ಶುದ್ಧ ಭಾರತೀಯ ಸಂಸ್ಕೃತಿಯಲ್ಲಿ ವೈವಾಹಿಕತೆ ಎಂದರೆ ದಂಪತಿ ಧರ್ಮ. ಅರ್ಥ, ಕಾಮ, ಮೋಕ್ಷಗಳಲ್ಲ. ಪರಸ್ಪರ ಸಹಭಾಗಿಗಳಾಗಿ ಒಂದಾಗಿರುವುದು. ಪತಿ ಅಥವಾ ಪತ್ನಿ ಯೌವನದ ಕಾಲ ಅಥವಾ ರೂಪ, ಆರೋಗ್ಯವಂತರಾಗಿದ್ದ ಸಮಯದಲ್ಲಿರುವಾಗಿನ ಅನುಬಂಧ, ಸಂಬಂಧವೇ ವಾರ್ಧಕ್ಯದಲ್ಲಿ ಇರಬೇಕು, ಇರುತ್ತದೆ. ಇದು ಪಾಶ್ಚಿಮಾತ್ಯ ಅನುಕರಣೆಗೆ ಸಿಕ್ಕು ಸಡಿಲಾಗುವುದನ್ನು ಗಮನಿಸಬಹುದು. ವಿವಾಹಿತ ದಂಪತಿ ಧರ್ಮ, ಅರ್ಥದಂತೇ ದಾಂಪತ್ಯದಲ್ಲೂ ನಿಷ್ಠರಾಗಿರುವುದರಿಂದ ಯಾವುದೇ ಲೈಂಗಿಕ ರೋಗಗಳಿಗೆ ಬಲಿ ಬೀಳುವ ಸಂದರ್ಭ ಬಾರದು. ಶುದ್ಧ, ಆರೋಗ್ಯವಂತ ಲೈಂಗಿಕ ಬದುಕು ವ್ಯಕ್ತಿಗತವಾಗಿಯೂ ಪರಿಣಾಮ ಬೀರುತ್ತದೆ. ಆರೋಗ್ಯವಂತ, ತೇಜಸ್ವೀ ಸಂತಾನ ಪಡೆಯಲೂ ಸಹಕಾರಿ.
ಇತ್ತೀಚೆಗೆ ಕೇಂದ್ರದ ಆರೋಗ್ಯ ಸಚಿವರಾದ ಡಾ. ಹರ್ಷವರ್ಧನ್ ಅಮೆರಿಕಾದ ಪ್ರಮುಖ ಆರೋಗ್ಯ ಅಧಿಕಾರಿಗಳೊಂದಿಗೆ ವೈದ್ಯಕೀಯ ರಂಗದ ಪ್ರಮುಖ ಕ್ಷೇತ್ರಗಳಲ್ಲಿ ಅಮೆರಿಕಾದ ಸಹಕಾರ ಹಾಗೂ ಸಹಭಾಗಿತ್ವದ ಕುರಿತು ಮಾತುಕತೆಗೆ ತೆರಳಿದ್ದರು. ಆಗ ಅಲ್ಲಿ ನ್ಯೂಯಾರ್ಕ್ ಟೈಮ್ಸ್ಗೆ ಸಂದರ್ಶನ ನೀಡಿದ್ದರು. ಸಂದರ್ಶನದಲ್ಲಿ ಅವರು ಹೇಳಿದ ಮಾತು ಅಪ್ಪಟ ಸತ್ಯ.
‘ಏಡ್ಸ್ ಅಥವಾ ಎಚ್.ಐ.ವಿ. ಕುರಿತು ಜಾಗೃತಿ ಮೂಡಿಸಲು ಕಾಂಡೋಮ್ ಬಳಕೆ ಬಗ್ಗೆ ಜಾಗೃತಿ ಮೂಡಿಸುವುದಕ್ಕಿಂತ ಹೆಚ್ಚಾಗಿ ಭಾರತೀಯ ಸಂಸ್ಕೃತಿಯಾದ ದಂಪತಿ ನಡುವೆ ಸಾಂಸಾರಿಕ ಪ್ರಾಮಾಣಿಕತೆ ಇರುವಂತೆ ಗಮನ, ಜಾಗೃತಿ ಮೂಡಿಸುವಲ್ಲಿ ಸರ್ಕಾರ ಗಮನ ಹರಿಸಬೇಕು.’
ಒಂದೇ ಕಾಂಡೋಂಗಳ ಬಳಕೆಯಲ್ಲಿ ಜಾಗೃತಿ ವಹಿಸಿ ಎಂದು ಎಚ್ಚರಿಸುವುದರಿಂದ ಅಕ್ರಮ ಲೈಂಗಿಕ ಸಂಬಂಧ ಹೊಂದಬಹುದು ಎಂಬ ತಪ್ಪು ಸಂದೇಶ ರವಾನೆ ಮಾಡಿದಂತಾಗುತ್ತದೆ. ಏಡ್ಸ್ ಜಾಗೃತಿ ಆಂದೋಲನ ಕೇವಲ ಕಾಂಡೋಂಗಳ ಬಳಕೆಗೆ ಮಾತ್ರ ಕೇಂದ್ರೀಕೃತವಾಗಬಾರದು ಎಂದು ಅಭಿಪ್ರಾಯಿಸಿದ್ದಾರೆ. ಭಾರತದ ರಾಷ್ಟ್ರೀಯ ಏಡ್ಸ್ ನಿಯಂತ್ರಣ ಸಂಸ್ಥೆ ನೀಡಿರುವ ವರದಿಯಂತೆ 2000ದಿಂದ 2011ರ ತನಕ ಎಚ್.ಐ.ವಿ. ಸೋಂಕಿತರ ಸಂಖ್ಯೆಯಲ್ಲಿ ಶೇ. 57 ಕಡಿಮೆ ಆಗಿದೆ.
ಮುಕ್ತ ಲೈಂಗಿಕ ಜೀವನದ ಭೂಮಿಯಾದ ಅಮೆರಿಕಾದಲ್ಲಿ ಭಾರತೀಯ ವೈವಾಹಿಕ ಸಂಸ್ಕೃತಿ ಪ್ರಚುತ ಪಡಿಸಲು ಒತ್ತು ನೀಡಿದವರು ಸ್ವತಃ ವೈದ್ಯರೂ ಆದ ಹರ್ಷವರ್ಧನ್ ಅವರೇ ಇರಬೇಕು.
ಎಲ್ಲ ಯಾವ ದೃಷ್ಟಿಯಿಂದ ಪರಿಶೀಲಿಸಿದರೂ ಇದರಲ್ಲಿ ತಪ್ಪಿಲ್ಲ. ಅಲ್ಲದೆ ವೈವಾಹಿಕ ಜೀವನ ಸುಲಭವಾಗಿ ಮುರಿದು ಬೀಳುವುದಿಲ್ಲ. ಸಂತಾನ ಅಕ್ರಮ ಸಂತಾನವಾಗಿ ಸಮಾಜ, ದೇಶಕ್ಕೆ ಶಾಪವಾಗಿ ಪರಿಣಮಿಸಿದು. ಎಲ್ಲಕ್ಕೂ ಮಿಗಿಲಾಗಿ ಅಪ್ರಾಪ್ತ ವಯಸ್ಸಿನಲ್ಲಿ ಬಾಲಬಾಲಕಿಯರು ತಾಯ್ತಂದೆಯರಾಗುವ ದುರಂತವನ್ನು ತಪ್ಪಿಸಬಹುದು.
ಆದರೆ ಮಾಧ್ಯಮಗಳು ಸಚಿವ ಡಾ. ಹರ್ಷವರ್ಧನರ ಹೇಳಿಕೆಯನ್ನು ತಿರುಚಿ, ಕಾಂಡೋಂ ಬಳಕೆಗೆ ಸಚಿವರ ವಿರೋಧ ಎಂಬರ್ಥ ಬರುವ ಸುದ್ದಿ ಹೆಣೆದು ತಪ್ಪು ಸಂದೇಶ ರವಾನಿಸಿದವು. ಅಸಲಿಗೆ ಹರ್ಷವರ್ಧನ್ ಕಾಂಡೋಂ ಬಳಕೆಗೆ ವಿರೋಧ ವ್ಯಕ್ತಪಡಿಸಲೇ ಇಲ್ಲ. ಅವರು ಹೇಳಿದ್ದು ಅದಲ್ಲವೇ ಅಲ್ಲ. ಎಲ್ಲದಕ್ಕೂ ಮುಖ್ಯವಾಗಿ ಅತ್ಯಾಚಾರದಂತಹ ಕೃತ್ಯಗಳಿಗೆ ಕಡಿವಾಣ ಬೀಳಬೇಕೆಂದರೆ ಮನೋನಿಗ್ರಹಸಾಮರ್ಥ್ಯ ಮತ್ತು ನೈತಿಕತೆ ಇರಬೇಕಾದ್ದು ಅತ್ಯಗತ್ಯ. ಹಾಗಾಗಿಯೇ ಅವರು ‘ಕಾಂಡೋಂ ಧರಿಸಬೇಕಾದ್ದು ಮನಸ್ಸಿಗೆ’ ಎಂಬರ್ಥದ ಮಾತುಗಳನ್ನು ಹೇಳಿದ್ದಾರೆ. ಅದೊಂದು ಅರ್ಥಪೂರ್ಣ ಮಾತು. ಅದರಲ್ಲಿ ತಪ್ಪು ಅರ್ಥ ಹುಡುಕುವ ಮಾಧ್ಯಮದವರ ದೃಷ್ಟಿ ವಿಕೃತ, ಅಷ್ಟೆ. ಏಕೆಂದರೆ ಕಾಡೋಂ ಬಳಕೆ ಬಗ್ಗೆ ಮಾತ್ರ ಜಾಗೃತವಾಗಿದ್ದರೆ ಅತ್ಯಾಚಾರ ಘಟನೆಗಳು ಕಡಿಮೆಯಾಗಬೇಕೆಂದೇನಿಲ್ಲ. ಸ್ವಂತ ಮಕ್ಕಳನ್ನೂ ಕಾಮದ ದೃಷ್ಟಿಯಿಂದ ನೋಡುವಷ್ಟು ಜನರ ನೈತಿಕತೆ ಕುಸಿದಿರುವಾಗ ಮನೋನಿಗ್ರಹದ ಅಗತ್ಯತೆ ಹೆಚ್ಚು ಹೆಚ್ಚು ಎದ್ದು ಕಾಣುವ ಅಂಶ. ಬೆಂಗಳೂರು ಹೊರವಲಯದ ರಾಮನಗರದಲ್ಲಿ ಹಾಗೂ ದ.ಕ. ಜಿಲ್ಲೆಯ ಮೂಲ್ಕಿಯಲ್ಲಿ ಅಪ್ಪಂದಿರೇ ಮಕ್ಕಳ ಮೇಲೆ ಅಮಾನುಷವಾಗಿ ಅತ್ಯಾಚಾರ ಎಸಗಿದ್ದಾರೆ. ಮಕ್ಕಳಿಗೆ ರಕ್ಷಾ ಕವಚವಾಗಿರಬೇಕಾಗಿದ್ದ ಅಪ್ಪಂದಿರು ಇಷ್ಟೊಂದು ಕ್ರೂರಿಗಳಾಗಿರುವುದು ಹೇಗೆ ಎಂಬ ಪ್ರಶ್ನೆಗೆ ಉತ್ತರವೇ ದೊರೆಯುತ್ತಿಲ್ಲ. ಅವರ ಮನಸ್ಸಲ್ಲಿ ಇಂಥದೊಂದು ಆಲೋಚನೆಯಾದರೂ ಹೇಗೆ ಹೊಳೆಯುತ್ತದೆ? ತಮ್ಮ ಕರುಳ ಕುಡಿಗಳ ಮೇಲೆ ಕಾಮದೃಷ್ಟಿ ಬೀರುವಷ್ಟು ಸಮಾಜ ಕೆಟ್ಟು ಹೋಗಿದೆಯೆಂದರೆ ಇದು ನಿಜಕ್ಕೂ ಅಪಾಯಕಾರಿ ಬೆಳವಣಿಗೆ. ಮಾನವನಿಗೆ ನೈತಿಕತೆ, ಪ್ರಜ್ಞೆ, ಇದ್ದರೆ ಮಾತ್ರ ಇಂತಹ ಕುಕೃತ್ಯಗಳ ಸಂಖ್ಯೆ ಕಡಿಮೆಯಾಗಲು ಸಾಧ್ಯ.
ಬದುಕು ಎಂದರೆ ಕೇವಲ ಭೋಗ ಮಾತ್ರ ಅಲ್ಲ. ಅದು ವೈವಾಹಿಕ ಚೌಕಟ್ಟಿನ ಒಂದು ಭಾಗವೇ ಹೊರತು ಅದೇ ಬದುಕು ಅಲ್ಲ. ಜೀವನದಲ್ಲಿ ಹಕ್ಕುಗಳಿಗೆ ಕೈ ಚಾಚಿದಂತೇ ಹೊಣೆಗಾರಿಕೆಯೂ ಇರುತ್ತದೆ. ತಾನು ದೇಶಕ್ಕೆ ಕೊಡುವುದು ಏನಿದೆ? ಪಡೆಯುವುದು ಮಾತ್ರ ಎಂಬ ಸಿದ್ಧಾಂತ ಆರೋಗ್ಯಕರವಲ್ಲ.
ಅಮೆರಿಕಾದಂಥ ನೆಲದಲ್ಲಿ ವೈವಾಹಿಕ ಜೀವನದಲ್ಲಿ ಪರಸ್ಪರ ನಿಷ್ಠರಾಗಿರುವುದನ್ನು ಒತ್ತು ನೀಡಿ ಜಾಗೃತಿ ಮೂಡಿಸುವಲ್ಲಿ ಗಮನ ಹರಿಸಬೇಕು. ಇದು ಏಡ್ಸ್, ಎಚ್.ಐ.ವಿ. ತಡೆಗೆ ಉತ್ತಮ ಜಾಗೃತಿ ಆಂದೋಲನ ಎಂದು ಸೂಚಿಸಿದ ನಮ್ಮ ಘನ ಆರೋಗ್ಯಮಂತ್ರಿಗಳ ನಿಲುವು ಶ್ಲಾಘನೀಯ.
ಮೂಲ: ವಿಕ್ರಮ
ಕೊನೆಯ ಮಾರ್ಪಾಟು : 6/19/2020