ಯುನಿಸೆಫ್ ಬೆಂಬಲಿತ ಸರ್ವ ಶಿಕ್ಷಣ ಅಭಿಯಾನದ ಅಡಿಯಲ್ಲಿ ಚಟುವಟಿಕೆ ಆಧಾರಿತ ಕಲಿಕೆಯನ್ನು (ABL), ಮಧ್ಯಪ್ರದೇಶದ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಪ್ರಾರಂಭಿಸಲಾಯಿತು.
ಭೋಪಾಲ, ಮಧ್ಯ ಪ್ರದೇಶ, 12 ಜನವರಿ 2010 – ಶಿವರಾಜ ಸಿಂಗ್ (10) ಮತ್ತು ಅವನ ಏಳುವರ್ಷದ ಸೋದರ ಅಕಲ್ ಸಿಂಗ್ ತಮ್ಮ ರೈತರಾದ ತಾಯಿತಂದೆಯರ ಜೊತೆ ಸಿಲೆಪ್ಟಿಬರ್ವಾಲ ಗ್ರಾಮದಲ್ಲಿ ವಾಸಿಸುವರು. ಅವರಿಗೆ ಹತ್ತಿರದ ನಗರ 16 ಕಿಲೋ ಮೀಟರ್ ದೂರದಲ್ಲಿದೆ. ಅದು ಕೇಂದ್ರ ಭಾರತದ ರಾಜ್ಯವಾದ ಮಧ್ಯಪ್ರದೇಶದಲ್ಲಿದೆ.
ಅವರು ಅದೆ ಗ್ರಾಮದ ಪ್ರಾಥಮಿಕ ಶಾಲೆಯಲ್ಲಿ ಓದುವರು- ಶಿವರಾಜನು ಐದನೆ ತರಗತಿಯಲ್ಲಿ ಮತ್ತು ಅಕಲ್ ಎರಡನೆ ತರಗತಿಯಲ್ಲಿ ಇದ್ದಾರೆ.
ಆದರೆ ಶಿವರಾಜನು ಪುಸ್ತಕಗಳಿಂದ ಕೂಡಿದ ಭಾರವಾದ ಚೀಲವನ್ನು ಹೊತ್ತು ಶಾಲೆಗೆ ಹೋದರೆ ಅವನ ತಮ್ಮ ಏನೂ ಇಲ್ಲದೆ ಕೈ ಬೀಸಿಕೊಂಡು ಹೋಗುತ್ತಾನೆ. ಕೊನೆಗೆ ವರ್ಣ ಮಾಲೆಯ ಪುಸ್ತಕವನ್ನೂ ಒಯ್ಯುವುದಿಲ್ಲ.
“ನಾನು ಎರಡನೆ ತರಗತಿಯಲ್ಲಿ ಇದ್ದಾಗ, ನಾವು ಶಾಲೆಗೆ ಪುಸ್ತಕಗಳನ್ನು ಒಯ್ದು ಅವುಗಳಿಂದ ಓದ ಬೇಕಿತ್ತು. ನಮಗೆ ಹಿಂದಿ, ಇಂಗ್ಲಿಷ್ ಮತ್ತು ಗಣಿತದ ಪಠ್ಯ ಪುಸ್ತಕಗಳಿದ್ದವು. ಜೊತೆಗೆ ಬರೆದು ಕೊಳ್ಳಲು ಮತ್ತು ಅಭ್ಯಾಸ ಮಾಡಲು ಪ್ರತಿ ವಿಷಯಕ್ಕೂ ಅಭ್ಯಾಸ (ಎಕ್ಸರ್ ಸೈಜು) ಪುಸ್ತಕಗಳೂ ಇರುತ್ತಿದ್ದವು ” ಶಿವರಾಜ ನೆನಪಿಸಿಕೊಂಡ..
“ಆದರೆ ಅಕಲ್ ಗೆ ಪುಸ್ತಕಗಳೆ ಇಲ್ಲ ಮತ್ತು ಎಲ್ಲ ಪಾಠಗಳೂ ಗೊತ್ತು, ಅವನು ಓದ ಬಲ್ಲ, ಬರೆಯುತ್ತಾನೆ ಮತ್ತು ನಾನು ನಾಲಕ್ಕನೆ ತರಗತಿಯಲ್ಲಿ ಮಾಡುವ ಲೆಕ್ಕ ಈಗಲೇ ಮಾಡುತ್ತಾನೆ. ಅವನು ಉರು ಹೊಡೆಯಬೇಕಿಲ್ಲ ಮತ್ತು ಅವನು ನಂತರ ಪಾಠಗಳನ್ನು ನೆನಪಿಟ್ಟುಕೊಳ್ಳ ಬೇಕಿಲ್ಲ. ಶಾಲೆಯಂದರೆ ಅವನಿಗೆ ಖುಷಿ ಮತ್ತು ಕಲಿಯುವುದು ಆಟ ಆಗಿದೆ.”
“ನನ್ನ ತಮ್ಮ ಸಹಪಾಠಿಗಳ ಗುಂಪಿನೊಡನೆ ಕುಳಿತು ಬಣ್ಣ ಬಣ್ದದ ಚಿತ್ರವಿರುವ ಕಾರ್ಡುಗಳನ್ನು ನೋಡುತ್ತಿರುತ್ತಾನೆ,” ಅವನು ಹೇಳಿದ.
ತನ್ನ ತರಗತಿಯಲ್ಲಿರುವ ಪ್ರತಿ ವಿದ್ಯಾರ್ಥಿಯಂತೆ, ಅಕಲ್ ಕೂಡ ತರಗತಿಗೆ ಹೋಗುತ್ತಾನೆ. ಸೀದಾ ಹಾಜರಾತಿ ಪಟ್ಟಿ ಹಚ್ಚಿದ ಗೋಡೆಯ ಬಳಿ ಹೋಗುತ್ತಾನೆ. ಅವನ ಬೆರಳುಗಳು ಆ ಪಟ್ಟಿಯಮೇಲೆ ಅವನ ಹೆಸರು ಬರುವವರೆಗೆ ಚಲಿಸುವುದು. ನಂತರ ಯಾರ ಸಹಾಯವೂ ಇಲ್ಲದೆ ದಿನಾಂಕವನ್ನು ಗುರುತಿಸುವನು. ಅಲ್ಲಿ ಹಾಜರಾತಿ ಗುರುತು ಮಾಡುವನು. ಅಲ್ಲಿಂದ ಇನ್ನೊಂದು ಚಾರ್ಟನ ಕಡೆ ಹೋಗುತ್ತಾನೆ. ಅಲ್ಲಿ ಇಂಗ್ಲಿಷ್ ಪಾಠದಲ್ಲಿನ ತನ್ನ ಪ್ರಗತಿ ತಿಳಿಯುತ್ತಾನೆ
ಅಕಲ್ ಮಧ್ಯ ಪ್ರದೇಶದಲ್ಲಿರುವ ಚಟುವಟಿಕೆ ಆಧಾರಿತ ಶಿಕ್ಷಣ ಪಡೆಯುತ್ತಿರುವ ಸಾವಿರಾರು ಮಕ್ಕಳಲ್ಲಿ ಒಬ್ಬ. ಈ ಹೊಸ ಚಟುವಟಿಕೆ ಆಧಾರಿತ ಕಲಿಕೆಯ ಕಲ್ಪನೆಯನ್ನು ಸರ್ವ ಶಿಕ್ಷಣ ಅಭಿಯಾನವು ಯುನಿಸಿಫ್ ನ ಬೆಂಬಲದಿಂದ ಪ್ರಾರಂಭಿಸಿದೆ
ಈ ಕಾರ್ಯಕ್ರಮವು 50 ಜಿಲ್ಲೆಗಳ 4000 ಪ್ರಾಥಮಿಕ ಶಾಲೆಗಳಲ್ಲಿ ಒಂದು ಮತ್ತು ಎರಡನೆ ತರಗತಿಗಳಿಗೆ ಮೊದಲು ಪ್ರಾರಂಭವಾಯಿತು. ಇದರಲ್ಲಿ ಮಕ್ಕಳು ಮಗು ಸ್ನೇಹಿ ಬೋಧನೆ–ಕಲಿಕೆಯ ಪರಿಸರದಲ್ಲಿ ತಮಗೆ ಹೊಂದುವ ಕಲಿಕೆಯ ವೇಗದಲ್ಲಿ ಅಭ್ಯಾಸ ಮಾಡುವರು.
ಪಠ್ಯವನ್ನು ಪ್ರತಿ ವಿಷಯದ ವ್ಯಾಪ್ತಿಯಲ್ಲಿ 20 ಸಾಧನಾ ಹಂತಗಳಾಗಿ ವಿಂಗಡಿಸಿದೆ.– ಭಾಷೆಗಳು, ಪರಿಸರ ಅಧ್ಯಯನ, ಗಣಿತ ಮತ್ತು ಇಂಗ್ಲಿಷ್. ಪ್ರತಿ ಕಲಿಕೆಯ ಹಂತವು ಮಗುವು ಗಳಿಸಲೇ ಬೇಕಾದ ಸಾಮರ್ಥ್ಯದ ಕಲಿಕೆಯನ್ನು ಹೆಚ್ಚಿಸುವ ಚಟುವಟಿಕೆಗಳ ಗುಚ್ಛವನ್ನು ಹೊಂದಿವೆ.
ಪ್ರಾಣಿಗಳನ್ನು ಮತ್ತು ಪಕ್ಷಿಗಳನ್ನು ಗುರುತಿಸುವುದು, ಅಕ್ಷರಗಳನ್ನು ಕಲಿಯುವುದು, ಹಿಂದಿ ಮತ್ತು ಇಂಗ್ಲಿಷ್ ಪಾಠ ಓದುವುದು, ಸಂಖ್ಯೆಗಳನ್ನು ಏಣಿಸುವುದು, ಚಿತ್ರ ಹಾಕುವುದು ಮತ್ತು ಗಣಿತದ ಸಮಸ್ಯೆಗಳನ್ನು ಪರಿಹರಿಸುವುದು ಕಲಿಕೆಯಲ್ಲಿ ಸೇರಿದೆ.
ಒಂದು ಎಲ್ಲರಿಗೂ ಸಾಮಾನ್ಯವಾದ ಚಾರ್ಟನಲ್ಲಿ, ಸಾಧನೆಯ ಹಂತಗಳನ್ನು ಏಣಿಯ ಮಾದರಿಯಲ್ಲಿ ಜೋಡಿಸಲಾಗಿರುವುದು. ಅದರಿಂದ ಮಗುವು ತಾನು ಹಿಂದಿನ ಪಾಠದಲ್ಲಿ ಯಾವಸಾಧನಾ ಹಂತವನ್ನು ದಾಟಿದೆ ಎಂಬುದನ್ನು ಖಚಿತವಾಗಿ ಅರಿತಿರುತ್ತಾನೆ. ಇದು ಮಗು ಸ್ನೇಹಿಯಾದ ಮೌಲ್ಯಮಾಪನ ವಿಧಾನ ಮತ್ತು ಕಲಿಕೆಯನ್ನು ಗಟ್ಟಿಗೊಳಿಸುತ್ತದೆ.
“ಸಾಂಪ್ರದಾಯಿಕ ವಿಧಾನವು ಯಾವಾಗಲೂ ಶಿಕ್ಷಕ ಕೇಂದ್ರಿತವಾಗಿತ್ತು. ಕಲಿಕೆಯು ಯಾವಾಗಲೂ ಶಿಕ್ಷಕನ ಕಲಿಸುವ ವೇಗವನ್ನು ಅವಲಂಬಿಸಿತ್ತು. “ ಒಬ್ಬ ವಿದ್ಯಾರ್ಥಿಯು ಎರಡು ದಿನ ಶಾಲೆಗೆ ಬರದಿದ್ದರೆ ಅವನು / ಅವಳು ಆ ಪಾಠಗಳನ್ನು ಕಲಿಯುವುದು ಸಾಧ್ಯವಾಗುತ್ತಿರಲಿಲ್ಲ. ಆ ಪಾಠಗಳನ್ನು ಮತ್ತೆ ಬೋಧಿಸುತ್ತಲೇ ಇರಲಿಲ್ಲ ಎಂದು ವಿವರಿಸುತ್ತಾರೆ ಮಧ್ಯಪ್ರದೇಶದ ಯುನಿಸೆಫ್ ನ ಶಿಕ್ಷಣ ಮತ್ತು ಮಗುವಿನ ರಕ್ಷಣೆಯ ಪರಿಣಿತರಾದ ಕು. ಪಿ.ಎಸ್.ಉಮಾಶ್ರೀ.
“ಎ ಬಿ ಎಲ್ ಪದ್ದತಿಯಲ್ಲಿ, ಮಗುವು ತನ್ನದೇ ಆದ ವೇಗದಲ್ಲಿ ಕಲಿಯಲು ಸಾಧ್ಯ. ಒಂದು ಮಗುವು ಶಾಲೆಗೆ ಎರಡು ದಿನ ಬರದೇ ಇದ್ದರೆ, ಬಂದ ನಂತರ ತಾನು ಎಲ್ಲಿಯವರೆಗೆ ಕಲಿತು ಬಿಟ್ಟಿದ್ದನೋ ಅಲ್ಲಿಂದಲೇ ಪುನಃ ಕಲಿಯಲು ಶುರುಮಾಡುವನು. ಸಹಪಾಠಿಗಳು ತಮ್ಮ ಸಾಮರ್ಥ್ಯದ ಅನುಸಾರ ಬೇರೆ ಬೇರೆ ಸಾಧನಾ ಹಂತದಲ್ಲಿ ಇರಬಹುದು. ಶಿಕ್ಷಕನು ಬರಿ ಕಲಿಕೆಯ ಸೌಲಭ್ಯ ಒದಗಿಸಲು ಮಾತ್ರ ಇರುವನು,” ಉಮಾಶ್ರೀ ಹೇಳುತ್ತಾರೆ.
ಸಾಧನಾ ಹಂತದ ಚಾರ್ಟನ ಸಹಾಯದಿಂದ, ಅಕಲ್ ತಾನು 11ನೆ ಸಾಧನಾ ಹಂತ ದಾಟಿರುವುದನ್ನು ಅರಿತುಕೊಳ್ಳುತ್ತಾನೆ. ಅವನು ಕಲಿಕೆಯ ಕಾರ್ಡುಗಳಿರುವ ತಟ್ಟೆಯ ಕಡೆ ಧಾವಿಸುತ್ತಾನೆ ಮತ್ತು ಮುಂದಿನ ಹಂತ ತಲುಪಲು ಅಗತ್ಯವಾದ ಸರಳ ಇಂಗ್ಲಿಷ್ ಪದಗಳಿರುವ ಕಲಿಕಾ ಸಾಮಗ್ರಿಯನ್ನು ಆಯ್ದು ಕೊಳ್ಳುತ್ತಾನೆ. ಕಲಿಕಾ ಸಾಮಗ್ರಿಯೊಡನೆ ತರಗತಿಯ ಮೂಲೆಯಲ್ಲಿ ಕುಳಿತು ಕೊಳ್ಳುವನು. ಅವನಲ್ಲಿಗೆ ಅದೇ ಸಾಧನಾ ಹಂತದಲ್ಲಿರುವ ಇತರ ಸಹಪಾಠಿಗಳು ಬಂದು ಸೇರುವುರು. ಅವರು ಜೊತೆಯಾಗಿ ಒಂದೊಂದೆ ಪದ ಕಲಿಯುವರು. ಪಾಠವು ಕಠಿನ ವೆನಿಸಿದಾಗ ಶಿಕ್ಷಕರು ಸಹಾಯಮಾಡಲು ಬರುವರು.
ಈ ವಿಧಾನದಿಂದ ಮಕ್ಕಳು ಒಬ್ಬರಿಂದ ಒಬ್ಬರು ಕಲಿಯಲು ಅನುಕೂಲವಾಗುವುದು ಮತ್ತು ತರಗತಿ ಯಲ್ಲಿ ಸಹಪಾಠಿಗಳನ್ನು ಅವರ ನಡುವೆ ಯಾವುದೆ ಸಂವಹನವಿಲ್ಲದೆ ಸಾಲಾಗಿ ಕೂಡ್ರಿಸಿ ಪಾಠ ಮಾಡಿದಾಗ ಇರಬಹುದಾದ ಸಾಮಾಜಿಕ ತಡೆಗಳು ಮುರಿದು ಬೀಳುವವು.
“ಈ ಚಿಕ್ಕ ಮಕ್ಕಳು ಪ್ರಾಯೋಗಿಕ ವಿಧಾನದಲ್ಲಿ ಕಲಿಯುವರು. ಅವರು ತಮ್ಮ ಸಹಪಾಠಿಗಳ ಜೊತೆ ಕುಳಿತು 4+5 = 9 ಎಂಬುದನ್ನ ಕಲಿಯುವರು. ಅವರು ಒಂದು ಪದವಾದ ಮೇಲೆ ಇನ್ನೊಂದನ್ನು ಆರಿಸಿಕೊಂಡು ಓದಲು ಕಲಿಯುವರು,” ಹತ್ತಿರದ ಗ್ರಾಮ ಮೊರ್ಚಾ ಖೇಡಿಯ ಎ.ಬಿ. ಎಲ್ ಪ್ರಾಥಮಿಕ ಶಾಲೆಯ ಶಿಕ್ಷಕರಾದ ಕೈಲಾಸ್ ಟೇಲರ್ ರವರು ಹೀಗೆ ವಿವರಿಸುತ್ತಾರೆ
“ಈ ಹಿಂದೆ, ನಾವು ಯಾವ ಶಬ್ದ ಎಂದು ಅವರಿಗೆ ಹೇಳುತ್ತಿದ್ದೆವು ಮತ್ತು ಅದನ್ನು ಕಂಠ ಪಾಠಮಾಡಲು ತಿಳಿಸುತ್ತಿದ್ದೆವು ಮತ್ತು ಅವರು ಅದನ್ನು ನಾವು ಕೇಳಿದಾಗ ನೆನಪಿಸಿಕೊಂಡು ಪುನರುಚ್ಚರಿಸ ಬೇಕಿತ್ತು. ಬಹಳ ಸಲ ಸಂಪ್ರದಾಯಿಕ ವಿಧಾನದಲ್ಲಿ ಬೋಧನೆ ಪಡೆದ ವಿದ್ಯಾರ್ಥಿಯು ಹಿಂದಿನ ಪಾಠವನ್ನು ಮರೆತು ಬಿಡುತ್ತಿದ್ದ. ಆದರೆ ಈ ಮಕ್ಕಳು ಮರೆಯುವುದಿಲ್ಲ. ಕಾರಣ ಅವರು ಪ್ರತಿ ಪಾಠದ ಮೇಲೆ ತಾವೆ ಕೆಲಸ ಮಾಡುತ್ತಾರೆ ಮತ್ತು ಪ್ರಾಯೋಗಿಕವಾಗಿ ಪರಿಹಾರ ಕಂಡುಕೊಳ್ಳುತ್ತಾರೆ. ಇದರ ಫಲಿತಾಂಶವು ತುಂಬ ಆಶಾದಾಯಕವಾಗಿದೆ” ಎಂದು ಟೇಲರ ಅವರು ಹೇಳಿದರು.
ಈ ರೀತಿಯ ನವನವೀನ ವಿಧಾನಗಳು ಭಾರತದ ಉಚಿತ ಮತ್ತು ಕಡ್ಡಾಯ ಶಿಕ್ಷಣ ಕಾಯಿದೆ 2009 ನಿಗದಿಪಡಿಸಿದ ಬದ್ಧತೆಯನ್ನು ಯಶಸ್ವಿಯಾಗಿ ನಿರ್ವಹಿಸಲು ಸಹಾಯವಾಗುವ ಕೀಲಿಕೈ ಆಗಿವೆ. ಇದರಿಂದ ಎಲ್ಲ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡಬಹುದು.
ಮೂಲ: ಯುನಿಸೆಫ್
ಕೊನೆಯ ಮಾರ್ಪಾಟು : 5/28/2020