾಕುತ್ತಾರೆ ಎಂಬುದನ್ನು ಒಮ್ಮೆ ಸೂಚಿಸಿದ ಮೇಲೆ, ಅದರ ಕುರಿತಾಗಿ ಬೇರೆ ಸಂಗತಿಗಳನ್ನು ತಿಳಿಸಬೇಕಾದಾಗ ಅದನ್ನು ಅಡಕವಾಗಿ ಮಕ್ಕಳ ಸಾಕುವಿಕೆ ಇಲ್ಲವೇ ಬರೀ ಸಾಕುವಿಕೆ ಎಂಬುದಾಗಿ ಮಾರ‍್ಪಡಿಸಿ ಸೂಚಿಸಲು ಬರುತ್ತದೆ.

ಇದಲ್ಲದೆ, ಅರಿಮೆಯ ಬರಹಗಳ ಇಟ್ಟಳ (ರಚನೆ) ಬೇರೆ ಬರಹಗಳ ಇಟ್ಟಳಕ್ಕಿಂತ ಈ ವಿಶಯದಲ್ಲಿ ಬೇರಾಗಿದೆ; ಸಾಮಾನ್ಯ ಬರಹಗಳಲ್ಲಿ ಉದ್ದಕ್ಕೂ ಒಬ್ಬ ವ್ಯಕ್ತಿ ಇಲ್ಲವೇ ಕೆಲವು ವ್ಯಕ್ತಿಗಳು ಏನು ಮಾಡಿದ್ದಾರೆ ಎಂಬುದಾಗಿ ಹಲವು ಬಗೆಯ ಎಸಕಗಳು ಒಂದರ ಬಳಿಕ ಒಂದರಂತೆ ನಡೆದಿರುವುದನ್ನು ತಿಳಿಸಲಾಗುತ್ತದೆ; ಇದಕ್ಕೆ ಬದಲು, ಅರಿಮೆಯ ಬರಹಗಳಲ್ಲಿ ಒಂದು ಎಸಕವನ್ನು ತಿಳಿಸಿದ ಮೇಲೆ, ಆ ಎಸಕದ ಕುರಿತಾಗಿ ಹಲವಾರು ವಿಶಯಗಳನ್ನು ತಿಳಿಸಬೇಕಾಗುತ್ತದೆ, ಮತ್ತು ಇದಕ್ಕಾಗಿ ಆ ಎಸಕವನ್ನು ಮುಂದಿನ ಸೊಲ್ಲುಗಳ ನೆಲೆಯಾಗಿ ಬಳಸಬೇಕಾಗುತ್ತದೆ; ಆದರೆ, ಹೆಸರುಪದಗಳು ಇಲ್ಲವೇ ಎಸಕಪದಗಳ ಹೆಸರುರೂಪಗಳು ಮಾತ್ರ ಸೊಲ್ಲುಗಳ ನೆಲೆಗಳಾಗಬಲ್ಲುವು; ಹಾಗಾಗಿ, ಆ ಎಸಕವನ್ನು ತಿಳಿಸಲು ಒಂದು ಹೆಸರುಕಂತೆಯನ್ನು ಬಳಸಬೇಕಾಗುತ್ತದೆ.

ಇಂತಹ ಮಾರ‍್ಪಡಿಸಿದ ಬಳಕೆಗಳು ತೊಡಕಿನವಾಗಿ ಕಾಣಿಸಲು ಮುಕ್ಯ ಕಾರಣವೇನೆಂದರೆ, ಸಾಮಾನ್ಯವಾಗಿ ನಮ್ಮ ಮಾತಿನಲ್ಲಿ ಎಸಕಪದಗಳು ಎಸಕಗಳನ್ನು ಸೂಚಿಸುತ್ತವೆ ಮತ್ತು ಹೆಸರುಪದಗಳು ವ್ಯಕ್ತಿ, ವಸ್ತು ಮೊದಲಾದುವನ್ನು ಸೂಚಿಸುತ್ತವೆ; ಆದರೆ, ಈ ಮಾರ‍್ಪಡಿಸಿದ ಬಳಕೆಗಳಲ್ಲಿ ಹೆಸರುಪದಗಳ ಮೂಲಕ ಎಸಕಗಳನ್ನು ಸೂಚಿಸಲಾಗುತ್ತದೆ. ಎಂದರೆ, ಇವು ನಾವು ಜಗತ್ತನ್ನು ನೋಡುವ ಬಗೆಯನ್ನೇ ಬೇರೆ ಮಾಡುತ್ತವೆ: ಅವು ಎಸಕಗಳನ್ನು ಹೆಸರುಗಳಾಗಿ, ಎಂದರೆ ವಸ್ತು ಇಲ್ಲವೇ ವಿಶಯಗಳಾಗಿ ನೋಡುವಂತೆ ಮಾಡುತ್ತವೆ. ಅರಿಮೆಯ ಬರಹಗಳನ್ನು ಓದುವವರು ಜಗತ್ತನ್ನು ಈ ರೀತಿ ಒಂದು ಹೊಸ ಬಗೆಯಲ್ಲಿ ನೋಡಲು ಕಲಿಯಬೇಕಾಗುತ್ತದೆ. ಇದು ಸುಲಬದ ಕೆಲಸವಲ್ಲ.

ಕನ್ನಡದ ಮಟ್ಟಿಗೆ ಹೇಳುವುದಾದರೆ, ಇಲ್ಲಿ ಇನ್ನೊಂದು ತೊಡಕೂ ಕಾಣಿಸಿಕೊಳ್ಳುತ್ತದೆ: ಅರಿಮೆಯ ಬರಹಗಳನ್ನು ಬರೆಯುವವರು ಎಸಕಪದಗಳನ್ನು ಹೆಸರುಕಂತೆಗಳಾಗಿ ಮಾರ‍್ಪಡಿಸುವಲ್ಲಿ ಕನ್ನಡದ ಕಸುವು ಎಂತಹದು ಎಂಬುದನ್ನು ಸರಿಯಾಗಿ ತಿಳಿದುಕೊಂಡಿಲ್ಲ. ಹಾಗಾಗಿ, ಅವರು ಕನ್ನಡದವೇ ಆದ ಹೆಸರುಪದಗಳನ್ನು ಇಲ್ಲವೇ ಎಸಕಪದಗಳ ಹೆಸರುರೂಪಗಳನ್ನು ಬಳಸುವ ಬದಲು, ಸಂಸ್ಕ್ರುತದ ಪದ ಮತ್ತು ಪದರೂಪಗಳನ್ನು ಅನವಶ್ಯಕವಾಗಿ ಎರವಲು ಪಡೆದು ಬಳಸಹೋಗುತ್ತಾರೆ, ಮತ್ತು ಆ ಮೂಲಕ ತಮ್ಮ ಬರಹಗಳಲ್ಲಿ ಇನ್ನಶ್ಟು ತೊಡಕುಗಳನ್ನು ಸೇರಿಸಿಕೊಳ್ಳುತ್ತಾರೆ.

ಎತ್ತುಗೆಗಾಗಿ, ಈ ಮಣ್ಣಿನಲ್ಲಿ ಕ್ಶಾರ ಇದೆ ಎಂಬ ಸೊಲ್ಲನ್ನು ಕನ್ನಡದಲ್ಲೇನೇ ಕ್ಶಾರವಿರುವ (ಇಲ್ಲವೇ ಕ್ಶಾರವುಳ್ಳ) ಮಣ್ಣು ಎಂಬುದಾಗಿ ಮಾರ‍್ಪಡಿಸಬಹುದು. ಆದರೆ ಇದು ಕನ್ನಡದಲ್ಲಿ ಅರಿಮೆಯ ಬರಹಗಳನ್ನು ಬರೆಯುವವರ ಗಮನಕ್ಕೇ ಬರುವುದಿಲ್ಲ. ಅದಕ್ಕೆ ಬದಲಾಗಿ ಅವರು ಕ್ಶಾರಯುಕ್ತ ಮಣ್ಣು ಎಂಬುದಾಗಿ ಸಂಸ್ಕ್ರುತದಿಂದ ಯುಕ್ತ ಪದರೂಪವನ್ನು ಎರವಲು ಪಡೆದು ಬಳಸುತ್ತಾರೆ. ಜೀವ ಹೇಗೆ ಹುಟ್ಟಿತು? ಎಂಬ ಪ್ರಶ್ನೆಯೊಂದನ್ನು ಕೇಳಿ, ಅದರ ಮುಂದಿನ ಸೊಲ್ಲಿನಲ್ಲಿ ಜೀವದ ಹುಟ್ಟು ಎಂಬುದಾಗಿ ಅದನ್ನು ಮಾರ‍್ಪಡಿಸಿಕೊಳ್ಳುವ ಬದಲು, ಜೀವದ ಉಗಮ ಎಂಬುದಾಗಿ ಬರೆಯುತ್ತಾರೆ; ಎಂದರೆ, ಸಂಸ್ಕ್ರುತದ ಉಗಮ ಪದವನ್ನು ಅನವಶ್ಯಕವಾಗಿ ಎರವಲಾಗಿ ಪಡೆದು ಬಳಸುತ್ತಾರೆ. ಇದರಿಂದಾಗಿ, ಮೊದಲೇ ತೊಡಕಿನದಾಗಿ ಕಾಣಿಸುವ ಅರಿಮೆಯ ಬರಹ ಇನ್ನಶ್ಟು ತೊಡಕಿನದಾಗುತ್ತದೆ.

ಎಸಕಗಳನ್ನು ತಿಳಿಸಲು ಹೆಸರುಕಂತೆಗಳನ್ನು ಬಳಸಿರುವಲ್ಲಿ ಓದುಗರು ಎಸಕದಿಂದ ವಿಶಯಕ್ಕೆ ನೆಗೆಯಬೇಕಾಗುತ್ತದೆ. ಯಾಕೆಂದರೆ, ಮೇಲೆ ಸೂಚಿಸಿದ ಹಾಗೆ, ಎಸಕವನ್ನು ಇಲ್ಲಿ ಎಸಕಪದದ ಮೂಲಕ ಒಂದು ಎಸಕವಾಗಿ ಸೂಚಿಸದೆ, ಹೆಸರುಪದದ ಮೂಲಕ ಒಂದು ವಿಶಯವಾಗಿ ಸೂಚಿಸಲಾಗುತ್ತದೆ. ಇದಲ್ಲದೆ, ಆ ರೀತಿ ಬದಲಾವಣೆಯನ್ನು ಮಾಡಲಾಗಿದೆ ಎಂಬುದನ್ನು ಬರಹಗಳಲ್ಲಿ ಯಾವ ರೀತಿಯಲ್ಲೂ ಸೂಚಿಸಲಾಗುವುದಿಲ್ಲ. ಓದುಗರು ಈ ನೆಗೆತವನ್ನು ತಾವೇ ಮಾಡಿಕೊಳ್ಳಬಲ್ಲರು ಎಂಬುದಾಗಿ ತಿಳಿಯಲಾಗುತ್ತದೆ.

ಆದರೆ, ಅರಿಮೆಯ ಬರಹಗಳನ್ನು ಓದಿ ಪಳಗಿಲ್ಲದ ಓದುಗರಿಗೆ ಈ ನೆಗೆತ ತೊಂದರೆಯನ್ನು ಕೊಡುತ್ತದೆ. ಕನ್ನಡದ ಅರಿಮೆಯ ಬರಹಗಳಲ್ಲಿ ಈ ನೆಗೆತದೊಂದಿಗೆ ಇನ್ನೊಂದು ನೆಗೆತವನ್ನೂ ಓದುಗರ ಮೇಲೆ ಹೊರಿಸಲಾಗುತ್ತದೆ: ಅವರು ಎಸಕದಿಂದ ಹೆಸರಿಗೆ ನೆಗೆಯಬೇಕಾಗುತ್ತದೆ ಮಾತ್ರವಲ್ಲ, ಕನ್ನಡದ ಹೆಸರಿನಿಂದ ಸಂಸ್ಕ್ರುತದ ಹೆಸರಿಗೂ ನೆಗೆಯಬೇಕಾಗುತ್ತದೆ. ಎತ್ತುಗೆಗಾಗಿ, ಒಂದು ಜೀವಿ ಇನ್ನೊಂದು ಜೀವಿಯನ್ನು ಹುಟ್ಟಿಸುತ್ತದೆ ಎಂಬಲ್ಲಿಂದ ಹುಟ್ಟಿಸುವಿಕೆ ಎಂಬುದಕ್ಕೆ ಹೋಗದೆ ನೇರವಾಗಿ ಪ್ರಜನನ ಕ್ರಿಯೆ ಎಂಬುದಕ್ಕೆ ನೆಗೆಯಬೇಕಾಗುತ್ತದೆ.

ಚಿಕ್ಕ ಮಕ್ಕಳಿಗಾಗಿ ಬರೆದ ಅರಿಮೆಯ ಬರಹಗಳಲ್ಲೂ ಇಂತಹ ಹಲವಾರು ಸಂಸ್ಕ್ರುತದ ಪದರೂಪಗಳನ್ನು ಕಾಣಬಹುದು. ಇವನ್ನು ಮಕ್ಕಳು ಕಣ್ಣು ಮುಚ್ಚಿ ಬಾಯಿಪಾಟ ಮಾಡುತ್ತಾರಲ್ಲದೆ, ಅವು ನಿಜಕ್ಕೂ ಏನು ಹೇಳುತ್ತವೆ ಎಂಬುದು ಅವರ ಗಮನಕ್ಕೆ ಬರುವುದೇ ಇಲ್ಲ. ಯಾಕೆಂದರೆ, ಅವರಿಗೆ ಇವುಗಳಲ್ಲಿ ಬರುವ ಎಸಕದಿಂದ ಹೆಸರಿಗೆ ಹಾರುವ ಮೊದಲ ನೆಗೆತವೇ ತೊಡಕಿನದಾಗಿ ಕಾಣಿಸುತ್ತದೆ; ಇನ್ನು ಕನ್ನಡದ ಹೆಸರಿನಿಂದ ಸಂಸ್ಕ್ರುತದ ಹೆಸರಿಗೆ ಹಾರುವ ಎರಡನೆಯ ನೆಗೆತ ಅವರ ಅಳವಿಗೆ ಮೀರಿದ್ದು.

ಅರಿಮೆಯ ಬರಹಗಳನ್ನು ಮಂದಿ ಮೆಚ್ಚುವ (ಜನಪ್ರಿಯವಾಗುವ) ಹಾಗೆ ಇಲ್ಲವೇ ಚಿಕ್ಕ ಮಕ್ಕಳಿಗೆ ಗೊತ್ತಾಗುವ ಹಾಗೆ ಬರೆಯಬೇಕಿದ್ದಲ್ಲಿ ಬರಹಗಾರರು ಕೆಳಗೆ ಕೊಟ್ಟಿರುವ ಉಪಾಯಗಳನ್ನು ಬಳಸಿಕೊಳ್ಳಬೇಕಾಗುತ್ತದೆ: (೧) ಆದಶ್ಟು ಮಟ್ಟಿಗೆ ಅವರು ಅರಿಮೆಯ (ಪಾರಿಬಾಶಿಕ) ಪದಗಳ ಬಳಕೆಯನ್ನು ಕಡಿಮೆ ಮಾಡಬೇಕು; (೨) ಎಸಕಗಳನ್ನು ತಿಳಿಸುವ ಹೆಸರುಕಂತೆಗಳನ್ನು ಸೊಲ್ಲುಗಳಾಗಿ ಬದಲಾಯಿಸಿಕೊಳ್ಳಬೇಕು; (೩) ಸಿಕ್ಕಲು ಸೊಲ್ಲುಗಳನ್ನು ಸುಳುಸೊಲ್ಲುಗಳಾಗಿ ಬಿಡಿಸಿ ಬರೆಯಬೇಕು; ಮತ್ತು (೪) ಸಂಸ್ಕ್ರುತ (ತತ್ಸಮ) ಪದಗಳ ಬದಲು ಆದಶ್ಟು ಮಟ್ಟಿಗೆ ಕನ್ನಡದವೇ ಆದ ಪದಗಳನ್ನು ಬಳಸಬೇಕು.

(ಈ ಬರಹ ವಿಜಯ ಕರ‍್ನಾಟಕ ಸುದ್ದಿಹಾಳೆಯ ’ಎಲ್ಲರ ಕನ್ನಡ’ ಅಂಕಣದಲ್ಲಿ ಮೊದಲು ಮೂಡಿಬಂದಿತ್ತು)

ಮೂಲ : ಹೊನಲು

ಕನ್ನಡ ನುಡಿ ಎಶ್ಟು ಹಳೆಯದು

ಕನ್ನಡ ನುಡಿ ಎಶ್ಟು ಹಳೆಯದು ಎಂಬುದನ್ನು ತಿಳಿಯಲು ಹೆಚ್ಚಿನ ಅರಿವಿಗರೂ ಕನ್ನಡದ ಶಾಸನಗಳು ಇಲ್ಲವೇ ಕನ್ನಡ ಪದಗಳನ್ನು ಬಳಸಿರುವ ಪಳೆಯುಳಿಕೆಗಳು ಎಶ್ಟು ಹಳೆಯವು ಎಂಬುದನ್ನು ತಿಳಿಯಲು ಹೊರಡುತ್ತಾರೆ. ಆದರೆ, ಇಂತಹ ಪುರಾವೆಗಳು ಕನ್ನಡ ಬರಹ ಎಶ್ಟು ಹಳೆಯದು ಎಂಬುದನ್ನು ತಿಳಿಸಬಲ್ಲುವಲ್ಲದೆ ಕನ್ನಡ ನುಡಿ ಎಶ್ಟು ಹಳೆಯದು ಎಂಬುದನ್ನು ತಿಳಿಸಲಾರವು. ಯಾಕೆಂದರೆ, ಕನ್ನಡ ನುಡಿ ಎಂಬುದು ಮುಕ್ಯವಾಗಿ ಕನ್ನಡಿಗರ ಮಾತಲ್ಲದೆ ಬರಹವಲ್ಲ. ಎಲ್ಲಾ ನುಡಿಗಳಲ್ಲೂ ಮಾತು ಬರಹದಿಂದ ತುಂಬಾ ಹಿಂದೆಯೇ ಬಳಕೆಗೆ ಬಂದಿರುತ್ತದೆ. ಹಾಗಾಗಿ, ನಾವಿಲ್ಲಿ ಬರಹಕ್ಕಿಂತ ಬೇರಾಗಿರುವ ಪುರಾವೆಗಳನ್ನು ಹುಡುಕಿಹಿಡಿಯಬೇಕಾಗುತ್ತದೆ.

ನುಡಿಗಳ ಹುಟ್ಟು ಮನುಶ್ಯರ ಇಲ್ಲವೇ ಬೇರೆ ಉಸಿರಿಗಳ ಹುಟ್ಟಿಗಿಂತ ತೀರ ಬೇರಾದುದು: ಒಂದು ನುಡಿಯನ್ನಾಡುವ ಮಂದಿ ದೂರದ ಎರಡು ಊರುಗಳಲ್ಲಿ ನೆಲೆಸಿದಾಗ, ಅವರ ನಡುವೆ ಮೊದಲಿಗಿದ್ದ ಸಂಪರ‍್ಕ ಇಲ್ಲವಾಗುತ್ತದೆ, ಮತ್ತು ಇದರಿಂದಾಗಿ ಅವರಾಡುವ ನುಡಿಯಲ್ಲಿ ನಡೆಯುವ ಮಾರ‍್ಪಾಡುಗಳು ಒಂದೇ ಬಗೆಯವಾಗಿರುವುದಿಲ್ಲ. ಹಾಗಾಗಿ, ಸಮಯ ಕಳೆದಂತೆ ಅವರಾಡುವ ನುಡಿಗಳು ಬೇರಾಗುತ್ತಾ ಹೋಗುತ್ತವೆ, ಮತ್ತು ಕೊನೆಗೆ ಅವು ಎರಡು ಬೇರೆಯೇ ನುಡಿಗಳೆಂಬ ಅನಿಸಿಕೆಯನ್ನು ಕೊಡಲು ತೊಡಗುತ್ತವೆ.

ಒಂದು ನುಡಿ ಈ ರೀತಿ ಎರಡು ನುಡಿಗಳಾಗಿ ಕವಲೊಡೆದಾಗ, ಅವುಗಳಲ್ಲಿ ಯಾವುದು ಮೂಲ ನುಡಿ ಮತ್ತು ಯಾವುದು ಹೊಸದಾಗಿ ಹುಟ್ಟಿಕೊಂಡಿರುವ ನುಡಿ ಎಂದು ಬೇರ‍್ಪಡಿಸಿ ಹೇಳಲು ಬರುವುದಿಲ್ಲ. ಯಾಕೆಂದರೆ, ಮಾರ‍್ಪಾಡುಗಳು ಅವೆರಡರಲ್ಲೂ ನಡೆದಿರುತ್ತವೆ; ಒಂದರಲ್ಲಿ ನಡೆದ ಮಾರ‍್ಪಾಡುಗಳು ಇನ್ನೊಂದರಲ್ಲಿ ನಡೆದಿಲ್ಲವೆಂಬುದೇ ಅವೆರಡು ಬೇರೆ ಬೇರಾಗಿ ಕಾಣಿಸಿಕೊಳ್ಳಲು ಕಾರಣ. ಆದರೆ, ಇಂತಹ ಕಡೆಗಳಲ್ಲಿ ಒಂದು ಮೂಲ ನುಡಿ ಎರಡು ಹೊಸ ನುಡಿಗಳಾಗಿ ಕವಲೊಡೆದಿದೆಯೆಂದು ಹೇಳಲು ಬರುತ್ತದೆ, ಮತ್ತು ಎಶ್ಟು ಸಮಯಕ್ಕೆ ಹಿಂದೆ ಅವು ಆ ರೀತಿ ಕವಲೊಡೆದುವೋ ಅಶ್ಟು ಹಳೆಯವು ಆ ನುಡಿಗಳು ಎಂದು ತಿಳಿಯಲು ಬರುತ್ತದೆ.

ಕನ್ನಡ, ತಮಿಳು, ತೆಲುಗು, ಮಲಯಾಳ ಮೊದಲಾದ ಒಟ್ಟು ಸುಮಾರು ಇಪ್ಪತ್ತಯ್ದು ನುಡಿಗಳು ಮೂಲದ್ರಾವಿಡವೆಂಬ ಒಂದು ನುಡಿಯಿಂದ ಯಾವ ರೀತಿಯಲ್ಲಿ ಕವಲೊಡೆದು ಬೇರೆ ಬೇರೆ ನುಡಿಗಳಾಗಿ ಮಾರ‍್ಪಟ್ಟಿರಬೇಕು ಎಂಬುದನ್ನು ತಿಳಿದುಕೊಂಡಲ್ಲಿ, ಅವುಗಳಲ್ಲಿ ಕನ್ನಡ ಎಶ್ಟು ಹಿಂದೆ ಕವಲೊಡೆದಿದೆ ಎಂಬುದನ್ನು ತಿಳಿಯಲು ಬರುತ್ತದೆ.

ಮೂಲದ್ರಾವಿಡ ನುಡಿ ಮೊದಲಿಗೆ ತೆಂಕುದ್ರಾವಿಡ, ಬಡಗುದ್ರಾವಿಡ, ಮತ್ತು ನಡುದ್ರಾವಿಡ ಎಂಬ ಮೂರು ನುಡಿಗಳಾಗಿ ಕವಲೊಡೆದಿರಬೇಕು, ಮತ್ತು ಈ ಮೂರು ನುಡಿಗಳು ಆಮೇಲೆ ಬೇರೆ ಹಲವು ನುಡಿಗಳಾಗಿ ಕವಲೊಡೆಯುತ್ತಾ ಹೋಗಿ ಇವತ್ತಿನ ಇಪ್ಪತ್ತಯ್ದು ನುಡಿಗಳು ಬಳಕೆಗೆ ಬಂದಿರಬೇಕು ಎಂಬುದಾಗಿ ಕಲ್ಪಿಸಲಾಗಿದೆ. ಈ ಕಲ್ಪನೆಗೆ ಇವತ್ತಿನ ದ್ರಾವಿಡ ನುಡಿಗಳ ನಡುವೆ ಎಂತಹ ವ್ಯತ್ಯಾಸಗಳಿವೆ ಮತ್ತು ಎಶ್ಟು ವ್ಯತ್ಯಾಸಗಳಿವೆ ಎಂಬುದೇ ಆದಾರವಾಗಿರುತ್ತದೆ. ಎರಡು ನುಡಿಗಳ ನಡುವೆ ವ್ಯತ್ಯಾಸಗಳು ಹೆಚ್ಚಿದ್ದಶ್ಟೂ ಅವು ಕವಲೊಡೆದಿರುವ ಸಮಯ ಹೆಚ್ಚು ಹಿಂದಕ್ಕೆ ಹೋಗುತ್ತದೆ.

ದ್ರಾವಿಡ ನುಡಿಯ ಮೂರು ಕವಲುಗಳಲ್ಲಿ ಒಂದಾದ ತೆಂಕುದ್ರಾವಿಡ ನುಡಿ ಇವತ್ತು ಕನ್ನಡ, ತಮಿಳು, ಮಲಯಾಳ, ತುಳು, ಕೊಡಗು, ತೊದ, ಕೋತ ಮತ್ತು ಕೊರಗ ಎಂಬ ಒಟ್ಟು ಎಂಟು ಸ್ವತಂತ್ರ ನುಡಿಗಳಾಗಿ ಕವಲೊಡೆದಿದೆಯೆಂದು ಹೇಳಲಾಗುತ್ತದೆ; ಈ ಎಂಟು ನುಡಿಗಳಲ್ಲಿ, ಕೊರಗ ನುಡಿಯನ್ನು ಸದ್ಯಕ್ಕೆ ತೆಂಕುದ್ರಾವಿಡದಲ್ಲಿ ಗುಂಪಿಸಲಾಗಿದೆಯಾದರೂ, ನಿಜಕ್ಕೂ ಅದು ಯಾವ ರೀತಿಯಲ್ಲಿ ಉಳಿದ ನುಡಿಗಳೊಂದಿಗೆ ಸಂಬಂದಿಸಿದೆ ಎಂಬುದನ್ನು ಹೇಳಲು ಇನ್ನೂ ಸಾದ್ಯವಾಗಿಲ್ಲ. ಕೆಲವು ವಿಶಯಗಳಲ್ಲಿ ಅದು ಬಡಗುದ್ರಾವಿಡ ನುಡಿಗಳನ್ನು ಹೋಲುತ್ತಿರುವುದೇ ಇದಕ್ಕೆ ಕಾರಣ.

ಉಳಿದ ಏಳು ತೆಂಕುದ್ರಾವಿಡ ನುಡಿಗಳಲ್ಲಿ, ತುಳು ನುಡಿ ಮೊದಲಿಗೆ ಬೇರ‍್ಪಟ್ಟಿರಬೇಕು; ಯಾಕೆಂದರೆ, ಉಳಿದ ಎಲ್ಲಾ ತೆಂಕುದ್ರಾವಿಡ ನುಡಿಗಳಲ್ಲೂ ನಡೆದಿರುವ ಹಲವು ಮಾರ‍್ಪಾಡುಗಳು ತುಳುವಿನಲ್ಲಿ ನಡೆದಿಲ್ಲ. ಉಳಿದ ಆರು ತೆಂಕುದ್ರಾವಿಡ ನುಡಿಗಳಲ್ಲಿ ಮೊದಲಿಗೆ ಕವಲೊಡೆದು ಸ್ವತಂತ್ರ ನುಡಿಯೆನಿಸಿದುದು ಕನ್ನಡ ನುಡಿ. ಇದನ್ನೂ ಉಳಿದ ತೆಂಕುದ್ರಾವಿಡ ನುಡಿಗಳಲ್ಲಿ ನಡೆದಿರುವ, ಮತ್ತು ಕನ್ನಡದಲ್ಲಿ ನಡೆಯದಿರುವ (ಇಲ್ಲವೇ ಬೇರೆ ಬಗೆಯಲ್ಲಿ ನಡೆದಿರುವ) ಹಲವು ಮಾರ‍್ಪಾಡುಗಳ ಆದಾರದ ಮೇಲೆ ಹೇಳಲು ಬರುತ್ತದೆ.

ಇಂತಹ ಮಾರ‍್ಪಾಡುಗಳಲ್ಲಿ ಒಂದನ್ನು ಹಳೆಗನ್ನಡದ ಬೇಂಟೆ, ತೋಂಟ, ಎಂಟು, ತೆಂಕು ಮೊದಲಾದ ಪದಗಳನ್ನು ತಮಿಳಿನ ವೇಟ್ಟಯ್, ತೋಟ್ಟಮ್, ಎಟ್ಟು, ತೆಕ್ಕು ಮೊದಲಾದ ಪದಗಳೊಂದಿಗೆ ಹೋಲಿಸುವ ಮೂಲಕ ತಿಳಿಯಬಹುದು; ಇವುಗಳಲ್ಲಿ ಮೊದಲಿಗಿದ್ದ ಮೂಗುಲಿ(ಅನುನಾಸಿಕ)ಯನ್ನು ಕನ್ನಡ ಉಳಿಸಿಕೊಂಡಿದೆ; ಆದರೆ, ತಮಿಳು, ಕೊಡಗು (ಎಟ್ಟ್, ತೆಕ್ಕ್), ತೊದ ಮೊದಲಾದ ಉಳಿದ ನುಡಿಗಳು ಕಳೆದುಕೊಂಡಿವೆ. ಇನ್ನೊಂದು ವ್ಯತ್ಯಾಸವನ್ನು ಕನ್ನಡದ ಆಡಿದೆ, ನಂಬಿದೆ, ಕಟ್ಟಿದೆ, ಅಮುಕಿದೆ ಎಂಬ ಎಸಕ(ಕ್ರಿಯಾ)ರೂಪಗಳನ್ನು ತಮಿಳಿನ ಆಟಿನೇನ್, ನಂಪಿನೇನ್, ಕಟ್ಟಿನೇನ್, ಅಮುಕ್ಕಿನೇನ್ ಎಂಬವುಗಳೊಂದಿಗೆ ಹೋಲಿಸುವ ಮೂಲಕ ತಿಳಿಯಬಹುದು.

ಈ ರೂಪಗಳಲ್ಲಿ ಬಂದಿರುವ ಹಿಂಬೊತ್ತಿನ ಒಟ್ಟು (ಪ್ರತ್ಯಯ) ಕನ್ನಡದಲ್ಲಿ ನಕಾರವನ್ನು ಕಳೆದುಕೊಂಡಿದೆ; ಆದರೆ, ತಮಿಳು, ಕೊಡಗು, ತೊದ ಮೊದಲಾದ ಉಳಿದ ನುಡಿಗಳಲ್ಲಿ ಅದನ್ನು ಉಳಿಸಿಕೊಂಡಿದೆ. ಮತ್ತೊಂದು ವ್ಯತ್ಯಾಸವೆಂದರೆ, ತೆಂಕುದ್ರಾವಿಡದಲ್ಲಿದ್ದ ಅ ಮತ್ತು ಅಯ್‌ಗಳಲ್ಲಿ ಕೊನೆಗೊಳ್ಳುವ ಎರಡು ಬಗೆಯ ಎಸಕಪದಗಳು ಕನ್ನಡದಲ್ಲಿ ಒಂದೇ ಬಗೆಯವಾಗಿವೆ; ಕನ್ನಡದ ನಡೆದೆ ಮತ್ತು ತಡೆದೆ ಎಂಬ ರೂಪಗಳನ್ನು ತಮಿಳಿನ ನಟನ್ತೇನ್ ಮತ್ತು ತಟಯ್‌ನ್ತೇನ್ ಎಂಬ ರೂಪಗಳೊಂದಿಗೆ ಹೋಲಿಸಿನೋಡಿದಾಗ ಈ ವ್ಯತ್ಯಾಸ ಕಾಣಿಸುತ್ತದೆ. ಕೊಡಗು, ತೊದ ಮೊದಲಾದ ಉಳಿದ ನುಡಿಗಳೂ ಈ ವ್ಯತ್ಯಾಸವನ್ನು ತಮಿಳಿನ ಹಾಗೆ ಉಳಿಸಿಕೊಂಡಿವೆ.

ಉಳಿದ ಅಯ್ದು ತೆಂಕುದ್ರಾವಿಡ ನುಡಿಗಳಲ್ಲಿ ಮೊದಲಿಗೆ ಕೊಡಗು ನುಡಿ ಬೇರಾಗಿರಬೇಕು, ಮತ್ತು ಆಮೇಲೆ ತೊದ ಮತ್ತು ಕೋತ ನುಡಿಗಳು ಬೇರಾಗಿರಬೇಕು. ತಮಿಳು ಮತ್ತು ಮಲಯಾಳ ನುಡಿಗಳು ಮೂಲನುಡಿಯಿಂದ ಬೇರ‍್ಪಟ್ಟು ಸ್ವತಂತ್ರ ನುಡಿಗಳಾಗುವ ಮೊದಲೇ ಈ ಮೂರು ನುಡಿಗಳೂ ಬೇರ‍್ಪಟ್ಟಿರಬೇಕೆಂದು ಹೇಳುವುದಕ್ಕೆ ತಮಿಳು ಮತ್ತು ಮಲಯಾಳಗಳಲ್ಲಿ ನಡೆದ, ಮತ್ತು ಈ ಮೂರು ನುಡಿಗಳಲ್ಲಿ ನಡೆಯದಿದ್ದ (ಇಲ್ಲವೇ ಬೇರೆ ಬಗೆಯಲ್ಲಿ ನಡೆದ) ಹಲವು ಮಾರ‍್ಪಾಡುಗಳನ್ನು ಎತ್ತುಗೆಯಾಗಿ ಕೊಡಬಹುದು.

ಮೇಲೆ ಕೊಟ್ಟಿರುವ ವಿಶಯಗಳ ಮೇಲೆ, ತಮಿಳು ಬರಹ ಕನ್ನಡ ಬರಹದಿಂದ ಹಳೆಯದಾಗಿದೆಯಾದರೂ ತಮಿಳು ನುಡಿ ಕನ್ನಡ ನುಡಿಗಿಂತ ಹಳೆಯದಲ್ಲ; ಅದು ಸ್ವತಂತ್ರ ನುಡಿಯಾಗುವುದಕ್ಕಿಂತ (ಎಂದರೆ ಅದು ತನ್ನದೇ ಆದ ಪರಿಚೆಗಳನ್ನು ಪಡೆದುಕೊಳ್ಳುವುದಕ್ಕಿಂತ) ಎಶ್ಟೋ ಮೊದಲೇ ಕನ್ನಡ ನುಡಿ ಒಂದು ಸ್ವತಂತ್ರ ನುಡಿಯಾಗಿ ಬೇರ‍್ಪಟ್ಟಿತ್ತೆಂದು ಹೇಳಲು ಬರುತ್ತದೆ. ಆದರೆ, ಇದರಿಂದಾಗಿ ಕನ್ನಡಕ್ಕೊಂದು ‘ಮೇಲ್ತನ’ ದೊರೆತಿದೆಯೆಂದೇನೂ ನನಗೆ ಅನಿಸುವುದಿಲ್ಲ.

(ಈ ಬರಹ ವಿಜಯ ಕರ‍್ನಾಟಕ ಸುದ್ದಿಹಾಳೆಯ ’ಎಲ್ಲರ ಕನ್ನಡ’ ಅಂಕಣದಲ್ಲಿ ಮೊದಲು ಮೂಡಿಬಂದಿತ್ತು)

ಮೂಲ : ಹೊನಲು

ಸಾಹಿತಿಗೆ ವ್ಯಾಕರಣದ ತಿಳಿವು ಬೇಕೇ

ಕತೆ, ಕಾದಂಬರಿ, ನಾಟಕ ಮೊದಲಾದ ನಲ್ಬರಹಗಳನ್ನು ಬರೆಯುವ ಸಾಹಿತಿಗಳಿಗೆ ಕನ್ನಡ ನುಡಿಯ ವ್ಯಾಕರಣದ ತಿಳಿವಿನಿಂದ ಯಾವ ಬಗೆಯ ನೆರವೂ ಸಿಗಲಾರದೆಂಬ ಅನಿಸಿಕೆ ಹಲವು ಮಂದಿ ಬರಹಗಾರರಲ್ಲಿದೆ. “ಕನ್ನಡ ವ್ಯಾಕರಣ”ವೆಂಬ ಹೆಸರಿನಲ್ಲಿ ಇವತ್ತು ಶಾಲೆಗಳಲ್ಲಿ ಕಲಿಸುತ್ತಿರುವುದು ನಿಜಕ್ಕೂ ಕನ್ನಡದ ವ್ಯಾಕರಣವೇ ಅಲ್ಲದಿರುವುದು ಇದಕ್ಕೆ ಮುಕ್ಯ ಕಾರಣ; ನಿಜವಾದ ಕನ್ನಡದ ವ್ಯಾಕರಣ ಎಂತಹದು, ಅದು ಹೇಗೆ ಕನ್ನಡದಲ್ಲಿ ಪದಗಳನ್ನು ಮತ್ತು ಸೊಲ್ಲುಗಳನ್ನು ಕಟ್ಟುವ ಬಗೆಯನ್ನು ತಿಳಿಸಿಕೊಡುತ್ತದೆ, ಮತ್ತು ಈ ತಿಳಿವಿನ ಮೂಲಕ ಹೇಗೆ ಬರಹಗಳನ್ನು ಸರಿಯಾಗಿ ಬರೆಯಲು ಇಲ್ಲವೇ ಬರೆದುದನ್ನು ಸರಿಪಡಿಸಲು ಬರುತ್ತದೆ ಎಂಬುದನ್ನು ತಿಳಿಸಿಕೊಟ್ಟಲ್ಲಿ ಯಾರೂ ಅದರ ನೆರವನ್ನು ಅಲ್ಲಗಳೆಯಲಾರರು.

ಹಲವು ಜನರಿಗೆ ತುಂಬಾ ಸ್ವಾರಸ್ಯವಾದ ವಿಶಯಗಳು ಹೊಳೆಯುತ್ತಿರುತ್ತವೆ; ಆದರೆ, ಅವನ್ನು ಇತರರಿಗೆ ತಿಳಿಯುವ ಹಾಗೆ ಬರೆಯುವುದು ಹೇಗೆ ಎಂದು ಗೊತ್ತಾಗುವುದಿಲ್ಲ. ಕತೆ, ಕವಿತೆ ಮೊದಲಾದುವನ್ನು ಕಲ್ಪಿಸಿಕೊಳ್ಳುವಶ್ಟೇ ಓದುಗರಿಗೆ ತಲಪುವ ಹಾಗೆ ಅವನ್ನು ಬರೆಯುವುದೂ ಮುಕ್ಯವಾದ ಕೆಲಸವಾಗಿದೆ. ಈ ಎರಡನೇ ಕೆಲಸವನ್ನು ನಡೆಸುವುದು ಹೇಗೆ ಎಂಬುದನ್ನು ಕಲಿಯಬೇಕೆಂದಿರುವವರಿಗೆ ಸೊಲ್ಲರಿಮೆಯ (ವ್ಯಾಕರಣದ) ತಿಳಿವು ಹಲವು ಬಗೆಗಳಲ್ಲಿ ನೆರವಿಗೆ ಬರಬಲ್ಲುದು. ಇದಲ್ಲದೆ, ಹಲವು ಮಂದಿ ಬರಹಗಾರರಿಗೆ ತಮ್ಮ ಬರಹವನ್ನು ಸಾವಗಿಸುವುದು ಹೇಗೆ ಎಂಬುದು ತಿಳಿದಿರುವುದಿಲ್ಲ.

ಅವುಗಳಲ್ಲಿ ಬರುವ ಕೆಲವು ಕುರಳು(ಪಾರಾ)ಗಳನ್ನು ಅವರು ಒಂದೆರಡು ಪುಟಗಳಶ್ಟು ಉದ್ದಕ್ಕೂ ಎಳೆಯುತ್ತಿರುತ್ತಾರೆ. ಇದರಿಂದಾಗಿ ಅವನ್ನು ಓದುವವರಿಗೆ ಉಸಿರುಕಟ್ಟಿದ ಹಾಗಾಗುತ್ತದೆ. ತಡೆ(,), ಅರೆಕೊನೆ(;), ಅಡ್ಡಗೆರೆ(-) ಮೊದಲಾದ ಬರಹದ ಗುರುತುಗಳನ್ನೂ ಅವರು ಸರಿಯಾಗಿ ಬಳಸುವುದಿಲ್ಲ. ಹಾಗಾಗಿ, ಅವರ ಬರಹಗಳು ಚನ್ನಾಗಿದ್ದರೂ ಹೆಚ್ಚಿನ ಓದುಗರಿಗೂ ತೊಡಕಿನವಾಗಿ ಕಾಣಿಸುತ್ತವೆ. ಬರಹದ ಗುರುತುಗಳನ್ನು ಸರಿಯಾಗಿ, ಓದುಗರಿಗೆ ನೆರವಾಗುವ ಹಾಗೆ, ಬಳಸಬೇಕಿದ್ದಲ್ಲಿ ಅದಕ್ಕೆ ಸೊಲ್ಲರಿಮೆಯ ತಿಳಿವು ಬೇಕಾಗುತ್ತದೆ. ಬಣ್ಣಗಳ ಅರಿವು ಕಲೆಗಾರರಿಗೆ ಹೇಗೆ ನೆರವು ನೀಡಬಲ್ಲುದೋ ಹಾಗೆಯೇ ಸೊಲ್ಲುಗಳ ಅರಿವು ನಲ್ಬರಹಗಾರರಿಗೂ ನೆರವು ನೀಡಬಲ್ಲುದು.

ಕನ್ನಡದಲ್ಲಿ ಎಂತಹ ಸೊಲ್ಲುಗಳು ಬಳಕೆಯಲ್ಲಿವೆ, ಅವುಗಳ ನಡುವಿನ ವ್ಯತ್ಯಾಸಗಳು ಎಂತಹವು, ಓದುಗರ ಮೇಲೆ ಅವು ಎಂತಹ ಪರಿಣಾಮವನ್ನು ಬೀರುತ್ತವೆ ಎಂಬಂತಹ ವಿಶಯಗಳನ್ನು ತಿಳಿಯಲು ಸೊಲ್ಲರಿಮೆಯ ತಿಳಿವು ನೆರವಿಗೆ ಬರುತ್ತದೆ. ಎತ್ತುಗೆಗಾಗಿ, ಒಂದು ಕತೆಯಲ್ಲಿ ಒಬ್ಬ ವ್ಯಕ್ತಿಯ ಪರಿಚೆಯನ್ನು ಮಾಡಿಕೊಡಬೇಕಾದಾಗ, ಎಸಕ(ಕ್ರಿಯಾ)ಪದಗಳಿಲ್ಲದಿರುವ ಚಿಕ್ಕ ಚಿಕ್ಕ ಸೊಲ್ಲುಗಳನ್ನು ಬಳಸಬೇಕಾಗುತ್ತದೆ; ಇದಕ್ಕೆ ಬದಲು, ಕತೆ ಬಹಳ ಬೇಗನೆ ಮುಂದಕ್ಕೆ ಹೋಗುವಂತೆ ಮಾಡಬೇಕಿದ್ದಲ್ಲಿ ಎಸಕ ಪದಗಳಿರುವಂತಹ ಚಿಕ್ಕ ಚಿಕ್ಕ ಸೊಲ್ಲುಗಳನ್ನು ಬಳಸಬೇಕಾಗುತ್ತದೆ. ಇಂತಹ ಚಿಕ್ಕ ಚಿಕ್ಕ ಸೊಲ್ಲುಗಳ ಬದಲು, ಹಲವಾರು ಒಳಸೊಲ್ಲುಗಳಿರುವ ಉದ್ದುದ್ದವಾದ ಸಿಕ್ಕಲು ಸೊಲ್ಲುಗಳನ್ನು ಬಳಸಿದಲ್ಲಿ, ಕತೆಯ ವೇಗ ಕಡಿಮೆಯಾಗಿ, ಅದು ತುಂಬಾ ಮೆಲ್ಲನೆ ಸಾಗುವಂತಾಗುತ್ತದೆ.

ಎಸಕ ಪದಗಳಲ್ಲಿ ಕೆಲವು ತೀರಾ ಬಡವಾಗಿರುತ್ತವೆ; ಆದರೆ ಇನ್ನು ಕೆಲವು ತುಂಬಾ ಹುಲುಸಾಗಿದ್ದು, ಎಸಕಗಳನ್ನು ಎದ್ದುಕಾಣುವಂತೆ ಓದುಗರ ಮುಂದಿರಿಸಬಲ್ಲುವು. ಎತ್ತುಗೆಗಾಗಿ, ಇರು, ಮಾಡು, ಆಗು, ಹೇಳು, ತಿನ್ನು, ನಡೆ, ಬರು ಮೊದಲಾದುವು ತೀರಾ ಬಡವಾಗಿರುವ ಎಸಕ ಪದಗಳು. ಅವನ್ನು ಬಳಸಿರುವಲ್ಲೂ ಎಸಕಗಳು ಎದ್ದುಕಾಣಿಸುವ ಹಾಗೆ ಮಾಡಬೇಕಿದ್ದರೆ, ಅವಕ್ಕೆ ಯಾವುದಾದರೊಂದು ಪರಿಚೆಪದವನ್ನು ಸೇರಿಸಬೇಕಾಗುತ್ತದೆ (ಕತಕತನೆ ಕುದಿಯಿತು, ದೊಪ್ಪನೆ ಬಿತ್ತು, ತಟಕ್ಕನೆ ಹೇಳಿದಳು). ಆದರೆ ಈ ರೀತಿ ಪರಿಚೆ ಪದಗಳನ್ನು ಸೇರಿಸಿ ಹೇಳುವುದಕ್ಕಿಂತಲೂ, ಅಂತಹ ಪರಿಚೆಗಳನ್ನು ಒಳಗೊಂಡಿರುವ ಹುಲುಸುಪದಗಳನ್ನು ಬಳಸುವುದು ಹೆಚ್ಚು ಒಳ್ಳೆಯದು. ನುಗ್ಗು, ಮುತ್ತು, ಚಿವುಟು, ದುಮುಕು, ನುಸುಳು ಮೊದಲಾದುವು ಇಂತಹ ಪರಿಚೆಗಳನ್ನು ಒಳಗೊಂಡಿರುವ ಹುಲುಸುಪದಗಳು. ಅವನ್ನು ಬಳಸಿರುವಲ್ಲಿ ಸೊಲ್ಲುಗಳು ಹೆಚ್ಚು ಅಡಕವಾಗಿಯೂ ಇರುತ್ತವೆ.

ಜನರು ಒಳಗೆ ಹೋದರು ಎಂಬ ಸೊಲ್ಲು ತಿಳಿಸುವ ಎಸಕವನ್ನೇ ಜನರು ಒಳಗೆ ನುಗ್ಗಿದರು ಎಂಬುದು ನಿಜಕ್ಕೂ ಏನು ನಡೆಯಿತು ಎಂಬುದನ್ನು ಹೆಚ್ಚು ಚನ್ನಾಗಿ, ಕಣ್ಣಿಗೆ ಕಟ್ಟುವಂತೆ ತಿಳಿಸುತ್ತದೆ. ಇಂತಹದೇ ವ್ಯತ್ಯಾಸವನ್ನು ಅವನು ಕೆಳಗೆ ಹಾರಿದ ಎನ್ನುವುದಕ್ಕೂ ಅವನು ಕೆಳಗೆ ದುಮುಕಿದ ಎನ್ನುವುದಕ್ಕೂ ನಡುವೆ ಕಾಣಬಹುದು. ಸನ್ನಿವೇಶಕ್ಕೆ ತಕ್ಕ ಹಾಗೆ ಇಂತಹ ಹೆಚ್ಚು ಹುಲುಸಾಗಿರುವ ಪದಗಳನ್ನು ಆರಿಸಿಕೊಳ್ಳುವ ಜಾಣ್ಮೆ ಬರಹಗಾರರಿಗಿರಬೇಕು. ಈ ಅಳವನ್ನು ಪಡೆಯುವಲ್ಲಿ ಬರಹಗಾರರಿಗೆ ಸೊಲ್ಲರಿಮೆ ನೆರವು ನೀಡಬಲ್ಲುದು. ಹುಲುಸಾಗಿರುವ ಎಸಕಪದ ಸಿಗದಿದ್ದಲ್ಲಿ ಅಣಕು ಪದಗಳನ್ನು ಬಳಸಬೇಕಾಗುತ್ತದೆ.

ಕನ್ನಡದಲ್ಲಿ ಇಂತಹ ಎರಡು ಬಗೆಯ ಪದಗಳು ಬಳಕೆಯಲ್ಲಿವೆ: ಚಿಲ್ಲನೆ, ತಟ್ಟನೆ, ದುಡುಮ್ಮನೆ, ತಟಾರನೆ, ದಿಡೀರನೆ ಮೊದಲಾದ ಒತ್ತುಬರಿಗೆ ಇಲ್ಲವೇ ಉದ್ದ ತೆರೆಯುಲಿಯಿರುವ ಪದಗಳು, ಮತ್ತು ಚಟಚಟನೆ, ದಡದಡನೆ, ಪಳಪಳನೆ ಮೊದಲಾದ ಒತ್ತುಬರಿಗೆ ಇಲ್ಲವೇ ಉದ್ದ ತೆರೆಯುಲಿಯಿಲ್ಲದ ಪದಗಳು. ಇವುಗಳಲ್ಲಿ ಮೊದಲನೇ ಬಗೆಯ ಪದಗಳು ಒಮ್ಮೆಗೇನೇ ನಡೆದು ಹೋಗುವ ಎಸಕಗಳ ಪರಿಚೆಯನ್ನು ಸೂಚಿಸುತ್ತವೆ; ಇದನ್ನು ದೊಪ್ಪನೆ ಕೆಳಗೆ ಬಿತ್ತು, ಗಬಕ್ಕನೆ ಬಾಯಿ ಹಾಕಿತು, ಬುರ್ರನೆ ಹಾರಿಹೋಯಿತು ಮೊದಲಾದ ಎತ್ತುಗೆಗಳಲ್ಲಿ ಕಾಣಬಹುದು. ಎರಡನೇ ಬಗೆಯ ಪದಗಳು ತುಸು ಹೊತ್ತು ನಡೆಯುತ್ತಿರುವ ಎಸಕಗಳ ಪರಿಚೆಯನ್ನು ಸೂಚಿಸುತ್ತವೆ. ಎಲ್ಲರೂ ದಡದಡನೆ ಇಳಿದು ಬಂದರು, ಪಳಪಳನೆ ಹೊಳೆಯುತ್ತಿತ್ತು, ಗಬಗಬನೆ ತಿಂದುಮುಗಿಸಿದ ಮೊದಲಾದ ಎತ್ತುಗೆಗಳಲ್ಲಿ ಇದನ್ನು ಕಾಣಬಹುದು.

ಅಣಕುಪದಗಳ ನಡುವಿರುವ ಈ ವ್ಯತ್ಯಾಸವನ್ನು ಗಮನಿಸದಿದ್ದಲ್ಲಿ ತೊಂದರೆಯಾಗುತ್ತದೆ: ಎತ್ತುಗೆಗಾಗಿ, ದಡಕ್ಕೆಂದು ಗಾಡಿ ಕೊರಕಲಲ್ಲಿ ಬಿದ್ದು ಎದ್ದು ಕುಲುಕಾಡುತ್ತ ಸಾಗಿತ್ತು ಎಂಬ ಸೊಲ್ಲಿನಲ್ಲಿ ತುಸು ಹೊತ್ತು ನಡೆಯುತ್ತಿರುವ ಒಂದು ಎಸಕವನ್ನು ಸೂಚಿಸಲಾಗಿದೆ; ಆದರೆ, ಇದರಲ್ಲಿ ಒಮ್ಮೆಗೇನೇ ನಡೆದು ಹೋಗುವಂತಹ ಎಸಕದ ಪರಿಚೆಯನ್ನು ಸೂಚಿಸಬಲ್ಲ ದಡಕ್ಕನೆ ಎಂಬ ಅಣಕು ಪದವನ್ನು ಬಳಸಲಾಗಿದೆ, ಮತ್ತು ಇದರಿಂದಾಗಿ ಈ ಸೊಲ್ಲು ಅಶ್ಟು ಚನ್ನಾಗಿ ಓದಿಸಿಕೊಂಡು ಹೋಗುವುದಿಲ್ಲ. ಇದಕ್ಕೆ ಬದಲು, ತುಸು ಹೊತ್ತು ನಡೆಯುವಂತಹ ಎಸಕದ ಪರಿಚೆಯನ್ನೇ ತಿಳಿಸಬಲ್ಲ ದಡದಡನೆ ಎಂಬಂತಹ ಅಣಕು ಪದವನ್ನು ಬಳಸಿದಲ್ಲಿ ಅದು ಹೆಚ್ಚು ಚನ್ನಾಗಿ ಓದಿಸಿಕೊಂಡು ಹೋಗಬಲ್ಲುದು.

ಬರಹದಲ್ಲಿ ಬರುವ ಕೆಲವು ಸೊಲ್ಲುಗಳು ಯಾಕೆ ಅಶ್ಟು ಚನ್ನಾಗಿ ಓದಿಸಿ ಕೊಂಡು ಹೋಗುತ್ತವೆ, ಮತ್ತು ಬೇರೆ ಕೆಲವು ಸೊಲ್ಲುಗಳು ಯಾಕೆ ಆ ರೀತಿ ಓದಿಸಿಕೊಂಡು ಹೋಗುವುದಿಲ್ಲ ಎಂಬುದನ್ನು ತಿಳಿಯಲು, ಮತ್ತು ಚನ್ನಾಗಿ ಓದಿಸಿಕೊಂಡು ಹೋಗದಿರುವ ಸೊಲ್ಲೊಂದು ತಮ್ಮ ಬರಹದಲ್ಲಿ ಬಂದಿದೆಯಾದರೆ, ಅದನ್ನು ಬದಲಾಯಿಸುವುದು ಹೇಗೆ ಎಂಬುದನ್ನು ತಿಳಿಯಲು ಸೊಲ್ಲರಿಮೆಯ ತಿಳಿವು ಈ ರೀತಿ ಬರಹಗಾರರ ನೆರವಿಗೆ ಬರಬಲ್ಲುದು.

(ಈ ಬರಹ ವಿಜಯ ಕರ‍್ನಾಟಕ ಸುದ್ದಿಹಾಳೆಯ ’ಎಲ್ಲರ ಕನ್ನಡ’ ಅಂಕಣದಲ್ಲಿ ಮೊದಲು ಮೂಡಿಬಂದಿತ್ತು)

ಮೂಲ : ಹೊನಲು

ಬರಹದಲ್ಲಿ ಯಾವುದು ಸರಿ, ಯಾವುದು ತಪ್ಪು

ಕನ್ನಡದಲ್ಲಿ ಬಳಕೆಯಾಗುವ ಪದಗಳು ಮತ್ತು ಪದರೂಪಗಳುಸರಿಯೋ ತಪ್ಪೋ ಎಂಬುದನ್ನು ತೀರ‍್ಮಾನಿಸುವಲ್ಲಿ ನಾವು ಯಾವ ಕಟ್ಟಲೆಗಳನ್ನು ಬಳಸಬೇಕು? ಕನ್ನಡದ ಕಟ್ಟಲೆಗಳನ್ನೇ ಬಳಸಬೇಕೆಂದು ಯಾರೂ ಹೇಳಬಹುದು. ಆದರೆ, ಇವತ್ತು ಹಲವು ಮಂದಿ ಕನ್ನಡದ ವಿದ್ವಾಂಸರಿಗೆ ಇದು ಒಪ್ಪಿಗೆಯಾಗುವುದಿಲ್ಲ. ಸಂಸ್ಕ್ರುತದಿಂದ ಎರವಲಾಗಿ ಪಡೆದ ಪದಗಳನ್ನು ಕನ್ನಡದಲ್ಲಿ ಬಳಸುವಾಗ ಸಂಸ್ಕ್ರುತದ ಕಟ್ಟಲೆಗಳನ್ನೇ ತಪ್ಪದೆ ಬಳಸಬೇಕೆಂಬುದಾಗಿ ಅವರು ಹೇಳುತ್ತಾರೆ. ಕನ್ನಡದ ವಿದ್ವಾಂಸರಲ್ಲಿ ಹಿಂದಿನ ಕಾಲದಿಂದಲೂ ಬೆಳೆದುಬಂದಿರುವ ಕನ್ನಡದ ಕುರಿತಾಗಿರುವ ಕೀಳರಿಮೆ ಮತ್ತು ಸಂಸ್ಕ್ರುತದ ಕುರಿತಾಗಿರುವ ಅತಿಯಾದ ಆದರ ಮತ್ತು ಅಬಿಮಾನಗಳೇ ಇದಕ್ಕೆ ಕಾರಣ.

ಎತ್ತುಗೆಗಾಗಿ, ಸೊಲ್ಲರಿಗರನ್ನು ಸೂಚಿಸಲು ಸಂಸ್ಕ್ರುತದಲ್ಲಿ ಎರಡು ಪದಗಳಿವೆ. ಇವುಗಳಲ್ಲಿ ‘ವಯ್ಯಾಕರಣಃ’ ಎಂಬುದು ಗಂಡಸರನ್ನು ಸೂಚಿಸುತ್ತದೆ ಮತ್ತು ‘ವಯ್ಯಾಕರಣೀ’ ಎಂಬುದು ಹೆಂಗಸರನ್ನು ಸೂಚಿಸುತ್ತದೆ. ಆದರೆ, ಕನ್ನಡದಲ್ಲಿ ಗಂಡಸರನ್ನು ಸೂಚಿಸುವುದಕ್ಕಾಗಿಯೂ ‘ವಯ್ಯಾಕರಣಿ’ ಎಂಬ ಪದವೇ ಬಳಕೆಗೆ ಬಂದಿದೆ. ಇದನ್ನು ಕಿಟ್ಟೆಲ್ ಅವರ ಡಿಕ್ಶನರಿಯಲ್ಲಿ ನೋಡಬಹುದು. ಆದರೆ ಇದು ತಪ್ಪು, ಗಂಡಸರನ್ನು ಸೂಚಿಸಲು ‘ವಯ್ಯಾಕರಣ’ ಎಂಬುದನ್ನೇ ಬಳಸಬೇಕು ಎಂಬುದಾಗಿ ಕೆಲವರು ಕನ್ನಡದ ವಿದ್ವಾಂಸರು ವಾದಿಸುತ್ತಾರೆ.

ಇದಕ್ಕೆ ಅವರಿಗೆ ಸಂಸ್ಕ್ರುತ ವ್ಯಾಕರಣದ ಕಟ್ಟಲೆಯೇ ಆದಾರ. ಆದರೆ ನಿಜಕ್ಕೂ ಇದು ಸರಿಯಲ್ಲ. ಯಾಕೆಂದರೆ, ಯಾವ ನುಡಿಯಿಂದಲೇ ಆಗಲಿ ಒಂದು ಪದವನ್ನು ಎರವಲಾಗಿ ಪಡೆದ ಮೇಲೆ, ಅದನ್ನು ಯಾವ ರೀತಿಯಲ್ಲಿ ಮತ್ತು ಯಾವ ರೂಪದಲ್ಲಿ ಬಳಸಬೇಕು ಎಂಬುದಕ್ಕೆ ಎರವಲಾಗಿ ಪಡೆದ ನುಡಿಯಲ್ಲಿರುವ ಬಳಕೆಯ ಕಟ್ಟಲೆಗಳೇ ಆದಾರವಾಗಬೇಕಲ್ಲದೆ ಎರವಲು ಕೊಟ್ಟ ನುಡಿಯ ಕಟ್ಟಲೆಗಳಲ್ಲ.

ಎತ್ತುಗೆಗಾಗಿ, ಸಂಸ್ಕ್ರುತದಿಂದ ಹಲವು ನಾಮಪದಗಳನ್ನು ನಾವು ಕನ್ನಡಕ್ಕೆ ಎರವಲಾಗಿ ಪಡೆದು ಬಳಸುತ್ತೇವೆ. ಇವುಗಳಲ್ಲಿ ಕೆಲವಕ್ಕೆ ಇಸು ಒಟ್ಟನ್ನು ಸೇರಿಸಿ ಕ್ರಿಯಾಪದಗಳಾಗಿ ಮಾಡಿಯೂ ಬಳಸುತ್ತೇವೆ (ಜಪ-ಜಪಿಸು, ಕೋಪ-ಕೋಪಿಸು, ರುಚಿ-ರುಚಿಸು). ಆದರೆ, ಈ ಬಳಕೆಗೆ ಕನ್ನಡದ ಕಟ್ಟಲೆಗಳು ಆದಾರವಲ್ಲದೆ ಸಂಸ್ಕ್ರುತದ ಕಟ್ಟಲೆಗಳಲ್ಲ.

ಸಂಸ್ಕ್ರುತದಿಂದ ಎರವಲಾಗಿ ಪಡೆದ ಪದಗಳ ಲಿಂಗವನ್ನು ನಿರ‍್ದರಿಸುವಲ್ಲೂ ನಾವು ಕನ್ನಡದ ಕಟ್ಟಲೆಗಳನ್ನು ಬಳಸುತ್ತೇವಲ್ಲದೆ ಸಂಸ್ಕ್ರುತದ ಕಟ್ಟಲೆಗಳನ್ನಲ್ಲ. ಎತ್ತುಗೆಗಾಗಿ, ಸಂಸ್ಕ್ರುತದಲ್ಲಿ ಪುಲ್ಲಿಂಗದಲ್ಲಿರುವ ದೇಶ, ಮಾರ‍್ಗ, ದೀಪ ಮೊದಲಾದ ಪದಗಳನ್ನು, ಮತ್ತು ಸ್ತ್ರೀಲಿಂಗದಲ್ಲಿರುವ ನದಿ, ಲಿಪಿ, ಚರ‍್ಚೆ ಮೊದಲಾದ ಪದಗಳನ್ನು ನಾವು ನಪುಂಸಕ ಲಿಂಗದಲ್ಲಿ ಬಳಸುತ್ತೇವಲ್ಲದೆ ಪುಲ್ಲಿಂಗ ಇಲ್ಲವೇ ಸ್ತ್ರೀಲಿಂಗದಲ್ಲಲ್ಲ. ಸಂಸ್ಕ್ರುತದಲ್ಲಿ ನಾಮಪದಗಳಿಂದ ಬೇರಾದ ಗುಣಪದಗಳೆಂಬ ಪದಗಳಿಲ್ಲ.

ಹೀಗಿದ್ದರೂ, ಸಂಸ್ಕ್ರುತದಿಂದ ಎರವಲಾಗಿ ಪಡೆದ ಪದಗಳಲ್ಲಿ ವ್ಯಾವಹಾರಿಕ, ಸಾಮಾಜಿಕ, ಯಾಂತ್ರಿಕ ಮೊದಲಾದ ಹಲವು ಪದಗಳನ್ನು ನಾವು ನಾಮಪದಗಳಿಂದ ಬೇರಾಗಿರುವ ಗುಣಪದಗಳಾಗಿ ಬಳಸುತ್ತೇವೆ. ಹಾಗಾಗಿ, ವಯ್ಯಾಕರಣಿಯಂತಹ ಪದಗಳ ಮಟ್ಟಿಗೂ ನಾವು ಇದೇ ಕ್ರಮವನ್ನು ಅನುಸರಿಸುವುದು ಸರಿಯಾದ ದಾರಿ. ಕನ್ನಡದಲ್ಲಿ ಅವು ಯಾವ ರೀತಿಯಲ್ಲಿ ಬಳಕೆಗೆ ಬಂದಿವೆ ಎಂಬುದು ನಮಗೆ ಮುಕ್ಯವಲ್ಲದೆ ಆ ಬಳಕೆ ಸಂಸ್ಕ್ರುತದ ನಿಯಮಗಳಿಗೆ ಅನುಸಾರವಾಗಿದೆಯೇ ಇಲ್ಲವೇ ಎಂಬುದು ಮುಕ್ಯವಲ್ಲ.

ಸಂಸ್ಕ್ರುತದಿಂದ ಎರವಲಾಗಿ ಪಡೆದ ಪದಗಳಲ್ಲಿ ಬರುವ ಮಹಾಪ್ರಾಣ, ಷಕಾರ, ಋಕಾರ ಮೊದಲಾದ ಕೆಲವು ಬರಿಗೆಗಳು ಹೆಚ್ಚಿನ ಕನ್ನಡಿಗರ ಓದಿನಲ್ಲಿ ಇಲ್ಲವೇ ಮಾತಿನಲ್ಲಿ ಕಾಣಿಸುವುದಿಲ್ಲ; ಹಾಗಿದ್ದರೂ ‘ಅವನ್ನು ಸಂಸ್ಕ್ರುತದಲ್ಲಿರುವ ಹಾಗೆಯೇ ಬರೆಯಬೇಕು; ಇಲ್ಲವಾದರೆ ಅದು ತಪ್ಪಾಗುತ್ತದೆ’ ಎಂದು ಹೇಳುವುದೂ ಸಂಸ್ಕ್ರುತದ ಕಟ್ಟಲೆಗಳನ್ನು ಕನ್ನಡದ ಮೇಲೆ ಹೊರಿಸುವ ತಪ್ಪು ದಾರಿಯಾಗಿದೆ. ಹೆಚ್ಚಿನ ಕನ್ನಡಿಗರ ಓದಿನಲ್ಲಿ ಇಲ್ಲವೇ ಮಾತಿನಲ್ಲಿ ಈ ಎರವಲು ಪದಗಳು ಹೇಗೆ ಕಾಣಿಸುತ್ತವೆಯೋ ಹಾಗೆ ಬರೆಯುವುದೇ ಕನ್ನಡದ ಮಟ್ಟಿಗೆ ಸರಿಯಾದ ದಾರಿ.

ಇನ್ನೊಂದು ಬಗೆಯ ‘ತಪ್ಪು’ಗಳು ಆಡುನುಡಿಯಿಂದ ಪದಗಳನ್ನು ಇಲ್ಲವೇ ಪದರೂಪಗಳನ್ನು ಬರಹಕ್ಕೆ ತಂದು ಬಳಸುವಲ್ಲಿ ಕಾಣಿಸಿಕೊಳ್ಳುತ್ತವೆ. ಆಡುನುಡಿಯೆಂಬುದು ಊರಿನಿಂದ ಊರಿಗೆ ಮತ್ತು ಜಾತಿಯಿಂದ ಜಾತಿಗೆ ಬೇರೆ ಬೇರಾಗಿರುತ್ತದೆ. ಆದರೆ, ಬರಹದ ನುಡಿ ಎಲ್ಲಾ ಊರು ಮತ್ತು ಜಾತಿಗಳಿಗೂ ಸಮಾನವಾಗಿರಬೇಕೆಂದು ನಾವು ಬಯಸುತ್ತೇವೆ. ಯಾಕೆಂದರೆ, ಹಾಗಿಲ್ಲವಾದರೆ ಒಂದು ಊರಿನ ಮತ್ತು ಜಾತಿಯ ಬರಹಗಾರರು ಬರೆದುದನ್ನು ಇನ್ನೊಂದು ಊರಿನ ಮತ್ತು ಜಾತಿಯ ಜನರಿಗೆ ಓದಿ ಅರ‍್ತಮಾಡಿಕೊಳ್ಳಲು ಕಶ್ಟವಾಗುತ್ತದೆ.

ಈ ಸಮಾನತೆಯನ್ನು ಉಳಿಸಿಕೊಳ್ಳುವುದಕ್ಕಾಗಿ ಬರಹದ ನುಡಿಯಲ್ಲಿ ಎಂತಹ ಮಾರ‍್ಪಾಡನ್ನು ನಡೆಸುವುದಿದ್ದರೂ ಅದು ಎಲ್ಲಾ ಊರು ಮತ್ತು ಜಾತಿಗಳಿಗೆ ಸೇರಿದ ಜನರಿಗೂ ಒಪ್ಪಿಗೆಯಾಗುವಂತಹದಾಗಿರಬೇಕು. ಎಲ್ಲಾ ಬರಹಗಾರರೂ ತಮಗೆ ಅನಿಸಿದ ಹಾಗೆ ತಮ್ಮ ಬರಹದ ನುಡಿಯಲ್ಲಿ ಮಾರ‍್ಪಾಡುಗಳನ್ನು ಮಾಡಹೊರಟರೆ ಈ ಸಮಾನತೆ ಪೂರ‍್ತಿ ಅಳಿದು ಹೋದೀತು.

ಬರಹದಲ್ಲಿ ತಪ್ಪು-ಸರಿ ಎಂಬ ಪರಿಕಲ್ಪನೆಯನ್ನು ಈ ಅರ‍್ತದಲ್ಲಿ ಬಳಸಲು ಸಾದ್ಯವಿದೆ. ಕನ್ನಡದ ಕೆಲವು ಆಡುನುಡಿಗಳಲ್ಲಿ ಪದಗಳ ಮೊದಲಿನ ಹಕಾರ ಬಿದ್ದುಹೋಗಿದೆ; ಹಾಲು ಎಂಬುದು ಆಲು ಎಂದಾಗಿದೆ, ಹಣ್ಣು ಎಂಬುದು ಅಣ್ಣು ಎಂದಾಗಿದೆ, ಹುಳ ಎಂಬುದು ಉಳ ಎಂದಾಗಿದೆ. ಈ ರೀತಿ ಕೆಲವರು ಕನ್ನಡಿಗರು ತಮ್ಮ ಆಡುನುಡಿಯ ಪದಗಳಲ್ಲಿದ್ದ ಹಕಾರವನ್ನು ಕಳೆದುಕೊಂಡುದರಲ್ಲಿ ತಪ್ಪಾಗಿರುವಂತಹದು ಏನೂ ಇಲ್ಲ. ಅದು ಅವರ ಆಡುನುಡಿಯಲ್ಲಿ ಸ್ವಾಬಾವಿಕವಾಗಿ ನಡೆದಿರುವ ಒಂದು ಮಾರ‍್ಪಾಡು ಮಾತ್ರ. ಇದಲ್ಲದೆ, ಅದು ಅವರ ಆಡುನುಡಿಯನ್ನು ಕೆಡಿಸಿಲ್ಲ; ಅದರ ಜೀವಂತಿಕೆಯನ್ನು ಉಳಿಸಿದೆ.

ಆದರೆ, ಕನ್ನಡದ ಬೇರೆ ಹಲವು ಆಡುನುಡಿಗಳಲ್ಲಿ ಪದಗಳ ಮೊದಲಿನ ಹಕಾರ ಈ ರೀತಿ ಬಿದ್ದುಹೋಗಿಲ್ಲ; ಹಾಗಾಗಿ, ಇವತ್ತು ಎಲ್ಲಾ ಊರು ಮತ್ತು ಜಾತಿಗಳಿಗೂ ಸಮಾನವಾಗಿರಬೇಕಾದ ಬರಹದ ಕನ್ನಡದಲ್ಲಿ ಹಕಾರವನ್ನು ಉಳಿಸಿಕೊಳ್ಳಬೇಕೇ ಇಲ್ಲವೇ ಬಿದ್ದುಹೋಗಲು ಬಿಡಬೇಕೇ ಎಂಬುದನ್ನು ನಿರ‍್ದರಿಸಬೇಕಾಗುತ್ತದೆ. ಉಳಿಸಬೇಕೆಂದು ಹೆಚ್ಚಿನ ಕನ್ನಡಿಗರೂ ಬಯಸುವುದಾದರೆ, ಬರಹದಲ್ಲಿ ಹಕಾರವನ್ನು ಬಳಸದಿರುವುದು (ಇಲ್ಲವೇ ಬೇಡದಲ್ಲಿ ಬಳಸುವುದು) ‘ತಪ್ಪಾ’ಗುತ್ತದೆ.

ಇದೇ ರೀತಿಯಲ್ಲಿ, ಇವತ್ತು ಬಡಗ ಕರ‍್ನಾಟಕದ ಕೆಲವು ಆಡುನುಡಿಗಳಲ್ಲಿ ನಾಮಪದಗಳ ಕೊನೆಯಲ್ಲಿದ್ದ ಎಕಾರ ಇಕಾರವಾಗಿದೆ. ಮನೆ ಎಂಬುದು ಮನಿ ಎಂದಾಗಿದೆ, ಕಾಗೆ ಎಂಬುದು ಕಾಗಿ ಎಂದಾಗಿದೆ, ಕುದುರೆ ಎಂಬುದು ಕುದ್ರಿ ಎಂದಾಗಿದೆ. ಆದರೆ ಕನ್ನಡದ ಬೇರೆ ಆಡುನುಡಿಗಳಲ್ಲಿ ಈ ಮಾರ‍್ಪಾಡು ನಡೆದಿಲ್ಲ. ಇಲ್ಲೂ ಕೂಡ, ಎಲ್ಲರಿಗೂ ಸಮಾನವಾಗಿರಬೇಕಾದ ಬರಹದ ಕನ್ನಡಕ್ಕೆ ಈ ಮಾರ‍್ಪಾಡನ್ನು ತರಬೇಕೇ ಬೇಡವೇ ಎಂಬುದನ್ನು ತೀರ‍್ಮಾನಿಸಬೇಕಾಗುತ್ತದೆ, ಮತ್ತು ಬೇಡವೆಂದು ತೀರ‍್ಮಾನಿಸಿದಲ್ಲಿ ಹಾಗೆ ತರುವುದು ಬರಹದ ಮಟ್ಟಿಗೆ ‘ತಪ್ಪು’ ಎಂಬುದಾಗಿ ಶಾಲೆಗಳಲ್ಲಿ ಮಕ್ಕಳಿಗೆ ಕಲಿಸಬೇಕಾಗುತ್ತದೆ.

ಆದರೆ, ಇಂತಹ ಯಾವ ಮಾರ‍್ಪಾಡೂ ಬರಹದ ಕನ್ನಡವನ್ನು ಕೆಡಿಸುವುದಿಲ್ಲ ಎಂಬುದನ್ನು ಇಲ್ಲಿ ಗಮನಿಸುವುದು ಅವಶ್ಯ. ಆಲು ಇಲ್ಲವೇ ಮನಿ ಎಂಬ ಪದರೂಪದಲ್ಲಿಲ್ಲದಂತಹ ನುಡಿಯ ಬಳಕೆಗೆ ಅವಶ್ಯವಾಗಿರುವ ಯಾವ ಅಂಶವೂ ಹಾಲು ಇಲ್ಲವೇ ಮನೆ ಎಂಬ ಪದರೂಪದಲ್ಲಿಲ್ಲ. ಇಲ್ಲಿ ತಪ್ಪು ಮತ್ತು ಸರಿ ಎಂಬವುಗಳು ಎಂತಹ ಬರಹ ನಮ್ಮೊಳಗೆ ಸಮಾನವಾಗಿ ಉಳಿಯಬೇಕು ಎಂಬ ತೀರ‍್ಮಾನವನ್ನಶ್ಟೇ ಅವಲಂಬಿಸಿದೆ. ಇವತ್ತು ಬಳಕೆಯಲ್ಲಿರುವ ತೀರ‍್ಮಾನವನ್ನು ನಾವು ಅವಶ್ಯವೆಂದೆನಿಸಿದಲ್ಲಿ ಮಾರ‍್ಪಡಿಸಬಲ್ಲೆವು, ಮತ್ತು ಹಾಗೆ ಮಾರ‍್ಪಡಿಸಿದಾಗ ಇವತ್ತು ತಪ್ಪು ಎಂದು ತಿಳಿದಿರುವ ಪದರೂಪಗಳು ಸರಿಯೆಂದೆನಿಸಬಲ್ಲುವು.

ಸಂಸ್ಕ್ರುತ ಎರವಲುಗಳನ್ನು ಹೆಚ್ಚು ಕಡಿಮೆ ಸಂಸ್ಕ್ರುತದಲ್ಲಿರುವ ಹಾಗೆಯೇ ಬರೆಯಬೇಕು ಎಂಬ ಕಟ್ಟಲೆ ಕನ್ನಡದ ಮಟ್ಟಿಗೆ ತೀರ ಅನವಶ್ಯಕವಾದುದು ಮಾತ್ರವಲ್ಲ, ಕನ್ನಡ ಬರಹವನ್ನು ಎಲ್ಲಾ ಕನ್ನಡಿಗರೂ ಸುಲಬವಾಗಿ ಕಲಿತು ತಮ್ಮದಾಗಿಸಿಕೊಳ್ಳುವಲ್ಲಿ ಒಂದು ದೊಡ್ಡ ತೊಡಕಾಗಿದೆ; ಕೆಲವೇ ಕೆಲವು ಜನರಶ್ಟೇ ಬರಹವನ್ನು ಬಳಸುತ್ತಿದ್ದ ಹಿಂದಿನ ಕಾಲದಲ್ಲಿ ಈ ಕಟ್ಟಲೆ ಹೆಚ್ಚು ತೊಡಕಿನದೆಂದು ಅನಿಸುತ್ತಿರಲಿಲ್ಲ. ಆದರೆ, ಇವತ್ತು ಎಲ್ಲಾ ಕನ್ನಡಿಗರೂ ಬರಹಬಲ್ಲವರಾಗಬೇಕಾಗಿದೆ; ಹಾಗಾಗಿ, ಕನ್ನಡಕ್ಕೆ ಬೇಡದ ಈ ಸಂಸ್ಕ್ರುತದ ಹೊರೆಯನ್ನು ತೆಗೆದುಹಾಕುವುದೇ ಒಳ್ಳೆಯದು.

(ಈ ಬರಹ ವಿಜಯ ಕರ‍್ನಾಟಕ ಸುದ್ದಿಹಾಳೆಯ ’ಎಲ್ಲರ ಕನ್ನಡ’ ಅಂಕಣದಲ್ಲಿ ಮೊದಲು ಮೂಡಿಬಂದಿತ್ತು)

ಮೂಲ : ಹೊನಲು

ಕಲಿಕೆ ಮತ್ತು ಅರಕೆ

ಯಾವುದಾದರೂ ಒಂದು ವಿಶಯವನ್ನು ಕಲಿಯುವುದಕ್ಕೂ, ಅದರ ಮೇಲೆ ಅರಕೆ (ಸಂಶೋದನೆ) ನಡೆಸುವುದಕ್ಕೂ ನಡುವೆ ಕೆಲವು ಮುಕ್ಯವಾದ ವ್ಯತ್ಯಾಸಗಳಿವೆ; ನಾವು ಎತ್ತಿಕೊಂಡ ವಿಶಯದ ಮೇಲೆ ಬೇರೆ ಬೇರೆ ಹೊತ್ತಗೆಗಳಲ್ಲಿ, ಬಿಡಿ ಬರಹಗಳಲ್ಲಿ, ಮತ್ತು ಅವನ್ನು ಓದಿ ತಿಳಿದುಕೊಂಡಿರುವ ತಿಳಿವಿಗರಲ್ಲಿ ಸಾಕಶ್ಟು ತಿಳಿವುಗಳು ಕಲೆತಿರುತ್ತವೆ. ಅಂತಹ ಹೊತ್ತಗೆ ಮತ್ತು ಬಿಡಿ ಬರಹಗಳನ್ನು ಓದಿ, ತಿಳಿವಿಗರು ಹೇಳುವುದನ್ನು ಕೇಳಿ, ಆ ವಿಶಯದ ಕುರಿತು ತಿಳಿವನ್ನು ಕಲೆಹಾಕುವುದಕ್ಕೆ ಕಲಿಕೆ ಎಂದು ಹೆಸರು.

ಅರಕೆ ಎಂಬುದು ಇದಕ್ಕಿಂತ ತೀರ ಬೇರಾದುದು; ಒಂದು ವಿಶಯದ ಕುರಿತು ತಮ್ಮ ಸಮಾಜದಲ್ಲಿ ಕಲೆತಿರುವ ತಿಳಿವಿನಲ್ಲಿ ತಪ್ಪುಗಳು ಏನಾದರೂ ಇವೆಯೇ, ಮತ್ತು ಆ ವಿಶಯದ ಕುರಿತಾಗಿ ಯಾರಿಗೂ ತಿಳಿಯದಿರುವಂತಹ ಹೊಸ ಸಂಗತಿಗಳೇನಾದರೂ ಇವೆಯೇ ಎಂಬುದನ್ನು ಕಂಡುಹಿಡಿಯುವುದೇ ಅರಕೆ.

ಈ ವ್ಯತ್ಯಾಸದಂತೆ, ಒಂದು ವಿಶಯವನ್ನು ನಮಗೆ ಕಲಿಯಬೇಕೆಂದಿದ್ದಲ್ಲಿ ಅದಕ್ಕೆ ಕಲಿಸುಗರ ನೆರವು ಬೇಕಾಗುತ್ತದೆ; ಆದರೆ, ಒಂದು ವಿಶಯದ ಕುರಿತು ಅರಕೆಯನ್ನು ನಡೆಸಬೇಕೆಂದಿದ್ದಲ್ಲಿ, ಅದಕ್ಕೆ ನಮಗೆ ‘ದಾರಿತೋರುಗರ’ ನೆರವು ಬೇಕಾಗುತ್ತಲ್ಲದೆ ಕಲಿಸುಗರ ನೆರವು ಬೇಕಾಗುವುದಿಲ್ಲ.

ಕಲಿಯುವವರ ಮಟ್ಟಿಗೆ ಕಲಿಸುಗರೆಂದರೆ ಎಲ್ಲವನ್ನೂ ತಿಳಿದವರು; ಕಲಿಯುವವರಲ್ಲಿ ಏಳುವ ಸಂಶಯಗಳನ್ನೆಲ್ಲ ಇಲ್ಲವಾಗಿಸುವ ಅಳವು ಅವರಿಗಿದೆ; ಹಾಗಾಗಿ, ಅವರು ಏನು ಹೇಳುತ್ತಿದ್ದಾರೆ ಎಂಬುದನ್ನು ಕಿವಿಗೊಟ್ಟು ಕೇಳಿ, ಅದನ್ನು ಸರಿಯಾಗಿ ತಿಳಿದುಕೊಳ್ಳುವುದೇ ಕಲಿಗರು ಮಾಡಬೇಕಾಗಿರುವ ಮುಕ್ಯ ಕೆಲಸ.

ಆದರೆ, ಅರಕೆಯನ್ನು ನಡೆಸುವವರ ಮಟ್ಟಿಗೆ ಎಲ್ಲವನ್ನೂ ತಿಳಿದವರು ಯಾರೂ ಇಲ್ಲ; ದಾರಿತೋರುಗರು ಅವರಿಗೆ ಯಾವ ರೀತಿಯಲ್ಲಿ ಅರಕೆಯನ್ನು ನಡೆಸಬಹುದು ಎಂಬುದನ್ನು ತಿಳಿಸಬಲ್ಲರಲ್ಲದೆ, ಅರಕೆಯ ಕೊನೆಯ ತೀರ‍್ಮಾನ ಹೇಗಿರಬಹುದು, ಇಲ್ಲವೇ ಹೇಗಿರಬೇಕು ಎಂಬುದನ್ನು ತಿಳಿಸಲಾರರು. ಅದನ್ನು ತಮ್ಮ ಅರಕೆಗಳ ಮೂಲಕ ಹೊಸದಾಗಿ ಕಂಡುಹಿಡಿಯುವುದೇ ಅರಕೆಯನ್ನು ನಡೆಸುವವರ ಮುಕ್ಯ ಕೆಲಸ. ಈ ರೀತಿ, ಯಾರಿಗೂ ಗೊತ್ತಿಲ್ಲದಿರುವ ಸಂಗತಿಗಳನ್ನು ಕಂಡುಹಿಡಿಯುವ ಮೂಲಕ, ಮತ್ತು ತಪ್ಪು ತಪ್ಪಾಗಿ ತಿಳಿದುಕೊಂಡಿರುವ ಸಂಗತಿಗಳನ್ನು ಸರಿಪಡಿಸುವ ಮೂಲಕ ಸಮಾಜದಲ್ಲಿರುವ ತಿಳಿವಿನ ಬೊಕ್ಕಸವನ್ನು ಹಿರಿದಾಗಿಸುವುದೇ ಅರಕೆ ನಡೆಸುವವರ ಕೆಲಸವಾಗಿದೆ.

ಕಲಿಕೆಗೂ ಅರಕೆಗೂ ನಡುವೆ ವ್ಯತ್ಯಾಸವಿರುವ ಹಾಗೆ, ಕಲಿಕೆಯನ್ನು ಕೊಡಿಸುವ ಕಲಿಸುಗರಿಗೂ ಅರಕೆಯನ್ನು ನಡೆಸಲು ದಾರಿತೋರುಗರಿಗೂ ನಡುವೆ ವ್ಯತ್ಯಾಸವಿರುವುದು ಅವಶ್ಯ. ಕಲಿಸುಗನೊಬ್ಬ ತಾನು ಕಲಿಸುವ ವಿಶಯವನ್ನು ಸರಿಯಾಗಿ ತಿಳಿದಿರಬೇಕು ಮಾತ್ರವಲ್ಲ, ತಾನು ತಿಳಿದಿರುವುದೆಲ್ಲವೂ ಸರಿ ಎಂಬ ಆತ್ಮವಿಶ್ವಾಸವೂ ಆತನಲ್ಲಿರಬೇಕು. ಈ ವಿಶಯದಲ್ಲಿ ಸ್ವಲ್ಪವಾದರೂ ಸಂಶಯವಿದೆಯಾದರೆ, ಆತ ಎದೆಗಾರಿಕೆಯಿಂದ ಕಲಿಗರಿಗೆ ಕಲಿಸಿಕೊಡಲಾರ.

ಆದರೆ, ಅರಕೆಯನ್ನು ನಡೆಸುವವರು, ಮತ್ತು ಅರಕೆಗೆ ದಾರಿ ತೋರಿಸುವವರು ಯಾವ ಹೇಳಿಕೆಯನ್ನೂ ಪೂರ‍್ತಿಯಾಗಿ ಸರಿಯೆಂದು ತಿಳಿದುಕೊಳ್ಳಬಾರದು. ಎಲ್ಲವನ್ನೂ ಸಂಶಯದಿಂದ ನೋಡಿದಾಗ ಮಾತ್ರ ಅವರ ಅರಕೆ ಮುಂದೆ ಹೋಗಬಲ್ಲುದು. ಎಂತಹ ದೊಡ್ಡ ತಿಳಿವಿಗರು ಹೇಳಿದ್ದನ್ನೂ ಹಾಗೆಯೇ ಒಪ್ಪಿಕೊಳ್ಳದೆ ವಿಚಾರಣೆಗೆ ಒಳಪಡಿಸಲು ಅವರು ಅಣಿಯಾಗಿರಬೇಕು.

ಈ ಕಾರಣಕ್ಕಾಗಿ, ಪರೀಕ್ಶೆಗಳಲ್ಲಿ ರ‍್ಯಾಂಕ್ ಗಳಿಸುವ ಕಲಿಗ ಉತ್ತಮ ಅರಕೆಗಾರನಾಗಬೇಕೆಂದೇನಿಲ್ಲ. ಇದೇ ರೀತಿಯಲ್ಲಿ, ಕಲಿಗರ ಅಚ್ಚುಮೆಚ್ಚಿನ ಕಲಿಸುಗ ಅರಕೆಗಳಿಗೆ ಒಳ್ಳೆಯ ದಾರಿತೋರುಗನಾಗಬೇಕೆಂದೂ ಇಲ್ಲ. ಕಲಿಯುವುದಕ್ಕೆ ಮತ್ತು ಕಲಿಸುವುದಕ್ಕೆ ಬೇಕಾಗುವ ಮನೋಬಾವ ಅರಕೆಗೆ ಮತ್ತು ಅದರ ದಾರಿತೋರಿಕೆಗೆ ಬೇಕಾಗುವ ಮನೋಬಾವಕ್ಕಿಂತ ತೀರ ಬೇರಾಗಿರುವುದೇ ಇದಕ್ಕೆ ಕಾರಣ.

ನಮ್ಮ ವಿಶ್ವವಿದ್ಯಾಲಯಗಳಲ್ಲಿ ಈ ಎರಡು ಕೆಲಸಗಳನ್ನೂ ಒಬ್ಬರೇ ಮಾಡಬೇಕಾಗುವುದರಿಂದ, ಹೆಚ್ಚಿನೆಡೆಗಳಲ್ಲೂ ಅರಕೆಯ ಹೆಸರಿನಲ್ಲಿ ಕಲಿಕೆ ಮಾತ್ರ ನಡೆಯುವುದು ಕಾಣಿಸುತ್ತದೆ. ಈ ಎರಡು ಬಗೆಯ ಕೆಲಸಗಳನ್ನು ಒಬ್ಬರಿಗೇನೇ ನಡೆಸಿಕೊಂಡು ಹೋಗಲು ಹೆಚ್ಚಿನವರಿಗೂ ಸಾದ್ಯವಾಗದಿರುವುದೇ ಇದಕ್ಕೆ ಕಾರಣ.

ಒಮ್ಮೆ ನನ್ನ ಮಿತ್ರರೊಬ್ಬರು ಡಾಕ್ಟರೇಟ್ ಪದವಿಗಾಗಿ ತಾವು ಬರೆದ ಪೆರ‍್ಬರಹವನ್ನು ನನಗೆ ತೋರಿಸಿದರು. ಅದನ್ನು ಓದಿದಾಗ ನನಗೆ ತುಂಬಾ ಆಶ್ಚರ‍್ಯವಾಯಿತು: ಮೂವತ್ತು ವರ‍್ಶಗಳಶ್ಟು ಹಳೆಯ ಸಿದ್ದಾಂತಗಳನ್ನು ಬಳಸಿ ಅವರು ಅದನ್ನು ಬರೆದಿದ್ದರು. ಆ ಸಿದ್ದಾಂತಗಳಲ್ಲಿ ಹೆಚ್ಚಿನವೂ ಸರಿಯಲ್ಲ ಎಂದು ಅವರಿಗೆ ಸ್ಪಶ್ಟವಾಗಿ ತಿಳಿದಿದ್ದರೂ ಅವರು ಹೀಗೆ ಮಾಡಿದ್ದರು. “ಇದು ಯಾಕೆ ಹೀಗೆ?” ಎಂದು ನಾನು ಕೇಳಿದಾಗ ಅವರು ಹೇಳಿದರು, “ನನ್ನ ದಾರಿತೋರುಗರು ತಮ್ಮ ಡಾಕ್ಟರೇಟ್ ಪೆರ‍್ಬರಹದಲ್ಲಿ ಈ ಸಿದ್ದಾಂತಗಳನ್ನು ಬಳಸಿದ್ದಾರೆ; ಈಗ ನಾನು ಹೊಸ ಸಿದ್ದಾಂತಗಳನ್ನು ಬಳಸಿದಲ್ಲಿ, ಅವರು ಹಿಂದೆ ಬರೆದಿದ್ದ ಪೆರ‍್ಬರಹ ಸರಿಯಲ್ಲ ಎಂಬುದಾಗಿ ನಾನು ಹೇಳಿದ ಹಾಗಾದೀತು. ಹಾಗೆ ಮಾಡಿದಲ್ಲಿ, ನನ್ನ ಪೆರ‍್ಬರಹಕ್ಕೆ ಅವರ ಒಪ್ಪಿಗೆ ಸಿಗಲಾರದು.”

ನಮ್ಮ ವಿಶ್ವವಿದ್ಯಾಲಯಗಳಲ್ಲಿ ಜಾಗತಿಕ ಮಟ್ಟದ ಅರಕೆಗಳು ನಡೆಯದಿರುವುದಕ್ಕೆ ಒಂದು ಮುಕ್ಯವಾದ ಕಾರಣವನ್ನು ಇದು ಬಹಳ ಸ್ಪಶ್ಟವಾಗಿ ತಿಳಿಸುತ್ತದೆ. ತಮ್ಮ ದಾರಿತೋರಿಕೆಯಲ್ಲಿ ಪೆರ‍್ಬರಹಗಳನ್ನು ಬರೆಯುತ್ತಿರುವ ಅರಕೆಗಾರರು ತಾವು ಬರೆದಿರುವ ಪೆರ‍್ಬರಹಕ್ಕಿಂತ ಒಂದು ಹೆಜ್ಜೆ ಮುಂದೆ ಹೋದರೂ ಬೇಸರಪಟ್ಟುಕೊಳ್ಳುವ ತಿಳಿವಿಗರಿರುವಶ್ಟು ದಿವಸ ನಮ್ಮ ವಿಶ್ವವಿದ್ಯಾಲಯಗಳಲ್ಲಿ ಅರಕೆಗಳನ್ನು ನಡೆಸುವುದು ಅಸಾದ್ಯವೆಂದೇ ಹೇಳಬಹುದು. ತನ್ನ ಕಲಿಗನಿಂದ ಸೋಲನ್ನು ಬಯಸುವ ತಿಳಿವಿಗರು ಮಾತ್ರ ನಿಜಕ್ಕೂ ಅರಕೆಗೆ ದಾರಿತೋರಿಸಬಲ್ಲರು. ಅಂತಹ ತಿಳಿವಿಗರು ನಮ್ಮಲ್ಲಿ ಬೆರಳೆಣಿಕೆಯಶ್ಟೂ ಇಲ್ಲ ಎಂಬುದು ಬೇಸರದ ಸಂಗತಿ.

ಈ ಮಾತು ಎಶ್ಟು ಸರಿ ಎಂಬುದನ್ನು ಕನ್ನಡದ ಸೊಲ್ಲರಿಮೆಯ (ವ್ಯಾಕರಣದ) ಕುರಿತಾಗಿ ನಡೆದಿರುವ ಅರಕೆಗಳನ್ನು ಪರಿಶೀಲಿಸಿದಲ್ಲಿ ಗೊತ್ತಾಗಬಹುದು. ಕೇಶಿರಾಜನೇ ಮೊದಲಾದ ಕನ್ನಡದ ಸೊಲ್ಲರಿಗರು ಏನು ಹೇಳಿದ್ದಾರೆ ಎಂಬುದನ್ನು ಚರ‍್ಚಿಸುವುದು ಸೊಲ್ಲರಿಮೆಯ ಕಲಿಕೆಯಲ್ಲದೆ ಅರಕೆಯಲ್ಲ. ಅವರು ಬರೆದಿರುವ ಸೊಲ್ಲರಿಮೆಯ ಕಟ್ಟಲೆಗಳಲ್ಲಿ ತಪ್ಪುಗಳೇನಾದರೂ ಇವೆಯೇ? ಇದ್ದರೆ ಅವನ್ನು ಇಲ್ಲವಾಗಿಸುವುದು ಹೇಗೆ? ಅವರು ಹೇಳದೇ ಇರುವಂತಹ ಸೊಲ್ಲರಿಮೆಯ ಕಟ್ಟಲೆಗಳು ಯಾವುವಾದರೂ ಇವೆಯೇ? ಇದ್ದರೆ ಅವು ಎಂತಹವು? ಎಂಬಂತಹ ವಿಶಯಗಳ ಕುರಿತು ಚರ‍್ಚೆ ನಡೆದಲ್ಲಿ ಮಾತ್ರ ಈ ಸೊಲ್ಲರಿಮೆಗಳ ಮೇಲೆ ಅರಕೆ ನಡೆದಿದೆಯೆಂದು ಹೇಳಬಹುದು.

ಹಳೆಗನ್ನಡದಲ್ಲಿ ದ, ದಪ, ಮತ್ತು ವ ಎಂಬ ಮೂರು ಹೊತ್ತಿನ ಒಟ್ಟುಗಳು (ಕಾಲಪ್ರತ್ಯಯಗಳು) ಬಳಕೆಯಾಗುತ್ತವೆ, ಮತ್ತು ಇವು ಹಿಂಬೊತ್ತು (ಬೂತ), ಈಪೊತ್ತು (ವರ‍್ತಮಾನ), ಮತ್ತು ಮುಂಬೊತ್ತು (ಬವಿಶ್ಯತ್) ಎಂಬ ಮೂರು ಹೊತ್ತುಗಳನ್ನು ತಿಳಿಸುತ್ತವೆ ಎಂಬುದಾಗಿ ಕೇಶಿರಾಜನೇ ಮೊದಲಾದ ಎಲ್ಲಾ ಕನ್ನಡದ ಸೊಲ್ಲರಿಗರೂ ಹೇಳುತ್ತಾರೆ. ಆದರೆ, ನಿಜಕ್ಕೂ ಈ ಹೇಳಿಕೆ ಸರಿಯಲ್ಲ; ಎತ್ತುಗೆಗಾಗಿ, ಪಂಪಬಾರತದ “ಸೆರಗಂ ಬಗೆದೊಡೆ ಸಾವಾದಪುದು” ಎಂಬ ಸೊಲ್ಲಿಗೆ ‘ಸಹಾಯವನ್ನು ಬಯಸಿದರೆ ಸಾವಾಗುತ್ತದೆ’ ಎಂಬ ಹುರುಳಿದ್ದು, ಅದರಲ್ಲಿ ಬಂದಿರುವ ದಪ ಒಟ್ಟಿಗೆ ಮುಂದೆ ಏನಾಗಬಲ್ಲುದು ಎಂಬುದನ್ನು ತಿಳಿಸುವ ಮುಂಬೊತ್ತಿನ ಹುರುಳಿದೆಯಲ್ಲದೆ ಈಗ ಏನಾಗುತ್ತಿದೆ ಎಂಬುದನ್ನು ತಿಳಿಸುವ ಈಪೊತ್ತಿನ ಹುರುಳಿಲ್ಲ.

ಆದರೆ, ಹಳೆಗನ್ನಡದ ಸೊಲ್ಲರಿಮೆಯ ಕುರಿತಾಗಿ ಅರಕೆ ನಡೆಸಿದವರು ಯಾರೂ ಇದನ್ನು ಗಮನಿಸಿದ ಹಾಗೆ ಕಾಣಿಸುವುದಿಲ್ಲ. ಇಂತಹ ಇನ್ನೂ ಹಲವಾರು ತಪ್ಪುಗಳು ಕೇಶಿರಾಜನೇ ಮೊದಲಾದ ಕನ್ನಡದ ಸೊಲ್ಲರಿಗರು ತಿಳಿಸುವ ಸೊಲ್ಲರಿಮೆಯ ಕಟ್ಟಲೆಗಳಲ್ಲಿ ಕಾಣಿಸುತ್ತವೆ; ಇದಲ್ಲದೆ, ಅವರು ಹೇಳದಿರುವಂತಹ ಬೇರೆ ಹಲವು ಕಟ್ಟಲೆಗಳೂ ಹಳೆಗನ್ನಡದ ಸೊಲ್ಲರಿಮೆಯನ್ನು ವಿವರಿಸಲು ಬೇಕಾಗುತ್ತವೆ. ಇವುಗಳಲ್ಲಿ ಕೆಲವನ್ನಾದರೂ ಪಟ್ಟಿಮಾಡಬಲ್ಲವರು ಮಾತ್ರ ನಿಜಕ್ಕೂ ಹಳೆಗನ್ನಡದ ಮೇಲೆ ಅರಕೆ ನಡೆಸಿದ್ದಾರೆಂದು ಹೇಳಲು ಬರುತ್ತದೆ.

ಬೇರೆ ಬಗೆಯ ತಿಳಿವುಗಳ ಕುರಿತಾಗಿಯೂ ನಮ್ಮ ವಿಶ್ವವಿದ್ಯಾಲಯಗಳಲ್ಲಿ ಮತ್ತು ಬೇರೆ ಬಗೆಯ ಅರಕೆಮನೆಗಳಲ್ಲಿ ಇವತ್ತು “ಅರಕೆ”ಗಳು ನಡೆಯುತ್ತಿವೆ; ಆದರೆ, ಇವುಗಳಲ್ಲಿ ಹೆಚ್ಚಿನವೂ ಮೇಲೆ ವಿವರಿಸಿದ ಹಾಗೆ ದಾರಿತಪ್ಪಿರುವ ಅರಕೆಗಳು; ಹೊಸ ತಿಳಿವನ್ನು ಕಂಡುಹಿಡಿಯುವ ಇಲ್ಲವೇ ಹಳೇ ತಿಳಿವನ್ನು ಸಾಣೆಗೆ ಹಿಡಿಯುವ ಉದ್ದೇಶ ಅವಕ್ಕಿಲ್ಲ. ಹಾಗಾಗಿ, ಅರಕೆಗಾರರಿಗೆ ಒಂದು ಡಿಗ್ರಿಯನ್ನು ಕೊಡಿಸುವ ಕೆಲಸವನ್ನಶ್ಟೇ ಅವು ನಡೆಸಬಲ್ಲುವು.

(ಈ ಬರಹ ವಿಜಯ ಕರ‍್ನಾಟಕ ಸುದ್ದಿಹಾಳೆಯ ’ಎಲ್ಲರ ಕನ್ನಡ’ ಅಂಕಣದಲ್ಲಿ ಮೊದಲು ಮೂಡಿಬಂದಿತ್ತು)

ಮೂಲ : ಹೊನಲು

ನುಡಿಗಳ ನಡುವಿನ ನಂಟಸ್ತಿಕೆ

ಜನರ ನಡುವೆ ಕಾಣಿಸುವ ಹಾಗೆ, ಅವರಾಡುವ ನುಡಿಗಳನಡುವೆಯೂ ‘ನಂಟಸ್ತಿಕೆ’ಯನ್ನು ಕಾಣಲು ಸಾದ್ಯವಿದೆ. ಕೆಲವು ನುಡಿಗಳ ನಡುವೆ ಹತ್ತಿರದ ನಂಟಸ್ತಿಕೆಯಿದೆಯೆಂದು ಹೇಳಬಹುದು, ಮತ್ತು ಬೇರೆ ಕೆಲವು ನುಡಿಗಳ ನಡುವೆ ದೂರದ ನಂಟಸ್ತಿಕೆ ಮಾತ್ರ ಇದೆಯೆಂದು ಹೇಳಬಹುದು. ಆದರೆ, ಇನ್ನು ಕೆಲವು ನುಡಿಗಳ ನಡುವೆ ಯಾವ ರೀತಿಯ ನಂಟಸ್ತಿಕೆಯೂ ಇದೆಯೆಂದು ಹೇಳಲು ಬರುವುದಿಲ್ಲ. ಹಾಗೆ ಹೇಳಲು ಯಾವ ಆದಾರವೂ ದೊರಕದಿರುವುದೇ ಇದಕ್ಕೆ ಕಾರಣ.

ಎತ್ತುಗೆಗಾಗಿ, ಕನ್ನಡ ಮತ್ತು ತಮಿಳು ನುಡಿಗಳ ನಡುವೆ ಹತ್ತಿರದ ನಂಟಸ್ತಿಕೆಯಿದೆ; ಕನ್ನಡ ಮತ್ತು ತುಳು ನುಡಿಗಳ ನಡುವೆ ಇದಕ್ಕಿಂತ ಸ್ವಲ್ಪ ದೂರದ ನಂಟಸ್ತಿಕೆಯಿದೆ. ಇದೇ ರೀತಿಯಲ್ಲಿ, ಹಿಂದಿ ಮತ್ತು ಮರಾಟಿ ನುಡಿಗಳ ನಡುವೆ ಹತ್ತಿರದ ನಂಟಸ್ತಿಕೆಯಿದೆ; ಹಿಂದಿ ಮತ್ತು ಇಂಗ್ಲಿಶ್ ನುಡಿಗಳ ನಡುವೆ ದೂರದ ನಂಟಸ್ತಿಕೆಯಿದೆ. ಆದರೆ ಕನ್ನಡ ಮತ್ತು ಹಿಂದಿ ನುಡಿಗಳ ನಡುವೆ, ಇಲ್ಲವೇ ಕನ್ನಡ ಮತ್ತು ಇಂಗ್ಲಿಶ್ ನುಡಿಗಳ ನಡುವೆ, ಹತ್ತಿರದ್ದಾಗಲಿ ದೂರದ್ದಾಗಲಿ ಯಾವುದೇ ರೀತಿಯ ನಂಟಸ್ತಿಕೆಯೂ ಇದೆಯೆಂದು ಹೇಳುವುದಕ್ಕೆ ಯಾವ ಆದಾರವೂ ದೊರಕುವುದಿಲ್ಲ.

ನುಡಿಗಳ ನಡುವಿನ ನಂಟಸ್ತಿಕೆಯನ್ನು ಜನರ ನಡುವಿನ ನಂಟಸ್ತಿಕೆಯ ಹಾಗೆ ಅವುಗಳ ಹುಟ್ಟು ಮತ್ತು ಬೆಳವಣಿಗೆಗಳ ಆದಾರದ ಮೇಲೆ ಕಲ್ಪಿಸಿಕೊಳ್ಳಲಾಗಿದೆ. ಆದರೆ, ಜನರ ಹುಟ್ಟಿಗೂ ನುಡಿಗಳ ಹುಟ್ಟಿಗೂ ನಡುವೆ ಹಲವು ವ್ಯತ್ಯಾಸಗಳಿವೆ. ಎತ್ತುಗೆಗಾಗಿ, ಜನರಲ್ಲಿ ಹೆಣ್ಣು-ಗಂಡುಗಳ ಕೂಡಿಕೆಯಿಂದ ಮಗು ಹುಟ್ಟುತ್ತದೆ; ಆದರೆ ನುಡಿಗಳಲ್ಲಿ ಆ ರೀತಿ ಎರಡು ನುಡಿಗಳ ಕೂಡಿಕೆಯಿಂದ ಮೂರನೆಯ ನುಡಿ ಹುಟ್ಟಿಕೊಳ್ಳುವುದಿಲ್ಲ; ಒಂದು ನುಡಿಯಿದ್ದದ್ದು ಇನ್ನೊಂದು ನುಡಿಯಾಗಿ ಬದಲಾಗುತ್ತದೆ, ಇಲ್ಲವೇ ಎರಡು ನುಡಿಗಳಾಗಿ ಒಡೆದುಕೊಳ್ಳುತ್ತದೆ.

ಎತ್ತುಗೆಗಾಗಿ, ಸಂಸ್ಕ್ರುತ ನುಡಿ ಇವತ್ತಿನ ಮರಾಟಿ ನುಡಿಯಾಗಿ ಬದಲಾಗಿದೆಯೆಂದು ಹೇಳಬಹುದು; ಇಲ್ಲವೇ ಅದೇ ನುಡಿ ಮರಾಟಿ, ಕೊಂಕಣಿ, ಹಿಂದಿ, ಗುಜರಾತಿ, ಪಂಜಾಬಿ, ಬಂಗಾಲಿ ಮೊದಲಾದ ಇವತ್ತಿನ ಹಲವು ನುಡಿಗಳಾಗಿ ಒಡೆದುಕೊಂಡಿದೆಯೆಂದೂ ಹೇಳಬಹುದು. ಆದರೆ, ಇದೇ ರೀತಿಯಲ್ಲಿ ಸಂಸ್ಕ್ರುತ ನುಡಿ ಕನ್ನಡ ನುಡಿಯಾಗಿ ಬದಲಾಗಿದೆಯೆಂದು ಹೇಳಲು ಬರುವುದಿಲ್ಲ. ಯಾಕೆಂದರೆ, ಕನ್ನಡ ಮತ್ತು ಸಂಸ್ಕ್ರುತ ನುಡಿಗಳ ನಡುವೆ ಅವುಗಳ ಪದಗಳಲ್ಲಿ ಮತ್ತು ವ್ಯಾಕರಣ ನಿಯಮಗಳಲ್ಲಿ ಹಲವು ಬುಡಕಟ್ಟಿನ ವ್ಯತ್ಯಾಸಗಳಿವೆ. ಈ ಎಲ್ಲಾ ವ್ಯತ್ಯಾಸಗಳೂ ಹೇಗೆ ಉಂಟಾಗಿವೆ ಎಂಬುದನ್ನು ವಿವರಿಸಲು ಇದುವರೆಗೆ ಯಾರಿಗೂ ಸಾದ್ಯವಾಗಿಲ್ಲ.

ಇಂತಹ ವಿವರಿಸಲು ಸಾದ್ಯವಾಗದ ವ್ಯತ್ಯಾಸಗಳಿರುವ ಕಾರಣ, ಸಂಸ್ಕ್ರುತ ಮತ್ತು ಕನ್ನಡ ನುಡಿಗಳನ್ನು ಎರಡು ತೀರ ಬೇರಾಗಿರುವ ಮೂಲನುಡಿಗಳಿಂದ ಬೆಳೆದು ಬಂದಿರುವವುಗಳೆಂಬುದಾಗಿ ಪರಿಗಣಿಸಬೇಕಾಗಿದೆ. ಸಂಸ್ಕ್ರುತ ‘ಇಂಡೋ-ಆರ‍್ಯನ್’ ಎಂಬ ಹೆಸರಿನ ಮೂಲ ನುಡಿಯಿಂದ, ಮತ್ತು ಕನ್ನಡ ಅದಕ್ಕಿಂತ ತೀರ ಬೇರಾಗಿರುವ ‘ದ್ರಾವಿಡ’ ಎಂಬ ಹೆಸರಿನ ಮೂಲ ನುಡಿಯಿಂದ ಬೆಳೆದು ಬಂದಿದೆಯೆಂಬುದಾಗಿ ಇವತ್ತು ಕಲ್ಪಿಸಿಕೊಳ್ಳಬೇಕಾಗಿದೆ.

ನುಡಿಗಳನ್ನು ಈ ರೀತಿ ಬೇರೆ ಬೇರೆ ನುಡಿಕುಟುಂಬಗಳಲ್ಲಿ ಇರಿಸಿ ಹೇಳಲು ಮುಕ್ಯವಾಗಿ ಅವುಗಳ ಚರಿತ್ರೆ ಆದಾರವಾಗಿರುತ್ತದೆ. ಒಂದು ನುಡಿಯನ್ನಾಡುವ ಜನ ದೂರ ದೂರದಲ್ಲಿರುವ ಊರುಗಳಿಗೆ ಹೋಗಿ ನೆಲೆಸಿದಾಗ, ಅವರೊಳಗಿನ ಸಂಪರ‍್ಕ ಕಡಿಮೆಯಾಗುತ್ತಾ ಹೋಗುತ್ತದೆ, ಮತ್ತು ಇದರಿಂದಾಗಿ, ಅವರು ಬಳಸುವ ನುಡಿಯಲ್ಲಿ ಬದಲಾವಣೆಗಳು ಒಂದೇ ದಿಕ್ಕಿನಲ್ಲಿ ನಡೆಯದೆ ಬೇರೆ ಬೇರೆ ದಿಕ್ಕುಗಳಲ್ಲಿ ನಡೆಯತೊಡಗುತ್ತವೆ.

ಎತ್ತುಗೆಗಾಗಿ, ಕನ್ನಡ ನುಡಿಯನ್ನಾಡುವ ಜನ ಬಡಗು ಕರ‍್ನಾಟಕ, ತೆಂಕು ಕರ‍್ನಾಟಕ ಮತ್ತು ಕರಾವಳಿ ಎಂಬ ಮೂರು ಮುಕ್ಯ ಪ್ರದೇಶಗಳಲ್ಲಿ ನೆಲೆಸಿದ್ದಾರೆ. ಇವರಾಡುವ ನುಡಿಯೂ ಬಡಗು, ತೆಂಕು ಮತ್ತು ಕರಾವಳಿ ಎಂಬ ಮೂರು ಮುಕ್ಯ ಒಳನುಡಿಗಳಾಗಿ ವ್ಯತ್ಯಾಸಗಳನ್ನು ತೋರಿಸುತ್ತದೆ. ಈ ಒಳನುಡಿಗಳ ನಡುವೆ ಯಾವ ಪ್ರಮಾಣದಲ್ಲಿ ವ್ಯತ್ಯಾಸಗಳು ಕಾಣಿಸಿಕೊಳ್ಳುತ್ತವೆ ಎಂಬುದು ಈ ಪ್ರದೇಶಗಳಿಗೆ ಹೋಗಿ ನೆಲೆಸಿದ ಮೇಲೆ ಇವರ ನಡುವೆ ಎಂತಹ ಸಂಪರ‍್ಕ ಸಾದ್ಯವಿತ್ತು ಎಂಬುದರ ಮೇಲೆ ಅವಲಂಬಿಸಿದೆ.

ನುಡಿಗಳೆಲ್ಲ ಈ ರೀತಿ ಅವನ್ನಾಡುವ ಜನರ ನಡುವಿರುವ ಸಂಪರ‍್ಕ ಕಡಿಮೆಯಾದಾಗ ಬೇರೆ ಬೇರೆ ಒಳನುಡಿಗಳಾಗಿ ಒಡೆದುಕೊಳ್ಳುತ್ತವೆ, ಮತ್ತು ಆಮೇಲೆ ಅವೇ ಒಳನುಡಿಗಳು ಸ್ವತಂತ್ರ ನುಡಿಗಳಾಗಿ ಬೆಳೆಯುತ್ತವೆ ಎಂಬ ಈ ಅಬಿಪ್ರಾಯದ ಮೇಲೆ ನುಡಿಕುಟುಂಬಗಳ ಕಲ್ಪನೆಯನ್ನು ನಿಲ್ಲಿಸಲಾಗಿದೆ. ಹಿಂದೆ ಒಂದು ಕಾಲದಲ್ಲಿ ಕೆಲವೇ ಕೆಲವು ಮೂಲ ನುಡಿಗಳಿದ್ದಿರಬೇಕು, ಮತ್ತು ಈ ಮೂಲ ನುಡಿಗಳು ಮೇಲೆ ಸೂಚಿಸಿದ ಹಾಗೆ ಕವಲೊಡೆದು ಬೇರೆ ಬೇರೆ ನುಡಿಗಳಾದುದರಿಂದಾಗಿ, ಇವತ್ತು ಸಾವಿರಾರು ನುಡಿಗಳು ಬಳಕೆಯಲ್ಲಿ ಕಾಣಿಸಿಕೊಳ್ಳುತ್ತಿವೆ ಎಂಬುದೇ ಈ ಕಲ್ಪನೆ.

ಈ ಕಲ್ಪನೆಯನ್ನು ಸಾಕಾರಗೊಳಿಸುವುದಕ್ಕಾಗಿ ಇವತ್ತು ಬಳಕೆಯಲ್ಲಿರುವ ಸಾವಿರಾರು ನುಡಿಗಳನ್ನು ಬೇರೆ ಬೇರೆ ನುಡಿಕುಟುಂಬಗಳಾಗಿ ಹಂಚುವ ಪ್ರಯತ್ನ ನಡೆಯುತ್ತಿದೆ. ಎಂದರೆ, ಈ ಸಾವಿರಾರು ನುಡಿಗಳು ಹದಿನಯ್ದಿಪ್ಪತ್ತು ಮೂಲ ನುಡಿಗಳಿಂದ ಅವುಗಳಲ್ಲಿ ಬೇರೆ ಬೇರೆ ರೀತಿಯ ಬದಲಾವಣೆಗಳಾಗುವುದರ ಮೂಲಕ ಹೇಗೆ ಬೆಳೆದು ಬಂದಿರಬೇಕು ಎಂಬುದನ್ನು ತೋರಿಸಿ ಕೊಡುವ ಪ್ರಯತ್ನ ನಡೆಯುತ್ತಿದೆ.

ಇವತ್ತು ಬೇರೆ ಬೇರಾಗಿ ಕಾಣಿಸುವ ಎರಡು ನುಡಿಗಳು ಒಂದೇ ಮೂಲ ನುಡಿಯಿಂದ ಬೆಳೆದು ಬಂದವುಗಳೆಂದು ನಾವು ತೋರಿಸಿಕೊಡಬೇಕಿದ್ದಲ್ಲಿ, (ಎಂದರೆ ಅವು ಒಂದೇ ನುಡಿಕುಟುಂಬಕ್ಕೆ ಸೇರಿದವುಗಳೆಂದು ವಾದಿಸಬೇಕಿದ್ದಲ್ಲಿ) ಅವುಗಳ ನಡುವೆ ಕಾಣಿಸುವ ವ್ಯತ್ಯಾಸಗಳೆಲ್ಲ ಮೂಲ ನುಡಿಯೊಂದರಲ್ಲಿ ನಡೆದ ಬದಲಾವಣೆಗಳಿಂದಾಗಿ ಉಂಟಾದವುಗಳು ಎಂಬುದಾಗಿ ತೋರಿಸಿಕೊಡಬೇಕು. ಎಂದರೆ, ಆ ಮೂಲ ನುಡಿಯನ್ನಾಡುವ ಜನರು ದೂರದ ಎರಡು ಪ್ರದೇಶಗಳಿಗೆ ಹೋಗಿ ನೆಲೆಸಿದ ಮೇಲೆ, ಅವರ ಮಾತಿನಲ್ಲಿ ಬದಲಾವಣೆಗಳು ಎರಡು ಬೇರೆ ಬೇರೆ ದಿಕ್ಕುಗಳಲ್ಲಿ ನಡೆದಿರಬೇಕು, ಮತ್ತು ಒಂದು ಪ್ರದೇಶದಲ್ಲಿ ನಡೆದ ಬದಲಾವಣೆಗಳು ಇನ್ನೊಂದು ಪ್ರದೇಶದಲ್ಲಿ ನಡೆಯದಿದ್ದುದೇ ಆ ಎರಡು ಪ್ರದೇಶಗಳ ಜನರ ಮಾತುಗಳ (ಎಂದರೆ ನುಡಿಗಳ) ನಡುವೆ ಇವತ್ತು ಕಾಣಿಸುವ ವ್ಯತ್ಯಾಸಗಳಿಗೆ ಮೂಲ ಕಾರಣ ಎಂಬುದನ್ನು ತೋರಿಸಿಕೊಡಬೇಕು.

ಹಾಗಾಗಿ, ನುಡಿಗಳನ್ನು ಬೇರೆ ಬೇರೆ ನುಡಿಕುಟುಂಬಗಳಾಗಿ ಹಂಚುವ ಕೆಲಸದಲ್ಲಿ ಅವುಗಳ ನಡುವೆ ಕಾಣಿಸುವ ಹೋಲಿಕೆಗಳಿಗಿಂತಲೂ ವ್ಯತ್ಯಾಸಗಳಿಗೇನೇ ಹೆಚ್ಚಿನ ಮಹತ್ವವಿದೆ. ಎರಡು ನುಡಿಗಳ ನಡುವೆ ಸ್ವಲ್ಪವೂ ಹೋಲಿಕೆ ಕಾಣಿಸದಿದ್ದರೂ, ಅವುಗಳ ನಡುವಿರುವ ವ್ಯತ್ಯಾಸಗಳೆಲ್ಲ ಆ ಎರಡು ನುಡಿಗಳ ಚರಿತ್ರೆಯಲ್ಲಿ ನಡೆದ ಬದಲಾವಣೆಗಳಿಂದಾಗಿ ಉಂಟಾದವುಗಳು ಎಂಬುದಾಗಿ ಮೇಲೆ ಸೂಚಿಸಿದ ಹಾಗೆ ತೋರಿಸಿಕೊಟ್ಟಲ್ಲಿ, ಅವನ್ನು ಒಂದೇ ನುಡಿಕುಟುಂಬಕ್ಕೆ ಸೇರಿದವುಗಳೆಂದು ಹೇಳಲು ಬರುತ್ತದೆ. ಇದಕ್ಕೆ ಬದಲು, ಎರಡು ನುಡಿಗಳ ನಡುವೆ ಎಶ್ಟೇ ಹೋಲಿಕೆಯಿರಲಿ, ಅವುಗಳ ನಡುವೆ ಕಾಣಿಸುವ ವ್ಯತ್ಯಾಸಗಳನ್ನು ಒಂದು ಮೂಲ ನುಡಿಯಲ್ಲಿ ಬೇರೆ ಬೇರೆ ದಿಕ್ಕುಗಳಲ್ಲಿ ನಡೆದ ಬದಲಾವಣೆಗಳಿಂದಾಗಿ ಉಂಟಾದವುಗಳು ಎಂಬುದಾಗಿ ತೋರಿಸಿಕೊಡಲು ಬರುವುದಿಲ್ಲವಾದಲ್ಲಿ, ಅವು ಒಂದೇ ನುಡಿ ಕುಟುಂಬಕ್ಕೆ ಸೇರಿದವುಗಳೆಂದು ವಾದಿಸಲು ಬರುವುದಿಲ್ಲ.

ಎರಡು ನುಡಿಗಳ ನಡುವೆ ಹೋಲಿಕೆಗಳು ಕಾಣಿಸಿಕೊಳ್ಳಲು ಬೇರೆ ಕಾರಣಗಳೂ ಇರಬಲ್ಲುವು: ಎತ್ತುಗೆಗಾಗಿ, ಅವುಗಳಲ್ಲಿ ಒಂದು ಇನ್ನೊಂದರಿಂದ ಹಲವಾರು ಪದಗಳನ್ನು ಎರವಲಾಗಿ ಪಡೆದಿದೆಯಾದರೆ, ಅವೆರಡರ ನಡುವೆ ತುಂಬಾ ಹೋಲಿಕೆಯಿದೆಯೆಂದು ಅನಿಸಬಹುದು. ಇದಲ್ಲದೆ, ಆಕಸ್ಮಿಕವಾಗಿಯೂ ಎರಡು ನುಡಿಗಳಲ್ಲಿ ಬಳಕೆಯಾಗುವ ಪದಗಳ ನಡುವೆ ಹೋಲಿಕೆಗಳು ಕಾಣಿಸಬಹುದು. ನುಡಿಗಳನ್ನು ಬಳಸುವ, ಬೆಳೆಸುವ ಮತ್ತು ಬದಲಾಯಿಸುವವರೆಲ್ಲರೂ ಮನುಶ್ಯರೇ ಆಗಿರುವುದರಿಂದ, ಇಂತಹ ಆಕಸ್ಮಿಕ ಹೋಲಿಕೆಗಳು ಕಾಣಿಸಿಕೊಳ್ಳುವುದರಲ್ಲಿ ಅಚ್ಚರಿಯೇನಿಲ್ಲ.

ಹಾಗಾಗಿ, ಎರಡು ನುಡಿಗಳ ನಡುವೆ ಕಾಣಿಸುವ ಹೋಲಿಕೆಗಳ ಆದಾರದ ಮೇಲೆ ಅವು ಒಂದೇ ನುಡಿಕುಟುಂಬಕ್ಕೆ ಸೇರಿವೆಯೆಂದು ಹೇಳಲು ಬರುವುದಿಲ್ಲ. ಅವುಗಳ ನಡುವೆ ಕಾಣಿಸುವ ವ್ಯತ್ಯಾಸಗಳು ಯಾವ ರೀತಿಯಲ್ಲಿ ಮೂಡಿಬಂದಿವೆ ಎಂಬುದನ್ನು ಮೇಲೆ ಸೂಚಿಸಿದ ಹಾಗೆ ವಿವರಿಸಲು ಸಾದ್ಯವಾಗುವುದಿದ್ದಲ್ಲಿ ಮಾತ್ರ ಅವನ್ನು ಒಂದೇ ಕುಟುಂಬದ ನುಡಿಗಳೆಂದು, ಎಂದರೆ ಚಾರಿತ್ರಿಕವಾಗಿ ಅವು ಒಂದೇ ಮೂಲ ನುಡಿಯಿಂದ ಬೆಳೆದು ಬಂದವುಗಳೆಂದು ಪರಿಗಣಿಸಲು ಸಾದ್ಯವಾಗುತ್ತದೆ.

(ಈ ಬರಹ ವಿಜಯ ಕರ‍್ನಾಟಕ ಸುದ್ದಿಹಾಳೆಯ ’ಎಲ್ಲರ ಕನ್ನಡ’ ಅಂಕಣದಲ್ಲಿ ಮೊದಲು ಮೂಡಿಬಂದಿತ್ತು)

ಮೂಲ : ಹೊನಲು

ಮಕ್ಕಳಿಗೆ ಬರೆಯಲು ಕಲಿಸುವ ಬಗೆ

ಓದಲು ಕಲಿಯುವುದಕ್ಕಿಂತಲೂ ಬರೆಯಲು ಕಲಿಯುವುದು ಮಕ್ಕಳ ಮಟ್ಟಿಗೆ ಹೆಚ್ಚು ತೊಡಕಿನ ಕೆಲಸ. ಇದಕ್ಕೆ ಕಾರಣವೇನೆಂದರೆ, ಬರೆಯಬೇಕಿದ್ದಲ್ಲಿ ಅವರು ಒಂದೇ ಬಾರಿಗೆ ಹಲವಾರು ತೀರ‍್ಮಾನಗಳನ್ನು ತೆಗೆದುಕೊಳ್ಳಬೇಕಾಗುತ್ತದೆ: ಯಾವ ವಿಶಯಗಳ ಕುರಿತು ಬರೆಯಬೇಕು, ಆ ವಿಶಯಗಳನ್ನು ಯಾವ ರೀತಿಯಲ್ಲಿ ಜೋಡಿಸಿಕೊಳ್ಳಬೇಕು, ಎಂತಹ ಪದಗಳನ್ನು ಬಳಸಬೇಕು, ಅವನ್ನು ಒಟ್ಟುಗೂಡಿಸಿ ಸೊಲ್ಲುಗಳನ್ನು ಹೇಗೆ ಕಟ್ಟಬೇಕು, ಅವನ್ನು ಬರೆಯುವಲ್ಲಿ ಯಾವ ಬರಿಗೆಗಳನ್ನು ಬಳಸಬೇಕು ಎಂಬುದನ್ನೆಲ್ಲ ಅವರು ಒಂದೇ ಬಾರಿಗೆ ತೀರ‍್ಮಾನಿಸಿಕೊಳ್ಳಬೇಕಾಗುತ್ತದೆ. ಹೀಗೆ ಮಾಡಲು ಬರುವುದಿಲ್ಲವಾದಲ್ಲಿ, ಅವರ ಬರೆಯುವ ಕೆಲಸ ಮುಂದಕ್ಕೆ ಹೋಗುವುದೇ ಇಲ್ಲ.

ಹೆಚ್ಚಿನ ಮಕ್ಕಳಿಗೂ ಈ ತೊಡಕು ತೊಡಕಾದ ಕೆಲಸವನ್ನು ತಾವಾಗಿಯೇ ಕಲಿತುಕೊಳ್ಳಲು ಬರುವುದಿಲ್ಲ. ಅದಕ್ಕೆ ಬೇಕಾಗುವ ಚಳಕಗಳನ್ನು ಒಂದೊಂದಾಗಿ ಕಲಿಯುವಂತೆ ಯಾರಾದರೂ ಅವರಿಗೆ ನೆರವನ್ನಿತ್ತರೆ ಮಾತ್ರ, ಅವರು ಅದನ್ನು ಕಲಿಯಬಲ್ಲರು. ಇಲ್ಲವಾದರೆ, ಬರೆಯುವ ಕೆಲಸ ತಮಗೆ ಹೇಳಿದ್ದಲ್ಲ ಎಂಬುದಾಗಿ ಅವರು ಅದರಿಂದ ದೂರವೇ ಉಳಿಯುತ್ತಾರೆ. ಪರೀಕ್ಶೆಗಳಲ್ಲಿ ಬರೆಯಬೇಕಾದುದನ್ನೆಲ್ಲ ಉರುಹೊಡೆದು ಬರೆಯುವುದನ್ನಶ್ಟೇ ಅವರು ಮಾಡಬಲ್ಲರು.

ಹಾಗಾಗಿ, ಮಕ್ಕಳಿಗೆ ಬರೆಯಲು ಕಲಿಸುವವರು ಅದಕ್ಕೆ ಬೇಕಾಗುವ ಚಳಕಗಳನ್ನು ಒಂದೊಂದಾಗಿ ಹತೋಟಿಗೆ ತಂದುಕೊಳ್ಳುವುದು ಹೇಗೆ ಎಂಬುದನ್ನು ಅವರಿಗೆ ಕಲಿಸಬೇಕು. ಬರಿಗೆ(ಅಕ್ಶರ)ಗಳನ್ನು ಬರೆಯಲು ಕಲಿಯುವ ಸಮಯದಲ್ಲಿ ಅವರು ಈ ಕಲಿಕೆಯನ್ನು ಸರಿಯಾದ ಓರಣ(ಕ್ರಮ)ದಲ್ಲಿ ನಡೆಸುವ ಹಾಗೆ ನೋಡಿಕೊಳ್ಳಬೇಕು.

ಮಕ್ಕಳ ಕಯ್ಬರಹ ಓದಬಲ್ಲುದಾಗಿರಬೇಕು, ಮತ್ತು ಬರವಣಿಗೆ ಸಲೀಸಾಗಿರಬೇಕು. ಸಲೀಸಾಗಿ ಬರೆಯಲು ಬಾರದವರಿಗೆ ಬೇರೆ ವಿಶಯಗಳ ಕುರಿತು ಆಲೋಚಿಸಲು ಸಮಯವೇ ಸಿಗುವುದಿಲ್ಲ. ಸಲೀಸಾಗಿ ಬರೆಯಬೇಕಿದ್ದಲ್ಲಿ, ಮಕ್ಕಳು ಬರಿಗೆಗಳನ್ನು ಬರೆಯುವ ಬಗೆ, ಬಳಪವನ್ನು ಹಿಡಿಯುವ ಬಗೆ, ಮತ್ತು ಕಾಗದವನ್ನು ಎದುರು ಇರಿಸಿಕೊಳ್ಳುವ ಬಗೆ ಸರಿಯಾಗಿರಬೇಕು.

ಕೆಲವು ಮಕ್ಕಳು ಬರೆಯುವಾಗ ಬಲಗಯ್ಯನ್ನು ಬಳಸುವ ಬದಲು ಎಡಗಯ್ಯನ್ನು ಬಳಸುತ್ತಾರೆ. ಆದರೆ, ಇಂತಹ ಮಕ್ಕಳು ಬಲಗಯ್ಯಲ್ಲಿ ಬರೆಯುವವರನ್ನು ನೋಡಿ, ಅವರು ಬರೆಯುವ ಹಾಗೆಯೇ ಬರೆಯತೊಡಗುತ್ತಾರೆ. ಇದರಿಂದಾಗಿ ಅವರು ತೊಂದರೆಗೊಳಗಾಗುತ್ತಾರೆ. ಯಾಕೆಂದರೆ, ಹಾಗೆ ಬರೆಯುವಾಗ ಅವರಿಗೆ ತಮ್ಮ ಕಯ್ಬೆರಳು ಅಡ್ಡ ಬರುತ್ತದೆ, ಮತ್ತು ತಾವು ಬರೆದುದೇನೆಂಬುದು ಕಾಣಿಸುವುದಿಲ್ಲ. ಅದು ಕಾಣಿಸುವಂತೆ ಮಾಡಲು, ಅವರು ತಮ್ಮ ಮಣಿಗಂಟನ್ನು ಬಗ್ಗಿಸಿ ಬರೆಯಹೊರಡುತ್ತಾರೆ. ಆದರೆ ಹೀಗೆ ಮಾಡುವುದರಿಂದ ಅವರ ಬರವಣಿಗೆ ತುಂಬಾ ತೊಡಕಿನದಾಗಿಬಿಡುತ್ತದೆ.

ಎಡಗಯ್ಯಲ್ಲಿ ಬರೆಯುವ ಮಕ್ಕಳಿಗೆ ಅವರು ಬರೆಯಬೇಕಾಗಿರುವ ಬಗೆ ಹೇಗೆ ಎಂಬುದನ್ನು ಕಲಿಸಿಕೊಡಬೇಕು. ಬರೆಯುವ ಕಾಗದವನ್ನು ಇಲ್ಲವೇ ಪುಸ್ತಕವನ್ನು ಅವರು ಬಲಗಯ್ಯವರ ಹಾಗೆ ಎಡಕ್ಕೆ ತಿರುಗಿಸಿ ಇರಿಸಿಕೊಳ್ಳುವ ಬದಲು, ಬಲಕ್ಕೆ ತಿರುಗಿಸಿ ಇರಿಸಿಕೊಳ್ಳುವ ಹಾಗೆ ಮಾಡಬೇಕು, ಮತ್ತು ಪೆನ್ನನ್ನು ತುದಿಯಿಂದ ತುಸು ಮೇಲೆ ಹಿಡಿದುಕೊಳ್ಳಲು ಹೇಳಬೇಕು. ಬರೆಯುವಾಗ ಅವರು ಮಣಿಗಂಟನ್ನು ಬಗ್ಗಿಸಬಾರದು. ಎಡಗಯ್ಯವರಿಗೆ ತಕ್ಕುದಾಗಿರುವಂತಹ ಈ ಬರೆಯುವ ಬಗೆಯನ್ನು ಕಲಿತುಕೊಂಡಲ್ಲಿ ಮಾತ್ರ, ಅವರಿಗೆ ಸಲೀಸಾಗಿ ಬರೆಯಲು ಬರುತ್ತದೆ.

ಮಾತಿಗೂ ಬರಹಕ್ಕೂ ನಡುವೆ ಸೊಲ್ಲುಗಳ ರಚನೆಯಲ್ಲಿ ವ್ಯತ್ಯಾಸಗಳಿವೆಯಾದ ಕಾರಣ, ಬರೆಯಲು ಕಲಿಯುವ ಮಕ್ಕಳಿಗೆ ಬರಹಗಳಲ್ಲಿ ಎಂತಹ ಸೊಲ್ಲುಗಳನ್ನು ಬಳಸಬೇಕು ಎಂಬುದನ್ನೂ ಕಲಿಸಬೇಕಾಗುತ್ತದೆ. ಇಡೀ ಸೊಲ್ಲುಗಳನ್ನು ಬರೆಯುವುದು ಹೇಗೆ, ಚಿಕ್ಕ ಚಿಕ್ಕ ಸೊಲ್ಲುಗಳನ್ನು ಜೋಡಿಸಿ ಉದ್ದ ಸೊಲ್ಲುಗಳನ್ನು ಉಂಟುಮಾಡುವುದು ಹೇಗೆ, ಒಂದು ಚಿಕ್ಕ ಸೊಲ್ಲಿನ ಒಳಗೆ ಬೇರೆ ಚಿಕ್ಕ ಸೊಲ್ಲುಗಳನ್ನು ಇರಿಸಿ ಸಿಕ್ಕಲು ಸೊಲ್ಲುಗಳನ್ನು ಉಂಟುಮಾಡುವುದು ಹೇಗೆ ಎಂಬುದನ್ನು ಅವರಿಗೆ ಕಲಿಸಬೇಕಾಗುತ್ತದೆ. ಎಲ್ಲಾ ಮಕ್ಕಳಿಗೂ ಇದನ್ನು ತಾವಾಗಿಯೇ ಕಲಿತುಕೊಳ್ಳಲು ಬರುವುದಿಲ್ಲ.

ಸೊಲ್ಲುಗಳನ್ನು ಸೇರಿಸಿ ಕುರಳು(ಪಾರಾ)ಗಳನ್ನು ರಚಿಸುವ ಬಗೆಯನ್ನೂ ಅವರಿಗೆ ಕಲಿಸಿಕೊಡಬೇಕಾಗುತ್ತದೆ. ಒಳ್ಳೇ ಮಾದರಿ ಕುರಳುಗಳಲ್ಲಿ ಮೊದಲಿಗೆ ಮುಕ್ಯ ವಿಶಯವನ್ನು ಮುಂದಿಡುವ ಚಿಕ್ಕ ಸೊಲ್ಲಿರುತ್ತದೆ; ಆಮೇಲೆ, ಅದನ್ನು ಹೆಚ್ಚು ವಿವರವಾಗಿ ತಿಳಿಸುವ, ಮತ್ತು ಅದಕ್ಕೆ ಬೆಂಬಲ ನೀಡುವ ವಿಶಯಗಳು ಬರುತ್ತವೆ; ಮತ್ತು ಕೊನೆಯಲ್ಲಿ, ಮುಕ್ತಾಯಗೊಳಿಸುವ ಸೊಲ್ಲು ಬರುತ್ತದೆ. ಸೊಲ್ಲುಗಳನ್ನು ಈ ರೀತಿ ಒಂದಕ್ಕೊಂದು ಹೊಂದಿಕೊಳ್ಳುವ ಹಾಗೆ ಬರೆಯುವುದು ಹೇಗೆ ಎಂಬುದನ್ನು ಅವರು ತಿಳಿದುಕೊಳ್ಳಬೇಕು.

ಬರಹದಲ್ಲಿ ಬರುವ ಕುರಳುಗಳನ್ನು ಹೇಗೆ ಅಣಿಗೊಳಿಸುವುದು ಎಂಬುದನ್ನೂ ಅವರು ಕಲಿಯಬೇಕಾಗುತ್ತದೆ. ಇದು ಬೇರೆ ಬೇರೆ ಗುರಿಗಳಿಗಾಗಿ ಬಳಕೆಯಾಗುವ ಬರಹಗಳಲ್ಲಿ ಬೇರೆ ಬೇರಾಗಿರುತ್ತದೆ. ಒಂದು ಕತೆಯನ್ನು ಬರೆಯುವವರು ಅದರ ನೆಗಳ್ತೆ ಮುಂದೆ ಹೋಗುವುದಕ್ಕೆ ಹೆಚ್ಚಿನ ಗಮನ ಕೊಡಬೇಕಾಗುತ್ತದೆ. ಇದಕ್ಕೆ ಬದಲು, ಒಂದು ವಿಶಯದ ಮಟ್ಟಿಗೆ ಇನ್ನೊಬ್ಬರ ಒಪ್ಪಿಗೆ ಇಲ್ಲವೇ ಒಲವನ್ನು ಪಡೆಯಬೇಕೆಂದಿರುವವರು ಆ ವಿಶಯವನ್ನು ಓದುಗರ ಮುಂದಿರಿಸುವ ಮತ್ತು ಅದನ್ನು ಬೆಂಬಲಿಸುವ ವಿಚಾರಗಳನ್ನು ಕೊಡುವ ಬಗೆ ಹೇಗೆ ಎಂಬುದಕ್ಕೆ ಗಮನ ಕೊಡಬೇಕಾಗುತ್ತದೆ.

ಒಮ್ಮೆ ಬರೆದುದನ್ನು ಓದಿ ನೋಡಿ, ಅದು ಸರಿಯಿಲ್ಲವೆಂದು ಅನಿಸಿದಲ್ಲಿ ಅದನ್ನು ತಿದ್ದಿ ಸರಿಪಡಿಸುವುದು ಹೇಗೆ ಎಂಬುದನ್ನೂ ಮಕ್ಕಳು ತಿಳಿದಿರಬೇಕು. ಇದಕ್ಕಾಗಿ ಅವರು ತಾವು ಬರೆದಿರುವ ಸೊಲ್ಲನ್ನು ಬೇರೆ ಬೇರೆ ಬಗೆಗಳಲ್ಲಿ ಮಾರ‍್ಪಡಿಸುವುದು ಹೇಗೆ ಎಂಬುದನ್ನು ಕಲಿತಿರಬೇಕಾಗುತ್ತದೆ. ತಾವು ಬರೆದಿರುವ ಸೊಲ್ಲಿನ ಇಟ್ಟಳ (ಒಳರಚನೆ) ಎಂತಹದು, ಆ ಸೊಲ್ಲನ್ನು ಬೇರೆ ಯಾವ ಇಟ್ಟಳಗಳಿಗೆ ಮಾರ‍್ಪಡಿಸಬಹುದು ಎಂಬಂತಹ ಸೊಲ್ಲರಿಮೆಯ (ವ್ಯಾಕರಣದ) ತಿಳಿವು ಅವರಿಗಿದ್ದಲ್ಲಿ, ತಾವು ಬರೆದಿರುವ ಬರಹವನ್ನು ತಿದ್ದಿ ಸರಿಪಡಿಸುವ ಕೆಲಸವನ್ನು ಅವರು ಹೆಚ್ಚು ಚನ್ನಾಗಿ ನಡೆಸಬಲ್ಲರು.

ಬರವಣಿಗೆಯಲ್ಲಿ ಮಾಡಿರುವ ತಪ್ಪನ್ನು ಬರೆದವರೇ ಓದಿ ನೋಡಿ ಕಂಡುಕೊಳ್ಳುವಂತೆ ಮಾಡಿದಲ್ಲಿ, ಮತ್ತು ಅವು ಯಾಕೆ ತಪ್ಪಾಗಿವೆ ಎಂಬುದನ್ನೂ ತಿಳಿಯುವಂತೆ ಮಾಡಿದಲ್ಲಿ ಅವರ ಬರವಣಿಗೆ ಬೇಗನೆ ಮುಂದೆ ಸಾಗುತ್ತದೆ. ಬರೆದಶ್ಟೂ ಬರವಣಿಗೆ ಚನ್ನಾಗುತ್ತಾ ಹೋಗುತ್ತದೆ. ಹಾಗಾಗಿ, ಬರೆಯುವ ಸಂದರ‍್ಬಗಳು ಮಕ್ಕಳಿಗೆ ಹೆಚ್ಚು ಹೆಚ್ಚು ದೊರಕುವಂತೆ ಮಾಡಬೇಕು.

ಮಕ್ಕಳಿಗೆ ಬರೆಯುವುದರಲ್ಲಿ ಆಸಕ್ತಿ ಹುಟ್ಟಬೇಕೆಂಬುದು ಎಲ್ಲಕ್ಕಿಂತಲೂ ಮುಕ್ಯವಾದ ವಿಶಯ. ಏನನ್ನೇ ಬರೆಯಲಿ, ಅದು ಅವರಿಗೆ ನಲಿವನ್ನು ಮತ್ತು ಮೆಚ್ಚುಗೆಯನ್ನು ಕೊಡುವಂತಿರಬೇಕು. ಬೇರೆಯವರ ಒತ್ತಾಯಕ್ಕೆ ಬರೆಯುವ ಬರಹದಿಂದ ಅವರ ಬರವಣಿಗೆ ಒಳ್ಳೆಯದಾಗಲಾರದು.

ಏನಾದರೂ ಒಂದು ವಿಶಯವನ್ನು ಇನ್ನೊಬ್ಬರಿಗೆ ತಿಳಿಸಬೇಕೆಂಬ ತುಡಿತ ಮಕ್ಕಳಲ್ಲಿರುತ್ತದೆ. ಶಾಲೆಯಿಂದ ಮನೆಗೆ ಬಂದೊಡನೆ, ಶಾಲೆಯಲ್ಲಿ ಇಲ್ಲವೇ ಅಲ್ಲಿಂದ ಬರುವಾಗ ದಾರಿಯಲ್ಲಿ ಏನಾಯಿತು ಎಂಬುದನ್ನು ತಾಯಿಗೆ ಆದಶ್ಟು ಬೇಗನೆ ತಿಳಿಸಿಬಿಡಬೇಕೆಂಬ ಆತುರದಲ್ಲಿ ಮಕ್ಕಳಿರುತ್ತಾರೆ. ಗೆಳೆಯರನ್ನು ಕಂಡೊಡನೆ ತಮಗೆ ತಿಳಿದಿರುವ ಹೊಸ ವಿಶಯವೊಂದನ್ನು ಅವರಿಗೆ ತಿಳಿಸುವ ಆತುರವೂ ಅವರಿಗಿರುತ್ತದೆ.

ತಮ್ಮ ಮನಸ್ಸಿನಲ್ಲಿರುವ ಇಂತಹ ವಿಶಯಗಳನ್ನು ಮಾತಿನ ಮೂಲಕ ಇನ್ನೊಬ್ಬರಿಗೆ ತಿಳಿಸುವ ಹಾಗೆ ಬರಹದ ಮೂಲಕವೂ ತಿಳಿಸಲು ಬರುತ್ತದೆ ಎಂಬುದನ್ನು ಅವರಿಗೆ ತೋರಿಸಿಕೊಟ್ಟಲ್ಲಿ, ಅವರು ಬಹಳ ಬೇಗನೆ ಬರವಣಿಗೆಯಲ್ಲಿ ಮುಂದೆ ಹೋಗುತ್ತಾರೆ. ಮೊದಲಿಗೆ ಅವರ ಹತ್ತಿರ ಮಾತಿನ ಮೂಲಕ ಒಂದು ವಿಶಯವನ್ನು ತಿಳಿಸಲು ಹೇಳಿ, ಅದನ್ನು ಕಲಿಸುವವರೇ ಬರೆದು ತೋರಿಸಬಹುದು, ಮತ್ತು ಹಾಗೆ ಬರೆದುದನ್ನು ಅವರಿಗೆ ಓದಲು ಕೊಡಬಹುದು. ಹೀಗೆ ಮಾಡುವುದರಿಂದ ಅವರಿಗೆ ಬರೆಯುವುದರಲ್ಲಿ ಆಸಕ್ತಿ ಹುಟ್ಟುತ್ತದೆ.

ಬರೆಯಲು ಕಲಿಯಬೇಕೆಂದಿರುವವರಿಗೆ ಎರಡು ಬಗೆಯ ಕಲಿಕೆಗಳು ನೆರವು ನೀಡಬಲ್ಲುವು: ಮೊದಲನೆಯದಾಗಿ, ಬರೆಯಲಿರುವ ವಿಶಯದ ಕುರಿತು ಅವರು ಏನೆಲ್ಲಾ ಹೇಳಬಲ್ಲರೋ ಅದನ್ನೆಲ್ಲ ಹೇಳಲು ಬಿಡಬೇಕು. ಇದರಿಂದ ಅವರಲ್ಲಿ ಆಲೋಚಿಸುವ ಕಸುವು ಬೆಳೆಯುತ್ತದೆ. ಎರಡನೆಯದಾಗಿ, ಅವರಿಗೆ ಬೇರೆ ಯಾವುದಾದರೂ ಬರಹವನ್ನು ಎತ್ತಿಬರೆಯಲು ಕಲಿಸಬೇಕು. ಹೀಗೆ ಬರೆಯುವಾಗ, ಅಂತಹ ಬರಹಗಳಲ್ಲಿ ಸೊಲ್ಲುಗಳನ್ನು ಮತ್ತು ಕುರಲುಗಳನ್ನು ಯಾವ ರೀತಿಯಲ್ಲಿ ಅಳವಡಿಸಲಾಗಿದೆ ಎಂಬುದನ್ನು ಅವರು ಗಮನಿಸುವ ಹಾಗೆಯೂ ಮಾಡಬೇಕು.

ಓದುವ ಮತ್ತು ಬರೆಯುವ ಕೆಲಸಗಳೆರಡೂ ಬಹಳ ಮಟ್ಟಿಗೆ ಒಂದನ್ನೊಂದು ಅವಲಂಬಿಸಿವೆ. ಹಾಗಾಗಿ, ಅವೆರಡನ್ನೂ ಮಕ್ಕಳು ಒಟ್ಟೊಟ್ಟಾಗಿ ಕಲಿತುಕೊಳ್ಳುವಂತೆ ಮಾಡಬೇಕು.

(ಈ ಬರಹ ವಿಜಯ ಕರ‍್ನಾಟಕ ಸುದ್ದಿಹಾಳೆಯ ’ಎಲ್ಲರ ಕನ್ನಡ’ ಅಂಕಣದಲ್ಲಿ ಮೊದಲು ಮೂಡಿಬಂದಿತ್ತು)

ಮೂಲ : ಹೊನಲು

ಮಕ್ಕಳಿಗೆ ವ್ಯಾಕರಣ ಕಲಿಸಬೇಕೇ

ಬೇಕು ಎನ್ನುತ್ತಿದ್ದಾರೆ ಇತ್ತೀಚೆಗೆ ಹಲವು ಮಂದಿ ತಿಳಿವಿಗರು; ಆದರೆ, ವ್ಯಾಕರಣವನ್ನು ಹಿಂದಿನ ಹಾಗೆ ಒಂದು ವಿಶಯವಾಗಿ ಕಲಿಸುವ ಬದಲು, ಮಕ್ಕಳ ಓದು ಮತ್ತು ಬರಹಗಳ ಕಲಿಕೆಗೆ ನೆರವಾಗುವ ಹಾಗೆ ನೇರವಲ್ಲದ ಬಗೆಯಲ್ಲಿ ಅದನ್ನು ಕಲಿಸಬೇಕು ಎಂಬುದು ಹೆಚ್ಚಿನ ತಿಳಿವಿಗರ ತೀರ‍್ಮಾನವಾಗಿದೆ.

ನಿಜಕ್ಕೂ ವ್ಯಾಕರಣದ ಕಟ್ಟಲೆಗಳನ್ನು ಮಕ್ಕಳಿಗೆ ಕಲಿಸುವುದು ತುಂಬಾ ತೊಡಕಿನ ಕೆಲಸ. ಯಾಕೆಂದರೆ, ಮೊದಲನೆಯದಾಗಿ, ಈ ಕಟ್ಟಲೆಗಳೆಲ್ಲ ತೊಡಕು ತೊಡಕಾದವುಗಳು; ಅವನ್ನು ವಿವರಿಸಲು ಬೇರೆಯೇ ಆದ ಅರಿಮೆಯ ಪದಗಳು ಬೇಕಾಗುತ್ತವೆ. ಇದಲ್ಲದೆ, ಅವುಗಳಲ್ಲಿ ಯಾವ ಕಟ್ಟಲೆಯೂ ಬೇರೆಯಾಗಿ ನಿಲ್ಲುವುದಿಲ್ಲ; ಎಲ್ಲವೂ ಒಂದರೊಡನೊಂದು ಹೆಣೆದಿರುತ್ತವೆ. ಹಾಗಾಗಿ, ವ್ಯಾಕರಣದ ಯಾವ ಕಟ್ಟಲೆಯನ್ನು ಕಲಿಸಬೇಕಿದ್ದರೂ, ಅದಕ್ಕೆ ಬೇರೆ ಕಟ್ಟಲೆಗಳೊಂದಿಗಿರುವ ಕೊಂಡಿಗಳನ್ನೂ ಕಲಿಸಿಕೊಡಬೇಕಾಗುತ್ತದೆ.

ಎರಡನೆಯದಾಗಿ, ವ್ಯಾಕರಣದ ಕಟ್ಟಲೆಗಳು ಓದಿಗೆ ಇಲ್ಲವೇ ಬರಹಕ್ಕೆ ಯಾವ ರೀತಿಯಲ್ಲಿ ನೆರವಿಗೆ ಬರಬಲ್ಲುವು ಎಂಬುದು ಅವನ್ನು ಕಲಿಯುವವರಿಗೆ ಸುಲಬವಾಗಿ ಗೊತ್ತಾಗುವುದಿಲ್ಲ, ಮತ್ತು ಅವು ಯಾಕೆ ಬೇಕಾಗುತ್ತವೆ ಎಂಬುದನ್ನು ತಿಳಿಯದವರಿಗೆ ಅವನ್ನು ಕಲಿಯುವಲ್ಲಿ ಯಾವ ಹುರುಪೂ ಇರುವುದಿಲ್ಲ. ಅವುಗಳ ಕಲಿಕೆ ಬರಿಯ ಒಂದು ಯಾಂತ್ರಿಕ ಕೆಲಸವಾಗಿಬಿಡುತ್ತದೆ.

ಹಿಂದಿನ ಕಾಲದ ಶಾಲೆಗಳಲ್ಲಿ ವ್ಯಾಕರಣವನ್ನು ಬೇರೆಯೇ ಒಂದು ವಿಶಯವಾಗಿ ಕಲಿಸಲಾಗುತ್ತಿತ್ತು, ಮತ್ತು ಈ ಕಾರಣದಿಂದಾಗಿ, ಅದೊಂದು ತುಂಬಾ ತೊಡಕು ತೊಡಕಾದ, ಮತ್ತು ತೀರಾ ಅನವಶ್ಯಕವಾದ ವಿಶಯವೆಂಬುದಾಗಿ ಅದನ್ನು ಕಲಿಯುವವರಿಗೆ ಮಾತ್ರವಲ್ಲ, ಅದನ್ನು ಕಲಿಸುವವರಿಗೂ ಅನಿಸುತ್ತಿತ್ತು. ಅಯ್ದಾರು ವರ‍್ಶ ಅದನ್ನು ಕಲಿಸಿದರೂ ಮಕ್ಕಳ ಓದಿನಲ್ಲಿ ಇಲ್ಲವೇ ಬರವಣಿಗೆಯಲ್ಲಿ ಅದರಿಂದಾಗಿ ಯಾವ ಮಾರ‍್ಪಾಡೂ ಉಂಟಾಗುವುದಿಲ್ಲ ಎಂಬುದನ್ನು ಸಂಶೋದನೆಗಳು ತೋರಿಸಿಕೊಟ್ಟುವು. ಇದನ್ನು ಗಮನಿಸಿದ ಹಲವು ತಿಳಿವಿಗರು ನುಡಿಯ ಕಲಿಕೆಗೆ ವ್ಯಾಕರಣದ ತಿಳಿವು ಬೇಕಾಗಿಲ್ಲ, ಮತ್ತು ಅದನ್ನು ಶಾಲೆಗಳಲ್ಲಿ ಕಲಿಸಬೇಕಾಗಿಲ್ಲ ಎಂಬ ತೀರ‍್ಮಾನಕ್ಕೆ ಬಂದಿದ್ದರು.

ಆದರೆ, ನಿಜಕ್ಕೂ ಇದೊಂದು ತಪ್ಪಾದ ತೀರ‍್ಮಾನವಾಗಿತ್ತು; ಯಾಕೆಂದರೆ, ಯಾವ ಕೆಲಸವೇ ಆಗಲಿ, ಅದನ್ನು ಜಾಣ್ಮೆಯಿಂದ ನಡೆಸಬೇಕೆಂದಿರುವವರಿಗೆ ಅದರ ಒಳಗುಟ್ಟಿನ ತಿಳಿವು ನೆರವಿಗೆ ಬಂದೇ ಬರುತ್ತದೆ. ಎತ್ತುಗೆಗಾಗಿ, ಕಾರನ್ನು ಓಡಿಸುವವರು ಅದರ ಬೇರೆ ಬೇರೆ ಅಂಗಗಳ ಗುರಿ, ಅವುಗಳ ಅಳವು-ನಲುವುಗಳು, ಅವುಗಳ ಕೆಲಸದ ಮೇಲೆ ಗಾಳಿ, ಮಳೆ, ಬಿಸಿಲು, ಮತ್ತು ದಾರಿಂii ಗೊತ್ತುಪಾಡುಗಳಿಂದ ಉಂಟಾಗಬಹುದಾದ ಅಡಚಣೆಗಳು ಮೊದಲಾದುವನ್ನು ಸರಿಯಾಗಿ ತಿಳಿದುಕೊಂಡಿರುವರಾದರೆ, ಆ ಕೆಲಸವನ್ನು ಅವರು ಹೆಚ್ಚು ಜಾಣ್ಮೆಯಿಂದ ನಡೆಸಬಲ್ಲರು.

ಓದುವ ಮತ್ತು ಬರೆಯುವ ಕೆಲಸಗಳೂ ಹೀಗೆಯೇ. ಅವುಗಳ ಒಳಗುಟ್ಟನ್ನು ತಿಳಿದುಕೊಂಡವರಿಗೆ ಅವನ್ನು ಹೆಚ್ಚು ಸುಳುವಾಗಿ ಮತ್ತು ಹೆಚ್ಚು ಚನ್ನಾಗಿ ನಡೆಸಲು ಬರುತ್ತದೆ. ಬರಹಗಳಲ್ಲಿ ಹಲವು ಬಗೆಗಳಿದ್ದು, ಅವನ್ನು ಓದಿ ತಿಳಿದುಕೊಳ್ಳುವಲ್ಲಿ ಇಲ್ಲವೇ ಅಂತಹವೇ ಬರಹಗಳನ್ನು ಹೊಸದಾಗಿ ಬರೆಯುವಲ್ಲಿ ಹಲವಾರು ಬಗೆಯ ವ್ಯಾಕರಣದ ಕಟ್ಟಲೆಗಳನ್ನು ಬಳಸಬೇಕಾಗುತ್ತದೆ; ಹಾಗಾಗಿ, ಅಂತಹ ಕಟ್ಟಲೆಗಳ ತಿಳಿವು ಈ ಕೆಲಸಗಳನ್ನು ಜಾಣ್ಮೆಯಿಂದ ನಡೆಸುವಲ್ಲಿ ನೆರವಾಗದಿರದು.

ಆದರೆ, ಮೇಲೆ ಸೂಚಿಸಿದ ಹಾಗೆ, ವ್ಯಾಕರಣದ ಕಟ್ಟಲೆಗಳನ್ನು ನೇರವಾಗಿ ಕಲಿಸಹೋಗದೆ, ಓದುವ ಮತ್ತು ಬರೆಯುವ ಕೆಲಸಗಳಲ್ಲಿ ಅವು ಹೇಗೆ ನೆರವಾಗುತ್ತವೆ ಎಂಬುದನ್ನು ತೋರಿಸಿಕೊಡುವ ಮೂಲಕ ಕಲಿಸಿದಲ್ಲಿ ಮಾತ್ರ ಅವು ಮಕ್ಕಳ ಓದು-ಬರಹದ ಕಲಿಕೆಯ ಮೇಲೆ ಪರಿಣಾಮವನ್ನು ಬೀರಬಲ್ಲುವು.

ಎತ್ತುಗೆಗಾಗಿ, ಕೆಲವು ಸೊಲ್ಲು(ವಾಕ್ಯ)ಗಳ ಹುರುಳೇನೆಂಬುದನ್ನು ತಿಳಿದುಕೊಳ್ಳುವಲ್ಲಿ ಮಕ್ಕಳಿಗೆ ತೊಂದರೆಯಾಗುತ್ತಿರಬಹುದು; ಅಂತಹ ಸೊಲ್ಲುಗಳಲ್ಲಿ ಮುಕ್ಯ ಅಂಶಗಳನ್ನು ಮುಕ್ಯವಲ್ಲದ ಅಂಶಗಳಿಂದ ಬೇರ‍್ಪಡಿಸುವುದು ಹೇಗೆ ಎಂಬುದನ್ನು ಮಕ್ಕಳಿಗೆ ತೋರಿಸಿಕೊಟ್ಟಲ್ಲಿ, ಅವರು ಅವುಗಳ ಹುರುಳನ್ನು ಸುಲಬವಾಗಿ ತಿಳಿದುಕೊಳ್ಳಬಲ್ಲರು. ಆದರೆ, ಸೊಲ್ಲುಗಳಲ್ಲಿ ಮುಕ್ಯ ಅಂಶ ಯಾವುದು ಮತ್ತು ಮುಕ್ಯವಲ್ಲದ ಅಂಶ ಯಾವುದು ಎಂಬುದನ್ನು ತೋರಿಸಿಕೊಡಬೇಕಾದರೆ, ಅವನ್ನು ಹೇಗೆ ಕಟ್ಟಲಾಗಿದೆ, ಅವುಗಳ ಒಳರಚನೆಯೆಂತಹದು ಎಂಬಂತಹ ವ್ಯಾಕರಣಕ್ಕೆ ಸಂಬಂದಿಸಿರುವ ಕಟ್ಟಲೆಗಳನ್ನು ಕಲಿಸಬೇಕಾಗುತ್ತದೆ.

ಇತ್ತೀಚೆಗೆ ಹೆಚ್ಚು ಹೆಚ್ಚು ಮಂದಿ ತಿಳಿವಿಗರು ಓದು-ಬರಹದ ಕಲಿಕೆಯಲ್ಲಿ ವ್ಯಾಕರಣದ ಕೊಡುಗೆ ನಿಜಕ್ಕೂ ತುಂಬ ದೊಡ್ಡದು ಎಂಬುದನ್ನು ಕಂಡುಕೊಳ್ಳುತ್ತಿದ್ದಾರೆ. ಮಕ್ಕಳು ತಾವು ಓದಿ ತಿಳಿದುಕೊಳ್ಳಬೇಕಾಗಿರುವ ಇಲ್ಲವೇ ಬರೆಯಬೇಕಾಗಿರುವ ಸೊಲ್ಲುಗಳ ಒಳರಚನೆಯೆಂತಹದು ಎಂಬುದನ್ನು ಗಮನಿಸುವ ಹಾಗೆ ಮಾಡಿದಲ್ಲಿ ಅವರಿಗೆ ಆ ಕೆಲಸವನ್ನು ನಡೆಸಲು ಹೆಚ್ಚು ಸುಲಬವಾಗುತ್ತದೆ ಎಂಬುದನ್ನೂ ಅವರು ಕಂಡುಕೊಳ್ಳುತ್ತಿದ್ದಾರೆ.

ಇಂತಹ ತಿಳುವಳಿಕೆ ತರಗತಿಯಲ್ಲಿ ಮುಂದೆ ಇರುವ ಮಕ್ಕಳಿಗಿಂತಲೂ ಹಿಂದೆ ಬೀಳುವ ಮಕ್ಕಳಿಗೆ ಹೆಚ್ಚು ನೆರವಾಗುತ್ತದೆ ಎಂಬುದನ್ನೂ ಕಂಡುಕೊಳ್ಳಲಾಗಿದೆ. ಎತ್ತುಗೆಗಾಗಿ, ಮಾತಿನಲ್ಲಿ ಬರುವ ಹಾಗೆ ತುಂಡು ತುಂಡಾಗಿರುವ ಸೊಲ್ಲುಗಳು ಬರಹದಲ್ಲಿ ಬರಬಾರದು; ಅವೆಲ್ಲ ಇಡಿ ಇಡಿಯಾಗಿರಬೇಕು; ತುಂಡು ಸೊಲ್ಲುಗಳನ್ನು ಇಡೀ ಸೊಲ್ಲುಗಳ ಅಂಗಗಳನ್ನಾಗಿ ಮಾತ್ರ ಬಳಸಬಹುದು ಎಂದು ಹೇಳಿಕೊಟ್ಟಾಗ, ತರಗತಿಯಲ್ಲಿ ಮುಂದೆ ಇರುವ ಮಕ್ಕಳಿಗೆ ತಾವೇನು ಮಾಡಬೇಕು ಎಂಬುದು ಒಡನೆಯೇ ಗೊತ್ತಾಗುತ್ತದೆ.

ಆದರೆ, ತರಗತಿಯಲ್ಲಿ ಹಿಂದೆ ಬೀಳುವ ಮಕ್ಕಳಿಗೆ ಅದು ಗೊತ್ತಾಗುವುದಿಲ್ಲ. ಅವರಿಗೆ ಅದು ಗೊತ್ತಾಗುವ ಹಾಗೆ ಮಾಡಬೇಕಿದ್ದಲ್ಲಿ, ತುಂಡು ಸೊಲ್ಲುಗಳಿಗೂ ಇಡೀ ಸೊಲ್ಲುಗಳಿಗೂ ನಡುವಿರುವ ವ್ಯತ್ಯಾಸ ಎಂತಹದು ಎಂಬುದನ್ನು, ಮತ್ತು ತುಂಡು ಸೊಲ್ಲುಗಳನ್ನು ಇಡೀ ಸೊಲ್ಲುಗಳ ಅಂಗಗಳಾಗಿ ಮಾಡಿ ಬಳಸುವುದು ಹೇಗೆ ಎಂಬುದನ್ನು ತೋರಿಸಿಕೊಡಬೇಕಾಗುತ್ತದೆ. ಎಂದರೆ, ಇಡಿಯಾಗಿರುವ ಸೊಲ್ಲುಗಳ ಒಳರಚನೆಯ ಹಿಂದಿರುವ ವ್ಯಾಕರಣದ ಕಟ್ಟಲೆಗಳನ್ನು ಅವರಿಗೆ ವಿವರಿಸಬೇಕಾಗುತ್ತದೆ.

ಕನ್ನಡದ ಮಟ್ಟಿಗೆ ಹೇಳುವುದಾದರೆ, ಇನ್ನೊಂದು ಸಮಸ್ಯೆಯೂ ವ್ಯಾಕರಣದ ಕಲಿಕೆಯನ್ನು ಕಾಡುತ್ತಿದೆ; ಅದೇನೆಂದರೆ, ಇವತ್ತು ಕನ್ನಡ ವ್ಯಾಕರಣದ ಹೊತ್ತಗೆಗಳಲ್ಲಿ ಕಾಣಿಸಿಕೊಳ್ಳುವ ಕಟ್ಟಲೆಗಳಲ್ಲಿ ಹೆಚ್ಚಿನವನ್ನೂ ಕನ್ನಡ ಬರಹಗಳನ್ನು ಓದುವಲ್ಲಿ ಮತ್ತು ಬರೆಯುವಲ್ಲಿ ನೆರವಾಗುವ ಹಾಗೆ ಕಲಿಸಲು ಯಾರಿಗೂ ಸಾದ್ಯವಾಗಲಾರದು. ಯಾಕೆಂದರೆ, ಈ ವ್ಯಾಕರಣಗಳನ್ನು ಬರೆದವರು ಸಂಸ್ಕ್ರುತ ವ್ಯಾಕರಣದಲ್ಲಿದ್ದ ಕಟ್ಟಲೆಗಳನ್ನು ಹಾಗೆಯೇ ಕನ್ನಡಕ್ಕೆ ತಂದುಹಾಕಿದ್ದಾರಲ್ಲದೆ, ನಿಜಕ್ಕೂ ಕನ್ನಡ ಪದಗಳ ಇಲ್ಲವೇ ಸೊಲ್ಲುಗಳ ಬಳಕೆಯ ಹಿಂದೆ ಎಂತಹ ಕಟ್ಟಲೆಗಳು ಅಡಗಿವೆ ಎಂಬುದನ್ನು ಕಂಡುಹಿಡಿಯುವ ಮೂಲಕ ಅವನ್ನು ಬರೆದಿಲ್ಲ.

ಹಾಗಾಗಿ, ಈ ಕಟ್ಟಲೆಗಳನ್ನು ಸಂಸ್ಕ್ರುತ ಬರಹಗಳನ್ನು ಓದುವಲ್ಲಿ ಮತ್ತು ಬರೆಯುವಲ್ಲಿ ನೆರವಾಗುವ ಹಾಗೆ ಕಲಿಸಲು ಸಾದ್ಯವಾಗಬಹುದಲ್ಲದೆ, ಕನ್ನಡ ಬರಹಗಳನ್ನು ಓದುವಲ್ಲಿ ಮತ್ತು ಬರೆಯುವಲ್ಲಿ ನೆರವಾಗುವ ಹಾಗೆ ಕಲಿಸಲು ಸಾದ್ಯವಾಗಲಾರದು. ಕನ್ನಡ ಬರಹಗಳಲ್ಲಿ ಕನ್ನಡದವೇ ಆದ ಬೇರೆಯೇ ಕಟ್ಟಲೆಗಳು ಬಳಕೆಯಾಗುತ್ತವೆ; ಈ ಕಟ್ಟಲೆಗಳು ಎಂತಹವು ಎಂಬುದನ್ನು ಇವತ್ತು ಕಂಡುಹಿಡಿಯಬೇಕಾಗಿದೆ, ಮತ್ತು ಮಕ್ಕಳ ಓದು-ಬರಹದ ಕಲಿಕೆಗೆ ಅವು ಹೇಗೆ ನೆರವಾಗಬಲ್ಲುವು ಎಂಬುದನ್ನೂ ಕಂಡುಹಿಡಿಯಬೇಕಾಗಿದೆ. ಈ ಎರಡು ಕೆಲಸಗಳನ್ನು ನಡೆಸಿದ ಮೇಲಶ್ಟೇ ಮಕ್ಕಳಿಗೆ ಅವರ ಓದಿನ ಮತ್ತು ಬರಹದ ಕಲಿಕೆಯಲ್ಲಿ ನೆರವಾಗುವ ಹಾಗೆ ಕನ್ನಡ ವ್ಯಾಕರಣದ ಕಟ್ಟಲೆಗಳನ್ನು ಕಲಿಸಲು ಸಾದ್ಯವಾಗಬಲ್ಲುದು.

ಮಾತಿನ ಮೂಲಕ ನಾವು ನಮ್ಮ ಅನಿಸಿಕೆಗಳನ್ನು ಮತ್ತು ಅನುಬವಗಳನ್ನು ಇನ್ನೊಬ್ಬರಿಗೆ ಹೇಗೆ ತಿಳಿಸುತ್ತೇವೆ, ಮತ್ತು ಇನ್ನೊಬ್ಬರು ಬಳಸಿದ ಮಾತುಗಳಿಂದ ಅವರ ಅನಿಸಿಕೆ ಮತ್ತು ಅನುಬವಗಳು ಎಂತಹವು ಎಂಬುದು ನಮಗೆ ಹೇಗೆ ಗೊತ್ತಾಗುತ್ತದೆ ಎಂಬುದನ್ನು ವ್ಯಾಕರಣ ತಿಳಿಸುತ್ತದೆ. ಮನುಶ್ಯನಲ್ಲಿ ಮಾತ್ರವೇ ಕಾಣಿಸಿಕೊಳ್ಳುವ ಈ ಒಂದು ವಿಶಿಶ್ಟವಾದ ಅಳವಿನ ಕುರಿತಾಗಿ ಏನು ಹೇಳಬೇಕಿದ್ದರೂ ವ್ಯಾಕರಣದಲ್ಲಿ ಬಳಕೆಯಾಗುವ ಅರಿಮೆಯ ಪದಗಳನ್ನು ಬಳಸಲೇಬೇಕಾಗುತ್ತದೆ. ಹಾಗಾಗಿ, ಮಕ್ಕಳಿಗೆ ಈ ಅರಿಮೆಯ ತಿಳಿವು ದೊರಕುವಂತೆ ಮಾಡುವುದು ಬೇರೆಲ್ಲಾ ಬಗೆಯ ಅರಿಮೆ(ವಿಜ್ನಾನ)ಗಳ ತಿಳಿವು ದೊರಕುವಂತೆ ಮಾಡುವಶ್ಟೇ ಮುಕ್ಯವಾದುದು.

ಹಾಗಾಗಿ, ಅದರ ತಿಳಿವನ್ನು ಮಕ್ಕಳಿಗೆ ಯಾವಾಗ ಮತ್ತು ಹೇಗೆ ಕೊಡಿಸಬಹುದು ಎಂಬ ವಿಶಯದಲ್ಲಿ ಚರ‍್ಚೆ ನಡೆಸಬಹುದಲ್ಲದೆ, ಅದು ಬೇಕೇ ಬೇಡವೇ ಎಂಬ ವಿಶಯದಲ್ಲಲ್ಲ.

(ಈ ಬರಹ ವಿಜಯ ಕರ‍್ನಾಟಕ ಸುದ್ದಿಹಾಳೆಯ ’ಎಲ್ಲರ ಕನ್ನಡ’ ಅಂಕಣದಲ್ಲಿ ಮೊದಲು ಮೂಡಿಬಂದಿತ್ತು)

ಮೂಲ : ಹೊನಲು

ಬರಹಕ್ಕೆ ಮೇಲ್ಮೆ ಬಂದುದು ಹೇಗೆ

ಮೊನ್ನೆ ಮೊನ್ನೆಯ ವರೆಗೂ ಸಮಾಜದಲ್ಲಿ ಕೆಲವೇ ಕೆಲವು ಮಂದಿ ಮಾತ್ರ ಬರಹವನ್ನು ಕಲಿತರೆ ಸಾಕಿತ್ತು; ಉಳಿದವರೆಲ್ಲ ಅದರಿಂದ ದೂರವೇ ಉಳಿಯಬಹುದಿತ್ತು, ಮತ್ತು ಹೀಗೆ ಬರಹದಿಂದ ದೂರ ಉಳಿದುದರಿಂದಾಗಿ ಅವರಿಗೆ ಜೀವನದಲ್ಲಿ ಯಾವ ತೊಂದರೆಯೂ ಉಂಟಾಗುತ್ತಿರಲಿಲ್ಲ.

ಆದರೆ, ಇವತ್ತು ಎಲ್ಲಾ ಜನರೂ ಬರಹವನ್ನು ಕಲಿಯಬೇಕಾಗಿದೆ, ಮತ್ತು ಕಲಿತು ಬಳಸುತ್ತಿರಬೇಕಾಗಿದೆ. ಯಾಕೆಂದರೆ, ಹಾಗೆ ಮಾಡದವರಲ್ಲಿ ಹೆಚ್ಚಿನವರೂ ಇವತ್ತು ತಮ್ಮ ಜೀವನದಲ್ಲಿ ಸೋತುಹೋಗುತ್ತಿದ್ದಾರೆ. ಒಂದು ಸಮಾಜದ ಏಳಿಗೆಯಾಗಬೇಕಿದ್ದರೂ ಅದಕ್ಕೆ ಸೇರಿದ ಜನರೆಲ್ಲ ಬರಹವನ್ನು ಕಲಿಯುವುದು ಮತ್ತು ಬಳಸುವುದು ಇವತ್ತಿನ ಮಟ್ಟಿಗೆ ಅತ್ಯವಶ್ಯವಾಗಿದೆ.

ಇದುವರೆಗೂ ಇಲ್ಲದಿದ್ದ ಈ ಮೇಲ್ಮೆ ಬರಹಕ್ಕೆ ಬಂದುದು ಹೇಗೆ? ಮಿಲಿಯಗಟ್ಟಲೆ ವರ‍್ಶಗಳಿಂದಲೂ ಜನರ ನಡುವಿನ ಸಂಪರ‍್ಕಕ್ಕೆ ಕೊಂಡಿಯಾಗಿ, ಮತ್ತು ಮನಸ್ಸಿನಲ್ಲಿರುವ ಅನಿಸಿಕೆಗಳನ್ನು ಬೇರೆಯವರಿಗೆ ತಿಳಿಸಲು ಬೇಕಾಗುವ ಒಯ್ಯುಗೆಯಾಗಿ ಮಾತನ್ನೇ ಬಳಸಲಾಗುತ್ತಿತ್ತು. ಆದರೆ, ಸುಮಾರು ನಾಲ್ಕಯ್ದು ಸಾವಿರ ವರ‍್ಶಗಳಶ್ಟು ಹಿಂದೆ, ಮಾತನ್ನು ಬರಹಕ್ಕಿಳಿಸುವ ಬಗೆಯನ್ನು ಕಂಡುಹಿಡಿಯಲಾಯಿತು. ಮೊದಲಿಗೆ ಇದನ್ನು ನೆನಪಿಗೆ ನೆರವಾಗುವಂತಹ ಕೆಲಸಗಳಲ್ಲಿ ತೊಡಗಿಸಲಾಯಿತು; ಆದರೆ ಆಮೇಲೆ, ದೂರ ಇರುವವರನ್ನು ಸಂಪರ‍್ಕಿಸುವುದಕ್ಕಾಗಿಯೂ ಇದನ್ನು ಬಳಸಲು ತೊಡಗಲಾಯಿತು.

ಹೀಗಿದ್ದರೂ, ಬರಹವೆಂಬುದು ಮೊನ್ನೆ ಮೊನ್ನೆಯ ವರೆಗೂ ಕೆಲವೇ ಕೆಲವು ಜನರ ಸೊತ್ತಾಗಿ ಮಾತ್ರ ಉಳಿದಿತ್ತು, ಮತ್ತು ಕೆಲವೇ ಕೆಲವು ನುಡಿಗಳನ್ನು ಆಡುವವರಲ್ಲಿ ಮಾತ್ರ ಅದು ಬಳಕೆಯಲ್ಲಿತ್ತು. ಸುಮಾರು ಮುನ್ನೂರು-ನಾನ್ನೂರು ವರ‍್ಶಗಳಶ್ಟು ಹಿಂದೆ ಬರಹಗಳನ್ನು ಅಚ್ಚುಹಾಕುವ ಬಗೆಯನ್ನು ಕಂಡುಹಿಡಿದುದು ಈ ವಿಶಯದಲ್ಲಿ ಒಂದು ದೊಡ್ಡ ಕ್ರಾಂತಿಯನ್ನೇ ಉಂಟುಮಾಡಿತು; ಅದರಲ್ಲೂ ಬರಹದಲ್ಲಿ ಬರುವ ಒಂದೊಂದು ಬರಿಗೆಗೂ ಒಂದೊಂದು ಮೊಳೆಯನ್ನು ಬಳಸಿ ಅಚ್ಚುಹಾಕುವ ಬಗೆಯನ್ನು ಕಂಡುಹಿಡಿದುದು ಈ ಕ್ರಾಂತಿ ಇನ್ನಶ್ಟು ವೇಗವಾಗಿ ಹಲವಾರು ನುಡಿಗಳನ್ನು ಆವರಿಸುವ ಹಾಗೆ ಮಾಡಿತು.

ಈ ಕ್ರಾಂತಿ ನಡೆಯುವ ಮೊದಲು, ಬರಹಗಳನ್ನು ಕಯ್ಯಲ್ಲಿ ನಕಲುಮಾಡಬೇಕಾಗಿತ್ತು; ಇದು ತುಂಬಾ ತೊಡಕಿನ ಮತ್ತು ತುಂಬಾ ಸಮಯ ತಗಲುವ ಕೆಲಸವಾಗಿತ್ತು; ಕೆಲವು ಮಂದಿ ಮಾತ್ರ ಈ ಕೆಲಸದಲ್ಲಿ ತೊಡಗಿಕೊಳ್ಳುತ್ತಿದ್ದರು, ಮತ್ತು ಇದರಿಂದಾಗಿ, ಬರಹವನ್ನು ಬಳಸುವವರ ಎಣಿಕೆ ತುಂಬಾ ಕಡಿಮೆಯಾಗಿಯೇ ಉಳಿದಿತ್ತು.

ಆದರೆ, ಬರಹಗಳನ್ನು ಅಚ್ಚುಹಾಕಿಸಲು ತೊಡಗಿದುದರಿಂದಾಗಿ, ಮತ್ತು ಅದಕ್ಕಾಗಿ ತೊಗಲು, ತೊಗಟೆ ಮೊದಲಾದವುಗಳನ್ನು ಬಳಸುವ ಬದಲು ಕಾಗದವನ್ನು ಬಳಸಲು ತೊಡಗಿದುದರಿಂದಾಗಿ, ಅವನ್ನು ತುಂಬಾ ಕಡಿಮೆ ಬೆಲೆಗೆ ಉಂಟುಮಾಡಲು, ಮತ್ತು ತುಂಬಾ ಸುಲಬವಾಗಿ ಉಂಟುಮಾಡಲು ಸಾದ್ಯವಾಯಿತು. ಇದರಿಂದಾಗಿ, ಅವುಗಳ ಪ್ರತಿಗಳನ್ನು ಒಮ್ಮೆಗೇನೇ ಸಾವಿರಾರು ಜನರಿಗೆ ತಲುಪಿಸಲು ಸಾದ್ಯವಾಯಿತು. ಇದಲ್ಲದೆ, ಅವನ್ನು ಬಳಸುವ ಕೆಲಸವೂ ತುಂಬಾ ಸುಲಬವಾಯಿತು.

ಬರಹಗಳನ್ನು ಅಚ್ಚುಹಾಕಿಸಲು ತೊಡಗಿದುದರಿಂದಾಗಿ, ಬರಹಗಳಲ್ಲಿ ಬಳಕೆಯಾಗುವ ಬರಿಗೆ(ಅಕ್ಶರ)ಗಳು, ಪದಗಳು, ಸೊಲ್ಲುಗಳು ಮೊದಲಾದುವೆಲ್ಲ ಎಲ್ಲಾ ಕಡೆಗಳಲ್ಲೂ ಹೆಚ್ಚುಕಡಿಮೆ ಒಂದೇ ರೂಪದಲ್ಲಿ ಉಳಿಯುವಂತಾಯಿತು, ಮತ್ತು ಇದರಿಂದಾಗಿ, ನಾಡಿನ ಒಂದು ಮೂಲೆಯಲ್ಲಿ ಉಂಟುಮಾಡಿದ ಬರಹವನ್ನು ಎಲ್ಲಾ ಕಡೆಗಳಲ್ಲಿರುವ ಜನರೂ ಸುಲಬವಾಗಿ ಓದಿ ತಿಳಿದುಕೊಳ್ಳುವಂತೆ ಮಾಡಲು ಸಾದ್ಯವಾಯಿತು.

ಹಿಂದಿನ ಕಾಲದಲ್ಲಿ ಬರಹಗಳನ್ನು ಯಾರಾದರೂ ಒಬ್ಬರು ದೊಡ್ಡದಾಗಿ ಓದುತ್ತಿದ್ದರು, ಮತ್ತು ಉಳಿದವರು ಅವರ ಸುತ್ತಲೂ ಕುಳಿತು ಅದನ್ನು ಕೇಳುತ್ತಿದ್ದರು; ಎಲ್ಲರಿಗೂ ತಮ್ಮವೇ ಆದ ಬರಹಗಳ ಪ್ರತಿಗಳು ದೊರೆಯತೊಡಗಿದ ಮೇಲೆ, ಅವನ್ನು ಗಟ್ಟಿಯಾಗಿ ಓದುವ ಬದಲು ಮನಸ್ಸಿನಲ್ಲೇನೇ ಓದುವ ಬಗೆ ಬಳಕೆಗೆ ಬಂತು. ಇದಕ್ಕನುಗುಣವಾಗಿ, ಬರಹಗಳ ಬಗೆಗಳಲ್ಲೂ ಹಲವು ಮಾರ‍್ಪಾಡುಗಳು ನಡೆದುವು.

ದಿನಪತ್ರಿಕೆ, ವಾರಪತ್ರಿಕೆ ಮೊದಲಾದುವನ್ನು ಅಚ್ಚುಹಾಕಿಸಿ, ಅವು ಒಮ್ಮೆಗೇನೇ ಲಕ್ಶಾಂತರ ಜನರನ್ನು ತಲಪುವ ಹಾಗೆ ಮಾಡಲಾಯಿತು, ಮತ್ತು ಬರಹವನ್ನು ಕಲಿಯುವವರಿಗೆಲ್ಲ ಅವರದೇ ಆದ ಕಲಿಕೆಯ ಪುಸ್ತಕಗಳು ಸಿಗುವಂತೆ ಮಾಡಲಾಯಿತು. ಬರಹದ ಬಳಕೆಯಲ್ಲಿ ಮತ್ತು ಕಲಿಕೆಯಲ್ಲಿ ಇಂತಹ ಹಲವಾರು ಮಾರ‍್ಪಾಡುಗಳು ಅವನ್ನು ಕಾಗದದಲ್ಲಿ ಅಚ್ಚುಹಾಕಲು ತೊಡಗಿದ ಮೇಲೆ ನಡೆದುಹೋಗಿವೆ. ಹಲವಾರು ಒಳನುಡಿಗಳನ್ನಾಡುವ ಜನರ ನಡುವೆ ಒಂದೇ ಬಗೆಯ ಬರಹದ ನುಡಿ ಬಳಕೆಗೆ ಬಂದಿರುವುದಕ್ಕೂ ಈ ರೀತಿ ಬರಹಗಳನ್ನು ಅಚ್ಚುಹಾಕಲು ತೊಡಗಿದುದೇ ಕಾರಣವಾಗಿದೆ.

ಬರಹಕ್ಕೆ ಈ ರೀತಿ ಹೆಚ್ಚು ಹೆಚ್ಚು ಮೇಲ್ಮೆ ಸಿಗುತ್ತಿದ್ದಂತೆ, ಜನರ ನಡವಳಿಕೆಗಳಲ್ಲೂ ಹಲವು ಬಗೆಯ ಮಾರ‍್ಪಾಡುಗಳು ಉಂಟಾಗತೊಡಗಿದುವು: ಜನರು ತಿಳಿವನ್ನು ಕೂಡಿಡುವ ಬಗೆ ಬೇರಾಯಿತು; ಮೊದಲಿಗೆ ಎಲ್ಲವನ್ನೂ ನೆನಪಿನಲ್ಲಿಯೇ ಉಳಿಸಿಕೊಳ್ಳಬೇಕಾಗಿತ್ತು; ಆದರೆ ಬರಹ ಹೆಚ್ಚು ಹೆಚ್ಚು ಬಳಕೆಗೆ ಬಂದಂತೆ, ತಿಳಿವನ್ನು ಹಲವು ಬಗೆಯ ಬರಹಗಳಲ್ಲಿ ಮತ್ತು ಪುಸ್ತಕಗಳಲ್ಲಿ ಕೂಡಿಡಲಾಯಿತು.

ಗಾದೆಗಳು, ಹಾಡುಗಳು, ಸೂತ್ರಗಳು, ನೀತಿಕತೆಗಳು ಮೊದಲಾದುವೆಲ್ಲ ತಿಳಿವನ್ನು ನೆನಪಿನಲ್ಲಿ ಕೂಡಿಡಲು ಬೇಕಾಗುವಂತಹ ಬಗೆಗಳು; ಬರಹಗಳಲ್ಲಿ ಕೂಡಿಡುವುದಕ್ಕೆ ಇಂತಹ ನೆನಪಿಸಲು ನೆರವಾಗುವ ಬಗೆಗಳು ಬೇಕಾಗುವುದಿಲ್ಲ. ಇದಕ್ಕೆ ಬದಲು, ಪುಸ್ತಕಗಳಲ್ಲಿ ಕಾಣಿಸುವಂತಹ ತಲೆಬರಹಗಳು, ಪಸುಗೆಗಳು, ದಪ್ಪಬರಿಗೆ, ತೆಳುಬರಿಗೆ ಮೊದಲಾದ ಬರಿಗೆರೂಪಗಳು, ಪಟ್ಟಿಗಳು, ಸುಟ್ಟಗೆಗಳು ಮೊದಲಾದ ಓದುವಲ್ಲಿ ನೆರವಾಗುವ ಬೇರೆಯೇ ಹಲವು ಬಗೆಗಳನ್ನು ಬಳಕೆಗೆ ತರಬೇಕಾಯಿತು.

ತಿಳಿವನ್ನು ಕೂಡಿಡುವ ಬಗೆಯಲ್ಲಿ ಮಾರ‍್ಪಾಡಾದುದರಿಂದಾಗಿ, ತಿಳಿವಿಗೂ ವಯಸ್ಸಿಗೂ ನಡುವಿದ್ದ ಸಂಬಂದ ಇಲ್ಲವಾಯಿತು; ಯಾವ ವಿಶಯದಲ್ಲಿ ಬೇಕಿದ್ದರೂ ಪುಸ್ತಕಗಳನ್ನು ಓದುವ ಮೂಲಕ, ದೊಡ್ಡವರಿಗಿಂತ ಹೆಚ್ಚು ತಿಳಿವನ್ನು ಚಿಕ್ಕವರು ಪಡೆಯಬಲ್ಲವರಾದರು. ಇದಲ್ಲದೆ, ಎಶ್ಟು ತಿಳಿವನ್ನು ಮತ್ತು ಎಶ್ಟು ಬಗೆಯ ತಿಳಿವನ್ನು ಪುಸ್ತಕಗಳಲ್ಲಿ ಕೂಡಿಡಬಲ್ಲೆವು ಎಂಬುದಕ್ಕೆ ಒಂದು ಮಿತಿಯೇ ಇಲ್ಲದಿರುವ ಹಾಗಾಯಿತು. ಹೊಸ ಹೊಸ ತಿಳಿವುಗಳನ್ನು ಪಡೆಯುತ್ತಿರುವಾಗಲೂ ಹಳೆಯವನ್ನು ಕಳೆದುಕೊಳ್ಳದೆ ಉಳಿಸಿಕೊಳ್ಳಲು ಸಾದ್ಯವಾಯಿತು.

ತಿಳಿವನ್ನು ಬರಹರೂಪದಲ್ಲಿ ಉಳಿಸಿಕೊಳ್ಳಲು ತೊಡಗಿದುದರಿಂದಾಗಿ ಜನರು ಅದನ್ನೊಂದು ವಸ್ತುವಿನ ಹಾಗೆ ಕಾಣಲು ತೊಡಗಿದರು, ಮತ್ತು ಅದನ್ನು ಕಂಡುಹಿಡಿದವರು ಅದರ ಮೇಲೆ ತಮ್ಮ ಒಡೆತನವನ್ನು ಹೇರಲು ತೊಡಗಿದರು. ತಾವು ಕಂಡುಹಿಡಿದ ತಿಳಿವನ್ನು ಒಂದು ಪುಸ್ತಕದ ರೂಪದಲ್ಲಿ ಅಚ್ಚುಹಾಕಿಸಿ, ಅದನ್ನು ಸಾವಿರಾರು ಜನರಿಗೆ ತಲಪಿಸುವ ಮೂಲಕ, ಕೆಲವರು ಸಾಕಶ್ಟು ಹಣವನ್ನೂ ಕಲೆಹಾಕಿದರು.

ತಿಳಿವು ಎಂಬುದು ಬರಹವನ್ನು ಬಳಸಲು ತಿಳಿಯದವರಲ್ಲಿ ಅವರು ಮಾಡುವ ಕೆಲಸದ ಅಂಗವಾಗಿರುತ್ತದೆ; ಕೆಲಸ ಮಾಡಿದ ಅನುಬವವೇ ಅವರಲ್ಲಿ ತಿಳಿವಿನ ರೂಪದಲ್ಲಿರುತ್ತದೆ; ಅದನ್ನು ಅವರು ಆ ಕೆಲಸದಿಂದ ಬೇರ‍್ಪಡಿಸಿ ಪರಿಶೀಲಿಸಲಾರರು; ಅದರ ಕುರಿತಾಗಿ ಅವರು ಆಡಬಲ್ಲ ಮಾತುಗಳೂ ಅದನ್ನು ಬಳಸಿ ನಡೆಸಬಲ್ಲ ಕೆಲಸದೊಂದಿಗೆ ಹೆಣೆದುಕೊಂಡಿರುತ್ತವೆ.

ಇದಕ್ಕೆ ಬದಲು, ಕಾಗದದಲ್ಲಿ ಬರೆದ ಇಲ್ಲವೇ ಅಚ್ಚುಹಾಕಿದ ತಿಳಿವು ಅದನ್ನು ಬಳಸಿ ನಡೆಸುವ ಕೆಲಸಕ್ಕಿಂತ ಬೇರಾಗಿ ಉಳಿಯುತ್ತದೆ; ಅದನ್ನು ತಿರುತಿರುಗಿ ಓದಿ, ಆ ತಿಳಿವು ಸರಿಯೋ ತಪ್ಪೋ ಎಂದು ವಿಮರ‍್ಶಿಸಲು ಬರುತ್ತದೆ. ಹಾಗಾಗಿ, ಬರಹವನ್ನು ಬಳಸುವವರಿಗೂ ಅವನ್ನು ಬಳಸದವರಿಗೂ ನಡುವೆ ಅವರು ಆಲೋಚಿಸುವ ಬಗೆಯಲ್ಲೇ ಹಲವು ವ್ಯತ್ಯಾಸಗಳು ಕಾಣಿಸಿಕೊಳ್ಳುತ್ತವೆ.

ನಿಜಕ್ಕೂ ಬರಹ ಬಾರದವರು ಬರಹ ಬಲ್ಲವರಿಗಿಂತ ಜಾಣ್ಮೆಯಲ್ಲಾಗಲಿ, ಬುದ್ದಿವಂತಿಕೆಯಲ್ಲಾಗಲಿ ಕಡಿಮೆಯೇನಲ್ಲ; ಬರಹ ಬಲ್ಲವರಶ್ಟೇ ಜಾಣ್ಮೆಯಿಂದ ಮತ್ತು ಅವರಶ್ಟೇ ಚನ್ನಾಗಿ ಬರಹ ಬಾರದವರೂ ತಮ್ಮ ಜೀವನವನ್ನು ನಡೆಸಬಲ್ಲರು. ಆದರೆ, ಈ ಎರಡು ಬಗೆಯ ಜನರೂ ಒಂದೇ ನಾಡಿನಲ್ಲಿ ನೆಲೆಸಿದ್ದು, ಆ ನಾಡಿನ ಆಡಳಿತವನ್ನು ನಡೆಸುವ ಮತ್ತು ಅದರ ಕುರಿತಾಗಿ ತೀರ‍್ಮಾನಗಳನ್ನು ಕಯ್ಗೊಳ್ಳುವ ಮಂದಿಯೆಲ್ಲ ಬರಹಬಲ್ಲವರಾಗಿದ್ದಲ್ಲಿ, ಆ ನಾಡಿನಲ್ಲಿರುವ ಬರಹ ಬಾರದ ಜನರಲ್ಲಿ ಹೆಚ್ಚಿನವರೂ ತಮ್ಮ ಜೀವನದಲ್ಲಿ ಸೋತುಹೋಗುತ್ತಲೇ ಇರಬೇಕಾಗುತ್ತದೆ.

ಅದರಲ್ಲೂ ನಮ್ಮ ನಾಡಿನಲ್ಲಿರುವ ಹಾಗೆ ಆಡಳಿತವು ಮಂದಿಯಾಳ್ವಿಕೆಯದಾಗಿದ್ದಲ್ಲಿ, ಎಲ್ಲಾ ಮಂದಿಯೂ ಅದರಲ್ಲಿ ಸರಿಯಾಗಿ ತಮ್ಮ ಹೊಣೆಯನ್ನರಿತು ಪಾಲ್ಗೊಳ್ಳಬೇಕಾಗುತ್ತದೆ; ಹಾಗಾಗಿ, ಒಂದು ನಾಡಿನ ಮಂದಿಯಾಳ್ವಿಕೆ (ಪ್ರಜಾಪ್ರಬುತ್ವ) ಚನ್ನಾಗಿ ನಡೆಯಬೇಕಿದ್ದಲ್ಲಿ, ಎಲ್ಲರಿಗೂ ಬರಹದ ತಿಳಿವಿರುವುದು ಅತ್ಯವಶ್ಯ. ಇಲ್ಲವಾದರೆ, ಆ ನಾಡಿನಲ್ಲಿರುವ ಬರಹ ಬಾರದವರು ತಮ್ಮ ಏಳಿಗೆಗೆ ಮಾತ್ರವಲ್ಲದೆ ಇಡೀ ನಾಡಿನ ಏಳಿಗೆಗೂ ತೊಡಕಾಗುತ್ತಾರೆ.

(ಈ ಬರಹ ವಿಜಯ ಕರ‍್ನಾಟಕ ಸುದ್ದಿಹಾಳೆಯ ’ಎಲ್ಲರ ಕನ್ನಡ’ ಅಂಕಣದಲ್ಲಿ ಮೊದಲು ಮೂಡಿಬಂದಿತ್ತು)

ಮೂಲ : ಹೊನಲು

ಹೆಚ್ಚು ಬರಿಗೆಗಳಿರುವುದು ಸಿರಿತನವಲ್ಲ

ಕನ್ನಡ ಪದಗಳನ್ನು ಹೆಚ್ಚಿನವರೂ ಹೇಗೆ ಓದುತ್ತಾರೋ ಹಾಗೆ ಬರೆಯಲು ನಮಗೆ ಬೇಕಾಗುವುದು ಒಟ್ಟು 31 ಬರಿಗೆಗಳು ಮಾತ್ರ. ಆದರೆ, ಇವತ್ತು ನಾವು ಕನ್ನಡ ಬರಹಗಳಲ್ಲಿ 48 (ಇಲ್ಲವೇ ಅದಕ್ಕಿಂತಲೂ ಹೆಚ್ಚು) ಬರಿಗೆಗಳನ್ನು ಬಳಸುತ್ತಿದ್ದೇವೆ. ಈ ಹೆಚ್ಚಿನ ಬರಿಗೆಗಳನ್ನು ಬಿಟ್ಟುಕೊಟ್ಟಲ್ಲಿ, ಕನ್ನಡ ಬರಹವನ್ನು ಕಲಿಯುವ ಮತ್ತು ಬಳಸುವ ಕೆಲಸ ತುಂಬಾ ಸುಲಬವಾಗಬಲ್ಲುದು.

ಇದನ್ನು ವಿರೋದಿಸುವವರಲ್ಲಿ ಕೆಲವರ ವಾದ ಹೀಗಿರುತ್ತದೆ: ಕನ್ನಡ ಬರಹದಲ್ಲಿ ಈ ರೀತಿ ಹೆಚ್ಚು ಬರಿಗೆಗಳಿರುವುದು ಅದರ ಶ್ರೀಮಂತಿಕೆ; ಅವನ್ನು ಕಳೆದುಕೊಳ್ಳುವುದೆಂದರೆ, ಕನ್ನಡ ಬರಹವನ್ನು ಬಡತನಕ್ಕೆ ನೂಕಿದ ಹಾಗೆ, ಮತ್ತು ಅದರ ಸಂಸ್ಕ್ರುತಿಯನ್ನು ನಾಶಮಾಡಿದ ಹಾಗೆ.

ಆದರೆ, ಈ ವಾದ ನಿಜಕ್ಕೂ ಸರಿಯಲ್ಲ; ಪದಗಳನ್ನು ಓದುವ ಹಾಗೆಯೇ ಬರೆಯಲು ಎಶ್ಟು ಬರಿಗೆಗಳು ಬೇಕಾಗುತ್ತವೆಯೋ ಅಶ್ಟನ್ನು ಮಾತ್ರ ಉಳಿಸಿಕೊಂಡಿರುವ ಬರಹವೇ ತುಂಬಾ ಒಳ್ಳೆಯ ಬರಹವೆಂದೆನಿಸುತ್ತದೆ. ಬೇಕಾದುದಕ್ಕಿಂತ ಹೆಚ್ಚು ಬರಿಗೆಗಳನ್ನು ಬಳಸುವ ಬರಹವನ್ನು ಕಲಿಯುವುದೂ ಕಶ್ಟ, ಬಳಸುವುದೂ ಕಶ್ಟ.

ಹಳೆಗನ್ನಡದಲ್ಲಿ ಱ ಮತ್ತು ೞಗಳೆಂಬ ಎರಡು ಹೆಚ್ಚಿನ ಬರಿಗೆಗಳಿದ್ದುವು; ಆ ಕಾಲದಲ್ಲಿ ರ-ಱ ಮತ್ತು ಳ-ೞಗಳ ನಡುವೆ ಓದಿನಲ್ಲಿ ವ್ಯತ್ಯಾಸವಿದ್ದ ಕಾರಣ, ಅವನ್ನು ಬರಹದಲ್ಲಿ ಬಳಸುತ್ತಿದ್ದುದು ಹಳೆಗನ್ನಡದ ಮಟ್ಟಿಗೆ ಸಿರಿತನವಾಗಿತ್ತು; ಆದರೆ, ಇವತ್ತು ನಾವು ಅವೆರಡು ಬರಿಗೆಗಳನ್ನೂ ಬಿಟ್ಟುಕೊಟ್ಟಿದ್ದೇವೆ; ಯಾಕೆಂದರೆ, ನಮ್ಮ ಓದಿನಲ್ಲಿ ಅವುಗಳ ನಡುವಿನ ವ್ಯತ್ಯಾಸ ಇಲ್ಲವಾಗಿದೆ.

ಈ ಹೆಚ್ಚಿನ ಬರಿಗೆಗಳಿರುವುದು ಸಿರಿತನವೆಂದು, ಇಲ್ಲವೇ ಕನ್ನಡ ಬರಹದ ಸಂಸ್ಕ್ರುತಿಯೆಂದು ಅವನ್ನು ಇವತ್ತಿಗೂ ಉಳಿಸಿಕೊಂಡಿದ್ದಲ್ಲಿ, ನಮ್ಮ ಓದಿನಲ್ಲಿಲ್ಲದ ಈ ಎರಡು ಬಗೆಯ ವ್ಯತ್ಯಾಸಗಳನ್ನು ಬರಹದಲ್ಲಿ ಕಾಣಿಸುವ ಒಂದು ದೊಡ್ಡ ತೊಡಕು ನಮ್ಮದಾಗುತ್ತಿತ್ತು. ಕರೆ ‘ಬರಹೇಳು’, ಕರೆ ‘ಹಾಲು ಕರೆ’, ಊರು ‘ಹಳ್ಳಿ’, ಊರು ‘ನಿಲ್ಲಿಸು’, ತೆರೆ ‘ಕಡಲಿನ ತೆರೆ’, ತೆರೆ ‘ಬಾಗಿಲು ತೆರೆ’ ಎಂಬಂತಹ ಹಲವಾರು ಪದಗಳನ್ನು ಬರೆಯುವಾಗ, ಯಾವ ಪದದಲ್ಲಿ ರಕಾರವನ್ನು ಬಳಸಬೇಕು, ಮತ್ತು ಯಾವುದರಲ್ಲಿ ಱಕಾರವನ್ನು ಬಳಸಬೇಕು ಎಂಬುದನ್ನು ನೆನಪಿನಲ್ಲಿರಿಸಿಕೊಳ್ಳಬೇಕಾಗಿತ್ತು. ಯಾಕೆಂದರೆ, ಮೇಲಿನ ಪದಜೋಡಿಗಳಲ್ಲಿ ರಕಾರವನ್ನು ಮೊದಲನೆಯದರಲ್ಲೂ ಱಕಾರವನ್ನು ಎರಡನೆಯದರಲ್ಲೂ ಬಳಸಬೇಕಾಗುತ್ತಿತ್ತು.

ಇದೇ ರೀತಿಯಲ್ಲಿ, ಉಳಿ ‘ಕೆತ್ತುವ ಉಳಿ’, ಉಳಿ ‘ ಮನೆಯಲ್ಲಿ ಉಳಿ’, ಎಳೆ ‘ಎಳತು’, ಎಳೆ ‘ಎಳೆದಾಡು’, ಬಳಸು ‘ನೇರವಲ್ಲದ’, ಬಳಸು ‘ಉಪಯೋಗಿಸು’ ಎಂಬಂತಹ ಬೇರೆ ಹಲವಾರು ಪದಜೋಡಿಗಳಲ್ಲಿ ಳಕಾರವನ್ನು ಯಾವ ಪದದಲ್ಲಿ ಬಳಸಬೇಕು ಮತ್ತು ೞಕಾರವನ್ನು ಯಾವ ಪದದಲ್ಲಿ ಬಳಸಬೇಕು ಎಂಬುದನ್ನು ನೆನಪಿನಲ್ಲಿರಿಸಿಕೊಳ್ಳಬೇಕಾಗಿತ್ತು (ಎರಡನೆಯ ಪದದಲ್ಲಿ ೞಕಾರವಿತ್ತು).

ಹೊಸಗನ್ನಡವನ್ನು ಬಳಕೆಗೆ ತಂದವರು ಈ ಸಿರಿತನದ ಇಲ್ಲವೇ ಸಂಸ್ಕ್ರುತಿಯ ಹೊರೆಯನ್ನು ನಮ್ಮ ಮೇಲೆ ಹೊರಿಸ ಹೋಗದೆ ಒಂದು ದೊಡ್ಡ ಉಪಕಾರವನ್ನೇ ಮಾಡಿದ್ದಾರೆ. ಆದರೆ, ಸಂಸ್ಕ್ರುತದಿಂದ ಬಂದ ಎರವಲು ಪದಗಳ ಮಟ್ಟಿಗೆ ಮಾತ್ರ, ಅವರು ಇಂತಹದೇ ಇನ್ನೊಂದು ಬಗೆಯ ತೊಡಕನ್ನು ಇಲ್ಲವಾಗಿಸದೆ ಹಾಗೆಯೇ ಉಳಿಸಿದ್ದಾರೆ. ಸಂಸ್ಕ್ರುತದ ವಿಶಯವಾಗಿ ಅವರಿಗಿದ್ದ ಮೇಲರಿಮೆಯೇ ಇದಕ್ಕೆ ಕಾರಣ.

ಈ ಎರವಲು ಪದಗಳಲ್ಲಿ ಬರುವ ರು-ಋ, ಶ-ಷ, ಅಲ್ಪಪ್ರಾಣ-ಮಹಾಪ್ರಾಣ ಮೊದಲಾದವುಗಳ ನಡುವಿನ ವ್ಯತ್ಯಾಸ ಹೆಚ್ಚಿನ ಕನ್ನಡಿಗರ ಓದಿನಲ್ಲೂ ಕಾಣಿಸಿಕೊಳ್ಳುವುದಿಲ್ಲ. ಹಾಗಾಗಿ, ಅವನ್ನು ಬರಹದಲ್ಲಿ ಕಾಣಿಸಬೇಕಿದ್ದರೆ, ಯಾವ ಪದದಲ್ಲಿ ಯಾವುದನ್ನು ಬಳಸಬೇಕು ಎಂಬುದನ್ನು ನೆನಪಿನಲ್ಲಿರಿಸಿಕೊಳ್ಳಬೇಕಾಗುತ್ತದೆ. ಹಳೆಗನ್ನಡದ ರ-ಱ ಮತ್ತು ಳ-ೞ ವ್ಯತ್ಯಾಸಗಳ ಹಾಗೆಯೇ ಇವೂ ಕೂಡ ಕನ್ನಡ ಬರಹವನ್ನು ಕಲಿಯುವಲ್ಲಿ ಮತ್ತು ಬಳಸುವಲ್ಲಿ ಹೆಚ್ಚಿನ ಕನ್ನಡಿಗರಿಗೂ ಅನವಶ್ಯಕವಾಗಿ ತೊಡಕನ್ನು ಉಂಟುಮಾಡುತ್ತವೆ.

ಸಂಸ್ಕ್ರುತ ಎರವಲುಗಳಾದ ಅವಶ್ಯ-ಮನುಷ್ಯ, ವಿಶಾಲ-ಕಷಾಯ, ಕೃಶ-ಕೃಷಿ, ಶಿಶು-ವಿಷು, ನಶಿಸು-ದೂಷಿಸು, ಮೊದಲಾದ ಪದಜೋಡಿಗಳ ಬರವಣಿಗೆಯಲ್ಲಿ ಶ-ಷ ವ್ಯತ್ಯಾಸ ಕಾಣಿಸುತ್ತದೆ, ಆದರೆ ಅವುಗಳ ಓದಿನಲ್ಲಿ ಕಾಣಿಸುವುದಿಲ್ಲ; ಇದೇ ರೀತಿಯಲ್ಲಿ ಬೋಧಿಸು-ಭೇದಿಸು, ವರ್ಧಿಸು-ಮರ್ದಿಸು, ವಿಧಾನ-ವಿದಾಯ, ಸಂಪಾದಿಸು-ಸಂಬಂಧಿಸು ಮೊದಲಾದ ಪದಜೋಡಿಗಳ ಬರವಣಿಗೆಯಲ್ಲಿ ಕಾಣಿಸುವ ಅಲ್ಪಪ್ರಾಣ-ಮಹಾಪ್ರಾಣ ವ್ಯತ್ಯಾಸವೂ ಓದಿನಲ್ಲಿಲ್ಲ.

ಹಳೆಗನ್ನಡದ ವ್ಯತ್ಯಾಸಗಳ ಹಾಗೆ, ಓದಿನಲ್ಲಿಲ್ಲದ ಈ ಸಂಸ್ಕ್ರುತ ಎರವಲುಗಳ ನಡುವಿನ ವ್ಯತ್ಯಾಸವನ್ನೂ ಬಿಟ್ಟುಕೊಡುವ ಮೂಲಕ ಇವತ್ತು ಕನ್ನಡ ಬರಹವನ್ನು ಕಲಿಯುವ ಮತ್ತು ಬಳಸುವ ಕೆಲಸ ಸುಲಬವಾಗುವ ಹಾಗೆ ಮಾಡಬೇಕಾಗಿದೆ, ಮತ್ತು ಅದು ಎಲ್ಲಾ ಕನ್ನಡಿಗರನ್ನೂ ತಲಪುವ ಹಾಗೆ ಮಾಡಬೇಕಾಗಿದೆ. ಓದಿನಲ್ಲಿ ಕಾಣಿಸಿಕೊಳ್ಳದ ಈ ಹೆಚ್ಚಿನ ಬರಿಗೆಗಳು ಕನ್ನಡ ಬರಹದ ಸಿರಿವಂತಿಕೆಯೂ ಅಲ್ಲ, ಸಂಸ್ಕ್ರುತಿಯೂ ಅಲ್ಲ. ಕನ್ನಡ ಬರಹವನ್ನು ಬಳಸುವಲ್ಲಿ ಅವು ಒಂದು ಅವಶ್ಯವಿಲ್ಲದ ಹೊರೆ ಮಾತ್ರ.

ಓದಿನಲ್ಲಿಲ್ಲದ ಬರಿಗೆ ಒಂದು ಬರಹಕ್ಕೆ ಬೇಕಾಗುವುದಿಲ್ಲವೆಂಬುದಕ್ಕೆ ಸಂಸ್ಕ್ರುತದಿಂದಲೇ ಒಂದು ಎತ್ತುಗೆಯನ್ನು ಕೊಡಬಹುದು: ಕನ್ನಡ ಬರಹದಲ್ಲಿ ಎ-ಏ ಮತ್ತು ಒ-ಓ ಎಂಬ ವ್ಯತ್ಯಾಸ ಇದೆ; ಆದರೆ, ಸಂಸ್ಕ್ರುತ ಬರಹದಲ್ಲಿ ಈ ವ್ಯತ್ಯಾಸವಿಲ್ಲ. ಆದರೆ ಈ ಕಾರಣಕ್ಕಾಗಿ, ಕನ್ನಡ ಬರಹ ಸಂಸ್ಕ್ರುತ ಬರಹಕ್ಕಿಂತ ಹೆಚ್ಚು ಶ್ರೀಮಂತವಾದುದೆಂದು ಹೇಳಲು ಬರುವುದಿಲ್ಲ. ಯಾಕೆಂದರೆ, ಸಂಸ್ಕ್ರುತ ಪದಗಳ ಓದಿನಲ್ಲಿ ಕಾಣಿಸದಿರುವ ಈ ವ್ಯತ್ಯಾಸ ಸಂಸ್ಕ್ರುತ ಬರಹದಲ್ಲಿ ಇಲ್ಲದಿರುವುದು ಸಂಸ್ಕ್ರುತ ಬರಹದ ಸಿರಿತನವಲ್ಲದೆ ಬಡತನವಲ್ಲ.

ಪದಗಳಲ್ಲಿ ಎಶ್ಟು ಉಲಿಗಳು ಬಳಕೆಯಾಗುತ್ತವೆ, ಮತ್ತು ಯಾವ ಉಲಿಗಳು ಬಳಕೆಯಾಗುತ್ತವೆ ಎಂಬ ವಿಶಯದಲ್ಲಿ ನುಡಿಗಳು ಒಂದರಿಂದೊಂದು ತೀರಾ ಬೇರಾಗಿರಬಲ್ಲುವು. ಆಪ್ರಿಕಾದ ಬೊತ್ಸ್‌ವಾನಾದಲ್ಲಿ ಬಳಕೆಯಲ್ಲಿರುವ ಕೆಲವು ನುಡಿಗಳಲ್ಲಿ ನೂರಕ್ಕಿಂತಲೂ ಹೆಚ್ಚು ಉಲಿಗಳು ಬಳಕೆಯಲ್ಲಿದ್ದು, ಅವನ್ನು ಓದುವಂತೆ ಬರೆಯಲು ನೂರಕ್ಕಿಂತಲೂ ಹೆಚ್ಚು ಬರಿಗೆಗಳು ಬೇಕಾಗುತ್ತವೆ. ಇದಕ್ಕೆ ಬದಲು, ಪಾಪುವಾ ನ್ಯೂಗಿನಿಯ ರೋತೋಕಸ್ ಎಂಬ ನುಡಿಯಲ್ಲಿ ಹತ್ತು-ಹನ್ನೆರಡು ಉಲಿಗಳು ಮಾತ್ರ ಬಳಕೆಯಲ್ಲಿದ್ದು, ಅವನ್ನು ಓದುವ ಹಾಗೆ ಬರೆಯಲು ಹತ್ತು-ಹನ್ನೆರಡು ಬರಿಗೆಗಳು ಮಾತ್ರ ಸಾಕಾಗುತ್ತವೆ.

ಜಗತ್ತಿನಲ್ಲಿರುವ ಎಲ್ಲಾ ನುಡಿಗಳಲ್ಲೂ ಬಳಕೆಯಲ್ಲಿರುವ ಉಲಿಗಳನ್ನು ಬರೆಯಬೇಕಿದ್ದಲ್ಲಿ ನೂರಾರು ಬರಿಗೆಗಳು ಮತ್ತು ಇನ್ನೂ ಹಲವಾರು ಬಗೆಯ ಗುರುತುಗಳು ಬೇಕಾಗುತ್ತವೆ. ಹಾಗಾಗಿ, ಯಾವುದೇ ಒಂದು ನುಡಿಯಲ್ಲೂ ಬೇಕಾದುದಕ್ಕಿಂತ ಹತ್ತೋ ಇಪ್ಪತ್ತೋ ಹೆಚ್ಚು ಬರಿಗೆಗಳಿದ್ದಲ್ಲಿ, ಅವುಗಳ ನೆರವಿನಿಂದ ಬೇರೆ ನುಡಿಗಳ ಪದಗಳನ್ನು ಅವುಗಳಲ್ಲಿರುವಂತೆಯೇ ಬರೆಯಲು ಬರುತ್ತದೆಯೆಂಬುದು ಪೊಳ್ಳು ವಾದ.

ನಿಜಕ್ಕೂ ಕನ್ನಡ ಬರಹದಲ್ಲಿರುವ ಈ ಹೆಚ್ಚಿನ ಬರಿಗೆಗಳು ಸಂಸ್ಕ್ರುತ ಎರವಲುಗಳನ್ನು ಮಾತ್ರ ಹೆಚ್ಚುಕಡಿಮೆ ಸಂಸ್ಕ್ರುತದಲ್ಲಿರುವ ಹಾಗೆ ಬರೆಯಲು ನೆರವಾಗುತ್ತವೆ; ಬೇರೆ ನುಡಿಗಳ ಪದಗಳನ್ನು ಅವುಗಳಲ್ಲಿರುವ ಹಾಗೆ ಬರೆಯಬೇಕಿದ್ದಲ್ಲಿ, ಅದಕ್ಕಾಗಿ ಬೇರೆಯೇ ಹೆಚ್ಚಿನ ಬರಿಗೆಗಳನ್ನು ಉಂಟುಮಾಡಿಕೊಳ್ಳಬೇಕಾಗುತ್ತದೆ. ತುಳು ನುಡಿಯ ಪದಗಳನ್ನು ಅದರಲ್ಲಿರುವ ಹಾಗೆ ಬರೆಯಲು ಕನ್ನಡ ಬರಹದಲ್ಲಿ ಈಗಿರುವ ಬರಿಗೆಗಳು ಸಾಕಾಗುವುದಿಲ್ಲ; ಇನ್ನೊಂದು ಹೆಚ್ಚಿನ ಉಕಾರ ಮತ್ತು ಇನ್ನೆರಡು ಹೆಚ್ಚಿನ ಎಕಾರಗಳು ಬೇಕಾಗುತ್ತವೆ.

ನಿಜಕ್ಕೂ ಕನ್ನಡದವೇ ಆದ ಆಡುನುಡಿಗಳನ್ನೂ ಅವುಗಳಲ್ಲಿರುವ ಹಾಗೆ ಬರೆಯಲು ಕನ್ನಡ ಬರಹದಲ್ಲಿ ಈಗ ಬಳಕೆಯಾಗುತ್ತಿರುವ ಬರಿಗೆಗಳು ಸಾಕಾಗುವುದಿಲ್ಲ; ಗುಲ್ಬರ‍್ಗ ಕನ್ನಡದಲ್ಲಿ ಬರುವ ಎರಡು ಬಗೆಯ ಅಕಾರಗಳ ನಡುವಿನ ವ್ಯತ್ಯಾಸವನ್ನಾಗಲಿ, ಸುಳ್ಯದ ಗವ್ಡ ಕನ್ನಡದಲ್ಲಿ ಬರುವ ಎರಡು ಬಗೆಯ ಉಕಾರಗಳ ನಡುವಿನ ವ್ಯತ್ಯಾಸವನ್ನಾಗಲಿ ಬರೆದು ತೋರಿಸಲು ಕನ್ನಡ ಬರಹದಲ್ಲಿ ಬರಿಗೆಗಳಿಲ್ಲ.

ಹಾಗಾಗಿ, ಕನ್ನಡ ಬರಹದಲ್ಲಿ ಬರುವ ಪದಗಳನ್ನು ಹೆಚ್ಚಿನ ಕನ್ನಡಿಗರೂ ಹೇಗೆ ಓದುತ್ತಾರೋ ಹಾಗೆ ಬರೆಯಲು ಬೇಕಾಗುವ 31 ಬರಿಗೆಗಳನ್ನು ಮಾತ್ರ ಉಳಿಸಿಕೊಳ್ಳುವುದೇ ಜಾಣತನ; ಉಳಿದುವನ್ನೆಲ್ಲ ಹೆಚ್ಚಿನ ಕನ್ನಡಿಗರೂ ಓದಬೇಕಾಗಿರುವ ಬರಹಗಳಿಂದ ತೆಗೆದುಹಾಕಬೇಕಾಗಿದೆ, ಮತ್ತು ಹಾಗೆ ಮಾಡುವ ಮೂಲಕ, ಕನ್ನಡ ಬರಹವನ್ನು ಎಲ್ಲಾ ಕನ್ನಡಿಗರೂ ಬಳಸುವಂತೆ ಮಾಡಬೇಕಾಗಿದೆ. ಸಂಸ್ಕ್ರುತಿ, ಶ್ರೀಮಂತಿಕೆ ಎಂಬಂತಹ ದೊಡ್ಡ ದೊಡ್ಡ ಪದಗಳನ್ನು ಬಳಸಿ ಓದುಗರು ಗೊಂದಲದಲ್ಲಿ ಬೀಳುವ ಹಾಗೆ ಮಾಡುವುದರಿಂದ ಕನ್ನಡಿಗರಿಗೇನೇ ಅನ್ಯಾಯವಾಗುತ್ತದೆ.

(ಈ ಬರಹ ವಿಜಯ ಕರ‍್ನಾಟಕ ಸುದ್ದಿಹಾಳೆಯ ’ಎಲ್ಲರ ಕನ್ನಡ’ ಅಂಕಣದಲ್ಲಿ ಮೊದಲು ಮೂಡಿಬಂದಿತ್ತು)

ಮೂಲ : ಹೊನಲು

ಯಾವುದು ಕನ್ನಡ ವ್ಯಾಕರಣ

ಕೇಶಿರಾಜನ ಕಾಲದಿಂದಲೂ ಕನ್ನಡ ಪಂಡಿತರು ಯಾವುದನ್ನು‘ಕನ್ನಡ ವ್ಯಾಕರಣ’ ಎಂಬುದಾಗಿ ಕರೆಯುತ್ತ ಬಂದಿದ್ದಾರೋ ಅದು ನಿಜಕ್ಕೂ ಕನ್ನಡದ ವ್ಯಾಕರಣವೇ ಅಲ್ಲ; ಸಂಸ್ಕ್ರುತ ವ್ಯಾಕರಣದ ಕಟ್ಟಲೆಗಳು ಕನ್ನಡದಲ್ಲೂ ಇರಬಹುದು, ಇಲ್ಲವೇ ಇರಬೇಕು ಎಂಬ ತಪ್ಪು ಕಲ್ಪನೆಯಲ್ಲಿ ಆ ಕಟ್ಟಲೆಗಳನ್ನು ಕನ್ನಡದಲ್ಲಿ ಕಾಣಲು ನಡೆಸಿದ ಒಂದು ವ್ಯರ‍್ತ ಪ್ರಯತ್ನ ಮಾತ್ರ.

ನಮ್ಮ ಶಾಲೆಗಳಲ್ಲಿ ಮಕ್ಕಳಿಗೆ ಇದೇ ಕನ್ನಡದ್ದಲ್ಲದ ವ್ಯಾಕರಣವನ್ನು ಕಲಿಸಲಾಗುತ್ತಿದೆ. ಅದನ್ನು ಯಾಕೆ ‘ಕನ್ನಡ ವ್ಯಾಕರಣ’ವೆಂದು ಕರೆಯಬೇಕು ಎಂಬುದನ್ನು ಮಕ್ಕಳೂ ತಿಳಿಯಲಾರರು, ಅದನ್ನು ಕಲಿಸುವ ಮಾಸ್ತರರೂ ತಿಳಿಸಿಕೊಡಲಾರರು. ಇನ್ನು ಅದರಿಂದ ಪ್ರಯೋಜನವನ್ನೇನಾದರೂ ಪಡೆಯುವುದಂತೂ ದೂರವೇ ಉಳಿಯಿತು.

ನಿಜಕ್ಕೂ ಈ ‘ವ್ಯಾಕರಣ’ ಎಂಬುದು ಏನು ಮಾಡಬೇಕು? ಒಂದು ನುಡಿಯಲ್ಲಿ ಬರುವ ಪದಗಳ ಒಳರಚನೆ ಎಂತಹದು, ಪದಗಳನ್ನು ಬಳಸಿ ಆ ನುಡಿಯಲ್ಲಿ ಸೊಲ್ಲು(ವಾಕ್ಯ)ಗಳನ್ನು ಉಂಟುಮಾಡುವುದು ಹೇಗೆ, ಮತ್ತು ಸೊಲ್ಲುಗಳನ್ನು ಬಳಸಿ ಅದರಲ್ಲಿ ಬರಹಗಳನ್ನು ಬರೆಯುವುದು ಹೇಗೆ ಎಂಬಂತಹ ಸೊಲ್ಲುಗಳ ಕುರಿತಾಗಿರುವ ತಿಳಿವನ್ನು ಅದು ನಮಗೆ ಒದಗಿಸಬೇಕು.
ಕನ್ನಡದ ಕುರಿತಾಗಿರುವ ಇಂತಹ ತಿಳಿವನ್ನು ನಾವು ಇಲ್ಲಿ ‘ಕನ್ನಡದ ಸೊಲ್ಲರಿಮೆ’ ಎಂದು ಕರೆಯೋಣ; ಯಾಕೆಂದರೆ, ‘ಕನ್ನಡ ವ್ಯಾಕರಣ’ ಎಂಬುದಕ್ಕೆ ಇವತ್ತು ಮೇಲೆ ವಿವರಿಸಿದಂತಹ ಬೇರೆಯೇ ಹುರುಳಿದೆ.

ಪಾಣಿನಿಯೇ ಮೊದಲಾದ ಸಂಸ್ಕ್ರುತದ ಪಂಡಿತರು ಆ ನುಡಿಯಲ್ಲಿ ಸೊಲ್ಲುಗಳನ್ನು ಹೇಗೆ ಉಂಟುಮಾಡಲಾಗುತ್ತದೆ, ಅವುಗಳ ಹಿಂದಿರುವ ಕಟ್ಟಲೆಗಳು ಎಂತಹವು ಎಂಬುದನ್ನು ಕಂಡುಹಿಡಿದಿದ್ದರು, ಮತ್ತು ಅಂತಹ ಕಟ್ಟಲೆಗಳನ್ನು ಒಟ್ಟುಗೂಡಿಸಿ, ಅದನ್ನು ‘ಸಂಸ್ಕ್ರುತ ವ್ಯಾಕರಣ’ ಎಂಬುದಾಗಿ ಕರೆದಿದ್ದರು; ಅಂತಹದೇ ಕೆಲಸವನ್ನು ಇವತ್ತು ನಾವು ಕನ್ನಡದಲ್ಲಿ ನಡೆಸಬೇಕಾಗಿದೆ.
ಸೊಲ್ಲುಗಳನ್ನು ಕಟ್ಟುವ ಬಗೆ ಸಂಸ್ಕ್ರುತದಲ್ಲಿರುವುದಕ್ಕಿಂತ ಕನ್ನಡದಲ್ಲಿ ತೀರ ಬೇರಾಗಿದೆ; ಹಾಗಾಗಿ, ಸಂಸ್ಕ್ರುತ ವ್ಯಾಕರಣದಲ್ಲಿ ಬರುವ ಕಟ್ಟಲೆಗಳಿಗಿಂತ ತೀರ ಬೇರಾಗಿರುವ ಕಟ್ಟಲೆಗಳು ‘ಕನ್ನಡದ ಸೊಲ್ಲರಿಮೆ’ಯಲ್ಲಿ ಬರಬೇಕಾಗುತ್ತದೆ.

ಸಂಸ್ಕ್ರುತದಲ್ಲಿ ಎರಡು (ಇಲ್ಲವೇ ಹೆಚ್ಚು) ಪದಗಳನ್ನು ಒಟ್ಟುಸೇರಿಸಿ ಹೊಸಪದವನ್ನು ಉಂಟುಮಾಡುವ ಹೊಲಬನ್ನು ‘ಸಮಾಸ’ ಎಂಬುದಾಗಿ ಕರೆಯಲಾಗುತ್ತದೆ; ನಾಮಪದಗಳನ್ನು ಮಾತ್ರ ಈ ರೀತಿ ಸಂಸ್ಕ್ರುತದಲ್ಲಿ ಒಟ್ಟುಸೇರಿಸಲು ಬರುತ್ತದೆ. ಹಾಗಾಗಿ, ಒಟ್ಟುಸೇರಿಸಿದ ಪದಗಳಲ್ಲಿ ಯಾವುದು ಮುಕ್ಯ ಎಂಬುದರ ಮೇಲೆ ಈ ಸಮಾಸಗಳನ್ನು ತತ್ಪುರುಶ (ಎರಡನೆಯದು ಮುಕ್ಯ), ಅವ್ಯಯೀಬಾವ (ಮೊದಲನೆಯದು ಮುಕ್ಯ), ದ್ವಂದ್ವ (ಎರಡೂ ಮುಕ್ಯ) ಮತ್ತು ಬಹುವ್ರೀಹಿ (ಎರಡೂ ಮುಕ್ಯವಲ್ಲ, ಬೇರೊಂದು ಪದ ಮುಕ್ಯ) ಎಂಬ ನಾಲ್ಕು ಬಗೆಗಳಲ್ಲಿ ಗುಂಪಿಸಬಹುದೆಂದು ಸಂಸ್ಕ್ರುತ ವ್ಯಾಕರಣಗಳು ಹೇಳುತ್ತವೆ.

ಆದರೆ, ಕನ್ನಡದಲ್ಲಿ ಎರಡು ಪದಗಳನ್ನು ಒಟ್ಟುಸೇರಿಸಿ ಹೊಸದೊಂದು ಪದವನ್ನು ಉಂಟುಮಾಡುವ ಬಗೆ ಇದರಿಂದ ತೀರ ಬೇರಾದುದು. ನಾಮಪದ, ಕ್ರಿಯಾಪದ, ಮತ್ತು ಗುಣಪದಗಳೆಂಬ ಮೂರು ಬಗೆಯ ಪದಗಳನ್ನು ಇಂತಹ ಹೊಸಪದಗಳ ಮೊದಲನೆಯ ಪದವಾಗಿ ಬಳಸಲು ಬರುತ್ತದೆ; ಅವುಗಳ ಎರಡನೆಯ ಪದ ಮಾತ್ರ ಯಾವಾಗಲೂ ಹೆಸರುಪದವಾಗಿರುತ್ತದೆ.

ಕಯ್ಮಗ್ಗ, ಬಯಲಾಟ, ನೆಲಗಡಲೆ ಎಂಬಂತಹ ಪದಗಳಲ್ಲಿ ಎರಡು ನಾಮಪದಗಳು ಒಟ್ಟುಸೇರಿವೆ; ಕಡೆಗೋಲು, ಸಿಡಿಮದ್ದು, ಬಿಚ್ಚುಕತ್ತಿ ಎಂಬಂತಹ ಪದಗಳಲ್ಲಿ ಕ್ರಿಯಾಪದ ಮತ್ತು ನಾಮಪದಗಳು ಒಟ್ಟುಸೇರಿವೆ (ಕಡೆ, ಸಿಡಿ ಮತ್ತು ಬಿಚ್ಚು ಎಂಬವು ಕ್ರಿಯಾಪದಗಳು); ಬಿಸಿನೀರು, ದೊಡ್ಡಮ್ಮ, ಬೆಳ್ಳುಳ್ಳಿ ಎಂಬಂತಹ ಪದಗಳಲ್ಲಿ ಗುಣಪದ ಮತ್ತು ನಾಮಪದಗಳು ಒಟ್ಟುಸೇರಿವೆ.
ಹಾಗಾಗಿ, ಕನ್ನಡದಲ್ಲಿ ಬರುವ ‘ಸಮಾಸ’ ಯಾವ ಬಗೆಯದು ಎಂಬುದನ್ನು ತಿಳಿಯಬೇಕಿದ್ದಲ್ಲಿ ಅಂತಹ ಹೊಸಪದಗಳಲ್ಲಿ ಮೊದಲಿಗೆ ಯಾವ ಬಗೆಯ ಪದ ಬಂದಿದೆ ಎಂಬುದನ್ನು ತಿಳಿಯಬೇಕಲ್ಲದೆ, ಸಂಸ್ಕ್ರುತದ ಹಾಗೆ ಯಾವ ಪದ ಮುಕ್ಯ ಎಂಬುದನ್ನಲ್ಲ.

ಇಂಗ್ಲಿಶ್‌ನಂತಹ ಬೇರೆ ನುಡಿಗಳಿಂದ ಹೊಸ ಹೊಸ ವಿಶಯಗಳನ್ನು ಕನ್ನಡಕ್ಕೆ ತರಬೇಕಾದಾಗ, ಅದಕ್ಕಾಗಿ ಹಲವಾರು ಹೊಸ ಪದಗಳನ್ನು ಕನ್ನಡದಲ್ಲಿ ಉಂಟುಮಾಡಿಕೊಳ್ಳಬೇಕಾಗುತ್ತದೆ. ನಿಜಕ್ಕೂ ಕನ್ನಡ ಪದಗಳ ಒಳರಚನೆಯೆಂತಹದು ಎಂಬುದನ್ನು ತಿಳಿದವರು ಮಾತ್ರ ಈ ಕೆಲಸವನ್ನು ಸರಿಯಾಗಿ ನಡೆಸಬಲ್ಲರು.

ಸಂಸ್ಕ್ರುತ ಪದಗಳ ಒಳರಚನೆಯೇ ಕನ್ನಡ ಪದಗಳಿಗೂ ಇದೆ ಎಂಬ ತಪ್ಪು ತಿಳಿವನ್ನು ‘ಕನ್ನಡ ವ್ಯಾಕರಣ’ಗಳಿಂದ ಪಡೆದಿರುವ ಕನ್ನಡ ಪಂಡಿತರಿಗೆ ಇಂತಹ ಹೊಸಪದಗಳನ್ನು ಕನ್ನಡದಲ್ಲೇನೇ ಉಂಟುಮಾಡುವುದು ಹೇಗೆ ಎಂಬುದು ಗೊತ್ತೇ ಇರುವುದಿಲ್ಲ. ಹಾಗಾಗಿ, ಹೊಸಪದಗಳು ಬೇಕಾದಾಗಲೆಲ್ಲ ಅವರು ಅವನ್ನು ಸಂಸ್ಕ್ರುತದಲ್ಲಿ ಉಂಟುಮಾಡಿ ಕನ್ನಡದೊಳಗೆ ತುರುಕುತ್ತಾರೆ, ಮತ್ತು ಸಂಸ್ಕ್ರುತದ ನೆರವಿಲ್ಲದೆ ಕನ್ನಡದಲ್ಲಿ ಹೊಸಪದಗಳನ್ನು ಉಂಟುಮಾಡಲು ಸಾದ್ಯವೇ ಇಲ್ಲ ಎಂಬ ತಪ್ಪು ತೀರ‍್ಮಾನಕ್ಕೆ ಬರುತ್ತಾರೆ.

ಕ್ರಿಯಾಪದಗಳನ್ನು ನಾಮಪದಗಳೊಂದಿಗೆ ಸೇರಿಸಿ ಹೊಸಪದಗಳನ್ನು ಸಂಸ್ಕ್ರುತದಲ್ಲಿ ಉಂಟುಮಾಡಲು ಬರುವುದಿಲ್ಲವಾದರೂ ಕನ್ನಡದಲ್ಲಿ ಬರುತ್ತದೆ ಎಂಬ ಕನ್ನಡದ್ದೇ ಆದ ಸೊಲ್ಲರಿಮೆಯ ಕಟ್ಟಲೆಯನ್ನು ತಿಳಿದವರಿಗೆ ನೂರಾರು ಹೊಸಪದಗಳನ್ನು ಕನ್ನಡದಲ್ಲೇನೇ ಉಂಟುಮಾಡಲು ಬರುತ್ತದೆ. ಇಂಗುಗುಂಡಿ, ಇಡುಗಂಟು, ಇಳಿನೀರು, ಉಜ್ಜುಗಾಯ, ಉಬ್ಬುಗನ್ನಡಿ, ಕಟ್ಟುಪಟ್ಟಿ, ಕರೆಸಾಲ, ತಡೆಯೋಟ, ತೇಲುಮನೆ, ತಳ್ಳುಗುಂಡಿ ಮೊದಲಾದ ಇಂತಹ ಪದಗಳು ಕನ್ನಡ ಬರಹದಲ್ಲೂ ತುಂಬಾ ಚನ್ನಾಗಿ ಹೊಂದಿಕೊಳ್ಳುತ್ತವೆ.

ಕನ್ನಡದ ಆಡುನುಡಿಗಳಲ್ಲಿಯೂ ಈ ಹೊಲಬನ್ನು ಬಳಸಿ ಉಂಟುಮಾಡಿರುವ ತುಂಬುಕಡಬು, ಬಿಚ್ಚೋಲೆ, ತೂಗುದೀಪ ಎಂಬಂತಹ ಹಲವಾರು ಪದಗಳು ಬಳಕೆಯಲ್ಲಿವೆ; ಆದರೆ, ಸಂಸ್ಕ್ರುತ ವ್ಯಾಕರಣದ ಕಟ್ಟಲೆಗಳೇ ಕನ್ನಡದಲ್ಲೂ ಇವೆಯೆಂಬುದಾಗಿ ಬ್ರಮಿಸುವ ‘ಕನ್ನಡ ವ್ಯಾಕರಣ’ಗಳಿಂದಾಗಿ ದಾರಿತಪ್ಪಿರುವ ಕನ್ನಡ ಪಂಡಿತರು ತಮ್ಮಲ್ಲಿ ಸ್ವಾಬಾವಿಕವಾಗಿ ಬೆಳೆದುಬಂದಿರಬಹುದಾದ ಈ ತಾಯ್ನುಡಿಯ ಅಳವನ್ನೇ ಕಳೆದುಕೊಂಡಿದ್ದಾರೆ.

ಸಂಸ್ಕ್ರುತದ ವಾಕ್ಯಗಳಲ್ಲಿ ಏಳು ವಿಬಕ್ತಿಗಳು ಬಳಕೆಯಾಗುತ್ತವೆ ಎಂಬುದನ್ನು ಸಂಸ್ಕ್ರುತದ ಪಂಡಿತರು ಕಂಡುಕೊಂಡಿದ್ದಾರೆ; ಕನ್ನಡದ ಸೊಲ್ಲುಗಳನ್ನು ಪರಿಶೀಲಿಸಿದೆವಾದರೆ, ಅವುಗಳಲ್ಲಿ ಬರುವ ಪದಗಳಿಗೆ ಒಟ್ಟು ನಾಲ್ಕು ವಿಬಕ್ತಿರೂಪಗಳು ಮಾತ್ರ ಕಾಣಿಸುತ್ತವಲ್ಲದೆ, ಏಳು ವಿಬಕ್ತಿ ರೂಪಗಳು ಕಾಣಿಸುವುದಿಲ್ಲ; ಹಾಗಿರುವಾಗ, ಸಂಸ್ಕ್ರುತದ ಹಾಗೆ ಕನ್ನಡದಲ್ಲೂ ಏಳು ವಿಬಕ್ತಿಗಳಿರಬೇಕು ಎಂದು ಬ್ರಮಿಸಿ, ಅವನ್ನು ಕಾಣಲು ಪ್ರಯತ್ನಿಸುವ ‘ಕನ್ನಡದ ವ್ಯಾಕರಣ’ ಕನ್ನಡದ್ದಾಗುವುದು ಹೇಗೆ?

ಕನ್ನಡದಲ್ಲಿ ಮೂರು ಕಾಲಗಳಿವೆಯೆಂದು ‘ಕನ್ನಡ ವ್ಯಾಕರಣ’ಗಳು ಹೇಳುತ್ತವೆ; ಇದರಂತೆ, ಮಾಡುತ್ತೇನೆ ಎಂಬ ರೂಪ ಈಗ ನಡೆಯುತ್ತಿರುವ ಕೆಲಸವನ್ನು ತಿಳಿಸಬೇಕು, ಮತ್ತು ಮಾಡುವೆನು ಎಂಬ ರೂಪ ಮುಂದೆ ನಡೆಯಲಿರುವ ಕೆಲಸವನ್ನು ತಿಳಿಸಬೇಕು.

ಆದರೆ, ನಿಜಕ್ಕೂ ಕನ್ನಡದಲ್ಲಿ ನಾಳೆ ಮಾಡುತ್ತೇನೆ, ಬರುವ ವರ‍್ಶ ಮಾಡುತ್ತೇನೆ ಎಂಬಂತಹ ಸೊಲ್ಲುಗಳಲ್ಲಿ ಕಾಣಿಸುವ ಹಾಗೆ, ಮಾಡುತ್ತೇನೆ ಎಂಬುದು ಮುಂದೆ ನಡೆಯಲಿರುವ ಕೆಲಸವನ್ನು ತಿಳಿಸುತ್ತದೆ; ಈಗ ನಡೆಯುತ್ತಿರುವ ಕೆಲಸವನ್ನು ತಿಳಿಸಲು ಮಾಡುತ್ತಿದ್ದೇನೆ ಎಂಬ ಮಾಡು ಪದಕ್ಕೆ ಇರು ಪದವನ್ನು ಸೇರಿಸಿರುವ ಬೇರೆಯೇ ಪದರೂಪವನ್ನು ಬಳಸಲಾಗುತ್ತದೆ. ಇಂತಹ ಕಣ್ಣಿಗೆ ಹೊಡೆದು ಕಾಣಿಸುವಂತಹ ತಪ್ಪುಗಳಿರುವ ‘ಕನ್ನಡ ವ್ಯಾಕರಣ’ ಕನ್ನಡದ್ದಾಗುವುದು ಹೇಗೆ?

ಕಂಪ್ಯೂಟರ್‌ಗಳನ್ನು ಬಳಸಿ ಒಂದು ನುಡಿಯ ಸೊಲ್ಲುಗಳನ್ನು ಇನ್ನೊಂದು ನುಡಿಗೆ ಅನುವಾದಿಸಲು ಬರುತ್ತದೆ; ಆದರೆ, ಹೀಗೆ ಮಾಡಬೇಕಿದ್ದಲ್ಲಿ, ಆ ಎರಡು ನುಡಿಗಳ ವಿವರವಾದ ಸೊಲ್ಲರಿಮೆಗಳನ್ನು ಕಂಪ್ಯೂಟರ್‌ಗಳಿಗೆ ಒದಗಿಸಿಕೊಡಬೇಕಾಗುತ್ತದೆ. ಇಂಗ್ಲಿಶ್ ನುಡಿಗೆ ಈಗಾಗಲೇ ಸಾಕಶ್ಟು ವಿವರವಾದ ವ್ಯಾಕರಣವನ್ನು ಬರೆಯಲಾಗಿದ್ದು, ಅದನ್ನು ಕಂಪ್ಯೂಟರ್‌ಗಳಿಗೆ ಒದಗಿಸಿಕೊಡಲಾಗಿದೆ; ಕನ್ನಡಕ್ಕೂ ಇಂತಹದೊಂದು ವಿವರವಾದ ಸೊಲ್ಲರಿಮೆಯನ್ನು ಬರೆದಲ್ಲಿ, ಇಂಗ್ಲಿಶ್ ಬರಹಗಳನ್ನು ಕನ್ನಡಕ್ಕೆ ಅನುವಾದಿಸುವಲ್ಲಿಯೂ ಕಂಪ್ಯೂಟರನ್ನು ಬಳಸಲು ಸಾದ್ಯವಾಗಬಹುದು.

ಆದರೆ, ಇಂತಹ ಕೆಲಸಕ್ಕೆ ಸಂಸ್ಕ್ರುತ ವ್ಯಾಕರಣವನ್ನೇ ‘ಕನ್ನಡ ವ್ಯಾಕರಣ’ವೆಂದು ಬ್ರಮಿಸುವ ಕೇಶಿರಾಜನ ಕನ್ನಡ ವ್ಯಾಕರಣವಾಗಲಿ, ಇವತ್ತು ಶಾಲೆಗಳಲ್ಲಿ ಕಲಿಸುವ ‘ಕನ್ನಡ ವ್ಯಾಕರಣ’ವಾಗಲಿ ಯಾವ ನೆರವನ್ನೂ ನೀಡಲಾರದು. ಕನ್ನಡದಲ್ಲಿ ಸೊಲ್ಲುಗಳನ್ನು ಹೇಗೆ ಉಂಟುಮಾಡಲಾಗುತ್ತದೆ ಎಂಬುದನ್ನು ವಿವರವಾಗಿ ತಿಳಿಸಬಲ್ಲ ‘ಕನ್ನಡದ ಸೊಲ್ಲರಿಮೆ’ಯೊಂದೇ ಈ ಕೆಲಸದಲ್ಲಿ ನೆರವನ್ನು ನೀಡಬಲ್ಲುದು.

(ಈ ಬರಹ ವಿಜಯ ಕರ‍್ನಾಟಕ ಸುದ್ದಿಹಾಳೆಯ ’ಎಲ್ಲರ ಕನ್ನಡ’ ಅಂಕಣದಲ್ಲಿ ಮೊದಲು ಮೂಡಿಬಂದಿತ್ತು)

ಮೂಲ : ಹೊನಲು

ಅರಿಮೆಯ ಪದಗಳಿಗೆ ಕನ್ನಡವೇ ಮೇಲು

ಕನ್ನಡದಲ್ಲಿ ಅರಿಮೆಯ (ಪಾರಿಬಾಶಿಕ) ಪದಗಳನ್ನು ಉಂಟುಮಾಡಬೇಕಾದಾಗಲೆಲ್ಲ ಹೆಚ್ಚಿನ ಅರಿವಿಗರೂ ಸಂಸ್ಕ್ರುತ ಪದಗಳನ್ನೇ ಆರಿಸಿಕೊಳ್ಳುತ್ತಾರೆ; ಇದಕ್ಕಾಗಿ ಕನ್ನಡದವೇ ಆದ ಪದಗಳನ್ನು ಬಳಸುವುದು ತುಂಬಾ ಅಪರೂಪ.

ಈ ಕಾರಣಕ್ಕಾಗಿ, ಕನ್ನಡದವೆಂದು ಹೇಳಲಾಗುವ ಹೆಚ್ಚಿನ ಅರಿಮೆಯ ಪದಕೋಶಗಳಲ್ಲೂ ಇವತ್ತು ನೂರಕ್ಕೆ ಎಂಬತ್ತರಶ್ಟು ಇಲ್ಲವೇ ಅದಕ್ಕಿಂತಲೂ ಹೆಚ್ಚು ಸಂಸ್ಕ್ರುತ ಪದಗಳನ್ನು ಕಾಣಬಹುದು. ಕನ್ನಡ ಅರಿವಿಗರ ಈ ನಿಲುವಿನಿಂದಾಗಿ, ಇವತ್ತು ಕನ್ನಡದ ಅರಿಮೆಯ ಬರಹಗಳು ಸಂಸ್ಕ್ರುತ ಪದಗಳಿಂದ ತುಂಬಿ ತುಳುಕುತ್ತಿವೆ.

ಹಿಂದಿನ ಕಾಲದಲ್ಲಿ ಕನ್ನಡದಲ್ಲಿ ಬರೆಯುವವರಿಗೆ ಬೇಕಾಗಿರುವ ಹೆಚ್ಚಿನ ತಿಳಿವುಗಳೂ ಸಂಸ್ಕ್ರುತದಲ್ಲಿದ್ದುವು; ಹಾಗಾಗಿ, ಅವನ್ನು ಕನ್ನಡಕ್ಕೆ ತರಬೇಕಾದಾಗ, ಅದಕ್ಕೆ ಬೇಕಾಗುವ ಅರಿಮೆಯ ಪದಗಳಲ್ಲಿ ಹೆಚ್ಚಿನವನ್ನೂ ಸಂಸ್ಕ್ರುತದಿಂದಲೇನೇ ಎರವಲು ಪಡೆಯಲಾಗುತ್ತಿತ್ತು, ಮತ್ತು ಆವತ್ತಿಗೆ ಅದು ಸರಿಯಾದ ದಾರಿಯಾಗಿತ್ತು.

ಆದರೆ, ಇವತ್ತು ಅರಿಮೆಯ (ವಿಜ್ನಾನದ) ಬರಹಗಾರರಿಗೆ ಬೇಕಾಗುವ ಹೆಚ್ಚಿನ ತಿಳಿವುಗಳೂ ಇಂಗ್ಲಿಶ್‌ನಲ್ಲಿವೆ; ಹಾಗಾಗಿ, ಅವನ್ನು ಇಂಗ್ಲಿಶ್‌ನಿಂದ ಕನ್ನಡಕ್ಕೆ ತರಬೇಕಾದಾಗ, ಅದಕ್ಕೆ ಬೇಕಾಗುವ ಪದಗಳನ್ನು ಇಂಗ್ಲಿಶ್‌ನಿಂದ ಎರವಲು ಪಡೆಯುವುದು, ಇಲ್ಲವೇ ಕನ್ನಡದಲ್ಲೇನೇ ಹೊಸದಾಗಿ ಉಂಟುಮಾಡಿಕೊಳ್ಳುವುದು ಎಂಬ ಎರಡು ದಾರಿಗಳು ಇವತ್ತಿನ ಮಟ್ಟಿಗೆ ಸರಿಯಾದುವು.

ಹೀಗಿದ್ದರೂ, ಕನ್ನಡದ ಬರಹಗಾರರು ಇವತ್ತಿಗೂ ಅರಿಮೆಯ ಪದಗಳಾಗಿ ಸಂಸ್ಕ್ರುತ ಪದಗಳನ್ನು ಬಳಸುವ ಹಳೆಯ ಸಂಪ್ರದಾಯವನ್ನೇ ಮುಂದುವರಿಸುತ್ತಿದ್ದಾರೆ; ತಮಗೆ ಬೇಕಾಗಿರುವ ಪದಗಳು ಸಂಸ್ಕ್ರುತದಲ್ಲಿಲ್ಲವಾದರೆ, ಹೊಸ ಪದಗಳನ್ನು ಸಂಸ್ಕ್ರುತದಲ್ಲೇನೇ ಉಂಟುಮಾಡಿ ಕನ್ನಡಕ್ಕೆ ತರುವಂತಹ ಇನ್ನೊಂದು ವಿಚಿತ್ರವಾದ ಸಂಪ್ರದಾಯವನ್ನೂ ಅವರು ಹುಟ್ಟುಹಾಕಿಕೊಂಡಿದ್ದಾರೆ.

ಹೀಗೆ ಮಾಡುತ್ತಿರುವುದಕ್ಕಾಗಿ, ಅವರು ಕೆಲವು ನೆವಗಳನ್ನೂ ಕೊಡುತ್ತಿದ್ದಾರೆ: ಇಂಗ್ಲಿಶ್‌ನಲ್ಲಿ ಅರಿಮೆಯ ಪದಗಳಾಗಿ ಲ್ಯಾಟಿನ್ ಇಲ್ಲವೇ ಗ್ರೀಕ್ ಪದಗಳನ್ನು ಬಳಸುವ ಹಾಗೆ ಕನ್ನಡದಲ್ಲಿ ಸಂಸ್ಕ್ರುತ ಪದಗಳನ್ನು ಬಳಸಲಾಗುತ್ತದೆಯೆಂಬುದು ಇವುಗಳಲ್ಲೊಂದು.

ಆದರೆ, ಇಂಗ್ಲಿಶ್‌ಗೆ ಲ್ಯಾಟಿನ್ ಇರುವ ಹಾಗೆ ಕನ್ನಡಕ್ಕೆ ಸಂಸ್ಕ್ರುತ ಅಲ್ಲ; ಯಾಕೆಂದರೆ, ಇಂಗ್ಲಿಶ್ ಮತ್ತು ಲ್ಯಾಟಿನ್‌ಗಳು ಒಂದೇ ನುಡಿಕುಟುಂಬಕ್ಕೆ ಸೇರಿವೆ, ಮತ್ತು ಕನ್ನಡ ಮತ್ತು ಸಂಸ್ಕ್ರುತಗಳು ಬೇರೆ ಬೇರೆ ನುಡಿಕುಟುಂಬಗಳಿಗೆ ಸೇರಿವೆ. ಇಂಗ್ಲಿಶ್‌ಗೆ ಬೇಕಾಗುವ ಪದಗಳನ್ನು ಲ್ಯಾಟಿನ್‌ನಲ್ಲಿ ಉಂಟುಮಾಡಿದಾಗ ಹೆಚ್ಚಿನ ತೊಂದರೆಗಳೇನೂ ಎದುರಾಗುವುದಿಲ್ಲ; ಆದರೆ, ಕನ್ನಡಕ್ಕೆ ಬೇಕಾಗುವ ಪದಗಳನ್ನು ಸಂಸ್ಕ್ರುತದಲ್ಲಿ ಉಂಟುಮಾಡಿದಾಗ ಹಲವು ತೊಂದರೆಗಳು ಎದುರಾಗುತ್ತವೆ:

ಇಂಗ್ಲಿಶ್‌ನಲ್ಲಿ ಮುಕ್ಯವಾಗಿ ನವ್ನ್, ವರ‍್ಬ್, ಮತ್ತು ಎಜಕ್ಟಿವ್ ಎಂಬುದಾಗಿ ಮೂರು ಬಗೆಯ ಪದಗಳಿವೆ; ಕನ್ನಡದಲ್ಲೂ ಇಂತಹವೇ ಮೂರು ಬಗೆಯ ಪದಗಳಿವೆ. ಆದರೆ, ಸಂಸ್ಕ್ರುತದಲ್ಲಿ ಮುಕ್ಯವಾಗಿ ನಾಮಪದ ಮತ್ತು ಕ್ರಿಯಾಪದ ಎಂಬ ಎರಡು ಬಗೆಯ ಪದಗಳು ಮಾತ್ರ ಇವೆ.

ಹಾಗಾಗಿ, ಇಂಗ್ಲಿಶ್‌ನ ಅರಿಮೆಯ ಪದಗಳಿಗೆ ಸಮನಾದ ಪದಗಳನ್ನು ಸಂಸ್ಕ್ರುತದಲ್ಲಿ ಉಂಟುಮಾಡಿ ಕನ್ನಡಕ್ಕೆ ತರಹೋದರೆ, ನವ್ನ್ ಮತ್ತು ಎಜಕ್ಟಿವ್‌ಗಳ ನಡುವಿನ ವ್ಯತ್ಯಾಸವನ್ನು ಅವುಗಳಲ್ಲಿ ಸರಿಯಾಗಿ ತೋರಿಸಲು ಬರುವುದಿಲ್ಲ. ಈ ತೊಂದರೆಯಿಂದಾಗಿ, ಇವತ್ತು ಬಳಕೆಯಲ್ಲಿರುವ ಅರಿಮೆಯ ಪದಕೋಶಗಳಲ್ಲಿ ತುಂಬಾ ಗೊಂದಲವುಂಟಾಗಿರುವುದನ್ನು ಕಾಣಬಹುದು.

ಅರಿಮೆಯ ಬರಹಗಳಲ್ಲಿ ಕನ್ನಡ ಪದಗಳನ್ನು ಬಳಸಿದರೆ, ಅವು ಸಂಸ್ಕ್ರುತ ಪದಗಳ ಹಾಗೆ ಕಚಿತವಾದ ಹುರುಳನ್ನು ಕೊಡಲಾರವು ಎಂಬುದು ಇನ್ನೊಂದು ನೆವ; ಆದರೆ, ಸಂಸ್ಕ್ರುತ ಪದಗಳು ಕನ್ನಡದಲ್ಲಿ ಉಂಟುಮಾಡುತ್ತಿರುವ ಮೇಲಿನ ಗೊಂದಲವೇ ಇದನ್ನು ತಳ್ಳಿಹಾಕುತ್ತದೆ.

ಇವತ್ತು ಇಂಗ್ಲಿಶ್‌ನಲ್ಲಿ ಕಂಪ್ಯೂಟರ್‌ಗೆ ಸಂಬಂದಿಸಿದ ಹಲವು ಅರಿಮೆಯ ಪದಗಳನ್ನು ದಿನಬಳಕೆಯ ಪದಗಳನ್ನು ಬಳಸಿಯೇ ಉಂಟುಮಾಡಲಾಗುತ್ತಿದೆ; ಮವ್ಸ್ ‘ಇಲಿ’, ವಿಂಡೋಸ್ ‘ಕಿಟಿಕಿ’, ಟ್ರೀ ‘ಮರ’, ವೆಬ್ ‘ಬಲೆ’ ಎಂಬಂತಹ ಈ ಪದಗಳಿಂದಾಗಿ ಗೊಂದಲವೇನೂ ಉಂಟಾದ ಹಾಗೆ ಕಾಣಿಸುವುದಿಲ್ಲ.

ಹಾಗಾಗಿ, ಕನ್ನಡದ ಅರಿಮೆಯ ಪದಗಳಿಗಾಗಿ ಸಂಸ್ಕ್ರುತದ ಮೊರೆಹೊಗುವ ಇವತ್ತಿನ ಸಂಪ್ರದಾಯವನ್ನು ಬಿಟ್ಟುಕೊಡುವುದೇ ಒಳ್ಳೆಯದು. ಇಂಗ್ಲಿಶ್‌ನಿಂದ ಅರಿಮೆಯ ಬರಹಗಳನ್ನು ಕನ್ನಡಕ್ಕೆ ತರುವಾಗ, ಕನ್ನಡ ಪದಗಳ ಸೊಗಡನ್ನು ಕೆಡಿಸದಂತಹ ಇಂಗ್ಲಿಶ್ ಪದಗಳನ್ನು ಉಳಿಸಿಕೊಳ್ಳಬಹುದು, ಮತ್ತು ಅದನ್ನು ಕೆಡಿಸುವಂತಹ ಪದಗಳ ಬದಲು ಕನ್ನಡದವೇ ಆದ ಪದಗಳನ್ನು ಬಳಸಿ ಹೊಸ ಪದಗಳನ್ನು ಉಂಟುಮಾಡಿಕೊಳ್ಳಬಹುದು; ಇದೇ ಕನ್ನಡಕ್ಕೆ ಸರಿಯಾದ ದಾರಿ.

ಇಲ್ಲಿ ಇನ್ನೊಂದು ವಿಶಯವನ್ನೂ ಒತ್ತಿ ಹೇಳಬೇಕಾಗಿದೆ: ಇಂಗ್ಲಿಶ್‌ನಿಂದ ಅರಿಮೆಯ ಬರಹಗಳನ್ನು ಕನ್ನಡಕ್ಕೆ ತರುವಾಗ, ಎರಡು ಮುಕ್ಯ ಗುರಿಗಳಿಗಾಗಿ ನಾವು ಅವುಗಳಲ್ಲಿರುವ ಇಂಗ್ಲಿಶ್ ಪದಗಳಿಗೆ ಬದಲಾಗಿ ಕನ್ನಡದವೇ ಆದ ಪದಗಳನ್ನು ಬಳಸಲು ಹೋಗುತ್ತೇವೆ: ಹಾಗೆ ಮಾಡುವ ಮೂಲಕ ಬರಹ ಏನನ್ನು ತಿಳಿಸುತ್ತದೆ ಎಂಬುದು ಕನ್ನಡಿಗರಿಗೆ ಸುಲಬವಾಗಿ ತಿಳಿಯುವಂತಾಗಬೇಕು ಎಂಬುದೊಂದು, ಮತ್ತು ಕನ್ನಡದ ಸೊಗಡು ಕೆಡದಂತೆ ಉಳಿಯಬೇಕು ಎಂಬುದಿನ್ನೊಂದು.

ಇತ್ತೀಚೆಗೆ ಕಂಪ್ಯೂಟರ್‌ಗಳಿಗೆ ಸಂಬಂದಿಸಿದ ಕೆಲವು ಕಯ್ಪಿಡಿಗಳಲ್ಲಿ ಹೆಚ್ಚಿನ ಇಂಗ್ಲಿಶ್ ಪದಗಳನ್ನೂ ಹಾಗೆಯೇ ಉಳಿಸಿರುವುದನ್ನು ಕಾಣಬಹುದು. ಇಂಗ್ಲಿಶ್ ಪದಗಳ ಹುರುಳು ಗೊತ್ತಿರುವವರು ಮಾತ್ರ ಅವನ್ನು ಓದಿ ತಿಳಿದುಕೊಳ್ಳಬಲ್ಲರು, ಮತ್ತು ಅವುಗಳಲ್ಲಿ ಕನ್ನಡದ ಸೊಗಡು ಪೂರ‍್ತಿ ಕೆಟ್ಟುಹೋಗಿರುತ್ತದೆ; ಎಂದರೆ, ಮೇಲಿನ ಎರಡು ಗುರಿಗಳನ್ನೂ ಅವು ತಲಪುವುದೇ ಇಲ್ಲ.

ಇಂತಹ ಕಯ್ಪಿಡಿಗಳಲ್ಲಿ ಬರುವ ಇಂಗ್ಲಿಶ್ ಪದಗಳಿಗೆ ಬದಲಾಗಿ ಸಂಸ್ಕ್ರುತ ಪದಗಳನ್ನು ಬಳಸಿದರೂ ಪರಿಣಾಮ ಒಂದೇ: ಅವನ್ನು ಓದಿ ತಿಳಿಯಲು ಇಂಗ್ಲಿಶ್ ಪದಗಳ ಬದಲು ಸಂಸ್ಕ್ರುತ ಪದಗಳ ಹುರುಳು ಗೊತ್ತಿರಬೇಕು, ಮತ್ತು ಅವು ಕನ್ನಡದ ಸೊಗಡನ್ನು ಕೆಡಿಸದಿರುವುದಿಲ್ಲ. ಎಂದರೆ, ಇಂತಹ ಬರಹಗಳೂ ಮೇಲಿನ ಎರಡು ಗುರಿಗಳನ್ನು ತಲಪುವುದೇ ಇಲ್ಲ.

ಹಲವು ಹೆಚ್ಚಿನ ಸಂಸ್ಕ್ರುತ ಪದಗಳ ಹುರುಳುಗಳನ್ನು ಕಲಿಯುವುದಕ್ಕಿಂತಲೂ ಮೂಲ ಬರಹದಲ್ಲಿದ್ದ ಇಂಗ್ಲಿಶ್ ಪದಗಳ ಹುರುಳುಗಳನ್ನು ಕಲಿಯುವುದೇ ಕನ್ನಡಿಗರ ಮಟ್ಟಿಗೆ ಒಳ್ಳೆಯದಲ್ಲವೇ? ಯಾಕೆಂದರೆ, ಮುಂದೆ ಹೆಚ್ಚಿನ ತಿಳಿವನ್ನು ಪಡೆಯಬೇಕೆಂದಿರುವವರಿಗೆ ಇಂಗ್ಲಿಶ್ ಪದಗಳ ತಿಳಿವು ನೆರವಾಗಬಲ್ಲುದು; ಆದರೆ, ಸಂಸ್ಕ್ರುತ ಪದಗಳ ತಿಳಿವು ಯಾವ ನೆರವನ್ನೂ ನೀಡಲಾರವು.

ಅರಿಮೆಯ ಬರಹಗಳಿಂದ ತಿಳಿವನ್ನು ಪಡೆಯುವುದು ಮಾತ್ರವಲ್ಲದೆ, ಅದನ್ನು ಒರೆಗೆ ಹಚ್ಚುವ ಮತ್ತು ಅವುಗಳಲ್ಲಿಲ್ಲದ ಹೊಸ ತಿಳಿವನ್ನು ಕಂಡುಹಿಡಿಯುವ ಕೆಲಸವನ್ನೂ ನಾವಿಂದು ನಡೆಸಬೇಕಾಗಿದೆ. ಹೆಚ್ಚು ಹೆಚ್ಚು ಸಂಸ್ಕ್ರುತ ಇಲ್ಲವೇ ಇಂಗ್ಲಿಶ್ ಪದಗಳನ್ನು ಬಳಸಿರುವ ಬರಹಗಳನ್ನು ಕಶ್ಟಪಟ್ಟು ಅರಿಯುವುದರಲ್ಲಿಯೇ ನಮ್ಮ ಸಮಯವೆಲ್ಲ ಕಳೆದುಹೋಗುತ್ತದೆ. ಅವನ್ನು ಒರೆಗೆ ಹಚ್ಚುವ ಮತ್ತು ಹೊಸ ತಿಳಿವನ್ನು ಕಂಡುಹಿಡಿಯುವ ಕೆಲಸದಲ್ಲೂ ನಮ್ಮ ಕಲಿವಿಗರು ತೊಡಗಬೇಕಿದ್ದಲ್ಲಿ, ಅರಿಮೆಯ ಪದಗಳಲ್ಲಿ ಹೆಚ್ಚಿನವೂ ಕನ್ನಡದವೇ ಆಗಿರಬೇಕು.

(ಈ ಬರಹ ವಿಜಯ ಕರ‍್ನಾಟಕ ಸುದ್ದಿಹಾಳೆಯ ’ಎಲ್ಲರ ಕನ್ನಡ’ ಅಂಕಣದಲ್ಲಿ ಮೊದಲು ಮೂಡಿಬಂದಿತ್ತು)

ಮೂಲ : ಹೊನಲು

ಓದುವ ಹಾಗೆಯೇ ಬರೆಯುವುದು

ಸಂಸ್ಕ್ರುತದಿಂದ ಎರವಲಾಗಿ ಪಡೆದ ಪದಗಳನ್ನು ಕನ್ನಡ ಬರಹಗಳಲ್ಲಿ ಓದುವ ಹಾಗೆಯೇ ಬರೆಯಬೇಕು ಎಂದು ಹೇಳಿದರೆ, ಎಲ್ಲರೂ ಅವರವರು ಹೇಗೆ ಓದುತ್ತಾರೋ ಹಾಗೆ ಬರೆಯಬಹುದು, ಇಲ್ಲವೇ ಎಲ್ಲರೂ ತಮಗೆ ಕುಶಿಬಂದ ಹಾಗೆ ಬರೆಯಬಹುದು ಎಂದು ಹೇಳಿದ ಹಾಗಾಗುವುದಿಲ್ಲ; ಅಂತಹ ಪ್ರತಿಕ್ರಿಯೆ ಬಾರದಂತೆ ನಾನು ಹೆಚ್ಚಿನ ಕನ್ನಡಿಗರೂ ಹೇಗೆ ಓದುತ್ತಾರೋ ಹಾಗೆ ಬರೆಯಬೇಕು ಎಂಬುದಾಗಿ ಬರೆದಿದ್ದೆ. ಈ ಪದಗಳನ್ನು ಇವತ್ತು ಹೆಚ್ಚಿನ ಕನ್ನಡಿಗರೂ ಹೇಗೆ ಓದುತ್ತಿದ್ದಾರೆ ಎಂಬುದನ್ನು ತಿಳಿವಿಗರು ಕಂಡುಹಿಡಿಯಬೇಕು, ಮತ್ತು ಅದಕ್ಕೆ ಅನುಸಾರವಾಗಿ, ಅವನ್ನು ಹೇಗೆ ಬರೆಯಬೇಕು ಎಂಬುದನ್ನು ತೀರ‍್ಮಾನಿಸಬೇಕು.

ಬರಹದ ಮೂಲಕ ನಾವು ನಮ್ಮ ಅನಿಸಿಕೆಗಳನ್ನು ಇನ್ನೊಬ್ಬರಿಗೆ ತಿಳಿಸುತ್ತೇವೆ, ಮತ್ತು ಬರಹ ರೂಪದಲ್ಲಿರುವ ಇನ್ನೊಬ್ಬರ ಅನಿಸಿಕೆಗಳನ್ನು ಓದಿನ ಮೂಲಕ ತಿಳಿದುಕೊಳ್ಳುತ್ತೇವೆ. ಈ ಎರಡು ಕೆಲಸಗಳೂ ಸರಿಯಾಗಿ ನಡೆಯಬೇಕಿದ್ದಲ್ಲಿ, ಎಲ್ಲರೂ ಹೆಚ್ಚುಕಡಿಮೆ ಒಂದೇ ಬಗೆಯಲ್ಲಿ ಬರೆಯುವ ಮತ್ತು ಓದುವ ಕೆಲಸಗಳನ್ನು ನಡೆಸಬೇಕಾಗುತ್ತದೆ. ಈ ಕೆಲಸಗಳನ್ನು ಇವತ್ತು ಶಾಲೆಗಳಲ್ಲಿ ಕಲಿಸಲಾಗುತ್ತದೆಯಾದ ಕಾರಣ, ಎಲ್ಲರೂ ಹೆಚ್ಚುಕಡಿಮೆ ಒಂದೇ ಬಗೆಯಲ್ಲಿ ಬರೆಯುವಂತೆ ಮತ್ತು ಓದುವಂತೆ ಮಾಡುವುದು ತೊಡಕಿನ ಕೆಲಸವೇನಲ್ಲ.

ಶಕಾರವನ್ನು ಹೆಚ್ಚಿನ ಕನ್ನಡಿಗರೂ ಶಕಾರವಾಗಿಯೇ ಓದುತ್ತಾರಲ್ಲದೆ ಸಕಾರವಾಗಿ ಬದಲಾಯಿಸಿ ಓದುವುದಿಲ್ಲ. ಆದರೆ, ಷಕಾರವನ್ನು ಹೆಚ್ಚಿನವರೂ ಶಕಾರವಾಗಿ ಬದಲಾಯಿಸಿ ಓದುತ್ತಾರೆ. ಹಾಗಾಗಿ, ಸಂಸ್ಕ್ರುತ ಎರವಲುಗಳಲ್ಲಿ ಬರುವ ಷಕಾರವನ್ನು ಶಕಾರವಾಗಿ ಬದಲಾಯಿಸಿ ಬರೆಯಬೇಕು, ಮತ್ತು ಶಕಾರವನ್ನು ಹಾಗೆಯೇ ಉಳಿಸಬೇಕು ಎಂಬ ತೀರ‍್ಮಾನಕ್ಕೆ ಬರಬೇಕಾಗುತ್ತದೆ.

ಇದೇ ರೀತಿಯಲ್ಲಿ, ಋಕಾರ, ಮಹಾಪ್ರಾಣ, ವಿಸರ‍್ಗ ಮೊದಲಾದ ಬೇರೆ ಕೆಲವು ಬರಿಗೆಗಳ ವಿಶಯದಲ್ಲೂ ಹೆಚ್ಚಿನ ಕನ್ನಡಿಗರ ಓದು ಹೇಗಿದೆಯೆಂಬುದನ್ನು ಕಂಡುಹಿಡಿದು, ಅದಕ್ಕನುಸಾರವಾಗಿ ಬರವಣಿಗೆಯನ್ನು ಬದಲಾಯಿಸಬೇಕು. ಹೀಗೆ ಮಾಡಿದಲ್ಲಿ, ಕನ್ನಡ ಬರಹವನ್ನು ಕಲಿಯುವ ಮತ್ತು ಬಳಸುವ ಕೆಲಸ ಸುಲಬವಾಗಬಲ್ಲುದು, ಮತ್ತು ಎಲ್ಲಾ ಕನ್ನಡಿಗರೂ ಬರಹಬಲ್ಲವರಾಗುವಂತೆ ಮಾಡುವ ಕೆಲಸವೂ ಸುಲಬವಾಗಬಲ್ಲುದು.

ಹಳೆಗನ್ನಡದ ಱಕಾರ ಮತ್ತು ೞಕಾರಗಳನ್ನು ಹೆಚ್ಚಿನ ಕನ್ನಡಿಗರೂ ಹೇಗೆ ಓದುತ್ತಾರೆ ಎಂಬುದನ್ನು ಗಮನಿಸಿ, ಹೊಸಗನ್ನಡವನ್ನು ಬರಹದಲ್ಲಿ ಬಳಸಲು ತೊಡಗಿದ ಕಾಲದಲ್ಲಿ ಅವನ್ನು ರಕಾರ ಮತ್ತು ಳಕಾರಗಳಾಗಿ ಬದಲಾಯಿಸಿ ಬರೆಯಲು ತೊಡಗಲಾಯಿತು. ಈ ಮಾರ‍್ಪಾಡನ್ನು ಮಾಡಿರದಿದ್ದರೆ, ಇವತ್ತು ಕನ್ನಡ ಬರಹವನ್ನು ಕಲಿಯುವ ಮತ್ತು ಬಳಸುವ ಕೆಲಸ ಇನ್ನಶ್ಟು ತೊಡಕಿನದಾಗುತ್ತಿತ್ತು. ಸಂಸ್ಕ್ರುತ ಎರವಲುಗಳಲ್ಲಿ ಬರುವ ಬರಿಗೆಗಳನ್ನು ಓದುವ ಹಾಗೆ ಬರೆಯುವಂತೆ ಮಾರ‍್ಪಡಿಸುವುದೂ ಇಂತಹದೇ ಒಂದು ಕೆಲಸ ಎಂಬುದನ್ನು ಇಲ್ಲಿ ಗಮನಿಸಬೇಕು.

ಇಶ್ಟರ ವರೆಗೆ ಈ ಪದಗಳನ್ನು ಸಂಸ್ಕ್ರುತದಲ್ಲಿದ್ದ ಹಾಗೆಯೇ ಬರೆಯುತ್ತಿದ್ದುದಕ್ಕೆ ಎರಡು ಮುಕ್ಯ ಕಾರಣಗಳಿದ್ದುವು: ಹಿಂದಿನ ಕಾಲದಲ್ಲಿ ಹೊಸ ಹೊಸ ತಿಳಿವುಗಳನ್ನು ಕಂಡುಹಿಡಿದವರೆಲ್ಲ ಅದನ್ನು ಸಂಸ್ಕ್ರುತದಲ್ಲಿ ಬರೆದಿರಿಸುತ್ತಿದ್ದರು; ಹಾಗಾಗಿ, ಯಾವುದೇ ಒಂದು ವಿಶಯದಲ್ಲಿ ಹೊಸ ತಿಳಿವನ್ನು ಪಡೆಯಬೇಕಿದ್ದರೂ ಸಂಸ್ಕ್ರುತದ ಮೊರೆಹೊಗಬೇಕಾಗಿತ್ತು.

ಇದರಿಂದಾಗಿ ಸಂಸ್ಕ್ರುತ ಬರಹಕ್ಕೆ ಒಂದು ಬಗೆಯ ಮೇಲ್ಮೆ ಬಂದಿತ್ತು; ಅದರ ಪದಗಳನ್ನು ಕನ್ನಡದಲ್ಲಿಯೂ ಸಂಸ್ಕ್ರುತದಲ್ಲಿರುವ ಹಾಗೆಯೇ ಉಳಿಸಿಕೊಳ್ಳುವುದರಿಂದ, ಮುಂದೆ ಸಂಸ್ಕ್ರುತ ಬರಹಗಳನ್ನು ಓದಲು ಕಲಿಯುವ ಕೆಲಸ ಕನ್ನಡಿಗರಿಗೆ ಸುಲಬವಾಗಬಹುದಾಗಿತ್ತು. ಕನ್ನಡ ಓದಿನ ಕಲಿಕೆ ಮುಂದೆ ನಡೆಸಲೇಬೇಕಾಗಿದ್ದ ಸಂಸ್ಕ್ರುತ ಓದಿಗೆ ಒಂದು ಮೆಟ್ಟಲಾಗಬಹುದಾಗಿತ್ತು. ಇದು ಒಂದು ಕಾರಣ.

ಆದರೆ, ಇವತ್ತು ಹೊಸ ಹೊಸ ತಿಳಿವುಗಳನ್ನು ಕಂಡುಹಿಡಿದಿರುವವರು ಯಾರೂ ಅದನ್ನು ಸಂಸ್ಕ್ರುತದಲ್ಲಿ ಬರೆಯಲು ಹೋಗುವುದಿಲ್ಲ; ಹಾಗಾಗಿ, ಹಿಂದಿನ ಕಾಲದಲ್ಲಿ ಅದಕ್ಕಿದ್ದ ಮೇಲ್ಮೆ ಇಂದು ಉಳಿದಿಲ್ಲ, ಮತ್ತು ಅದರ ಪದಗಳನ್ನು ಅದರ ಬರಹಗಳಲ್ಲಿರುವ ಹಾಗೆ ಬರೆಯಲು ಕಲಿಯುವ ಅವಶ್ಯಕತೆಯೂ ಇವತ್ತು ಕನ್ನಡಿಗರಿಗಿಲ್ಲ.

ಹಿಂದಿನ ಕಾಲದಲ್ಲಿ ಕನ್ನಡ ಬರಹವನ್ನು ಕಲಿಯುವ ಮತ್ತು ಬಳಸುವ ಕೆಲಸವನ್ನು ಮುಕ್ಯವಾಗಿ ಉತ್ತರದಿಂದ ವಲಸೆಬಂದ ಮೇಲ್ವರ‍್ಗದ ಜನರು ನಡೆಸುತ್ತಿದ್ದರು; ಆರ‍್ಯರಾಗಿದ್ದ ಇವರಿಗೆ ಸಂಸ್ಕ್ರುತದ ಮೇಲೆ ಹೆಚ್ಚಿನ ಆದರ ಮತ್ತು ಪೂಜ್ಯಬಾವಗಳಿದ್ದುವು. ಹಾಗಾಗಿ, ಅದರ ಪದಗಳನ್ನು ಮಾರ‍್ಪಡಿಸದೆ ಉಳಿಸುವುದು ಅವರ ಮಟ್ಟಿಗೆ ಅವಶ್ಯವಾಗಿತ್ತು. ಇದು ಇನ್ನೊಂದು ಕಾರಣ.

ಆದರೆ, ಇವತ್ತು ಎಲ್ಲಾ ವರ‍್ಗಗಳಿಗೆ ಸೇರಿದ ಕನ್ನಡಿಗರೂ ಕನ್ನಡ ಬರಹವನ್ನು ಬಳಸಲು ಕಲಿಯಬೇಕಾಗಿದೆ. ಇವರಲ್ಲಿ ಹೆಚ್ಚಿನವರೂ ದ್ರಾವಿಡ ಮೂಲದವರಾಗಿದ್ದು, ಅವರ ಮಟ್ಟಿಗೆ ಸಂಸ್ಕ್ರುತ ಪದಗಳನ್ನು ಮಾರ‍್ಪಡಿಸದೆ ಉಳಿಸಿಕೊಳ್ಳುವುದು ಅಂತಹ ಒಂದು ಪೂಜ್ಯವಾದ ವಿಶಯವೇ ಅಲ್ಲ; ಅದರಿಂದ ಅವರಿಗೆ ಬೇರೆ ಪ್ರಯೋಜನಗಳೂ ದೊರಕುವುದಿಲ್ಲ. ಹಾಗಾಗಿ, ಸಂಸ್ಕ್ರುತ ಎರವಲುಗಳನ್ನು ಕನ್ನಡದ ಸೊಗಡನ್ನು ಕೆಡಿಸದಂತೆ ಮಾರ‍್ಪಡಿಸುವುದಕ್ಕೆ ಹೆಚ್ಚಿನ ಕನ್ನಡಿಗರಿಂದಲೂ ವಿರೋದ ಬರಲಾರದು.

ಬೇರೆ ನುಡಿಗಳಿಂದ ಎರವಲಾಗಿ ಪಡೆದ ಪದಗಳನ್ನು ಯಾವ ನುಡಿಯಲ್ಲೂ ಆ ನುಡಿಯಲ್ಲಿರುವ ಹಾಗೆ ಬರೆಯಲು ಹೋಗುವುದಿಲ್ಲ; ಇದಕ್ಕೆ ಕೆಲವೇ ಕೆಲವು ಹೊರಪಡಿಕೆಗಳು ಮಾತ್ರ ಇವೆ. ಎತ್ತುಗೆಗಾಗಿ, ಸಂಸ್ಕ್ರುತ ಇಲ್ಲವೇ ಪ್ರಾಕ್ರುತ ಬರವಣಿಗೆಗಳಿಗೆ ಬಳಕೆಯಾಗುತ್ತಿದ್ದ ಬ್ರಾಹ್ಮೀ ಲಿಪಿಯನ್ನು ಕನ್ನಡದಂತಹ ಕೆಲವು ನುಡಿಗಳಿಗೆ ಅಳವಡಿಸುವಾಗ, ಸಂಸ್ಕ್ರುತದ ಎರವಲುಗಳನ್ನು ಸಂಸ್ಕ್ರುತದಲ್ಲಿರುವ ಹಾಗೆಯೇ ಬರೆಯಲು ಬೇಕಾಗುವ ಕೆಲವು ಹೆಚ್ಚಿನ ಬರಿಗೆಗಳನ್ನು ಉಳಿಸಿಕೊಳ್ಳಲಾಯಿತು, ಮತ್ತು ಈ ಕಾರಣಕ್ಕಾಗಿ, ಈ ನುಡಿಗಳ ಬರಹಗಳಲ್ಲಿ ಸಂಸ್ಕ್ರುತ ಎರವಲುಗಳನ್ನು ಆ ನುಡಿಯಲ್ಲಿರುವ ಹಾಗೆಯೇ ಬರೆಯುವ ಹೊಲಬು ಬಳಕೆಗೆ ಬಂತು.

ಇದೇ ರೀತಿಯಲ್ಲಿ, ಅರೇಬಿಕ್ ಬರವಣಿಗೆಗಳಿಗೆ ಬಳಕೆಯಾಗುತ್ತಿದ್ದ ಲಿಪಿಯನ್ನು ಟರ‍್ಕಿಶ್‌ನಂತಹ ಕೆಲವು ನುಡಿಗಳಿಗೆ ಅಳವಡಿಸುವಾಗ, ಅರೇಬಿಕ್ ಎರವಲುಗಳನ್ನು ಬರೆಯಲು ಬೇಕಾಗುವ ಕೆಲವು ಹೆಚ್ಚಿನ ಬರಿಗೆಗಳನ್ನು ಉಳಿಸಿಕೊಳ್ಳಲಾಯಿತು, ಮತ್ತು ಈ ಕಾರಣಕ್ಕಾಗಿ, ಈ ನುಡಿಗಳ ಬರಹಗಳಲ್ಲಿ ಅರೇಬಿಕ್ ಎರವಲುಗಳನ್ನು ಆ ನುಡಿಯಲ್ಲಿರುವ ಹಾಗೆಯೇ ಬರೆಯುವ ಹೊಲಬು ಬಳಕೆಗೆ ಬಂತು.

ಆದರೆ, ಎಲ್ಲಾ ನುಡಿಗಳೂ ಈ ರೀತಿ ಬೇರೊಂದು ನುಡಿಯ ಲಿಪಿಯನ್ನು ತಮ್ಮ ನುಡಿಗೆ ಅಳವಡಿಸಿಕೊಳ್ಳುವಾಗ ಆ ನುಡಿಯ ಪದಗಳನ್ನು ಅದರಲ್ಲಿರುವಂತೆ ಬರೆಯಲು ಬೇಕಾಗುವ ಹೆಚ್ಚಿನ ಬರಿಗೆಗಳನ್ನು ಉಳಿಸಿಕೊಳ್ಳಲಿಲ್ಲ; ಎತ್ತುಗೆಗಾಗಿ, ನಾಗರಿ ಲಿಪಿಯನ್ನು ಪಂಜಾಬಿ ನುಡಿಗೆ ಅಳವಡಿಸುವಾಗ, ಷಕಾರ, ಋಕಾರ, ಹಲವು ಬಗೆಯ ಒತ್ತುಬರಿಗೆಗಳು ಮೊದಲಾದುವನ್ನು ಉಳಿಸಿಕೊಂಡಿಲ್ಲ; ಈ ಕಾರಣಕ್ಕಾಗಿ, ಸಂಸ್ಕ್ರುತ ಎರವಲು ಪದಗಳನ್ನು ಇವತ್ತು ಪಂಜಾಬಿ ಬರಹದಲ್ಲಿ ಓದುವ ಹಾಗೆ ಬರೆಯಲಾಗುತ್ತದೆಯಲ್ಲದೆ ಸಂಸ್ಕ್ರುತದಲ್ಲಿರುವ ಹಾಗೆ ಬರೆಯುವುದಿಲ್ಲ.

ಮಲಯಾಳ ಬರಹದಲ್ಲೂ ಮೊದಲಿಗೆ ಮಹಾಪ್ರಾಣಾಕ್ಶರಗಳು, ಗಜಡದಬ ಮೊದಲಾದ ಆ ನುಡಿಗೆ ಬೇಡದಿರುವ ಹಲವು ಬರಿಗೆಗಳು ಇರಲಿಲ್ಲ; ಸಂಸ್ಕ್ರುತ ಬರಹಗಳನ್ನು ಬರೆಯಲು, ಮತ್ತು ಕೆಲವೊಮ್ಮೆ ಸಂಸ್ಕ್ರುತ ಪದಗಳನ್ನು ಮಲಯಾಳ ಬರಹಗಳಲ್ಲಿ ಬರೆಯಲು ಆ ಸಮಯದಲ್ಲಿ ಗ್ರಂತಲಿಪಿಯೆಂಬ ಬೇರೆಯೇ ಒಂದು ಲಿಪಿಯನ್ನು ಬಳಸಲಾಗುತ್ತಿತ್ತು.

ಆದರೆ, ಹದಿನೇಳನೇ ಶತಮಾನಕ್ಕಾಗುವಾಗ, ಮಲಯಾಳ ಸಾಹಿತ್ಯದಲ್ಲಿ ಬ್ರಾಹ್ಮಣರ ಪ್ರಾಬಲ್ಯ ಹೆಚ್ಚಾಯಿತು; ಇವರಿಗೆ ಸಂಸ್ಕ್ರುತದ ಮೇಲೆ ಹೆಚ್ಚಿನ ಒಲವಿದ್ದುದರಿಂದ, ಮತ್ತು ಇವರ ಬರಹಗಳಲ್ಲಿ ತುಂಬಾ ಸಂಸ್ಕ್ರುತ ಪದಗಳು ಬಳಕೆಯಾಗುತ್ತಿದ್ದುದರಿಂದ, ಇವರು ತಮ್ಮ ಮಲಯಾಳ ಬರಹಗಳಲ್ಲೂ ಗ್ರಂತ ಲಿಪಿಯನ್ನೇ ಬಳಸಲು ತೊಡಗಿದರು. ಇದರಿಂದಾಗಿ, ಇವತ್ತಿನ ಮಲಯಾಳ ಬರಹ ಕನ್ನಡ ಬರಹದ ಹಾಗೆಯೇ ಅನವಶ್ಯಕವಾಗಿ ತೊಡಕಿನದಾಗಿದೆ.

ಎಲ್ಲಾ ಜನರೂ ಬರಹಬಲ್ಲವರಾಗಬೇಕಿರುವ ಇವತ್ತಿನ ದಿನಗಳಲ್ಲಿ ಈ ರೀತಿ ಒಂದು ನುಡಿಯ ಬರವಣಿಗೆಗೆ ಅವಶ್ಯವಿಲ್ಲದ ಬರಿಗೆಗಳನ್ನು ಎರವಲು ಪದಗಳ ಬರವಣಿಗೆಗಾಗಿ ಉಳಿಸಿಕೊಳ್ಳುವುದು ಜಾಣತನವಲ್ಲ; ಇದನ್ನು ಮನಗಂಡ ತಿಳಿವಿಗರು ಟರ‍್ಕಿ, ಇಂಡೊನೇಶಿಯಾ, ಮಲಯೇಶಿಯಾ ಮೊದಲಾದ ನಾಡುಗಳಲ್ಲಿ ಅರೇಬಿಕ್ ಮೂಲದ ಲಿಪಿಯನ್ನೇ ಬಿಟ್ಟುಕೊಟ್ಟು ರೋಮನ್ ಮೂಲದ ಲಿಪಿಯನ್ನು ತಮ್ಮ ಬರಹಕ್ಕೆ ಅಳವಡಿಸಿಕೊಂಡಿದ್ದಾರೆ.

ಕೊರಿಯಾದಂತಹ ಬೇರೆ ಕೆಲವು ನಾಡುಗಳಲ್ಲಿ ಎರವಲು ಪದಗಳನ್ನು ಓದುವ ಹಾಗೆಯೇ ಬರೆಯಲು ತೊಡಗುವ ಮೂಲಕ ಈ ತೊಡಕನ್ನು ನಿವಾರಿಸಿಕೊಳ್ಳಲಾಗಿದೆ. ಕನ್ನಡದಲ್ಲಿಯೂ ಇಂತಹದೇ ಮಾರ‍್ಪಾಡನ್ನು ನಾವು ಇವತ್ತು ನಡೆಸಬೇಕಾಗಿದೆ.

(ಈ ಬರಹ ವಿಜಯ ಕರ‍್ನಾಟಕ ಸುದ್ದಿಹಾಳೆಯ ’ಎಲ್ಲರ ಕನ್ನಡ’ ಅಂಕಣದಲ್ಲಿ ಮೊದಲು ಮೂಡಿಬಂದಿತ್ತು).

ಮೂಲ : ಹೊನಲು

ನುಡಿಯ ಕಲಿಕೆ ಮತ್ತು ಕಲಿಕೆನುಡಿ

ಇಂಗ್ಲಿಶ್‌ನಂತಹ ಒಂದು ನುಡಿಯನ್ನು ಮಕ್ಕಳಿಗೆ ಕಲಿಸುವುದಕ್ಕೂ ಅದನ್ನೇ ಗಣಿತ, ವಿಜ್ನಾನ, ಚರಿತ್ರೆ ಮೊದಲಾದ ವಿಶಯಗಳನ್ನು ಕಲಿಸುವಲ್ಲಿ ಕಲಿಕೆನುಡಿಯಾಗಿಬಳಸುವುದಕ್ಕೂ ನಡುವೆ ತುಂಬಾ ವ್ಯತ್ಯಾಸವಿದೆ. ನಿಜಕ್ಕೂ ಇವತ್ತು ಹೆಚ್ಚಿನ ಜನರಿಗೂ ಬೇಕಾಗಿರುವುದು ಇಂಗ್ಲಿಶ್ ನುಡಿಯ ಕಲಿಕೆಯಲ್ಲದೆ, ಅದನ್ನು ಕಲಿಕೆನುಡಿಯಾಗಿ ಬಳಸಬೇಕೆಂಬುದಲ್ಲ. ಆದರೆ, ಈ ವ್ಯತ್ಯಾಸವನ್ನು ತಿಳಿದುಕೊಳ್ಳಲಾರದ ಜನರು ತಮ್ಮ ಮಕ್ಕಳನ್ನು ಎಶ್ಟೇ ಕಶ್ಟವಾದರೂ ಹೆದರದೆ ಇಂಗ್ಲಿಶ್ ನುಡಿಯನ್ನು ಕಲಿಕೆನುಡಿಯಾಗಿ ಬಳಸುವ ‘ಇಂಗ್ಲಿಶ್ ಶಾಲೆ’ಗಳಿಗೆ ಕಳಿಸುತ್ತಿದ್ದಾರೆ.

ಆದರೆ, ಹೀಗೆ ಮಾಡುವುದರಿಂದ ಅವರಲ್ಲಿ ಹೆಚ್ಚಿನವರ ಆಸೆಯೂ ಕಯ್ಗೂಡುವುದಿಲ್ಲ. ಮೇಲ್ವರ‍್ಗದ ಮಕ್ಕಳು ಇಂತಹ ಶಾಲೆಗಳಿಗೆ ಹೋಗಿ ದೊಡ್ಡ ದೊಡ್ಡ ಕೆಲಸಗಳನ್ನು ಹಿಡಿದು ಲಕ್ಶ ಲಕ್ಶ ಸಂಪಾದಿಸುವುದನ್ನು ನೋಡಿ, ತಮ್ಮ ಮಕ್ಕಳೂ ಹಾಗೆಯೇ ಮುಂದೆ ಬರಬೇಕೆಂದು ಅವರು ಬಯಸುವುದು ಸಹಜ. ಆದರೆ, ಇಂಗ್ಲಿಶ್ ಶಾಲೆಗಳು ಅವರ ಈ ಬಯಕೆಯನ್ನು ಪೂರಯ್ಸಲಾರವು.

ಇದಕ್ಕೆ ಹಲವು ಕಾರಣಗಳಿವೆ: ಮೊದಲನೆಯದಾಗಿ, ಇಂಗ್ಲಿಶ್ ಶಾಲೆಗಳಲ್ಲೂ ಹಲವು ಬಗೆಗಳಿವೆ; ಇಂಗ್ಲಿಶ್ ನುಡಿಯನ್ನು ಮತ್ತು ಬೇರೆ ವಿಶಯಗಳನ್ನು ತುಂಬಾ ಚನ್ನಾಗಿ ಕಲಿಸಬಲ್ಲ ಶಾಲೆಗಳು ಕೆಲವಾದರೆ, ಯಾವುದನ್ನೂ ಸರಿಯಾಗಿ ಕಲಿಸಲಾಗದ ಶಾಲೆಗಳು ಹಲವು; ಕೆಳವರ‍್ಗದ ಮಕ್ಕಳಲ್ಲಿ ಹೆಚ್ಚಿನವರೂ ಇಂತಹ ಎರಡನೇ ಬಗೆಯ ಶಾಲೆಗಳಿಗೆ ಮಾತ್ರವೇ ಹೋಗಬಲ್ಲರಾದ ಕಾರಣ, ಅವರ ಕಲಿಕೆ ಅಲ್ಲಿಯೂ ಕುಂಟುತ್ತಲೇ ನಡೆಯುತ್ತದೆ.

ತಮಗೆ ಮಾತನಾಡಲು ತಿಳಿದಿರುವ ನುಡಿಯನ್ನು ಕಲಿಕೆನುಡಿಯಾಗಿ ಪಡೆದಿರುವ ಮಕ್ಕಳು ತಮಗೆ ಸ್ವಲ್ಪವೂ ತಿಳಿಯದಿರುವ ಇಂಗ್ಲಿಶ್‌ನಂತಹ ನುಡಿಯನ್ನು ಕಲಿಕೆನುಡಿಯಾಗಿ ಪಡೆದಿರುವ ಮಕ್ಕಳಿಗಿಂತ ಬೇಗನೆ ತಮ್ಮ ಕಲಿಕೆಯಲ್ಲಿ ಮುಂದೆ ಹೋಗಬಲ್ಲರೆಂಬುದನ್ನು ಎಲ್ಲಾ ಬಗೆಯ ಅರಕೆಗಳೂ ತೋರಿಸಿಕೊಟ್ಟಿವೆ; ಇಂಗ್ಲಿಶ್ ನುಡಿಯನ್ನು ಕಲಿಯುವಲ್ಲಿಯೂ ಅವರು ಇಂಗ್ಲಿಶ್ ಕಲಿಕೆನುಡಿಯಾಗಿರುವ ಶಾಲೆಗಳ ಮಕ್ಕಳಿಗಿಂತ ಬೇಗನೆ ಮುಂದೆ ಹೋಗಬಲ್ಲರು.

ದಕ್ಶಿಣ ಆಪ್ರಿಕಾದಲ್ಲಿ ಎಂಟನೇ ತರಗತಿಯ ವರೆಗೂ ಕಲಿಕೆನುಡಿಯಾಗಿ ತಾಯ್ನುಡಿಯನ್ನು ಬಳಸುತ್ತಿದ್ದ ಶಾಲೆಗಳಲ್ಲಿ ಮಕ್ಕಳು ಹನ್ನೆರಡನೇ ತರಗತಿಯಲ್ಲಿ ನೂರಕ್ಕೆ ೮೪ರಂತೆ ಪಾಸಾಗುತ್ತಿದ್ದರು. ತಾಯ್ತಂದೆಯವರ ಒತ್ತಾಯದ ಮೇಲೆ, ಅಯ್ದನೇ ತರಗತಿಯಿಂದಲೇ ಇಂಗ್ಲಿಶ್ ನುಡಿಯನ್ನು ಕಲಿಕೆನುಡಿಯಾಗಿ ಬಳಸಲು 1976ರಲ್ಲಿ ತೊಡಗಲಾಯಿತು. 1992ರಲ್ಲಿ ಈ ಮಕ್ಕಳ ಕಲಿಕೆಯನ್ನು ಪರೀಕ್ಶಿಸಿದಾಗ, ಹನ್ನೆರಡನೇ ತರಗತಿಯ ಮಕ್ಕಳು ನೂರಕ್ಕೆ 44ರಂತೆ ಪಾಸಾಗುವ ಮಟ್ಟಕ್ಕೆ ಇಳಿದಿದ್ದುದು ಕಂಡುಬಂತು. ಇಂಗ್ಲಿಶ್ ನುಡಿಯ ಕಲಿಕೆಯಲ್ಲೂ ಪಾಸಾಗುವವರ ಎಣಿಕೆ ಅಶ್ಟೇ ಕೆಳಗೆ ಇಳಿದಿತ್ತು.

ಇಂಗ್ಲಿಶ್ ನುಡಿಯನ್ನು ಕಲಿಕೆನುಡಿಯಾಗಿ ಬಳಸಿಯೂ ಮೇಲ್ವರ‍್ಗದ ಮಕ್ಕಳು ಇವತ್ತು ಮುಂದೆ ಬರುತ್ತಿರುವುದಕ್ಕೆ ಕಾರಣ ಬೇರೆಯೇ ಇದೆ. ಅವರಿಗೆ ಶಾಲೆಯ ಕಲಿಕೆ ಮಾತ್ರವಲ್ಲದೆ ಬೇರೆಯೂ ಹಲವು ಬಗೆಯ ಕಲಿಕೆಗಳು ನೆರವು ನೀಡುತ್ತಿವೆ. ಇಂತಹ ನೆರವು ಕೆಳವರ‍್ಗದ ಮಕ್ಕಳಿಗೆ ಸಿಗುವುದಿಲ್ಲ. ಮಕ್ಕಳಿಗೆ ಎಶ್ಟು ಪದಗಳ ಮೇಲೆ ಹತೋಟಿಯಿದೆ ಎಂಬುದರ ಮೇಲೆ ಅವರು ತಮ್ಮ ಕಲಿಕೆಯಲ್ಲಿ ಎಶ್ಟು ಮುಂದೆ ಹೋಗಬಲ್ಲರು ಎಂಬುದು ಅವಲಂಬಿಸಿರುತ್ತದೆ, ಮತ್ತು ಸಾಮಾನ್ಯವಾಗಿ, ಮಕ್ಕಳ ಹತೋಟಿಯಲ್ಲಿರುವ ಪದಗಳ ಎಣಿಕೆ ಅವರ ತಾಯ್ತಂದೆಯರು ಬರಹಬಲ್ಲವರೋ ಇಲ್ಲವೇ ಬರಹಬಾರದವರೋ ಎಂಬುದರ ಮೇಲೆಯೂ ಅವಲಂಬಿಸಿರುತ್ತದೆ.

ಹೆಚ್ಚು ಪದಗಳ ಮೇಲೆ ಹತೋಟಿಯಿರುವ ಮಕ್ಕಳು ಹೆಚ್ಚು ಬರಹಗಳನ್ನು ಓದಿ ತಿಳಿದುಕೊಳ್ಳಬಲ್ಲರು, ಮತ್ತು ಇದರಿಂದಾಗಿ ಅವರ ಹತೋಟಿಯಲ್ಲಿರುವ ಪದಗಳ ಎಣಿಕೆ ಬಹಳ ಬೇಗನೆ ಹೆಚ್ಚುತ್ತಾ ಹೋಗುತ್ತದೆ; ಇದಕ್ಕೆ ಬದಲು, ಕಡಿಮೆ ಪದಗಳ ಮೇಲೆ ಹತೊಟಿಯಿರುವ ಮಕ್ಕಳು ಪಟ್ಯಪುಸ್ತಕಗಳನ್ನು ಬಿಟ್ಟು ಬೇರೆ ಬರಹಗಳನ್ನು ಓದಲು ಹೋಗುವುದಿಲ್ಲ, ಮತ್ತು ಇದರಿಂದಾಗಿ ಅವರ ಹತೋಟಿಯಲ್ಲಿರುವ ಪದಗಳ ಎಣಿಕೆ ತುಂಬಾ ಮೆಲ್ಲಗೆ ಹೆಚ್ಚುತ್ತಿರುತ್ತದೆ. ಇಂಗ್ಲಿಶ್ ಕಲಿಕೆನುಡಿಯಾಗಿರುವ ಶಾಲೆಗಳಲ್ಲಿ ಕಲಿಯುವ ಮೇಲ್ವರ‍್ಗದವರ ಮಕ್ಕಳಿಗೆ ತಮ್ಮ ಹತೋಟಿಯಲ್ಲಿರುವ ಇಂಗ್ಲಿಶ್ ಪದಗಳನ್ನು ಹೆಚ್ಚಿಸಲು ಮನೆಯಲ್ಲಿಯೂ ನೆರವು ಸಿಗುತ್ತದೆ; ಆದರೆ, ಕೆಳವರ‍್ಗದ ಮಕ್ಕಳಿಗೆ ಇಂತಹ ಮನೆಯ ನೆರವು ಸಿಗುವುದಿಲ್ಲ. ಇದರಿಂದಾಗಿಯೂ ಅವರು ಇಂತಹ ಶಾಲೆಗಳಲ್ಲಿ ಹಿಂದೆ ಬೀಳುತ್ತಾರೆ.

ಇನ್ನೊಂದು ವಿಶಯವೇನೆಂದರೆ, ಎರಡು ಇಲ್ಲವೇ ಮೂರನೇ ತರಗತಿಯ ವರೆಗೆ ಮಕ್ಕಳು ಕಲಿಯುವುದು ಓದುವುದು ಮತ್ತು ಬರೆಯುವುದು ಹೇಗೆ ಎಂಬುದನ್ನು. ತಮಗೆ ತಿಳಿಯದಿರುವ ಇಂಗ್ಲಿಶ್ ನುಡಿಯಲ್ಲಿ ಇದನ್ನು ನಡೆಸುವುದು ಅವರಿಗೆ ಅಶ್ಟೊಂದು ತೊಡಕಿನದಾಗಿರುವುದಿಲ್ಲ. ಆದರೆ, ಮೂರು ಇಲ್ಲವೇ ನಾಲ್ಕನೇ ತರಗತಿಯಿಂದ ಅವರು ತಮ್ಮ ಓದಿನ ಮೂಲಕ ಗಣಿತ, ವಿಜ್ನಾನ ಮೊದಲಾದ ಹಲವು ಬಗೆಯ ವಿಶಯಗಳನ್ನು ತಿಳಿದುಕೊಳ್ಳಲು ತೊಡಗಬೇಕಾಗುತ್ತದೆ; ಕಣ್ಣಿಗೆ ಕಾಣದ ಮತ್ತು ಕಿವಿಗೆ ಕೇಳಿಸದ ಪರಿಕಲ್ಪನೆಗಳನ್ನು ಅರಿತುಕೊಳ್ಳಬೇಕಾಗುತ್ತದೆ.

ಇಂತಹ ಕೆಲಸಗಳನ್ನು ನಡೆಸಲು ಇಂಗ್ಲಿಶ್ ನುಡಿಯನ್ನು ತುಂಬಾ ಚನ್ನಾಗಿ ಕಲಿಸುವ ಶಾಲೆಗಳಲ್ಲೂ ಮಕ್ಕಳಿಗೆ ಆರೇಳು ವರ‍್ಶಗಳ ಕಲಿಕೆ ಬೇಕಾಗುತ್ತದೆಯೆಂದು ಕಂಡುಹಿಡಿಯಲಾಗಿದೆ. ಇಂಗ್ಲಿಶ್ ಕಲಿಕೆನುಡಿಯಾಗಿರುವಲ್ಲಿ ಈ ಕೆಲಸಗಳನ್ನು ನಾಲ್ಕನೇ ತರಗತಿಯಿಂದಲೇ ನಡೆಸಬೇಕಾಗುತ್ತದೆಯಾದ ಕಾರಣ, ಹೆಚ್ಚಿನ ಮಕ್ಕಳೂ ಇದರಲ್ಲಿ ಸೋಲುತ್ತಾರೆ, ಮತ್ತು ಹಲವು ಮಂದಿ ಮಕ್ಕಳು ಈ ತೊಡಕನ್ನು ಎದುರಿಸಲಾಗದೆ ಶಾಲೆಯಿಂದ ಹೊರಬೀಳುತ್ತಾರೆ. ಇಲ್ಲಿಯೂ ಮೇಲ್ವರ‍್ಗದವರ ಮತ್ತು ಬಲ್ಲಿದರ ಮಕ್ಕಳಿಗಿಂತ ಕೆಳವರ‍್ಗದವರ ಮತ್ತು ಬಡವರ ಮಕ್ಕಳೇ ಹೆಚ್ಚು ಸೋಲುತ್ತಾರೆ.

ಇಂಗ್ಲಿಶ್ ನುಡಿಯನ್ನು ಕಲಿಕೆನುಡಿಯಾಗಿ ಬಳಸುವ ಮಕ್ಕಳಿಗೆ ತಮ್ಮ ತಾಯ್ನುಡಿಯ ಮೇಲೆ, ಮತ್ತು ಅದನ್ನು ಬಳಸುವ ತಾಯ್ತಂದೆಯರು, ನೆಂಟರು, ನೆರೆಹೊರೆಯವರು ಮೊದಲಾದವರ ಮೇಲೆ ಕೀಳರಿಮೆ ಬೆಳೆಯುತ್ತದೆ; ತಮ್ಮ ಕಲಿಕೆ ಮುಂದುವರಿದಂತೆಲ್ಲ ಮಕ್ಕಳು ಇವರಿಂದ ದೂರವಾಗುತ್ತಾ ಹೋಗುತ್ತಾರೆ. ಈ ತೊಡಕು ಮೇಲ್ವರ‍್ಗದವರ ಮಕ್ಕಳಿಗಿಂತಲೂ ಕೆಳವರ‍್ಗದ ಮಕ್ಕಳನ್ನು ಹೆಚ್ಚು ಕಾಡುತ್ತದೆ. ಯಾಕೆಂದರೆ, ಮೇಲ್ವರ‍್ಗದ ಮಕ್ಕಳ ತಾಯ್ತಂದೆಯರು, ನೆಂಟರು ಮತ್ತು ನೆರೆಹೊರೆಯವರು ಸಾಮಾನ್ಯವಾಗಿ ಇಂಗ್ಲಿಶ್ ತಿಳಿದಿರುತ್ತಾರೆ.

ಇಂತಹ ಹಲವು ಸಮಸ್ಯೆಗಳಿರುವುದರಿಂದಾಗಿ, ಕೆಳವರ‍್ಗದ ಮಕ್ಕಳು ಮೇಲೆ ಬರಬೇಕಿದ್ದಲ್ಲಿ, ಮತ್ತು ತಮ್ಮೊಂದಿಗೆ ತಮ್ಮ ಸಮಾಜವನ್ನೂ ಮೇಲೆ ತರಬೇಕಿದ್ದಲ್ಲಿ, ಅವರಿಗೆ ಕಲಿಕೆನುಡಿಯಾಗಿ ಕನ್ನಡವನ್ನೇ ಬಳಸುತ್ತಿರಬೇಕು. ಇದರೊಂದಿಗೆ ಇಂಗ್ಲಿಶ್ ನುಡಿಯನ್ನೂ ಒಂದು ವಿಶಯವಾಗಿ ಮಾತ್ರ ಕಲಿಸುತ್ತಿರಬೇಕಲ್ಲದೆ ಕಲಿಕೆನುಡಿಯಾಗಿ ಬಳಸಲು ಹೋಗಬಾರದು.

ಇಂಗ್ಲಿಶ್ ನುಡಿಯ ಕಲಿಕೆಯಲ್ಲಿ ಅವರು ಹಿಂದೆ ಬೀಳುತ್ತಿರುವುದಕ್ಕೆ ಅವರ ಕಲಿಕೆನುಡಿಯಾಗಿ ಕನ್ನಡವನ್ನು ಬಳಸುತ್ತಿರುವುದು ಕಾರಣವಲ್ಲ; ಇಂಗ್ಲಿಶ್ ನುಡಿಯನ್ನು ಅವರಿಗೆ ಶಾಲೆಯಲ್ಲಿ ಸರಿಯಾಗಿ ಕಲಿಸದಿರುವುದೇ ಕಾರಣ. ಹಾಗಾಗಿ, ಕಲಿಕೆನುಡಿಯನ್ನು ಬದಲಾಯಿಸುವುದರಿಂದ ಅವರು ಇಂಗ್ಲಿಶ್ ಕಲಿಕೆಯಲ್ಲಿ ಮುಂದೆ ಹೋಗುವ ಬದಲು, ಬೇರೆ ವಿಶಯಗಳ ಕಲಿಕೆಯಲ್ಲೂ ಹಿಂದೆ ಬೀಳಲು ತೊಡಗುತ್ತಾರೆ.

ಇವತ್ತು ಮುಂದೆ ಬಂದಿರುವ ಎಲ್ಲಾ ನಾಡುಗಳಲ್ಲೂ ಮಕ್ಕಳ ಕಲಿಕೆನುಡಿ ಅವರ ತಾಯ್ನುಡಿಯಾಗಿದೆ; ಇಂಗ್ಲಿಶ್‌ನಂತಹ ಬೇರೊಂದು ನುಡಿಯನ್ನು ಕಲಿಕೆನುಡಿಯಾಗಿ ಬಳಸುವ ಯಾವ ನಾಡೂ ಇದುವರೆಗೆ ಮುಂದೆ ಬಂದಿಲ್ಲ. ಇದಕ್ಕೆ ಕಾರಣವೇನೆಂದರೆ, ತಮ್ಮ ನಾಡಿನದಲ್ಲದ ಕಲಿಕೆನುಡಿಯಲ್ಲಿ ಕಲಿತವರು ನಾಡಿನ ಸಾಮಾನ್ಯ ಜನರಿಂದ ಬೇರಾಗಿಯೇ ಉಳಿಯುತ್ತಾರೆ, ಮತ್ತು ಅವರ ಕಲಿಕೆಯಿಂದ ಸಾಮಾನ್ಯ ಜನರಿಗೆ ಯಾವ ಪ್ರಯೋಜನವೂ ದೊರಕುವುದಿಲ್ಲ.

ಹಾಗಾಗಿ, ಕಲಿಯುವ ಮಕ್ಕಳ ವಯ್ಯಕ್ತಿಕ ಏಳಿಗೆಗೆ ಮಾತ್ರವಲ್ಲದೆ, ಅವರ ಸಮಾಜದ ಮತ್ತು ನಾಡಿನ ಏಳಿಗೆಗಾಗಿಯೂ ಕಲಿಕೆನುಡಿಯಾಗಿ ಅವರ ತಾಯ್ನುಡಿ ಇಲ್ಲವೇ ಪರಿಸರದ ನುಡಿಯನ್ನು ಬಳಸುವುದೇ ಸರಿಯಾದ ದಾರಿ.

(ಈ ಬರಹ ವಿಜಯ ಕರ‍್ನಾಟಕ ಸುದ್ದಿಹಾಳೆಯ ’ಎಲ್ಲರ ಕನ್ನಡ’ ಅಂಕಣದಲ್ಲಿ ಮೊದಲು ಮೂಡಿಬಂದಿತ್ತು)

ಮೂಲ : ಹೊನಲು

ಬರಹವನ್ನು ಮಾರ‍್ಪಡಿಸಿ ಗೆದ್ದವರು

ಜಗತ್ತಿನ ಹಲವು ನುಡಿಗಳಲ್ಲಿ ಇತ್ತೀಚೆಗೆ, ಎಂದರೆ ಕಳೆದ ನೂರು-ನೂರಯ್ವತ್ತು ವರ‍್ಶಗಳಲ್ಲಿ, ನೂರಾರು ವರ‍್ಶಗಳಿಂದ ಬಳಕೆಯಲ್ಲಿದ್ದ ಬರಹಗಳನ್ನು ಮಾರ‍್ಪಡಿಸಿ, ಅವುಗಳಲ್ಲಿ ಹೆಚ್ಚು ಕಡಿಮೆ ಓದುವ ಹಾಗೆಯೇ ಬರೆಯುವಂತೆ ಮಾಡಲಾಗಿದೆ, ಮತ್ತು ಇದರಿಂದಾಗಿ ಆ ನುಡಿಗಳನ್ನಾಡುವ ಜನರಲ್ಲಿ ಬರಹಬಲ್ಲವರ ಎಣಿಕೆ ತುಂಬಾ ಹೆಚ್ಚಾಗಿದೆ.

ಜನರ ಜೀವನದಲ್ಲಿ ಇತ್ತೀಚೆಗೆ ಬರಹ ಹೆಚ್ಚು ಹೆಚ್ಚು ಮುಕ್ಯವಾಗುತ್ತಿರುವುದು, ಮತ್ತು ಒಂದು ನಾಡಿನಲ್ಲಿರುವ ಎಲ್ಲಾ ಜನರೂ ಬರಹಬಲ್ಲವರಾಗದೆ ಆ ನಾಡಿನ ಏಳಿಗೆಯಾಗಲಾರದೆಂಬ ಪರಿಸ್ತಿತಿ ಉಂಟಾಗಿರುವುದು ಅವರು ಇಂತಹ ಮಾರ‍್ಪಾಡುಗಳನ್ನು ನಡೆಸಲು ಮುಕ್ಯ ಕಾರಣ.

ಬರಹಗಳನ್ನು ಎರಡು ಬಗೆಗಳಲ್ಲಿ ಈ ಕಾರಣಕ್ಕಾಗಿ ಮಾರ‍್ಪಡಿಸಲಾಗಿದೆ: ಅವುಗಳ ಬರಿಗೆ(ಅಕ್ಶರ)ಗಳಲ್ಲಿ ಬೇಕಾದವುಗಳನ್ನು ಮಾತ್ರ ಉಳಿಸಿಕೊಂಡು ಬೇಡದವುಗಳನ್ನು ತೆಗೆದುಹಾಕಿರುವುದು ಒಂದು ಬಗೆಯ ಮಾರ‍್ಪಾಡು, ಮತ್ತು ಬಳಕೆಯಲ್ಲಿರುವ ಬರಿಗೆಗಳನ್ನೇ ಬಿಟ್ಟುಕೊಟ್ಟು, ಅವುಗಳ ಬದಲಿಗೆ ಬೇರೆ ಬಗೆಯ ಬರಿಗೆಗಳನ್ನು ಬಳಸತೊಡಗಿರುವುದು ಇನ್ನೊಂದು ಬಗೆಯ ಮಾರ‍್ಪಾಡು.

ಗ್ರೀಕ್ ಬರಹದಲ್ಲಿ ಪದಗಳನ್ನು ಹಿಂದಿನ ಕಾಲದಲ್ಲಿದ್ದಂತೆ ಬರೆಯಲು ಹಲವು ಹೆಚ್ಚಿನ ಬರಿಗೆಗಳನ್ನು ಬಳಸಲಾಗುತ್ತಿತ್ತು; ಪದಗಳನ್ನು ಓದುವ ಹಾಗೆಯೇ ಬರೆಯುವಂತೆ ಮಾಡಲು, 1982ರಲ್ಲಿ ಬೇಡದಿರುವ ಬರಿಗೆಗಳನ್ನೆಲ್ಲ ಬಿಟ್ಟುಕೊಡಲಾಯಿತು. ಇವತ್ತು ಹೆಚ್ಚಿನ ಬರಹಗಳಲ್ಲೂ ಈ ಬರಿಗೆಗಳ ಬಳಕೆಯಿಲ್ಲ; ಕೆಲವರು ಗ್ರೀಕ್ ಪಂಡಿತರು ಮಾತ್ರ ಅವನ್ನು ಬಳಸುತ್ತಿದ್ದಾರೆ.

ಜಪಾನೀಸ್ ಬರಹದ ಕನ ಬರಿಗೆಗಳು ಒಂಬತ್ತನೇ ಶತಮಾನದಲ್ಲಿ ಸರಿಯಾಗಿದ್ದುವು; ಆದರೆ, ಆಮೇಲೆ ಮಾತಿನಲ್ಲಿ ನಡೆದ ಮಾರ‍್ಪಾಡುಗಳಿಂದಾಗಿ ಅವಕ್ಕೂ ಅವುಗಳ ಓದಿಗೂ ನಡುವೆ ಹಲವು ವ್ಯತ್ಯಾಸಗಳು ಮೂಡಿಬಂದುವು. 1946ರಲ್ಲಿ ಇವನ್ನು ಹೆಚ್ಚುಕಡಿಮೆ ಓದುವ ಹಾಗೆಯೇ ಬರೆಯುವಂತೆ ಮಾರ‍್ಪಡಿಸಲಾಯಿತು, ಮತ್ತು ಓದಿನಲ್ಲಿಲ್ಲದ ಕೆಲವು ಬರಿಗೆಗಳನ್ನು ಬಿಟ್ಟುಕೊಡಲಾಯಿತು.

ಕೊರಿಯನ್ ಬರಹದಲ್ಲಿ ಅವರವೇ ಆದ ಪದಗಳನ್ನು ಬರೆಯಲು ಹಂಗುಲ್ ಎಂಬ ತುಂಬಾ ಚನ್ನಾಗಿರುವ ಬರಿಗೆಗಳನ್ನು ಬಳಸಲಾಗುತ್ತಿದೆ; ಆದರೆ, ಚಯ್ನೀಸ್‌ನಿಂದ ಎರವಲು ಪಡೆದ ಪದಗಳನ್ನು ಬರೆಯಲು ತೊಡಕು ತೊಡಕಾಗಿರುವ ಚಯ್ನೀಸ್ ಮೂಲದ ಹಂಜ ಎಂಬ ಬರಿಗೆಗಳನ್ನು ಬಳಸಲಾಗುತ್ತಿದೆ. 1949ರಲ್ಲಿ ಈ ಚಯ್ನೀಸ್ ಎರವಲು ಪದಗಳನ್ನೂ ಹಂಗುಲ್‌ನಲ್ಲಿಯೇ ಬರೆಯುವ ನಿರ‍್ದಾರವನ್ನು ಉತ್ತರ ಕೊರಿಯಾದಲ್ಲಿ ಮಾಡಲಾಯಿತು, ಮತ್ತು ಇದರಿಂದಾಗಿ ಆ ನಾಡಿನಲ್ಲಿ ಓದುಬಲ್ಲವರ ಎಣಿಕೆ ತುಂಬಾ ಹೆಚ್ಚಾಯಿತು.

ದಕ್ಶಿಣ ಕೊರಿಯಾದಲ್ಲೂ ಹಂಜ ಬರಿಗೆಗಳ ಎಣಿಕೆಯನ್ನು ಸಾಕಶ್ಟು ಕಡಿಮೆ ಮಾಡಲಾಗಿದೆ, ಮತ್ತು ಅವನ್ನು ಎಲಿಮೆಂಟರಿ ಶಾಲೆಗಳಲ್ಲಿ ಕಲಿಸದಿರುವಂತೆ, ಮತ್ತು ಮಕ್ಕಳ ಪುಸ್ತಕಗಳಲ್ಲಿ, ಮತ್ತು ಎಲ್ಲಾ ಜನರೂ ಓದಬೇಕಾಗಿರುವ ಬರಹಗಳಲ್ಲಿ ಬಳಸದಿರುವಂತೆ ನೋಡಿಕೊಳ್ಳಲಾಗುತ್ತಿದೆ.

ಬರಹಗಳಲ್ಲಿ ಬರುವ ಪದಗಳನ್ನು ಓದುವ ಹಾಗೆಯೇ ಬರೆಯುವಂತೆ ಮಾಡುವುದಕ್ಕಾಗಿ ಟರ‍್ಕಿ, ಇಂಡೊನೇಶ್ಯಾ, ಮಲಯೇಶ್ಯಾ, ಸೋಮಾಲಿಯಾ ಮೊದಲಾದೆಡೆಗಳಲ್ಲಿ, ಮತ್ತು ಸೋವಿಯಟ್ ಯೂನಿಯನ್‌ನ ಹಲವು ನಾಡುಗಳಲ್ಲಿ ಅರೇಬಿಕ್ ಮೂಲದ ಬರಿಗೆಗಳನ್ನು ಬಿಟ್ಟುಕೊಟ್ಟು ರೋಮನ್ ಮೂಲದ ಬರಿಗೆಗಳನ್ನು ಬಳಕೆಗೆ ತರಲಾಗಿದೆ. ಇದರಿಂದಾಗಿ ಈ ನಾಡುಗಳಲ್ಲಿಯೂ ಬರಹಬಲ್ಲವರ ಎಣಿಕೆ ತುಂಬಾ ಹೆಚ್ಚಾಗಿದೆಯೆಂದು ಹೇಳಲಾಗುತ್ತಿದೆ.

ಇದಕ್ಕೆ ಬದಲು, ಅರೇಬಿಕ್ ಬರಿಗೆಗಳನ್ನು ಬಳಸುತ್ತಿರುವ ಇರಾನ್, ಇರಾಕ್ ಮೊದಲಾದ ಹಲವು ನಾಡುಗಳಲ್ಲಿ ಇವತ್ತಿಗೂ ಬರಹ ಬಲ್ಲವರ ಎಣಿಕೆ ತುಂಬಾ ಕಡಿಮೆಯಿದೆ. ಇದಕ್ಕೆ ಕೆಲವು ಸಾಮಾಜಿಕ ತೊಡಕುಗಳೂ ಕಾರಣವಿರಬಹುದು; ಆದರೆ, ಬರಹಗಳಲ್ಲಿ ಪದಗಳನ್ನು ಓದುವ ಹಾಗೆ ಬರೆಯದಿರುವುದು, ಮತ್ತು ಇದರಿಂದಾಗಿ ಬರಹವನ್ನು ಕಲಿಯುವ ಮತ್ತು ಬಳಸುವ ಕೆಲಸ ತುಂಬಾ ತೊಡಕಿನದಾಗಿರುವುದೂ ಒಂದು ಕಾರಣವೆಂಬುದರಲ್ಲಿ ಸಂಶಯವಿಲ್ಲ.

ಪದಗಳನ್ನು ಹೆಚ್ಚು ಕಡಿಮೆ ಓದುವ ಹಾಗೆಯೇ ಬರೆಯುವಂತೆ ಮಾಡಲು ಇತ್ತೀಚೆಗೆ ಬೇರೆ ಹಲವಾರು ನುಡಿಗಳ ಬರಹಗಳಲ್ಲೂ ಮಾರ‍್ಪಾಡುಗಳನ್ನು ನಡೆಸಲಾಗಿದೆ. ವಿಯೆಟ್ನಾಮ್‌ನಲ್ಲಿ ಚಯ್ನೀಸ್ ಬರಿಗೆಗಳ ಬದಲು ರೋಮನ್ ಮೂಲದ ಬರಿಗೆಗಳನ್ನು ಬಳಸಲು ತೊಡಗಿದುದರಿಂದಾಗಿ ಇವತ್ತು ವಿಯೆಟ್ನಮೀಸ್ ಬರಹಗಳಲ್ಲಿ ಚಯ್ನೀಸ್ ಎರವಲುಗಳನ್ನೂ ಓದುವ ಹಾಗೆಯೇ ಬರೆಯಲು ಸಾದ್ಯವಾಗಿದೆ; ಈ ಮಾರ‍್ಪಾಡನ್ನು ನಡೆಸಿದ ಬಳಿಕ ಅಲ್ಲಿಯೂ ಓದುಬಲ್ಲವರ ಎಣಿಕೆ ತುಂಬಾ ಹೆಚ್ಚಾಗಿದೆಯೆಂದು ಹೇಳಲಾಗುತ್ತದೆ.

ಯುರೋಪಿನ ಹಲವಾರು ನುಡಿಗಳಲ್ಲೂ ಇತ್ತೀಚೆಗೆ ಬರಹಗಳಲ್ಲಿ ಮಾರ‍್ಪಾಡುಗಳನ್ನು ನಡೆಸುವ ಮೂಲಕ ಓದಿಗೂ ಬರಹಕ್ಕೂ ನಡುವಿರುವ ಅಂತರವನ್ನು ಕಡಿಮೆ ಮಾಡಲಾಗಿದೆ. ಹೆಸರು(ನಾಮ)ಪದಗಳನ್ನು ಬರೆಯುವಾಗ ಅವುಗಳ ಮೊದಲಿಗೆ ದೊಡ್ಡ ಬರಿಗೆಯನ್ನು ಬಳಸಬೇಕೆಂಬ ಕಟ್ಟಲೆಯನ್ನು ಡೇನಿಶ್‌ನಲ್ಲಿ ಬಿಟ್ಟುಕೊಡಲಾಗಿದೆ; ಕೊಟ್ಟಹೆಸರುಗಳಲ್ಲಿ ಮಾತ್ರ ಈ ಕಟ್ಟಲೆಯನ್ನು ಉಳಿಸಿಕೊಳ್ಳಲಾಗಿದೆ.

ಜರ‍್ಮನಿ, ಆಸ್ಟ್ರಿಯಾ, ಮತ್ತು ಸ್ವಿಜರ್‌ಲೇಂಡ್‌ಗಳಲ್ಲಿಯೂ ಜರ‍್ಮನ್ ಬರಹಗಳಲ್ಲಿರುವ ಬರಿಗೆಗಳ ಬಳಕೆಯಲ್ಲಿ ಹಲವು ಮಾರ‍್ಪಾಡುಗಳನ್ನು ನಡೆಸಬೇಕೆಂಬ ತೀರ‍್ಮಾನಕ್ಕೆ ಇತ್ತೀಚೆಗೆ ಬರಲಾಗಿತ್ತು; ಪದಗಳನ್ನು ಹೆಚ್ಚುಕಡಿಮೆ ಓದುವ ಹಾಗೆಯೇ ಬರೆಯಬೇಕೆಂಬುದೇ ಈ ಮಾರ‍್ಪಾಡುಗಳ ಮುಕ್ಯ ಉದ್ದೇಶವಾಗಿತ್ತು. ಈ ತೀರ‍್ಮಾನವನ್ನು 1996ರಲ್ಲಿ ಬಳಕೆಗೆ ತರಲಾಯಿತು.
ಆದರೆ, ಇದನ್ನು ವಿರೋದಿಸುವವರೂ ಕೆಲವರಿದ್ದು, ಜರ‍್ಮನಿಯಲ್ಲಿ ಈ ಮಾರ‍್ಪಾಡುಗಳನ್ನು ಬಳಸುವುದು ಶಾಲೆಗಳಲ್ಲಿ ಮಾತ್ರ ಕಡ್ಡಾಯವಾಗಿದೆ. ಹೀಗಿದ್ದರೂ, ಇವತ್ತು ಹೆಚ್ಚಿನ ಬರಹಗಳಲ್ಲೂ ಈ ಮಾರ‍್ಪಡಿಸಿದ ಬರಿಗೆಗಳೇ ಬಳಕೆಯಾಗುತ್ತಿವೆ; ಕೆಲವು ಪತ್ರಿಕೆಗಳು ಮತ್ತು ಪುಸ್ತಕಗಳು ಮಾತ್ರ ಹಳೇ ಬರಹಕ್ಕೆ ಜೋತುಬಿದ್ದಿವೆ.

ಪೋರ‍್ಚುಗೀಸ್ ಬರಹದಲ್ಲೂ ಅದನ್ನು ಬಳಸುವ ಹಲವು ನಾಡುಗಳು ಒಟ್ಟುಸೇರಿ ಇಂತಹದೇ ಮಾರ‍್ಪಾಡನ್ನು ಬಳಕೆಗೆ ತಂದಿವೆ; ಇದಕ್ಕೆ ಮೊದಲು, ಪದಗಳನ್ನು ಅವುಗಳ ಮೂಲರೂಪ ಎಂತಹದು ಎಂಬುದನ್ನು ಸೂಚಿಸುವಂತೆ ಬರೆಯಲಾಗುತ್ತಿತ್ತು; ಆದರೆ, ಈ ರೂಪಗಳಿಗೂ ಅವನ್ನು ಓದುವ ಬಗೆಗೂ ನಡುವೆ ಯಾವ ಹೊಂದಾಣಿಕೆಯೂ ಇರಲಿಲ್ಲ; ಹಾಗಾಗಿ, ಅವುಗಳ ಈ ಹಳೆಯ ರೂಪಗಳನ್ನು ಬಿಟ್ಟುಕೊಟ್ಟು, ಆದಶ್ಟು ಮಟ್ಟಿಗೆ ಇವತ್ತು ಅವನ್ನು ಹೇಗೆ ಓದಲಾಗುತ್ತದೆಯೋ ಹಾಗೆಯೇ ಬರೆಯುವಂತೆ ಅವುಗಳಲ್ಲಿ ಮಾರ‍್ಪಾಡುಗಳನ್ನು ಮಾಡಲಾಗಿದೆ.

ಒಂದು ನಾಡಿನಲ್ಲಿ ಓದು-ಬರಹ ಬಲ್ಲವರ ಎಣಿಕೆ ಎಶ್ಟಿದೆ ಎಂಬುದು ಆ ನಾಡಿನ ಬರಹಗಳಲ್ಲಿ ಬಳಕೆಯಾಗುತ್ತಿರುವ ಬರಿಗೆಗಳನ್ನು ಕಲಿಯಲು ಮತ್ತು ಬಳಸಲು ಎಶ್ಟು ಸುಲಬ ಎಂಬುದರ ಮೇಲೆ ಮಾತ್ರವಲ್ಲದೆ, ಅಲ್ಲಿನ ಜನರ ಮೇಲೆ ಓದಿನ ಕುರಿತಾಗಿ ಎಂತಹ ಆಳ್ವಿಕೆಯ ಒತ್ತಡ, ನೆರೆಹೊರೆಯ ಒತ್ತಡ, ಮತ್ತು ಮನೆಯವರ ಒತ್ತಡವಿದೆ ಎಂಬುದರ ಮೇಲೂ ಅವಲಂಬಿಸಿರುತ್ತದೆ; ಹಾಗಾಗಿ, ಕನ್ನಡದ ಬರಿಗೆಗಳಲ್ಲಿ ಮಾರ‍್ಪಾಡುಗಳನ್ನು ಮಾಡದಿದ್ದರೂ ಬರಹ ಬಲ್ಲವರ ಎಣಿಕೆ ಹೆಚ್ಚಬಲ್ಲುದು ಎಂಬುದಾಗಿ ಕೆಲವರಿಗೆ ಅನಿಸಬಹುದು.

ಆದರೆ, ಬರಿಗೆಗಳ ತೊಡಕೂ ಬರಹ ಬಲ್ಲವರ ಎಣಿಕೆ ಕಡಿಮೆಯಿರಲು ಒಂದು ಕಾರಣ ಎಂಬುದನ್ನು ಕಂಡುಕೊಂಡು, ಮೇಲೆ ಕೊಟ್ಟಿರುವಂತಹ ಹಲವಾರು ನುಡಿಗಳ ಬರಹಗಳಲ್ಲಿ ಬರಿಗೆಗಳನ್ನು ಮಾರ‍್ಪಡಿಸಲಾಗಿದೆ, ಮತ್ತು ಹಾಗೆ ಮಾಡುವ ಮೂಲಕ ಬರಹ ಬಲ್ಲವರ ಎಣಿಕೆಯನ್ನು ಹೆಚ್ಚಿಸಿಕೊಳ್ಳಲಾಗಿದೆ ಎಂಬುದನ್ನು ಮರೆಯಬಾರದು.

ಇಂಗ್ಲಿಶ್‌ನಲ್ಲಿ ಉಲಿಕೆಗೂ ಬರಿಗೆಗೂ ನಡುವೆ ಹೊಂದಾಣಿಕೆ ತುಂಬಾ ಕಡಿಮೆಯಿದೆಯಾದರೂ ಅದನ್ನು ಕಲಿಯುವವರ ಎಣಿಕೆ ತುಂಬಾ ಹೆಚ್ಚಿದೆಯಲ್ಲ ಎಂದು ಕೆಲವರು ಹೇಳಬಹುದು. ಆದರೆ, ಇಂಗ್ಲಿಶ್ ಬರಹದ ಈ ಸ್ಪೆಲ್ಲಿಂಗ್ ತೊಡಕಿನಿಂದಾಗಿ, ಅದನ್ನು ಕಲಿಯುವ ಮಕ್ಕಳಿಗೆ ಬೇರೆ ಬರಹಗಳನ್ನು ಕಲಿಯಲು ಬೇಕಾಗುವ ಸಮಯದ ಮೂರು ಪಾಲಶ್ಟು ಸಮಯ ಬೇಕಾಗುತ್ತದೆ.

ಇದಲ್ಲದೆ, ಹಾಗೆ ಕಶ್ಟಪಟ್ಟು ಕಲಿತವರಲ್ಲಿಯೂ ಹಲವರಿಗೆ ಸರಿಯಾಗಿ ಓದುವುದು ಹೇಗೆ ಎಂಬುದೇ ಗೊತ್ತಾಗಿರುವುದಿಲ್ಲ, ಮತ್ತು ಇದರಿಂದಾಗಿ ಅವರು ಆದಶ್ಟು ಮಟ್ಟಿಗೆ ಓದಿನಿಂದ ದೂರವೇ ಉಳಿಯಲು ಬಯಸುತ್ತಾರೆ. ಅಮೆರಿಕಾದಂತಹ ಮುಂದುವರಿದ ನಾಡುಗಳಲ್ಲೂ ಈ ತೊಂದರೆಯಿದೆ.

ಕನ್ನಡದ ಮಕ್ಕಳು ಈ ರೀತಿ ಕನ್ನಡ ಬರಹಗಳನ್ನು ಕಲಿಯುವಲ್ಲಿ ಮತ್ತು ಬಳಸುವಲ್ಲಿ ತೊಂದರೆಗೊಳಗಾಗದಂತೆ ಮಾಡಲು, ಮತ್ತು ಅವನ್ನು ಎಲ್ಲಾ ಮಕ್ಕಳೂ ಸುಲಬವಾಗಿ ಮತ್ತು ಸರಿಯಾಗಿ ಓದಲು ಸಾದ್ಯವಾಗುವಂತೆ ಮಾಡಲು ಋ, ಷ, ಮಹಾಪ್ರಾಣ ಮೊದಲಾದ ಕನ್ನಡದ ಮಟ್ಟಿಗೆ ಬೇಡದಿರುವ ಕೆಲವು ಬರಿಗೆಗಳನ್ನು ಇವತ್ತು ಬಿಟ್ಟುಕೊಡಬೇಕಾಗಿದೆ. ಕನ್ನಡಿಗರಿಗೆ ತಮ್ಮ ನುಡಿಯ ಮೇಲಿರುವ ಕೀಳರಿಮೆಯನ್ನು ಇಲ್ಲವಾಗಿಸುವಲ್ಲಿಯೂ ಇದು ನೆರವಾಗಬಲ್ಲುದು.

(ಈ ಬರಹ ವಿಜಯ ಕರ‍್ನಾಟಕ ಸುದ್ದಿಹಾಳೆಯ ’ಎಲ್ಲರ ಕನ್ನಡ’ ಅಂಕಣದಲ್ಲಿ ಮೊದಲು ಮೂಡಿಬಂದಿತ್ತು)

ಮೂಲ : ಹೊನಲು

ನುಡಿಯರಿಮೆಯ ಇಣುಕುನೋಟ

ಎಲ್ಲರೂ ಬಳಸಬೇಕಿರುವ ಕನ್ನಡ ಬರಹದಲ್ಲಿ ಮಹಾಪ್ರಾಣ, ಋಕಾರ, ಷಕಾರ ಮೊದಲಾದ ಕೆಲವು ಕನ್ನಡಕ್ಕೆ ಬೇಡದ ಬರಿಗೆಗಳನ್ನು ಬಿಟ್ಟುಕೊಡುವುದು ಒಳ್ಳೆಯದು ಎಂಬುದಾಗಿ, ಇಲ್ಲವೇ ಕನ್ನಡ ಬರಹಗಳಲ್ಲಿ ಬಳಕೆಯಾಗುವ ಸಂಸ್ಕ್ರುತ ಎರವಲುಗಳನ್ನು ಒಂದು ಮಿತಿಯಲ್ಲಿ ಇರಿಸಿಕೊಳ್ಳುವುದು ಒಳ್ಳೆಯದು ಎಂಬುದಾಗಿ ಹೇಳಿದಾಗ, ಇದು ತಮಿಳಿನ ದ್ರಾವಿಡ ಕಳಗಂ ಹಿಡಿದ ದಾರಿ ಎಂಬ ಮರುನುಡಿ ಕೇಳಿಬರುತ್ತದೆ.

ಆದರೆ, ಈ ಮರುನುಡಿ ಸರಿಯಲ್ಲ. ನಾವು ತಮಿಳರಿಂದಕಲಿಯಬಹುದಾದ ವಿಶಯಗಳೂ ಕೆಲವಿವೆ; ಆದರೆ ಹಾಗೆಂದು, ಎಲ್ಲಾ ವಿಶಯಗಳಲ್ಲೂ ಅವರನ್ನು ಕಣ್ಣುಮುಚ್ಚಿ ಹಿಂಬಾಲಿಸಬೇಕೆಂದೇನಿಲ್ಲ. ನಮಗೆ ಸರಿಯೆಂದು ಕಂಡುದನ್ನು ಅವರಿಂದ ಕಲಿಯೋಣ, ಮತ್ತು ಬೇರೆ ವಿಶಯಗಳಲ್ಲಿ ನಮ್ಮದೇ ಆದ ದಾರಿಯನ್ನೂ ಕಂಡುಕೊಳ್ಳೋಣ.

ತಮ್ಮ ನುಡಿಯ ಕುರಿತಾಗಿ ತಮಿಳರಿಗೆ ಎಲ್ಲೆಯಿಲ್ಲದ ಹೆಮ್ಮೆ ಮತ್ತು ಒಲುಮೆಗಳಿವೆ; ಆದರೆ, ಕನ್ನಡದ ತಿಳಿವಿಗರಿಗೆ ತಮ್ಮ ನುಡಿಯ ಕುರಿತು ಕೀಳರಿಮೆಯಿದೆ. ಎಂತಹ ಹೊಸ ಪದವನ್ನು ಬೇಕಿದ್ದರೂ ತಮ್ಮ ನುಡಿಯಲ್ಲಿ ಉಂಟುಮಾಡಲು ಬರುತ್ತದೆ ಎಂಬುದನ್ನು ತಮಿಳರು ಕಂಡುಕೊಂಡಿದ್ದಾರೆ, ಮತ್ತು ಅದನ್ನು ಬಳಕೆಗೂ ತಂದಿದ್ದಾರೆ; ಆದರೆ, ಕನ್ನಡದ ತಿಳಿವಿಗರು ಹೊಸ ಪದಗಳನ್ನುಂಟುಮಾಡಲು ಸಂಸ್ಕ್ರುತದ ಮೊರೆಹೊಗದೆ ಬೇರೆ ದಾರಿಯೇ ಇಲ್ಲ ಎಂಬುದಾಗಿ ಕಯ್ಚೆಲ್ಲಿ ಕುಳಿತಿದ್ದಾರೆ.

ತಮಿಳಿನ ಅರಿಮೆಯ ಪದನೆರಕೆಗಳಲ್ಲಿ ನೂರಕ್ಕೆ ತೊಂಬತ್ತಯ್ದರಶ್ಟು ತಮಿಳು ಪದಗಳಿವೆ; ಆದರೆ, ಕನ್ನಡದ ಅರಿಮೆಯ ಪದನೆರಕೆಗಳಲ್ಲಿ ನೂರಕ್ಕೆ ಹತ್ತರಶ್ಟೂ ಕನ್ನಡದ ಪದಗಳಿಲ್ಲ! ಇಂತಹ ಕೆಲವು ವಿಶಯಗಳಲ್ಲಿ ನಾವು ತಮಿಳರನ್ನು ಹಿಂಬಾಲಿಸಿದಲ್ಲಿ, ಅದು ನಮ್ಮ ನುಡಿಯ ಮತ್ತು ಸಮಾಜದ ಏಳಿಗೆಗೆ ನೆರವಾಗಬಲ್ಲುದು.

ಆದರೆ, ಬೇರೆ ಕೆಲವು ವಿಶಯಗಳಲ್ಲಿ ಅವರು ಹಿಡಿದ ದಾರಿ ನಮಗೆ ಬೇಕಿಲ್ಲ. ದ್ರಾವಿಡ ಕಳಗಗಳು ನಡೆಸಿದ ಚಳವಳಿಯಿಂದಾಗಿ, ತಮಿಳು ಬರಹದಲ್ಲಿ ಬಳಕೆಯಾಗುವ ಸಂಸ್ಕ್ರುತ ಎರವಲುಗಳು ತುಂಬಾ ಕಡಿಮೆಯಾದುವೇನೋ ನಿಜ; ಆದರೆ, ಇದರಿಂದ ಬರಹದ ತಮಿಳಿಗೂ ತಮಿಳಿನ ಆಡುನುಡಿಗಳಿಗೂ ನಡುವಿದ್ದ ಅಂತರ ಕಡಿಮೆಯಾಗುವ ಬದಲು ಹೆಚ್ಚಾಗಿದೆ.

ಯಾಕೆಂದರೆ, ಬರಹದಿಂದ ತೆಗೆದು ಹಾಕಿದ ಸಂಸ್ಕ್ರುತ ಪದಗಳಿಗೆ ಬದಲಾಗಿ ಇವರು ಹಳೆತಮಿಳಿನ ಪದಗಳನ್ನೇ ಬಳಕೆಗೆ ತಂದಿದ್ದಾರೆ; ಇವು ಹೊಸತಮಿಳಿನ ಪದಗಳಿಗಿಂತ ಹಲವು ವಿಶಯಗಳಲ್ಲಿ ಬೇರಾಗಿವೆ. ಇದಲ್ಲದೆ, ಹೆಚ್ಚುಕಡಿಮೆ ಹದಿಮೂರನೇ ಶತಮಾನದ ತಮಿಳನ್ನೇ ಬರಹಗಳಲ್ಲಿ ಬಳಸಲು ತೊಡಗಿದ್ದಾರೆ. ಇದು ಕನ್ನಡ ಬರಹಗಳಲ್ಲಿ ಇವತ್ತು ಹೊಸಗನ್ನಡದ ಬದಲು ಹಳೆಗನ್ನಡವನ್ನು ಬಳಸಲು ಹೊರಡುವ ಹಾಗೆ ಎನ್ನಬಹುದು.

ಇಂತಹ ತಮಿಳರ ದಾರಿ ನಮಗೆ ಬೇಕಾಗಿಲ್ಲ. ಕನ್ನಡ ಬರಹದಲ್ಲಿ ಯಾವ ಮಾರ‍್ಪಾಡನ್ನು ಮಾಡುವುದಿದ್ದರೂ ಅದಕ್ಕೆ ಕನ್ನಡ ಬರಹಕ್ಕೂ ಕನ್ನಡದ ಆಡುನುಡಿಗಳಿಗೂ ನಡುವಿರುವ ವ್ಯತ್ಯಾಸವನ್ನು ಕಡಿಮೆಮಾಡುವುದೇ ಮುಕ್ಯ ಗುರಿಯಾಗಿರಬೇಕು. ಕನ್ನಡಕ್ಕೆ ಬೇಕಿಲ್ಲದ ಮಹಾಪ್ರಾಣ, ಋಕಾರ, ಷಕಾರಗಳನ್ನು ಬರಹದಲ್ಲಿ ಬಳಸದಿರುವುದು, ಮತ್ತು ಹೆಚ್ಚು ಹೆಚ್ಚು ಕನ್ನಡದವೇ ಆದ ಪದಗಳನ್ನು ಬಳಸುವುದು ಎಂಬ ಈ ಎರಡು ಮಾರ‍್ಪಾಡುಗಳಿಗೂ ಇದೇ ಮುಕ್ಯ ಗುರಿಯಾಗಿದೆ.

ಇನ್ನು ತಮಿಳು ಬರಹದಲ್ಲಿ ಮಹಾಪ್ರಾಣ, ಋಕಾರ, ಗಜಡದಬ ಮೊದಲಾದ ಕೆಲವು ಬರಿಗೆಗಳು ಬಳಕೆಯಾಗದಿರುವುದಕ್ಕೆ ದ್ರಾವಿಡ ಕಳಗಗಳು ಕಾರಣವಲ್ಲ. ಇತ್ತೀಚೆಗೆ ನಡೆಸಿದ ಯಾವ ಮಾರ‍್ಪಾಡೂ ಅದಕ್ಕೆ ಕಾರಣವಲ್ಲ. ಬ್ರಾಹ್ಮೀಲಿಪಿಯನ್ನು ತಮಿಳಿಗೆ ಅಳವಡಿಸುವ ಸಮಯದಲ್ಲೇನೇ, ಎಂದರೆ ಸುಮಾರು ಎರಡು ಸಾವಿರ ವರ‍್ಶಗಳಶ್ಟು ಹಿಂದೆಯೇ ತಮಿಳು ಬರಹದಲ್ಲಿ ಈ ಬರಿಗೆಗಳನ್ನು ಬಳಸದಿರಲು ತೀರ‍್ಮಾನಿಸಲಾಗಿತ್ತು.

ಆವತ್ತಿನ ತಮಿಳು ಓದಿಗೆ ಈ ಬರವಣಿಗೆ ಸರಿಯಾಗಿಯೂ ಇದ್ದಿರಬೇಕು; ಆದರೆ, ಆಮೇಲೆ ತಮಿಳು ನುಡಿಯಲ್ಲಿ ಹಲವಾರು ಮಾರ‍್ಪಾಡುಗಳು ನಡೆದಿದ್ದು, ಇದರಿಂದಾಗಿ ಇವತ್ತಿನ ಓದಿಗೂ ಬರಹಕ್ಕೂ ನಡುವೆ ಹಲವು ವ್ಯತ್ಯಾಸಗಳು ಮೂಡಿಬಂದಿವೆ. ಈ ವ್ಯತ್ಯಾಸಗಳನ್ನನುಸರಿಸಿ ತಮಿಳು ಬರಹದಲ್ಲಿ ಹೆಚ್ಚಿನ ಮಾರ‍್ಪಾಡನ್ನೇನೂ ನಡೆಸಿಲ್ಲವಾದ ಕಾರಣ, ಅದರ ಬಳಕೆಯಲ್ಲಿ ಇವತ್ತು ಕೆಲವು ತೊಡಕುಗಳು ಕಾಣಿಸಿಕೊಳ್ಳುತ್ತಿವೆ.

ಸಂಸ್ಕ್ರುತ ಕಾವ್ಯಗಳನ್ನು ಇಲ್ಲವೇ ಬೇರೆ ಸಂಸ್ಕ್ರುತ ಬರಹಗಳನ್ನು ಬರೆಯಲು ಬೇಕಾಗುವ ಹಲವು ಹೆಚ್ಚಿನ ಬರಿಗೆಗಳನ್ನು ತಮಿಳು ಬರಹದಲ್ಲೇನೇ ಉಳಿಸಿಕೊಳ್ಳುವ ಬದಲು, ಅವರು ಗ್ರಂತ ಲಿಪಿಯೆಂಬ ಬೇರೆಯೇ ಒಂದು ಬಗೆಯ ಬರಹವನ್ನು ಬಳಕೆಗೆ ತಂದಿದ್ದರು. ಹಾಗಾಗಿ, ಈ ಬರಿಗೆಗಳ ತೊಡಕು ಅವರ ಬರಹವನ್ನು ತಟ್ಟಿಲ್ಲ.

ಕನ್ನಡ ಬರಹ ಉತ್ತರದಿಂದ ವಲಸೆಬಂದ ಬ್ರಾಹ್ಮಣರ ಕೊಡುಗೆಯಾಗಿದೆ; ಈ ಬ್ರಾಹ್ಮಣರು ಆರ‍್ಯರಾಗಿದ್ದು, ಸಂಸ್ಕ್ರುತದ ಮೇಲೆ ಅವರಿಗೆ ಹೆಚ್ಚಿನ ಮಮತೆ ಮತ್ತು ಪೂಜ್ಯಬಾವವಿತ್ತು. ಹಾಗಾಗಿ, ಅವರು ಕನ್ನಡದ ಬರಹದಲ್ಲಿ ಸಂಸ್ಕ್ರುತ ಬರಹಕ್ಕೆ ಬೇಕಾಗುವ ಎಲ್ಲಾ ಬರಿಗೆಗಳನ್ನೂ, ಅವು ಕನ್ನಡಕ್ಕೆ ಬೇಡವಾಗಿದ್ದರೂ, ಉಳಿಸಿಕೊಂಡಿದ್ದರು, ಮತ್ತು ಕನ್ನಡಕ್ಕೆ ಬೇಕಾಗುವ ಎ, ಒ, ಱ, ೞದಂತಹ ಕೆಲವು ಹೆಚ್ಚಿನ ಬರಿಗೆಗಳನ್ನೂ ಹೊಸದಾಗಿ ಸೇರಿಸಿಕೊಂಡಿದ್ದರು.

ಮೊನ್ನೆ ಮೊನ್ನೆವರೆಗೂ ಕನ್ನಡ ಬರಹ ಮುಕ್ಯವಾಗಿ ಬ್ರಾಹ್ಮಣರ ಬಳಕೆಯಲ್ಲೇ ಉಳಿದುಕೊಂಡಿತ್ತು; ಕೆಳವರ‍್ಗದ ಜನರು ಅದರಿಂದ ದೂರವೇ ಉಳಿದಿದ್ದರು. ತುಂಬಾ ಸಂಸ್ಕ್ರುತ ಪದಗಳನ್ನು ಬಳಸುವ, ಮತ್ತು ಕನ್ನಡಕ್ಕೆ ಬೇಕಿಲ್ಲದ ಹಲವು ಬರಿಗೆಗಳನ್ನು ಬಳಸುವ ಈ ಬರಹವೂ ಅವರು ಈ ರೀತಿ ಅದರಿಂದ ದೂರ ಉಳಿಯಲು ಒಂದು ಕಾರಣವಾಗಿತ್ತು.

ಆದರೆ, ಇವತ್ತು ಬರಹಕ್ಕೆ ಕಳೆದ ಎರಡು ಸಾವಿರ ವರ‍್ಶಗಳಲ್ಲೂ ಇಲ್ಲದಿದ್ದಂತಹ ಮೇಲ್ಮೆ ದೊರೆತಿದೆ; ಇವತ್ತಿನ ಸಮಾಜದಲ್ಲಿ ಬರಹದ ಅರಿವಿಲ್ಲದವರು ಯಾರೂ ಮುಂದೆ ಬರಲು ಸಾದ್ಯವೇ ಇಲ್ಲ ಎಂಬಂತಹ ಪರಿಸ್ತಿತಿಯುಂಟಾಗಿದೆ; ಇದಲ್ಲದೆ, ಎಲ್ಲಾ ಜನರೂ ಬರಹಬಲ್ಲವರಾಗದೆ ಇವತ್ತು ಯಾವ ಸಮಾಜವೂ ಏಳಿಗೆಹೊಂದಲಾರದು. ಹಾಗಾಗಿ, ಕನ್ನಡಿಗರ, ಅವರ ಸಮಾಜದ, ಮತ್ತು ಅವರ ಬರಹದ ಏಳಿಗೆಗಾಗಿ, ಇವತ್ತು ಕನ್ನಡ ಬರಹ ಎಲ್ಲರನ್ನೂ ತಲಪುವಂತೆ ಮಾಡಬೇಕಾಗಿದೆ, ಮತ್ತು ಇದಕ್ಕಾಗಿ ಕನ್ನಡಕ್ಕೆ ಬೇಕಿಲ್ಲದ ಹಲವು ಹೆಚ್ಚಿನ ಬರಿಗೆಗಳನ್ನು ಬಿಟ್ಟುಕೊಡಬೇಕಾಗಿದೆ.

ಇಲ್ಲಿ ಇನ್ನೊಂದು ವಿಶಯವನ್ನೂ ಗಮನಿಸಬೇಕಾಗಿದೆ: ಕನ್ನಡ ಬರಹಗಳಲ್ಲಿ ಬಳಕೆಯಾಗುವ ಸಂಸ್ಕ್ರುತ ಎರವಲುಗಳನ್ನು ಕಡಿಮೆಮಾಡಬೇಕು ಎಂದು ಹೇಳಿದರೆ, ದ್ರಾವಿಡ ಕಳಗಂನವರು ಹೇಳುತ್ತಿದ್ದ ಹಾಗೆ, ಸಂಸ್ಕ್ರುತ ಪದಗಳನ್ನು ಬರಹಗಳಲ್ಲಿ ಬಳಸಲೇ ಕೂಡದು ಎಂದು ಹೇಳಿದ ಹಾಗಾಗುವುದಿಲ್ಲ. ನಿಜಕ್ಕೂ ಹಾಗೆ ಹೇಳಲಾಗಿದೆಯಾದರೆ, ಸಂಸ್ಕ್ರುತ ಎರವಲುಗಳನ್ನು ಕನ್ನಡದಲ್ಲಿ ಬರೆಯುವಾಗ ಮಹಾಪ್ರಾಣ, ಋಕಾರ ಮೊದಲಾದವುಗಳನ್ನು ಬಳಸಬೇಕಾಗಿಲ್ಲ ಎಂಬ ಇನ್ನೊಂದು ಹೇಳಿಕೆ ಬೇಕಾಗುವುದೇ ಇಲ್ಲ!

ಕನ್ನಡ ಬರಹಗಳಲ್ಲಿ ಬಳಕೆಯಾಗುವ ಸಂಸ್ಕ್ರುತ ಎರವಲುಗಳ ಎಣಿಕೆ ಹೆಚ್ಚಾದಾಗಲೆಲ್ಲ, ಅದನ್ನು ಕಡಿಮೆ ಮಾಡಬೇಕೆಂಬುದಾಗಿ ಹಿಂದಿನಿಂದಲೂ ಕನ್ನಡದ ಬರಹಗಾರರು ಹೇಳುತ್ತಾ ಬಂದಿದ್ದಾರೆ. ಕವಿರಾಜಮಾರ‍್ಗಕಾರನಿಂದ ಹಿಡಿದು ಬಿಎಂಶ್ರೀಯವರ ವರೆಗೂ ಹಲವು ಮಂದಿ ಈ ವಿಶಯದಲ್ಲಿ ತಮ್ಮ ಬೇಸರವನ್ನು ಹೊರಗೆಡಹಿದ್ದಾರೆ.

ಇವತ್ತು ಅರಿಮೆಯ (ವಿಜ್ನಾನದ) ಬರಹಗಳಿಗೆ ಬೇಕಾಗುವ ಹೊಸ ಪದಗಳನ್ನೆಲ್ಲ ಸಂಸ್ಕ್ರುತದ ಪದ ಮತ್ತು ಒಟ್ಟುಗಳನ್ನು ಬಳಸಿ ಹೊಸದಾಗಿ ಉಂಟುಮಾಡಿಕೊಳ್ಳಲಾಗುತ್ತಿದೆ; ಕನ್ನಡದ ಪದ ಮತ್ತು ಒಟ್ಟುಗಳನ್ನು ತುಂಬಾ ಅಪರೂಪವಾಗಿ ಮಾತ್ರವೇ ಬಳಸಿಕೊಳ್ಳಲಾಗುತ್ತಿದೆ. ಇದರಿಂದಾಗಿ, ಅರಿಮೆಯ ಪದನೆರಕೆಗಳಲ್ಲಿ ಕನ್ನಡದವೇ ಆದ ಪದಗಳಿರುವುದು ತೀರಾ ಕಡಿಮೆ.

ಇಂತಹ ಪದನೆರಕೆಗಳನ್ನು ‘ಕನ್ನಡ’ದವೆಂದು ಹೇಳುವುದೇ ವಿಚಿತ್ರವಾಗಿ ಕಾಣಿಸುತ್ತದೆ. ನಿಜಕ್ಕೂ ಈ ರೀತಿ ಇಂಗ್ಲಿಶ್ ಪದಗಳಿಗೆ ಬದಲಾಗಿ ಸಂಸ್ಕ್ರುತ ಪದಗಳನ್ನು ಬಳಸುವ ಬದಲು, ಇಂಗ್ಲಿಶ್ ಪದಗಳನ್ನು ಹಾಗೆಯೇ ಎರವಲು ಪಡೆಯುವುದೇ ಕನ್ನಡಿಗರ ಮಟ್ಟಿಗೆ ಹೆಚ್ಚು ನೆರವಾಗಬಲ್ಲುದು; ಯಾಕೆಂದರೆ, ಮುಂದೆ ಹೆಚ್ಚಿನ ತಿಳಿವನ್ನು ಪಡೆಯಲು ಅವರು ಇಂಗ್ಲಿಶ್ ಬರಹಗಳನ್ನು ಓದಬೇಕಾಗುತ್ತದೆಯಲ್ಲದೆ, ಸಂಸ್ಕ್ರುತದಲ್ಲಿ ಅವರಿಗೆ ಇವತ್ತಿನ ಅರಿಮೆಗಳ ಕುರಿತಾಗಿ ಎಂತಹ ಓದೂ ದೊರಕಲಾರದು.

ಆದರೆ, ಈ ವಿಶಯಗಳ ಕುರಿತಾಗಿ ಮಕ್ಕಳಿಗೆ ಅಡಿಕಲಿಕೆ ದೊರೆಯುವಂತೆ ಮಾಡಲು, ಮತ್ತು ಆಳವಾದ ತಿಳಿವು ದೊರೆಯುವಂತೆ ಮಾಡಲು, ಸಂಸ್ಕ್ರುತ ಇಲ್ಲವೇ ಇಂಗ್ಲಿಶ್ ಪದಗಳನ್ನು ಬಳಸುವ ಬದಲು ನಮ್ಮವೇ ಆದ ಕನ್ನಡ ಪದಗಳನ್ನು ಬಳಸುವುದೇ ಸರಿಯಾದ ದಾರಿ.

(ಈ ಬರಹ ವಿಜಯ ಕರ‍್ನಾಟಕ ಸುದ್ದಿಹಾಳೆಯ ’ಎಲ್ಲರ ಕನ್ನಡ’ ಅಂಕಣದಲ್ಲಿ ಮೊದಲು ಮೂಡಿಬಂದಿತ್ತು)

ಮೂಲ : ಹೊನಲು

ನಿಮ್ಮ ಮಗುವಿಗೆ ಇಂಗ್ಲಿಶ್ ನುಡಿ ಮಾತ್ರ ಸಾಕೇ

ಇವತ್ತು ಹಲವು ಜನರು ತಮ್ಮ ಮಕ್ಕಳನ್ನು ಇಂಗ್ಲಿಶ್ಕಲಿಕೆನುಡಿಯ ಶಾಲೆಗಳಿಗೆ ಕಳುಹಿಸುತ್ತಿದ್ದಾರೆ; ಇಂತಹ ಹಲವು ಶಾಲೆಗಳಲ್ಲಿ ಮಕ್ಕಳು ಇಂಗ್ಲಿಶ್ ನುಡಿಯನ್ನು ಮಾತ್ರ ಬಳಸಬೇಕು, ಕನ್ನಡವನ್ನು ಬಳಸಲೇ ಕೂಡದು ಎಂಬ ಒಂದು ಕಟ್ಟಲೆಯನ್ನು ಮಾಡಿರುತ್ತಾರೆ. ಮಕ್ಕಳು ಶಾಲೆಯಲ್ಲಿ ಇಂಗ್ಲಿಶ್ ನುಡಿಯನ್ನು ಮಾತ್ರವೇ ಬಳಸುತ್ತಿದ್ದಲ್ಲಿ ಅವರಿಗೆ ಅದನ್ನು ಬೇಗನೆ ಮತ್ತು ತಪ್ಪಿಲ್ಲದೆ ಬಳಸಲು ಬರಬಹುದೆಂಬ ತಪ್ಪು ಅನಿಸಿಕೆಯೇ ಈ ಕಟ್ಟಲೆಗೆ ಕಾರಣ.

ಕೆಲವು ಮನೆಗಳಲ್ಲಿಯೂ ಇದೇ ಕಾರಣಕ್ಕಾಗಿ ಮಕ್ಕಳೊಂದಿಗೆ ಅವರ ತಾಯ್ತಂದೆಯರು ಇಂಗ್ಲಿಶ್ ನುಡಿಯನ್ನೇ ಬಳಸತೊಡಗುತ್ತಾರೆ. ಆದರೆ, ಹೀಗೆ ಮಾಡುವುದರಿಂದ ಮಕ್ಕಳು ಚಿಕ್ಕಂದಿನಲ್ಲಿ ಕಲಿತಿದ್ದ ಕನ್ನಡ ನುಡಿಯನ್ನು ಮರೆಯುತ್ತಾ ಹೋಗುತ್ತಾರೆ, ಮತ್ತು ಕೊನೆಗೆ ಅವರಿಗೆ ಅದರಲ್ಲಿ ಮಾತನಾಡಲು ಬರುವುದಿಲ್ಲವೆಂದೇ ಆಗುತ್ತದೆ.

ಮಕ್ಕಳ ಬೆಳವಣಿಗೆಯ ಮಟ್ಟಿಗೆ ಇದು ಸರಿಯೇ ಎಂಬುದನ್ನು ಈ ಶಾಲೆಗಳನ್ನು ನಡೆಸುವವರಾಗಲಿ, ಇಲ್ಲವೇ ಮಕ್ಕಳ ತಾಯಿತಂದೆಯರಾಗಲಿ ಪರಿಶೀಲಿಸಿದ ಹಾಗಿಲ್ಲ. ಇಂಗ್ಲಿಶ್ ಕಲಿಯುವ ಮಕ್ಕಳು ಅದರೊಂದಿಗೆ ತರಗತಿಯಲ್ಲಿ ತಮ್ಮ ತಾಯ್ನುಡಿಯನ್ನೂ ಬಳಸುತ್ತಿದ್ದರೆ ಅವರಿಗೆ ಸರಿಯಾಗಿ ಇಂಗ್ಲಿಶ್ ಕಲಿಯಲು ಬರುವುದಿಲ್ಲ ಎಂಬ ಅನಿಸಿಕೆ ಹಿಂದಿನ ಕಾಲದಲ್ಲಿತ್ತು; ಆದರೆ, ಕಳೆದ ಕೆಲವು ವರ‍್ಶಗಳಲ್ಲಿ, ಅದರಲ್ಲೂ ಕಳೆದ ಹತ್ತು-ಹದಿನಯ್ದು ವರ‍್ಶಗಳಲ್ಲಿ ನಡೆಸಿದ ಅರಕೆಗಳೆಲ್ಲವೂ ಇದು ತಪ್ಪು ಅನಿಸಿಕೆಯೆಂಬುದನ್ನು ತೋರಿಸಿಕೊಟ್ಟಿವೆ.

ಒಂದು ನುಡಿಯನ್ನು ಶಾಲೆಗೆ ಬರುವ ಮೊದಲೇ ಕಲಿತಿರುವ ಮಕ್ಕಳು ಎರಡನೇ ನುಡಿಯನ್ನು ಆ ನುಡಿಯ ಮೂಲಕವೇನೇ ಕಲಿಯಬೇಕಾಗುತ್ತದೆ; ಮೊದಲಿಗೆ ಅವರು ತಮ್ಮ ತಾಯ್ನುಡಿಯ ಪದಗಳನ್ನು ಮತ್ತು ಕಟ್ಟಲೆಗಳನ್ನು ಎರಡನೇ ನುಡಿಯ ಮಾತುಗಳಲ್ಲಿ ಸೇರಿಸಿ ಹೇಳಬಹುದು; ಆದರೆ, ಇದು ಅವರ ಕಲಿಕೆಯ ಒಂದು ಹಂತವನ್ನು ಸೂಚಿಸುತ್ತದೆಯಲ್ಲದೆ, ಅವರು ಕಲಿಕೆಯಲ್ಲಿ ಗೊಂದಲಗೊಂಡಿರುವುದನ್ನಾಗಲಿ, ತಪ್ಪು ದಾರಿ ಹಿಡಿದಿರುವುದನ್ನಾಗಲಿ ಸೂಚಿಸುವುದಿಲ್ಲ. ಕಲಿಕೆ ಮುಂದುವರಿದಂತೆಲ್ಲ ಅವರು ಈ ಎರಡು ನುಡಿಗಳ ಪದಗಳನ್ನು ಮತ್ತು ಕಟ್ಟಲೆಗಳನ್ನು ಬೇರೆ ಬೇರಾಗಿ ಇರಿಸಿಕೊಳ್ಳಲು ಕಲಿಯುತ್ತಾರೆ.

ಮೊದಲನೇ ನುಡಿಯನ್ನು ಅವರು ಶಾಲೆಯಲ್ಲಿ ಬಳಸಲೇಬಾರದೆಂಬುದಾಗಿ ಅವರ ಮೇಲೆ ಒತ್ತಾಯ ಹೇರಿದರೆ, ಅವರಿಗೆ ಅದರ ಮೇಲೆ ಕೀಳರಿಮೆಯುಂಟಾಗುತ್ತದೆ ಮಾತ್ರವಲ್ಲ, ಅವರ ಎರಡನೇ ನುಡಿಯ ಕಲಿಕೆಯೂ ತೊಡಕಿನದಾಗುತ್ತದೆ. ಮಕ್ಕಳಿಗೆ ಚನ್ನಾಗಿ ತಿಳಿದಿರುವ ನುಡಿಯನ್ನು ಉಳಿಸಿ, ಅದರ ಮೂಲಕ ಎರಡನೆಯ ನುಡಿಯನ್ನು ಕಲಿಸುವುದೇ ಸರಿಯಾದ ದಾರಿ.

ಇದಲ್ಲದೆ, ಈ ಎರಡು ನುಡಿಗಳ ಬಳಕೆಯಲ್ಲೂ ಮಕ್ಕಳು ಒಂದೇ ರೀತಿಯಲ್ಲಿ ಪಳಗುವಂತೆ ಮಾಡುವ ಮೂಲಕ, ಅವರು ಒಂದು ನುಡಿಯನ್ನು ಮಾತ್ರವೇ ಬಳಸಬಲ್ಲ ಮಕ್ಕಳಿಗಿಂತ ಜಾಣತನದಲ್ಲಿ, ಬುದ್ದಿವಂತಿಕೆಯಲ್ಲಿ, ಮತ್ತು ನುಡಿಯನ್ನು ಬಳಸಲು ಬೇಕಾಗುವ ಹಲವು ಬಗೆಯ ಚಳಕಗಳಲ್ಲಿ ಮುಂದೆ ಹೋಗುತ್ತಾರೆ ಎಂಬುದನ್ನು ಇತ್ತೀಚೆಗೆ ನಡೆಸಿದ ಹಲವು ಅರಕೆಗಳು ತೋರಿಸಿಕೊಟ್ಟಿವೆ.

ಎರಡು ನುಡಿಗಳನ್ನು ಬಳಸುವವರು ಎರಡು ಬಗೆಯ ಪದಗಳನ್ನು ಮತ್ತು ಕಟ್ಟಲೆಗಳನ್ನು ತಿಳಿದುಕೊಳ್ಳಬೇಕಾಗುತ್ತದೆ, ಮತ್ತು ಅವುಗಳಲ್ಲಿ ಒಂದು ನುಡಿಯನ್ನು ಬಳಸುವಾಗ ಆ ನುಡಿಗೆ ಸಂಬಂದಿಸಿದ ಪದಗಳು ಮತ್ತು ಕಟ್ಟಲೆಗಳು ಮಾತ್ರ ಬಳಕೆಯಾಗುವಂತೆ, ಮತ್ತು ಇನ್ನೊಂದು ನುಡಿಗೆ ಸಂಬಂದಿಸಿದ ಪದಗಳು ಮತ್ತು ಕಟ್ಟಲೆಗಳು ಬಳಕೆಯಾಗದಂತೆ ನೋಡಿಕೊಳ್ಳಬೇಕಾಗುತ್ತದೆ. ಹೀಗೆ ಮಾಡುವಲ್ಲಿ ಪಳಗಿರುವ ಮಕ್ಕಳು ತಾವು ಕಲಿತ ಈ ಚಳಕವನ್ನು ಬೇರೆ ಕೆಲಸಗಳಲ್ಲೂ ಬಳಸಬಲ್ಲರು.

ಎತ್ತುಗೆಗಾಗಿ, ಯಾವುದಾದರೊಂದು ತೊಡಕನ್ನು ಬಗೆಹರಿಸಬೇಕಾದಾಗ, ಈ ಮಕ್ಕಳು ಅದಕ್ಕೆ ಸಂಬಂದಿಸಿದ ವಿಶಯಗಳನ್ನು ಮಾತ್ರವೇ ಗಮನದಲ್ಲಿರಿಸಿಕೊಂಡು, ಅದಕ್ಕೆ ಸಂಬಂದಿಸದ ವಿಶಯಗಳನ್ನು ದೂರ ಇರಿಸಬಲ್ಲರು. ಹಾಗಾಗಿ, ತೊಡಕುಗಳನ್ನು ಬಗೆಹರಿಸುವಲ್ಲಿ ಅವರು ಒಂದು ನುಡಿಯಲ್ಲಿ ಮಾತ್ರವೇ ಪಳಗಿರುವ ಮಕ್ಕಳಿಗಿಂತ ಮುಂದಿರುತ್ತಾರೆ.

ಎರಡು ನುಡಿಗಳಲ್ಲಿ ಪಳಗಿರುವ ಮಕ್ಕಳು ಸಂದರ‍್ಬಕ್ಕನುಸಾರವಾಗಿ ಒಂದು ನುಡಿಯಿಂದ ಇನ್ನೊಂದು ನುಡಿಗೆ ನೆಗೆಯುತ್ತಿರಬಲ್ಲರು; ಒಂದು ಮಾತನ್ನು ಒಂದು ನುಡಿಯಲ್ಲಿ ಹೇಳಿ, ಒಡನೆಯೇ ಇನ್ನೊಂದು ಮಾತನ್ನು ಇನ್ನೊಂದು ನುಡಿಯಲ್ಲಿ ಹೇಳಬಲ್ಲರು; ಎಂದರೆ, ಒಂದು ನುಡಿಯ ಪದ ಮತ್ತು ಕಟ್ಟಲೆಗಳನ್ನು ಬಳಸುತ್ತಿರುವವರು ಒಡನೆಯೇ ಇನ್ನೊಂದು ನುಡಿಯ ಪದ ಮತ್ತು ಕಟ್ಟಲೆಗಳನ್ನು ಬಳಸಲು ತೊಡಗಬಲ್ಲರು. ಯಾವ ಸಂದರ‍್ಬದಲ್ಲಿ ಯಾವ ನುಡಿಯನ್ನು ಬಳಸಬೇಕು ಎಂಬುದೂ ಅವರಿಗೆ ತಿಳಿದಿರುತ್ತದೆ.

ಎರಡು ನುಡಿಗಳಲ್ಲಿ ಪಳಗುತ್ತಿರುವಾಗ ಪಡೆದ ಈ ಚಳಕವನ್ನೂ ಅವರು ಬೇರೆ ಕೆಲಸಗಳನ್ನು ನಡೆಸುವಲ್ಲಿ ಬಳಸಿಕೊಳ್ಳಬಲ್ಲರು. ಹಾಗಾಗಿ, ಒಂದು ನುಡಿಯನ್ನು ಮಾತ್ರವೇ ತಿಳಿದಿರುವ ಮಕ್ಕಳ ಮನಸ್ಸಿಗಿಂತ ಅವರ ಮನಸ್ಸು ಹೊಸ ಹೊಸ ಸಂದರ‍್ಬಗಳಿಗೆ ಹೊಂದಿಕೊಳ್ಳುವಂತಹ ಗುಣವನ್ನು ಹೆಚ್ಚು ಪಡೆದಿರುತ್ತದೆ, ಮತ್ತು ಈ ಕಾರಣಕ್ಕಾಗಿ ಅವರಿಗೆ ಹೆಚ್ಚು ತಾಳ್ಮೆಯಿರುತ್ತದೆ.

ಬೇರ‍್ಪಡಿಸುವುದು ಮತ್ತು ಒಂದೆಡೆ ಸೇರಿಸುವುದು ಎಂಬುದಾಗಿ ಎರಡು ಬಗೆಯ ಬಗೆತಗಳಿವೆ: ಒಂದು ವಸ್ತುವಿಗೆ ಎಶ್ಟೆಲ್ಲಾ ಬಳಕೆಗಳಿವೆ ಎಂಬುದನ್ನು ಕಂಡುಕೊಳ್ಳುವುದು ಬೇರ‍್ಪಡಿಸುವ ಬಗೆತ, ಮತ್ತು ಒಂದು ತೊಡಕಿಗೆ ಸಂಬಂದಿಸಿದ ಹಲವಾರು ವಿಶಯಗಳನ್ನು ಒಟ್ಟು ಸೇರಿಸಿ ಅದನ್ನು ಬಗೆಹರಿಸುವುದು ಹೇಗೆ ಎಂಬುದನ್ನು ಕಂಡುಕೊಳ್ಳುವುದು ಒಂದೆಡೆ ಸೇರಿಸುವ ಬಗೆತ. ಈ ಎರಡು ಬಗೆಯ ಬಗೆತಗಳನ್ನೂ ಎರಡು ನುಡಿಗಳನ್ನು ತಿಳಿದಿರುವ ಮಕ್ಕಳು ಒಂದೇ ನುಡಿಯನ್ನು ತಿಳಿದಿರುವ ಮಕ್ಕಳಿಗಿಂತ ಹೆಚ್ಚು ಚನ್ನಾಗಿ ನಡೆಸಬಲ್ಲರು.

ಒಂದೇ ನುಡಿಯನ್ನು ತಿಳಿದಿರುವ ಮಕ್ಕಳು ಓದುತ್ತಿರುವಾಗ, ಅವರ ಗಮನ ಪದಗಳ ಉಲಿಗಳ ಮೇಲಿರುತ್ತದೆ;  ಇದಕ್ಕೆ ಬದಲು, ಎರಡು ನುಡಿಗಳನ್ನು ಚನ್ನಾಗಿ ತಿಳಿದಿರುವ ಮಕ್ಕಳ ಗಮನ ಪದಗಳ ಹುರುಳಿನ ಮೇಲಿರುತ್ತದೆ. ಹಾಗಾಗಿ, ಈ ಮಕ್ಕಳು ಬರಹಗಳ ಹುರುಳನ್ನು ತಿಳಿದುಕೊಳ್ಳುವಲ್ಲಿ ಒಂದೇ ನುಡಿಯನ್ನು ತಿಳಿದಿರುವ ಮಕ್ಕಳಿಗಿಂತ ಎರಡು-ಮೂರು ತರಗತಿಗಳಶ್ಟು ಮುಂದಿರುತ್ತಾರೆ.

ಎರಡು ನುಡಿಗಳ ತಿಳಿವು ಮಕ್ಕಳ ಮುಂದೆ ಎರಡು ಸಂಸ್ಕ್ರುತಿಗಳನ್ನು ತೆರೆದಿಡುತ್ತದೆ; ಆ ಎರಡು ನುಡಿಗಳ ಬರಹಗಳನ್ನೂ ಓದಲು ಕಲಿತಲ್ಲಿ, ಎರಡು ಬಗೆಯ ಬರಹ ಸಂಸ್ಕ್ರುತಿಗಳೂ ಅವರದಾಗುತ್ತವೆ. ಈ ತಿಳಿವು ಮುಂದೆ ಜೀವನದುದ್ದಕ್ಕೂ ಅವರ ನೆರವಿಗೆ ಬರುತ್ತದೆ.

ತಮಗೆ ತಿಳಿದಿರುವ ನುಡಿಯಲ್ಲಿ ಮಕ್ಕಳು ಹೆಚ್ಚು ಸುಲಬವಾಗಿ ಓದಲು ಮತ್ತು ಬರೆಯಲು ಕಲಿಯಬಲ್ಲರು. ಹಾಗಾಗಿ, ಮಕ್ಕಳಿಗೆ ಮೊದಲು ಅವರಿಗೆ ತಿಳಿದಿರುವ ನುಡಿಯಲ್ಲಿ ಓದಲು ಮತ್ತು ಬರೆಯಲು ಕಲಿಸಿ, ಆಮೇಲೆ ಇಂಗ್ಲಿಶ್‌ನಲ್ಲಿ ಕಲಿಸುವುದೇ ಸರಿಯಾದ ದಾರಿ. ಯಾಕೆಂದರೆ, ಮೊದಲನೇ ನುಡಿಯಲ್ಲಿ ಓದಲು ಮತ್ತು ಬರೆಯಲು ಕಲಿಯುವಾಗ ಪಡೆದ ಚಳಕಗಳನ್ನು ಅವರು ಸುಲಬವಾಗಿ ತಮ್ಮ ಎರಡನೇ ನುಡಿಯ ಕಲಿಕೆಯಲ್ಲೂ ಬಳಸಿಕೊಳ್ಳಬಲ್ಲರು.

ಇಂಗ್ಲಿಶ್‌ನಲ್ಲಿರುವ ಸ್ಪೆಲ್ಲಿಂಗ್ ಸಮಸ್ಯೆಯಿಂದಾಗಿ, ಅದರ ಪದಗಳ ಬರವಣಿಗೆಯಲ್ಲಿ ಬರುವ ಬರಿಗೆಗಳಿಗೂ ಅವುಗಳ ಓದಿನಲ್ಲಿ ಬರುವ ಉಲಿಗಳಿಗೂ ನಡುವೆ ಸಂಬಂದವಿದೆಯೆಂಬುದು ಅದನ್ನು ಓದಲು ಕಲಿಯುವವರಲ್ಲಿ ಹೆಚ್ಚಿನವರ ಗಮನಕ್ಕೂ ಬರುವುದೇ ಇಲ್ಲ. ಆದರೆ, ಇದನ್ನು ಗಮನಿಸಲು ಬಾರದಿರುವ ಮಕ್ಕಳಿಗೆ ಬರಹಗಳನ್ನು ಸಲೀಸಾಗಿ ಓದಲು ಬರುವುದಿಲ್ಲ.

ಕನ್ನಡ ಬರಹದಲ್ಲಿ ಬರಿಗೆಗಳಿಗೂ ಉಲಿಗಳಿಗೂ ನಡುವೆ ನೇರವಾದ ಸಂಬಂದವಿದೆ. ಸಂಸ್ಕ್ರುತದ ಎರವಲು ಪದಗಳು ಮಾತ್ರ ಇದಕ್ಕೆ ಹೊರಪಡಿಕೆಗಳಾಗಿವೆ. ಹಾಗಾಗಿ, ಮಕ್ಕಳಿಗೆ ಮೊದಲು ಕನ್ನಡದವೇ ಆದ ಪದಗಳು ಮಾತ್ರ ಇರುವ ಬರಹಗಳನ್ನು ಓದಲು ಕಲಿಸಿದಲ್ಲಿ, ಅವರು ಬಹಳ ಬೇಗನೆ ಅವನ್ನು ಸಲೀಸಾಗಿ ಓದುವುದು ಹೇಗೆಂಬುದನ್ನು ತಿಳಿದುಕೊಳ್ಳಬಲ್ಲರು.

ಅವರಿಗೆ ಇಂಗ್ಲಿಶ್ ಬರಹಗಳನ್ನು ಓದಲು ಆಮೇಲೆ ಕಲಿಸಿದಲ್ಲಿ, ಕನ್ನಡದ ಓದಿನಲ್ಲಿ ತಾವು ಪಡೆದ ಚಳಕವನ್ನು ಅವರು ಅಲ್ಲಿಯೂ ಬಳಸಿ ಹೆಚ್ಚು ಬೇಗನೆ ಅವನ್ನು ಸರಿಯಾಗಿ ಓದಲು ಕಲಿಯಬಲ್ಲರು.

ಬರೆಯುವ ಕೆಲಸವನ್ನೂ ಮಕ್ಕಳು ತಮಗೆ ಚನ್ನಾಗಿ ತಿಳಿದಿರುವ ಕನ್ನಡದಲ್ಲಿ ಹೆಚ್ಚು ಬೇಗನೆ ನಡೆಸಲು ಕಲಿಯಬಲ್ಲರು, ಮತ್ತು ಆಮೇಲೆ ಇಂಗ್ಲಿಶ್‌ನಲ್ಲಿ ಬರೆಯಬೇಕಾದಾಗ, ಆ ಚಳಕವನ್ನೇ ಅಲ್ಲಿಯೂ ಬಳಸಿಕೊಳ್ಳಬಲ್ಲರು.

ಇಂಗ್ಲಿಶ್ ನುಡಿಯ ಮೇಲಿರುವ ವ್ಯಾಮೋಹದಿಂದಾಗಿ, ಕನ್ನಡ ನುಡಿ ಕೊಡಬಲ್ಲ ಈ ಎಲ್ಲಾ ಪ್ರಯೋಜನಗಳನ್ನೂ ಮಕ್ಕಳು ಕಳೆದುಕೊಳ್ಳುವಂತೆ ಮಾಡುವುದು ಹೆಡ್ಡತನವಲ್ಲವೇ?

(ಈ ಬರಹ ವಿಜಯ ಕರ‍್ನಾಟಕ ಸುದ್ದಿಹಾಳೆಯ ’ಎಲ್ಲರ ಕನ್ನಡ’ ಅಂಕಣದಲ್ಲಿ ಮೊದಲು ಮೂಡಿಬಂದಿತ್ತು)

ಮೂಲ : ಹೊನಲು

ಯಾವುದು ಕನ್ನಡದ ಸೊಗಡು

ಮಹಾಪ್ರಾಣ, ಷಕಾರ, ಋಕಾರ ಮೊದಲಾದ ಕೆಲವು ಬರಿಗೆಗಳನ್ನು ಕನ್ನಡ ಬರಹದಿಂದ ತೆಗೆದುಹಾಕಿದರೆ ಕನ್ನಡದಸೊಗಡು (ಎಂದರೆ ಸಂಸ್ಕ್ರುತಿ) ಅಳಿದುಹೋಗುತ್ತದೆಯೆಂದು ಕೆಲವರಿಗೆ ಅನಿಸುತ್ತದೆ. ಆದರೆ, ನಿಜಕ್ಕೂ ಈ ಮಾರ‍್ಪಾಡು ಕನ್ನಡದ ಸೊಗಡನ್ನು ಉಳಿಸುತ್ತದೆಯಲ್ಲದೆ ಅಳಿಸುವುದಿಲ್ಲ.

ಕನ್ನಡ ಕಾವ್ಯಗಳಲ್ಲಿ ತುಂಬಾ ಸಂಸ್ಕ್ರುತ (ತತ್ಸಮ) ಪದಗಳನ್ನು ಬಳಸಿದೆವಾದರೆ ಅವು ಕಕ್ಕಸ(ಕರ‍್ಕಶ)ವಾಗುತ್ತವೆಯೆಂದು ಕವಿರಾಜಮಾರ‍್ಗದಲ್ಲಿ ಹೇಳಲಾಗಿದೆ; ಆ ರೀತಿ ಕಕ್ಕಸವಾಗದಂತೆ ತನ್ನ ಕಾವ್ಯಗಳಲ್ಲಿ ತದ್ಬವ ಪದಗಳನ್ನು ಮಾತ್ರವೇ ಬಳಸಿರುವ ಆಂಡಯ್ಯನಿಗೆ ‘ಕನ್ನಡದ ಕಾವ’ ಎಂದರೆ, ಕನ್ನಡದ ಸೊಗಡನ್ನು (ಸಂಸ್ಕ್ರುತಿಯನ್ನು) ಕಾಪಾಡಿದವನು ಎಂಬ ಬಿರುದನ್ನು ಕೊಡಲಾಗಿದೆ. ತತ್ಸಮ ಪದಗಳನ್ನು ಬಳಸದುದರಿಂದಾಗಿ ಆತನು ಕನ್ನಡದ ಸೊಗಡನ್ನು ಕಳೆದಿದ್ದಾನೆಂದು ಯಾರೂ ಆತನನ್ನು ದೂರಿಲ್ಲ.

ಸಂಸ್ಕ್ರುತ ಎರವಲುಗಳನ್ನು ಕನ್ನಡಿಗರು ಹೇಗೆ ಓದುತ್ತಾರೋ ಹಾಗೆಯೇ ಬರೆಯೋಣ ಎನ್ನುವುದೂ ಇದೇ ರೀತಿಯಲ್ಲಿ ಕನ್ನಡದ ಸೊಗಡನ್ನು ಉಳಿಸುವ ಪ್ರಯತ್ನವಲ್ಲದೆ ಅಳಿಸುವ ಪ್ರಯತ್ನವಲ್ಲ. ಯಾಕೆಂದರೆ, ಸಂಸ್ಕ್ರುತ ಎರವಲುಗಳನ್ನು ಹೆಚ್ಚಿನ ಕನ್ನಡಿಗರೂ ಹೇಗೆ ಓದುತ್ತಾರೋ ಹಾಗೆ ಬರೆದಲ್ಲಿ, ಅವು ತದ್ಬವ ಪದಗಳ ಹಾಗೆ ಕನ್ನಡದ ಸೊಗಡನ್ನು ಕಾಪಾಡುತ್ತವೆ.

ಸಂಸ್ಕ್ರುತ ಎರವಲುಗಳನ್ನು ತದ್ಬವರೂಪದಲ್ಲಿ ಬರೆಯುವಾಗ, ಅವುಗಳಲ್ಲಿರುವ ಶ-ಷಗಳ ನಡುವಿನ ವ್ಯತ್ಯಾಸ, ರು-ಋಗಳ ನಡುವಿನ ವ್ಯತ್ಯಾಸ, ಮತ್ತು ಅಲ್ಪಪ್ರಾಣ-ಮಹಾಪ್ರಾಣಗಳ ನಡುವಿನ ವ್ಯತ್ಯಾಸಗಳು ಇಲ್ಲವಾಗುತ್ತವೆ; ಸಂಸ್ಕ್ರುತ ಎರವಲುಗಳನ್ನು ಹೆಚ್ಚಿನ ಕನ್ನಡಿಗರೂ ಓದುವ ಹಾಗೆ ಬರೆಯುವಾಗಲೂ ಇಂತಹವೇ ವ್ಯತ್ಯಾಸಗಳು ಇಲ್ಲವಾಗುತ್ತವೆ. ಹಾಗಾಗಿ, ತದ್ಬವ ಪದಗಳ ಬಳಕೆಯಿಂದ ಹೇಗೆ ಕನ್ನಡ ನುಡಿಯ ಸಂಸ್ಕ್ರುತಿ ನಾಶವಾಗುವುದಿಲ್ಲವೋ ಹಾಗೆಯೇ ಸಂಸ್ಕ್ರುತ ಎರವಲುಗಳನ್ನು ಓದುವ ಹಾಗೆ ಬರೆಯುವುದರಿಂದಲೂ ಕನ್ನಡ ನುಡಿಯ ಸಂಸ್ಕ್ರುತಿ ನಾಶವಾಗುವುದಿಲ್ಲ.

ಹೆಚ್ಚಿನ ಕನ್ನಡಿಗರೂ ಮಹಾಪ್ರಾಣ, ಷಕಾರ, ಋಕಾರ ಮೊದಲಾದುವನ್ನು ಮಾತನಾಡುವಾಗ ಇಲ್ಲವೇ ಓದುವಾಗ ಬಳಸುವುದಿಲ್ಲ ಎಂಬುದಾಗಿ ನಾನು ಹೇಳಿರುವುದು ಬರಿಯ ಊಹೆಯ ಮೇಲಲ್ಲ. ಅದಕ್ಕೆ ಸಾಕಶ್ಟು ಅರಕೆಯ ಆದಾರವಿದೆ: ಸುಮಾರು ಒಂದೂವರೆ ತಿಂಗಳು ಮಯ್ಸೂರು ಜಿಲ್ಲೆಯಲ್ಲೆಲ್ಲ ಸುತ್ತಾಡಿ, ಅಲ್ಲಿನ ಬೇರೆ ಬೇರೆ ಜಾತಿ ಮತ್ತು ಪಂಗಡಗಳ ಜನರ ಮಾತನ್ನು ಗಮನಿಸಿದ್ದೇನೆ. ಆಮೇಲೆ, ಅಂತಹದೇ ಅರಕೆಯನ್ನು ದಕ್ಶಿಣ ಕನ್ನಡ ಮತ್ತು ಗುಲ್ಬರ‍್ಗ ಜಿಲ್ಲೆಗಳಲ್ಲೂ ನಡೆಸಿದ್ದೇನೆ.

ಇದಲ್ಲದೆ, ಹಲವು ಮಂದಿ ಸಂಸ್ಕ್ರುತ ಪಂಡಿತರ ಕನ್ನಡ ಮಾತನ್ನೂ ನಾನು ಗಮನಿಸಿದ್ದೇನೆ. ಬರಿಯ ಪದಗಳನ್ನು ಉಲಿದು ತೋರಿಸುವಾಗ ಅವರು ಈ ವ್ಯತ್ಯಾಸಗಳನ್ನು ಹೆಚ್ಚುಕಡಿಮೆ ಸರಿಯಾಗಿಯೇ ಉಳಿಸಿಕೊಳ್ಳುತ್ತಾರೆ; ಆದರೆ, ಅವನ್ನೇ ಮಾತಿನಲ್ಲಿ ಬಳಸುವಾಗ ಈ ಎಲ್ಲಾ ವ್ಯತ್ಯಾಸಗಳೂ ಇಲ್ಲವಾಗುತ್ತವೆ.

ನಿಜಕ್ಕೂ ಶ-ಷಗಳ ನಡುವೆ, ಇಲ್ಲವೇ ಮಹಾಪ್ರಾಣ-ಅಲ್ಪಪ್ರಾಣಗಳ ನಡುವೆ ಕನ್ನಡಿಗರ ಮಾತಿನಲ್ಲಿ ಯಾವ ವ್ಯತ್ಯಾಸವೂ ಇಲ್ಲ; ಯಾರಾದರೂ ಈ ವ್ಯತ್ಯಾಸ ಕೇಳಿಸುವ ಹಾಗೆ ಮಾತನಾಡಿದರೆ, ಕೇಳುವವರಿಗೆ ಅದು ಅಸ್ವಾಬಾವಿಕವೆಂದು ಅನಿಸುತ್ತದೆ.

ಕನ್ನಡಿಗರ ಮಾತಿನಲ್ಲಿ ಇಲ್ಲವೇ ಓದಿನಲ್ಲಿಲ್ಲದ ಈ ಸಂಸ್ಕ್ರುತ ಪದಗಳ ವ್ಯತ್ಯಾಸವನ್ನು ಕನ್ನಡ ಬರಹದಲ್ಲಿ ಸುಮಾರು ಒಂದೂವರೆ ಸಾವಿರ ವರ‍್ಶಗಳಿಂದಲೂ ಉಳಿಸಿಕೊಂಡು ಬರಲಾಗಿದೆ. ಮೊನ್ನೆ ಮೊನ್ನೆಯ ವರೆಗೂ ಕನ್ನಡ ಬರಹವನ್ನು ಮೇಲ್ವರ‍್ಗದ ಕೆಲವೇ ಕೆಲವು ಮಂದಿ ಮಾತ್ರ ಬಳಸುತ್ತಿದ್ದರಾದ ಕಾರಣ, ಇದು ಅಂತಹ ತೊಡಕಿನ ಸಂಗತಿಯೆಂದು ಯಾರಿಗೂ ಅನಿಸಿರಲಿಲ್ಲ.

ಆದರೆ, ಇವತ್ತು ಎಲ್ಲಾ ವರ‍್ಗದ ಜನರೂ ಕನ್ನಡ ಬರಹವನ್ನು ಕಲಿತು ಬಳಸಲು ತೊಡಗಬೇಕಾಗಿದೆ; ಯಾಕೆಂದರೆ, ಬರಹವನ್ನು ಬಳಸಲಾರದವರು ತಮ್ಮ ಜೀವನದಲ್ಲಿ ಒಂದು ಅತ್ಯಮೂಲ್ಯವಾದ ಸಾದನದಿಂದ ವಂಚಿತರಾಗುತ್ತಾರೆ. ಒಂದು ನಾಡಿನಲ್ಲಿ ಅಂತಹ ಜನ ಹೆಚ್ಚು ಇದ್ದಶ್ಟೂ ಆ ನಾಡು ಹಿಂದೆಯೇ ಉಳಿದಿರುತ್ತದೆ. ಇವತ್ತು ಬರಹಕ್ಕೆ ಅಂತಹ ಪ್ರಾಮುಕ್ಯತೆ ಬಂದಿದೆ.

ಹಾಗಾಗಿ, ಕನ್ನಡ ಬರಹವನ್ನು ಕಲಿಯುವಲ್ಲಿ ಮತ್ತು ಬಳಸುವಲ್ಲಿ ಒಂದು ದೊಡ್ಡ ತೊಡಕಾಗಿರುವ ಈ ಹೆಚ್ಚಿನ ಬರಿಗೆಗಳನ್ನು ಬಿಟ್ಟುಕೊಡುವುದೇ ಇವತ್ತು ನಮ್ಮ ಮುಂದಿರುವ ಸರಿಯಾದ ದಾರಿ. ಹಾಗೆ ಮಾಡುವುದರಿಂದ ಕನ್ನಡ ಬರಹದ ಸೊಗಡು ಇಲ್ಲವೇ ಸಂಸ್ಕ್ರುತಿ ಉಳಿಯುತ್ತದೆಯಲ್ಲದೆ ಅಳಿಯುವುದಿಲ್ಲ; ಅದರ ಮೇಲೆ ಹೊರಿಸಲಾಗಿರುವ ಬೇರೊಂದು ಸಂಸ್ಕ್ರುತಿಯ ಹೊರೆ ಮಾತ್ರ ಇಲ್ಲವಾಗುತ್ತದೆ.

ಈ ಹೆಚ್ಚಿನ ಬರಿಗೆಗಳನ್ನು ಬಿಟ್ಟುಕೊಟ್ಟಲ್ಲಿ ಮದ್ಯ-ಮಧ್ಯ, ದನ-ಧನ ಎಂಬಂತಹ ಹಲವು ಪದಗಳ ನಡುವಿನ ವ್ಯತ್ಯಾಸ ಇಲ್ಲವಾಗಿ, ಗೊಂದಲವುಂಟಾಗಬಲ್ಲುದು ಎಂಬುದಾಗಿ ಕೆಲವರು ವಾದಿಸುತ್ತಾರೆ; ಆದರೆ, ಈ ವಾದದಲ್ಲಿ ನಿಜಕ್ಕೂ ತಿರುಳಿಲ್ಲ. ಯಾಕೆಂದರೆ, ಕನ್ನಡಿಗರ ಮಾತಿನಲ್ಲಿ ಇಲ್ಲವೇ ಓದಿನಲ್ಲಿ, ಮೇಲೆ ವಿವರಿಸಿದ ಹಾಗೆ, ಈ ವ್ಯತ್ಯಾಸ ಹೇಗಿದ್ದರೂ ಇಲ್ಲ, ಮತ್ತು ಇದರಿಂದಾಗಿ ಯಾವ ಗೊಂದಲವೂ ಆಗುತ್ತಾ ಇಲ್ಲ.

ಇದಲ್ಲದೆ, ಯಾವುದೇ ಒಂದು ನುಡಿಯ ಪದನೆರಕೆಯನ್ನು ಬಿಡಿಸಿ ನೋಡಿದರೂ ಅದರಲ್ಲಿ ಒಂದಕ್ಕಿಂತ ಹೆಚ್ಚು ಹುರುಳಿರುವ ನೂರಾರು ಪದಗಳು ಕಾಣಲು ಸಿಗುತ್ತವೆ. ಸಂಸ್ಕ್ರುತದಲ್ಲಂತೂ ಇದು ಇನ್ನೂ ಹೆಚ್ಚು; ಅದರ ಹೆಚ್ಚಿನ ಪದಗಳಿಗೂ ಅಯ್ದು ಇಲ್ಲವೇ ಹೆಚ್ಚು ಹುರುಳುಗಳಿವೆಯೆಂದು ಹೇಳಲಾಗುತ್ತದೆ.

ಸಂಸ್ಕ್ರುತದ ಅರ್ಥ ಪದಕ್ಕೆ ‘ಹುರುಳು’ ಮತ್ತು ‘ಹಣ’ ಎಂಬವುಗಳು ಮಾತ್ರವಲ್ಲದೆ, ‘ಉದ್ದೇಶ’, ‘ಕಾರಣ’, ‘ವಸ್ತು’ ಮೊದಲಾದ ಬೇರೆಯೂ ಹಲವು ಹುರುಳುಗಳಿವೆ; ವಿಷ ಪದಕ್ಕೆ ‘ನಂಜು’ ಎಂಬ ಹುರುಳು ಮಾತ್ರವಲ್ಲದೆ, ‘ನೀರು’ ಮತ್ತು ‘ಸೇವಕ’ ಎಂಬ ಹುರುಳುಗಳೂ ಇವೆ (ಮೋನಿಯರ್ ವಿಲ್ಲಿಯಂಸ್ ಅವರ ಸಂಸ್ಕ್ರುತ-ಇಂಗ್ಲಿಶ್ ಡಿಕ್ಶ್‌ನರಿ ನೋಡಿ). ಆದರೆ, ಈ ರೀತಿ ಒಂದೇ ಪದಕ್ಕೆ ಹಲವು ಹುರುಳುಗಳಿರುವುದನ್ನು ಯಾರೂ ಸಂಸ್ಕ್ರುತದ ಕೊರತೆಯೆಂದು ಹೇಳುವುದಿಲ್ಲ; ಅದಕ್ಕೆ ಬದಲಾಗಿ, ಅದು ಸಂಸ್ಕ್ರುತದ ಶ್ರೀಮಂತಿಕೆಯೆಂದು ಹೇಳುತ್ತಾರೆ.

ಸಾಮಾನ್ಯವಾಗಿ ಪದಗಳನ್ನು ಬಳಸಿರುವ ಸಂದರ‍್ಬವೇ ಅವುಗಳನ್ನು ಯಾವ ಹುರುಳಿನಲ್ಲಿ ಬಳಸಲಾಗಿದೆ ಎಂಬುದನ್ನು ತಿಳಿಸುತ್ತದೆ; ‘ಹುಡುಗ ಮಾರ‍್ಗದ ಮದ್ಯದಲ್ಲಿ ನಿಂತಿದ್ದಾನೆ’ ಎಂದು ಬರೆದರೆ, ಅದರಲ್ಲಿ ಮದ್ಯದಲ್ಲಿ ಎಂಬುದನ್ನು ‘ನಡುವೆ’ ಎಂಬ ಹುರುಳಿನಲ್ಲಿ ಬಳಸಲಾಗಿದೆ ಎಂಬುದು ಎಲ್ಲರಿಗೂ ಗೊತ್ತಾಗುತ್ತದೆ; ಇಲ್ಲಿ ಮದ್ಯ ಎಂಬುದಕ್ಕೆ ‘ಸಾರಾಯಿ’ ಎಂಬ ಹುರುಳಿರಬಹುದೆಂದು ಯಾರಿಗೂ ಅನಿಸುವುದಿಲ್ಲ. ಇದನ್ನು ಮಧ್ಯದಲ್ಲಿ ಎಂಬುದಾಗಿ ನೋಡಿ ಬಳಕೆಯಾದವರಿಗೆ ಮಾತ್ರ ಇದು ತಪ್ಪೆಂದು ಅನಿಸುತ್ತದೆ, ಅಶ್ಟೆ. ಹುರುಳಿನ ಗೊಂದಲವೇನೂ ಉಂಟಾಗುವುದಿಲ್ಲ.

ಎರಡು ಹುರುಳುಗಳಿರುವ ಪದಗಳನ್ನು ಅವುಗಳ ಎರಡು ಹುರುಳೂ ಒಟ್ಟಿಗೆ ಬರುವ ಹಾಗೆ ಬರೆಯುವುದು ಕವಿಗಳು, ಮತ್ತು ಬೇಕೆಂದೇ ತಮ್ಮ ಓದುಗರನ್ನು ಗೊಂದಲದಲ್ಲಿ ಸಿಲುಕಿಸಲು ಬಯಸುವವರು ಮಾತ್ರ. ಬಾಕಿ ಉಳಿದವರೆಲ್ಲ ಓದುಗರ ಗಮನಕ್ಕೆ ತಮ್ಮ ಮನಸ್ಸಿನಲ್ಲಿರುವ ಒಂದು ಹುರುಳು ಮಾತ್ರ ಬರುವ ಹಾಗೆ ಬರೆಯುತ್ತಾರೆ; ಈ ವಿಶಯದಲ್ಲಿ ಗೊಂದಲವೇನಾದರೂ ಉಂಟಾಗಬಹುದೆಂಬ ಸಂಶಯ ಅವರಿಗೆ ಇದೆಯಾದಲ್ಲಿ, ಅವರು ಬೇರೆಯೇ ಪದವನ್ನು ಬಳಸುತ್ತಾರೆ, ಇಲ್ಲವೇ ಗೊಂದಲವಾಗದಂತೆ ಸೊಲ್ಲನ್ನು ಮಾರ‍್ಪಡಿಸಿ ಬರೆಯುತ್ತಾರೆ.

ಇದಲ್ಲದೆ, ಸಾಮಾನ್ಯವಾಗಿ ಅಂತಹ ಪದಗಳಿಗಿರುವ ಎರಡು (ಇಲ್ಲವೇ ಹೆಚ್ಚು) ಹುರುಳುಗಳಲ್ಲಿ ಸಂದರ‍್ಬಕ್ಕೆ ಹೊಂದಿಕೆಯಾಗುವಂತಹ ಒಂದು ಹುರುಳು ಮಾತ್ರ ಓದುಗರ ಗಮನಕ್ಕೆ ಬರುತ್ತದೆ. ಅವಕ್ಕೆ ಇನ್ನೊಂದು ಹುರುಳೂ ಇದೆಯೆಂಬುದು ಅವರ ಗಮನಕ್ಕೆ ಬರುವುದೇ ಇಲ್ಲ. ಕೆಲವೊಮ್ಮೆ ಈ ವಿಶಯವನ್ನು ಅವರ ಗಮನಕ್ಕೆ ತರಬೇಕಿದ್ದಲ್ಲಿ, ಆ ಪದಗಳನ್ನು ಅವುಗಳ ಇನ್ನೊಂದು ಹುರುಳಿಗೆ ಹೊಂದಿಕೆಯಾಗುವಂತಹ ಬೇರೊಂದು ಸೊಲ್ಲಿನಲ್ಲಿ ಬಳಸಿ ತೋರಿಸಬೇಕಾಗುತ್ತದೆ.

ಮಹಾಪ್ರಾಣ, ಷಕಾರ, ಋಕಾರ ಮೊದಲಾದವುಗಳನ್ನು ಬಳಸದಿದ್ದರೆ ಹುರುಳಿನ ಮಟ್ಟಿಗೆ ಯಾವ ಗೊಂದಲವೂ ಉಂಟಾಗುವುದಿಲ್ಲ ಎಂಬ ಈ ಮಾತನ್ನು ಬೆಂಬಲಿಸುವ ಇನ್ನೊಂದು ವಿಶಯವೇನೆಂದರೆ, 2006 ರ ಬಳಿಕ ನಾನು ಬರೆದ ಎಲ್ಲಾ ಒಂಬತ್ತು ಪುಸ್ತಕಗಳಲ್ಲೂ (ಒಟ್ಟು 2600 ಪುಟಗಳು) ಈ ಬರಿಗೆಗಳನ್ನು ಬಳಸಿಲ್ಲ; ಹಾಗಿದ್ದರೂ, ಇದುವರೆಗೆ ಅವನ್ನು ಓದಿದವರಲ್ಲಿ ಯಾರೊಬ್ಬರೂ ಅದರಿಂದಾಗಿ ವಿಶಯವನ್ನು ತಿಳಿದುಕೊಳ್ಳುವಲ್ಲಿ ತಮಗೆ ತೊಂದರೆಯಾಗಿದೆಯೆಂದು ಹೇಳಿಲ್ಲ.

(ಈ ಬರಹ ವಿಜಯ ಕರ‍್ನಾಟಕ ಸುದ್ದಿಹಾಳೆಯ ’ಎಲ್ಲರ ಕನ್ನಡ’ ಅಂಕಣದಲ್ಲಿ ಮೊದಲು ಮೂಡಿಬಂದಿತ್ತು)

ಮೂಲ : ಹೊನಲು

ಇಂಗ್ಲಿಶ್ ಕಲಿಕೆಗೆ ಕನ್ನಡದ ನೆರವು ಬೇಕು

ಶಾಲೆಯಲ್ಲಿ ಮಕ್ಕಳಿಗೆ ಇಂಗ್ಲಿಶ್ ಕಲಿಸುವುದನ್ನು ಯಾವ ತರಗತಿಯಲ್ಲಿ ತೊಡಗಬೇಕು ಎಂಬ ವಿಶಯದಲ್ಲಿ ಇವತ್ತು ಬಹಳಶ್ಟು ಚರ‍್ಚೆಗಳು ನಡೆಯುತ್ತಿವೆ. ಎಲ್ಲರಿಗೂ ಮೊದಲನೇ ತರಗತಿಯಿಂದಲೇ ಕಲಿಸಲು ತೊಡಗಬೇಕೆಂದು ಕೆಲವರು ಹೇಳುತ್ತಾರೆ, ಮತ್ತು ಮೂರು ಇಲ್ಲವೇ ಅಯ್ದನೇ ತರಗತಿಯಿಂದ ಕಲಿಸಲು ತೊಡಗಿದರೆ ಸಾಕೆಂದು ಬೇರೆ ಕೆಲವರು ಹೇಳುತ್ತಾರೆ.

ಮೊದಲನೇ ತರಗತಿಯಿಂದಲೇ ಇಂಗ್ಲಿಶ್ ನುಡಿಯನ್ನು ಕಲಿಸಲು ತೊಡಗಬೇಕೆಂದು ಹೇಳುವವರು ನಿಜಕ್ಕೂ ಕೆಲವು ತಪ್ಪು ಅನಿಸಿಕೆಗಳನ್ನಿರಿಸಿಕೊಂಡು ಹಾಗೆ ಹೇಳುತ್ತಿದ್ದಾರೆ. ಚಿಕ್ಕಮಕ್ಕಳು ದೊಡ್ಡವರಿಗಿಂತ ಬೇಗನೆ ನುಡಿಯನ್ನು ಕಲಿತುಕೊಳ್ಳಬಲ್ಲರು; ಹಾಗಾಗಿ, ಚಿಕ್ಕವರಾಗಿರುವಾಗಲೇ ಇಂಗ್ಲಿಶ್ ಕಲಿಸಲು ತೊಡಗಿದರೆ, ಅವರು ಬೇಗನೆ ಮತ್ತು ಸುಲಬವಾಗಿ ಆ ನುಡಿಯನ್ನು ಕಲಿತುಕೊಳ್ಳಬಲ್ಲರೆಂಬುದು ಅವರ ಒಂದು ತಪ್ಪು ಅನಿಸಿಕೆ.

ಮೊದಲನೇ ತರಗತಿಯಿಂದಲೇ ಕಲಿಸತೊಡಗಿದರೆ, ಕಾಲೇಜಿಗೆ ಹೋಗುವಶ್ಟರ ಹೊತ್ತಿಗೆ ಅವರಿಗೆ ಹೆಚ್ಚು ಸಮಯದ ಇಂಗ್ಲಿಶ್ ಕಲಿಕೆ ದೊರೆಯುತ್ತದೆ; ಹಾಗಾಗಿ, ಆ ನುಡಿಯಲ್ಲಿ ಅವರಿಗೆ ಎಲ್ಲಾ ವಿಶಯಗಳನ್ನೂ ಇಂಗ್ಲಿಶ್‌ನಲ್ಲೇ ಕಲಿಯುತ್ತಿರುವ ಮಕ್ಕಳೊಂದಿಗೆ ಸೆಣಸಲು ಹೆಚ್ಚು ಅನುಕೂಲವಾಗುತ್ತದೆ ಎಂಬುದು ಇನ್ನೊಂದು ತಪ್ಪು ಅನಿಸಿಕೆ.

ಈ ಎರಡು ಅನಿಸಿಕೆಗಳೂ ತಪ್ಪೆಂಬುದಾಗಿ ಇದುವರೆಗೆ ನಡೆಸಿರುವ ಹಲವಾರು ಸಂಶೋದನೆಗಳು ತೋರಿಸಿಕೊಟ್ಟಿವೆ: ಶಾಲೆಯಲ್ಲಿ ಫ್ರೆಂಚ್ ನುಡಿಯನ್ನು ಕಲಿಯುತ್ತಿದ್ದ ಹದಿನೇಳು ಸಾವಿರ ಬ್ರಿಟಿಶ್ ಮಕ್ಕಳ ಕಲಿಕೆಯನ್ನು ಒಂದು ಅರಕೆಯಲ್ಲಿ ಗಮನಿಸಲಾಗಿತ್ತು. ಅವರಲ್ಲಿ ಕೆಲವು ಮಕ್ಕಳು ಈ ಕಲಿಕೆಯನ್ನು ಎಂಟನೇ ವರ‍್ಶದಲ್ಲೇನೇ ತೊಡಗಿದ್ದರು; ಆದರೆ, ಬೇರೆ ಕೆಲವು ಮಕ್ಕಳು ಈ ಕಲಿಕೆಯನ್ನು ತೊಡಗುವಾಗ ಹತ್ತು ಕಳೆದು ಹನ್ನೊಂದು ವರ‍್ಶವಾಗಿತ್ತು.

ಅಯ್ದು ವರ‍್ಶದ ಕಲಿಕೆಯ ಬಳಿಕ, ಎಂಟನೇ ವರ‍್ಶದಲ್ಲಿ ಕಲಿಯಲು ತೊಡಗಿದವರಿಗಿಂತಲೂ ಹನ್ನೊಂದನೇ ವರ‍್ಶದಲ್ಲಿ ಕಲಿಯಲು ತೊಡಗಿದವರೇ ಹೆಚ್ಚು ಚನ್ನಾಗಿ ಪ್ರೆಂಚ್ ಬಳಸಬಲ್ಲವರಾಗಿದ್ದರು. ಚಿಕ್ಕಮಕ್ಕಳು ದೊಡ್ಡವರಿಗಿಂತ ಬೇಗನೆ ತಮ್ಮ ಎರಡನೇ ನುಡಿಯನ್ನು ಕಲಿಯಬಲ್ಲರೆಂಬ ಅನಿಸಿಕೆ ತಪ್ಪು ಎಂಬುದು ಇದರಿಂದ ಗೊತ್ತಾಗುತ್ತದೆ.

ಇಂಗ್ಲಿಶ್ ಕಲಿಯುವ ಸ್ವೀಡಿಶ್ ಮತ್ತು ಡೇನಿಶ್ ಮಕ್ಕಳ ಕಲಿಕೆಯನ್ನು ಮತ್ತು ಫ್ರೆಂಚ್ ಕಲಿಯುವ ಸ್ವಿಸ್ ಮಕ್ಕಳ ಕಲಿಕೆಯನ್ನು ಪರಿಶೀಲಿಸಿದಾಗಲೂ ಚಿಕ್ಕ ಮಕ್ಕಳಿಗಿಂತ ದೊಡ್ಡ ಮಕ್ಕಳೇ ತಮ್ಮ ಎರಡನೇ ನುಡಿಯನ್ನು ಹೆಚ್ಚು ಸುಲಬವಾಗಿ ಮತ್ತು ಬೇಗನೆ ಕಲಿಯಬಲ್ಲರೆಂದು ಕಂಡುಬಂದಿದೆ.

ಹಲವು ಜನರಲ್ಲಿರುವ ಈ ಮೊದಲನೇ ತಪ್ಪು ಅನಿಸಿಕೆಗೆ ಚಿಕ್ಕ ಮಕ್ಕಳು ತಮ್ಮ ತಾಯ್ನುಡಿಯನ್ನು ಬಹಳ ಬೇಗನೆ ಯಾರ ಸಹಾಯವೂ ಇಲ್ಲದೆ ಪಡೆಯಬಲ್ಲರೆಂಬುದೇ ಆದಾರವಾಗಿರಬೇಕು. ಆದರೆ ಮಕ್ಕಳು ತಮ್ಮ ಮೊದಲನೆಯ ತಾಯ್ನುಡಿಯನ್ನು ಪಡೆಯುವುದಕ್ಕೂ, ಆಮೇಲೆ ಶಾಲೆಯಲ್ಲಿ ತಮ್ಮ ಎರಡನೆಯ ನುಡಿಯನ್ನು ಕಲಿಯುವುದಕ್ಕೂ ನಡುವೆ ಹಲವು ವ್ಯತ್ಯಾಸಗಳಿವೆ.

ಮೊದಲನೆಯ ನುಡಿಯನ್ನು ಪಡೆಯುವಾಗ ಮಕ್ಕಳಿಗೆ ಸಿಗುವಂತಹ ಹುಟ್ಟಿನಿಂದ ಬಂದ ಅಳವು ಎರಡನೆಯ ನುಡಿಯನ್ನು ಕಲಿಯುವಾಗ ದೊರಕುವುದಿಲ್ಲ. ಹಾಗಾಗಿ, ಎರಡನೆಯ ನುಡಿಯನ್ನು ಅವರು ಬೇರೆಯೇ ರೀತಿಯಲ್ಲಿ ಕಲಿಯಬೇಕಾಗುತ್ತದೆ.

ಇದಲ್ಲದೆ, ಎರಡನೆಯ ನುಡಿಯನ್ನು ಕಲಿಯುವ ಮಕ್ಕಳ ಮಿದುಳಿನಲ್ಲಿ ಮೊದಲನೆಯ ನುಡಿ ನೆಲೆನಿಂತಿರುತ್ತದೆ; ಹಾಗಾಗಿ, ಆ ನುಡಿಯ ಮೂಲಕವೇನೇ ಅವರು ಎರಡನೆಯ ನುಡಿಯನ್ನು ಕಲಿಯಬೇಕಾಗುತ್ತದೆ. ಮೊದಲನೆಯ ನುಡಿಯನ್ನು ಬಳಸುವಲ್ಲಿ ಸಾಕಶ್ಟು ಪಳಗುವ ಮೊದಲೇ ಎರಡನೆಯ ನುಡಿಯನ್ನು ಅವರ ಮೇಲೆ ಹೇರಿದಲ್ಲಿ, ಅವರು ತಡವರಿಸುತ್ತಾರೆ.  ಅದರಲ್ಲೂ ಮೊದಲನೆಯ ನುಡಿಯಲ್ಲಿ ಓದುವ ಮತ್ತು ಬರೆಯುವ ಕೆಲಸಗಳನ್ನು ನಡೆಸಲು ಕಲಿಯುವ ಮೊದಲೇ ಎರಡನೆಯ ನುಡಿಯಲ್ಲಿ ಅವನ್ನು ನಡೆಸುವಂತೆ ಮಾಡಿದಲ್ಲಿ, ಹೆಚ್ಚಿನ ಮಕ್ಕಳೂ ಹಿಂದೆ ಬೀಳುತ್ತಾರೆ.

ಇಂಗ್ಲಿಶ್ ಬಳಸಲು ಸಮಯ ಹೆಚ್ಚು ದೊರೆತಶ್ಟೂ ಮಕ್ಕಳು ಆ ನುಡಿಯನ್ನು ಹೆಚ್ಚು ಚನ್ನಾಗಿ ಕಲಿಯಬಲ್ಲರು ಎಂಬ ಎರಡನೆಯ ಅನಿಸಿಕೆಯೂ ತಪ್ಪು ಎಂಬುದಾಗಿ ಹಲವು ಸಂಶೋದನೆಗಳು ತೋರಿಸಿಕೊಟ್ಟಿವೆ: ಕೆಮರೂನ್‌ನ ಶಾಲೆಗಳಲ್ಲಿ ಇಂಗ್ಲಿಶ್ ಕಲಿಕೆನುಡಿಯಾಗಿರುವ ಮಕ್ಕಳು ವಾರಕ್ಕೆ ೨೨ ಗಂಟೆಗಳಶ್ಟು ಸಮಯ ಇಂಗ್ಲಿಶ್ ಬಳಸುತ್ತಿರುತ್ತಾರೆ, ಮತ್ತು ತಾಯ್ನುಡಿ ಕಲಿಕೆನುಡಿಯಾಗಿರುವ ಶಾಲೆಗಳಲ್ಲಿ ವಾರಕ್ಕೆ ಬರೇ ೩ ಗಂಟೆಗಳಶ್ಟು ಸಮಯ ಇಂಗ್ಲಿಶ್ ಬಳಸುತ್ತಿರುತ್ತಾರೆ.

ಹೀಗಿದ್ದರೂ, ೧೨ ಇಂಗ್ಲಿಶ್ ಶಾಲೆಗಳಲ್ಲಿರುವ ಮಕ್ಕಳ ಇಂಗ್ಲಿಶ್ ತಿಳಿವನ್ನು ೧೨ ತಾಯ್ನುಡಿ ಶಾಲೆಗಳಲ್ಲಿರುವ ಮಕ್ಕಳ ಇಂಗ್ಲಿಶ್ ತಿಳಿವಿನೊಂದಿಗೆ ಹೋಲಿಸಿ ನೋಡಿದಾಗ, ತಾಯ್ನುಡಿ ಶಾಲೆಗಳಲ್ಲಿರುವ ಮಕ್ಕಳೇ ಮುಂದಿರುವುದು ಕಂಡುಬಂದಿದೆ. ಅಮೆರಿಕಾದಲ್ಲಿ ನಡೆಸಿದ ಇಂತಹದೇ ಇನ್ನೊಂದು ಅರಕೆ, ಮತ್ತು ಬೇರೆಯೂ ಕೆಲವು ಅರಕೆಗಳು ಇದೇ ತೀರ‍್ಮಾನಕ್ಕೆ ಬಂದಿವೆ.

ಇಲ್ಲಿ ಒಂದು ಮುಕ್ಯವಾದ ವಿಶಯವನ್ನು ನಾವು ಗಮನಿಸುವುದು ಅವಶ್ಯ. ನುಡಿಯ ಕಲಿಕೆಯೆಂಬುದು ನಿಜಕ್ಕೂ ಎರಡು ರೀತಿಯದು. ದಿನಬಳಕೆಗೆ ಬೇಕಾಗುವ ಮಾತುಗಳನ್ನು ಸಲೀಸಾಗಿ ನುಡಿಯಲು ಕಲಿಯುವುದು ಒಂದು ರೀತಿಯ ಕಲಿಕೆ; ಮತ್ತು ಗಣಿತ, ವಿಜ್ನಾನ ಮೊದಲಾದ ವಿಶಯಗಳನ್ನು ತಿಳಿಯುವುದಕ್ಕಾಗಿ, ಮತ್ತು ಹಾಗೆ ತಿಳಿದುದನ್ನು ಇನ್ನೊಬ್ಬರಿಗೆ ವಿವರಿಸಿ ಹೇಳುವುದಕ್ಕಾಗಿ, ನುಡಿಯನ್ನು ಬಳಸಲು ಕಲಿಯುವುದು ಇನ್ನೊಂದು ರೀತಿಯ ಕಲಿಕೆ.

ಒಂದು ನುಡಿಯಲ್ಲಿ ಸಲೀಸಾಗಿ ಮಾತನಾಡಲು ಎರಡರಿಂದ ಮೂರು ವರ‍್ಶಗಳ ಕಲಿಕೆ ಸಾಕಾಗುತ್ತದೆ; ಆದರೆ, ಅದರ ಮೂಲಕ ಸಿಕ್ಕಲು ಸಿಕ್ಕಲಾದ ವಿಶಯಗಳನ್ನು ತಿಳಿಯುವ, ಮತ್ತು ಇತರರಿಗೆ ಅವನ್ನು ತಿಳಿಸುವ ಅಳವನ್ನು ಪಡೆಯಲು ಆರೇಳು ವರ‍್ಶಗಳ ಕಲಿಕೆ ಬೇಕಾಗುತ್ತದೆ. ಇಂಗ್ಲಿಶ್‌ನಲ್ಲಿ ಕಲಿಯುವ ಮಕ್ಕಳು ಮೊದಲನೆಯ ಕಲಿಕೆಯನ್ನು ಪಡೆಯುವಲ್ಲಿ ಇತರರಿಗಿಂತ ಮುಂದಿರುತ್ತಾರೆ; ಆದರೆ ಎರಡನೇ ರೀತಿಯ ಕಲಿಕೆಯನ್ನು ನಡೆಸಬೇಕಾದಾಗ, ಅವರು ಹಿಂದೆ ಬೀಳತೊಡಗುತ್ತಾರೆ, ಮತ್ತು ಆಮೇಲೆ ಅವರು ಮುಂದೆ ಹೋಗುವುದೇ ಇಲ್ಲ.

ಎರಡನೇ ರೀತಿಯ ಕಲಿಕೆಯನ್ನು ನಡೆಸಲು ಮಕ್ಕಳಿಗೆ ಅವರ ತಾಯ್ನುಡಿಯ ನೆರವು ಬೇಕಾಗುತ್ತದೆ ಎಂಬುದೇ ಇದಕ್ಕೆ ಕಾರಣ ಎಂಬುದನ್ನು ಕಂಡುಕೊಳ್ಳಲಾಗಿದೆ. ಸಾಮಾನ್ಯವಾಗಿ, ಇಂಗ್ಲಿಶ್ ಶಾಲೆಗಳಲ್ಲಿ ಮಕ್ಕಳಿಗೆ ಅವರ ತಾಯ್ನುಡಿಯ ಮೇಲೆ ಕೀಳರಿಮೆಯುಂಟಾಗುವ ಹಾಗೆ ಮಾಡಲಾಗುತ್ತದೆ; ಆ ನುಡಿಯ ಸಹಾಯವನ್ನು ಸ್ಪಲ್ಪವೂ ಪಡೆಯದೆ ಎರಡನೇ ನುಡಿಯನ್ನು ಕಲಿಯುವಂತೆ ಅವರ ಮೇಲೆ ಒತ್ತಡ ಹೇರಲಾಗುತ್ತದೆ. ಇದರಿಂದಾಗಿ ಅವರಿಗೆ ಇಂಗ್ಲಿಶ್‌ನಲ್ಲಿ ಎರಡನೇ ರೀತಿಯ ಕಲಿಕೆಯನ್ನು ನಡೆಸಲು ತುಂಬಾ ಕಶ್ಟವಾಗುತ್ತದೆ.

ತಾಯ್ನುಡಿಯಲ್ಲಿ ಮಾತನಾಡುವುದನ್ನು ಮಾತ್ರವಲ್ಲದೆ ಓದುವುದನ್ನು ಮತ್ತು ಬರೆಯುವುದನ್ನೂ ಕಲಿತಿರುವ ಮಕ್ಕಳಿಗೆ ಎರಡನೇ ನುಡಿಯಲ್ಲಿ ಅಂತಹದೇ ಕಲಿಕೆಯನ್ನು ನಡೆಸಲು ಆ ತಿಳಿವು ಒಂದು ಕೊಂಡಿಯಾಗಿ ಕೆಲಸ ಮಾಡುತ್ತದೆ. ಅಂತಹ ಕಲಿಕೆಯನ್ನು ನಡೆಸುವ ಮೊದಲೇ ಮಕ್ಕಳಿಂದ ಅವರ ತಾಯ್ನುಡಿಯನ್ನು ದೂರಮಾಡಿದಲ್ಲಿ ಅವರಿಗೆ ಈ ಕೊಂಡಿ ಸಿಗುವುದಿಲ್ಲ.

ಇದಲ್ಲದೆ, ಮಕ್ಕಳಲ್ಲಿ ತಿಳಿವಿನ ಬೆಳವಣಿಗೆ ಸರಿಯಾಗಿ ನಡೆಯಬೇಕಾದರೆ, ಅವರು ತಮ್ಮ ತಾಯ್ನುಡಿಯಲ್ಲಿ ತೊಡಗಿರುವಂತಹ ತಿಳಿವು ಪಡೆಯುವ ಕೆಲಸವನ್ನು ಅದರಲ್ಲೇನೇ ಮುಂದುವರಿಸಿಕೊಂಡು ಹೋಗುವ ಹಾಗೆ ಮಾಡುವುದು ಅವಶ್ಯ; ಅದನ್ನು ನಡುವೆಯೇ ನಿಲ್ಲಿಸಿ, ಆ ಕೆಲಸವನ್ನು ಬೇರೊಂದು ನುಡಿಯಲ್ಲಿ ನಡೆಸುವಂತೆ ಅವರ ಮೇಲೆ ಒತ್ತಡ ಹೇರಿದಲ್ಲಿ, ಹೆಚ್ಚಿನವರಲ್ಲೂ ಗೊಂದಲವುಂಟಾಗುತ್ತದೆ, ಮತ್ತು ಬಳಿಕ ಅವರಲ್ಲಿ ತಿಳಿವಿನ ಬೆಳವಣಿಗೆ ಸರಿಯಾಗಿ ನಡೆಯುವುದೇ ಇಲ್ಲ.

ಕಳೆದ ಹತ್ತು-ಹದಿನಯ್ದು ವರ‍್ಶಗಳಲ್ಲಿ ನಡೆಸಿದ ಎಲ್ಲಾ ಅರಕೆಗಳೂ ಮೇಲಿನ ತೀರ‍್ಮಾನಗಳನ್ನು ಬೆಂಬಲಿಸಿವೆ; ಶಾಲೆಗೆ ಬರುವ ಹೊತ್ತಿಗೆ ಚನ್ನಾಗಿ ಬಳಸಲು ತಿಳಿದಿರುವ ನುಡಿಯಲ್ಲಿ ಮಕ್ಕಳ ಕಲಿಕೆಯನ್ನು ಮುಂದುವರಿಸಿದಲ್ಲಿ ಮಾತ್ರ ಅವರು ಬೇರೊಂದು ನುಡಿಯ ಕಲಿಕೆಯನ್ನು ಚನ್ನಾಗಿ ನಡೆಸಬಲ್ಲರು. ಅದನ್ನು ಕಡೆಗಣಿಸುವಂತೆ ಮಾಡಿದಲ್ಲಿ, ಅವರು ಹಲವಾರು ತೊಡಕುಗಳಿಗೆ ಮತ್ತು ಗೊಂದಲಗಳಿಗೆ ಒಳಗಾಗುತ್ತಾರೆ.

(ಈ ಬರಹ ವಿಜಯ ಕರ‍್ನಾಟಕ ಸುದ್ದಿಹಾಳೆಯ ’ಎಲ್ಲರ ಕನ್ನಡ’ ಅಂಕಣದಲ್ಲಿ ಮೊದಲು ಮೂಡಿಬಂದಿತ್ತು)

ಮೂಲ : ಹೊನಲು

ಪದಗಳನ್ನು ಓದುವ ಹಾಗೆಯೇ ಬರೆಯಬೇಕು

ಕನ್ನಡದಲ್ಲಿ ಕನ್ನಡದವೇ ಆದ ಪದಗಳನ್ನು ಓದುವ ಹಾಗೆಯೇ ಬರೆಯುತ್ತೇವೆ; ಆದರೆ, ಸಂಸ್ಕ್ರುತದಿಂದ ಎರವಲು ಪಡೆದ ಪದಗಳನ್ನು ಮಾತ್ರ ಓದುವ ಹಾಗೆ ಬರೆಯದೆ, ಹೆಚ್ಚುಕಡಿಮೆ ಸಂಸ್ಕ್ರುತದಲ್ಲಿರುವ ಹಾಗೆಯೇ ಬರೆಯುತ್ತೇವೆ: ವಿಶೇಶ ಎಂಬುದಾಗಿ ಓದಿದರೂ ವಿಶೇಷ ಎಂಬುದಾಗಿ ಬರೆಯುತ್ತೇವೆ, ಮತ್ತು ಅದಿಕಾರಿ ಎಂಬುದಾಗಿ ಓದಿದರೂ ಅಧಿಕಾರಿ ಎಂಬುದಾಗಿ ಬರೆಯುತ್ತೇವೆ.

ಸಂಸ್ಕ್ರುತವನ್ನು ಹೊರತುಪಡಿಸಿ ಬೇರೆ ನುಡಿಗಳಿಂದ ಎರವಲು ಪಡೆದ ಪದಗಳನ್ನೆಲ್ಲ ಓದುವ ಹಾಗೆ ಬರೆಯುತ್ತೇವಲ್ಲದೆ, ಆ ನುಡಿಗಳಲ್ಲಿರುವ ಹಾಗೆ ಬರೆಯಲು ಹೋಗುವುದಿಲ್ಲ. ಇಂಗ್ಲಿಶ್‌ನ ವಯ್ಪರ್ ಮತ್ತು ವಯ್ರಸ್ ಪದಗಳ ಮೊದಲ ಬರೆಗೆಗಳು ಇಂಗ್ಲಿಶ್‌ನಲ್ಲಿ ಬೇರಾಗಿವೆ, ಆದರೆ ಕನ್ನಡದಲ್ಲಿ ವ ಎಂಬ ಒಂದೇ ಬರಿಗೆಯನ್ನು ಬಳಸಲಾಗುತ್ತದೆ. ಅವೆರಡನ್ನೂ ಒಂದೇ ರೀತಿ ಓದುತ್ತಿರುವುದೇ ಇದಕ್ಕೆ ಕಾರಣ.

ಒಂದು ಬರಹದಲ್ಲಿ ಪದಗಳನ್ನು ಓದುವ ಹಾಗೆ ಬರೆಯದೆ ಬೇರೆ ಬಗೆಯಲ್ಲಿ ಬರೆಯಬೇಕಾಗಿದೆಯಾದರೆ, ಅದು ಅಂತಹ ಬರಹವನ್ನು ಕಲಿಯುವವರಿಗೆ ಮತ್ತು ಬಳಸುವವರಿಗೆ ಹಲವು ಬಗೆಯ ತೊಡಕುಗಳನ್ನು ತಂದೊಡ್ಡುತ್ತದೆ; ಕನ್ನಡ ಬರಹದ ಈ ಸಂಪ್ರದಾಯ ಮುಕ್ಯವಾಗಿ ಕೆಳಗೆ ಕೊಟ್ಟಿರುವಂತಹ ತೊಡಕುಗಳನ್ನು ಕೊಡುತ್ತಿದೆ:

(೧) ಓದಲು ಮತ್ತು ಬರೆಯಲು ಕಲಿಯಹೊರಡುವ ಮಕ್ಕಳು ಅನವಶ್ಯಕವಾಗಿ ಹದಿನೇಳು ಹೆಚ್ಚಿನ ಬರಿಗೆ(ಅಕ್ಶರ)ಗಳನ್ನು ಕಲಿಯಬೇಕಾಗುತ್ತದೆ.

(೨) ಸರಿಯಾಗಿ ಮತ್ತು ಸಲೀಸಾಗಿ ಓದಲು ಕಲಿಯಬೇಕಿದ್ದಲ್ಲಿ, ಪದಗಳನ್ನು ಉಲಿಗಳ ಜೋಡಣೆಯಿಂದ ಉಂಟುಮಾಡಲಾಗಿದೆ (ಎತ್ತುಗೆಗೆ, ಮನೆ ಎಂಬುದನ್ನು ಮ್, ಅ, ನ್ ಮತ್ತು ಎ ಎಂಬ ಉಲಿಗಳ ಜೋಡಣೆಯಿಂದ ಉಂಟುಮಾಡಲಾಗಿದೆ) ಎಂಬುದನ್ನು ಗಮನಿಸಬೇಕು, ಮತ್ತು ಈ ಉಲಿಗಳನ್ನು ಸೂಚಿಸುವುದಕ್ಕಾಗಿ ಬರಹದಲ್ಲಿ ಬರಿಗೆಗಳನ್ನು ಬಳಸಲಾಗುತ್ತದೆ ಎಂಬುದನ್ನೂ ಗಮನಿಸಬೇಕು. ಇವೆರಡನ್ನು ಗಮನಿಸಿದವರು ಬರಹದಲ್ಲಿ ಹೊಸ ಹೊಸ ಪದಗಳು ಬಂದಾಗಲೂ ಅವನ್ನು ಸುಲಬವಾಗಿ ಓದಬಲ್ಲವರಾಗುತ್ತಾರೆ.

ಪದಗಳನ್ನು ಓದುವ ಹಾಗೆಯೇ ಬರೆದಿದೆಯಾದರೆ ಮಾತ್ರ, ಈ ರೀತಿ ಓದುವಾಗ ಬಳಸುವ ಉಲಿಗೂ ಬರಹದಲ್ಲಿ ಕಾಣಿಸುವ ಬರಿಗೆಗಳಿಗೂ ನಡುವೆ ಸಂಬಂದವಿದೆ ಎಂಬುದು ಓದಲು ಕಲಿಯುವವರ ಗಮನಕ್ಕೆ ಸುಲಬವಾಗಿ ಬರುತ್ತದೆ.

ಓದುವ ಹಾಗೆ ಬರೆಯದೆ ಬೇರೆ ಬಗೆಯಲ್ಲಿ ಪದಗಳನ್ನು ಬರೆದಿದೆಯಾದರೆ, ಅವುಗಳಲ್ಲಿ ಬರುವ ಬರಿಗೆಗಳಿಗೂ ಉಲಿಗಳಿಗೂ ನಡುವೆ ಇಂತಹದೊಂದು ಸಂಬಂದವಿದೆಯೆಂಬುದು ಹೆಚ್ಚಿನವರ ಗಮನಕ್ಕೂ ಬರುವುದೇ ಇಲ್ಲ, ಮತ್ತು ಇದರಿಂದಾಗಿ ಎಶ್ಟು ಕಲಿತರೂ ಅವರಿಗೆ ಸಲೀಸಾಗಿ ಓದಲು ಬರುವುದೇ ಇಲ್ಲ. ಬರಹದಲ್ಲಿ ಹೊಸ ಹೊಸ ಪದಗಳು ಬಂದಾಗ ಅವನ್ನು ಹೇಗೆ ಓದಬೇಕೆಂಬುದು ಅವರಿಗೆ ಗೊತ್ತಾಗುವುದೂ ಇಲ್ಲ.

(೩) ಓದುವ ಹಾಗೆ ಬರೆಯುವ ಪದಗಳನ್ನು ಬರಹಗಳಲ್ಲಿ ಬಳಸುವುದು ಸುಲಬ; ಬೇರೆ ಬಗೆಯಲ್ಲಿ ಬರೆಯುವ ಒಂದೊಂದು ಪದವನ್ನೂ ಅದನ್ನು ಬರೆಯುವುದು ಹೇಗೆ ಎಂಬುದನ್ನು ನೆನಪಿನಲ್ಲಿರಿಸಿಕೊಳ್ಳಬೇಕಾಗುತ್ತದೆ; ಮನೆ ಎಂಬ ಪದವನ್ನು ಓದುವ ಹಾಗೆಯೇ ಬರೆಯುವ ಕಾರಣ, ಅದನ್ನು ಹೇಗೆ ಬರೆಯುವುದೆಂಬುದನ್ನು ನೆನಪಿನಲ್ಲಿರಿಸಿಕೊಳ್ಳಬೇಕಾಗಿಲ್ಲ.
ಆದರೆ, ವಿಶೇಷ ಎಂಬ ಪದವನ್ನು ಬರೆಯುವಾಗ ಎರಡನೆಯ ಮುಚ್ಚುಲಿಯನ್ನು ಶ್ ಎಂಬುದಾಗಿ, ಮತ್ತು ಮೂರನೆಯ ಮುಚ್ಚುಲಿಯನ್ನು ಷ್ ಎಂಬುದಾಗಿ ಬರೆಯಬೇಕೆಂಬುದನ್ನು ನೆನಪಿನಲ್ಲಿರಿಸಿಕೊಳ್ಳಬೇಕಾಗುತ್ತದೆ; ಯಾಕೆಂದರೆ, ಅವೆರಡನ್ನೂ ಒಂದೇ ರೀತಿಯಲ್ಲಿ ಓದಲಾಗುತ್ತದೆ.ಇದನ್ನು ನೆನಪಿನಲ್ಲಿಟ್ಟುಕೊಳ್ಳಲಾರದವರು ಬರವಣಿಗೆಯಲ್ಲಿ ತಪ್ಪು ಮಾಡುತ್ತಾರೆ.

ಇವತ್ತು ದಿನಪತ್ರಿಕೆಗಳಲ್ಲಿ, ಕತೆ-ಕಾದಂಬರಿಗಳಲ್ಲಿ, ಮತ್ತು ಬೇರೆ ಬಗೆಯ ಬರಹಗಳಲ್ಲಿ ಅತಿ ಹೆಚ್ಚು ತಪ್ಪುಗಳು ಕಾಣಿಸುವುದು ಓದುವ ಹಾಗೆ ಬರೆಯದಿರುವ ಮಹಾಪ್ರಾಣಾಕ್ಶರ, ಷಕಾರ, ಋಕಾರ ಮೊದಲಾದ ಬರಿಗೆಗಳಿರುವ ಸಂಸ್ಕ್ರುತ ಪದಗಳ ಬಳಕೆಯಲ್ಲಿ ಎಂಬುದನ್ನು ಗಮನಿಸಬಹುದು.

(೪) ಸಾಮಾನ್ಯವಾಗಿ ಜನರು ಪದಕೋಶಗಳನ್ನು ನೋಡಲು ಹೋಗುವುದು ಹೊಸದಾಗಿ ಅವರ ಓದಿನಲ್ಲಿ ಕಾಣಿಸಿಕೊಳ್ಳುವ ಪದಗಳ ಹುರುಳೇನೆಂಬುದನ್ನು ತಿಳಿಯುವುದಕ್ಕಾಗಿ; ಆದರೆ, ಓದುವ ಹಾಗೆ ಬರೆಯದಿರುವ ವಿಶೇಷ, ಅಧಿಕಾರಿ ಮೊದಲಾದ ಪದಗಳನ್ನು ಅವುಗಳ ಹುರುಳೇನೆಂಬುದನ್ನು ತಿಳಿಯುವುದಕ್ಕಿಂತಲೂ ಅವನ್ನು ಬರೆಯುವುದು ಹೇಗೆ ಎಂಬುದನ್ನು ತಿಳಿಯುವುದಕ್ಕಾಗಿ ಪದಕೋಶಗಳನ್ನು ನೋಡಬೇಕಾಗುತ್ತದೆ. ಓದುವ ಹಾಗೆಯೇ ಬರೆಯುವ ಯಾವ ಪದವನ್ನೂ ಈ ರೀತಿ ಅವನ್ನು ಬರೆಯುವುದು ಹೇಗೆ ಎಂಬುದನ್ನು ತಿಳಿಯಲು ಪದಕೋಶವನ್ನು ನೋಡಬೇಕಾಗುವುದಿಲ್ಲ.

(೫) ಕೆಳವರ‍್ಗದ ಮಕ್ಕಳಲ್ಲಿ ಇಂತಹ ಪದಗಳ ಕಲಿಕೆ ಕೀಳರಿಮೆಯನ್ನು ಉಂಟುಮಾಡುತ್ತದೆ; ಅವು ಕೊಡುವ ತೊಂದರೆಯಿಂದಾಗಿ ಕೆಲವರು ಬರಹದ ಕಲಿಕೆಯನ್ನು ನಡುವಿನಲ್ಲೇ ನಿಲ್ಲಿಸಿಬಿಡುತ್ತಾರೆ. ಓದಲು ಕಲಿತವರೂ ಅದನ್ನು ತುಂಬಾ ಅಪರೂಪವಾಗಿ ಮಾತ್ರ ಬಳಸುತ್ತಾರೆ. ಯಾಕೆಂದರೆ, ಅವರಿಗೆ ಸಲೀಸಾಗಿ ಓದುವುದು ಹೇಗೆ ಎಂಬುದು ತಿಳಿದಿರುವುದಿಲ್ಲ.
ಸಮಾಜಗಳಲ್ಲಿ ಹಲವಾರು ಬಗೆಯ ಸಂಪ್ರದಾಯಗಳು ಬೇರೆ ಬೇರೆ ಕಾರಣಗಳಿಗಾಗಿ ಬಳಕೆಗೆ ಬರುತ್ತವೆ, ಮತ್ತು ಅವುಗಳಿಂದ ಸಮಾಜಕ್ಕೆ ಪ್ರಯೋಜನಗಳೇನೂ ಇಲ್ಲದಿದ್ದರೂ, ಹೆಚ್ಚಿನ ತೊಂದರೆಯಿಲ್ಲವಾದಲ್ಲಿ ಅವು ಹಾಗೆಯೇ ವರ‍್ಶಗಟ್ಟಲೆ ಸಮಯ ಮುಂದುವರಿಯುತ್ತಿರುತ್ತವೆ.

ಸಂಸ್ಕ್ರುತದ ಎರವಲು ಪದಗಳನ್ನು ಸಂಸ್ಕ್ರುತದಲ್ಲಿರುವ ಹಾಗೆಯೇ ಬರೆಯಬೇಕೆಂಬುದೂ ಇಂತಹದೇ ಒಂದು ಸಂಪ್ರದಾಯ. ಅದರಿಂದ ಕನ್ನಡ ಬರಹದ ಮಟ್ಟಿಗೆ ಯಾವ ಪ್ರಯೋಜನವೂ ಇಲ್ಲ. ಹಳೆಗನ್ನಡದ ಸಮಯದಲ್ಲಿ ಇಂತಹ ಪದಗಳನ್ನು ಸಂಸ್ಕ್ರುತದಲ್ಲಿದ್ದ ಹಾಗೆಯೇ ಬರೆಯಬಹುದಿತ್ತು, ಇಲ್ಲವೇ ಕನ್ನಡದ ಸೊಗಡನ್ನು ಕೆಡಿಸದಂತೆ ಅವನ್ನು ಮಾರ‍್ಪಡಿಸಿ ತದ್ಬವಗಳನ್ನಾಗಿ ಮಾಡಿಯೂ ಬಳಸಬಹುದಿತ್ತು. ಆಂಡಯ್ಯನ ಕಬ್ಬಿಗರ ಕಾವದಲ್ಲಿ ಅಂತಹ ತದ್ಬವ ಪದಗಳನ್ನು ಮಾತ್ರ ಬಳಸಲಾಗಿದೆ.

ಆದರೆ, ಇವತ್ತು ಹೊಸಗನ್ನಡದಲ್ಲಿ ಬರಹಗಾರರು ಈ ಆಯ್ಕೆಯನ್ನು ಕಳೆದುಕೊಂಡಿದ್ದಾರೆ. ಬಳಕೆಯಲ್ಲಿರುವ ಕೆಲವೇ ಕೆಲವು ತದ್ಬವ ಪದಗಳನ್ನು ಹೊರತುಪಡಿಸಿ, ಉಳಿದ ಎಲ್ಲಾ ಸಂಸ್ಕ್ರುತ ಪದಗಳನ್ನೂ ಇವತ್ತು ಸಂಸ್ಕ್ರುತದಲ್ಲಿರುವ ಹಾಗೆಯೇ ಬರೆಯಬೇಕಾಗಿದೆ. ಅವುಗಳಲ್ಲಿ ಯಾವುದೇ ಬಗೆಯ ಮಾರ‍್ಪಾಡನ್ನು ನಡೆಸಿದರೂ ಅದನ್ನು ತಪ್ಪೆಂದು ತಿಳಿಯಲಾಗುತ್ತದೆ.
ಮೊನ್ನೆ ಮೊನ್ನೆಯ ವರೆಗೂ ಈ ಸಂಪ್ರದಾಯ ಹೆಚ್ಚಿನ ತೊಂದರೆಯನ್ನೇನೂ ಕೊಡುತ್ತಿರಲಿಲ್ಲ. ಯಾಕೆಂದರೆ, ಸಮಾಜದಲ್ಲಿ ಮೇಲ್ವರ‍್ಗಕ್ಕೆ ಸೇರಿದ ಕೆಲವೇ ಕೆಲವು ಮಂದಿ ಮಾತ್ರ ಬರಹವನ್ನು ಬಳಸಬೇಕಾಗಿತ್ತು, ಮತ್ತು ಅವರಲ್ಲಿ ಹೆಚ್ಚಿನವರೂ ಕನ್ನಡದೊಂದಿಗೆ ಸಂಸ್ಕ್ರುತವನ್ನೂ ಕಲಿಯುತ್ತಿದ್ದರು; ಹಾಗಾಗಿ, ಈ ಸಂಪ್ರದಾಯವನ್ನು ಮುಂದುವರಿಸಿಕೊಂಡುಹೋಗುವುದು ಅವರಿಗೆ ತೊಡಕಿನದಾಗಿರಲಿಲ್ಲ.

ಆದರೆ, ಇವತ್ತು ಎಲ್ಲಾ ವರ‍್ಗದ ಜನರು ಮತ್ತು ಎಲ್ಲರೂ ಬರಹವನ್ನು ಬಳಸಬೇಕಾಗಿದೆ. ಯಾಕೆಂದರೆ, ಇವತ್ತು ಸಮಾಜದಲ್ಲಿ ಬರಹಕ್ಕೆ ಅಂತಹದೊಂದು ಪ್ರಾಮುಕ್ಯತೆ ಬಂದಿದೆ. ಬರಹವನ್ನು ಬಳಸಲು ತಿಳಿಯದವರು ಮುಂದೆ ಬರಲು ಸಾದ್ಯವೇ ಇಲ್ಲ, ಮತ್ತು ಅಂತಹ ಹಲವು ಮಂದಿ ಜನರಿರುವ ಸಮಾಜ ಏಳಿಗೆಯಾಗಲೂ ಸಾದ್ಯವೇ ಇಲ್ಲ ಎಂಬ ಪರಿಸ್ತಿತಿ ಇವತ್ತಿನದಾಗಿದೆ.

ಈ ರೀತಿ ಕನ್ನಡ ಬರಹವನ್ನು ಬಳಸಲು ಕಲಿಯಲೇ ಬೇಕಾಗಿರುವ ಜನರಲ್ಲಿ ಹೆಚ್ಚಿನವರಿಗೂ ಸಂಸ್ಕ್ರುತದ ಅರಿವು ಬೇಕಾಗಿಲ್ಲ; ಅದಕ್ಕಿಂತಲೂ ಅವರಿಗೆ ಇಂಗ್ಲಿಶ್ ನುಡಿಯ ಅರಿವು ಹೆಚ್ಚಿನ ನೆರವು ನೀಡಬಲ್ಲುದು. ಹಾಗಾಗಿ, ಅವರ ಮಟ್ಟಿಗೆ ಸಂಸ್ಕ್ರುತ ಪದಗಳನ್ನು ಸಂಸ್ಕ್ರುತದಲ್ಲಿರುವ ಹಾಗೆಯೇ ಬರೆಯಬೇಕೆಂಬ ಮೇಲಿನ ಸಂಪ್ರದಾಯ ಒಂದು ಹೆಚ್ಚಿನ ತೊಡಕನ್ನು ಮಾತ್ರ ತಂದೊಡ್ಡುತ್ತದಲ್ಲದೆ, ಅದರಿಂದ ಅವರು ಪಡೆಯಬಹುದಾದ ಪ್ರಯೋಜನ ಯಾವುದೂ ಇಲ್ಲ.

ಈ ರೀತಿ ಕನ್ನಡದ ಮಟ್ಟಿಗೆ ಯಾವ ಪ್ರಯೋಜನವನ್ನೂ ನೀಡದ, ಹಲವು ಮಂದಿ ಕನ್ನಡಿಗರಿಗೆ ತೊಡಕನ್ನು ಮಾತ್ರವೇ ಕೊಡುವ, ಮತ್ತು ನಮ್ಮ ಸಮಾಜದ ಏಳಿಗೆಗೂ ತೊಡಕಾಗಿರುವ ಈ ಸಂಪ್ರದಾಯವನ್ನು ಬಿಟ್ಟುಕೊಡುವುದೇ ಜಾಣತನ. ಇದು ಒಂದೂವರೆ-ಎರಡು ಸಾವಿರ ವರ‍್ಶದ ಹಿಂದಿನ ಸಮಾಜಕ್ಕಾಗಿ ಮಾಡಿಕೊಂಡಿದ್ದ ಸಂಪ್ರದಾಯ. ಇಂದಿನ ಸಮಾಜ ಆಗಿನದಕ್ಕಿಂತ ತೀರ ಬೇರೆಯಾಗಿದೆ. ಹೀಗಿರುವಾಗಲೂ ಆ ಹಳೆಯ ಸಂಪ್ರದಾಯವನ್ನು ತೊರೆಯಲು ಹಿಂಜರಿಯುವುದೆಂದರೆ, ಅಪ್ಪ ನೆಟ್ಟ ಆಲದ ಮರವೆಂದು ನೇಣು ಹಾಕಿಕೊಳ್ಳುವ ಹಾಗೆ.

(ಈ ಬರಹ ವಿಜಯ ಕರ‍್ನಾಟಕ ಸುದ್ದಿಹಾಳೆಯ ’ಎಲ್ಲರ ಕನ್ನಡ’ ಅಂಕಣದಲ್ಲಿ ಮೊದಲು ಮೂಡಿಬಂದಿತ್ತು).

ಮೂಲ : ಹೊನಲು

ಮನೆಯ ಹೊರಗಡೆ ಅಡಿಗೆಮನೆ ಪಾಕಶಾಲೆಯಾಗಬೇಕೇ

ಕನ್ನಡಿಗರ ಪದಬಳಕೆಯ ವಿಶಯದಲ್ಲಿ ಒಂದು ಸೋಜಿಗದ ಸಂಗತಿಯಿದೆ. ಅದೇನೆಂದು ತಿಳಿಯಲು ಕೆಲವು ಎತ್ತುಗೆಗಳನ್ನು ತೆಗೆದುಕೊಳ್ಳೋಣ:

ಮನೆಯಲ್ಲಿ ಅಡಿಗೆಮನೆ, ಊಟದಕೋಣೆ ಎನ್ನುವ ನಾವು ಸಮ್ಮೇಳನಗಳಂತಹ ಸಂದರ‍್ಬಗಳಲ್ಲಿ ಅವುಗಳ ಬದಲಾಗಿ ಪಾಕಶಾಲೆ, ಬೋಜನಶಾಲೆ ಎನ್ನುತ್ತೇವೆ. ಬಟ್ಟೆಯಂಗಡಿಗೆ ಹೋಗುತ್ತೇನೆ ಎನ್ನುತ್ತೇವೆ; ಆದರೆ, ಅಂತಹ ಅಂಗಡಿಗಳಿಗೆ ಹೆಸರು ಕೊಡಬೇಕಾದಾಗ, ವಸ್ತ್ರಾಲಯ ಇಲ್ಲವೇ ವಸ್ತ್ರಬಂಡಾರ ಎಂಬ ಹೆಸರುಗಳಶ್ಟೇ ಹೊಳೆಯುತ್ತವೆ. ತಿಂಡಿಗಳನ್ನು ಮಾರುವ ಅಂಗಡಿ ತಿಂಡಿಮನೆಯಾಗಿಬಿಟ್ಟರೆ ಅದೇನೋ ಮುಜುಗರ, ಉಪಹಾರಗ್ರುಹವೇ ಆಗಬೇಕು.

ನಾಯಿಯ ಕುರಿತು ಬರೆದ ಬರಹದಲ್ಲಿ ಉದ್ದಕ್ಕೂ ನಾಯಿ ಎಂಬ ಪದವೇ ಬಳಕೆಯಾಗಿದೆಯಾದರೂ, ತಲೆಬರಹದಲ್ಲಿ ಮಾತ್ರ ಶ್ವಾನವಿದ್ದರಶ್ಟೇ ನೆಮ್ಮದಿ. ಮದುವೆಯ ಕರೆಯೋಲೆ ಕಳುಹಿಸುವ ಬದಲು ವಿವಾಹ ಆಮಂತ್ರಣ ಕಳಿಸಿದರೆ ಮಾತ್ರ ಮದುವೆಗೆ ಬರುತ್ತಾರೇನೋ ಎಂಬ ಅನಿಸಿಕೆ ನಮ್ಮಲ್ಲಿ ಹಲವರಲ್ಲಿದ್ದಂತಿದೆ.

ಹಾಗೆಯೇ, ಪುಸ್ತಕಗಳಿಗೆ ಹೆಸರು ಕೊಡುವಲ್ಲೂ ಬಳಕೆಯಲ್ಲಿರುವ ಪದಗಳಿಗಿಂತ ಬಳಕೆಯಲ್ಲಿಲ್ಲದ ಮತ್ತು ಹೆಚ್ಚು ಮಂದಿಗೆ ತಿಳಿಯದ ಪದಗಳೇ ಚಂದವೆಂದು ಹಲವು ಬರಹಗಾರರಿಗೆ ಅನಿಸುತ್ತದೆ. ಮನೆಗಳಿಗೆ, ಅಂಗಡಿಗಳಿಗೆ, ಕೂಟಗಳಿಗೆ, ಇಲ್ಲವೇ ಹಲವು ಬಗೆಯ ಹಮ್ಮುಗೆಗಳಿಗೆ ಹೆಸರು ಕೊಡಬೇಕಾಗಿರುವಲ್ಲೂ ನಮ್ಮ ಒಡಲಿನಿಂದ ನೇರವಾಗಿ ಬರುವ ಪದಗಳು ತಕ್ಕವೆಂದು ತೋರುವುದೇ ಇಲ್ಲ; ದೂರದರ‍್ಶನ, ದಿನಪತ್ರಿಕೆ, ಉಚ್ಚಶಿಕ್ಶಣ, ನಿರುದ್ಯೋಗ ಸಮಸ್ಯೆ, ಜನಗಣನೆ, ಲೋಕಾಯುಕ್ತ, ಪಟ್ಯಪುಸ್ತಕ ಮೊದಲಾದ ಹಲವು ಬಗೆಯ ಪದಗಳನ್ನು ಉಂಟುಮಾಡುವಲ್ಲಿ ಕೂಡ ಇದೇ ಸೋಜಿಗವನ್ನು ಕಾಣಬಹುದು.

ಇಂತಹ ಹಲವಾರು ‘ಮೇಲ್ಮಟ್ಟದ’ ಸನ್ನಿವೇಶಗಳಲ್ಲಿ ನಮ್ಮ ನಾಲಿಗೆಗಳಿಗೆ ತಂತಾನೇ ಬರುವ ಪದಗಳು – ಎಂದರೆ ಕನ್ನಡದವೇ ಆದ ಪದಗಳು – ಬಳಕೆಗೆ ತಕ್ಕವಲ್ಲ, ಮೇಲೆ ಕಾಣಿಸಿದಂತೆ ಸಂಸ್ಕ್ರುತದಿಂದ ಎರವಲು ಪಡೆದ ಪದಗಳೇ ತಕ್ಕವು ಎಂಬ ಕೀಳರಿಮೆ ನಮ್ಮಲ್ಲಿ ಹೆಚ್ಚಿನವರಲ್ಲಿದೆ. ಇದೊಂದು ಸೋಜಿಗವಲ್ಲದೆ ಮತ್ತೇನು?

ಹಿಂದಿನ ಕಾಲದಲ್ಲಿ ಕನ್ನಡ ನುಡಿ ಸಂಸ್ಕ್ರುತದ ಕಳೆಗೆಟ್ಟ ರೂಪ ಎಂಬ ಅನಿಸಿಕೆ ಹಲವು ಕನ್ನಡ ಪಂಡಿತರಲ್ಲಿತ್ತು; ಕನ್ನಡ ಪದಗಳಿಗಿಂತ ಸಂಸ್ಕ್ರುತ ಪದಗಳು ಮೇಲ್ಮಟ್ಟದವು ಎಂಬುದಾಗಿ ಅವರು ತಿಳಿಯುತ್ತಿದ್ದುದಕ್ಕೆ ಈ ತಪ್ಪು ಅನಿಸಿಕೆ ಕಾರಣವಾಗಿತ್ತು; ಆದರೆ, ನಿಜಕ್ಕೂ ಕನ್ನಡ ಸಂಸ್ಕ್ರುತದ ಕಳೆಗೆಟ್ಟ ರೂಪ ಅಲ್ಲ, ಅದಕ್ಕಿಂತ ತೀರ ಬೇರಾಗಿರುವ ಒಂದು ಸ್ವತಂತ್ರವಾದ ನುಡಿ ಎಂಬುದನ್ನು ಇವತ್ತು ನಾವು ಕಂಡುಕೊಂಡಿದ್ದೇವೆ. ಹಾಗಾಗಿ, ಇವತ್ತಿಗೂ ಸಂಸ್ಕ್ರುತ ಪದಗಳು ಕನ್ನಡ ಪದಗಳಿಂದ ಮೇಲ್ಮಟ್ಟದವು ಎಂದು ಬಾವಿಸುವುದಕ್ಕೆ ಯಾವ ಆದಾರವೂ ಇಲ್ಲ.

ಈ ರೀತಿ ಹೊಸಪದಗಳನ್ನು ಉಂಟುಮಾಡಬೇಕಾಗಿರುವಲ್ಲಿ ಕನ್ನಡದವೇ ಆದ ಪದಗಳನ್ನು ಬಳಸದಿರುವುದಕ್ಕೆ ಅವುಗಳ ಕುರಿತಾಗಿ ಕೀಳರಿಮೆ ಇರುವುದು ಒಂದು ಕಾರಣವಾದರೆ, ತಮಗೆ ಬೇಕಾಗಿರುವ ಹೊಸ ಪದಗಳನ್ನು ಉಂಟುಮಾಡುವ ಅಳವು ಕನ್ನಡಕ್ಕಿಲ್ಲ ಎಂಬ ತಪ್ಪು ಕಲ್ಪನೆ ಇನ್ನೊಂದು ಕಾರಣ. ಸಂಸ್ಕ್ರುತದಲ್ಲಿರುವಶ್ಟು ಒಟ್ಟು(ಪ್ರತ್ಯಯ)ಗಳು ಮತ್ತು ಪದಗಳು ಕನ್ನಡದಲ್ಲಿಲ್ಲ; ಹಾಗಾಗಿ, ಹಲವು ಬಗೆಯ ಪದಗಳನ್ನು ಹೊಸದಾಗಿ ಉಂಟುಮಾಡುವಲ್ಲಿ ಸಂಸ್ಕ್ರುತದ ಮೊರೆಹೊಗದೆ ಬೇರೆ ದಾರಿಯೇ ಇಲ್ಲ ಎಂಬ ಅನಿಸಿಕೆ ಹಲವರಲ್ಲಿದೆ.

ಆದರೆ, ಇದು ತಪ್ಪು ಅನಿಸಿಕೆ. ಎಂತಹ ವಿಶಯವನ್ನು ಬೇಕಿದ್ದರೂ ತಿಳಿಸಲು ಬೇಕಾಗುವಂತಹ ಪದಗಳನ್ನು ಮತ್ತು ಸೊಲ್ಲುಗಳನ್ನು ಉಂಟುಮಾಡುವ ಅಳವು ಕನ್ನಡಕ್ಕಿದೆ. ಎಲ್ಲಾ ಸ್ವಾಬಾವಿಕವಾಗಿ ಬೆಳೆದುಬಂದ ನುಡಿಗಳಿಗೂ ಇಂತಹ ಅಳವು ಇರುತ್ತದೆ. ಕನ್ನಡದ ಈ ಅಳವು ಎಂತಹದು ಎಂಬುದನ್ನು ಸರಿಯಾಗಿ ತಿಳಿದುಕೊಂಡು, ಅದನ್ನು ಬಳಸಿ, ಕನ್ನಡಕ್ಕೆ ಬೇಕಾಗಿರುವ ಹೊಸ ಪದಗಳನ್ನು ಕನ್ನಡದಲ್ಲೇನೇ ಉಂಟುಮಾಡಲು ಬರುತ್ತದೆ. ಅಂತಹ ಹೊಸ ಪದಗಳಿರುವ ಬರವಣಿಗೆಯನ್ನು ಹೆಚ್ಚು ಹೆಚ್ಚು ಕನ್ನಡಿಗರು ಸುಲಬವಾಗಿ ಓದಿ ತಿಳಿದುಕೊಳ್ಳಬಲ್ಲರು, ಮತ್ತು ಬರವಣಿಗೆಯ ಮೂಲಕ ನಡೆಯುವ ಚರ್ಚೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲೂ ಬಲ್ಲರು. ಬರವಣಿಗೆಯ ಗುರಿಯೇ ಇದಲ್ಲವೆ?

ಎಲ್ಲಾ ನುಡಿಗಳಿಗೂ ಅವುಗಳದೇ ಆದ ಪದಗಳ ಸೊಗಡು ಎಂಬುದಿರುತ್ತದೆ; ಕನ್ನಡ ಪದಗಳ ಸೊಗಡು ಸಂಸ್ಕ್ರುತ ಪದಗಳ ಸೊಗಡಿಗಿಂತ ತೀರ ಬೇರಾಗಿದೆ. ಕನ್ನಡ ಬರಹದಲ್ಲಿ ಹೆಚ್ಚು ಹೆಚ್ಚು ಸಂಸ್ಕ್ರುತ ಪದಗಳನ್ನು ಬಳಸಿದಂತೆಲ್ಲ, ಅದರ ಪದಗಳ ಸೊಗಡು ಮರೆಯಾಗುತ್ತಾ ಹೋಗುತ್ತದೆ, ಮತ್ತು ಅದನ್ನು ಓದಿ ತಿಳಿಯುವ ಕೆಲಸ ಕನ್ನಡಿಗರಿಗೆ ಹೆಚ್ಚು ಹೆಚ್ಚು ತೊಡಕಿನದಾಗುತ್ತಾ ಹೋಗುತ್ತದೆ.

ಹಾಗಾಗಿ, ಕನ್ನಡ ಬರಹಗಳಲ್ಲಿ ಹೆಚ್ಚು ಹೆಚ್ಚು ಎರವಲು ಪದಗಳನ್ನು ಬಳಸಹೋಗದೆ, ಅದರ ಪದಗಳ ಸೊಗಡನ್ನು ಉಳಿಸಿಕೊಳ್ಳಬೇಕು ಎನ್ನುವುದು ಬರಿಯ ಅಬಿಮಾನದ ಪ್ರಶ್ನೆ ಮಾತ್ರ ಅಲ್ಲ; ಕನ್ನಡ ಬರಹ ಎಲ್ಲಾ ಕನ್ನಡಿಗರನ್ನೂ ತಲಪಬೇಕು ಮತ್ತು ಎಲ್ಲಾ ಕನ್ನಡಿಗರಿಂದಲೂ ಹೊರಬರಬೇಕೆಂಬ ಮುಕ್ಯವಾದ ಗುರಿಯನ್ನು ಮುಟ್ಟುವ ಪ್ರಶ್ನೆಯೂ ಹೌದು.

ಇತ್ತೀಚೆಗೆ ಕನ್ನಡದಲ್ಲಿ ಅರಿಮೆಯ (ಪಾರಿಬಾಶಿಕ) ಪದಗಳನ್ನು ಉಂಟುಮಾಡುವವರು ಈ ವಿಶಯವನ್ನು ಪೂರ‍್ತಿ ಮರೆತಿರುವಂತೆ ಕಾಣುತ್ತದೆ. ಕನ್ನಡದವೇ ಆದ ಪದಗಳು ಅವರ ಕಣ್ಣಿಗೆ ಕಾಣಿಸದೆ ಹೋಗುತ್ತಿವೆ. ಅವರು ಉಂಟುಮಾಡಿರುವ ಪದಕೋಶಗಳಲ್ಲಿ ನೂರಕ್ಕೆ ತೊಂಬತ್ತರಶ್ಟು ಸಂಸ್ಕ್ರುತದಿಂದ ಎರವಲು ಪಡೆದ, ಇಲ್ಲವೇ ಸಂಸ್ಕ್ರುತದಲ್ಲಿ ಹೊಸದಾಗಿ ಉಂಟುಮಾಡಿ ಕನ್ನಡಕ್ಕೆ ಎರವಲು ತಂದ ಪದಗಳೇ ಕಾಣಿಸಿಕೊಳ್ಳುತ್ತವೆ; ಇಂತಹ ಪದಕೋಶಗಳನ್ನು ಕನ್ನಡ ಪದಕೋಶಗಳೆಂದು ಕರೆಯುತ್ತಿರುವುದು ನಿಜಕ್ಕೂ ಅಚ್ಚರಿಯ ವಿಶಯವಾಗಿದೆ!

ಇಂಗ್ಲಿಶ್‌ನಲ್ಲಿರುವ ಹಲವು ಅರಿಮೆಯ ಪದಗಳು ಕನ್ನಡದ ಸೊಲ್ಲುಗಳಲ್ಲಿ ಸರಿಯಾಗಿ ಹೊಂದಿಕೊಳ್ಳುವುದಿಲ್ಲ, ಅವನ್ನು ಬಳಸಿದ ಸೊಲ್ಲುಗಳು ಸಿಕ್ಕಲು ಸಿಕ್ಕಲಾಗಿ ಕಾಣಿಸಿಕೊಳ್ಳುತ್ತವೆ, ಮತ್ತು ಅವನ್ನು ಓದಿ ತಿಳಿದುಕೊಳ್ಳುವ ಕೆಲಸ ಕನ್ನಡಿಗರಿಗೆ ತುಂಬಾ ತೊಡಕಿನದಾಗುತ್ತದೆ. ಹಾಗಾಗಿ, ನಾವು ಅವುಗಳ ಬದಲು ಬೇರೆ ಕನ್ನಡದವೇ ಆದ ಅರಿಮೆಯ ಪದಗಳನ್ನು ಉಂಟುಮಾಡಲು ಹೋಗುತ್ತೇವೆ.

ಆದರೆ, ಹಾಗೆ ಪದಗಳನ್ನು ಉಂಟುಮಾಡಬೇಕಿರುವಲ್ಲಿ ಕನ್ನಡದವೇ ಆದ ಪದಗಳನ್ನು ಬಳಸುವ ಬದಲು ಸಂಸ್ಕ್ರುತ ಪದಗಳನ್ನು ಬಳಸಿದೆವಾದರೆ, ನಮ್ಮವೇ ಆದ ಪದಗಳನ್ನು ಉಂಟುಮಾಡುವುದರ ಹಿಂದಿರುವ ಮುಕ್ಯವಾದ ಗುರಿಯನ್ನು ನಾವು ತಲಪುವುದೇ ಇಲ್ಲ. ಯಾಕೆಂದರೆ, ಇಂಗ್ಲಿಶ್ ಎರವಲುಗಳ ಹಾಗೆ ಹಲವು ಸಂಸ್ಕ್ರುತ ಎರವಲುಗಳೂ ಕನ್ನಡದ ಸೊಲ್ಲುಗಳಲ್ಲಿ ಸರಿಯಾಗಿ ಹೊಂದಿಕೊಳ್ಳುವುದಿಲ್ಲ, ಮತ್ತು ಅವನ್ನು ಬಳಸಿದ ಸೊಲ್ಲುಗಳು ಸಿಕ್ಕಲು ಸಿಕ್ಕಲಾಗಿಯೇ ಉಳಿಯುತ್ತವೆ. ಅವನ್ನು ಓದಿ, ಅವು ತಿಳಿಸುವ ವಿಶಯಗಳನ್ನು ತಿಳಿದುಕೊಳ್ಳುವ ಕೆಲಸವೂ ತುಂಬಾ ತೊಡಕಿನದಾಗಿಯೇ ಉಳಿಯುತ್ತದೆ.

ಸಂಸ್ಕ್ರುತ ಪದಗಳನ್ನು ಬಳಸಿ ಪಳಗಿರುವ ಕನ್ನಡ ಬರಹಗಾರರಿಗೆ ಮತ್ತು ಓದುಗರಿಗೆ ತುಂಬಾ ಸಂಸ್ಕ್ರುತ ಪದಗಳನ್ನು ಬಳಸಿರುವ ಬರಹಗಳೂ ಅಶ್ಟೊಂದು ತೊಡಕಿನವೆಂದು ಅನಿಸದಿರಬಹುದು. ಇದಕ್ಕೆ ಕಾರಣವೇನೆಂದರೆ, ಅವರು ಕನ್ನಡ ಪದಗಳ ಸೊಗಡನ್ನು ಮಾತ್ರವಲ್ಲದೆ ಸಂಸ್ಕ್ರುತ ಪದಗಳ ಸೊಗಡನ್ನೂ ತಮ್ಮದಾಗಿಸಿಕೊಂಡಿರುತ್ತಾರೆ.

ಆದರೆ, ಹೆಚ್ಚಿನ ಕನ್ನಡಿಗರಿಗೂ ಅಂತಹ ಬರಹಗಳು ತೊಡಕಿನವಾಗಿ ಕಾಣಿಸುತ್ತವೆ; ಅವರ ಆಡುನುಡಿಗಳಲ್ಲಿ ತುಂಬಾ ಕಡಿಮೆ ಸಂಸ್ಕ್ರುತ ಎರವಲುಗಳು ಬಳಕೆಯಾಗುತ್ತಿರುವುದು, ಮತ್ತು ಹಾಗೆ ಬಳಕೆಯಾಗುತ್ತಿರುವವೂ ಕನ್ನಡ ಪದಗಳ ಸೊಗಡಿಗೆ ಹೊಂದಿಕೆಯಾಗುವಂತೆ ಮಾರ‍್ಪಟ್ಟಿರುವುದು ಇದಕ್ಕೆ ಕಾರಣ.

ಹಾಗಾಗಿ, ಕನ್ನಡ ಬರಹಗಳು ಎಲ್ಲಾ ಕನ್ನಡಿಗರನ್ನೂ ತಲಪಬೇಕಿದ್ದಲ್ಲಿ, ಮತ್ತು ಎಲ್ಲಾ ಕನ್ನಡಿಗರಿಂದಲೂ ಹೊರಹೊಮ್ಮಬೇಕಿದ್ದಲ್ಲಿ, ಅವುಗಳಲ್ಲಿ ಬಳಕೆಯಾಗುವ ಎರವಲು ಪದಗಳನ್ನು, ಅವು ಸಂಸ್ಕ್ರುತದವಿರಲಿ ಇಲ್ಲವೇ ಇಂಗ್ಲಿಶಿನವಿರಲಿ, ಆದಶ್ಟು ಕಡಿಮೆ ಮಾಡಲು ಪ್ರಯತ್ನಿಸಬೇಕು, ಮತ್ತು ಬಳಸಲೇಬೇಕೆಂದಿರುವವು ಕನ್ನಡದ ಸೊಗಡನ್ನು ಕೆಡಿಸದಂತೆ ಅವುಗಳಲ್ಲಿ ಮಾರ‍್ಪಾಡುಗಳನ್ನು ಮಾಡಿಕೊಳ್ಳಬೇಕು.

ಎಲ್ಲಾ ಮಟ್ಟದ ಬಳಕೆಗಳಿಗೂ ಕನ್ನಡ ಪದಗಳು ತಕ್ಕುದಾದುವು ಎಂಬುದನ್ನು ಕನ್ನಡದ ಬರಹಗಾರರು ಮತ್ತು ಕನ್ನಡದಲ್ಲಿ ಹೊಸ ಪದಗಳನ್ನು ಉಂಟುಮಾಡುವವರು ಮನಗಾಣಬೇಕು, ಮತ್ತು ಮೇಲ್ಮಟ್ಟದ ಬಳಕೆಗಳಿಗೆ ಕನ್ನಡದವೇ ಆದ ಪದಗಳನ್ನು ಬಳಸುವುದು ಹೆಮ್ಮೆಯ ವಿಶಯವಶ್ಟೇ ಅಲ್ಲ, ಬರವಣಿಗೆಯ ಮುಕ್ಯ ಗುರಿಯನ್ನು ಮುಟ್ಟುವ ಬಗೆಯೂ ಹೌದೆಂಬ ಅನಿಸಿಕೆ ಅವರಲ್ಲಿ ಬೆಳೆದುಬರಬೇಕು.

(ಈ ಬರಹ ವಿಜಯ ಕರ‍್ನಾಟಕ ಸುದ್ದಿಹಾಳೆಯ ’ಎಲ್ಲರ ಕನ್ನಡ’ ಅಂಕಣದಲ್ಲಿ ಮೊದಲು ಮೂಡಿಬಂದಿತ್ತು)

ಮೂಲ : ಹೊನಲು

ಬರಹ ಕನ್ನಡ ಮತ್ತು ಆಡುಗನ್ನಡ

ಆಡುನುಡಿಯೆಂಬುದು ಜಾಗದಿಂದ ಜಾಗಕ್ಕೆ ಬದಲಾಗುವುದು ಸಹಜ. ನಮ್ಮ ನಲ್ಮೆಯ ಕನ್ನಡ ನುಡಿಗೂ ಈ ಮಾತು ಒಪ್ಪುತ್ತದೆ. ಬೇರೆ ಬೇರೆ ಊರುಗಳಲ್ಲಿರುವ ಕನ್ನಡಿಗರು ಬೇರೆ ಬೇರೆ ಆಡುಗನ್ನಡಗಳನ್ನು ಬಳಸುವುದು ನಮ್ಮೆಲ್ಲರ ಗಮನಕ್ಕೆ ಬಂದಿರುತ್ತದೆ. ಹಾಗೆಯೇ ಜಾತಿಯಿಂದ ಜಾತಿಗೂ ಆಡುಗನ್ನಡ ಬದಲಾಗುವುದನ್ನೂ ನಾವೆಲ್ಲರೂ ಕಂಡಿರುತ್ತೇವೆ. ಎತ್ತುಗೆಗಾಗಿ, ಮಯ್ಸೂರಿನ ಆಡುಗನ್ನಡಕ್ಕೂ ಹುಬ್ಬಳ್ಳಿಯ ಆಡುಗನ್ನಡಕ್ಕೂ ನಡುವೆ, ಮತ್ತು ಮಯ್ಸೂರಿನಲ್ಲೇನೇ ಬ್ರಾಹ್ಮಣರ ಆಡುಗನ್ನಡಕ್ಕೂ ಒಕ್ಕಲಿಗರ ಆಡುಗನ್ನಡಕ್ಕೂ ನಡುವೆ ವ್ಯತ್ಯಾಸವಿದೆ.

ಆದರೆ, ಬರಹ ಕನ್ನಡ ಹೀಗೆ ಬೇರೆ ಬೇರೆಯಾಗಿ ಇರುವಂತಿಲ್ಲ. ಅದು ಎಲ್ಲರಿಗೂ ಸಮನಾಗಿದ್ದು, ‘ಎಲ್ಲರ ಕನ್ನಡ’ವಾಗಿರಬೇಕಾಗುತ್ತದೆ; ಯಾಕೆಂದರೆ, ಜಾಗ ಮತ್ತು ಜಾತಿಗಳ ಎಲ್ಲೆಗಳನ್ನು ಮೀರಿ ಜನರನ್ನು ಬೆಸೆಯುವ ಒಂದು ವಿಶೇಶವಾದ ಕೆಲಸ ಅದರದು. ಹಲವು ಬಗೆಯ ಆಡುಗನ್ನಡಗಳನ್ನು ಬಳಸುವ ಎಲ್ಲಾ ಕನ್ನಡಿಗರಿಗೂ ಸಮಾನವಾಗಿರಬೇಕಾದಂತಹ ಬರಹ ಕನ್ನಡ ಅವರೆಲ್ಲರ ಆಡುಗನ್ನಡಕ್ಕಿಂತಲೂ ಬೇರಾಗಿಯೇ ಇರಬೇಕಾಗುತ್ತದೆ ಎಂದು ಸುಲಬವಾಗಿ ಕಾಣಬಹುದು.

ಬರಹ ಕನ್ನಡ ಬೇರೆ ಬೇರೆ ಆಡುಗನ್ನಡಗಳಿಗಿಂತ ಬೇರಾಗಿರಬೇಕಾದುದು ಅನಿವಾರ‍್ಯ ಎಂದ ಮಾತ್ರಕ್ಕೆ ಅದು ಅವುಗಳಿಗಿಂತ ತುಂಬಾ ದೂರದಲ್ಲಿರುವುದೂ ಅನಿವಾರ‍್ಯ ಎಂದೇನಿಲ್ಲ; ಆದಶ್ಟು ಹತ್ತಿರವೂ ಇರಬಹುದು. ಅದು ನಮ್ಮೆಲ್ಲರಿಗಿಂತ ದೂರದಲ್ಲಿರಬೇಕೋ ಹತ್ತಿರದಲ್ಲಿರಬೇಕೋ ಎಂಬ ಪ್ರಶ್ನೆಯನ್ನು ಹಾಕಿಕೊಂಡರೆ, ಯಾರೂ ‘ದೂರದಲ್ಲಿರಬೇಕು’ ಎಂಬ ಉತ್ತರವನ್ನು ಕೊಡಲಾರರು. ಬರಹ ಕನ್ನಡವನ್ನು ಎಲ್ಲಾ ಆಡುಗನ್ನಡಗಳಿಗೂ ಆದಶ್ಟು ಹತ್ತಿರವಿರುವಂತೆ ಮಾಡಿದಲ್ಲಿ, ಕನ್ನಡವನ್ನು ಓದಲು ಮತ್ತು ಬರೆಯಲು ಕಲಿಯುವ ಕೆಲಸ ಎಲ್ಲಾ ಕನ್ನಡಿಗರಿಗೂ ಸುಲಬವಾಗುತ್ತದೆ ಎಂದು ಯಾರಾದರೂ ಕಾಣಬಹುದು. ಆದುದರಿಂದ ಹಾಗೆ ಮಾಡಬೇಕಾಗಿರುವುದು ಕನ್ನಡದ ಮತ್ತು ಅದರ ಮೂಲಕ ಕನ್ನಡಿಗರ ಏಳಿಗೆಗೆ ಬಹಳ ಮುಕ್ಯವಾದ ಕೆಲಸ.

ಎಲ್ಲರಿಗೂ ಆದಶ್ಟು ಹತ್ತಿರವಿರುವ ಬರಹ ಕನ್ನಡದಲ್ಲಿ ಸಂಸ್ಕ್ರುತ, ಇಂಗ್ಲಿಶ್, ಹಿಂದಿ ಮೊದಲಾದ ಬೇರೆ ನುಡಿಗಳಿಂದ ಪಡೆಯುವ ಎರವಲು ಪದಗಳನ್ನು ಒಂದು ಮಿತಿಯಲ್ಲಿರಿಸಿಕೊಳ್ಳುವುದು ಅನಿವಾರ‍್ಯವೆಂದು ಹೇಳಬೇಕಾಗಿಯೇ ಇಲ್ಲ. ಜಾಗ ಮತ್ತು ಜಾತಿಯ ತಾರತಮ್ಯವಿಲ್ಲದೆ ಎಲ್ಲರೂ ಬರಹವನ್ನು ಬಳಸತೊಡಗಿದಾಗ, ಅಂತಹ ಎರವಲು ಪದಗಳು ಒಂದು ಮಿತಿಯಲ್ಲಿ ಇದ್ದೇ ಇರುತ್ತವೆ; ಬಹುಶಹ ನೂರಕ್ಕೆ ಅಯ್ದು ಇಲ್ಲವೇ ಹತ್ತಕ್ಕಿಂತ ಹೆಚ್ಚು ಇರಲಾರವು. ತನ್ನ ಸೊಗಡನ್ನು ಉಳಿಸಿಕೊಂಡಿರುವ ಅಂತಹ ಬರಹಗಳನ್ನು ಓದುವ ಮತ್ತು ಬರೆಯುವ ಕೆಲಸ ಕೆಲವರಿಗಶ್ಟೇ ಅಲ್ಲ, ಎಲ್ಲರಿಗೂ ಸುಲಬದ್ದಾಗುತ್ತದೆ.

ಹಲವು ಕಡೆ ಕನ್ನಡದ್ದೇ ಆದ ಪದಗಳನ್ನು ಬರಹ ಕನ್ನಡದಲ್ಲಿ ಬಳಸುವುದು ಒಳ್ಳೆಯ ಬರವಣಿಗೆಯ ಗುರುತಲ್ಲ ಎಂಬ ಒಂದು ವಿಚಿತ್ರವಾದ ಅನಿಸಿಕೆ ಕೆಲವರಲ್ಲಿದೆ; ಕನ್ನಡದ್ದೇ ಆದ ಪದಗಳ ಬದಲು ಸಂಸ್ಕ್ರುತದ ಎರವಲುಗಳನ್ನು ಬಳಸುವುದರಿಂದ ಬರಹ ಮೇಲ್ಮಟ್ಟದ್ದಾಗುತ್ತದೆಯೆಂಬ ಬ್ರಮೆ ಅದೇಕೋ ಅವರಲ್ಲಿದೆ. ‘ನಾಯಿ’ ಎಂದು ಬರೆಯುವ ಬದಲು ‘ಶ್ವಾನ’ ಎಂದು ಬರೆಯುವುದು, ‘ಕೂದಲು’ ಎಂಬುದರ ಬದಲು ‘ಕೇಶ’ ಎನ್ನುವುದು, ‘ಹಲ್ಲು’ ಎನ್ನುವ ಬದಲು ‘ದಂತ’ ಎನ್ನುವುದು, ‘ಕೂಡಿಸುವುದು’ ಎನ್ನುವ ಬದಲು ‘ಸಂಕಲನ’ ಎನ್ನುವುದು, ಇವೆಲ್ಲ ಮೇಲ್ಮಟ್ಟದ ಕನ್ನಡ ಬರವಣಿಗೆಯ ಗುರುತುಗಳು ಎಂದು ಹಲವರು ತಿಳಿದಿದ್ದಾರೆ. ಆದರೆ ಈ ರೀತಿಯ ಬಳಕೆಗಳು ಬರಹ ಕನ್ನಡವನ್ನು ಎಲ್ಲರಿಗೂ ಆದಶ್ಟು ಹತ್ತಿರವಾಗಿಸುವಂತವಲ್ಲ, ದೂರವಾಗಿಸುವಂತವು ಎಂದು ತಿಳಿದುಕೊಳ್ಳಲು ಕಶ್ಟವಿಲ್ಲ.

ಹೊಸ ಹೊಸ ಪದಗಳನ್ನು ಉಂಟುಮಾಡಬೇಕಾದಾಗಲಂತೂ ಸಂಸ್ಕ್ರುತವನ್ನು ಮೊರೆಹೊಗದೆ ಬೇರೆ ದಾರಿಯೇ ಇಲ್ಲ ಎಂದು ಹೆಚ್ಚಿನ ಕನ್ನಡದ ಬರಹಗಾರರೂ ತಿಳಿದಿದ್ದಾರೆ. ಆದರೆ ಅಂತಹ ಪದಗಳನ್ನು ಬಳಸಿರುವ ಕನ್ನಡ ಬರಹ ಎಲ್ಲರಿಗೂ ಹತ್ತಿರವಾಗುವ ಬದಲು ದೂರ ಉಳಿಯುತ್ತದೆ, ಮತ್ತು ಅದನ್ನು ಕಲಿಯುವ ಮತ್ತು ಬಳಸುವ ಕೆಲಸ ಹೆಚ್ಚಿನ ಕನ್ನಡಿಗರಿಗೂ ತೊಡಕಿನದಾಗುತ್ತದೆ. ಹೊಸ ಪದಗಳನ್ನು ಉಂಟುಮಾಡುವುದರ ಗುರಿ ಕನ್ನಡಿಗರಿಗೆಲ್ಲ ಆ ಪದಗಳು ಸೂಚಿಸುವ ವಿಶಯ ಇಲ್ಲವೇ ವಸ್ತುವಿನ ಪರಿಚಯ ಮಾಡಿಸುವುದು ಎಂಬುದನ್ನು ನೆನಪಿನಲ್ಲಿಟ್ಟರೆ ಹೆಜ್ಜೆಹೆಜ್ಜೆಗೂ ಸಂಸ್ಕ್ರುತವನ್ನು ಮೊರೆಹೊಗುವುದು ತಾನೇ ನಿಲ್ಲುತ್ತದೆ.

ಹೊಸ ಪದಗಳನ್ನು ಉಂಟುಮಾಡಲು ಕನ್ನಡದ್ದೇ ಆದ ಪದಗಳನ್ನು ಮತ್ತು ಬೇರುಗಳನ್ನು ಬಳಸಬಹುದು; ಇವು ಹೊಸಗನ್ನಡದಲ್ಲಿ ಸಿಗದಿದ್ದರೆ ಹಳೆಗನ್ನಡದಿಂದ, ಇಲ್ಲವೇ ಆಡುಗನ್ನಡಗಳಿಂದ ಪಡೆದುಕೊಳ್ಳಬಹುದು. ಹೆಚ್ಚಿನವರೂ ಕೇಳಿಲ್ಲದ ಪದಗಳನ್ನು ಇಲ್ಲವೇ ಬೇರುಗಳನ್ನು ಅವು ಸಂಸ್ಕ್ರುತದವು ಎಂಬ ಒಂದೇ ಕಾರಣಕ್ಕಾಗಿ ಬಳಸಿ ಹೊಸ ಪದಗಳನ್ನು ಉಂಟುಮಾಡುವುದಕ್ಕಿಂತಲೂ, ಹೆಚ್ಚಿನವರೂ ಕೇಳಿರುವ ಪದಗಳನ್ನು ಇಲ್ಲವೇ ಬೇರುಗಳನ್ನು ಅವು ಯಾವ ನುಡಿಯವಾಗಿದ್ದರೂ (ಎತ್ತುಗೆಗೆ ಇಂಗ್ಲೀಶಿನವಾಗಿದ್ದರೂ) ಎರವಲಾಗಿ ಪಡೆದು ಬಳಸಿಕೊಳ್ಳಬಹುದು.

ಇವತ್ತು ಕನ್ನಡ ಬರಹದಲ್ಲಿ ಕನ್ನಡಕ್ಕೆ ನಿಜಕ್ಕೂ ಬೇಡದಿರುವ ಹಲವು ಬರಿಗೆಗಳನ್ನು (ಅಕ್ಶರಗಳನ್ನು) ಬಳಸಲಾಗುತ್ತದೆ; ಸಂಸ್ಕ್ರುತದಿಂದ ಎರವಲಾಗಿ ಪಡೆದ ಪದಗಳನ್ನು ಸಂಸ್ಕ್ರುತದಲ್ಲಿ ಇರುವ ಹಾಗೆಯೇ ಬರೆಯಬೇಕು (ಕೆಲವು ಅಪವಾದಗಳನ್ನು ಹೊರತುಪಡಿಸಿ) ಎಂಬ ಕಟ್ಟಲೆಯೊಂದನ್ನು ಉಳಿಸಿಕೊಳ್ಳುವುದಕ್ಕಾಗಿ ಹತ್ತು ಮಹಾಪ್ರಾಣ ಬರಿಗೆಗಳು, ಋಕಾರ, ಷಕಾರ, ಐ, ಔ, ಙ, ಞ, ವಿಸರ‍್ಗ ಎಂಬಂತಹ ಒಟ್ಟು ಹದಿನೇಳು ಹೆಚ್ಚಿನ ಬರಿಗೆಗಳನ್ನು ಕನ್ನಡ ಬರಹದಲ್ಲಿ ಬಳಸಲಾಗುತ್ತಿದೆ. (ಇದಲ್ಲದೆ ರಕಾರಕ್ಕೆ ಎಂಬ ಒಂದು ಹೆಚ್ಚಿನ ರೂಪವನ್ನೂ ಬಳಸಲಾಗುತ್ತಿದೆ.)

ಇವುಗಳಲ್ಲಿ ಹೆಚ್ಚಿನವೂ ಕನ್ನಡ ಬರಹದ ಓದಿನಲ್ಲಿ ಕಾಣಿಸಿಕೊಳ್ಳುವುದಿಲ್ಲ. ಓದಿನಲ್ಲಿಲ್ಲದ ಬರಿಗೆಗಳನ್ನು ಬರಹದಲ್ಲಿ ಕಾಣಿಸುವುದು ತುಂಬಾ ತೊಡಕಿನ ಕೆಲಸ; ಎಶ್ಟು ತೊಡಕಿನ ಕೆಲಸವೆಂಬುದು ಇವತ್ತಿನ ಕನ್ನಡ ಬರಹಗಳನ್ನು ಪರಿಶೀಲಿಸಿದಲ್ಲಿ ಗೊತ್ತಾಗುತ್ತದೆ: ಅವುಗಳಲ್ಲಿ ಅತಿ ಹೆಚ್ಚು ತಪ್ಪುಗಳು ಕಾಣಿಸಿಕೊಳ್ಳುವುದು ಮಹಾಪ್ರಾಣದಂತಹ ಈ ಹೆಚ್ಚಿನ ಬರಿಗೆಗಳನ್ನು ಬಳಸುವುದರಲ್ಲೇ ಆಗಿದೆ.

ಬರಹದ ಕನ್ನಡವನ್ನು ಎಲ್ಲಾ ಆಡುಗನ್ನಡಗಳಿಗೆ ಹತ್ತಿರ ತರಲು ಬೇಡದ ಈ ಹದಿನೇಳು ಬರಿಗೆಗಳನ್ನು ಬಿಟ್ಟುಬಿಡುವುದೇ ಒಳಿತು. ಹಾಗೆಯೇ ಇಂಗ್ಲಿಶ್, ಹಿಂದಿ, ಮರಾಟಿ, ಉರ‍್ದು, ಮೊದಲಾದ ಬೇರೆ ನುಡಿಗಳಿಂದ ಎರವಲು ಪಡೆದ ಪದಗಳ ಹಾಗೆ, ಸಂಸ್ಕ್ರುತದಿಂದ ಎರವಲು ಪಡೆದ ಪದಗಳನ್ನೂ ಹೆಚ್ಚಿನ ಕನ್ನಡಿಗರೂ ಓದುವ ಹಾಗೆಯೇ ಬರೆಯುವುದು ಒಳಿತು. ಅವನ್ನು ಹೆಚ್ಚು ಕಡಿಮೆ ಸಂಸ್ಕ್ರುತದಲ್ಲಿದ್ದ ಹಾಗೆಯೇ ಬರೆಯಬೇಕೆಂಬ ಕಟ್ಟಳೆಯನ್ನು ಉಳಿಸಿಕೊಳ್ಳಬೇಕಾಗಿಲ್ಲ.

ಹಳೆಗನ್ನಡದ ಸಮಯದಲ್ಲಿ ಕನ್ನಡಿಗರಿಗೆ ಇಂತಹದೊಂದು ಸ್ವಾತಂತ್ರ್ಯವಿತ್ತು; ಸಂಸ್ಕ್ರುತದಿಂದ ಎರವಲಾಗಿ ಪಡೆದ ಪದಗಳನ್ನು ಅವರು ಸಂಸ್ಕ್ರುತದಲ್ಲಿರುವ ಹಾಗೆಯೇ ಬೇಕಿದ್ದರೂ ಬರೆಯಬಲ್ಲವರಾಗಿದ್ದರು; ಇಲ್ಲವೇ ಕನ್ನಡದ ಸ್ವರೂಪಕ್ಕೆ ಹೊಂದಿಕೆಯಾಗುವ ಹಾಗೆ ಅದರಲ್ಲಿ ಮಾರ‍್ಪಾಡುಗಳನ್ನು ಮಾಡಿಯೂ ಬಳಸಬಲ್ಲವರಾಗಿದ್ದರು.
ಬರಹದ ಕನ್ನಡವನ್ನು ಎಲ್ಲರಿಗೂ ಆದಶ್ಟು ಹತ್ತಿರವಾಗಿಸಲು ಈಗ ಕನ್ನಡಿಗರು ಮಾಡಬೇಕಿರುವ ಮಾರ‍್ಪಾಡು ಇದಕ್ಕಿಂತ ಬೇರಾದುದೇನಲ್ಲ. ಮಿತಿಯಿಲ್ಲದೆ ಸಂಸ್ಕ್ರುತದಿಂದ ಎರವಲಾಗಿ ಪಡೆಯುವುದನ್ನು ಕಡಿಮೆ ಮಾಡುವುದು, ಮತ್ತು ಸಂಸ್ಕ್ರುತ ಬಲ್ಲವರು ಮಾತ್ರವಲ್ಲದೆ ಎಲ್ಲರೂ ಬರಹ ಕನ್ನಡದಿಂದ ಪಡೆಯುವುದನ್ನು ಪಡೆಯುವುದಶ್ಟೇ ಅಲ್ಲದೆ, ಬರಹ ಕನ್ನಡದ ಮೂಲಕ ಕೊಡುವುದನ್ನು ಎಲ್ಲರೂ ಕೊಡುವಂತೆಯೂ ಮಾಡುವುದು ಕನ್ನಡದ ಏಳಿಗೆಗೆ ಇಂದು ಅನಿವಾರ‍್ಯವಾಗಿದೆ.

ಈ ಇಪ್ಪತ್ತೊಂದನೆಯ ಶತಮಾನದಲ್ಲೂ ಹಲವು ಮಂದಿ ಕನ್ನಡಿಗರು ಬರವಣಿಗೆಯ ಪ್ರಪಂಚದಲ್ಲಿ ಆಟಕ್ಕಶ್ಟೇ ಅಲ್ಲ, ಲೆಕ್ಕಕ್ಕೆ ಬರುವಂತೆಯೂ ಪಾಲ್ಗೊಳ್ಳಲು ಆಗದಿರಲು ಹಲವು ಬಗೆಯ ತೊಡಕುಗಳು ಕಾರಣವಾಗಿವೆ. ಎತ್ತುಗೆಗಾಗಿ, ಕೆಳವರ‍್ಗದ ಜನರ ಬಡತನ ಮತ್ತು ಅರಿಯಮೆಗಳು ಅವರ ಮಕ್ಕಳನ್ನು ಶಾಲೆಗಳಿಂದ ದೂರ ಇರಿಸುತ್ತವೆ. ಹಲವರಾದ ಅವರ ಕನ್ನಡಕ್ಕಿಂತ ಕೆಲವರಾದ ತಮ್ಮ ಕನ್ನಡಕ್ಕೆ ಹತ್ತಿರವಿರುವಂತೆಯೇ ಬರಹದ ಕನ್ನಡವನ್ನು ಇಟ್ಟುಕೊಳ್ಳಲು ಮೇಲ್ವರ‍್ಗದವರು ಬಯಸುವುದು ಇದಕ್ಕೆ ಒತ್ತಾಸೆಯಾಗಿರುತ್ತದೆ. ಕೆಳವರ‍್ಗದವರನ್ನು ಅವರಿರುವಲ್ಲಿಯೇ ಇರಲು ಬಿಡುವುದು ಮೇಲ್ವರ‍್ಗದವರ ಮನದಾಳದ ಬಯಕೆಯಾಗಿರಲಿಕ್ಕಿಲ್ಲ; ಕನ್ನಡಿಗರ ನೆತ್ತರಿನಲ್ಲಿ ಇಂತಹ ನಂಜಿಲ್ಲ. ಆದರೂ ಅವರು ಇರುವಲ್ಲೇ ಇರುವಂತೆ ಮಾಡುತ್ತಿರುವ ಕೆಲವು ತಪ್ಪು ತಿಳುವಳಿಕೆಗಳನ್ನು ಹೋಗಲಾಡಿಸಿಕೊಳ್ಳುವುದು ಹಿರಿಮೆಯಾದೀತು.

(ಈ ಬರಹ ವಿಜಯ ಕರ‍್ನಾಟಕ ಸುದ್ದಿಹಾಳೆಯ ’ಎಲ್ಲರ ಕನ್ನಡ’ ಅಂಕಣದಲ್ಲಿ ಮೊದಲು ಮೂಡಿಬಂದಿತ್ತು)

ಮೂಲ : ಹೊನಲು

ಅತ್ತೆ-ಅಳಿಯಂದಿರ ನುಡಿ

ಆಸ್ಟ್ರೇಲಿಯಾದ ಕೆಲವು ನುಡಿಗಳಲ್ಲಿ ಅತ್ತೆ, ಮಾವ, ಅತ್ತಿಗೆ, ಬಾವ ಮೊದಲಾದ ನಂಟರೊಡನೆ ಮಾತನಾಡುವಾಗ ಬಳಸುವ ನುಡಿ ಇತರ ಕಡೆಗಳಲ್ಲಿ ಬಳಸುವ ನುಡಿಗಿಂತ ತೀರ ಬೇರಾಗಿರುತ್ತದೆ. ಎರಡರಲ್ಲೂ ಒಂದೇ ಬಗೆಯ ಸೊಲ್ಲರಿಮೆಯ ಕಟ್ಟಲೆಗಳು ಬಳಕೆಯಾಗುತ್ತವೆ; ಆದರೆ, ಪದಗಳು ಮಾತ್ರ ಬೇರೆ ಬೇರಾಗಿರುತ್ತವೆ. ಎತ್ತುಗೆಗಾಗಿ, ದ್ಯಿರ್ಬಲ್ ಎಂಬ ನುಡಿಯಲ್ಲಿ ಹೊರಗೆ ಬಾ ಎನ್ನಲು ‘ಮಯಿನ್’ ಎನ್ನುತ್ತಾರಾದರೆ ಅತ್ತೆನುಡಿಯಲ್ಲಿ ‘ಯಿಲ್ವುನ್’ ಎನ್ನುತ್ತಾರೆ; ತಿನ್ನು ಎನ್ನುವುದಕ್ಕೆ ‘ದ್ಯಂಗ್ನ್ಯು’ ಎನ್ನುತ್ತಾರಾದರೆ ಅತ್ತೆನುಡಿಯಲ್ಲಿ ‘ಯಲ್ಮಿನ್ಯು’ ಎನ್ನುತ್ತಾರೆ. ನೀರಿಗೆ ‘ಬನ’ ಎನ್ನುತ್ತಾರಾದರೆ ಅತ್ತೆನುಡಿಯಲ್ಲಿ ‘ಜುಜಮ’ ಎನ್ನುತ್ತಾರೆ. ಗಂಡಸು ಮತ್ತು ಹೆಂಗಸು ಎಂಬುದಕ್ಕೆ ‘ಯರ’ ಮತ್ತು ‘ಜುಗುಂಬಿಲ್’ ಎನ್ನುತ್ತಾರಾದರೆ ಅತ್ತೆನುಡಿಯಲ್ಲಿ ‘ಬಯಬಯ್’ ಮತ್ತು ‘ಜಯನ್ನಿ’ ಎನ್ನುತ್ತಾರೆ. ಬೇರೆ ಕಡೆಗಳಲ್ಲಿ ಮಾತನಾಡುವಾಗ ಬಳಸುವ ಪದಗಳಲ್ಲಿ ಒಂದನ್ನೂ ದ್ಯಿರ್ಬಲ್ನ ಈ ಅತ್ತೆನುಡಿಯಲ್ಲಿ ಬಳಸಲು ಬರುವುದಿಲ್ಲ.

ಈ ಅತ್ತೆನುಡಿಯನ್ನು ಗಂಡಸರು ತಮ್ಮ ಹೆಂಡತಿಯ ತಾಯಿ, ಮಗನ ಹೆಂಡತಿ, ತಾಯಿಯ ಅಣ್ಣತಮ್ಮಂದಿರ ಇಲ್ಲವೇ ತಂದೆಯ ಅಕ್ಕತಂಗಿಯರ ಮಗಳು – ಇವರೊಂದಿಗೂ, ಹೆಂಗಸರು ತಮ್ಮ ಗಂಡನ ತಂದೆ, ಮಗಳ ಗಂಡ, ಮತ್ತು ತಾಯಿಯ ಅಣ್ಣತಮ್ಮಂದಿರ ಇಲ್ಲವೇ ತಂದೆಯ ಅಕ್ಕತಂಗಿಯರ ಮಗ – ಇವರೊಂದಿಗೂ ಕಡ್ಡಾಯವಾಗಿ ಬಳಸಬೇಕಾಗುತ್ತದೆ. ಬೇರೆ ಕೆಲವು ನಂಟರೊಂದಿಗೂ (ಎತ್ತುಗೆಗಾಗಿ, ಗಂಡಸರ ಮಟ್ಟಿಗೆ ತಾಯಿಯ ಅಣ್ಣತಮ್ಮಂದಿರ ಮಗಳೊಂದಿಗೆ, ಮತ್ತು ಹೆಂಗಸರ ಮಟ್ಟಿಗೆ ತಾಯಿಯ ಅಣ್ಣತಮ್ಮಂದಿರ ಮಗನೊಂದಿಗೆ) ಅತ್ತೆನುಡಿಯನ್ನು ಬಳಸಬಹುದಾದರೂ, ಇದರಲ್ಲಿ ಕಡ್ಡಾಯವಿಲ್ಲ. ಉಳಿದವರೊಂದಿಗೆ ಮಾತ್ರ, ಈ ಅತ್ತೆನುಡಿಯನ್ನು ಬಳಸಬಾರದು; ಸಾಮಾನ್ಯ ನುಡಿಯನ್ನೇ ಬಳಸಬೇಕು.

ಈ ಅತ್ತೆನುಡಿಯಲ್ಲಿ ಬಳಕೆಯಾಗುವ ಪದಗಳು ತುಂಬಾ ಕಡಿಮೆ: ಸಾಮಾನ್ಯ ನುಡಿಯಲ್ಲಿ ಬಳಕೆಯಾಗುವ ಪದಗಳ ಕಾಲಂಶದಶ್ಟು ಮಾತ್ರ ಇದರಲ್ಲಿ ಬಳಕೆಯಾಗುತ್ತವೆ. ಹೀಗಿದ್ದರೂ, ಹೇಳಬೇಕೆಂದಿರುವ ಸಂಗತಿಗಳನ್ನೆಲ್ಲ ಅದರ ಮೂಲಕ ಹೇಳಲು ಏನೂ ತೊಂದರೆಯಾಗುವುದಿಲ್ಲ. ಈ ರೀತಿ ಪದಗಳ ಎಣಿಕೆ ಅತ್ತೆನುಡಿಯಲ್ಲಿ ಕಡಿಮೆಯಿರಲು ಮುಕ್ಯ ಕಾರಣವೇನೆಂದರೆ, ಸಾಮಾನ್ಯ ನುಡಿಯಲ್ಲಿ ಬರುವ ಮೂರು-ನಾಲ್ಕು ಪದಗಳಿಗೆ ಬದಲಾಗಿ, ಅತ್ತೆನುಡಿಯಲ್ಲಿ ಒಂದೇ ಪದವಿರುತ್ತದೆ. ಎತ್ತುಗೆಗಾಗಿ, ಅತ್ತೆನುಡಿಯಲ್ಲಿ ನೋಡು ಎಂಬ ಹುರುಳಿನ ‘ನ್ಯಮ್ಮಲ್’ ಎಂಬ ಒಂದು ಪದಕ್ಕೆ ಬದಲಾಗಿ, ಸಾಮಾನ್ಯ ನುಡಿಯಲ್ಲಿ ‘ವಬಲ್’ (ಮೇಲೆ ನೋಡು), ‘ನ್ಗಡ್ನ್ಯಯ್’ (ಎವೆಯಿಕ್ಕದೆ ನೋಡು), ‘ಗಿಂದಲ್’ (ರಾತ್ರಿ ಹೊತ್ತು ದೀಪದ ಬೆಳಕಿನಲ್ಲಿ ನೋಡು), ‘ಮಮಿಲ್’ (ಗೊತ್ತಾಗದ ಹಾಗೆ ನೋಡು), ‘ಬುಡಲ್’ (ಒಬ್ಬನ ಕಡೆಗೆ ನೋಡು) ಮೊದಲಾದ ಹಲವು ಪದಗಳಿವೆ.

ಈ ಎರಡು ಬಗೆಯ ಒಳನುಡಿಗಳು ದ್ಯಿರ್ಬಲ್ನಲ್ಲಿ ಹಳಬರಲ್ಲಿ ಮಾತ್ರ ಉಳಿದಿವೆಯಲ್ಲದೆ, ಉಳಿದವರ ಮಾತಿನಲ್ಲಿ ಉಳಿದಿಲ್ಲ. ಈ ಮೂಲನಿವಾಸಿಗಳ ಬೇರೆ ನಡವಳಿಗಳ ಹಾಗೆ, ಈ ನುಡಿನಡವಳಿಯೂ ಅಳಿದು ಹೋಗುತ್ತಿದೆ. ಆಸ್ಟ್ರೇಲಿಯಾದ ಬೇರೆ ಹಲವು ಬುಡಕಟ್ಟಿನ ಜನರ ನುಡಿಗಳಲ್ಲೂ ಇಂತಹ ಅತ್ತೆನುಡಿಗಳು ಬಳಕೆಯಲ್ಲಿವೆ; ಆದರೆ, ಇವು ದ್ಯಿರ್ಬಲ್ನಲ್ಲಿದ್ದಶ್ಟು ಹರವಿನವಲ್ಲ: ಬೆನುಬ ಎಂಬ ನುಡಿಯಲ್ಲಿ ಒಟ್ಟು ಸುಮಾರು ನೂರು ಅತ್ತೆನುಡಿ ಪದಗಳು ಸಾಮಾನ್ಯ ನುಡಿಯ ಪದಗಳಿಗಿಂತ ಬೇರಾಗಿವೆ. ಆದರೆ ಅವನ್ನು ಹೊರತುಪಡಿಸಿ, ಉಳಿದ ಕಡೆಗಳಲ್ಲಿ ಸಾಮಾನ್ಯ ನುಡಿಯ ಪದಗಳನ್ನೇ ಅತ್ತೆನುಡಿಯಲ್ಲೂ ಬಳಸಲಾಗುತ್ತದೆ. ಇನ್ನು ಕೆಲವು ನುಡಿಗಳಲ್ಲಿ ಸೊಲ್ಲಿಗೊಂದು ಪದದ ಹಾಗೆ ಅತ್ತೆನುಡಿಯಲ್ಲಿ ಬೇರಾಗಿದ್ದರೆ ಸಾಕು; ಉಳಿದೆಲ್ಲ ಪದಗಳೂ ಸಾಮಾನ್ಯ ನುಡಿಯವೇ ಆಗಿರಬಹುದು.

ಅತ್ತೆನುಡಿಯನ್ನು ಬಳಸಬೇಕಾಗಿರುವ ನಂಟರ ನಡುವೆ ಹತ್ತಿರದ ಸಂಬಂದ ಬೆಳೆಯಬಾರದೆಂಬುದೇ ಈ ರೀತಿ ಅವರ ನಡುವೆ ಸಾಮಾನ್ಯ ನುಡಿಯ ಬಳಕೆಯ ಮೇಲೆ ಕಟ್ಟುಪಾಡು ಮೂಡಿಬರಲು ಕಾರಣವಾಗಿದೆ. ಈ ನಂಟುಗಳಿರುವ ಜನರು ಒಬ್ಬರ ಬಳಿ ಒಬ್ಬರು ಸಾರಬಾರದು, ನೇರವಾಗಿ ನೋಡಬಾರದು ಎಂಬಂತಹ ಬೇರೆ ಕಟ್ಟುಪಾಡುಗಳೂ ಇವೆ. ಬೇರೆ ಕೆಲವು ಬುಡಕಟ್ಟಿನ ಜನರಲ್ಲಿ ಇಂತಹ ನಂಟಿರುವ ಜನರು ಒಬ್ಬರೊಡನೊಬ್ಬರು ಮಾತನಾಡಲೂ ಬಾರದೆಂಬ ಕಟ್ಟುಪಾಡಿದೆ. ಆಸ್ಟ್ರೇಲಿಯಾದ ನುಡಿಗಳಲ್ಲಿ ಮಾತ್ರವಲ್ಲದೆ, ಬೇರೆಯೂ ಹಲವು ನುಡಿಗಳಲ್ಲಿ ಇಂತಹ ನಂಟಿರುವ ಮಂದಿಯನ್ನು ಬೇರ್ಪಡಿಸಲು ಅತ್ತೆನುಡಿಯನ್ನು ಬಳಸಲಾಗುತ್ತದೆ. ಆಸ್ಟೊನೇಶಿಯನ್ ನುಡಿಗಳಲ್ಲಿ, ಅಮೆರಿಕಾದ ಹಲವು ಬುಡಕಟ್ಟಿನ ನುಡಿಗಳಲ್ಲಿ ಮತ್ತು ಆಪ್ರಿಕಾದ ಇತಿಯೋಪಿಯನ್ ಮತ್ತು ಬಂಟು ನುಡಿಗಳಲ್ಲಿ ಇಂತಹ ಬೇರ್ಪಡಿಕೆಗಳನ್ನು ಕಾಣಬಹುದು.

ಸೊಲೊಮನ್ ನಡುಗುಡ್ಡೆಗಳಲ್ಲಿ ಬಳಕೆಯಲ್ಲಿರುವ ಸಾನಕ್ರುಸ್ ಎಂಬ ಆಸ್ಟ್ರೊನೇಶಿಯನ್ ನುಡಿಯಲ್ಲಿ ಇದೇ ಕೆಲಸವನ್ನು ನಡೆಸಲು ಬೇರೊಂದು ಬಗೆಯ ನಡವಳಿ ಬಳಕೆಗೆ ಬಂದಿದೆ: ಹೆಣ್ಣುಕೊಟ್ಟ ಮಾವ-ಅಳಿಯಂದಿರ ನಡುವೆ, ಅತ್ತೆ-ಅಳಿಯಂದಿರ ನಡುವೆ, ಮತ್ತು ಅಕ್ಕತಂಗಿಯರ ಗಂಡಂದಿರ ನಡುವೆ ‘ಕಾಡೊ’ ಎಂದು ಕರೆಯಲಾಗುವ ನಂಟಿದೆ; ಈ ನಂಟಿರುವವರು ಒಬ್ಬರ ಹೆಸರನ್ನು ಇನ್ನೊಬ್ಬರು ಬಳಸಲೇಬಾರದೆಂಬ ಕಟ್ಟಲೆಯಿದೆ. ಇಂತಹ ನಂಟಿರುವವರಲ್ಲಿ ಒಬ್ಬನು ತೀರಿಹೋದಮೇಲೂ ಆತನ ಹೆಸರಿನ ಕುರಿತಾಗಿರುವ ಈ ತಡೆತವನ್ನು ಉಳಿಸಿಕೊಂಡಿರಬೇಕಾಗುತ್ತದೆ. ಅವರಲ್ಲಿ ಯಾರಾದರೂ ಅಪ್ಪಿತಪ್ಪಿ ಆ ಪದವನ್ನು ಇನ್ನೊಬ್ಬರೆದುರು ಬಳಸಿದರಾದರೆ, ಅದನ್ನು ಕೇಳಿದವರಿಗೆ ಆತನು ತಪ್ಪಿತವಾಗಿ ತಿಂಡಿಯನ್ನೋ ಹೊಗೆಸೊಪ್ಪನ್ನೋ ಕೊಡಬೇಕಾಗುತ್ತದೆ.

ಹಕ್ಕಿ, ಮರ, ಗಾಳಿ, ನೀರು ಎಂಬಂತಹ ಹಲವು ದಿನಬಳಕೆಯ ಪದಗಳು ಈ ಜನರ ಹೆಸರುಗಳಲ್ಲಿ ಬಳಕೆಯಾಗುತ್ತಿದ್ದು, ಅಂತಹ ಪದಗಳನ್ನೂ ಇವರು ಬಳಸುವಂತಿಲ್ಲ. ಅವುಗಳ ಬದಲು ಬೇರೆ ನುಡಿಯ ಪದಗಳನ್ನು ಎರವಲು ಪಡೆದು ಬಳಸಬೇಕಾಗುತ್ತದೆ, ಇಲ್ಲವೇ ಆ ಹುರುಳು ದೊರಕುವಂತೆ ಬೇರೆ ನುಡಿತಗಳನ್ನು ಬಳಸಬೇಕಾಗುತ್ತದೆ. ಸಾನಕ್ರುಸ್ ನುಡಿಯಲ್ಲಿ ಬರುವ ಪದಗಳಲ್ಲಿ ನೂರಕ್ಕೆ ಅಯ್ವತ್ತರಶ್ಟು ಪದಗಳೂ ಈ ರೀತಿ ಜನರ ಹೆಸರುಗಳಲ್ಲಿ ಬರುತ್ತಿದ್ದು, ಅವೆಲ್ಲವೂ ಒಬ್ಬರಿಗಲ್ಲದಿದ್ದರೆ ಇನ್ನೊಬ್ಬರಿಗೆ ನುಡಿಯಲಾಗದ ಪದಗಳಾಗಿಬಿಟ್ಟಿರುತ್ತವೆ!

ಆಸ್ಟ್ರೇಲಿಯಾದ ಬುಡಕಟ್ಟಿನ ಜನರಲ್ಲಿ ಬಳಕೆಯಲ್ಲಿರುವ ಇನ್ನೊಂದು ನಡವಳಿಯೂ ಪದಗಳ ಬಳಕೆಯ ಮೇಲೆ ಇಂತಹದೇ ಪರಿಣಾಮವನ್ನು ಬೀರುತ್ತದೆ: ಅವರಲ್ಲಿ ಯಾರಾದರೂ ಸತ್ತರೆ ಆತನ ಹೆಸರನ್ನು ಹೋಲುವ ಪದ ಅವರ ನುಡಿಯಲ್ಲಿ ಯಾವುದಿದ್ದರೂ ಅದನ್ನು ಆಮೇಲೆ ಉಲಿಯುವಂತಿಲ್ಲ; ಹಾಗೆ ಉಲಿದಲ್ಲಿ ಸತ್ತವನ ಉಸಿರು (ಇಲ್ಲವೇ ದೆವ್ವ) ಅವರಿರುವಲ್ಲಿಗೆ ಬಂದೀತೆಂಬ ಹೆದರಿಕೆಯೇ ಇದಕ್ಕೆ ಕಾರಣ. ಸೊಲೊಮನ್ ನಡುಗುಡ್ಡೆಗಳಲ್ಲಿ ಬಳಕೆಯಲ್ಲಿರುವ ಮಲಯ್ತಾನ್ ಎಂಬ ಆಸ್ಟ್ರೋನೇಶಿಯನ್ ನುಡಿಯಲ್ಲಿಯೂ ಇಂತಹದೇ ನಡವಳಿ ಬಳಕೆಯಲ್ಲಿದೆ: ಅವರಲ್ಲಿಯೂ ಸತ್ತವರ ಹೆಸರನ್ನಾಗಲಿ, ಇಲ್ಲವೇ ಅದನ್ನು ಹೋಲುವ ಬೇರೆ ಪದಗಳನ್ನಾಗಲಿ ಅವನ ಹತ್ತಿರದ ನಂಟರು ಉಲಿಯಬಾರದೆಂಬ ಕಟ್ಟಲೆಯಿದೆ; ಉಳಿದವರೂ ಈ ಜನರೆದುರು ಆ ಪದಗಳನ್ನು ಉಲಿಯಬಾರದು. ಸತ್ತವನು ತೊನ್ನು ಇಲ್ಲವೇ ಟಿಬಿಯಿಂದ ಬಳಲುತ್ತಿದ್ದರೆ ಈ ಕಟ್ಟಲೆ ಆತನ ಊರಿನವರೆಲ್ಲರನ್ನೂ ತಾಗುತ್ತದೆ.

ಇಂತಹ ಕಟ್ಟಲೆಗಳು ಸತ್ತವರ ಕುರಿತಾಗಿ ಜನರಲ್ಲಿರುವ ಹೆದರಿಕೆಯಿಂದ ಬಳಕೆಗೆ ಬಂದಿವೆಯಾದರೆ, ಅವರ ಕುರಿತಾಗಿ ಜನರಲ್ಲಿರುವ ಮದಿಪಿನಿಂದ ಇಲ್ಲವೇ ಒಲವಿನಿಂದ ಬೇರೆಯೇ ಬಗೆಯ ಕೆಲವು ಕಟ್ಟಲೆಗಳು ಹಲವು ಸಮಾಜಗಳಲ್ಲಿ ಬಳಕೆಗೆ ಬಂದಿರುವುದನ್ನು ಕಾಣಬಹುದು. ಸತ್ತವರ ಹೆಸರನ್ನು ಅವರ ಮೊಮ್ಮಗನಿಗೆ ಇಲ್ಲವೇ ಮೊಮ್ಮಗಳಿಗೆ ಇರಿಸುವುದು, ಬೀದಿ, ಆಟದ ಬಯಲು, ಕಟ್ಟಡ ಮೊದಲಾದವುಗಳಿಗೆ ಇರಿಸುವುದು ಎಂಬಂತಹವೆಲ್ಲ ಈ ರೀತಿ ಅವರ ಮೇಲಿರುವ ಮದಿಪನ್ನು ಇಲ್ಲವೇ ಒಲವನ್ನು ತೋರಿಸುವುದಕ್ಕಾಗಿ ಬಳಕೆಗೆ ತಂದಿರುವ ಕಟ್ಟಲೆಗಳೆಂದು ಹೇಳಬಹುದು.

(ಈ ಬರಹ ವಿಜಯ ಕರ‍್ನಾಟಕ ಸುದ್ದಿಹಾಳೆಯ ’ಎಲ್ಲರ ಕನ್ನಡ’ ಅಂಕಣದಲ್ಲಿ ಮೊದಲು ಮೂಡಿಬಂದಿತ್ತು).

ಮೂಲ : ಹೊನಲು

ಕೊನೆಯ ಮಾರ್ಪಾಟು : 6/29/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate